ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ, ಜೀವನ

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷಲೇಖನ ಕವಿತಾ ಶ್ರೀನಿವಾಸ್‌ ನಾಯಕ್ “ವಿದಾಯ “ವಿದಾಯ” ಇದು ಬೆಳೆಯುವ ಹಾದಿಯ ಅನಿವಾರ್ಯ ಮೈಲುಗಲ್ಲು.​’ವಿದಾಯ’ ಎಂದರೆ ಕೇವಲ ಅಗಲುವಿಕೆ ಅಥವಾ ಅಂತ್ಯವಲ್ಲ; ಅದು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ದಾಟಲು ನಾವು ಇಡುವ ಪಾದಾರ್ಪಣೆ. ನಮಗೆ ತಿಳಿಯದೆಯೇ ನಾವು ಪ್ರತಿದಿನ ಯಾವುದಕ್ಕೋ ಒಂದಕ್ಕೆ ವಿದಾಯ ಹೇಳುತ್ತಲೇ ಬೆಳೆಯುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿರಿಯ ಜೀವದವರೆಗೆ, ಜೀವನವು ವಿದಾಯಗಳ ಸರಪಳಿಯೇ ಸರಿ.​ಬಾಲ್ಯಕ್ಕೆ ವಿದಾಯ: ಮುಗ್ಧತೆಯ ಸಂಭ್ರಮದ ಅಂತ್ಯ​ನಮ್ಮ ಬದುಕಿನ ಮೊದಲ ದೊಡ್ಡ ವಿದಾಯ ಎಂದರೆ ಅದು ನಮ್ಮ ಬಾಲ್ಯಕ್ಕೆ ಹೇಳುವ ವಿದಾಯ. ತೊದಲು ನುಡಿಯ ಮಗು ಸ್ವಲ್ಪ ದೊಡ್ಡದಾದಾಗ, ಅದು ತನ್ನ ಆಟಿಕೆಗಳಿಗೆ, ತನ್ನ ಅಮ್ಮನ ಮಡಿಲಿನ ಬೆಚ್ಚನೆಯ ಆರಾಮಕ್ಕೆ, ಮತ್ತು ಹೊಣೆಗಾರಿಕೆ ಇಲ್ಲದ ಆ ಮುಗ್ಧ ಆಟದ ದಿನಗಳಿಗೆ ನಿಧಾನವಾಗಿ ವಿದಾಯ ಹೇಳುತ್ತದೆ. ಶಾಲೆಯ ಹೊಸ್ತಿಲು ತುಳಿದಾಗ, ಮನೆಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ವಿಶಾಲತೆಯನ್ನು ಅರಿಯುವಾಗ ಬಾಲ್ಯದ ಹಕ್ಕಿ ಹಾರಿಹೋಗಿರುತ್ತದೆ. ಅದು ನೋವಿನ ವಿದಾಯವಲ್ಲ, ಆದರೆ ಬದಲಾವಣೆಯ ಮೊದಲ ಪಾಠ.​ಹದಿಹರೆಯಕ್ಕೆ ವಿದಾಯ: ಕನಸುಗಳ ಚಿಗುರು​ನಂತರ ಬರುವುದು ಹದಿಹರೆಯದ ಮಧುರ ವಿದಾಯ. ಕಿಶೋರಾವಸ್ಥೆಯ ಕನಸುಗಳು, ಗೆಳೆಯರೊಂದಿಗೆ ಕಳೆದ ಆ ಸಾಹಸಮಯ ದಿನಗಳು, ಶಾಲೆ-ಕಾಲೇಜಿನ ಆ ಸವಿ ನೆನಪುಗಳು – ಇವೆಲ್ಲವೂ ವೃತ್ತಿ ಬದುಕಿನ ಅನಿವಾರ್ಯತೆಗಳ ಮುಂದೆ ಬಿದ್ದು ಹೋಗುತ್ತವೆ. ಜವಾಬ್ದಾರಿಗಳ ಹೆಗಲೇರಿದಾಗ, ಆ ನಿರ್ಭೀತ ಹುಡುಗಾಟದ ದಿನಗಳಿಗೆ ವಿದಾಯ ಹೇಳಲೇಬೇಕಾಗುತ್ತದೆ. ಇಲ್ಲಿ ನಾವು ಬರಿಯ ವಯಸ್ಸನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ನಮ್ಮೊಳಗಿನ ಮಗುವಿನ ಅಮಾಯಕತೆಯನ್ನು ಸಮಾಜದ ಪಾಠಗಳಿಗಾಗಿ ಬಲಿ ಕೊಡುತ್ತೇವೆ.​ಯೌವನ ಮತ್ತು ಪ್ರಬುದ್ಧತೆ: ನಿರಂತರ ವಿದಾಯಗಳ ಪಯಣ​ಜೀವನವು ಮುಂದುವರೆದಂತೆ, ನಾವು ಹಳೆಯ ಮನೆಗೆ, ಹಳೆಯ ಊರಿಗೆ, ಹಳೆಯ ಗೆಳೆಯರಿಗೆ, ಕೆಲವೊಮ್ಮೆ ನಮ್ಮ ಹಳೆಯ ಆಲೋಚನೆಗಳಿಗೆ ವಿದಾಯ ಹೇಳುತ್ತಲೇ ಇರುತ್ತೇವೆ. ಕೆಲಸದ ನಿಮಿತ್ತ ಊರು ಬಿಡುವಾಗ ಬರುವ ವಿದಾಯ ಇರಬಹುದು ಅಥವಾ ನಮ್ಮ ಹಳೆಯ ತಪ್ಪುಗಳಿಗೆ ವಿದಾಯ ಹೇಳಿ ಹೊಸ ವ್ಯಕ್ತಿಯಾಗಿ ಬದಲಾಗುವ ಕ್ಷಣ ಇರಬಹುದು—ಇವೆಲ್ಲವೂ ನಮ್ಮ ಬೆಳವಣಿಗೆಯ ಸಂಕೇತಗಳೇ.​ಏಕೆ ಈ ವಿದಾಯ ಅನಿವಾರ್ಯ?​ನಿಸರ್ಗದ ನಿಯಮದಂತೆ, ಹಳೆಯ ಎಲೆ ಉದುರದ ಹೊರತು ಹೊಸ ಚಿಗುರು ಬರಲು ಸಾಧ್ಯವಿಲ್ಲ. ನಾವು ಒಂದೊಂದಕ್ಕೂ ವಿದಾಯ ಹೇಳುತ್ತಾ ಹೋದರೆ ಮಾತ್ರವೇ ಬದುಕಿನ ಹೊಸ ಆಯಾಮಗಳು ನಮಗೆ ತೆರೆದುಕೊಳ್ಳುವುದು. ಬಾಲ್ಯಕ್ಕೆ ವಿದಾಯ ಹೇಳದಿದ್ದರೆ ಪ್ರೌಢಿಮೆ ಬರುವುದಿಲ್ಲ, ಹಳೆಯದಕ್ಕೆ ವಿದಾಯ ಹೇಳದಿದ್ದರೆ ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ.​ಕೊನೆಯ ಮಾತು:ವಿದಾಯಗಳು ಕಣ್ಣೀರಿನ ಮಳೆಯಾಗಿರಬೇಕಿಲ್ಲ; ಅವು ಕೃತಜ್ಞತೆಯ ನಗುಗಳಾಗಿರಲಿ. ಕಳೆದುಕೊಂಡದ್ದರ ಬಗ್ಗೆ ಕೊರಗುವ ಬದಲು, ಆ ಹಂತ ನಮಗೆ ಕೊಟ್ಟ ಅನುಭವಗಳಿಗೆ ಧನ್ಯವಾದ ಅರ್ಪಿಸಿ ಮುಂದೆ ಸಾಗುವುದು ಬದುಕಿನ ಜಾಣತನ. ಅಂತಿಮವಾಗಿ, ನಾವು ಹೇಳುವ ಪ್ರತಿಯೊಂದು ವಿದಾಯವೂ ನಮ್ಮನ್ನು ನಾವು ಮತ್ತಷ್ಟು ಅರಿಯುವ, ರೂಪಿಸುವ ಒಂದು ಸುಂದರ ಪ್ರಯತ್ನ. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್ Read Post »

ಇತರೆ, ಜೀವನ

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ “ಹಿರಿಯ ಮಗುವಿಗೆ…. ಹೊರೆಯಾಗದಿರಲಿ ಭ್ರಾತೃತ್ವ” ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ  ಮಕ್ಕಳು ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು ತಮ್ಮ ತಂದೆಯ ಮರಣ ನಂತರ ಕುಟುಂಬದ ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.ಪಾಲಕರಿಗೆ ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ. ಆದರೆ ಕಾಲಘಟ್ಟ ಯಾವುದೇ ಇರಲಿ  ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು ನಿಧಾನ ಎಂದು ಚಿಕ್ಕ ಮಗುವನ್ನು ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ. ಇದಕ್ಕೆ ಕಾರಣ ಹತ್ತು ಹಲವು…. ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ ಹಾಗೆ ಹೇಳುವ ಭರದಲ್ಲಿ, ಮಗು ಹುಟ್ಟಿದ ನಂತರ ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ. ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು,  ಸಿಡಿದೇಳಬಹುದು.ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.ಇದುವರೆಗೂ ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ ಸಿಲುಕುತ್ತದೆ.ಇಂತಹ ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ  ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ… ಇದು ಅಗೋತರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು ಅಗಲವಾಗುತ್ತಾ ಹೋಗುತ್ತದೆ…ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.ನಿಮ್ಮ ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.ಮಕ್ಕಳು ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.ಒಂದು ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ.ಪಾಲಕರು ತಮ್ಮ ಒಂದು ಮಗುವನ್ನು ಚಿನ್ನ ರನ್ನ ಎಂದು ಮತ್ತೊಂದು ಮಗುವನ್ನು ಹರಕೆಯ ಕುರಿ ಎಂಬಂತೆ  ಭಾವಿಸಬಾರದು.ಎರಡನೇ ಮಗುವನ್ನು ಪಾಲಿಸಲಿ ಎಂದು ಆಶಿಸುವ ಪಾಲಕರು ಮಗುವಿನ ಮೇಲೆ ಎಲ್ಲ ರೀತಿಯ ಭಾವನಾತ್ಮಕ ಹೊರೆಯನ್ನು ಹೊರಿಸುತ್ತಾರೆ… ಇದು ಖಂಡಿತವಾಗಿಯೂ ತಪ್ಪು. ಮಗುವಿನ ಎಳೆಯ ಹೆಗಲಿಗೆ ಅದಕ್ಕೂ ಮುಖ್ಯವಾಗಿ ಮನಸ್ಸಿಗೆ ಇದು ಖಂಡಿತವಾಗಿಯೂ ಬೆಟ್ಟವನ್ನು ಹೊತ್ತಂತಹ ಭಾವವನ್ನು ಸೃಷ್ಟಿಸಿ ಮೊದಮೊದಲು ಮಾನಸಿಕವಾಗಿ ನಲುಗುವ ಮಗು ಮುಂದೆ ಹೋಲಿಕೆಗಳಿಂದ ಬೇಸತ್ತು ಹೋಗುತ್ತದೆ. ಅದರ ಸುಪ್ತ ಮನಸ್ಸು ಮೊದಮೊದಲು ಹಿಂಜರಿದರೂ ನಂತರ ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯೆಸುತ್ತದೆ. ನಾನೇ ಮಾಡಬೇಕು ಎಂಬುದರಿಂದ ನೊಂದು ನಾನೇಕೆ ಮಾಡಬೇಕು ಎಂದು ಸಿಡಿದು ನಿಲ್ಲುವ ಮಟ್ಟಿಗೆ ಅದರ ಪಯಣ ಸಾಗುತ್ತದೆ. ಇದು ಖಂಡಿತವಾಗಿಯೂ ಪಾಲಕರು ಎಚ್ಚರಗೊಳ್ಳಬೇಕಾದ ವಿಷಯವೇ ಸರಿ.ಸಹೋದರರು ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ.. ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು  ಅಶಂಕೆಗಳಿಗೆ ಮೂಲ ಬೇರು ಪಾಲಕರೇ ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ, ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು ಕಾರಣವಾಗಿರುತ್ತವೆ.ಎಲ್ಲ ಮನೆಗಳಲ್ಲಿಯೂ ಹೀಗೆಯೇ ಆಗಬೇಕು ಎಂದಿಲ್ಲ ಮತ್ತು ಆಗುತ್ತದೆ ಎಂದು ಭಾವಿಸುವಂತಿಲ್ಲ. ಆಗಬಹುದು ಎಂಬ ಕಾರಣಗಳನ್ನು ಹೀಗೆ ಪಟ್ಟಿ ಮಾಡಲಾಗಿದ್ದು ಈ ಕುರಿತು ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ,ಆದರೆ ಖಂಡಿತವಾಗಿಯೂ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬಾರದಂತೆ ಅವರನ್ನು ಪಾಲಿಸುವ ಬೆಳೆಸುವ ಜವಾಬ್ದಾರಿ ಮಾತ್ರ ಪಾಲಕರದ್ದೇ. ಸಂತ ಸೂಕ್ಷ್ಮ ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.ಈ ಹಿಂದೆ ಮಕ್ಕಳಾಗಿ ಒಡಹುಟ್ಟಿದವರಾಗಿ ತಮ್ಮ ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹಿರಿಯರಾದ ಹೊತ್ತಿನಲ್ಲಿ ನೆನೆದು ನಗುವ ಜನರಿರುವಂತೆಯೇ, ತಮ್ಮ ಬದುಕಿನ ಎಲ್ಲಾ ಅವಘಡಗಳಿಗೂ ತಮ್ಮ ಪಾಲಕರು ಮತ್ತು ಒಡಹುಟ್ಟಿದವರೇ ಕಾರಣ ಎಂದೂ, ಬಾಲ್ಯದಲ್ಲಿ ತಮ್ಮನ್ನು ಪರಿಗಣಿಸದೆ ಹೋದ ಕಾರಣ ತಾವು ಹೀಗಿರುವುದು ಎಂದು ಮತ್ತೆ ಕೆಲವರು ಹೇಳಬಹುದು. ಯಾವ ರೀತಿ ಎಲ್ಲಾ ಬೆರಳುಗಳು ಒಂದೇ ಸಮನೆ ಇರುವುದಿಲ್ಲವೋ ಅದೇ ರೀತಿ ಎಲ್ಲರ ಮನಸ್ಥಿತಿಯೂ ಒಂದೇ ಸಮನಾಗಿ ಇರುವುದಿಲ್ಲ… ಅವರವರ ಬುದ್ಧಿಗೆ, ಗ್ರಹಿಕೆಗೆ ಮತ್ತು ಭಾವಕ್ಕೆ ತಕ್ಕಂತೆ ಮನುಷ್ಯನ ವರ್ತನೆ ಇರುತ್ತದೆ.ಪಾಲಕರಾಗಿ ಇದನ್ನು ನಾವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.ಮತ್ತೆ ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ. ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು  ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.ಎಲ್ಲ ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ ಪಾಲಕತ್ವದ ನಿಜವಾದ ಗುರಿ. ವೀಣಾ ಹೇಮಂತ್ ಗೌಡ ಪಾಟೀಲ್

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

“ಒಂದು ನಿರ್ಧಾರದ ಸುತ್ತಾ”‌ ಡಾ.ಭಾರತಿ ಅಶೋಕ್

ವಿಶೇಷ ಸಂಗಾತಿ ಡಾ.ಭಾರತಿ ಅಶೋಕ್ “ಒಂದು ನಿರ್ಧಾರದ ಸುತ್ತಾ”‌  ಯಾವುದಾದರೂ ಒಂದು ವಿಷಯದ ಬಗೆಗೆ ಆಳವಾಗಿ ಯೋಚಿಸದೇ ಅದರ  ಹರವಿನ ಬಗೆಗೆ ತಿಳಿಯದೇ  ದಿಡೀರ್ ಎಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಹಾಗೆ ತೆಗೆದುಕೊಂಡ ನಿರ್ಧಾರದಿಂದ ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಈ ನಿರ್ಧಾರಗಳು ಕೌಟುಂಬಿಕ, ಸಾಂಸ್ಥಿಕವಾಗಿರಬಹುದು, ಸಾಮಾಜಿಕವಾಗಿರಬಹುದು. ಈ ಯಾವ ನೆಲೆಯಲ್ಲೂ ಅದು ಒಳ್ಳೆಯದಲ್ಲ. ಕೆಲವು ಸಲ ಅವುಗಳಿಂದ  ಅನಾಹುತ ಸಂಭವಿಸಬಹುದು. ಆದ್ದರಿಂದ ನಿರ್ಧಾರ ತೆಗೆದುಕೊಳ್ಳಲು ಹತ್ತಾರು ಬಾರಿ ಯೋಚಿಸಿಬೇಕು. ಆ ನಿರ್ಧಾರದ ಸುತ್ತಲೂ  ಧನಾತ್ಮಕ, ಋಣಾತ್ಮಕ ಫಲಿತಾಂಶದ ಬಗೆಗೆ ತಿಳುವಳಿಕೆ ಇರಬೇಕು. ಒಂದು ವೇಳೆ ಧನಾತ್ಮಕ ಪರಿಣಾಮವಾದರೆ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇರುತ್ತದೆ. ಅದು ಸರ್ವಕಾಲಿಕ ಸತ್ಯವಾಗಿದ್ದು, ಮತ್ತು ಅದು ಅನುಸರಿಸರಣೀಯವಾಗಿರುತ್ತದೆ.             ತೆಗೆದುಕೊಂಡ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮಗಳಾದರೆ  ಅದು ಕ್ಷಣಿಕ ನಿರ್ಧಾರ, ಚಿಂತನೆ ಇಲ್ಲದೇ ತೆಗೆದುಕೊಂಡುದರ ಪರಿಣಾಮವಾಗಿದ್ದು, ಅದು ಸಾರ್ವತ್ರಿಕವಾಗಿರದೆ, ಸರ್ವಕಾಲಿಕವೂ ಆಗಿರದೇ ಅಪಾಯಗಳಿಂದ ಕೂಡಿರುತ್ತದೆ. ಆದ್ದರಿಂದ ವ್ಯಕ್ತಿಗೆ, ಸಮಷ್ಟಿಗೆ ತತ್ ಕ್ಷಣವೇ ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿ ಆಗುವ ಅನಾಹುತಕ್ಕೆ ಉದಾಹರಣೆಯಾಗುತ್ತದೆ, ಆಗ ಅಂತಹ ನಿರ್ಧಾರವು ವರ್ಜಿಸಲ್ಪಡುತ್ತದೆ.             ನಿರ್ಧಾರ ವೈಯುಕ್ತಿಕ ನೆಲೆಯಲ್ಲಿದ್ದರೆ ಅದಕ್ಕೆ ಉದಾಹರಣೆಯಾಗಿ : ಇಂದಿನ ಯುವ ಜನಾಂಗ ಮಾಡಿಕೊಳ್ಳುವ ಅನಾಹುತಗಳು ಒಂದೆ ಎರಡೇ… ನೋಡಿದಾಕ್ಷಣ ಆಕ಼ರ್ಷಣೆಗೆ ಒಳಗಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ನಾಶ ಮಾಡಿಕೋಳ್ಳುವುದು ಹೀಗೆಯೇ. ಯುವಕ ಯುವತಿಯರು  ಆಕರ್ಷಿತರಾಗುತ್ತಿದ್ದಂತೆಯೇ ಅದನ್ನು ಪ್ರೀತಿ ಎಂದು ನಂಬಿ ಸಮಾಜದ ಒಪ್ಪಿಗೆ ಎಂಬಂತೆ ವಿವಾಹ ಬಂಧನಕ್ಕೆ ಒಳಗಾಗುವುದು ನಿಜಕ್ಕೂ ಅದು ಪ್ರೀತಿನಾ ಅದು ಕೊನೆಯವರೆಗೂ ಉಳಿಯುತ್ತಾ ಎಂದು ಯೋಚಿಸಲು ಸಹ ಅವಕಾಶವಿಲ್ಲದಂತೆ ತಮ್ಮನ್ನು ತಾವು ಬದುಕಿನ/ಪ್ರೀತಿಯ ಪರೀಕ್ಷೆಗೆ ಒಡ್ಡಿ ಕೊಳ್ಳುತ್ತಾರೆ. ಆಕರ್ಷಣೆ ಮುಗಿಯುತ್ತಿದ್ದಂತೆ ಬದುಕು ಅಸಹನೀಯವಾಗುತ್ತದೆ ಯಾಕೆಂದರೆ ಅವರದು ವಯೋ ಸಹಜ ಆಕರ್ಷಣೆ. ಬದುಕಿಗೆ ಪ್ರೀತಿ ಬೇಕು ಪ್ರೀತಿಯೊಂದೆ ಬದುಕಲ್ಲ ಎನ್ನುವುದರ ಅರಿವು ಇರುವುದಿಲ್ಲ. ಬದುಕಲು ಹಣ ಬೇಕು, ಹಣ ಬೇಕೆಂದರೆ ದುಡಿಯಬೇಕು, ದುಡಿಯುವ ಮಾರ್ಗವೇ ತಿಳಿದಿಲ್ಲ ಆಗಲೇ ಬದುಕು ಕಟ್ಟಿಕೊಳ್ಳುತ್ತೇವೆ ಜೊತೆಯಾಗಿ ಎಂದರೆ ಸಾಧ್ಯವಾಗದು. ತಾವು ಜೊತೆಯಾಗುತ್ತೇವೆ ಎಂದುಕೊಂಡು ಮನೆಯಿಂದ ಪೋಷಕರಿಂದ ದೂರ ಹೋಗುವಾಗ ಮನೆಯಿಂದ ಕೊಂಡ್ಯೊಯ್ದ ಪುಡಿಗಾಸು ಮುಗಿಯುತ್ತಿದ್ದಂತೆ. ಬದುಕು ಇಷ್ಟೇ ಎನ್ನಿಸಿಬಿಡುತ್ತದೆ. ಪ್ರೀತಿ ಎಂದುಕೊಂಡದ್ದುಅಸಹನೀಯವಾಗುತ್ತದೆ.  ಕಾರಣ ಬದುಕಿನ ಬಗೆಗೆ ಕಲ್ಪನೆಯೇ ಇಲ್ಲ. ಅದು ಪ್ರೀತಿ ಅಲ್ಲ ಕೇವಲ ಆಕರ್ಷಣೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಎಲ್ಲವೂ ಮುಗಿದೇ ಹೋಯ್ತು ಎನ್ನುವಂತಹ ಅನುಭವವಾಗುವುದು. ಆಗ ಆ ಬಂಧ(ನ)ದಿಂದ ಮುಕ್ತಿಗಾಗಿ ವಿಚ್ಛೇದನ, ಆತ್ಮ ಹತ್ಯೆಯಂತಹ ಗಂಭೀರ ಸ್ವರೂಪದ ನಿರ್ಧಾರಕ್ಕೆ ಬರುತ್ತಾರೆ. “ಬದುಕು ಬದುಕಲಾರದಷ್ಟು ಭೀಕರವಲ್ಲ, ಅಂದುಕೊಂಡಷ್ಟು ಸರಳವೂ ಅಲ್ಲ” ಎನ್ನುವ ಸತ್ಯದ ಅರಿವಾಗಬೇಕು ಅಂಥ ಅರಿವನ್ನು ಮೂಡಿಸುವ ಕೆಲಸ ಆಗಬೇಕಿದೆ.  ಹೌದು ವಿವಾಹ ಅದರ ನಂತರದ ಬದುಕು ಅವುಗಳ ಬಗೆಗೆ ನಮ್ಮ ಯುವ ಜನಾಂಗಕ್ಕೆ ಸರಿಯಾದ ತಿಳುವಳಿಕೆ ಇಲ್ಲದಿರುವುದು ನಮ್ಮಂಥ ಸಾಂಪ್ರದಾಯಿಕ ಸಮಾಜದಲ್ಲಿ ನಿರೀಕ್ಷೆಯೂ ಸರಿಯಲ್ಲ. ಇಷ್ಟು ಮಾತ್ರವಲ್ಲದೇ ಅವರ ನಿರ್ಧಾರಗಳಿಗೆ ಇಂಬು ದೊರೆಯಲು ಅವರ ಆರ್ಥಿಕ ಭದ್ರತೆಯೂ ಪೂರಕವಾಗಿರಬೇಕು. ಅದು ಸರಿಯಾಗಿದ್ದರೆ  ಕಷ್ಟದಲ್ಲೂ ಸೈರಿಣೆಯಿಂದ ಬದುಕುವ ಸಾಧ್ಯತೆಗಳನ್ನು ಒದಗಿಸಿದಂತಾಗುತ್ತದೆ. ಹಾಗಿದ್ದಾಗಲೂ ನಿರ್ಧಾರಗಳು ಚಿಂತನೆಯನ್ನು ನಿರೀಕ್ಷಿಸುತ್ತವೆ.             ಇಂಥ ಕ್ಷಣಿಕ ನಿರ್ಧಾರಗಳನ್ನು ನಮ್ಮ ಯುವ ಜನತೆ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಭಾವಿಸುವುದು ಸಹ ನಮ್ಮ ಕ್ಷಣಿಕ ನಿರ್ಧಾರವಾದೀತು. ಏಕೆಂದರೆ ನಮಗೆ ಇತಿಹಾಸವಿದೆ. ಅದರ ಪರಿಪಾಠ ನಮ್ಮಲ್ಲೂ ಮೈಗೂಡಿದೆ. ‘ನಭೂತೋ ನಭವಿಷ್ಯತೆ” ಎನ್ನುವಂತೆ ನಮ್ಮ ಭೂತ ನಮ್ಮನ್ನು ಬೆನ್ನಟ್ಟಿ ಭವಿಷ್ಯದಲ್ಲೂ ಜೊತೆಗಿರುತ್ತದೆ.  ಹೇಗೆ ಎನ್ನುವುದನ್ನು ನೋಡೋಣ ನಮ್ಮ ಬಾದಷಹ “ಮೊಹಮ್ಮದ್ ಬೀನ್ ತುಘಲಕ್” ತೆಗೆದುಕೊಳ್ಳುತ್ತಿದ್ದ ತತ್ ಕ್ಷಣದ ನಿರ್ಧಾರಗಳಿಂದ ಜನತೆ ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ. ರಾಜಧಾನಿಯನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ(ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ)ಸ್ಥಳಾಂತರಿಸಿದಾಗ ಜನ, ದನ, ಪಶು, ಪಕ್ಷಿಗಳು ಅನುಭವಿಸಿದ ನೋವಿನ ತೀವ್ರತೆಯನ್ನು ಹೇಳಿದರೆ ಪರಿಮಕಾರಿಯಾಗಿರುವುದಿಲ್ಲ. ಅನುಭವಿಸಿದವರೇ ಬಲ್ಲರು. ಸುಲ್ತಾನನಿಗೆ ಬುದ್ಧಿ ಇರಲಿಲ್ಲ ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ಆತನೋ ಭಯಂಕರ ಮೇಧಾವಿ. ಪರ್ಷಿಯನ್ ಅರೇಬಿಕ್ ಭಾಷೆಗಳಲ್ಲಿ ಪಂಡಿತ. ಸಾಹಿತ್ಯ ಧರ್ಮ ಖಗೋಳ ಶಾಸ್ತ್ರ ತರ್ಕಶಾಸ್ತ್ರ,ತತ್ವಶಾಸ್ತ್ರ ಗಣಿತಶಾಸ್ತ್ರಗಳಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದನು. ಆತನ ಜ್ಞಾನ ನಾಲ್ಕು ಐದು ಶತಮಾನದಷ್ಟು ಮುಂದಿತ್ತು ಎಂದರು ಸರಿಯೆ. ಅಂಥಹ ಚಾಣಾಕ್ಷ.       ಯಾಕೆ ನಾನು ಇತಿಹಾಸದಿಂದ ಇಂಥ ಮೇಧಾವಿಯನ್ನು ಉದಾಹರಿಸಿದೆ ಎಂದರೆ ಆತನ ನಿರ್ಧಾರಗಳು, ಯೋಜನೆಗಳನ್ನು ಜಾರಿಗೊಳಿಸುವ ಕ್ರಮ, ಅಂದಿನ ಪರಿಸ್ಥಿತಿಯ ಕುರಿತು ಕುಳಿತು ಸರಿಯಾದ ರೀತಿಯಲ್ಲಿ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆ  ಆತನಲ್ಲಿ ಇರಲಿಲ್ಲ. ಬುದ್ಧಿವಂತಿಕೆ ವ್ಯವಹಾರ ನೈಪುಣ್ಯತೆಯ ಕೊರತೆಯಿಂದಾಗಿ  ಏಕಾಏಕೀ ನಿರ್ಧಾರ ಕೈಕೊಳ್ಳುತ್ತಿದ್ದುದರ ಪರಿಣಾಮವಾಗಿತ್ತು. ಅದರೆ ಅಂದಿನ ರಾಜಕೀಯ ಸ್ಥಿತಿಗತಿಗಳಿಗೆ  ಅದು ಅನಿವಾರ್ಯವಾಗಿತ್ರು, ಬದಲಾವಣೆ ಪೂರ್ವನಿರ್ಧಾರಿತವಾಗಿದ್ದರೆ,ವ್ಯವಸ್ಥಿತವಾಗಿದ್ದರೆ..‌..ಉತ್ತಮ ಆಡಳಿತ ವ್ಯವಸ್ಥೆಯನ್ನು ಕೊಟ್ಟ ಕೀರ್ತಿ ಆತನದಾಗಿರುತ್ತಿತ್ತು      ಅಂದರೆ ಒಂದು ನಿರ್ಧಾರ ಅದು ಬಹುಮುಖ ಚಿಂತನೆಯಿಂದಕೂಡಿರಬೇಕು. ಅದರಿಂದ ವಿರುದ್ಧ ಪರಿಣಾಮಗಳಾದರೂ ಅವು ಆಶಾಶ್ವತವಾಗಿದ್ದು ವೈರುದ್ಯಗಳಿಗೂ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವಂತಹ ನಿರ್ಧಾರಗಳನ್ನು ಮೊದಲೆ  ಮಾಡಿಕೊಂಡರೆ ಅದು ಯಶಸ್ವಿಯಾಗುತ್ತದೆ. ಹಾಗೆ ಅದರ  ಬಗೆಗೆ ವಿವರವಾದ ಆಲೋಚನೆಗಳು  ವಿಭಿನ್ನ ಆಯಾಮಗಳಿಂದ ನಡೆದು ಅದಕ್ಕೆ ತಕ್ಕುದಾದ ಅನುಸರಣೀಯ  ಮಾರ್ಗೋಪಾಯಗಳನ್ನು ಕಂಡುಕೊಂಡೇ  ನಿರ್ಧಾರ ಕೈಕೊಂಡರೆ, ಅಂದರೆ , ಒಂದು ನಿರ್ಧಾರದ ಹಿಂದೆ ಅದರ ಒಳಿತು ಕೆಡುಕುಗಳನ್ನು ನಾವು ಸ್ವೀಕರಿಸುವ  ಪರಿಸ್ಥಿತಿಯನ್ನು ಸಹ ಅರಿತುಕೊಂಡು  ನಿರ್ಧರಿಸಿದಾಗ  ಅದು ಸಹಜವಾದ ನಿರ್ಧಾರವಾಗುತ್ತದೆ. ಪರಿಣಾಮ ಯಾವಾಗಲೂ ಒಳ್ಳೆಯವೆ ಆಗಿರುತ್ತವೆ.  ಯೋಚಿಸಿ ಕೈಕೊಂಡಿದ್ದರಿಂದ ಅದಕ್ಕೆ  ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿರುತ್ತದೆ, ಇದು ಕಷ್ಟವೆನಿಸದು. ಇನ್ನು ರಾಜಕೀಯ ಕ್ಷೇತ್ರದಲ್ಲಂತು ಇದು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.             ಇಂದಿನ ತಾಂತ್ರಿಕ ಯುಗದಲ್ಲಿ ಇದು ತುಂಬ ಅತ್ಯಗತ್ಯ.. ಕಾರಣ  ನಿರ್ಧಾರಗಳು ಸಾರ್ವತ್ರಿಕವಾಗಿರುವುದರಿಂದ  ಅದರ ಪರಿಣಾಮಗಳು ಇನ್ನು ಭೀಕರವಾಗಿರುವುದರಿಂದ  ನಿರ್ಧಾರದ ಹಿಂದಿನ ಪರಿಣಾಮಗಳ ಆಳವಾದ ಜ್ಞಾನ  ಚಿಂತನೆ ಅಗತ್ಯ. ಡಾ. ಭಾರತಿ ಅಶೋಕ್

“ಒಂದು ನಿರ್ಧಾರದ ಸುತ್ತಾ”‌ ಡಾ.ಭಾರತಿ ಅಶೋಕ್ Read Post »

ಇತರೆ, ಜೀವನ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್ “ಬೂದಿ ಮುಚ್ಚಿದ ಕೆಂಡ” ನಿಮ್ಮೊಳಗಿನ ಸುಪ್ತ ಚೈತನ್ಯದ ಅನ್ವೇಷಣೆ​”ಬೂದಿ ಮುಚ್ಚಿದ ಕೆಂಡ” ಎಂಬುದು ಕೇವಲ ಒಂದು ಗಾದೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವದ ಆಳವನ್ನು ಅಳೆಯುವ ಒಂದು ಸುಂದರ ರೂಪಕ.​ಕೆಂಡವು ಬೂದಿಯ ಅಡಿಯಲ್ಲಿ ಅಡಗಿದ್ದರೂ ತನ್ನ ಶಾಖವನ್ನು ಕಳೆದುಕೊಂಡಿರುವುದಿಲ್ಲ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನಲ್ಲೂ ಜನ್ಮಜಾತವಾದ ಒಂದು ಪ್ರತಿಭೆ ಅಥವಾ ಕೌಶಲ ಇರುತ್ತದೆ. ಕೆಲಸದ ಒತ್ತಡ, ಕೌಟುಂಬಿಕ ಜವಾಬ್ದಾರಿ ಅಥವಾ ಆತ್ಮವಿಶ್ವಾಸದ ಕೊರತೆಯಿಂದಾಗಿ ಆ ಪ್ರತಿಭೆಯ ಮೇಲೆ ‘ಬೂದಿ’ ಮುಚ್ಚಿರುತ್ತದೆ. ನಮ್ಮನ್ನು ನಾವು ಅರಿತುಕೊಂಡಾಗ ಮಾತ್ರ ಆ ಕೆಂಡವನ್ನು ಮತ್ತೆ ಪ್ರಜ್ವಲಿಸಲು ಸಾಧ್ಯ.​ವ್ಯಕ್ತಿತ್ವ ವಿಕಸನದಲ್ಲಿ ‘ಮೌನ’ಕ್ಕೆ ದೊಡ್ಡ ಸ್ಥಾನವಿದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ವ್ಯಕ್ತಿ ಅತಿ ಹೆಚ್ಚು ಪ್ರಚಾರ ಬಯಸುವುದಿಲ್ಲ.ಅವರು ಸದ್ದಿಲ್ಲದೆ ತಮ್ಮ ಗುರಿಯತ್ತ ಕೆಲಸ ಮಾಡುತ್ತಾರೆ.ಅತಿಯಾಗಿ ಮಾತನಾಡಿ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ಆ ಶಕ್ತಿಯನ್ನು ಒಳಗಡೆ ಶೇಖರಿಸಿಟ್ಟುಕೊಂಡು ಸರಿಯಾದ ಸಮಯ ಬಂದಾಗ ತಮ್ಮ ಸಾಧನೆಯ ಮೂಲಕ ಉತ್ತರ ನೀಡುತ್ತಾರೆ.​ಪರಿಸ್ಥಿತಿಗಳೇ ಬೂದಿಯಿದ್ದಂತೆ​ಜೀವನದಲ್ಲಿ ಬರುವ ಸೋಲುಗಳು, ಅವಮಾನಗಳು ಅಥವಾ ಟೀಕೆಗಳು ನಮ್ಮ ವ್ಯಕ್ತಿತ್ವದ ಮೇಲೆ ಬೂದಿಯಂತೆ ಬಂದು ಬೀಳುತ್ತವೆ. ಆಗ ನಾವು ನಿಸ್ತೇಜರಾದಂತೆ ಕಾಣಬಹುದು.ಆದರೆ ನೆನಪಿಡಿ, ಬೂದಿ ಕೆಂಡವನ್ನು ತಾತ್ಕಾಲಿಕವಾಗಿ ಮುಚ್ಚಬಹುದೇ ಹೊರತು ಆರಿಸಲು ಸಾಧ್ಯವಿಲ್ಲ. ಒಳಗೆ ಹಂಬಲದ ಕಿಚ್ಚು ಜೀವಂತವಾಗಿದ್ದರೆ,ಎಂತಹ ಕಠಿಣ ಪರಿಸ್ಥಿತಿಯನ್ನೂ ಮೆಟ್ಟಿ ನಿಂತು ಮತ್ತೆ ಪುಟಿದೇಳಬಹುದು.​ಕೆಂಡ ಹೊರಬರಬೇಕಾದರೆ ಗಾಳಿಯ ಅವಶ್ಯಕತೆ ಇದೆ.ವ್ಯಕ್ತಿತ್ವ ವಿಕಸನದಲ್ಲಿ ಆ ಗಾಳಿಯೇ ‘ನಿರಂತರ ಪ್ರಯತ್ನ’.​ನಿಮ್ಮ ಒಳಗೆ ಸಾಧನೆಯ ಕಿಚ್ಚಿದೆ. ಸಂದರ್ಭಗಳು ಅದನ್ನು ಮುಚ್ಚಿರಬಹುದು.ಆದರೆ ನಿಮ್ಮ ಪ್ರತಿಭೆಯನ್ನು ನೀವು ನಂಬಿ,ಶ್ರಮದ ಗಾಳಿಯನ್ನು ಬೀಸಿದರೆ ಖಂಡಿತವಾಗಿಯೂ ನೀವು ಜಗತ್ತು ಬೆರಗಾಗುವಂತೆ ಪ್ರಕಾಶಿಸುತ್ತೀರಿ. ನಿಮ್ಮ ಅಸ್ತಿತ್ವ ಬೂದಿಯಂತಿರಲಿ, ಆದರೆ ನಿಮ್ಮ ವ್ಯಕ್ತಿತ್ವ ಕೆಂಡದಂತೆ ಪ್ರಖರವಾಗಿರಲಿಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ,ಉಡುಪಿ ಜಿಲ್ಲೆ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್ Read Post »

ಇತರೆ, ಜೀವನ

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಸಂಗಾತಿ “ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ ನಮ್ಮ ಪುಣ್ಯ ಭರತ ಭೂಮಿಯ ಹಳ್ಳಿಯೊಂದರಲ್ಲಿ ಓರ್ವ ರೈತ ವಾಸವಾಗಿದ್ದ. ಆತನ ಕೈಗಳು ಭೂಮಿಯಿಂದ ಆತನನ್ನು ಎಳೆದು ತೆಗೆದಂತೆ ತಿರುಚಿದ್ದವು ಆತನ ಬೆನ್ನು ಬಿಲ್ಲಿನಂತೆಬಾಗಿತ್ತು. ಅತ್ಯಂತ ವಯಸ್ಸಾಗಿದ್ದ ಆತ ಒಬ್ಬನೇ ವಾಸಿಸುತ್ತಿದ್ದ. ತನ್ನವರೆಲ್ಲರನ್ನು ಕಳೆದುಕೊಂಡ ಆತನಿಗೆ ಒಂಟಿ ಜೀವನ ಅಭ್ಯಾಸವಾಗಿತ್ತು.ಅದೊಂದು ಸುಗ್ಗಿಯ ದಿನ ಸತತವಾಗಿ ಕೆಲಸ ಮಾಡಿ ಮರಳಿಮನೆಗೆ ಬಂದ ಆತನ ದೇಹದಿಂದ ಬೆವರಿನ ವಾಸನೆ ಹಾಗೂ ಆತನ ಬಟ್ಟೆಗೆ ಮೆತ್ತಿದ ಹಸಿ ಮಣ್ಣಿನ ವಾಸನೆ ಇನ್ನಿಲ್ಲದಂತೆ ಅಂಟಿಕೊಂಡಿತ್ತು. ಮನೆಯ ಹಿತ್ತಲಿನ ಬಾವಿಯ ಬಳಿ ಕೈಕಾಲು ಮುಖವನ್ನು ತೊಳೆದ ಆತ ತನ್ನ ಸ್ನೇಹಿತನಿಗೂ ನೀರು ಕೊಟ್ಟು ಉಪಚರಿಸಿದ… ನಂತರ ಸ್ನೇಹಿತನೊಂದಿಗೆ ಅಡುಗೆಮನೆಯ ಮೇಜಿನ ಮೇಲೆ ಕುಳಿತ. ಮುಂಜಾನೆ ತಾನೇ ಮಾಡಿಟ್ಟ ಅಡುಗೆ ಅಲ್ಲಿತ್ತು.ತಟ್ಟೆಯಲ್ಲಿ ಬಡಿಸಿಕೊಂಡ ಆತ ಊಟವನ್ನು ಸೇವಿಸುವ ಮುನ್ನ ಎಂದಿನಂತೆ ತನ್ನ ತಲೆಯನ್ನು ಬಾಗಿಸಿ ಕೆಲ ಪ್ರಾರ್ಥನೆಯ ಮಂತ್ರಗಳನ್ನು ನಿಧಾನವಾಗಿ ಪಠಿಸಿದ. ನಂತರ ತನ್ನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಕುಳಿತು ಊಟ ಮಾಡಿದ. ಊಟಕ್ಕೂ ಮುನ್ನ ತಮ್ಮ ರೈತ ಸ್ನೇಹಿತ ತಲೆಬಾಗಿ ಪ್ರಾರ್ಥನೆ ಮಾಡಿದ್ದನ್ನು ನೋಡಿದ ಆತನ ಸ್ನೇಹಿತನಿಗೆ ಇನ್ನು ತಡೆಯಲಾಗಲಿಲ್ಲ..ಗೆಳೆಯ… ಊಟಕ್ಕೆ ಮುನ್ನ ಪ್ರಾರ್ಥನೆಯ ಅಗತ್ಯ ಇದೆಯೇ? ಇದೆಲ್ಲವನ್ನು ನೀನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಪಡೆದದ್ದು ಮತ್ತೇಕೆ ದೇವರನ್ನು ಪ್ರಾರ್ಥಿಸುವೆ ಎಂದು ಗೆಳೆಯನನ್ನು ಪ್ರಶ್ನಿಸಿದ.ತಾನು ಕುಳಿತುಕೊಂಡಿದ್ದ ಸಾಕಷ್ಟು ಶಿಥಿಲವಾಗಿದ್ದ ಕುರ್ಚಿಯಿಂದ ತುಸು ಮುಂದಕ್ಕೆ ಬಾಗಿದ ಆ ರೈತ ನಿಧಾನವಾಗಿ ಎದ್ದು ನಿಂತನು. ಕಿಟಕಿಯ ಬಳಿ ತೆರಳಿ ತನ್ನ ಎರಡು ಕೈಗಳನ್ನು ಬಳಸಿ ಕಿಟಕಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದನು. ಮುಖದಲ್ಲಿ ಪುಟ್ಟದಾದ ನಗುವೊಂದನ್ನು ಹೊತ್ತು ದೂರದಲ್ಲಿ ಕಾಣುತ್ತಿದ್ದ ತನ್ನ ಹೊಲವನ್ನು ಸ್ನೇಹಿತನಿಗೆ ತೋರಿಸಿ ಅತ್ಯಂತ ಶಾಂತವಾಗಿ ಹೇಳಿದ. ಗೆಳೆಯ…ನಾನು ಹೊಲದಲ್ಲಿ ಕೆಲಸ ಮಾಡಲು ಸಾಧ್ಯ, ಆದರೆ ಮಳೆ ಬರಿಸಲು ನನ್ನಿಂದ ಸಾಧ್ಯವಿಲ್ಲ. ನನಗೆ ಬೀಜವನ್ನು ಬಿತ್ತಲು ಸಾಧ್ಯ ಆದರೆ ಆ ಬೀಜಕ್ಕೆ ಮೊಳೆತು ಬೆಳೆ ಎಂದು ಅಜ್ಞಾಪಿಸಲು ಸಾಧ್ಯವಿಲ್ಲ. ನನ್ನ ಕೈಗಳು ಕೆಲಸವನ್ನು ನಿರ್ವಹಿಸುತ್ತದೆ ಎಂಬುದೇನೋ ಖಂಡಿತವಾಗಿಯೂ ನಿಜ, ಆದರೆ ಚಮತ್ಕಾರವನ್ನು ಮಾಡಲು ಅಗೋಚರ ಶಕ್ತಿಗೆ ಮಾತ್ರ ಸಾಧ್ಯ ಎಂದು ಹೇಳಿ ದೀರ್ಘವಾದ ಉಸಿರನ್ನು ತೆಗೆದುಕೊಂಡ.ಆತನ ಕಣ್ಣುಗಳಲ್ಲಿ ಪ್ರಶಾಂತತೆ ತುಂಬಿ ತುಳುಕುತ್ತಿತ್ತು.ಒಂದೆರಡು ಕ್ಷಣಗಳ ವಿರಾಮವನ್ನು ತೆಗೆದುಕೊಂಡ ಆತ ಇದೆಲ್ಲ ಚಮತ್ಕಾರವನ್ನು ಬೇರೊಬ್ಬರು  ಮಾಡುತ್ತಿದ್ದಾರೆ…. ಪ್ರಾರ್ಥಿಸುವ ಮೂಲಕ ನಾನು ನನ್ನ ಕೆಲಸ ಯಾವುದು ಎಂಬುದನ್ನು ಅರಿತುಕೊಳ್ಳುತ್ತೇನೆ. ಉಪಕಾರ ಸ್ಮರಣೆ ಮಾಡುವುದರ ಮೂಲಕ ನನ್ನ ಮೇಲೆ ಕೃಪೆಯನ್ನು ತೋರುವ ಆ ಭಗವಂತನನ್ನು ನಾನು ನೆನೆಯದಿದ್ದರೆ ಹೇಗೆ ? ಆದ್ದರಿಂದಲೇ ಆ ಕಾಣದ ಕೈಗಳಿಗೆ, ಅಗೋಚರ ಶಕ್ತಿಗೆ ಪ್ರಾರ್ಥನೆಯ ಮಾಡುವ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ನನ್ನ ಆದ್ಯ ಕರ್ತವ್ಯ ಎಂದು ತನ್ನ ಮಾತನ್ನು ಪೂರ್ಣಗೊಳಿಸಿದನು.ಆತ ಹೇಳಿದ ಮಾತುಗಳನ್ನು ನಾವೆಂದೂ ಮರೆಯಬಾರದು. ಎಲ್ಲರ ಬದುಕು ಅಷ್ಟೇ ಸರಳವಾಗಿ ಇರುವುದಿಲ್ಲ. ಅದರಲ್ಲೂ ಬಿರುಗಾಳಿ, ನೆರೆ, ಭೀಕರ ಕ್ಷಾಮ ಇದ್ದೇ ಇರುತ್ತವೆ. ರೈತನ ಬದುಕಂತೂ ಅನಿಶ್ಚಿತತೆಯ ಹಾದಿಯಲ್ಲಿ ಸಾಗುತ್ತದೆ. ಬಿತ್ತಿದ ಬೆಳೆಗೆ ಸಾಕಷ್ಟು ಮಳೆ ಬೀಳದೆ ಹೋಗಬಹುದು ಫಸಲು ಕೈಗೆ ಬರುವುದರಲ್ಲಿಯೇ ಹಾಳಾಗಿ ಹೋಗಬಹುದು ಫಸಲಿಗೆ ಒಳ್ಳೆಯ ಬೆಲೆ ಸಿಕ್ಕದೆ ಹೋಗಬಹುದು. ಆತನ ಹೊರೆಗಳು ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ…ಆದರೂ ಕೂಡ ಪ್ರತಿದಿನ ಮುಂಜಾನೆ ಆತ ಬೇಗನೆ ಏಳುವುದನ್ನು ತಪ್ಪಿಸುವುದಿಲ್ಲ. ತನ್ನ ಅನಿಶ್ಚಿತ ಬದುಕಿನ ಕುರಿತು ಆತನಿಗೆ ಬೇಸರವಿಲ್ಲ… ಆದರೂ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ತನಗೆ ಉಸಿರು ಕೊಟ್ಟದ್ದಕ್ಕಾಗಿ, ತನ್ನಲ್ಲಿ ಸಾಮರ್ಥ್ಯವನ್ನು ತುಂಬಿದ್ದಕ್ಕಾಗಿ ಮತ್ತೆ ತನ್ನ ಹೊಲದಲ್ಲಿ ತಾನು ನಡೆದು ಓಡಾಡಲು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ಅಂತಹ ಒಂದು ಶಾಂತವಾದ, ಸಂತೃಪ್ತವಾದ, ಕೃತಜ್ಞತಾ ಭಾವದ ಮನಸ್ಥಿತಿಯಲ್ಲಿ ಆತ ತನ್ನ ಬದುಕಿನಲ್ಲಿ ಅದೆಷ್ಟೇ ದೊಡ್ಡ ಪ್ರಮಾಣದ ಬಿರುಗಾಳಿ ಬೀಸಿದರೂ ಅಚಲವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದುತ್ತಾನೆ. ಸ್ನೇಹಿತರೆ, ಕೃತಜ್ಞತೆ ಎನ್ನುವುದು ನಮಗೆ ಬಲಹೀನತೆಯಾಗಿ ತೋರಬೇಕಾಗಿಲ್ಲ ಕೃತಜ್ಞತೆಯನ್ನು ತೋರುವುದು ಅಂಧ ವಿಶ್ವಾಸವಂತೂ ಖಂಡಿತವಾಗಿ ಅಲ್ಲ. ಎಲ್ಲಾ ಆಶಾಶ್ವತತೆಗಳ ನಡುವೆ ಅತ್ಯಂತ ವಿನಮ್ರತೆಯಿಂದ ರೂಪುಗೊಂಡ ಶಕ್ತಿ ಹಾಗೂ ಸಾಮರ್ಥ್ಯವೇ ಕೃತಜ್ಞತೆಯಾಗಿರುತ್ತದೆ. ಬದುಕಿನ ಅನಿಶ್ಚಿತತೆಗಳ ನಡುವೆಯೂ ಕೂಡ ನಮಗೆ ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಗೌರವ ಪೂರ್ವಕವಾಗಿ ನೆನೆಯಲು ನಾವು ಆಯ್ದುಕೊಳ್ಳುವ ಒಂದು ವಿಧಾನವಾಗಿರುತ್ತದೆ. ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ

ಮನೋಸಂಗಾತಿ ಡಾ.ಸುಮತಿ ಪಿ. “ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಮನಸ್ಸು ಎಂಬುದು ಬಹಳ ಸೂಕ್ಷ್ಮವಾದದ್ದು, ಅದೊಂದು ವಿಶಿಷ್ಟವಾದ ಶಕ್ತಿ.ಮನಸ್ಸು ಬಹಳ ವೇಗವಾಗಿ ಸಂಚರಿಸುವ ಶಕ್ತಿಯಾಗಿದ್ದು, ಅದರ ಹಿಡಿತವನ್ನು ಸಾಧಿಸುವುದು  ಬಹಳ ಕಷ್ಟವಾಗುವುದು. ಮನಸ್ಸನ್ನು ಕೆಲವೊಮ್ಮೆ ಭಾವನೆಗಳ ಕೈಗೆ ಕೊಟ್ಟು, ಏನೇನೋ ಅನಾಹುತಗಳು ಆಗುವುದುಂಟು. ಮನಸ್ಸಿನ ಹಿಡಿತವಿದ್ದರೆ ಮಾತ್ರ ಮನಸ್ಸು ವಿಷಯವನ್ನು ಗ್ರಹಿಸಲು,ಅದಕ್ಕೆ ಪ್ರತಿಕ್ರಿಯಿಸಲು ಮತ್ತು ವಿಚಾರ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತಲೂ ವೇಗವಾಗಿ ಚಲಿಸುವ ಮನಸ್ಸು ನಮ್ಮ ಆಲೋಚನೆಗಳು, ಕನಸುಗಳು ಮತ್ತು ಅನಿಸಿಕೆಗಳ ಸಂಕೀರ್ಣ ಪ್ರಕ್ರಿಯೆ.ಮನಸ್ಸಿನ ಏಕಾಗ್ರತೆ, ತಾಳ್ಮೆ ಮತ್ತು ಉದಾತ್ತತೆಯಿಂದ ಮನಸ್ಸನ್ನು ನಿಯಂತ್ರಿಸುವುದರಿಂದ ವ್ಯಕ್ತಿಯೊಬ್ಬನ ಜೀವನದ ಯಶಸ್ಸಿಗೆ ಅದು ಕಾರಣವಾಗುತ್ತದೆ. ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ನಿರ್ದೇಶಿಸಿದರೆ ಅದು ಜೀವನವನ್ನು ಅದ್ಭುತವಾಗಿಸಬಲ್ಲದು.ಸ್ಥಿರ ಮನಸ್ಥಿತಿ ಹೊಂದಿರುವವರು ಬದಲಾವಣೆಗೆ, ಬದಲಾವಣೆಯಿಂದ ಬೆಳವಣಿಗೆಯ ಮನಸ್ಥಿತಿಗೆ  ಪರಿವರ್ತನೆಗೊಳ್ಳಬೇಕಾಗುತ್ತದೆ. ಮನಸ್ಥಿತಿಯನ್ನು ಬದಲಾಯಿಸುವುದು ಕಷ್ಟ ಎಂಬುದನ್ನು ಒಪ್ಪಿಕೊಂಡರೂ, ನಾವು ಮನಸ್ಸು ಬದಲಾಯಿಸುವುದರಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ, ಎನ್ನುವುದಾದರೆ ನಾವು ಮನಸ್ಸು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಬಹುದು.ಅಂತಹ ಸಂದರ್ಭದಲ್ಲಿ ಮನಸ್ಸು ಬದಲಾಯಿಸುವುದು  ಯೋಗ್ಯವಾಗಿದೆ,ಅನಿವಾರ್ಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ಬದುಕಿನಲ್ಲಿ ಸ್ಥಿರಮನಸ್ಸಿನಿಂದಾಗಿ ಎಂತೆಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಸ್ಥಿರ ಮನಸ್ಸಿನಿಂದ ಒಳಿತಾಗುವುದೂ ಇದೆ.ಮನಸ್ಸು ಬದಲಾಯಿಸುವುದು  ನಮಗೆ ಕಷ್ಟ ಎನಿಸಬಹುದು. ಪರಿಸ್ಥಿತಿ ಯಾವಾಗ ನಮಗೆ ಕಷ್ಟವೆಸಿಸುತ್ತದೆಂದರೆ ನಮ್ಮ ಮನಸ್ಸು ಅದನ್ನು ಸ್ವೀಕರಿಸದಾಗ, ಅಥವಾ ಅದನ್ನು ಒಪ್ಪಿಕೊಳ್ಳದೆ ಇದ್ದಾಗ. ಹಾಗಾಗಿ ಕೆಲವೊಮ್ಮೆ ಇದ್ದ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾದಾಗ ನಮಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಒಂದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿರುತ್ತೇವೆ. ಹಾಗಾಗಿ ಬದಲಾವಣೆಗಳು ಉಂಟಾದಲ್ಲಿ ಮನಸ್ಸನ್ನು ತಕ್ಷಣ ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ಆದರೆ ನಿಧಾನವಾಗಿ ನಾವು ಅದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದಾಗ,  ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಮೊದಲು ಕಷ್ಟವೆನಿಸಿದ ಅದೇ ಪರಿಸ್ಥಿತಿ ಮತ್ತೆ ಸುಲಭವಾಗಲು ಹೇಗೆ ಸಾಧ್ಯ.? ಇಲ್ಲಿ ಇರುವುದು ವಿಚಾರ ಇಷ್ಟೆ. ಯಾವಾಗ ನಾವು ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಾದ ಸಂದರ್ಭ ಬರುತ್ತದೋ ಆವಾಗ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಅಂದರೆ  ಬದಲಾವಣೆಯನ್ನು ಮನಸ್ಸು ಸ್ವೀಕರಿಸಲು ಒಪ್ಪುತ್ತದೆ. ಇಲ್ಲಿ ಕಷ್ಟದ ಪರಿಸ್ಥಿತಿ ನಮ್ಮ ಹೊಂದಾಣಿಕೆ ಇದ್ದಾಗ ಸುಲಭವಾಗಲು ಸಾಧ್ಯವಿದೆ. ಆದರೆ ಬುದ್ಧಿವಂತ ಜೀವಿಯಾದ ಮನುಷ್ಯರಲ್ಲಿ ತನ್ನ ಮನಸ್ಥಿತಿಯನ್ನು ಬದಲಾಯಿಸುವಂತಹವರು ಇರುವುದು ಬಹಳ ಅಪರೂಪ. ಹೀಗಾಗಿಯೇ ಪರಸ್ಪರರಲ್ಲಿ ಸಿಟ್ಟು, ಕೋಪ,ದ್ವೇಷ, ರೋಷ , ಅಸೂಯೆ  ಮೂಡಿ ಬರುವುದು. ಮನುಷ್ಯ ಸಂಘಜೀವಿಯಾದ ಕಾರಣ ಸಾಮಾಜಿಕ ಜೀವನದಲ್ಲಿ, ಸಮಷ್ಟಿಯ ಒಳಿತಿನ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸಮಾಜದ ಕೆಟ್ಟತನಕ್ಕೆ ಅಥವಾ ದುರ್ನನಡತೆಗೆ ತನ್ನ ಮನಸ್ಥಿತಿ ಕಾರಣವಾಗಬಾರದು ಎಂಬ ಎಚ್ಚರಿಕೆ ಮನುಷ್ಯನಲ್ಲಿ ಇರಬೇಕಾಗುತ್ತದೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಕೆಟ್ಟ ಪರಿಸ್ಥಿತಿಗೂ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮನುಷ್ಯ ತನ್ನ ಮನೆಯಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕಾದರೆ ಸಾಮಾಜಿಕ ಮನಸ್ಥಿತಿಯನ್ನು ಅರಿತು, ಅದರಂತೆ ನನ್ನ ಮನಸ್ಸನ್ನು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಿ ಸಮಾಜ ಸುಸ್ಥಿತಿಯಲ್ಲಿ ನಡೆಯಬಹುದು. ‘ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗತ್ತದೆ’ ಎಂಬುದಕ್ಕೆ ಒಂದು ಸರಳ ಉದಾಹರಣೆಯನ್ನು ಕೊಡುವುದಾದರೆ ಒಂದು ಕುಟುಂಬದಲ್ಲಿನ ಹೆಣ್ಣು ಮಗಳು ಅಂತರ್ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಬೇಕೆನ್ನುವಾಗ, ಅವಳ ಮನೆಯವರ ಮನಸ್ಥಿತಿ ಅದಕ್ಕೆ ಒಪ್ಪದೇ ಇರಬಹುದು. ಏಕೆಂದರೆ ಸಮಾಜ ತಮ್ಮನ್ನು ಬೇರೆ ದೃಷ್ಟಿಕೋನದಿಂದ ನೋಡಬಹುದು, ನಮ್ಮನ್ನು ಹೊರಗೆ ಇಡಬಹುದು, ಬೇರೆ ಜಾತಿಯ ಸಂಸ್ಕೃತಿ ,ಸಂಸ್ಕಾರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂಬಿತ್ಯಾದಿ ಕಾರಣಗಳಿಂದ ಅಂತರ್ಜಾತಿಯ ವಿವಾಹಕ್ಕೆ ಹೆತ್ತವರ ಮನಸ್ಸು ಒಪ್ಪದಿರಬಹುದು. ಅದೇ ರೀತಿಯಲ್ಲಿ ಪ್ರೀತಿಸಿದ ಹೆಣ್ಣು- ಗಂಡು ಒಬ್ಬರನ್ನೊಬ್ಬರು ಬಿಟ್ಟು ದೂರವಾಗಲು ಅವರ ಮನಸ್ಸೂ ಒಪ್ಪದಿರಬಹುದು. ಈ ಸಂದಿಗ್ಧ ಸನ್ನಿವೇಶದಲ್ಲಿ ಕುಟುಂಬದ ಪರಿಸ್ಥಿತಿ ಬೀಗಡಾಯಿಸುತ್ತದೆ. ಆಗ ಒಂದೇ ಪ್ರೀತಿಸಿದವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ವಿಷಯವನ್ನು ಬಗೆಹರಿಸಬಹುದು ಅಥವಾ ತಂದೆ ತಾಯಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅಂತರ್ಜಾತೀಯ ವಿವಾಹ ಮಾಡಿಕೊಡಲು ಒಪ್ಪಿಗೆ ನೀಡಬಹುದು. ಆಗ ಅಲ್ಲಿ ಬಿಗಡಾಯಿಸಿದಂತಹ ಪರಿಸ್ಥಿತಿ, ಶಾಂತವಾಗಿ ಎಲ್ಲವೂ ಸುಖಾಂತ್ಯವಾಗಬಹುದು. ಇದು ಒಂದು ಉದಾಹರಣೆ. ಹೀಗೆ ಮನಸ್ಥಿತಿ ಬದಲಾದರೆ ಪರಿಸ್ಥಿತಿಯು ಬದಲಾಗಬಹುದು ಎಂಬುದಕ್ಕೆ ನಮ್ಮ ದಿನನಿತ್ಯದ ಜೀವನದಿಂದ ಹಲವಾರು ರೀತಿಯ ಘಟನೆಗಳನ್ನು ಇಲ್ಲಿ ಉಲ್ಲೇಖ ಮಾಡಬಹುದು. ಆದರೆ ನಮ್ಮ ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಜನರ ಸ್ಥಿರ ಮನಸ್ಥಿತಿಯಿಂದಾಗಿ ಉಂಟಾಗುವ ಕೆಡುಕುಗಳ ಬಗ್ಗೆ  ಆಲೋಚನೆಯನ್ನೇ ಮಾಡುವುದಿಲ್ಲ. ಎಲ್ಲರಿಗೂ ಅವರವರ ,*ಈಗೊ* ಮುಖ್ಯವಾಗುವುದನ್ನು ನಾವು ಗಮನಿಸಿದ್ದೇವೆ.ಆದರೆ ಮನುಷ್ಯ ತನ್ನ ಪರಿಸ್ಥಿತಿಯನ್ನು ಬದಲಾಯಿಸಲು, ತಾನು ಪರಿಸ್ಥಿತಿಯನ್ನು ದೂಷಿಸದೆ, ತನ್ನ ಮನಸ್ಸನ್ನು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ಅನಿವಾರ್ಯ .ಸಂಕಷ್ಟ ಕಾಲದಲ್ಲಿ ಬದಲಾವಣೆಗಾಗಿ ತಮ್ಮಮನಸ್ಥಿತಿಯನ್ನೇ  ಬದಲಾಯಿಸಿ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಎದುರಿಸಲು ಸಾಧ್ಯವಿದೆ. ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ. ಹಾಗಂತ ಎಲ್ಲಾ ರೀತಿಯ ಪರಿಸ್ಥಿತಿಯ ಬದಲಾವಣೆಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕೆಂದರ್ಥವಲ್ಲ. ಇನ್ನೊಬ್ಬರಿಗೆ ಒಳಿತಾಗುವುದಾದರೆ, ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದರಿಂದ ಸಾಮೂಹಿಕ ಅಥವಾ ಸಮಾಜಕ್ಕೆ ಹಿತವಾಗುವುದಾದರೆ ನಾವೇಕೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬಾರದು? ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲದಂತಹ ಸಂದರ್ಭಗಳು ಬರಬಹುದು. ಅಂದರೆ ಪರಿಸ್ಥಿತಿ ನಮ್ಮ ಮನಸ್ಥಿತಿಯನ್ನು ಬದಲಾಯಿಸಿ ನಾವು ಅದಕ್ಕೆ ಒಗ್ಗಿಕೊಂಡರೂ ಒಳಿತಾಗುವ ಬದಲು ಕೆಡುಕೇ ಉಂಟಾಗುವುದಾದರೆ, ನಮ್ಮ ಮನಸ್ಥಿತಿಯನ್ನು ನಾವು ಏಕೆ ಬದಲಾಯಿಸಬೇಕು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗಾದರೂ ಮಾಡಿ ಸಮಾಜದ ಹಿತಕ್ಕಾಗಿ ಬದಲಾಯಿಸಲು ನೋಡಬೇಕು. ಇಲ್ಲದಿದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ನಾವು ಸಿಲುಕದೆ ಅದರಿಂದ ಹೊರಗೆ ಬರಬೇಕು. ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ- ಎಂಬುದಕ್ಕೆ ಈಗ ನಾನು ನೀಡುವ ಅರ್ಥ ನಿಮಗಾಗಿರಬಹುದು ಎಂದು ಭಾವಿಸುತ್ತೇನೆ. ಇಲ್ಲಿ ನಮ್ಮ ಮನಸ್ಥಿತಿ ಬದಲಾಯಿಸುವುದೆಂದರೆ, ನಮ್ಮ ‘ಅಹಂ’ ಅಥವಾ ‘ಇಗೊ’ ವನ್ನು ಇಟ್ಟುಕೊಳ್ಳದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಮಾಜದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗುವುದು ಎಂದರ್ಥ. ಎಲ್ಲಿ ಸಮಾಜದಲ್ಲಿ ನಡೆಯುವ ಕೆಡುಕಿಗೆ ಅಥವಾ ಕೆಟ್ಟ ಪರಿಸ್ಥಿತಿಗೆ ನಮ್ಮ ಮನಸ್ಸು ಕಾರಣವಾಗುತ್ತದೊ ಅಂತಲ್ಲಿ ನಾವು ನಮ್ಮ ಮನಸ್ಸನ್ನು ಬದಲಾಯಿಸಿದರೆ, ಪರಿಸ್ಥಿತಿ ಸುಧಾರುತ್ತದೆ. ಹಾಗಾಗಿ ಕಷ್ಟದ ಪರಿಸ್ಥಿತಿಗೆ  ನಮ್ಮ ಮನಸ್ಸು ಅಥವಾ ಮನೋಭಾವ ಕಾರಣವಾಗುತ್ತದೆ ಎಂದಾದರೆ ನಾವು ಬದಲಾಗಬೇಕು.ಅದು ಅನಿವಾರ್ಯ ಕೂಡ.ನಮ್ಮ ಮನೋಭಾವವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ,ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು.  ಮನುಷ್ಯನಾದವನು ತನ್ನ ಬದುಕಿನಲ್ಲಿ ಎದುರಾದ ಸಂಕಷ್ಟದ ಪರಿಸ್ಥಿತಿಯನ್ನರಿತು, ಅದರಿಂದ ಸಮಸ್ಯೆ ಬಗೆಹರಿದು, ಒಳಿತಾಗುವುದಾದರೆ ತನ್ನ  ಮನಸ್ಥಿತಿ ಬದಲಾಯಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು. ಆಗಲೇ ಅತ್ಯುತ್ತಮವಾದುದನ್ನು ಸಾಧಿಸಬಹುದು. ಡಾ.ಸುಮತಿ ಪಿ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ Read Post »

ಇತರೆ, ಜೀವನ

“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಜಯಶ್ರೀ.ಜೆ. ಅಬ್ಬಿಗೇರಿ                                     

ಬದುಕಿನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ                                      “ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಅಮೆರಿಕದ ಪ್ರಸಿದ್ಧ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರ ಜೀವನ  ಸೋಲುಗಳ ಸರಮಾಲೆಯಿಂದ ಕೂಡಿತ್ತು ವ್ಯಾಪಾರದಲ್ಲಿ ನಷ್ಟ, ಪ್ರಿಯತಮೆಯ ಸಾವು, ಹನ್ನೆರಡಕ್ಕೂ ಹೆಚ್ಚು ಬಾರಿ ಚುನಾವಣೆಯಲ್ಲಿ ಸೋಲು ಕಂಡರು. ಆದರೂ,’ನನ್ನ ಆತ್ಮವಿಶ್ವಾಸ ನನ್ನನ್ನು ಕೈಬಿಡುವುದಿಲ್ಲ.’ ಎಂದು ನಂಬಿದ್ದರು. ಅವರು ಅಂತಿಮವಾಗಿ ತಮ್ಮ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾದರು. ಸ್ವ ನಂಬಿಕೆ , , ,?ಜೀವನದ ಅತೀ ದೊಡ್ಡ ಶಕ್ತಿ ಯಾವುದು ಎಂದು ಯೋಚಿಸಿದಾಗ ಸ್ವ ನಂಬಿಕೆ ಎನ್ನುವುದು ಉತ್ತರವಾಗಿ ಸಿಗುತ್ತದೆ. ಸ್ವ ನಂಬಿಕೆ ಎಂದರೆ ತನ್ನನ್ನು ತಾನು ನಂಬುವುದು. ಸ್ಪರ್ಧಾತ್ಮಕ ಪ್ರಪಂಚದಲ್ಲಿ  ಬದುಕುತ್ತಿರುವ ನಾವು ಲಿಂಕನ್‌ರoತಹ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಸ್ವ ನಂಬಿಕೆ ಇಲ್ಲವೆಂದರೆ ಯಾವ ಸ್ಥಾನವೂ ಇಲ್ಲ. ಯಾರಲ್ಲಿ ಆತ್ಮವಿಶ್ವಾಸ ಇಲ್ಲವೋ ಅವರಲ್ಲಿ ಭಯ ಇರುತ್ತದೆ. ಮತ್ತು  ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲ. ಇಲ್ಲದಿದ್ದರೆ . . .? ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಪ್ರತಿಭಾವಂತನಾಗಿದ್ದರೂ ಅವನಲ್ಲಿ ಸ್ವ ನಂಬಿಕೆ ಇಲ್ಲವೆಂದರೆ ಅವನು ಸಾಧನೆ ಮಾಡುವುದು ಅಸಾಧ್ಯ. ಸಾಧನೆಗೆ ಬೇಕಾದುದು ಎಲ್ಲವೂ ಇದ್ದು ಸ್ವ ನಂಬಿಕೆ ಇಲ್ಲದಿದ್ದರೆ ಸರಿಯಾದ ಇಂಜಿನ್ ಸ್ಟೇರಿಂಗ್ ಗಾಲಿಗಳು ಡ್ರೈವರ್ಎಲ್ಲವೂ ಇದ್ದು ಇಂಧನವಿಲ್ಲದ ಕಾರ್ ಇದ್ದಂತೆ. ಅದು ಮುಂದಕ್ಕೆ ಚಲಿಸಲಾರದು.‘ಜಗತ್ತಿನ ಇತಿಹಾಸವು ತನ್ನ ಮೇಲೆ ನಂಬಿಕೆ ಇಟ್ಟಿದ್ದ ಕೆಲವೇ ಕೆಲವು ವ್ಯಕ್ತಿಗಳ ಇತಿಹಾಸವಾಗಿದೆ. ಆ ನಂಬಿಕೆಯು ಒಳಗಿರುವ ದೈವತ್ವವನ್ನು ಜಾಗೃತಗೊಳಿಸುತ್ತದೆ. ನೀವು ಯಾವುದನ್ನಾದರೂ ಸಾಧಿಸಬಹುದು.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆತ್ಮವಿಶ್ವಾಸವೆಂದರೆ , , ,? ಆತ್ಮವಿಶ್ವಾಸವೆಂದರೆ ನಮ್ಮ ಮೇಲೆ ನಮಗಿರುವ ವಿಶ್ವಾಸ. ನಮ್ಮ ಸಾಮರ್ಥ್ಯ ಗುಣಗಳು ಮತ್ತು ನಿರ್ಧಾರಗಳ ಮೇಲೆ ನಮಗಿರುವ ಅಚಲವಾದ ನಂಬಿಕೆ. ಯಾವುದೇ ಕ್ಷೇತ್ರದಲ್ಲಿ ಜಯಗಳಿಸಲು ಇದೇ ಅತಿ ಮುಖ್ಯವಾದ ಅಸ್ತ್ರವಾಗಿದೆ. ಅದು ನಮ್ಮ ಆಂತರಿಕ ಶಕ್ತಿ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಯಶಸ್ವಿಯಾಗಲು ಅತಿ ಮುಖ್ಯ. ಒಬ್ಬ ವ್ಯಕ್ತಿಯು ಎಷ್ಟೇ ಬುದ್ಧಿವಂತನಾಗಿದ್ದರೂ ಆತ್ಮವಿಶ್ವಾಸದ ಕೊರತೆಯಿದ್ದರೆ ಗುರಿ ತಲುಪುವುದು ಕಷ್ಟವಾಗುತ್ತದೆ. ಕಾರಣ ಅರಿಯಿರಿ ಆತ್ಮವಿಶ್ವಾಸ ಕಡಿಮೆ ಆಗಲು ಕಾರಣ ಹಲವಾರು ಅದರಲ್ಲಿ ಮುಖ್ಯವೆಂದರೆ; ಮನೆಯಲ್ಲಿ ಹಿರಿಯರು ಶಾಲೆಯಲ್ಲಿ ಶಿಕ್ಷಕರು ನಿನಗೇನೂ ಬರುವುದಿಲ್ಲ. ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ. ನೀನು ಮೂರ್ಖ. ನೀನು ದಡ್ಡ ಎಂದು ಹೇಳಿದ್ದನ್ನು ಸಬ್ ಕಾನ್ಶಿಯಸ್ ಮೈಂಡ್ ಅಚ್ಚೊತ್ತಿಕೊಂಡಿರುತ್ತದೆ. ಅದೇ ಸರಿಯೆಂದು ನಂಬಿ ಅದೇ ನಂಬಿಕೆಯಿoದ ದೊಡ್ಡವರಾಗಿರುವುದು. ಮದ್ದು ಅರೆಯಿರಿ ‘ನಿಮ್ಮಲ್ಲಿ ಅದನ್ನು ಮಾಡುವ ಸಾಮರ್ಥ್ಯವಿದೆ ಎಂಬ ನಂಬಿಕೆ ನಿಮಗಿದ್ದರೆ, ಆರಂಭದಲ್ಲಿ ಆ ಸಾಮರ್ಥ್ಯ ಇಲ್ಲದಿದ್ದರೂ ಸಹ, ಕೆಲಸದ ಕೊನೆಯಲ್ಲಿ ಅದನ್ನು ಮಡುವ ಶಕ್ತಿಯನ್ನು ನೀವು ಖಂಡಿತವಾಗಿಯೂ ಪಡೆದುಕೊಳ್ಳುತ್ತೀರಿ.’ ಎಂದು ಹೇಳಿದ್ದಾರೆ ಗಾಂಧೀಜಿ. ಅವರ ನುಡಿಮುತ್ತಿನಂತೆ ಆತ್ಮವಿಶ್ವಾಸದ ಕೊರತೆಗೆ ಮದ್ದು ಅರೆಯಬೇಕು. ಇದುವರೆಗೂ ನಾನು ತಿಳಿದಿದ್ದು ತಪ್ಪು. ಇತರರ ತರಹ ನನ್ನಲ್ಲಿ ಅರ್ಹತೆಯಿದೆ. ನಾನು ಏನು ಬೇಕಾದರೂ ಮಾಡಬಹುದು ನನಗನಿಸಿದ್ದನ್ನು ಸಾಧಿಸಬಹುದು ಅನ್ನೋ ಮೈಂಡ್ ಸೆಟ್ ಬೆಳೆಸಿಕೊಳ್ಳಬೇಕು. ಚಿಕ್ಕ ಗುರಿ ‘ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಎಂಬುದು ‘ಅಪಜಯ’ ಎಂಬ ಕಾಯಿಲೆಯನ್ನು ಕೊಲ್ಲಲು ಇರುವ ಅತ್ಯತ್ತಮ ಔಷಧಿಯಾಗಿದೆ. ಇದು ನಿಮ್ಮನ್ನು ಒಬ್ಬ ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ.’ ಎಂಬ ಅಬ್ದುಲ್ ಕಲಾಂಜಿ ಅವರ ಮಾತು ಶ್ರಮದ ಕುರಿತಾಗಿಯೂ ಹೇಳುತ್ತದೆ. ಆದ್ದರಿಂದ ದಿನನಿತ್ಯ ಚಿಕ್ಕ ಚಿಕ್ಕ ಗುರಿಗಳಿರುವ ಒಂದು ಪಟ್ಟಿ ಮಾಡಿ. ಅದರಲ್ಲಿ  ಐದಾರು ಗುರಿಗಳಿದ್ದರೂ ಸಾಕು.  ಹೆಚ್ಚೆಚ್ಚು  ಗುರಿಗಳನ್ನು ಬರೆದು ಅದನ್ನು ಪೂರ್ಣಗೊಳಿಸಲು ಆಗದಿದ್ದರೆ ನಿಮಗೆ ಬೇಜಾರು ಆಗುತ್ತದೆ. ಮತ್ತು ಆತ್ಮವಿಶ್ವಾಸವು ಮತ್ತಷ್ಟು ಕೆಳಕ್ಕೆ ಜಾರುತ್ತದೆ. ಆದ್ದರಿಂದ ಚಿಕ್ಕ ಗುರಿಗಳನ್ನು ದಿನವೂ ಸಾಧಿಸಲು ಯತ್ನಿಸಿ. ತಯಾರಿ ‘ನೀವು ಅದನ್ನು ಮಾಡಬಲ್ಲಿರಿ ಎಂದು ನಂಬಿದರೂ ಅಥವಾ ಮಾಡಲು ಸಾಧ್ಯವಿಲ್ಲ ಎಂದು ನಂಬಿದರೂ ಎರಡೂ ಸಂದರ್ಭದಲ್ಲೂ ನೀವು ಸರಿಯಾಗಿಯೇ ಇರುತ್ತೀರಿ.’ ಎಂದಿದ್ದಾರೆ ಹೆನ್ರಿ ಫೋರ್ಡ್ ಯಾವುದೇ ಕೆಲಸ ನಿನ್ನ ಯೋಚನೆ ಮತ್ತು ನಿನ್ನ ನಂಬಿಕೆಯ ಮೇಲೆ ಅವಲಂಬಿತ ಎನ್ನುವುದು ಅವರ ಮಾತಿನ ಅರ್ಥ. ಗುರಿಗೆ ಗುರಿ ಇಡುವ ಮೊದಲು ಅದರ ಬಗ್ಗೆ ಸರಿಯಾದ ತಯಾರಿ ನಡೆಸಿ. ಸಂಕಷ್ಟದ ಸಮಯದಲ್ಲಿ ಎದೆಗುಂದದೆ ಮುನ್ನಡೆಯಲು ಇದು ಸಹಕಾರಿ. ಸ್ವ ನಂಬಿಕೆ ಇದ್ದಾಗ ಮಾತ್ರ ನಾವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.ಸೋತಾಗ ಕುಗ್ಗದೆ, ಮಗದೊಮ್ಮೆ ಪ್ರಯತ್ನಿಸುವ ಧೈರ್ಯವನ್ನು ಇದು ತುಂಬುತ್ತದೆ. ನಕಾರಾತ್ಮಕತೆ ಬಿಡಿ ‘ಲೈಫ್ ಹ್ಯಾಸ್ ಮೆನಿ ಪ್ರಾಬ್ಲಮ್ಸ್ ಬಟ್ ನೋ ಪ್ರಾಬ್ಲಮ್ ಲಾಸ್ಟ್ ಫಾರೆವರ್ ಸೋ ಫೇಸ್ ಚಾಲೆಂಜಿಸ್ ವಿಥ್ ಕಾನ್ಫಿಡೆನ್ಸ್. ’ನನ್ನಿಂದ ಸಾಧ್ಯವಿಲ್ಲ ಎಂಬ ಯೋಚನೆಯನ್ನು ಮೊದಲು ಕೈಬಿಡಿ. ಅದರ ಬದಲು ನಾನು ಪ್ರಯತ್ನಿಸುತ್ತೇನೆ ಎಂದು ಆಲೋಚಿಸಿ. ಸೋಲನ್ನು ಅನುಭವವಾಗಿ ಸ್ವೀಕರಿಸಿ. ಮುನ್ನಡೆಯಬೇಕು. ಸೋಲನ್ನು ವೈಫಲ್ಯವೆಂದು ಭಾವಿಸದೆ, ಕಲಿಕೆಯ ಒಂದು ಭಾಗವೆಂದು ಸ್ವೀಕರಿಸಿ ಆಗ ಸೋಲಿನ ಭಯ ಹೋಗಲಾಡುತ್ತದೆ. ಸೋಲಿನ ಭಯ ದೂರವಾಗಿ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮನ್ನು ನೀವು ಪ್ರೀತಿಸಿ. ಇತರರೊಂದಿಗೆ ಹೋಲಿಕೆ ಮಾಡಕೊಳ್ಳುವುದನ್ನು ನಿಲ್ಲಿಸಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸಿ. ಗುರುತಿಸಿ ನಿಮ್ಮ ಸಣ್ಣ ಪುಟ್ಟ ಯಶಸ್ಸನ್ನು ಗುರುತಿಸಿ. ಅವುಗಳನ್ನು ಸಂಭ್ರಮಿಸಿ. ಅದು ದೊಡ್ಡ ಸಾಧನೆಗೆ ಸ್ಪೂರ್ತಿಯಾಗುತ್ತದೆ. ನಿರಂತರ ಕಲಿಕೆಯಿರಲಿ ಅದು ಜ್ಞಾನ ಹೆಚ್ಚಿಸುತ್ತದೆ. ಜ್ಞಾನ ಹೆಚ್ಚಾದಂತೆ ಸಹಜವಾಗಿಯೇ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಗುರಿ ಒಂದೇ ಆಗಿರಲಿ ಪ್ರಯತ್ನ ವಿಭಿನ್ನವಾಗಿರಲಿ. ನಿಮ್ಮ ಮೇಲೆ ನಿವiಗೆ ನಂಬಿಕೆಯಿರಲಿ ಇಡೀ ಜಗತ್ತೇ ನಿಮ್ಮ ಕಾಲಡಿಯಲ್ಲಿರುತ್ತದೆ. ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಬೆಳೆಯಲು ಮಳೆ ಮತ್ತು ಬಿಸಿಲು ಎರಡೂ ಬೇಕು. ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವವಲ್ಲ. ಅವು ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಿಳಿದುಕೊಳ್ಳಿ ಈ ಜಗತ್ತಿನಲ್ಲಿ ಗೌರವದಿಂದ ಬದುಕಲು ಶ್ರೇಷ್ಠವಾದುದನ್ನು ಸಾಧಿಸಲು ನಿಮ್ಮನ್ನು ನೀವು ನಂಬಬೇಕು. ಇತರರು ನಿಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವುದಲ್ಲ. ನಿಮ್ಮ ಆತ್ಮವಿಶ್ವಾಸದ ಮಾತುಗಳು ಆತ್ಮವಿಶ್ವಾಸಭರಿತ ನಿಮ್ಮ ಕ್ರಿಯೆಗಳು. ಸಾಕ್ರೆಟಿಸ್ ಆಗಾಗ್ಗೆ ಜನರಿಗೆ ‘ಪರೀಕ್ಷಿಸದ ಜೀವನವು ಬದುಕಲು ಯೋಗ್ಯವಲ್ಲ.’ ಎಂದು ನೆನಪಿಸುತ್ತಿದ್ದರು. ಸ್ವ ನಂಬಿಕೆಗೆ ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ಸಲದ ಕೆಲಸವಲ್ಲ; ಇದು ಪ್ರಶ್ನಿಸುವ ಕಲಿಯುವ ಮತ್ತು ಸರಿಪಡಿಸುವ ದೈನಂದಿನ ಅಭ್ಯಾಸವಾಗಿದೆ. ಬದಲಾವಣೆಗೆ ದಾರಿ ಆಲೋಚನೆ ಮತ್ತು ಕ್ರಿಯೆ ಸ್ಥಿರವಾದಾಗ ಮಾತ್ರ ನಂಬಿಕೆ ಹೆಚ್ಚುತ್ತದೆ. ನೋವು ಮತ್ತು ಅನಿಶ್ಚಿತತೆಯನ್ನು ತಪ್ಪಿಸುವ ಮೂಲಕ ವಿಶ್ವಾಸದಿಂದ ವರ್ತಿಸುವಂತೆ ಒತ್ತಾಯಿಸುತ್ತದೆ. ಸತತ ಪ್ರಯತ್ನ ಜ್ಞಾನಾರ್ಜನೆ ಮತ್ತು ಧೈರ್ಯದಿಂದ ಇದನ್ನು ಬೆಳೆಸಿಕೊಳ್ಳಬಹುದು. ಅಂಜಿಕೆಯನ್ನು ಬಿಟ್ಟು ಹೊಸ ಸವಾಲುಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ‘ನಿಮ್ಮನ್ನು ನೀವು ಗೆಲ್ಲುವುದು ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ದೊಡ್ಡದು.’ ಜಗತ್ತು ನಿಮ್ಮನ್ನು ನಂಬುವ ಮೊದಲು ನೀವು ನಿಮ್ಮನ್ನು ನಂಬಬೇಕು.ನೆನಪಿರಲಿ: ‘ನನ್ನಿಂದ ಸಾಧ್ಯ’ ಎಂಬ ಸಣ್ಣ ನಂಬಿಕೆ ದೊಡ್ಡ ಬದಲಾವಣೆಗೆ ದಾರಿಯಾಗುತ್ತದೆ.

“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಜಯಶ್ರೀ.ಜೆ. ಅಬ್ಬಿಗೇರಿ                                      Read Post »

ಇತರೆ, ಜೀವನ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ.

ಜೀವನಸಂಗಾತಿ ಡಾ. ಸುಮತಿ ಪಿ. “ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” “ಅತಿಯಾಸೆ ಗತಿ ಕೇಡು”ಎಂಬ ಮಾತಿನಂತೆ ಮನುಷ್ಯನಿಗೆ ಅತಿಯಾದ ಆಸೆಗಳಿದ್ದರೆ, ಒಂದು ಆಸೆ ಅಥವಾ ಬಯಕೆಯ ಈಡೇರಿಕೆಯ ನಂತರ ಇನ್ನೊಂದು ಆಸೆ ಗರಿಗೆದರಿ ಎದ್ದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಂತೃಪ್ತಿ ಎನ್ನುವುದು ಸಿಗದೇ ಇರಬಹುದು. ಅದಕ್ಕೆ ಮನುಷ್ಯರಾದ ನಾವು ಸಂತಸದಿಂದ  ಜೀವನ ನಡೆಸಬೇಕಾದರೆ ಇದ್ದದ್ದರಲ್ಲಿ ತೃಪ್ತಿಯನ್ನು ಅನುಭವಿಸುವ ಗುಣ ನಮ್ಮದಾಗಬೇಕು. ಸಂಪತ್ತು ಎಂದರೆ ಶ್ರೇಷ್ಠವಾದದ್ದು,ಮೌಲ್ಯಯುತವಾದದ್ದು ಎಂದರ್ಥ. ಯಾವುದರಿಂದ ನಮಗೆ ಒಳಿತಾಗುತ್ತದೆಯೋ ಅದುವೇ ಸಂಪತ್ತು ಎನಿಸಿಕೊಳ್ಳುತ್ತದೆ.ಸಂತೃಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಪರಿಸ್ಥಿತಿಯಿಂದ ತೃಪ್ತನಾಗುವ ಸ್ಥಿತಿಯಾಗಿದೆ, ಸಂತೃಪ್ತಿ ಇದ್ದವರು ಜೀವನದಲ್ಲಿ ಆಂತರಿಕ ಶಾಂತಿಯನ್ನು ಹೊಂದಿರುತ್ತಾರೆ .ಆಗ ಅವರಲ್ಲಿ ಸಂತೃಪ್ತಿಯೇ ದೊಡ್ಡ ಸಂಪತ್ತಾಗಿ ವಿಜೃಂಭಿಸುತ್ತದೆ.ಸಂತೃಪ್ತಿ ಎಂದರೆ ಇದ್ದಹಾಗೆ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದಾಗಿದೆ.. ಸಂತೃಪ್ತಿಯು ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮದೇ ಜೀವನವನ್ನು ತೆಗೆದುಕೊಂಡರೆ, ನಾವು ಅನುಭವಿಸುವ ಸಂತೃಪ್ತಿಯೆಂಬುವುದು ನಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಾಗಿ , ಮನಸ್ಸು ಶಾಂತಿ ಸಮಾಧಾನದಿಂದ ಇರುತ್ತದೆ. ಕೆಲವರನ್ನು ನಾವು ಸ್ಥಿತಪ್ರಜ್ಞರು ಎನ್ನುತ್ತೇವೆ. ಸ್ಥಿತಪಜ್ಞರು ಶಾಂತವಾಗಿರುತ್ತಾರೆ. ಸಂತೃಪ್ತಿಯನ್ನು ಹೊಂದುವವರಾಗಿರುತ್ತಾರೆ. ಸಾಗರದ ನೀರನ್ನು ಕಲಕಲು ಪ್ರಯತ್ನಿಸಿದರೂ, ಸಾಗರ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ  ವ್ಯಕ್ತಿಯೂ  ಸಂತೃಪ್ತ  ಮನಸ್ಸಿನಿಂದ ಧನಾತ್ಮಕ ಭಾವನೆ ಹೊಂದಿರುತ್ತಾನೆ. ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಅತೀ ಶ್ರೇಷ್ಠವಾದದ್ದು.ಮನುಷ್ಯ ಜನ್ಮದಲ್ಲಿ ಬದುಕು ನಡೆಸುವಾಗ ಸುಖ ಕಾಣಬೇಕಾದರೆ ಸಂತೃಪ್ತಿ ಇರಬೇಕು.ಸಂತೃಪ್ತಿ ಎಂಬುದು ಮನುಷ್ಯನ ಜೀವನದಲ್ಲಿ ಮೂಡಬೇಕಾದ ತೃಪ್ತ ಭಾವನೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತನಗೆ ಸಿಕ್ಕಿದಷ್ಟು ಪಡೆದು, ತೃಪ್ತಿಯಿಂದ ಜೀವನ ಸಾಗಿಸುವುದು. ಎಲ್ಲಾ ಜನರು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಜನರ ಜೀವನ ರೀತಿ ಬೇರೆ ಬೇರೆ ಇರುತ್ತದೆ .ಆದುದರಿಂದ ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳರಿಮೆಯಿಂದ ಶಾಂತಿ ನೆಮ್ಮದಿಯನ್ನು ಕಳೆದುಕೊಂಡರೆ ಬದುಕಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗದು. ಮನುಷ್ಯರು ಎಂದ ಮೇಲೆ ಒಬ್ಬರ ತರಹ ಇನ್ನೊಬ್ಬರು ಇರುವುದಿಲ್ಲ. ಕೆಲವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇನ್ನು ಕೆಲವರು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತಾರೆ. ಮತ್ತು ಕೆಲವರು ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ಕೊರಗುತ್ತಿರುತ್ತಾರೆ. ಆದರೆ ಇರುವಷ್ಟು ದಿನ ನೆಮ್ಮದಿಯಾಗಿ ಬದುಕಬೇಕು ಎಂದರೆ  ಬದುಕಿನಲ್ಲೇ ಸಂತೋಷವನ್ನು ಕಾಣಬೇಕು. ಜೀವನದಲ್ಲಿ ಸಂತೋಷಕ್ಕೆ ಸಂತೃಪ್ತಿಯೇ ಮುಖ್ಯ ಎಂದು ನಾವು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿದ್ದರೂ, ಅವನು ತೃಪ್ತನಾಗದ ಹೊರತು, ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.ಮನುಷ್ಯ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕಾದರೆ ತನ್ನ ಆಸೆಗಳಿಗೆ ಕಡಿವಾಳ ಹಾಕಲೇಬೇಕು “ಆಸೆಯೇ ದುಃಖಕ್ಕೆ ಮೂಲ”ವೆಂದು ಗೌತಮ ಬುದ್ಧ ತಿಳಿಸಿದಂತೆ,ಅತಿ ಆಸೆಯಿಂದ ಮಾನವ ಇತರರನ್ನು ನೋಡಿ, ತಾನು ಅವರಂತೆ ಆಗಬೇಕು ಎಂದು ಏನೇನೋ  ಮಾಡಲು ಸಾಗಿ, ಇರುವ ಸುಖ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಪ್ರತಿಯೊಬ್ಬನೂ  ಬೇರೆಯವರ ಸುಖವನ್ನೇ ಅಳೆಯುವುದು ಜಾಸ್ತಿ.ಸ್ವಾರ್ಥ ಮನೋಭಾವದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಕನಸಲ್ಲಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು “ನಾವೇ ಅವರಿಗಿಂತ ಸುಖಿಗಳು “ಎನ್ನುವ ಭಾವನೆ ತಾಳುವುದೇ ಸಂತೃಪ್ತಿ.ಸಂತೃಪ್ತಿಯೆ ಬದುಕಿನ ಸಂಪತ್ತು. ಬದುಕಿನಲ್ಲಿ  ಸಂತೃಪ್ತಿ ಇದ್ದಾಗ ,ಸಕಾರಾತ್ಮಕ ದೃಷ್ಟಿಕೋನದಿಂದ ಶಾಂತಿ, ಸಹನೆ ,ನೆಮ್ಮದಿ, ತಾಳ್ಮೆ ಮುಂತಾದಂತಹ ಗುಣಗಳು ಬೆಳೆದು ಬದುಕಿನ ಸಂಪತ್ತಾಗಿ ವಿಜೃಂಭಿಸುತ್ತದೆ ಯಮರಾಜ ಯುಧಿಷ್ಠಿರನಿಗೆ ಅದ್ಭುತವಾದ ಪ್ರಶ್ನೆಗಳನ್ನು ಕೇಳಿದಂತಹ ಸಂದರ್ಭದಲ್ಲಿ ರಾಜನು ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾನೆ ಎಂಬುವುದನ್ನು ನಾವು ಓದಿದ್ದೇವೆ.ಅದೇ ಅವನು ಕೇಳಿದ ಪ್ರಶ್ನೆಗಳಲ್ಲೊಂದು“ಶ್ರೇಷ್ಠ ಸಂತೋಷ ಯಾವುದು?”. ಯುಧಿಷ್ಠಿರ  ಅದಕ್ಕೆ ಕೊಟ್ಟ ಶ್ರೇಷ್ಠವಾದ ಉತ್ತರ “ತೃಪ್ತಿಯಿಂದ ಪಡೆದ ಸಂತೋಷವೇ ಶ್ರೇಷ್ಠ ಸಂತೋಷ”. ಆದ್ದರಿಂದ ತೃಪ್ತಿಯು ಯಾವುದೇ ಸಮಯದಲ್ಲಿ ಹೊಂದಬಹುದಾದ ಶ್ರೇಷ್ಠ ಸಂಪತ್ತು. ಒಳ್ಳೆಯ ಗುಣವನ್ನು ಅಭಿವೃದ್ಧಿಪಡಿಸುವ ಮೂಲಕ,ಉತ್ಸಾಹ ಮತ್ತು ಅಜ್ಞಾನದ ಗುಣಗಳನ್ನು ನಿಗ್ರಹಿಸುವ ಮೂಲಕ  ತೃಪ್ತರಾಗಿರುತ್ತೇವೆ.ಸಂತೃಪ್ತ ಜೀವನವು ಯಶಸ್ವಿ ಜೀವನವೆಂದರೆ ತಪ್ಪಾಗಲಾರದು ಜೀವನದ ಯಶಸ್ಸಿನ ಅಂಶವೆಂದರೆ ಸಂತೃಪ್ತಿ ಎಂದು ಹೇಳಬಹುದು. ನಮಗೆ ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ, ನಮಗೆ ಯಾವುದೇ ಗೆಲುವಿನ ಸಂತಸ ಸಿಗಲಾರದು. ನಮ್ಮಲ್ಲಿ ಹಣವಿರಬಹುದು, ಆಸ್ತಿಗಳಿರಬಹುದು,ಆದರೆ ಆಂತರಿಕ ತೃಪ್ತಿ ಇಲ್ಲ ಎಂದಾದಲ್ಲಿ. ಅದು ಸಂತಸದ ಯಶಸ್ವಿ ಜೀವನವಲ್ಲ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ. ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲವಾಗಿದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಮಗೆ ಸಂತೃಪ್ತಿಯೇ ಬದುಕಿನ ದೊಡ್ಡ ಸಂಪತ್ತು ಎಂಬುದು ಒಪ್ಪಿಕೊಂಡು,ಅದನ್ನು ಪಡೆಯುವುದು ಕಷ್ಟವಾದರೂ  ಇಷ್ಟಪಟ್ಟು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಬೇಕಾಗುತ್ತದೆ.ಸಂತೃಪ್ತಿಯಿಂದಲೇ ನಾವು ಜೀವನದಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಮುಕ್ತಿಯನ್ನು ಹಾಡಬಹುದು, ಸಂತೃಪ್ತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಆದುದರಿಂದ ಸಂತೃಪ್ತಿಯೇ ದೊಡ್ಡ ಸಂಪತ್ತು. ಸಂತೃಪ್ತಿ ಅನ್ನೋದು ಬದುಕಿನಲ್ಲಿ ಇರಬೇಕಾದ ಮೂಲಭೂತವಾದ ಅಂಶವಾಗಿದೆ. ಸಂತೃಪ್ತಿಯೇ ಯಶಸ್ವಿ ಬದುಕಿನ ಮೂಲ ಆಧಾರಸ್ತಂಭವೆಂದೇ ಹೇಳಬಹುದು. ಈ ಭೂಮಿಯ ಮೇಲಿನ ಬದುಕೆಂಬ ನಾಲ್ಕು ದಿನದ ಬಾಳು ಅದು ಗೋಳಾಗದೆ ಇರಬೇಕಾದರೆ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುವಂತಹ ಮನಸ್ಸು ನಮ್ಮದಾಗಬೇಕು. ಸಂತೃಪ್ತಿಯನ್ನೇ ನಮ್ಮ ಬದುಕಿನ ದೊಡ್ಡ ಸಂಪತ್ತನ್ನಾಗಿಸಬೇಕು. ಬದುಕಿನ ದಿನಗಳನ್ನು ಚಿಂತೆ, ದುಃಖ, ನಿರಾಸೆಯಿಂದ ಅತೃಪ್ತರಾಗಿ ಕಳೆಯದೆ ಶಾಂತಿ ಸಮಾಧಾನದಿಂದತೃಪ್ತ ಜೀವನ ನಡೆಸುವುದು ನಮ್ಮೆಲ್ಲರ ಕೈಯಲ್ಲಿದೆ ಅಲ್ಲವೇ? ಡಾ.ಸುಮತಿ ಪಿ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ. Read Post »

ಇತರೆ, ಜೀವನ

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ “ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಮಕ್ಕಳು…..ತಾಯಿಯ ಪ್ರತಿಬಿಂಬ  ಬದುಕಿನಲ್ಲಿ ಈ ವಿಷಯವನ್ನು ಎಂದೂ ಮರೆಯಬಾರದು. ಯಾವುದನ್ನು ನೀವು ನಿಮ್ಮ ಸ್ವಂತ ತಾಯಿಗೆ ಬದುಕಿನಲ್ಲಿ ಕೊಡಲು ಸಾಧ್ಯವಿಲ್ಲವೋ ಅದನ್ನು ನೀವು ಕೂಡ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ವರ್ತಿಸುವ ರೀತಿಯಲ್ಲಿ ಬದುಕು ನಿಮ್ಮೊಂದಿಗೆ ವರ್ತಿಸುತ್ತದೆ. ನಿಮ್ಮನ್ನು ಪ್ರೀತಿಸಿದ ಮೊದಲ ಹೃದಯ ನಿಮ್ಮ ತಾಯಿಯದಾಗಿರುತ್ತದೆ. ತಾಯಿಯ ಪ್ರೀತಿ ಶರತ್ತುಗಳನ್ನು ಹೊಂದಿರುವುದಿಲ್ಲ ಆದ್ದರಿಂದ ಎಂದಿಗೂ ನಿಮ್ಮ ತಾಯಿಯನ್ನು ಎಂದೂ ನಿರ್ಣಯಾತ್ಮಕವಾಗಿ ನೋಡಬೇಡಿ.ನಿಮ್ಮ ತಾಯಿ ಬದುಕಿನ ಎಂತೆಂತಹ ಯುದ್ಧಗಳಲ್ಲಿ ಹೋರಾಡಿರುವಳು ಎಂಬುದರ ಅರಿವು ನಿಮಗಿಲ್ಲ. ಆಕೆ ಮೌನವಾಗಿ ಸಹಿಸಿದ ನೋವುಗಳ ಕುರಿತು ನಿಮಗೆ ಗೊತ್ತಿಲ್ಲ. ತನ್ನ ಗಂಟಲುಬ್ಬಿಸುವ ನೋವನ್ನು ನುಂಗಿ ಕಣ್ಣೀರನ್ನು ಅಲ್ಲಿಯೇ ಇಂಗಿಸಿ ಕಿರುನಗೆ ನಕ್ಕ ಆಕೆಯ ನಗುವಿನ ಹಿಂದಿನ ಆಳವಾದ ಸತ್ಯದ ಅರಿವು ನಿಮಗಿಲ್ಲ.ಆರದ ಅದೆಷ್ಟೋ ಗಾಯಗಳು ಆಕೆಯ ಮನದಲ್ಲಿ ವಾಸವಾಗಿವೆ ಎಂಬುದರ ಅರಿವು ನಿಮಗೆ ಇಲ್ಲ.ಆಕೆಯ ಯೌವನವೆಲ್ಲ ತನ್ನ ಪತಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾ ಸಾಗಿರುತ್ತದೆ.ಮಕ್ಕಳ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾದ ಆರೋಗ್ಯ, ಸಂಸ್ಕಾರ, ಶಿಕ್ಷಣ, ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಾ ತನಗೂ ಕೂಡ ತನ್ನದೇ ಆದ ಬದುಕಿದೆ ಎಂಬುದನ್ನು ಆಕೆ ಮರೆತುಬಿಟ್ಟಿರುತ್ತಾಳೆ.ಯೌವನದ ದಿನಗಳನ್ನು ಆಕೆ ಭಯ, ನಿರಾಶೆ ಮತ್ತು ಆರ್ಥಿಕ ತೊಂದರೆಗಳಿಂದ ಕಳೆದಿರುತ್ತಾಳೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಆಕೆಯನ್ನು ಯಾರೂ ಅಷ್ಟಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಯ ಮನದಾಳದ ಮಾತಿಗೆ ಕಿವಿಯಾಗುವುದಿಲ್ಲ ಆಕೆಯನ್ನು ಪೋಷಿಸುತ್ತಾರೆಯೇ ಹೊರತು ಆಕೆಯ ಭಾವನೆಗಳನ್ನು ಲಕ್ಷಿಸುವುದಿಲ್ಲ…. ಎಲ್ಲವನ್ನು ಮಾಡಿಯೂ ಕೂಡ ಆಕೆ ಏನನ್ನೂ ಬಯಸದೇ ಹೋದರೂ ಆಕೆಯನ್ನು ಪರಿಗಣಿಸುವುದೇ ಇಲ್ಲ. ನಿಮ್ಮ ಹುಟ್ಟಿನಿಂದ ಹಿಡಿದು ತಾನು ನಿಮ್ಮೊಂದಿಗೆ ಇರುವ ಹಾಗೂ ಬದುಕಿರುವ ಪ್ರತಿ ಕ್ಷಣವು ನಿಮ್ಮ ಮನದ ಮಾತುಗಳಿಗೆ ಆಸೆಗಳಿಗೆ ಆಕಾಂಕ್ಷೆಗಳಿಗೆಕಿವಿಗೊಡುವ, ಅದಕ್ಕಾಗಿ ಹೋರಾಡುವವರು ತಾಯಿ.,ಬದುಕಿನ ಹೋರಾಟದ ಎಲ್ಲಾ ಕಷ್ಟಗಳಿಗೆ ಗುರಾಣಿಯಂತೆ ನಿಮ್ಮನ್ನು ರಕ್ಷಿಸಿ ಬೆಳೆಸುವ ಆಕೆಗೆ ತನ್ನದೇ ಆದ ವೈಯಕ್ತಿಕ ಸುಖ ಸಂತೋಷಗಳು ಇಲ್ಲವೇ ಇಲ್ಲ ಎಂದಲ್ಲ… ಆದರೆ ಅವೆಲ್ಲವೂ ನಿಮ್ಮನ್ನು ಕಾಳಜಿ ಮಾಡುವ ಆಕೆಗೆ ಕುಟುಂಬದ ಸಂತಸದಲ್ಲಿಯೇ ಸಾರ್ಥಕತೆಯನ್ನು ಕಾಣುವ ಆಕೆಯ ವಿಶಾಲ ಹೃದಯದ ಮೂಲೆಯಲ್ಲಿ ಅಡಗಿ ಕುಳಿತಿರುತ್ತವೆ.ಆದ್ದರಿಂದ ನಿಮ್ಮ ತಾಯಿಯೊಂದಿಗೆ ಮಾತನಾಡಿ… ಆಕೆಯ ಮಾತುಗಳಿಗೆ ಕಿವಿಯಾಗಿ ಬದುಕಿನಲ್ಲಿ ಆಕೆ ಅನುಭವಿಸಿದ ನೋವು ಯಾತನೆಗಳನ್ನು ಆಕೆಯ ಮಾತುಗಳಲ್ಲಿ ಆಲಿಸಿ.ತಾಯಿಯ ಕುರಿತಾದ ಭಾವನಾತ್ಮಕ ಮಾತುಗಳನ್ನು ಮುಂದಿನ ದಿನಕ್ಕಾಗಿ ಉಳಿಸಿಕೊಳ್ಳದಿರಿ. ನಿಮ್ಮ ತಾಯಿಯ ತಾಳ್ಮೆ, ಸಹನೆ, ಸಿಟ್ಟು, ಸೆಡವು, ಅದ್ವಿತೀಯ ಕಾರ್ಯವೈಖರಿಯನ್ನು ಪ್ರಶಂಶಿಸುವುದಾದರೆ ಅದು ಇಂದೇ ಆಗಲಿ…ಯಾರಿಗೆ ಗೊತ್ತು ಮುಂದೊಂದು ದಿನ ನೀವು ಅದನ್ನೆಲ್ಲಾ ಹೇಳುವ ಹೊತ್ತಿಗೆ ಆಕೆಯೇ ಇಲ್ಲವಾಗಿರಬಹುದು…. ಇದ್ದಾಗ ಸಿಗದ ಗೌರವವನ್ನು ಸತ್ತ ಮೇಲೆ ಪಡೆಯುವುದರಲ್ಲಿ ಯಾವ ಪುರುಷಾರ್ಥವಿದೆ…. ನೀವೇ ಹೇಳಿ.ಬಹುಶಹ ಆಕೆಯ ಕಂಗಳಲ್ಲಿ ಇಡೀ ಜಗತ್ತಿನ ಸುಖ ಸೌಲಭ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಗಿದರೆ ನಿಮ್ಮ ಒಂದು ಅಕ್ಕರೆಯ, ಕಾಳಜಿಯ ಮಾತು ಮತ್ತೊಂದು ತಟ್ಟೆಯಲ್ಲಿ ತೂಗುತ್ತದೆನಿಮ್ಮ ತಾಯಿಯ ಕುರಿತಾದ ನಿಮ್ಮ ಪ್ರೀತಿ ಮತ್ತು ಗೌರವ ನಿಮಗೆ ಆಶೀರ್ವಾದವಾಗಿ ಮರಳಿ ದೊರೆಯುತ್ತದೆ. ಬಹುಶಹ ನಿಮ್ಮಿಂದ ಆಕೆ ನಿರೀಕ್ಷಿಸುವುದು ಕೂಡ ಅದನ್ನೇ. ಮುಂದಿನ ಬದುಕಿನಲ್ಲಿ ನೀವು ಆಕೆಗೆ ಈ ಎಲ್ಲವನ್ನು ಕೊಡಲಿ ಎಂದೇನೂ ಆಕೆ ಇದೆಲ್ಲವನ್ನು ಮಾಡಿರುವುದಿಲ್ಲ ನಿಜ. ಮಕ್ಕಳಾಗಿ ನಿಮ್ಮನ್ನು ಹಾಗೆ ಬೆಳೆಸುವುದು ತನ್ನ ಕರ್ತವ್ಯ ಎಂದು ಆಕೆ ಭಾವಿಸಿದ್ದರೆ ಅದು ಆಕೆಯ ತಪ್ಪಲ್ಲ…. ಆದರೆ ಆಕೆ ನಿಮಗೆ ಕೊಡ ಮಾಡುವ ಪ್ರೀತಿ, ಅಕ್ಕರೆ, ಕಾಳಜಿ, ಕಠಿಣತೆ, ಶಿಸ್ತುಗಳು ನಿಮ್ಮನ್ನು ನೀವು ಈಗಿರುವ ವ್ಯಕ್ತಿಯಾಗಿ ರೂಪಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿರುತ್ತದೆ.ಆಕೆಯ ಪ್ರೀತಿ, ಮಮತೆಗಳು ನಿಮ್ಮನ್ನು ಆರೋಗ್ಯಕರ ಕೌಟುಂಬಿಕ ವ್ಯಕ್ತಿಯನ್ನಾಗಿ ಬೆಳೆಸಿದರೆ ಕಠಿಣತೆಯ ಮುಖವಾಡವನ್ನು ಹೊಂದಿರುವ ಶಿಸ್ತು ಪಾಲನೆಯು ನಿಮ್ಮನ್ನು ಓರ್ವ ಸಭ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸಿರುತ್ತದೆ. ಆಕೆ ನಿಮಗೆ ತೋರುವ ಕಾಳಜಿಪೂರ್ವಕ ನಡವಳಿಕೆ ನಿಮ್ಮನ್ನು ಓರ್ವ ಸಾಮಾಜಿಕ ವ್ಯಕ್ತಿಯನ್ನಾಗಿ ರೂಪಿಸಿದರೆ ಆಕೆಯ ಧಾರ್ಮಿಕ ನಂಬಿಕೆಗಳು ನಿಮ್ಮಲ್ಲಿ ಓರ್ವ ಆಶಾವಾದಿಯನ್ನು, ಭರವಸೆಯ ನಾಯಕನನ್ನು ಸೃಷ್ಟಿಸುತ್ತವೆಆದ್ದರಿಂದ ಮಕ್ಕಳೇ…. ತಾಯಿಯ ಕುರಿತು ನಿಷ್ಕಾಳಜಿ ಬೇಡ ಆಕೆ ಭೌತಿಕವಾಗಿ ಇರಲಿ ಅಥವಾ ಇಲ್ಲದೇ ಇರಲಿ ಆಕೆಯ ಆಶೀರ್ವಾದ ಶಾಂತಿಯಾಗಿ ನಿಮ್ಮನ್ನು ಆವರಿಸುತ್ತದೆ. ಆಂತರಿಕ  ಶಕ್ತಿಯಾಗಿ ನಿಮ್ಮಲ್ಲಿ ತುಂಬಿಕೊಂಡು ನಿಮ್ಮನ್ನು ಗಟ್ಟಿಯಾಗಿಸುತ್ತದೆನಿಮಗೆ ಕೇವಲ ಒಬ್ಬ ತಾಯಿ ಮಾತ್ರ ದೊರೆಯುತ್ತಾಳೆ ಹಾಗೂ ಆಕೆಗೆ ನೀವು ಏನನ್ನು ಕೊಡುವಿರೋ ಅದನ್ನೇ ನೀವು ಬದುಕಿನಲ್ಲಿ ಪಡೆಯುವಿರಿ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸಿ ಆರಾಧಿಸಿ…… ತಾಯಿ ಅದಕ್ಕೂ ಹೆಚ್ಚಿನದನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ. ಏನಂತೀರಾ ಸ್ನೇಹಿತರೇ??  ವೀಣಾ ಹೇಮಂತ್ ಗೌಡ ಪಾಟೀಲ್

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

You cannot copy content of this page

Scroll to Top