ಕಾವ್ಯ ಸಂಗಾತಿ
ಎನ್.ಜಯಚಂದ್ರನ್ ದಾಂಡೇಲಿ
“ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ”


ಬದುಕಿದ್ದಾಗ…
ಅವನ ಮನೆಯ ಬಾಗಿಲು ತಟ್ಟಿದರೂ
ತೆರೆದದ್ದು ಯಾರ ಮನಸ್ಸೂ ಅಲ್ಲ.
ಹಸಿವೆಂದು ಕೈ ಚಾಚಿದಾಗ
ಒಂದು ತುತ್ತು ಅನ್ನಕ್ಕೂ ಲೆಕ್ಕ ಹಾಕಿದ ಜನ,
ದುಃಖವೆಂದು ಕಣ್ಣೀರು ಸುರಿಸಿದಾಗ
ಒಂದು ಹೆಗಲನ್ನೂ ನೀಡದ ಬಂಧುಗಳು.
ಅವನ ಉಸಿರು ಇರುವಾಗ
ಅವನ ಮಾತಿಗೆ ಬೆಲೆ ಇರಲಿಲ್ಲ;
ಉಸಿರು ನಿಂತ ಕ್ಷಣದಿಂದಲೇ
ಅವನ ಮೌನಕ್ಕೆ ಬೆಲೆ ಕಟ್ಟಲು ಹೊರಟರು.
ಚಿತೆಯ ಬೆಂಕಿ ಹೊತ್ತಿತು…
ದೇಹ ಬೂದಿಯಾಯಿತು…
ಆದರೆ ಸುಟ್ಟು ಹೋದದ್ದು ದೇಹವಲ್ಲ—
ಸಮಾಜದ ಕಪಟ ಮುಖವಾಡ.
ಅಂತ್ಯಸಂಸ್ಕಾರಕ್ಕೆ
ಸಾವಿರ ಜನ ಸೇರಿದರು;
ಬದುಕಿನ ದಾರಿಯಲ್ಲಿ
ಅವನೊಂದಿಗೆ ನಡೆದದ್ದು
ಅವನ ನೆರಳು ಮಾತ್ರ.
ಮೂರನೇ ದಿನ…
ಹತ್ತನೇ ದಿನ…
ವಾರ್ಷಿಕ…
ನಂತರ ಜಾತ್ರೆ…
ವೇದಿಕೆ ಕಟ್ಟಿದರು.
ಹೂವಿನ ಹಾರ ಹೊದಿಸಿದರು.
ಅವನ ಹೆಸರಿನಲ್ಲಿ ಧ್ವಜ ಹಾರಿಸಿದರು.
ನಿನ್ನೆ ಅವನನ್ನು ತಿರಸ್ಕರಿಸಿದವರೇ
ಇಂದು ಹೊಗಳಿಕೆಯ ಹೊಳೆ ಹರಿಸಿದರು.
“ಅವನು ಮಹಾನ್…” ಎಂದರು.
“ಅವನು ಸಮಾಜದ ಬೆಳಕು…” ಎಂದರು.
“ಅವನಂತವರು ಅಪರೂಪ…” ಎಂದರು.
ಆ ಮಾತುಗಳನ್ನು ಕೇಳಿ
ಕಾಲವೇ ಕಹಿಯಾಗಿ ನಕ್ಕಿತು.
ಏಕೆಂದರೆ—
ಅವನು ಬದುಕಿದ್ದಾಗ
ಈ ಒಂದು ಮಾತನ್ನಾದರೂ
ಅವನ ಕಿವಿಗೆ ಹೇಳಿರಲಿಲ್ಲ!
ಜಾತ್ರೆಯ ದಿನ
ಹೊಟ್ಟೆತುಂಬ ಊಟ,
ಕೈತುಂಬ ಕಾಣಿಕೆ,
ವೇದಿಕೆಯ ಮೇಲೆ ಭಾಷಣ,
ಕೆಳಗೆ ಚಪ್ಪಾಳೆ…
ಜಾತ್ರೆ ಮುಗಿದ ಮೇಲೆ?
ಹೂವು ಒಣಗಿತು.
ವೇದಿಕೆ ತೆರವಾಯಿತು.
ಜನರು ಮರೆಯಾದರು.
ಅವನ ಹೆಸರೂ
ಮತ್ತೊಮ್ಮೆ ಧೂಳಿನೊಳಗೆ ಮಲಗಿತು.
ಇದೇನಾ ಸಂಸ್ಕಾರ?
ಸಂಸ್ಕಾರವೆಂದರೆ
ಸತ್ತವನಿಗೆ ಚಂದನ ಹಚ್ಚುವುದಲ್ಲ;
ಬದುಕಿರುವವನ ಗಾಯಕ್ಕೆ
ಒಂದು ಮುದ್ದಾದ ಮದ್ದು ಹಚ್ಚುವುದು.
ಸಂಸ್ಕಾರವೆಂದರೆ
ಚಿತೆಗೆ ಬೆಂಕಿ ಕೊಡುವುದಲ್ಲ;
ಜೀವಂತ ಹೃದಯದಲ್ಲಿ
ಭರವಸೆಯ ದೀಪ ಹಚ್ಚುವುದು.
ಸಂಸ್ಕಾರವೆಂದರೆ
ಸಾವಿನ ನಂತರದ ಜಾತ್ರೆಯಲ್ಲ;
ಜೀವನದೊಳಗಿನ ಮಾನವೀಯತೆ.
ಕೊರಡಿಗಿಲ್ಲಿ ಸಂಸ್ಕಾರ
ಮರಣದ ನಂತರದ ಆಡಂಬರವಲ್ಲ—
ಬದುಕಿರುವಾಗಲೇ
ಮನುಷ್ಯನನ್ನು ಮನುಷ್ಯನಾಗಿ ಕಾಣುವ
ಕರುಣೆಯ ಕಣ್ಣು.
ಇಲ್ಲದಿದ್ದರೆ…
ಪ್ರತಿ ವರ್ಷ ಜಾತ್ರೆ ನಡೆಯುತ್ತದೆ,
ಪ್ರತಿ ವರ್ಷ ಭಾಷಣಗಳು ಮೊಳಗುತ್ತವೆ,
ಪ್ರತಿ ವರ್ಷ ಹೊಗಳಿಕೆಯ ಹೂವುಗಳು ಬೀಳುತ್ತವೆ.
ಆದರೆ…
ಬದುಕಿದ್ದಾಗ ಕಡೆಗಣಿಸಿದ
ಒಬ್ಬ ಮನುಷ್ಯನ ನಿಟ್ಟುಸಿರು
ಆ ಚಪ್ಪಾಳೆಗಳಿಗಿಂತ ದೊಡ್ಡದು.
.
-ಎನ್.ಜಯಚಂದ್ರನ್ .
ದಾಂಡೇಲಿ



