“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ
ವಿಶೇಷ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಕು ಸರಿಯಾದ ಸಮಯಕೆ ಕಾಯುವಿಕೆ” ಇನ್ಫೋಸಿಸ್ ಸಂಸ್ಥೆ ಹೆಸರು ಯಾರು ಕೇಳಿಲ್ಲ ಹೇಳಿ. ಅದು ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಹೀಗಾಗಿ ಎಲ್ಲರಿಗೂ ಗೊತ್ತು. ಈ ಸಂಸ್ಥೆಯನ್ನು ಪ್ರಾರಂಭಿಸುವಾಗ ನಾರಾಯಣ ಮೂರ್ತಿ ಅವರ ಬಳಿ ದೊಡ್ಡ ಬಂಡವಾಳವಿರಲಿಲ್ಲ. ಪರಸ್ಥಿತಿ ಎಲ್ಲ ಸುಧಾರಿಸಿದ ಮೇಲೆ ಕಂಪನಿ ಆರಂಭಿಸುತ್ತೇನೆoದು ಕಾಯಲಿಲ್ಲ. ಪತ್ನಿ ಸುಧಾ ಮೂರ್ತಿಯವರಿಂದ ಪಡೆದ ಕೇವಲ ೧೦,೦೦೦ ರೂ ಗಳೊಂದಿಗೆ ಚಿಕ್ಕ ಕೋಣೆಯಲ್ಲಿ ಕಂಪನಿಯನ್ನು ಆರಂಭಿಸಿದರು. ಅವರು ಅಂದು ಇಟ್ಟ ದೃಢ ನಿರ್ಧಾರದ ಹೆಜ್ಜೆ ಪರಿಸ್ಥಿತಿ ಪೂರಕವಾಗುವವರೆಗೆ ಕಾಯುವ ಅಗತ್ಯವಿಲ್ಲ ಎಂಬುದನ್ನು ಸಾರಿದೆ. ಶುಭ ಗಳಿಗೆ ಯಶಸ್ಸಿನ ದಾರಿಯಲ್ಲಿ ಅತ್ಯಂತ ದೊಡ್ಡ ತಡೆಗೋಡೆ ಎಂದರೆ ಶುಭ ಮುಹೂರ್ತಕ್ಕಾಗಿ, ಸರಿಯಾದ ಸಮಯಕ್ಕಾಗಿ ಕಾಯುವುದು. ನಮ್ಮಲ್ಲಿ ಬಹುತೇಕರು ಹೊಸ ಉದ್ಯೋಗ ಆರಂಭಿಸಲು ಇಲ್ಲವೇ ಹೊಸ ವ್ಯಾಪಾರ ಶುರು ಮಾಡಲು ಇಲ್ಲವೇ ಯಾವುದೇ ಒಳ್ಳೆಯ ಕೆಲಸ ಮಾಡಬೇಕಾದರೂ ಶುಭ ಮುಹೂರ್ತ ನೋಡಿಯೇ ಮುಂದುವರೆಯುತ್ತಾರೆ. ಈಗ ನನ್ನ ಪರಿಸ್ಥಿತಿ ಸರಿಯಾಗಿಲ್ಲ, ನನ್ನ ಬಳಿ ಹಣ ಇಲ್ಲ. ಗ್ರಹಗತಿಗಳು ಚೆನ್ನಾಗಿಲ್ಲ, ಶುಕ್ರ ದೆಸೆ ನಡೆಯುತ್ತಿಲ್ಲ. ಹಣ ಕೈಗೆ ಸೇರಿದ ಮೇಲೆ ಕೆಲಸ ಆರಂಭಿಸುವೆ ಗ್ರಹಗತಿಗಳು ಚೆನ್ನಾಗಿ ಆದ ಮೇಲೆ ಎಂಬ ಮಾತುಗಳನ್ನು ಹೇಳುತ್ತ ಮಾಡುವ ಉತ್ತಮ ಕೆಲಸವನ್ನು ಮುಂದೂಡುತ್ತಲೇ ಹೋಗುತ್ತಾರೆ. ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿ ನಂತರ ಅವಕಾಶಗಳೇ ಇಲ್ಲವೆಂದು ಅಳುವುದು ಹುಚ್ಚುತನವಲ್ಲದೇ ಮತ್ತೇನು? ತಲೆಯಲ್ಲಿ ಭ್ರಮೆ ಇಟ್ಟುಕೊಂಡು ಶುಭ ಗಳಿಗೆ ಬರುವವರೆಗೂ ಕೆಲಸವನ್ನು ಶುರು ಮಾಡಲು ಕಾಯುತ್ತಾರೆ. ಕೆಲವರಿಗೆ ಆ ಗಳಿಗೆ ಎಂದಿಗೂ ಬರುವುದೇ ಇಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಹಾಗಾದರೆ ಉತ್ತಮ ಕೆಲಸಕ್ಕೆ ಕೈಯಲ್ಲಿರುವ ಈ ಗಳಿಗೆಯನ್ನು ಉತ್ತಮ ಗಳಿಗೆಯನ್ನಾಗಿ ಮಾಡಿಕೊಳ್ಳುವುದು ಹೇಗೆ ನೋಡೋಣ ಬನ್ನಿ. ಕಾರ್ಯಪ್ರವೃತ್ತರಾಗಿ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡಲು ಕಾಯುವಷ್ಟು ಸಮಯವಿಲ್ಲ. ಹಾಗೆ ನೋಡಿದರೆ ಸರಿಯಾದ ಸಮಯಕ್ಕಾಗಿ ಕಾಯುವುದು ಒಳ್ಳೆಯ ಗಳಿಗೆಗಾಗಿ ಕಾಯುತ್ತಲೇ ಇರುವುದು ಒಂದು ತರಹ ಕೆಲಸವನ್ನು ಮುಂದೂಡುವ ಕಾಯಿಲೆಯೇ ಸರಿ. ಏಕೆಂದರೆ ಜೀವನ ತುಂಬಾ ಚಿಕ್ಕದು. ಹಾಗಾಗಿ ಉತ್ತಮ ಕೆಲಸಗಳನ್ನು ಮಾಡಲು ಸೂಕ್ತ ಸಮಯ ಅಥವಾ ಪರಿಪೂರ್ಣ ಸಂದರ್ಭಕ್ಕಾಗಿ ಕಾಯಬೇಕಿಲ್ಲ. ಕಾಯುವಿಕೆ ಪ್ರಗತಿಯ ಶತ್ರು ಎಂಬುದನ್ನು ಮರೆಯಬಾರದು. ಜಗತ್ತಿನ ಪ್ರಸಿದ್ಧ ಚಿಂತಕರಾದ ಮಾರ್ಕ್ ಟ್ವೇನ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. ‘ಮುಂದೆ ಸಾಗಲು ಇರುವ ಏಕೈಕ ರಹಸ್ಯವೆಂದರೆ ಕಾರ್ಯಪ್ರವೃತ್ತರಾಗುವುದು.’ ನೇರವಾಗಿ ಹೇಳಬೇಕೆಂದರೆ ಸರಿಯಾದ ಕೆಲಸಕ್ಕೆ ವಿಶೇಷ ಸಮಯದ ಅಗತ್ಯವಿರುವುದಿಲ್ಲ.. ಈ ಕಾಯುವಿಕೆ ಎಂಬುದು ಆಲಸ್ಯತನಕ್ಕೆ ಮಣೆ ಹಾಕುತ್ತದೆ. ಮತ್ತು ಇದರಲ್ಲಿ ಭಯವೂ ಅಡಗಿರುತ್ತದೆ. ಭಯ ಮತ್ತು ಆಲಸ್ಯವನ್ನು ಮೀರಿ ಕಾರ್ಯಪ್ರವೃತ್ತರಾದರೆ ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯ. ಲಭ್ಯ ಸೌಲಭ್ಯ ಬಳಸಿ ‘ಹಾಸಿಗೆ ಇದ್ದಷ್ಟು ಕಾಲು ಚಾಚು.’ ಎಂಬ ಗಾದೆ ಮಾತು ನಮಗೆ ಲಭ್ಯವಿರುವ ಸಂಪನ್ಮೂಲಗಳಲ್ಲೇ ಬದುಕುವುದನ್ನು ಕಲಿಸುತ್ತದೆ. ಸರಿಯಾದ ಕೆಲಸಕ್ಕೆ ಸಂಪನ್ಮೂಲಗಳಿಗಿoತ ನಾ ಈ ಕೆಲಸ ಮಾಡಿಯೇ ತೀರಬೇಕೆಂಬ ಛಲ ಮುಖ್ಯ. ಛಲವಿದ್ದರೆ ಕೆಲಸ ತಾನೇ ಕೂಡಿ ಬರುತ್ತದೆ. ಅದ್ಭುತ ಸಾಧನೆ ಮಾಡಿದವರೆಲ್ಲ ಎಲ್ಲ ಸೌಲಭ್ಯಗಳು ಲಭ್ಯವಾದ ಮೇಲೆ ತಮ್ಮ ಸಾಧನೆ ಆರಂಭಿಸಬೇಕೆoದು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಸೂಕ್ತ ಸಮಯಕ್ಕಾಗಿ ಕಾಯಲಿಲ್ಲ. ಬದಲಾಗಿ ಇದ್ದ ಪರಿಸ್ಥಿತಿಯಲ್ಲೇ ಕೆಲಸ ಆರಂಭಿಸಿದರು. ಕಷ್ಟಗಳ ಹಾದಿಯಲ್ಲೂ ಹೆದರದೇ ಮುನ್ನುಗ್ಗಿದರು. ಈ ಹೊತ್ತನ್ನು ಉತ್ತಮವಾಗಿ ಬಳಸಿಕೊಳ್ಳುವವನಿಗೆ ಯಾವಾಗಲೂ ಶುಭ ಸಮಯವೆ ಇರುತ್ತದೆಂಬುದನ್ನು ನೆನಪಿನಲ್ಲಿಡಿ. ಯಾರಿಗಾಗಿಯೂ ಯಾವುದಕ್ಕಾಗಿಯೂ ಕಾಯದೇ ನೀವಂದುಕೊoಡ ಉತ್ತಮ ಕೆಲಸ ಆರಂಭಿಸಿ. ನಿಮ್ಮ ಬಳಿ ಇರಲಾರದ್ದನ್ನು ನೆನೆಯುತ್ತ ಬಳಿಯಿರುವುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಳಿ ಇರುವ ಸೌಲಭ್ಯಗಳನ್ನು ಸಂಪನ್ಮೂಲವನ್ನು ಗೌರವಿಸಿ. ಈಗ ನಿಮ್ಮ ಬಳಿಯಿರುವ ಬುದ್ಧಿವಂತಿಕೆಯನ್ನು ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಕೆಲಸದ ಫಲಾಫಲಗಳು ಅವಲಂಬಿತವಾಗಿರುತ್ತವೆ ಹೊರತು ಎಂದೋ ಬರುವ ಯಾವುದೇ ಸಮಯವಲ್ಲ. ಹಾಗಾಗಿ ನಿಮ್ಮ ಬಳಿ ಇರುವುದನ್ನು ಗೌರವಿಸುವುದನ್ನು ಕಲಿಯಬೇಕು. ಕೈಯಲ್ಲೇ ಇದೆ. ಬುದ್ಧ ಹೇಳುತ್ತಾನೆ ‘ನಿಮ್ಮಲ್ಲಿರುವ ದೊಡ್ಡ ಭ್ರಮೆ ಎಂದರೆ ನಿಮಗೆ ಇನ್ನೂ ಸಮಯವಿದೆ ಎಂದುಕೊಳ್ಳುವುದು.’ ನಾಳೆ ದಿನ ಏನೋ ಹೇಗೋ ಯಾರಿಗೂ ಗೊತ್ತಿಲ್ಲ. ಆದರೆ ಇಂದು ಮಾತ್ರ ನಮ್ಮ ಕೈಯಲ್ಲೇ ಇದೆ. ಇರುವ ಸಮಯವನ್ನು ಮುಂದೂಡುತ್ತ ಹಾಳು ಮಾಡಿ ಮುಂದೆ ಬರುವ ಸಮಯಕ್ಕಾಗಿ ಕಾಯುತ್ತ ಕೂರುವುದು ಶುದ್ಧ ಮೂರ್ಖತನ. ನಾವು ದೃಢ ನಿರ್ಧಾರದಿಂದ ಇಡುವ ಮೊದಲ ಹೆಜ್ಜೆ. ಮನಸ್ಸಿನಲ್ಲಿರುವ ದೃಢ ಸಂಕಲ್ಪ ಮತ್ತು ಮಾಡಿಯೇ ತೀರಬೇಕೆಂಬ ಛಲಗಳೇ ಒಳ್ಳೆಯ ಕೆಲಸಕ್ಕೆ ಆ ಸಮಯವನ್ನು ಸರಿಯಾದ ಸಮಯವಾಗಿ ಬದಲಾಯಿಸುತ್ತವೆ. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ.’ ಎಂಬ ಮಾತಿದೆ. ಕಾಯುತ್ತ ಕುಳಿತರೆ ಕಾಲ ದಾಟಿ ಹೋಗಿಬಿಡುತ್ತದೆ. ಒಮ್ಮೆ ಕಳೆದ ಸಮಯ ಮತ್ತೆಂದಿಗೂ ಮರಳಿ ಬಾರದು. ಉತ್ತಮ ಸಮಯಕ್ಕಾಗಿ ಕಾಯುವ ಬದಲು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಸೂಕ್ತ ಸಮಯವನ್ನು ಸೃಷ್ಟಿಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಹೇಳಿದಂತೆ, ‘ನಿಮ್ಮ ಭವಿಷ್ಯವು ನೀವು ಇಂದು ಏನು ಮಾಡುತ್ತೀರಿ ಎಂಬುದರ ಮೇಲೆ ಆಧಾರಿತವಾಗಿದೆ.’ ಬೇಡ ನೆಪ ಇಂದು ಬೇಡ ನಾಳೆಯಿಂದ ಶುರು ಮಾಡುತ್ತೇನೆ. ಸೋಮವಾರದಿಂದ ಆರಂಭಿಸುತ್ತೇನೆ. ಇನ್ನೇನು ಈ ತಿಂಗಳು ಮುಗಿಯುತ್ತಲೇ ಬಂತು ಮುಂದಿನ ತಿಂಗಳು ಖಂಡಿತ ಆರಂಭಿಸುತ್ತೇನೆ. ಇಂಥ ನೆಪಗಳು ಜೀವವನ್ನು ತಿನ್ನುತ್ತವೆ. ನೆಪದ ಬಲೆಗೆ ಒಮ್ಮೆ ಬಿದ್ದರೆ ಸಾಕು ಅಲ್ಲಿಂದ ಮರಳಿ ಎದ್ದು ಬರುವುದು ಅಷ್ಟು ಸುಲಭದ ಮಾತಲ್ಲ. ದಿನದಿಂದ ದಿನಕ್ಕೆ ನೆಪಗಳ ಸುರುಳಿ ಹೆಚ್ಚುತ್ತಲೇ ಹೋಗುತ್ತದೆ. ನೆಪಗಳ ಗೂಡಿನಲ್ಲಿ ಉಳಿಯುವ ಚಟ ಒಮ್ಮೆ ಅಂಟಿಕೊoಡರೆ ಅದು ಅಷ್ಟು ಸರಳ ಬಿಟ್ಟು ಹೋಗುವುದಿಲ್ಲ. ಹಾಗಾಗಿ ಯಾವುದೇ ಹೊಸ ಕೆಲಸ ಆರಂಭಿಸಲು ಇಂದಿಗಿಂತಶ್ರೇಷ್ಢವಾದ ದಿನ ಮತ್ತೊಂದಿಲ್ಲ. ಯಾವುದೇ ಹೊಸತನ್ನು ಆರಂಭಿಸಿದಾಗ ಆರಂಭದಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ. ಅಡೆತಡೆಗಳಿಗೆ ನೆಪಗಳನ್ನು ಹೇಳುತ್ತ ಕುಳಿತುಕೊಳ್ಳಬಾರದು. ಉದ್ದೇಶ ಚೆನ್ನಾಗಿದ್ದರೆ ಸಾಕು ಸಮಯ ತನ್ನಷ್ಟಕ್ಕೆ ತಾನೇ ನಮ್ಮ ಜೊತೆ ನಡೆಯುತ್ತದೆ. ಉನ್ನತ ಧ್ಯೇಯದೊಂದಿಗೆ ಉತ್ತಮ ಉದ್ದೇಶದೊಂದಿಗೆ ಆರಂಭಿಸಿದ ಕೆಲಸಕ್ಕೆ ಪರಿಸ್ಥಿತಿಗಳು ತಾವಾಗಿಯೇ ಪೂರಕವಾಗಿ ಬದಲಾಗತೊಡಗುತ್ತವೆ. ಎದೆಗಾರಿಕೆ ‘ಆಳಾಗಿ ದುಡಿದವನೇ ಅರಸನಾಗುತ್ತಾನೆ.’ ಎನ್ನುವಂತೆ ಅಂದುಕೊoಡ ಕೆಲಸವನ್ನು ತಕ್ಷಣ ಆರಂಭಿಸಿದವನಿಗೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ.. ತಕ್ಷಣ ಆರಂಭಿಸುವವನೇ ಕೊನೆಗೆ ವಿಜಯಿಯಾಗುತ್ತಾನೆ. ‘ಇಂದು ಮಾಡುವ ಕೆಲಸ ಈಗಲೇ ಮಾಡು ಎನ್ನುವ ದಾಸರ ವಾಣಿ ಇಲ್ಲಿ ಅತ್ಯಂತ ಪ್ರಸ್ತುತ. ಕಾಲಾಯ ತಸ್ಮೈ ನಮಃ ಎಂಬ ನುಡಿ ಕಾಲದ ಮಹತ್ವವನ್ನು ಹೇಳುತ್ತದೆ. ಕಾಲ ಎಲ್ಲಕ್ಕಿಂತಲೂ ಶಕ್ತಿಶಾಲಿ. ಕಾಲ ಮಿಂಚಿದರೆ ಕಣ್ಣೀರು ಗ್ಯಾರಂಟಿ. ಎನ್ನುವಂತೆ ಶುಭ ಮುಹೂರ್ತ ಒಳ್ಳೆಯ ಸಮಯವೆಂದು ಕಾಯುತ್ತ ಕುಳಿತರೆ ಪಶ್ಚಾತ್ತಾಪದ ಹೊರತು ಮತ್ತೇನೂ ಸಿಗುವುದಿಲ್ಲ. ಪರಿಸ್ಥಿತಿ ಹೇಗೆ ಇರಲಿ ಏನೇ ಬರಲಿ ಎದೆಗಾರಿಕೆಯಿಂದ ಎದುರಿಸುತ್ತ ಮುಂದೆ ಹೆಜ್ಜೆ ಹಾಕಿದರೆ ಸರಿಯಾದ ಗುರಿಗೆ ಸರಿಯಾದ ಸಮಯ ತಾನೇ ಜೊತೆಯಾಗುತ್ತದೆ. ಗೆಲುವಿನ ಅರಮನೆಗೆ ಕರೆದೊಯ್ಯುತ್ತದೆ. ಜಯಶ್ರೀ.ಜೆ. ಅಬ್ಬಿಗೇರಿ
“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ Read Post »









