ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಕವಿ ಚಿಂತಕ ಬಸವ ಭಕ್ತ ಡಾ ಸಿದ್ದಯ್ಯ ಪುರಾಣಿಕ”ವಿಶೇಷ ಲೇಖನ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ವ್ಯಕ್ತಿ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಕವಿ ಚಿಂತಕ ಬಸವ ಭಕ್ತ ಡಾ ಸಿದ್ದಯ್ಯ ಪುರಾಣಿಕ”  ಅತ್ಯಂತ ಬಡತನದಲ್ಲಿ ಹೈದ್ರಾಬಾದ ನಿಜಾಮನ ಕಾಲದಲ್ಲಿ ಹುಟ್ಟಿದ ಸಿದ್ದಯ್ಯ ಎಂಬ ಬಾಲಕ ಕನ್ನಡ ಉರ್ದು ಇಂಗ್ಲಿಷ್ ಹಿಂದಿ ಮರಾಠಿ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿ ಕನ್ನಡ ಸಾಹಿತ್ಯ ಲೋಕದ ವಿಶ್ವ ಮಾನವನ ಸಂದೇಶವನ್ನು ಸಾರಿದ ಶ್ರೇಷ್ಠ ಶಿವಯೋಗ ಸಾಧಕರು ಸಾವಿಲ್ಲದ ಶರಣರು . ಕನ್ನಡ ಸಾಹಿತ್ಯ ಅದರಲ್ಲೂ ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಅಪ್ರತಿಮ ಸಾಹಿತ್ಯದ ರಾಯಭಾರಿ ಡಾ ಸಿದ್ದಯ್ಯ ಪುರಾಣಿಕ ಅವರು.ಮನೆಯಲ್ಲಿ ಅಜ್ಜ ಅಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಸಂಪ್ರದಾಯ ಜಂಗಮತ್ವದಿಂದ ಹೊರ ಬಂದು ಅಪ್ಪ ಬಸವಣ್ಣನವರ ವಿಚಾರಧಾರೆಗಳನ್ನು ಬದುಕಿನುದ್ದಕ್ಕೂ ಪಸರಿಸಿದ ಧೀಮಂತ ಸಾಹಿತಿ. ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು.  ‘ವಚನೋದ್ಯಾನದ ಅನುಭಾವಿ ಬಿರುದಾಂಕಿತ,  ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು. *ಹುಟ್ಟು ಮತ್ತು ಜೀವನ* ಸಿದ್ಧಯ್ಯ ಪುರಾಣಿಕರು ಲಿಂಗಾಯತ ಜಂಗಮ ಕುಟುಂಬದಲ್ಲಿ‌ ೧೮ನೇ ಜೂನ್ ೧೯೧೮ರಲ್ಲಿ ಜನಿಸಿದರು. ಈಗಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಪುರಾಣಿಕರು ಹುಟ್ಟಿದ ಊರು. ಶ್ರೀ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಹಾಗೂ ಶ್ರೀಮತಿ ದಾನಮ್ಮ ಪುರಾಣಿಕರಿಗೆ ಜನಿಸಿದ ಐದು ಮಕ್ಕಳಲ್ಲಿ ಹಿರಿಯವರು ಡಾ. ಸಿದ್ಧಯ್ಯ ಪುರಾಣಿಕರು. ಸಿದ್ಧಯ್ಯ ಪುರಾಣಿಕರು ಬಾಲ್ಯದಿಂದಲೇ ಉತ್ತಮವಾದ ಸಾಂಸ್ಕೃತಿಕ ವಾತಾವರಣ ಪಡೆದಿದ್ದರು.ಅವರ ತಂದೆಯವರಾದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ನೂರಾರು ನಾಟಕ-ರಂಗಗೀತೆಗಳನ್ನು,೬ ಪುರಾಣಗಳು ಮತ್ತು ವಚನ ಸಾಹಿತ್ಯದ ಕುರಿತು ೧೦ ಕೃತಿಗಳನ್ನು ರಚಿಸಿದವರು.ಪ್ರಸಿದ್ಧ ಆರ್ಯುವೇದ ಪಂಡಿತರಾದ ಇವರು ಜನಸಾಮಾನ್ಯರಿಗಾಗಿ ಆರೋಗ್ಯದ ಕುರಿತು ಕನ್ನಡದಲ್ಲಿ ಅನೇಕ ಲೇಖನಗಳು ಬರೆದಿದ್ದಾರೆ.ಇದಲ್ಲದೆ ಪ್ರಪ್ರಥಮ ಕನ್ನಡ ಶಾಲೆಯನ್ನು ಸ್ಥಾಪಿಸಿ,ಮುನ್ನೆಡಿಸಿದವರು.ಜೈಮಿನಿ ಭಾರತ, ಶಬರಶಂಕರ ವಿಲಾಸ,ಪ್ರಭುಲಿಂಗ ಲೀಲೆ ಮೊದಲಾದ ಕಾವ್ಯಗಳನ್ನು,ವ್ಯಾಕರಣ,ಛಂದಸ್ಸು ಶಾಸ್ತ್ರಗಳನ್ನೂ, ವಚನ,ಸುಭಾಷಿತಗಳು,ಹಾಡುಗಳು,ಶತಕ ಮೊದಲಾದುವುಗಳನ್ನು ಮಗ ಸಿದ್ಧಯ್ಯನಿಗೆ ಕಲಿಸಿಕೊಟ್ಟರು. ತಮ್ಮ ತಂದೆಯವರು ಬರೆದು ಆಡಿಸುತ್ತಿದ್ದ ನಾಟಕ, ಆಗಾಗ ರಚಿಸಿ ಹಾಡುತ್ತಿದ್ದ ಕವಿತೆ ಇವುಗಳನ್ನೆಲ್ಲಾ ಕೇಳಿದಾಗ ಬೆಳೆಯುವ ಸಿದ್ಧಯ್ಯ ಪುರಾಣಿಕರ ಮನಸ್ಸಿನಲ್ಲಿ ತಾನೂ ಹಾಗಾಗಬೇಕೆನ್ನುವ ಹಂಬಲ ಮೂಡಿಬಂತು. ಸಿದ್ಧಯ್ಯ ಪುರಾಣಿಕರ ಅಜ್ಜಂದಿರಾದ ಕವಿರತ್ನ ಚೆನ್ನಕವಿಗಳಂತೂ ಕವಿಗಳಾಗಿ ವಿಖ್ಯಾತರಾದವರು ಸೋದರಮಾವಂದಿರಾದ ಕಾಲ ಕಾಲೇಶ್ವರ ಶಾಸ್ತ್ರಿಗಳಂತೂ ದೊಡ್ಡ ವೇದಾಂತಿಗಳು. ವಿದ್ವತ್ತು, ಕಾವ್ಯ ರಚನೆ, ಪುರಾಣ ಪ್ರವಚನ ಹಾಗೂ ತಾತ್ವಿಕ ಜಿಜ್ಞಾಸೆಗಳಿಗೆ ಅಪರೂಪವಾದ ವಾತಾವರಣ ಮನೆಯಲ್ಲೇ ದೊರೆತದ್ದು ಪುರಾಣಿಕರ ಪುಣ್ಯ. ಬಾಲ್ಯದಿಂದ ಸಾಹಿತ್ಯವೆನ್ನುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಮುಂದೆ ಶರಣ ಸಾಹಿತ್ಯದಲ್ಲಿ ಸಿದ್ಧಯ್ಯ ಪುರಾಣಿಕರು ಮಾಡಿರುವ ಕಾರ್ಯಸಾಧನೆಗಳಿಗೆ ಅಗತ್ಯವಾದ ವಾತಾವರಣ ಮತ್ತು ಸ್ಫೂರ್ತಿಗಳು ಬಾಲ್ಯದಲ್ಲೇ ಅವರಿಗೆ ಒದಗಿದ್ದವೆಂಬುದು ಸ್ಮರಣೀಯ ಅಂಶವಾಗಿದೆ. ಸಿದ್ಧಯ್ಯ ಪುರಾಣಿಕರದು ತುಂಬಾ ಶಿಸ್ತಿನಿಂದ ಕೂಡಿದ ಅಧ್ಯಯನಶೀಲ ಪ್ರವೃತ್ತಿ. ವ್ಯಾಯಾಮದಿಂದ ಶರೀರವನ್ನು ದೃಢಗೊಳಿಸಿಕೊಳ್ಳುವ ಹಾಗೆಯೇ ಸಾಹಿತ್ಯಾಧ್ಯಾಯನದಿಂದ ಮನಸ್ಸನ್ನು ಶಕ್ತಗೊಳಿಸಿಕೊಂಡವರು. ಏಕಾಗ್ರತೆಯೆನ್ನುವುದು ಅವರಿಗೆ ವರವಾಗಿತ್ತು. ಹೀಗಾಗಿಯೇ ಅವರು ವಿದಾರ್ಥಿಜೀವನದ ಉದ್ದಕ್ಕೂ ತಮ್ಮ ಉತ್ತಮವಾದ ಮಟ್ಟವನ್ನು ಉಳಿಸಿಕೊಂಡು ಬಂದದ್ದೇ ಅಲ್ಲದೆ ಪರೀಕ್ಷೆಗಳೆಲ್ಲದರಲ್ಲಿ ಗೌರವದ ಸ್ಥಾನಗಳನ್ನು ಉಳಿಸಿಕೊಳ್ಳುತ್ತಲೇ ಬಂದವರು. ಬಿ.ಎ ಪರೀಕ್ಷೆಯಲ್ಲಿ ಸಕಲ ವಿಷಗಳಲ್ಲೂ ಅವರಿಗೆ ಪ್ರಥಮ ಸ್ಥಾನ. *ವಿಜ್ಞಾನಿಯಾಗುವುದ ಬಿಟ್ಟು ಕವಿಯಾದ* ಜೀವನದ ಎಲ್ಲ ರಂಗಗಳಲ್ಲಿ ಉತ್ತಮಿಕೆಯನ್ನು ಮೆರೆದ ಸಿದ್ಧಯ್ಯ ಪುರಾಣಿಕರು ಕನ್ನಡದತ್ತ ಬಂದದ್ದು ಒಂದು ಯೋಗಾಯೋಗ. ಪ್ರೌಢಶಾಲೆಯಲ್ಲಿದ್ದಾಗ ಇವರು ಬಯಸಿದ್ದು ಯಂತ್ರಜ್ಞನಾಗಬೇಕೆಂದು. ಅದಕ್ಕಾಗಿ ಉನ್ನತ ಗಣಿತಶಾಸ್ತ್ರವನ್ನು ಐಚ್ಚಿಕ ವಿಷಯವನ್ನಾಗಿ ಆಯ್ಕೆಮಾಡಿಕೊಂಡಿದ್ದರು. ಇವರ ಮೆಚ್ಚಿನ ಗುರುಗಳಾದ ರಹಮತ್ತುಲ್ಲಾ ಖಾನ್ ಸಾಹೇಬರು ಹೋಮ್ ವರ್ಕ್ ಬಗ್ಗೆ ತುಂಬಾ ಕಟ್ಟುನಿಟ್ಟಿನವರಾಗಿದ್ದು ಒಂದು ದಿನ ಸಿದ್ಧಯ್ಯ ಪುರಾಣಿಕರು ಹೋಮ್ ವರ್ಕ್ ಮಾಡಿರದಿದ್ದರಿಂದ ಸಿಟ್ಟಾದದ್ದೇ ಅಲ್ಲದೆ ಈ ವಿಷಯ ಬಿಟ್ಟು ಬೇರೆಯದನ್ನು ಆರಿಸಿಕೋ ಹೋಗು ಎಂದು ಗದರಿಸಿಬಿಟ್ಟರು. ಸ್ವಾಭಿಮಾನಿಯಾಗಿದ್ದ ಸಿದ್ಧಯ್ಯ ಪುರಾಣಿಕರು ತಟ್ಟನೆ ಒಂದು ನಿರ್ಧಾರಕ್ಕೆ ಬಂದು ಬಿಟ್ಟರು. ಕನ್ನಡಕ್ಕೆ ಹೆಸರಾಗಿದ್ದ ತವಗ ಭೀಮಸೇನರಾಯರ ಬಳಿಗೆ ಹೋಗಿ ಕನ್ನಡವನ್ನು ಐಚ್ಚಿಕವಾಗಿ ಆರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಅವರ ಶಿಷ್ಯತ್ವವನ್ನೂ ಪಡೆದುಕೊಂಡುಬಿಟ್ಟರು. ಇಷ್ಟೆಲ್ಲಾ ಆದರೂ ಅವರ ಗಣಿತಶಾಸ್ತ್ರದ ಅಧ್ಯಾಪಕರು ಇವರ ಮೇಲೆ ಯಾವುದೇ ರೀತಿಯ ಆಕ್ರೋಶ ತೋರದೆ ಇವರನ್ನು ಪ್ರೀತಿಯಿಂದಲೇ ಕಂಡದ್ದು ಅಂದಿನ ಅಧ್ಯಾಪಕ ವೃತ್ತಿಯವರ ಸದ್ಗುಣಗಳಿಗೆ ಸಾಕ್ಷಿಯಾಗಿತ್ತು. ಅಂತೂ ಸಿದ್ಧಯ್ಯ ಪುರಾಣಿಕರು ಯಂತ್ರಜ್ಞನಾಗದೇ ಕನ್ನಡಕ್ಕೆ ಹೊರಳಿದ್ದು ಈ ಪರಿಯಲ್ಲಿ. ಸಿದ್ಧಯ್ಯ ಪುರಾಣಿಕರು ಅಧ್ಯಯನ ಮಾಡುತ್ತಿದ್ದಾಗ ಅವರಿಗೆ ನೆರವಾದವರು ಒಬ್ಬಿಬ್ಬರಲ್ಲ. ಅವರಲ್ಲಿ ಮುಖ್ಯರಾದವರು ಅಲಿಬನ್ ಗಾಲಿಬ್ ಸಾಹೇಬರು, ಮೀನಾಯಿ ಸಾಹೇಬರು, ಇಮಾಂ ಸಾಹೇಬರು, ಅಜೀಜ್ ಖಾನ್ ಸಾಹೇಬರು, ಹಕ್ಕನಿ ಸಾಹೇಬರು ಮತ್ತು ಹುಸೇನ ಆಲೀಖಾನ ಸಾಹೇಬರು ಮುಂತಾದವರ ದೊಡ್ಡ ಗುಣಗಳನ್ನು ಪುರಾಣಿಕರು ಮತ್ತೆ ಮತ್ತೆ ನೆನೆಯುತ್ತಿದ್ದರು. ಅಷ್ಟೇ ಅಲ್ಲ ಅವರ ಬದುಕಿನಲ್ಲಿ ಅದರಲ್ಲೂ ತಹಶೀಲ್ದಾರರಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಹುಸೇನ ಆಲೀಖಾನರು ಸ್ವಂತ ಮಗನನ್ನು ಬಿಟ್ಟು ಇವರ ಬಗ್ಗೆ ಮಾಡಿದ ಶಿಫಾರಸ್ಸನ್ನು ಅಷ್ಟೇ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು. *ಕಾವ್ಯಾನಂದರಾದ ಕುರಿತು* ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಕಲಬುರ್ಗಿಯಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮಸ್ಥಾನಗಳಿಸಿದ ಸಿದ್ಧಯ್ಯನವರು ಕವಿಯೆಂಬ ಹೆಮ್ಮೆಗೂ ಪಾತ್ರರಾದವರು. ಜಯಕರ್ನಾಟಕದಲ್ಲಿ ಇವರ ಪದ್ಯವೊಂದು ಅಚ್ಚೂ ಆಯಿತು. ಆಲಮಟ್ಟಿಯಲ್ಲಿದ್ದಾಗ ಇವರ ಕವಿತೆಯೊಂದು ‘ಶರಣ ಸಂದೇಶ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಕಾವ್ಯದೇವಿ ಎಂಬ ನೀಳ್ಗವಿತೆಯಲ್ಲಿರುವ ಸಾಲುಗಳು -“ನಿನ್ನಾತ್ಮವಾನಂದ ನನ್ನಾತ್ಮ ಕಾವ್ಯ! ಇಂತೂ ಕಾವ್ಯಾನಂದ’ ನಾಮ ಸುಶ್ರಾವ್ಯ” – ಕವಿ ಸಿದ್ಧಯ್ಯ ಪುರಾಣಿಕರು ಕಾವ್ಯಾನಂದರಾದ ರೀತಿ ಇದು. *ಉದ್ಗಿರ ಪೀಠಾಧ್ಯಕ್ಷತೆಗೆ  ಆಹ್ವಾನ* ಅಧ್ಯಯನ, ಕಾವ್ಯರಚನೆ, ಸಾಹಿತ್ಯ ಪ್ರೇಮಗಳಿಂದ ಬದುಕಿಗೆ ಒಂದು ಆದರ್ಶವನ್ನು ಕಟ್ಟಿಕೊಳ್ಳುತ್ತಿದ್ದ ಕಾಲದಲ್ಲೇ ಮದುವೆಯ ಒತ್ತಡ ಬಂದಾಗ ತಂದೆಗೆ ಸುದ್ದಿಕೊಡದೆ ಹರ್ಡೇಕರ್ ಮಂಜಪ್ಪನವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಯೋಗ, ಅಧ್ಯಯನ ಹಾಗೂ ಮಂಜಪ್ಪನವರ ಪ್ರಭಾವಗಳಿಂದ ಮನಸ್ಸು ಸ್ವಲ್ಪಮಟ್ಟಿಗೆ ವೇದಾಂತದ ಕಡೆಗೆ ಎಳೆಯುತ್ತಾ ಇದ್ದುದೂ ಉಂಟು. ಆದರೆ ಸಂಗ್ರಾಮಪ್ಪ ಶೆಟ್ಕರ್ ಅವರಿಂದ  ಬಂದ ಸುದೀರ್ಘ ಪತ್ರ ಇವರ ಬದುಕಿನ ದಿಕ್ಕನ್ನು ಬದಲಿಸಿತು. ಉದಯಗಿರಿಯ ಹಾವಗಿಸ್ವಾಮಿ ಮಠ ಆ ಭಾಗದ ಪ್ರಸಿದ್ಧ ಮಠವಾಗಿದ್ದು ಅದಕ್ಕೆ ಪೀಠಾಧ್ಯಕ್ಷರಾಗಲು ನಿಮ್ಮ ಮಗನನ್ನು ದಾನವಾಗಿ ನೀಡಬೇಕೆಂದು ಸಿದ್ಧಯ್ಯ ಪುರಾಣಿಕರ ತಂದೆಯವರಿಗೆ ಬಂದ ಪತ್ರ ಅದು. ಸಿದ್ಧಯ್ಯ ಪುರಾಣಿಕರ ತಂದೆ ಆ ಪತ್ರವನ್ನೋದಿ ಮಂಕಾದುದೇನೋ ನಿಜ, ಆದರೆ ಅದನ್ನು ಮಗನ ಕೈಯಲ್ಲಿಟ್ಟು ‘ಈ ಬಗ್ಗೆ ನಿನ್ನ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ’ ಎಂದು ಹೇಳಿದಂತೆಯೇ ನಡೆದುಕೊಂಡರು. ಸಿದ್ಧಯ್ಯನವರು ಬಹಳಷ್ಟು ಯೋಚಿಸಿದರು. ತಂದೆಯವರ ಬಡತನ, ತಮ್ಮಂದಿರ ಕಷ್ಟ ಕಾರ್ಪಣ್ಯದ ಸ್ಥಿತಿ ಇವುಗಳೆಲ್ಲಾ ಕಣ್ಣೆದುರು ನಿಂತವು. ಸಂಯಮಿಯೆಂದು ಖ್ಯಾತರಾಗಿದ್ದ ಸಿದ್ಧಯ್ಯನವರು ತಾವು ಮೆಚ್ಚಿದ್ದ ಗವಿಯೊಂದರಲ್ಲಿದ್ದ ಯೋಗಿಯನ್ನೇ ಈ ಬಗ್ಗೆ ಸಲಹೆ ಕೇಳಲು ಹೊರಟರು. ಗುಹೆಯ ಸಮೀಪ ಬರುತ್ತಿದ್ದಾಗ ಕಂಡ ಭೋಗದ ದೃಶ್ಯ ಅವರ ಮನಸ್ಸನ್ನು ಕ್ಷಣಕಾಲ ಗೊಂದಲದಲ್ಲಿ ಬೀಳಿಸಿದರೂ ಬದುಕಿನ ಹಾದಿ ಅವರಿಗೀಗ ನಿಚ್ಚಳವಾಗಿತ್ತು, ಸಂನ್ಯಾಸಿಯಾಗುವ ಹಂಬಲವನ್ನು ದೂರಮಾಡಿಬಿಟ್ಟರು. *ಅಧಿಕಾರಿಗಳಾಗಿ* ಬಿ. ಎ. ತೇರ್ಗಡೆಯಾಗಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾದಾಗ ವಕೀಲರಾಗುವ ಸಲಹೆ ಮೇಲೆ ಎಲ್.ಎಲ್.ಬಿ ಪರೀಕ್ಷೆಗೂ ಕುಳಿತರು. ಬಿ. ಎ. ಪರೀಕ್ಷೆಯ ಉನ್ನತ ಸ್ಥಾನದ ದೆಸೆಯಿಂದ ಸಿದ್ಧಯ್ಯ ಪುರಾಣಿಕರು 1943ರಲ್ಲಿ ತಹಶೀಲ್ದಾರರಾಗಿ ಆಯ್ಕೆಯಾದರು. ಮುಂದೆ ಅವರು ನಾಂದೇಡ, ಕಲಬುರಗಿ, ತಾಂಡೂರು,, ಯಾದಗಿರಿ, ಬೆಂಗಳೂರು, ಮಡಿಕೇರಿ, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ನಿವೃತ್ತರಾದರು. ತಹಶೀಲ್ದಾರರಾಗಿ ನೌಕರಿಗೆ ಸೇರಿದ ಅವರು ಹೈದರಾಬಾದು ಸಂಸ್ಥಾನದಲ್ಲಿದ್ದು ಪಡೆದ ಅನುಭವ ಅಪಾರವಾದದ್ದು. ಅವರಿಗೊದಗಿದ ವಿಪತ್ತುಗಳು ಕೆಲವಲ್ಲ. ಆದರೆ ಒಪ್ಪಿಕೊಂಡ ಕೆಲಸವನ್ನು ಅತ್ಯಂತ ಪ್ರೀತಿ, ದಕ್ಷತೆಗಳಿಂದ ನಿರ್ವಹಿಸಿ, ಕರ್ತ್ಯವ್ಯ ಎನ್ನುವುದು ಸೇವೆಯ ಅವಕಾಶ ಎಂದು ಭಾವಿಸಿದ ಸಿದ್ಧಯ್ಯ ಪುರಾಣಿಕರು ಡೆಪ್ಯೂಟಿ ಕಲೆಕ್ಟರ್, ಅಧೀನ ಕಾರ್ಯದರ್ಶಿ, ಉಪಕಾರ್ಯದರ್ಶಿ, ವಾರ್ತಾ ಮತ್ತು ಪ್ರವಾಸೋದ್ಯ್ಯಮ ಇಲಾಖೆಯ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ಸಾರಿಗೆ ಕಮಿಷನರ್, ಕಾರ್ಮಿಕ ಕಮಿಷನರ್ ಹೀಗೆ ವಿವಿಧ ಹಂತಗಳಲ್ಲಿ ಹಾಗೂ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಬಹುಮುಖವಾಗಿ ಜನಪರವಾದ ಕಾರ್ಯಗಳನ್ನು ಮಾಡಿದವರು. *ಕುಟುಂಬ*ಅಮಲ್ದಾರರಾಗಿ ನೇಮಕಗೊಂಡ ಕಾಲದಲ್ಲಿಯೇ ಸಿದ್ಧಯ್ಯ ಪುರಾಣಿಕರು ತಾವು ನೋಡಿ ಮೆಚ್ಚಿದ ಗಿರಿಜಾದೇವಿಯವರನ್ನು ಮದುವೆಯಾದರು. ವಿಜಯಾ, ಶಿವಗೀತಾ ಮತ್ತು ಭಾರತಿ ಎಂಬ ಮೂವರು ಹೆಣ್ಣು ಮಕ್ಕಳು ಮತ್ತು ಪ್ರಸನ್ನ ಕುಮಾರ ಪುರಾಣಿಕ ಎಂಬ ಪುತ್ರರ ಸಂಸಾರ ಅವರದಾಗಿತ್ತು. *ಕನ್ನಡದ ಕಹಳೆ* ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದಾಗ ಕನ್ನಡದ ಕೆಲಸಕ್ಕಾಗಿ ಬಿ.ಎಂ.ಶ್ರೀ, ಎ. ಎನ್. ಮೂರ್ತಿರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಸೀತಾರಾಮಯ್ಯ ಮೊದಲಾದ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ಕರೆಯಿಸಿ ಕನ್ನಡದ ಕಹಳೆಯನ್ನು ಮೊಳಗಿದ್ದೇ ಅಲ್ಲದೆ ಕನ್ನಡದ ವಾತಾವರಣ ನಿರ್ಮಾಣಕಾಯಕದಲ್ಲಿ ಸಿದ್ಧಯ್ಯ ಪುರಾಣಿಕರು ವಹಿಸಿದ ಪಾತ್ರ ಮಹತ್ವದ್ದು. ಈಗಿನ ಬೀದರ್, ರಾಯಚೂರು, ಗುಲ್ಬರ್ಗಾ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಕನ್ನಡದ ಕೆಲಸ ಆಗುವುದಕ್ಕೆ ಕಾರಣರಾದ ಪ್ರಾತಃಸ್ಮರಣೀಯರೆಂದರೆ ಜಯದೇವ ತಾಯಿ ಲಿಗಾಡೆ, ಹರ್ಡೇಕರ್ ಮಂಜಪ್ಪ, ಡೆಪ್ಯೂಟಿ ಚನ್ನಪ್ಪ ಮೊದಲಾದವರು. ಈ ಮಹಾ ಕಾರ್ಯದಲ್ಲಿ ಸಿದ್ಧಯ್ಯ ಪುರಾಣಿಕರ ಪಾತ್ರ ಸಾಮಾನ್ಯವಾದುದಲ್ಲ. 1976ರ ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಸಿದ್ಧಯ್ಯ ಪುರಾಣಿಕರು ಮಡಿಕೇರಿ, ಬೆಳಗಾವಿ ಜಿಲ್ಲೆಗಳ ಜನರು ಸಿದ್ಧಯ್ಯ ಪುರಾಣಿಕರು ಅಲ್ಲಿ ಮಾಡಿದ ಕೆಲಸದ ಬಗ್ಗೆ ಅಪಾರ ಅಭಿಮಾನದಿಂದ ಮಾತನಾಡುತ್ತಿದ್ದುದನ್ನು ಅಪಾರ ಸಂತಸದಿಂದ ನೆನೆಯುತ್ತಿದ್ದರು. ಕನ್ನಡದ ವಿಶ್ವಕೋಶ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆ, ಸರ್ಕಾರದಿಂದ ಪ್ರಕಟವಾದ ಸುಲಭಾವೃತ್ತಿಯ ಲೀಲಾವತಿ ಪ್ರಂಬಂಧ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ವಚನ ಸಾಹಿತ್ಯ ಸಂಗ್ರಹ, ಸರ್ವಜ್ಞನ ವಚನಗಳಂಥ ಕೃತಿಗಳ ಪ್ರಕಟಣೆಯ ಯೋಜನೆಗಳಲ್ಲಿ ತಾವು ನಿರ್ವಹಿಸಿದ ಪಾತ್ರದ ಬಗ್ಗೆ ಅವರಿಗೆ ತುಂಬು ಅಭಿಮಾನವಿತ್ತು. *ಸಾಹಿತ್ಯ ಸೇವೆ* ಸಿದ್ಧಯ್ಯ ಪುರಾಣಿಕರು ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳು. ಅವರ ಸಾಹಿತ್ಯರಾಶಿ ವಿಪುಲವಾಗಿದೆ. ಹಾಗೂ ವೈವಿಧ್ಯಮಯವೂ ಆಗಿದೆ. ಆತ್ಮಾರ್ಪಣೆ, ಭಾರತವೀರ, ರಜತ ರೇಖೆ, ಭಿನ್ನನೂಪುರು ಅಲ್ಲದೆ ಕೆಲವು ಗೇಹ ನಾಟಕಗಳು ಎಂಬ ನಾಟಕಗಳನ್ನವರು ರಚಿಸಿದ್ದಾರೆ. ಭಾರತವೀರ ನಾಟಕ ಚೀನಿಯರ ದಾಳಿಯ ಸಂದರ್ಭದಲ್ಲಿ ಹುಟ್ಟಿದ್ದು. ತ್ರಿಭುವನ ಮಲ್ಲ ಎಂಬ ಕಾದಂಬರಿಯೂ ಇವರದೆ. ವಿಕಾಸವಾಣಿ ಎಂಬುದು ವಯಸ್ಕರಿಗಾಗಿ ಬರೆದ ಕೃತಿ. ಮಕ್ಕಳಿಗಾಗಿ ತುಪ್ಪಾರೊಟ್ಟಿ ಗೇಗೇಗೇ, ಗಿಲ್ ಗಿಲ್ ಗಿಲಗಚ್ಚಿ, ತಿರುಗೆಲೇ ತಿರುಗೆಲೆ ತಿರುಗುಯ್ಯಾಲೆ, ನ್ಯಾಯ ನಿರ್ಣಯ, ಮಕ್ಕಳ ಲೋಕ ಸಂಚಾರ, ಬಣ್ಣ ಬಣ್ಣದ ಓಕುಳಿ ಎಂಬ ಆರು ಕೃತಿಗಳನ್ನು ರಚಿಸಿದ್ದಾರೆ. ಬಸವಣ್ಣನವರ ಜೀವನ ಹಾಗೂ ಸಂದೇಶ, ಮಹಾದೇವಿ, ಹರ್ಡೇಕರ್ ಮಂಜಪ್ಪನವರು, ಸಿದ್ಧರಾಮ, ಮಿರ್ಜಾಗಾಲಿಬ್, ಅಲ್ಲಮ ಪ್ರಭು ಎಂಬ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಕಥಾ ಮಂಜರಿ ಹಾಗೂ ತುಷಾರ ಹಾರ ಎಂಬ ಎರಡು ಕಥಾ ಸಂಕಲನಗಳನ್ನೂ ಬರೆದಿದ್ದಾರೆ. ಹದಿಮೂರಕ್ಕೂ ಹೆಚ್ಚು ಕೃತಿಗಳ ಸಂಪಾದನೆ ಕಾರ್ಯವನ್ನು ಮಾಡಿದ್ದಾರೆ. ಇವುಗಳಲ್ಲಿ ಕೆಲವು ಅನ್ಯಮಹನೀಯರೊಡನೆ ಸಂಪಾದಿಸಿದವುಗಳಾಗಿವೆ. ಹಲವೊಂದು ಅನುವಾದಗಳನ್ನೂ ಮಾಡಿದ್ದಾರೆ. ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ಕಲ್ಲೋಲ ಮಾಲೆ, ಚರಗ, ಹಾಲ್ದೆನೆ, ಮರುಳ ಸಿದ್ಧನ ಕಂತೆ, ಆಯ್ದ ಕವನಗಳು ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಕುವೆಂಪು, ಅಂಬಿಕಾತನಯದತ್ತ, ಡಿ. ಎಸ್. ಕರ್ಕಿ ಮೊದಲಾದವರ ಮೆಚ್ಚುಗೆಗೆ ಪಾತ್ರವಾದ ಇವರ ಕಾವ್ಯ ನವೋದಯ ಮಾರ್ಗಕ್ಕೆ ಸೇರಿದುದಾಗಿದೆ. ಬಾಳಪ್ಪ ಹುಕ್ಕೇರಿ ಅವರು ಹಾಡಿರುವ ಮೊದಲು ಮಾನವನಾಗು ಗೀತೆ ಮುಟ್ಟದ ಕನ್ನಡದ ಕಿವಿಗಳಿಲ್ಲ, ತಟ್ಟದ ಹೃದಯಗಳೇ

“ಕವಿ ಚಿಂತಕ ಬಸವ ಭಕ್ತ ಡಾ ಸಿದ್ದಯ್ಯ ಪುರಾಣಿಕ”ವಿಶೇಷ ಲೇಖನ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ

“ಅಪ್ಪನ ಮಡಿಲು”ವಿಶೇಷ ಬರಹ ಪೃಥ್ವಿರಾಜ್ ಟಿ ಬಿ

ವಿಶೇಷ ಸಂಗಾತಿ ಪೃಥ್ವಿರಾಜ್ ಟಿ ಬಿ “ಅಪ್ಪನ ಮಡಿಲು” ಅಪ್ಪನ ಮಡಿಲು…ಅದು ಕೇವಲ ಒಬ್ಬ ತಂದೆಯ ಮಡಿಲಲ್ಲ.ಅದು ನನ್ನ ಬದುಕಿನ ಮೊದಲ ಆಶ್ರಯ,ಮೊದಲ ಪಾಠಶಾಲೆ,ಮೊದಲ ದೇವಾಲಯ.ನಾನು ಈ ಜಗತ್ತಿಗೆ ಬಂದಾಗ ನನಗೆ ಯಾವುದರ ಅರಿವೂ ಇರಲಿಲ್ಲ. ಬೆಳಕು, ಕತ್ತಲೆ, ಮುಖಗಳು, ನಗು, ಅಳು—ಯಾವುದೂ ನನಗೆ ಅರ್ಥವಾಗಲಿಲ್ಲ. ಕಿವಿಗೆ ಬಿದ್ದ ಶಬ್ದಗಳೇ ನನ್ನ ಮೊದಲ ಪರಿಚಯ. ಆ ಶಬ್ದಗಳ ಅರ್ಥ ಗೊತ್ತಾಗುವ ಮೊದಲೇ ನಾನು ಬದುಕಿನೊಳಗೆ ಕಾಲಿಟ್ಟಿದ್ದೆ.ಅದು ನನ್ನ ಜನನ.ಆ ಕ್ಷಣದಿಂದಲೇ ಆರಂಭವಾಯಿತು ಒಂದು ಪಯಣ—ನಾನು ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಅರ್ಥಮಾಡಿಕೊಳ್ಳುತ್ತಿದ್ದ ಬದುಕಿನ ಪಯಣ.ಬದುಕು ಯಾವಾಗಲೂ ನಮಗೆ ತಿಳಿಸಿ ನಡೆಯುವುದಿಲ್ಲ.ಅದು ನಮ್ಮನ್ನು ಎತ್ತಿಕೊಂಡು ಹೋಗುತ್ತದೆ.ಕೆಲವೊಮ್ಮೆ ಮುದ್ದಾಗಿ,ಕೆಲವೊಮ್ಮೆ ಕ್ರೂರವಾಗಿ.ನಮ್ಮ ಮನೆ ಚಿಕ್ಕದಾಗಿತ್ತು. ನಾಲ್ಕು ಗೋಡೆಗಳು, ಒಂದು ಚಿಕ್ಕ ಅಡುಗೆಮನೆ, ಒಂದು ಹಳೆಯ ಬಾಗಿಲು. ಆದರೆ ಆ ಮನೆಯೊಳಗೆ ಅಪಾರವಾದ ಉಷ್ಣತೆ ಇತ್ತು. ಅಪ್ಪ, ಅಮ್ಮ, ನಾನು ಮತ್ತು ನನ್ನ ತಂಗಿ—ನಾಲ್ವರೂ ಸೇರಿ ನಮ್ಮದೇ ಒಂದು ಪುಟ್ಟ ಲೋಕವನ್ನು ಕಟ್ಟಿಕೊಂಡಿದ್ದೆವು.ಅಪ್ಪ ಮನೆಯ ಹೊರಗಿನ ಜಗತ್ತಿನ ಹೊರೆ ಹೊತ್ತವರು.ಅಮ್ಮ ಮನೆಯೊಳಗಿನ ಜಗತ್ತಿನ ಶಕ್ತಿಯು.ತಂಗಿ ಅಪ್ಪನ ಜೀವದ ತುಣುಕು.ನಾನು ಎಲ್ಲವನ್ನೂ ಮೌನವಾಗಿ ನೋಡುತ್ತಾ ಬೆಳೆದುಬಂದ ಮಗ.ಅಪ್ಪ ನಮ್ಮನ್ನು ಯಾವಾಗಲೂ ಕೊರತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದರು. ಹಣ ಇದ್ದರೂ ಇಲ್ಲದಿದ್ದರೂ, ನಗುವಿನ ಕೊರತೆ ನಮ್ಮ ಮನೆಯಲ್ಲಿರಲಿಲ್ಲ. ಅವರ ಜೀವನದ ಉದ್ದೇಶ ಒಂದೇ—ಮಕ್ಕಳಿಗೆ ನೋವು ತಟ್ಟಬಾರದು.ಅಪ್ಪನ ಕೈಗಳು ಕಠಿಣವಾಗಿದ್ದರೂ, ಹೃದಯ ಮೃದುವಾಗಿತ್ತು.ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರು ಮಾಡಿದ ಕೆಲಸಗಳೇ ಮಾತಾಡುತ್ತಿತ್ತು.ನಾನು ಚಿಕ್ಕಂದಿನಿಂದಲೇ ಹಠ ಹಿಡಿದು ಅಳುವ ಮಕ್ಕಳಲ್ಲಿ ಒಬ್ಬನಲ್ಲ. ಏನಾದರೂ ಬೇಕು ಎಂದರೆ ಅಪ್ಪನ ಮುಖ ನೋಡುತ್ತಿದ್ದೆ. ಅವರ ಕಣ್ಣುಗಳಲ್ಲಿ “ಇಲ್ಲ” ಅಂದರೆ, ಅದು ನನ್ನಿಗೆ ಅಂತಿಮ ಉತ್ತರ. ಅವರ ಮೌನದಲ್ಲೇ ನನಗೆ ಉತ್ತರ ಸಿಗುತ್ತಿತ್ತು.ಹಂಚಿಕೊಂಡು ತಿನ್ನುವುದು, ಇತರರ ನೋವನ್ನು ಅರ್ಥಮಾಡಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚು ಬೇಡ ಅನ್ನಿಸುವುದು—ಇವೆಲ್ಲ ನನ್ನಲ್ಲಿ ಸಹಜವಾಗಿಯೇ ಬೆಳೆದ ಗುಣಗಳು. ಬಹುಶಃ ಅದು ಅಪ್ಪನಿಂದ ನನಗೆ ಬಂದ ಉಡುಗೊರೆ.ಅಪ್ಪನ ಮಡಿಲು ನನಗೆ ದೇವಾಲಯದಂತಿತ್ತು.ಅಲ್ಲಿ ಕುಳಿತರೆ ಜಗತ್ತು ಮೌನವಾಗುತ್ತಿತ್ತು.ಅಪ್ಪ ತಲೆಗೆ ಕೈ ಇಟ್ಟರೆ, ನನ್ನೊಳಗಿನ ಭಯಗಳು ಕರಗುತ್ತಿತ್ತು.ಅವರು ನನ್ನ ಮೊದಲ ದೇವರು.ಮೊದಲ ಹೀರೋ.ನನ್ನ ಬಾಲ್ಯ ಸಂಪೂರ್ಣ ಸಂತೋಷದಿಂದ ತುಂಬಿತ್ತು ಎಂದು ಹೇಳಿದರೆ ಅದು ಅರ್ಧ ಸತ್ಯ. ಹೊರಗೆ ನೋಡಿದರೆ ಎಲ್ಲವೂ ಸರಿಯೇನೋ ಎಂಬಂತೆ ಕಾಣುತ್ತಿತ್ತು. ಆದರೆ ಮನೆಯೊಳಗೆ ಮೌನವಾಗಿ ಬೆಳೆಯುತ್ತಿದ್ದ ಕೆಲ ನೋವುಗಳು, ಅರ್ಥವಾಗದ ನಿಶ್ಶಬ್ದಗಳು ನನ್ನೊಳಗೆ ಪ್ರಶ್ನೆಗಳಾಗಿ ಉಳಿಯುತ್ತಿತ್ತು.ಅಪ್ಪ–ಅಮ್ಮನ ನಡುವೆ ಮಾತಿಲ್ಲದ ದಿನಗಳು.ನಗು ಇದ್ದರೂ, ಹೃದಯಗಳು ದೂರವಾಗುತ್ತಿರುವ ಕ್ಷಣಗಳು.ಆ ನೋವುಗಳನ್ನು ನಾನು ಪದಗಳಲ್ಲಿ ಅರ್ಥಮಾಡಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ಸಂಗ್ರಹಿಸಿಕೊಂಡಿದ್ದೆ.ನಾನು ಐದನೇ ತರಗತಿಯಲ್ಲಿ ಓದುತ್ತಿದ್ದಾಗ, ನಮ್ಮ ಬದುಕಿನ ಮೇಲೆ ಬಿರುಗಾಳಿ ಬಂತು.ಅಪ್ಪ ಮತ್ತು ಅಮ್ಮ ದೂರವಾದರು.ಗೋಡೆಗಳು ಹಾಗೆಯೇ ಇದ್ದವು.ಬಾಗಿಲು, ಕಿಟಕಿ, ನೆಲ— ಯಾವುದು ಬದಲಾಗಿರಲಿಲ್ಲಆದರೆ ಮನೆಯ ಆತ್ಮ ಒಡೆದಿತ್ತು.ಅಮ್ಮ ಮನೆ ಬಿಟ್ಟು ಹೋದ ದಿನ ಮನೆ ಮೌನವಾಗಿತ್ತು. ಆ ಮೌನವು ಕಿವಿಗೆ ಕೇಳಿಸದ ಶಬ್ದವಾಗಿ ನನ್ನ ಮನಸ್ಸಿನಲ್ಲಿ ಕೂಗುತ್ತಿತ್ತು.“ಅಮ್ಮ ಏಕೆ ಹೋದಳು?”ಈ ಪ್ರಶ್ನೆಗೆ ಉತ್ತರ ಯಾರಲ್ಲೂ ಇರಲಿಲ್ಲ.ಅಮ್ಮ ಎಂದರೆ ದೇವರು ಎನ್ನುತ್ತಾರೆ.ಆದರೆ ನನ್ನ ಬದುಕಿನಲ್ಲಿ ‘ಅಮ್ಮ’ ಎಂಬ ಪದ ನೋವಿನ ಅರ್ಥ ಹೊತ್ತುಕೊಂಡಿತ್ತು.ಎಲ್ಲಾ ತಾಯಂದಿರು ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ ಎಂಬ ಮಾತು ನನ್ನಿಗೆ ಸುಳ್ಳಾಗಿ ಕಾಣಿಸಿತು.ನನ್ನ ತಾಯಿ ತನ್ನ ಸುಖವನ್ನು ಆರಿಸಿಕೊಂಡಳು.ಮಕ್ಕಳ ಕಣ್ಣೀರನ್ನು ನೋಡದೆ.ದೇವರ ಮುಂದೆ ನಾನು ಒಂದು ಮೌನ ಪ್ರಾರ್ಥನೆ ಮಾಡಿಕೊಂಡೆ—“ದೇವರೆ, ಈ ತರದ ತಾಯಿ ಯಾರಿಗೂ ಕೊಡಬೇಡ.”ಇದು ಎಲ್ಲಾ ತಾಯಂದಿರ ವಿರುದ್ಧದ ಮಾತಲ್ಲ.ಇದು ನನ್ನ ಬದುಕಿನ ಸತ್ಯ. ಮೌನದಲ್ಲಿ ಬದುಕಿದ ತಂದೆ ಅಮ್ಮ ಮನೆ ಬಿಟ್ಟು ಹೋದ ನಂತರ ನಮ್ಮ ಮನೆ ಮೌನವನ್ನು ಕಲಿತಿತು.ಆ ಮೌನ ಮಾತಾಡುತ್ತಿರಲಿಲ್ಲ, ಆದರೆ ಎಲ್ಲವನ್ನೂ ಹೇಳುತ್ತಿತ್ತು.ಅಪ್ಪ ಮೊದಲ ಕೆಲವು ದಿನಗಳು ಏನೂ ಆಗದಂತೆ ನಡೆದುಕೊಂಡರು.ಅವರು ಅಳಲಿಲ್ಲ.ಕೋಪಗೊಂಡಿಲ್ಲ.ಪ್ರಶ್ನೆ ಕೇಳಲಿಲ್ಲ.ಆದರೆ ನಾನು ಗಮನಿಸಿದ್ದೆ—ಅಪ್ಪನ ನಗು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಸಮಾಜ ಮಾತ್ರ ಮೌನವಾಗಿರಲಿಲ್ಲ.“ಹೆಂಡತಿ ಹೋದಳು” ಅನ್ನೋದು ನಮ್ಮ ಮನೆಯ ಪರಿಚಯವಾಗಿ ಬಿಟ್ಟಿತು.ಕೆಲವರು ಸಹಾನುಭೂತಿ ತೋರಿಸಿದರು.ಹೆಚ್ಚಿನವರು ಕುತೂಹಲ ತೋರಿಸಿದರು.ಕೆಲವರು ಮೌನವಾಗಿ ನಿಂದಿಸಿದರು.ಅಪ್ಪನಿಗೆ ಸಲಹೆಗಳು ಬಂತು—“ಮಕ್ಕಳಿಗಾಗಿ ಮರುಮದುವೆ ಮಾಡಿ”“ಒಬ್ಬ ಹೆಣ್ಣು ಮನೆಗೆ ಬಂದರೆ ಎಲ್ಲವೂ ಸರಿಯಾಗುತ್ತದೆ”“ಮಕ್ಕಳು ತಾನೇ ಹೊಂದಿಕೊಳ್ಳುತ್ತಾರೆ”ಆದರೆ ಅಪ್ಪನ ಉತ್ತರ ಒಂದೇ.ಅದು ಗಟ್ಟಿಯಾಗಿರಲಿಲ್ಲ.ಆದರೆ ಅಚಲವಾಗಿತ್ತು.“ನನ್ನ ಮಕ್ಕಳ ಮನಸ್ಸಿಗೆ ನೋವಾಗಬಾರದು.”ಅಪ್ಪನಿಗೆ ತಮ್ಮ ಬದುಕಿನ ಬಗ್ಗೆ ಚಿಂತೆಯೇ ಇರಲಿಲ್ಲ.ಅವರ ಪ್ರಶ್ನೆ ಒಂದೇ—ನನ್ನ ಮಕ್ಕಳು ಸುರಕ್ಷಿತರಾಗಿದ್ದಾರೆಯೇ?ಮರುಮದುವೆ ಅಂದ್ರೆ ಕೇವಲ ಒಂದು ಸಂಬಂಧ ಅಲ್ಲ.ಅದು ಮಕ್ಕಳ ಬದುಕಿನೊಳಗೆ ಮತ್ತೊಬ್ಬರ ಪ್ರವೇಶ.ಆ ಪ್ರವೇಶ ಒಳ್ಳೆಯದಾಗುತ್ತದೆಯೋ, ಗಾಯವಾಗುತ್ತದೆಯೋ—ಅಪ್ಪನಿಗೆ ಅದರ ಭಯ ಇತ್ತು.ಆ ಭಯವೇ ಅವರನ್ನು ಜೀವನಪೂರ್ತಿ ಒಬ್ಬಂಟಿಯಾಗಿಸಿದರೂ, ಮಕ್ಕಳಿಗಾಗಿ ಅವರು ಒಪ್ಪಿಕೊಂಡರು.ಅಪ್ಪ ಅಮ್ಮನ ಕೊರತೆಯನ್ನು ನಮಗೆ ತೋರಿಸಲಿಲ್ಲ.ಅಡುಗೆ ಮನೆಯಲ್ಲಿ ಅವರೇ ನಿಂತರು.ಬಟ್ಟೆ ತೊಳೆಯುವುದು, ಊಟ ಮಾಡಿಸುವುದು, ಶಾಲೆಗೆ ಕಳುಹಿಸುವುದು—ಎಲ್ಲವನ್ನೂ ಅವರು ಮೌನವಾಗಿ ಮಾಡುತ್ತಿದ್ದರು.ಅಪ್ಪನ ಕೈಗಳಿಂದ ಬಂದ ಊಟದಲ್ಲಿ ಅಮ್ಮನ ಕೈರೇಖೆಗಳು ಕಾಣಿಸದಿದ್ದರೂ, ತ್ಯಾಗ ಸ್ಪಷ್ಟವಾಗಿತ್ತು.ತಂಗಿ ದೊಡ್ಡದಾಗುತ್ತಾ ಹೋಗುತ್ತಿದ್ದಳು.ಅವಳಿಗೆ ಅಪ್ಪ ತಾಯಿ ಎರಡೂ ಆಗಿದ್ದರು.ಅವಳ ಕೂದಲನ್ನು ಬಿಚ್ಚಿ ಜಡೆ ಹಾಕುವುದು, ಅವಳ ಕಣ್ಣೀರನ್ನು ಒರೆಸುವುದು—ಅಪ್ಪ ಕಲಿತರು.ಅವಳು ನಗಿದರೆ ಅಪ್ಪ ಬದುಕಿದ್ದಂತೆ.ಅವಳು ಮೌನವಾದರೆ ಅಪ್ಪನ ಹೃದಯ ನಡುಗುತ್ತಿತ್ತು.ನಾನು ಅಷ್ಟರಲ್ಲಿ ಮೌನದಿಂದ ಜವಾಬ್ದಾರಿಯತ್ತ ಸಾಗುತ್ತಿದ್ದೆ.ನನ್ನೊಳಗೆ ಅಪ್ಪನಂತಾಗಬೇಕು ಅನ್ನೋ ಆಸೆ ಬೆಳೆದುಬಂದಿತ್ತು.ಅವರ ನೋವನ್ನು ಕೇಳದೆ ಅರ್ಥಮಾಡಿಕೊಳ್ಳಬೇಕು ಎಂದು ಕಲಿತಿದ್ದೆ.ಅಪ್ಪ ಮಾತಾಡದ ದಿನಗಳಲ್ಲಿ ನಾನು ಅವರ ಪಕ್ಕ ಕುಳಿತುಕೊಳ್ಳುತ್ತಿದ್ದೆ.ಮಾತು ಬೇಡ.ಹಾಜರಾತಿಯೇ ಸಾಕಾಗುತ್ತಿತ್ತು.ಕಾಲ ಸಾಗಿತು.ತಂಗಿ ಕಾಲೇಜಿಗೆ ಹೋದಳು.ಅಪ್ಪ ಅವಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು.ಅಷ್ಟು ನಂಬಿಕೆ ಅಂದ್ರೆ—ಮನೆಯ ಹಣದ ಜವಾಬ್ದಾರಿಯನ್ನೇ ಅವಳ ಕೈಗೆ ಕೊಟ್ಟಿದ್ದರು.ಲೆಕ್ಕ ಕೇಳಲಿಲ್ಲ.ಅನುಮಾನ ಮಾಡಲಿಲ್ಲ.“ನನ್ನ ಮಗಳು ತಪ್ಪು ಮಾಡೋದಿಲ್ಲ”ಅದು ಅಪ್ಪನ ವಿಶ್ವಾಸ.ಆ ವಿಶ್ವಾಸವೇ ಮುಂದೆ ಅಪ್ಪನ ಹೃದಯವನ್ನು ಹೆಚ್ಚು ನೋಯಿಸಿದ ಸಂಗತಿ ಅನ್ನೋದು ಆ ಕ್ಷಣದಲ್ಲಿ ಯಾರಿಗೂ ಗೊತ್ತಿರಲಿಲ್ಲ.ನಾನು ಡಿಗ್ರಿ ಓದುತ್ತಿದ್ದೆ.ಬದುಕಿನ ಹೊಣೆಗಾರಿಕೆ ನನ್ನತ್ತ ನಿಧಾನವಾಗಿ ಜಾರುತ್ತಿತ್ತು.ಅಪ್ಪ ವಯಸ್ಸಾಗುತ್ತಿದ್ದರು.ಆದರೆ ಅವರ ಮನಸ್ಸು ಮಾತ್ರ ನಮ್ಮ ಭವಿಷ್ಯದಲ್ಲೇ ಸಿಲುಕಿತ್ತು.ಆ ದಿನ ಬಂತು.ತಂಗಿಗೆ ಕೊನೆಯ ಪರೀಕ್ಷೆ.ನಾನೇ ಅವಳನ್ನು ಕಾಲೇಜಿಗೆ ಬಿಟ್ಟು ಬಂದೆ.“ಪರೀಕ್ಷೆ ಮುಗಿದ ಮೇಲೆ ಬೇಗ ಮನೆಗೆ ಬಾ” ಎಂದು ಸಹಜವಾಗಿ ಹೇಳಿದ್ದೆ.ಅವಳು ನಗುತ್ತಾ ತಲೆ ಆಡಿ ಹೋಗಿದ್ದಳು.ಸಂಜೆಯಾಯಿತು.ರಾತ್ರಿ ಆಯಿತು.ಅವಳು ಬರಲಿಲ್ಲ.ಅಪ್ಪ ಮೊದಲಿಗೆ ಗಾಬರಿಯಾಗಲಿಲ್ಲ.“ಇನ್ನೂ ಬರ್ತಾಳೆ” ಅಂದರು.ಆದರೆ ಸಮಯ ಸಾಗಿದಂತೆ ಮೌನ ಗಟ್ಟಿಯಾಗುತ್ತಿತ್ತು.ಆಮೇಲೆ…ಅಪ್ಪನ ಫೋನ್‌ಗೆ ಒಂದು ವಾಟ್ಸ್‌ಆ್ಯಪ್ ಮೆಸೇಜ್ ಬಂತು.ಒಂದು ಫೋಟೋ.ಆ ಫೋಟೋದಲ್ಲಿ—ಅಪ್ಪನ ಮುದ್ದಿನ ಮಗಳುಮದುವೆಯ ಉಡುಪಿನಲ್ಲಿಬೇರೊಬ್ಬನ ಕೈ ಹಿಡಿದು ನಿಂತಿದ್ದಳು.ಅಪ್ಪ ಆ ಫೋಟೋವನ್ನು ನೋಡಿದರು.ಒಮ್ಮೆ ನೋಡಿದರು.ಮತ್ತೊಮ್ಮೆ ನೋಡಿದರು.ಅವರು ಕುಸಿದಿಲ್ಲ.ಅವರು ಕೂಗಿಲ್ಲ.ಅವರು ಶಪಿಸಲಿಲ್ಲ.ಆದರೆ ಅವರ ಕಣ್ಣುಗಳಲ್ಲಿ ನಂಬಿಕೆ ಒಡೆದ ಶಬ್ದವಿತ್ತು.ಅದು ನಾನು ಜೀವನದಲ್ಲಿ ಮೊದಲ ಬಾರಿ ನೋಡಿದ ಅಪ್ಪ.ಆ ದಿನ ಅಪ್ಪ ಒಳಗೊಳಗೆ ಕುಸಿದರು.ಅವರ ನೋವಿಗೆ ಮಾತು ಸಿಗಲಿಲ್ಲ.ಮೌನವೇ ಅವರ ಭಾಷೆಯಾಯಿತು.ಆದರೂ…ಅಪ್ಪ ಸಂಪೂರ್ಣವಾಗಿ ಮುರಿಯಲಿಲ್ಲ.ಅವರು ನನ್ನತ್ತ ನೋಡಿದರು.ಆ ದೃಷ್ಟಿಯಲ್ಲಿ ಒಂದು ಪ್ರಶ್ನೆ ಇತ್ತು—“ನೀನು ಇದ್ದೀಯಾ?”ನಾನು ಉತ್ತರ ಕೊಟ್ಟಿಲ್ಲ.ಆದರೆ ಅವರ ಪಕ್ಕ ಕುಳಿತೆ.ಅದು ಸಾಕಾಗಿತ್ತು. ಪೃಥ್ವಿರಾಜ್ ಟಿ ಬಿ

“ಅಪ್ಪನ ಮಡಿಲು”ವಿಶೇಷ ಬರಹ ಪೃಥ್ವಿರಾಜ್ ಟಿ ಬಿ Read Post »

ಇತರೆ

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್

ವ್ಯಕ್ತಿ ಸಂಗಾತಿ ಗೊರೂರು ಶಿವೇಶ್ “ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ನನ್ನ ಕಾಲಘಟ್ಟದ ಯಾರೇ ನಮ್ಮೂರಿನ ರಸಿಕರನ್ನು ಚಿತ್ರಿಸಲು ಹೊರಟರೆ, ಅದರಲ್ಲಿ ಮರೆಯದೆ ದಾಖಲು ಮಾಡಬೇಕಾದ ಪಾತ್ರ ಯಾಕೂಬ್ ನದು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ರು ತಮ್ಮ ನಮ್ಮೂರಿನ ರಸಿಕರು ಕೃತಿಯಲ್ಲಿ ಚಿತ್ರಿಸಿದ ಶಾಲು ಸಾಬಿ ಪಾತ್ರವು ತನ್ನ ಮುತ್ತಜ್ಜನೆಂದು ಹೇಳಿಕೊಳ್ಳುವ ಯಾಕೂಬ್ ಗುಣದಲ್ಲೂ ಅವರನೇ ನೆನಪಿಸುತ್ತಾನೆ . ಈಗ ಹಾಸನದಲ್ಲಿ ನೆಲೆಸಿರುವ ಆತ ನಮ್ಮೂರಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಜೊತೆಗೆ ಊರಿನ ರಥೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಹಾಸನದಲ್ಲಿ ನಡೆಯುವ ಯಾವುದೇ ಸಾಹಿತ್ಯ ಕಾರ್ಯಕ್ರಮ ನಾಟಕಗಳಲ್ಲಿ ಕಾಣಸಿಗುತ್ತಾನೆ ಕಳೆದ 50 ವರ್ಷಗಳ ಇಡೀ ಗೊರೂರಿನ ಇತಿಹಾಸವನ್ನು ದಾಖಲು ಮಾಡುವ ಸಾಮರ್ಥ್ಯ ಇರುವ ಆತನಿಗೆ ನಮ್ಮೂರಿನ ಮನೆಮನೆ ಕಥೆಗಳು ಗೊತ್ತು. ಅಷ್ಟೇ ಏಕೆ ಹಾಸನದ ಪ್ರಮುಖ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಘಟನೆಗಳನ್ನು ಆತ ಹೇಳಬಲ್ಲ. ಯಾಕೂಬ್ ಗೂ ನನ್ನ ತಂದೆಗೂ ಒಂದು ರೀತಿಯ  ಪ್ರೇಮ ಕೋಪದ ಅನನ್ಯ ಸಂಬಂಧ. 1990ರ ಸುಮಾರಿಗೆ ಆರಂಭವಾದ ಸಾಕ್ಷರತಾ  ಆಂದೋಲನದಲ್ಲಿ ನನ್ನಣ್ಣನು ಹಾಗೂ ಯಾಕೂಬ್ ಇಬ್ಬರೂ ಧುಮುಕಿದ  ಸಂದರ್ಭ. ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಪದೇಪದೇ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಬಸ್ಸಿನಲ್ಲಿ ಮಧ್ಯರಾತ್ರಿ ಬಂದು ಮನೆಯ ಬಾಗಿಲು ಬಡಿಯುತ್ತಿದ್ದ ಕಾರಣಕ್ಕೆ ತಂದೆ ಅವರಿಗೆ  ನನ್ನ ಅಣ್ಣನ ಮೇಲೆ ಕೋಪ. ಈ ಕೋಪವನ್ನು   ಜೊತೆಗಿರುತ್ತಿದ್ದ   ಯಾಕುಬ್ ಮೇಲೆ    ಆಗಾಗ್ಗೇ ತೀರಿಸಿಕೊಳ್ಳುತ್ತಿದ್ದರು. ಅವರು ಬೈದ ಬೈಗಳನೆಲ್ಲ  ನಾನು ಸಿಕ್ಕಾಗ ನನಗೆ  ನಿಮ್ಮ ತಂದೆ ಹೀಗೆಲ್ಲಾ ಬೈದ್ರು ಅಣ್ಣ ಎಂದು ಒಪ್ಪಿಸುತ್ತಿದ್ದ. ಆದರೆ   ಮಾರನೇ ದಿನವೇ ನನ್ನ ತಂದೆ  ಯಾಕೂಬ್ ಬಣ್ಣ ತರಲು ಹಾಸನಕ್ಕೆ ಹೋಗಲು ನಮ್ಮೂರಿನ ಬಸ್ ಸ್ಟ್ಯಾಂಡ್ ನ ಬಳಿ ಕಾಣಿಸುತ್ತಿದ್ದರು.  ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಮಣ್ಣಿನ ಗೋಡೆ ಆದ್ದರಿಂದ ನೀರು ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸುಣ್ಣ ಬಣ್ಣ ಮೊದಲಿಗೆ ಬೇಡ ಬೇಡ ಎಂದುಕೊಂಡರೂ ಜಾತ್ರೆ ಹತ್ತಿರ ಬಂದಂತೆ  ಸುಣ್ಣ ಬಣ್ಣ ಆಗಲೇಬೇಕೆಂದು ಬೇಕೆಂದು ನಿರ್ಧರಿಸಿದ ನಮ್ಮ ತಂದೆ ಅದಕ್ಕಾಗಿ ಯಾಕೋಬನನ್ನು ನಿಯೋಜಿಸಿದ ನಂತರ 3- 4 ದಿನ ಮನೆಯಲ್ಲಿ ಬಣ್ಣ ದೇ ಸಡಗರ. ಪಾತ್ರೆಗಳನ್ನೆಲ್ಲ ಹಿತ್ತಲಿಗೆ ಸಾಮಾನುಗಳನ್ನೆಲ್ಲ  ರೂಮ್ ನ ಮಧ್ಯಕ್ಕೆ ಜೋಡಿಸಿ ಅದರ ಮೇಲೆ ಚಾಪೆ ಮುಚ್ಚಿ ಬಣ್ಣ ಹೊಡೆಯುವ ಪ್ರಕ್ರಿಯೆ ಆರಂಭವಾಗುತ್ತಿತ್ತು .ಬಣ್ಣ ನೆಲದ ಮೇಲೆ ಬಿದ್ದಾಗಲಿಲ್ಲ ತಾಯಿ  ಗೊಣಗಲು ಒಮ್ಮೊಮ್ಮೆ ಕೂಗಾಡಲು ಆರಂಭಿಸಿದೊಡನೆ ತಟ್ಟನೆ ಬಣ್ಣ ಬಳಿಯುವುದನ್ನು ನಿಲ್ಲಿಸಿ ಕೆಳಗೆ  ಹಾರಿ ಟರ್ಪೆಂಟೇನನ್ನು ಹಾಕಿ ನೆಲ ಉಜ್ಜಿ ಸರಿ ಆಯ್ತಾ ಅಕ್ಕ ಎಂದು ಸಮಾಧಾನಿಸುತ್ತಿದ್ದ . ನನಗೆ ಅವನ ಕುರಿತು ಗಮನ ಸೆಳೆಯುತ್ತಿದ್ದದ್ದು ಸದಾ  ಆತನ ಕೈಯಲ್ಲಿರುತ್ತಿದ್ದ ಒಂದಿಲ್ಲೊಂದು ಪತ್ರಿಕೆಗಳು. ಅದರಲ್ಲೂ  ಆ ವಾರದ ಲಂಕೇಶ್ ಪತ್ರಿಕೆ ಮತ್ತು  ಹಾಯ್ ಬೆಂಗಳೂರು ಕೈಯಲ್ಲಿ ಹಿಡಿದು ಮನೆಗೆ ಬಂದು ಮಂಚದ ಮೇಲೆ ಇರಿಸಿ ತನ್ನ ಕಾರ್ಯ ಆರಂಭಿಸುತ್ತಿದ್ದ .ಅವನು ತನ್ನ ಕೆಲಸ ಮುಗಿಸುವುದರೊಳಗೆ ನಾನು ಆ ಪತ್ರಿಕೆಗಳನ್ನು ಓದಿ ಮುಗಿಸುತ್ತಿದ್ದೇ. ಈ ರೀತಿಯ ಓದಿನ ಹವ್ಯಾಸ ಹೊಂದಿದ ಯಾಕೂಬನಿಗೆ ಬಹುತೇಕ ಪ್ರಮುಖ ಲೇಖಕರು ಅವರ ಕೃತಿಗಳು ಅವರ ಕೃತಿಗಳ ಸಿನಿಮಾಗಳು ಗೊತ್ತಿತ್ತು .ಅಷ್ಟೇ ಅಲ್ಲದೆ ಚಿತ್ರರಂಗದ ಅನೇಕ ಮಾಹಿತಿಗಳನ್ನು ಆತ ಹಂಚಿಕೊಳ್ಳುವುದರ ಜೊತೆಗೆ ಊರಿನ ಹಲವಾರು ರಸವತ್ತಾದ ಪ್ರಸಂಗಗಳನ್ನು  ಅವನದೇ ಹಾಸ್ಯಮಯ ದಾಟಿಯಲ್ಲಿ ಹೇಳುತ್ತಿದ್ದ. ಆತ ಹೇಳುತ್ತಿದ್ದ ಅನೇಕ ಪ್ರಸಂಗಗಳು ಮತ್ತೊಂದು ಪ್ರಬಂಧಕ್ಕೆ ವಸ್ತುವಾಗಬಲ್ಲದು.  ಬೇಸಿಗೆ ರಜೆ ಸಮಯಕ್ಕೆ ನಮ್ಮೂರಿನಲ್ಲಿ  ಸಮಯ ಕಳೆಯಲು  ಹೊಸದಾಗಿ ಆರಂಭವಾದ ಗ್ರಂಥಾಲಯಕ್ಕೆ ಹೋಗುತ್ತಿದ್ದೆ..ಆದರೆ ಅಲ್ಲಿನ ಗ್ರಂಥಪಾಲಕರು ಅದೇ ಸಮಯಕ್ಕೆ ಅರ್ಜೆ ಹಾಕಿ ತಮ್ಮ ಊರಿಗೆ ತೆರಳಿರುತ್ತಿದ್ದರು ಒಮ್ಮೆ ಈ ರೀತಿ ಗ್ರಂಥಾಲಯದ  ಹೋಗುತ್ತಿದ್ದಾಗ ಯಾಕೂಬ್ ಎದುರಾದ.  ನನ್ನನ್ನು ನೋಡಿ” ಅಣ್ಣ  ಆಶ್ ಮಟಾಶ್ ಇಲ್ಲ” ಎಂದ. ನನಗೆ ತಕ್ಷಣ ಗೊತ್ತಾಗಲಿಲ್ಲ. ನಂತರ ಅದರ ಅನುವಾದ  ಅವನೇ ಮಾಡಿದ.  ” ಆ್ಯಷ್ ಎಂದರೆ ಬೂದಿ ಮಟ್ಯಾಷ್ ಎಂದರೆ ಹಾಳು” ಗ್ರಂಥಪಾಲಕರ ಹೆಸರು ಬೂದಿಹಾಳು ಎಂದಿದ್ದು, ಅದನ್ನು ಆ ರೀತಿ ಪ್ರಯೋಗಿಸುತ್ತಿದ್ದ. ಹಂಸಲೇಖರ ಹಾಸನಕ್ಕೆ ಬಂದ ಸಂದರ್ಭದಲ್ಲಿ ಇವನನ್ನು ಯಾಕುಬ್ ಎಂದು  ಪರಿಚಯಿಸಿದಾಗ ಕ್ಯಾ ಕೂಬ್  ಲಗತಿ ಹೋ ಹಾಡನ್ನು ಬದಲಿಸಿ ಯಾ ಕೂಬ್  ಲಗತಿ ಹೊ ಎಂದು  ಹಾಡಿದ್ದನ್ನು ಖುಷಿಯಿಂದ ನೆನೆಯುತ್ತಿರುತ್ತಾನೆ. 1984ರ ಸುಮಾರಿನಲ್ಲಿ ಗೊರೂರಿನಲ್ಲಿ ಗೊರೂರು  ರಾಮಸ್ವಾಮಿ ಅಯ್ಯಂಗಾರ್ ಮತ್ತು ವೀರೇಂದ್ರ ಹೆಗಡೆಯವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನದ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅರಕಲಗೂಡು ವರದರಾಜಲು ರವರಿಗೆ  ಪ್ರಥಮ ದರ್ಜೆ ಕಾಲೇಜಿಗೆ ಬೇಡಿಕೆ ಇಟ್ಟಾಗ ಸ್ಥಾಪಿತವಾದ ಎ ಎನ್ ವಿ ಕಾಲೇಜಿನ  ಮೊದಲ ಫಲಾನುಭವಿ ಯಾಕೋಬನು ಮುಂದೆ ಮಾಸ್ಟರ್ ಡಿಗ್ರಿಯನ್ನು ಪಡೆದ. ಆತನ ಸಹಪಾಠಿಗಳು ಈಗ ಉಪ ನಿರ್ದೇಶಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೆ ತನ್ನ ವಿದ್ಯಾಭ್ಯಾಸದ ದಿನದಲ್ಲಿ ಬಣ್ಣದ ಬದುಕಿಗೆ ಬಿದ್ದ ಯಾಕೂಬ್ ತನ್ನ ಸಂಬಂಧಿಕರ ಜಿಎಎಸ್ ಟಾಕೀಸ್ ನಲ್ಲಿ  ಟಿಕೆಟ್ ವಿತರಕ ,ಗೇಟ್ ಕೀಪರ್, ಆಪರೇಟರ್ ಜೊತೆ ಜೊತೆಗೆ ಬೋರ್ಡ್ ಬರೆಯುವ ಹವ್ಯಾಸಕ್ಕೂ ಬಿದ್ದ ನಂತರ ಯಾಕೋ ಅಲ್ಲಿಯೇ ಸಂತೃಪ್ತನಾದ. ಕುವೆಂಪುರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ವಿಶ್ವ ಮಾನವ ಸಂದೇಶವನ್ನು ನಮ್ಮೂರಿನ ಗ್ರಂಥಾಲಯಕ್ಕೆ ಉಚಿತವಾಗಿ ಬ್ಯಾನರ್ ಬೋರ್ಡನ್ನು ಕೊಟ್ಟಿದ್ದಲ್ಲದ ಸುತ್ತಲೂ ನಾಲ್ಕೈದು ಶಾಲೆಗಳಿಗೆ ಕೈಯಲ್ಲಿ ಬರೆದ ಉದ್ದನೆಯ ಫೋಲ್ಡಿಂಗ್ ಬ್ಲಾಕ್ ಬೋರ್ಡ್ ನಲ್ಲಿ ಬರೆದು ಕೊಟ್ಟಿದ್ದು ನೆನಪಿದೆ. ಕಳೆದ ವರ್ಷ ಜಹೊನಾ ಸ್ಮರಣೆಯ ಸಮಾರಂಭದಲ್ಲಿ ಅವರ ಮಗಳಾದ ಖ್ಯಾತ ಲೇಖಕಿ  ಜ ನಾ ತೇಜಶ್ರೀ  ಅವರು ಜಹೊನಾರು ತೀರಿಕೊಂಡ ಸಂದರ್ಭದಲ್ಲಿ  ಪಾರ್ಥಿವ ಶರೀರವನ್ನು ರಾತ್ರಿಯಿಡೀ ಎಚ್ಚರವಾಗಿ ಕುಳಿತು ನೋಡಿಕೊಂಡದ್ದನ್ನು ನೆನಪಿಸಿಕೊಂಡರು.  ಆ ಸಂದರ್ಭದಲ್ಲಿ ಸಾಕ್ಷರತಾ  ಆಂದೋಲನದ ಸಮಯದಲ್ಲಿ ಹಾರನ ಹಳ್ಳಿಯಲ್ಲಿ ಗೋಡೆ ಬರಹವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿದ ಪ್ರಸಂಗವನ್ನು ನನ್ನೊಂದಿಗೆ ಹಂಚಿಕೊಂಡ ಯಾಕೂಬ್ ಆಗ ಸಾಕ್ಷರತಾ ಸಮಿತಿಯ ಅಧ್ಯಕ್ಷರಾಗಿದ್ದ ಜಹೊನಾರವರು ಅಲ್ಲಿಗೆ ಬಂದು ಬಿಡಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವನದೇ ಗೋಡೆ ಬರಹ . ಇವನು ಬರೆಯುವ ಗೋಡೆ ಬರಹಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ.ಈಗಲೂ  ರಾಜ್ಯ ,ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ  ಆಯ ಊರುಗಳಿಗೆ ಹೋಗಿ ಸಾಹಿತ್ಯ ಸಮ್ಮೇಳನದ ದಿನಾಂಕಗಳ ಜೊತೆಗೆ ಲೇಖಕರ ಪ್ರಸಿದ್ಧ ನುಡಿಗಳನ್ನು ದಾಖಲಿಸುವ ಕೆಲಸವನ್ನು ಮುಂದುವರಿಸಿಕೊಂಡು ಬಂದಿರುವ ಯಾಕೂಬ್   ನಮ್ಮೂರಿನ ಅನನ್ಯ ಪ್ರತಿಭೆ. ಗೊರೂರು ಶಿವೇಶ್

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್ Read Post »

ಇತರೆ

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ ಮಡಿಕೇರಿ ಹೋಗುವುದಾದರೂ ಎಲ್ಲಿಗೆ ….?? ಪಿ ಯು ಸಿ ಮೌಲ್ಯ ಮಾಪನ ನಡೆಯುತ್ತಿದ್ದ ದಿನಗಳವು. ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಉಪನ್ಯಾಸಕರೊಬ್ಬರು ಅವರ ವತಿಯಿಂದ ಆ ಒಂದು ದಿನ ಮೌಲ್ಯ ಮಾಪನ ಕೇಂದ್ರದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟ ಬರುವುದು ತಡವಾಯಿತು. ಎರಡು ಗಂಟೆಯವರೆಗೂ ಊಟಕ್ಕೆ ಕಾದು ದಣಿದಿದ್ದ ಉಪನ್ಯಾಸಕ ವೃಂದ ಆಹಾರ ಬಂದ ತಕ್ಷಣ ಊಟಕ್ಕೆ ಮುಗಿಬಿದ್ದಿತು.  ಸಾಲೂ ಇಲ್ಲ,ಸಂಯಮವೂ ಇಲ್ಲ, ಒಂದು ವ್ಯವಸ್ಥೆ ಯಂತೂ ಮೊದಲೇ ಇಲ್ಲ. ಶಕ್ತಿವಂತರು ಆಹಾರ ಗಿಟ್ಟಿಸಿಕೊಳ್ಳುವಲ್ಲಿ ಗೆದ್ದರು, ಕೆಲವರು ಸೋತು ಗೆದ್ದರು. ಒಂದಿಬ್ಬರು ಪಡೆಯುಕೊಂಡ ತಟ್ಟೆಯ ಅನ್ನ ಸಾಂಬಾರ್ ಗುಂಪು ತಿಕ್ಕಾಟದಲ್ಲಿ ಮತ್ತೊಬ್ಬರ ಮೇಲೆ ಚೆಲ್ಲಿ..ಅದೇ ಒಂದು ಜಗಳದ ವಿಷಯವಾಗಿ , ಕಿರುಚಾಡಿ.. ಉಫ್..  ಸಾಕಪ್ಪ ಸಾಕು ಎನಿಸುವ ಒಂದು ಅನುಭವ ಎಲ್ಲರಿಗೂ. ಕೊನೆಗೆ ನಿಂತವರಿಗೆ ಊಟವೇ ಸಿಗದೆ, ಆ ದಿನ ಊಟದ ವ್ಯವಸ್ಥೆ ಇದೆ ಎಂದುದರಿಂದ ಕ್ಯಾಂಟೀನ್ ನವರೂ ಊಟ  ಪೂರೈಕೆ ಮಾಡದೇ ಹೋದ್ದರಿಂದ ಕೆಲವರು ಆ ದಿನ ಉಪವಾಸ ಇದ್ದುಕೊಂಡೇ ಪೇಪರ್ ತಿದ್ದುವಂತಾಯಿತು. ಆ  ಚಿತ್ರಣ ನನ್ನ ಮನದಲ್ಲಿ ಅಚ್ಚೊತ್ತಿ  ನಿಂತಿದೆ. ವ್ಯಾಲ್ಯೂಯೇಷನ್ ಸೆಂಟರ್ ನಲ್ಲೇ ಊಟ ಸಿಗುತ್ತೆ ಅಂತ ಜೆ ಎಸ್ ಎಸ್  ಮಹಿಳಾ ಹಾಸ್ಟೆಲ್ ನಲ್ಲಿ ರುಚಿಕರವಾಗಿ ತಯಾರಿಸಿ ಕೊಡುತ್ತಿದ್ದ ಊಟವನ್ನು ಬಿಟ್ಟು ಬಂದು  ಕೊನೆಗೆ ಊಟ ಸಿಗದೆ ಇದ್ದವರಲ್ಲಿ  ನಾನೂ ಒಬ್ಬಳು.   ಅಲ್ಲಿ ಇದ್ದವರೆಲ್ಲ  ಸುಶಿಕ್ಷಿತರೇ..ಸಾಲು..ಶಿಸ್ತು ಸಂಯಮದ ಬಗ್ಗೆ ಬೋಧನೆ ಮಾಡುವವರೇ….ಆದರೇನು? ವಚನಕಾರರು ಹೇಳುವಂತೆ ” ಹಸಿವೆಂಬ ಹೆಬ್ಬಾವು ಬಂದು ಬಸಿರ ಹಿಡಿಯಲು ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ “. ಅಷ್ಟೇ. ‘ಹಸಿವು’ ಎನ್ನುವ ರಾಕ್ಷಸನ ಅಸುರ ಗುಣಗಳ ಮುಂದೆ ಸಭ್ಯತೆ ಸಂಸ್ಕಾರಗಳು ಮೌಲ್ಯ ಕಳೆದುಕೊಂಡುಬಿಡುತ್ತವೆ. ಮಾತು ಬರುವ ನಮ್ಮ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಮಾತು ಬಾರದ ಮೂಕ ಪ್ರಾಣಿಗಳು ಹಸಿವು ನಿವಾರಣೆಗೆ ಕಾಡು ಬಿಟ್ಟು ನಾಡಿಗೆ ಬರುವುದರಲ್ಲಿ ತಪ್ಪೇನಿದೆ?  ಹಸಿವು ಬಾಯಾರಿಕೆಗಳ ಈಡೇರಿಕೆ ಈ ಭೂಮಿಯಲ್ಲಿ ಜನಿಸಿದ   ಪ್ರತಿಯೊಂದು ಜೀವಿಯ ಮೂಲಭೂತ ಅವಶ್ಯಕತೆ. ಹಸಿದ ಜೀವಕಷ್ಟೇ ಗೊತ್ತು  ಹಸಿವಿನ ಕಾವು. ಮಾತು ಬಲ್ಲ, ಚಿಂತನಾಶಕ್ತಿಯುಳ್ಳ ಮನುಷ್ಯರಾದ ನಾವೇ ಹಸಿವಾದಾಗ ಅನ್ಯರ ಬಗ್ಗೆ ಯೋಚಿಸದ ರೀತಿಯಲ್ಲಿ ವರ್ತಿಸುವಾಗ ವನ್ಯ ಮೃಗಗಳಾದ ಆನೆ, ಹುಲಿ, ಚಿರತೆ, ಕಾಡು ಹಂದಿ ಇತ್ಯಾದಿ  ಹಸಿವು ನೀಗಿಸಿಕೊಳ್ಳಲು ನಾಡಿನ ಹಾದಿ ಹಿಡಿಯುವ  ಮತ್ತು ಹಿಂಸಾತ್ಮಕ ವರ್ತನೆ ತೋರುವ ಬಗ್ಗೆ  ಏನು ಹೇಳುವುದು? ಹೊಟ್ಟೆ ತುಂಬಿಸಿಕೊಳ್ಳುವ  ಏಕೈಕ ಉದ್ದೇಶದಿಂದ ಅವು ಹಸಿರು ಕಂಡಲ್ಲಿಗೆ ಧಾವಿಸುತ್ತವೆ. ಅವುಗಳ ಅಸಹಾಯಕತೆ ನಡೆ ಅದು.ಆ ಪ್ರಾಣಿಗಳು ನಮಗೆ ಉಂಟುಮಾಡುವ ಕಷ್ಟ ನಷ್ಟಗಳನ್ನು  ನಾವು ನುಂಗಿಕೊಳ್ಳಲೇ ಬೇಕು.   ಇಲ್ಲ, ಪರಿಹಾರವನ್ನು ಕಂಡುಕೊಳ್ಳಬೇಕು. ಈ ಪ್ರಕೃತಿಯಲ್ಲಿ ಜೀವಿಸಲು ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಆದರೆ ಬದುಕುವ ಸಂದರ್ಭ ಪ್ರಕೃತಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೂಕ ಪ್ರಾಣಿಗಳು ಮೌನವಾಗಿಯೇ ಪ್ರಕೃತಿಯ ಮಾತನ್ನು ಆಲಿಸುತ್ತವೆ. ನಿಸರ್ಗ ನಿಯಮವನ್ನು ಪಾಲಿಸುತ್ತವೆ. ಮಾತು ಬಲ್ಲ ಮನುಷ್ಯ ಮಾತ್ರ ಮಾತನಾಡುತ್ತಾ ಆಡುತ್ತಾ ಉಳಿದ ಜೀವರಾಶಿಗಳು ತನ್ನ ಅಧೀನದಲ್ಲಿಯೇ ಇರಬೇಕು ಎಂದು ತನಗೆ ತಾನೇ ಒಂದು ನಿಯಮ ಮಾಡಿಕೊಂಡಿದ್ದಾನೆ. ಕಾಡಿನಲ್ಲೂ ಅಧಿಪತ್ಯ ಸ್ಥಾಪಿಸುವಲ್ಲಿ ಕೆಲವೆಡೆ ಜಯವನ್ನೂ ಸಾಧಿಸಿದ್ದಾನೆ.  ವನ್ಯಜೀವಿಗಳಿಗೆ ಮೀಸಲಾದ ಅರಣ್ಯ ಪ್ರದೇಶದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಅರಣ್ಯ ಪ್ರದೇಶ ಕಿರಿದಾಗುತ್ತಾ ಸಾಗುತ್ತಿದೆ. ವಸತಿ, ವ್ಯವಸಾಯ, ಸಾರಿಗೆ ವ್ಯವಸ್ಥೆ.. ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯ ಮೃಗಗಳ ನೆಲೆ ನಶಿಸುತ್ತಿದೆ.  ಒಂದು ಕಾಲದಲ್ಲಿ ಆನೆ ನಾಡಿನತ್ತ ಬಂದಿದೆ ಎಂದರೆ ಅದು ಪರಮಾಶ್ಚರ್ಯ ದ ವಿಚಾರವಾಗಿತ್ತು. ಏಕೆಂದರೆ ಅರಣ್ಯ ಹೇರಳವಾಗಿದ್ದಾಗ ಎಲ್ಲೋ  ದಾರಿತಪ್ಪಿ  ಅಪರೂಪಕ್ಕಷ್ಟೇ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದವು. ಈಗ ಹಾಗಲ್ಲ. ಇದು ಪ್ರತಿದಿನದ ಸುದ್ದಿಯೇ ಆಗಿದೆ.  ಮನುಷ್ಯ ಬೆಳೆದ ಕಬ್ಬು,ಬಾಳೆ,  ಬತ್ತ ಇತ್ಯಾದಿ ಬೆಳೆಗಳನ್ನು   ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ  ವನ್ಯಮೃಗಗಳು ನಾಡಿಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.ಇಲ್ಲಿ ಒಂದು ಅಂಶ ಗಮನಾರ್ಹ,  ವನ್ಯ ಮೃಗಗಳು ಆಸೆ ಪಡುವುದು ಆಹಾರಕ್ಕಾಗಿ. ಮನುಷ್ಯರಾದ ನಾವು ಆಸೆ ಪಟ್ಟಿರುವುದು ಅವುಗಳ ಆವಾಸಸ್ಥಾನಕ್ಕಾಗಿ!! ಇತ್ತೀಚೆಗೆ ಆನೆ ಮಾನವ ಸಂಘರ್ಷವಂತೂ ಮಿತಿ ಮೀರಿದೆ. ಆನೆ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ.  ಪ್ರತಿ ಬಾರಿಯೂ ನಾಡಿಗೆ ದಾಳಿಯಿಟ್ಟ ಆನೆಗಳನ್ನು ಮರಳಿ ಕಾಡಿಗೆ ಸೇರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡುತ್ತಾರೆ. ಕಾಡಿಗೆ ಅಟ್ಟಿದ ಆನೆಗಳು ತಮ್ಮ ದಂಡಿನೊಂದಿಗೆ ಮತ್ತೆ  ನಾಡಿನಲ್ಲಿ ಪ್ರತ್ಯಕ್ಷವಾಗಿವೆ ಎನ್ನುವ ಸುದ್ದಿ ಅರಿಯುವುದೇ ಯಾವುದೋ ಅಮಾಯಕ ಜೀವ ಬಲಿಯಾದಾಗ. ನೀರು,ಆಹಾರ ಅರಸಿ  ತನ್ನ ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು 10-15  ಕಿಲೋಮೀಟರ್ ನಡೆದಾಡುವ ಆನೆಗಳು ಜನ ವಸತಿ ಪ್ರದೇಶಗಳನ್ನು ಲೆಕ್ಕಿಸದೆ ಹೊಟ್ಟೆ ಹೊರೆಯಲು ಹೆಣಗಾಡುತ್ತವೆ.ಅಂಥ ಸಂದರ್ಭದಲ್ಲಿ  ತನಗೆದುರಾದ ಮನುಷ್ಯರನ್ನು  ಸೊಂಡಿಲಿನಿಂದ ಎತ್ತಿ ಎಸೆಯುವ,ಮೆಟ್ಟಿ ಸಾಯಿಸುವ ಕ್ರೂರ ಕೃತ್ಯವನ್ನು ಎಸಗುತ್ತದೆ.  ಆನೆಗಳಿಗೆ ಮಾನವನ ಮೇಲೆ ಇನ್ನಿಲ್ಲದ ದ್ವೇಷ! ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆನೆಗಳ ಸಂತತಿ ಕೂಡಾ ಹೆಚ್ಚುತ್ತಲೇ ಇದೆ.  ಹೀಗಿರುವಾಗ ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡ  ಆನೆಗಳು ಹೋಗುವುದಾದರೂ  ಎಲ್ಲಿಗೆ? ಕುಳಿತು ಉಣ್ಣುವ ಅಭ್ಯಾಸವಾದ ಮನುಷ್ಯ ದುಡಿದು ಉಣ್ಣಲಾರನಂತೆ! ಹಾಗೆ ಒಮ್ಮೆ ನಾಡಿನಲ್ಲಿ ಜನರು ಬೆಳೆದ ಕಬ್ಬು ಬಾಳೆ ಇತ್ಯಾದಿಗಳನ್ನು ತಿಂದು ರೂಢಿಯಾದ ಆನೆಗಳು ಕಾಡಿನಲ್ಲಿ ಆಹಾರ ಅರಸುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿವೆಯೋ ಏನೋ!!   ಎಷ್ಟು ಬಾರಿ ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತವೆ,  ಉಪಟಳ ಕೊಡುತ್ತಲೇ ಇರುತ್ತವೆ. ಸಾಗರದಿಂದ ನಭಕ್ಕೇರಿದ ನೀರ ಹನಿಗಳು ಮತ್ತೆ ಸಾಗರವನ್ನೇ ಸೇರಬೇಕು. ಈ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಎಷ್ಟೇ ಸಂಪಾದನೆ ಮಾಡಿದರೂ ಮತ್ತೆ ಭೂಮಿಯ ಒಡಲಿಗೇ ಸೇರಬೇಕು.ಇದು ಪ್ರಕೃತಿ ನಿಯಮ.  ಈ ಸೂಕ್ಷ್ಮ ಅರಿತಾಗ ಅರಣ್ಯ ಒತ್ತುವರಿಯನ್ನೂ ಒಳಗೊಂಡಂತೆ ಮನುಜನ ಅತಿ ಆಸೆಗಳಿಗೆ ಕಡಿವಾಣ ಬೀಳಬಹುದು. ವನ್ಯ ಜೀವಿ – ಮಾನವ ಸಂಘರ್ಷ ಕೊನೆಯಾಗಬಹುದು. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಕಲೆಗಾರಿಕೆ ಮೃಗ ಪಕ್ಷಿಗಳಿಗಿವೆ. ಮನುಷ್ಯರಾದ ನಾವು ಈಗ ಕಲಿಯುತ್ತಿದ್ದೇವೆ. ಪ್ರಕೃತಿ ನಿಯಮದ ವಿರುದ್ಧ ನಾವು ಎಸಗಿದ ದ್ರೋಹದ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳಿಂದ  ಪರಿಹಾರವನ್ನು ಕಂಡುಕೊಳ್ಳುವತ್ತ ಚಿಂತನೆ ನಡೆಸದೆ      ನಾವು ಮಾಡುವ ಪ್ರತಿಭಟನೆ, ಹೋರಾಟ, ಅಧಿಕಾರಿ ವರ್ಗದವರು ಮಾಡಿಕೊಳ್ಳುವ ಪರಸ್ಪರ ನಿಂದನೆ ಯಾವುವೂ ನಿರೀಕ್ಷಿತ  ಫಲ ನೀಡಲಾರವು. ಅಡವಿಯಲ್ಲಿ ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲಾಗದ ವನ್ಯ ಮೃಗಗಳು ಮತ್ತೆ ಹೋಗುವುದಾದರೂ ಎಲ್ಲಿಗೆ??? ಜಯಲಕ್ಷ್ಮಿ ಕೆ ಮಡಿಕೇರಿ.

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ Read Post »

ಇತರೆ, ಜೀವನ

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷಲೇಖನ ಕವಿತಾ ಶ್ರೀನಿವಾಸ್‌ ನಾಯಕ್ “ವಿದಾಯ “ವಿದಾಯ” ಇದು ಬೆಳೆಯುವ ಹಾದಿಯ ಅನಿವಾರ್ಯ ಮೈಲುಗಲ್ಲು.​’ವಿದಾಯ’ ಎಂದರೆ ಕೇವಲ ಅಗಲುವಿಕೆ ಅಥವಾ ಅಂತ್ಯವಲ್ಲ; ಅದು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ದಾಟಲು ನಾವು ಇಡುವ ಪಾದಾರ್ಪಣೆ. ನಮಗೆ ತಿಳಿಯದೆಯೇ ನಾವು ಪ್ರತಿದಿನ ಯಾವುದಕ್ಕೋ ಒಂದಕ್ಕೆ ವಿದಾಯ ಹೇಳುತ್ತಲೇ ಬೆಳೆಯುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿರಿಯ ಜೀವದವರೆಗೆ, ಜೀವನವು ವಿದಾಯಗಳ ಸರಪಳಿಯೇ ಸರಿ.​ಬಾಲ್ಯಕ್ಕೆ ವಿದಾಯ: ಮುಗ್ಧತೆಯ ಸಂಭ್ರಮದ ಅಂತ್ಯ​ನಮ್ಮ ಬದುಕಿನ ಮೊದಲ ದೊಡ್ಡ ವಿದಾಯ ಎಂದರೆ ಅದು ನಮ್ಮ ಬಾಲ್ಯಕ್ಕೆ ಹೇಳುವ ವಿದಾಯ. ತೊದಲು ನುಡಿಯ ಮಗು ಸ್ವಲ್ಪ ದೊಡ್ಡದಾದಾಗ, ಅದು ತನ್ನ ಆಟಿಕೆಗಳಿಗೆ, ತನ್ನ ಅಮ್ಮನ ಮಡಿಲಿನ ಬೆಚ್ಚನೆಯ ಆರಾಮಕ್ಕೆ, ಮತ್ತು ಹೊಣೆಗಾರಿಕೆ ಇಲ್ಲದ ಆ ಮುಗ್ಧ ಆಟದ ದಿನಗಳಿಗೆ ನಿಧಾನವಾಗಿ ವಿದಾಯ ಹೇಳುತ್ತದೆ. ಶಾಲೆಯ ಹೊಸ್ತಿಲು ತುಳಿದಾಗ, ಮನೆಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ವಿಶಾಲತೆಯನ್ನು ಅರಿಯುವಾಗ ಬಾಲ್ಯದ ಹಕ್ಕಿ ಹಾರಿಹೋಗಿರುತ್ತದೆ. ಅದು ನೋವಿನ ವಿದಾಯವಲ್ಲ, ಆದರೆ ಬದಲಾವಣೆಯ ಮೊದಲ ಪಾಠ.​ಹದಿಹರೆಯಕ್ಕೆ ವಿದಾಯ: ಕನಸುಗಳ ಚಿಗುರು​ನಂತರ ಬರುವುದು ಹದಿಹರೆಯದ ಮಧುರ ವಿದಾಯ. ಕಿಶೋರಾವಸ್ಥೆಯ ಕನಸುಗಳು, ಗೆಳೆಯರೊಂದಿಗೆ ಕಳೆದ ಆ ಸಾಹಸಮಯ ದಿನಗಳು, ಶಾಲೆ-ಕಾಲೇಜಿನ ಆ ಸವಿ ನೆನಪುಗಳು – ಇವೆಲ್ಲವೂ ವೃತ್ತಿ ಬದುಕಿನ ಅನಿವಾರ್ಯತೆಗಳ ಮುಂದೆ ಬಿದ್ದು ಹೋಗುತ್ತವೆ. ಜವಾಬ್ದಾರಿಗಳ ಹೆಗಲೇರಿದಾಗ, ಆ ನಿರ್ಭೀತ ಹುಡುಗಾಟದ ದಿನಗಳಿಗೆ ವಿದಾಯ ಹೇಳಲೇಬೇಕಾಗುತ್ತದೆ. ಇಲ್ಲಿ ನಾವು ಬರಿಯ ವಯಸ್ಸನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ನಮ್ಮೊಳಗಿನ ಮಗುವಿನ ಅಮಾಯಕತೆಯನ್ನು ಸಮಾಜದ ಪಾಠಗಳಿಗಾಗಿ ಬಲಿ ಕೊಡುತ್ತೇವೆ.​ಯೌವನ ಮತ್ತು ಪ್ರಬುದ್ಧತೆ: ನಿರಂತರ ವಿದಾಯಗಳ ಪಯಣ​ಜೀವನವು ಮುಂದುವರೆದಂತೆ, ನಾವು ಹಳೆಯ ಮನೆಗೆ, ಹಳೆಯ ಊರಿಗೆ, ಹಳೆಯ ಗೆಳೆಯರಿಗೆ, ಕೆಲವೊಮ್ಮೆ ನಮ್ಮ ಹಳೆಯ ಆಲೋಚನೆಗಳಿಗೆ ವಿದಾಯ ಹೇಳುತ್ತಲೇ ಇರುತ್ತೇವೆ. ಕೆಲಸದ ನಿಮಿತ್ತ ಊರು ಬಿಡುವಾಗ ಬರುವ ವಿದಾಯ ಇರಬಹುದು ಅಥವಾ ನಮ್ಮ ಹಳೆಯ ತಪ್ಪುಗಳಿಗೆ ವಿದಾಯ ಹೇಳಿ ಹೊಸ ವ್ಯಕ್ತಿಯಾಗಿ ಬದಲಾಗುವ ಕ್ಷಣ ಇರಬಹುದು—ಇವೆಲ್ಲವೂ ನಮ್ಮ ಬೆಳವಣಿಗೆಯ ಸಂಕೇತಗಳೇ.​ಏಕೆ ಈ ವಿದಾಯ ಅನಿವಾರ್ಯ?​ನಿಸರ್ಗದ ನಿಯಮದಂತೆ, ಹಳೆಯ ಎಲೆ ಉದುರದ ಹೊರತು ಹೊಸ ಚಿಗುರು ಬರಲು ಸಾಧ್ಯವಿಲ್ಲ. ನಾವು ಒಂದೊಂದಕ್ಕೂ ವಿದಾಯ ಹೇಳುತ್ತಾ ಹೋದರೆ ಮಾತ್ರವೇ ಬದುಕಿನ ಹೊಸ ಆಯಾಮಗಳು ನಮಗೆ ತೆರೆದುಕೊಳ್ಳುವುದು. ಬಾಲ್ಯಕ್ಕೆ ವಿದಾಯ ಹೇಳದಿದ್ದರೆ ಪ್ರೌಢಿಮೆ ಬರುವುದಿಲ್ಲ, ಹಳೆಯದಕ್ಕೆ ವಿದಾಯ ಹೇಳದಿದ್ದರೆ ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ.​ಕೊನೆಯ ಮಾತು:ವಿದಾಯಗಳು ಕಣ್ಣೀರಿನ ಮಳೆಯಾಗಿರಬೇಕಿಲ್ಲ; ಅವು ಕೃತಜ್ಞತೆಯ ನಗುಗಳಾಗಿರಲಿ. ಕಳೆದುಕೊಂಡದ್ದರ ಬಗ್ಗೆ ಕೊರಗುವ ಬದಲು, ಆ ಹಂತ ನಮಗೆ ಕೊಟ್ಟ ಅನುಭವಗಳಿಗೆ ಧನ್ಯವಾದ ಅರ್ಪಿಸಿ ಮುಂದೆ ಸಾಗುವುದು ಬದುಕಿನ ಜಾಣತನ. ಅಂತಿಮವಾಗಿ, ನಾವು ಹೇಳುವ ಪ್ರತಿಯೊಂದು ವಿದಾಯವೂ ನಮ್ಮನ್ನು ನಾವು ಮತ್ತಷ್ಟು ಅರಿಯುವ, ರೂಪಿಸುವ ಒಂದು ಸುಂದರ ಪ್ರಯತ್ನ. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್ Read Post »

ಇತರೆ

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್

ವ್ಯಕ್ತಿ ಸಂಗಾತಿ ಎನ್.ಜಯಚಂದ್ರನ್ “ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”  ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಅಮರನಾದ ಮಹಾಕವಿ ರವೀಂದ್ರನಾಥ ಟಾಗೋರ್  ಅವರು ಕೇವಲ ಕವಿ ಮಾತ್ರವಲ್ಲ; ಚಿಂತಕ, ತತ್ವಜ್ಞಾನಿ, ಸಂಗೀತಗಾರ, ಶಿಕ್ಷಣತಜ್ಞ ಹಾಗೂ ಮಾನವತಾವಾದಿಯೂ ಆಗಿದ್ದರು. “ಗೀತಾಂಜಲಿ” ಮೂಲಕ ವಿಶ್ವಮಾನ್ಯತೆ ಪಡೆದ ಈ ಮಹಾನ್ ಕವಿ, ಭಾರತದ ಮೊದಲ ನೊಬೆಲ್ ಪುರಸ್ಕೃತ ಸಾಹಿತ್ಯಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಉತ್ತರ ಕನ್ನಡ ಜಿಲ್ಲೆಯ ಕಾರವಾರದೊಂದಿಗೆ ಅವರಿಗಿದ್ದ ಆತ್ಮೀಯ ನಂಟನ್ನು ಸ್ಮರಿಸುವುದು ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ.ಕಾರವಾರದ ಪ್ರಕೃತಿ ಠಾಗೋರರ ಮನಸೂರೆಗೊಂಡದ್ದು1882ರ ಅವಧಿಯಲ್ಲಿ ಯುವಕನಾಗಿದ್ದ ಠಾಗೋರರು ತಮ್ಮ ಅಣ್ಣ ಸತ್ಯೇಂದ್ರನಾಥ ಠಾಗೋರರ ಬಳಿಗೆ ಕಾರವಾರಕ್ಕೆ ಬಂದಿದ್ದರು. ಆ ಕಾಲದಲ್ಲಿ ಸತ್ಯೇಂದ್ರನಾಥರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಮುದ್ರ, ಪಶ್ಚಿಮ ಘಟ್ಟಗಳ ಹಸಿರು, ಕಾಳಿ ನದಿಯ ಹರಿವು, ಮೌನಭರಿತ ಸಂಜೆಗಳು – ಇವೆಲ್ಲವೂ ಯುವ ರವೀಂದ್ರನಾಥರ ಕವಿಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.ಕಾರವಾರದ ನಿಸರ್ಗ ಸೌಂದರ್ಯವನ್ನು ಕಂಡು ಅವರು ಮಂತ್ರಮುಗ್ಧರಾಗಿದ್ದರು. ಕಾರವಾರದ ಸಮುದ್ರತೀರದ ಸಾಯಂಕಾಲವನ್ನು ಕುರಿತು ಅವರು ಬರೆದ ಕೆಲವು ಬರಹಗಳಲ್ಲಿ ಪ್ರಕೃತಿ ಮತ್ತು ಮಾನವ ಆತ್ಮದ ನಡುವಿನ ಆಧ್ಯಾತ್ಮಿಕ ಸಂಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ. ನಂತರದ ಅವಧಿಯಲ್ಲಿ ಅವರ ಕಾವ್ಯಗಳಲ್ಲಿ ಕಾಣುವ ಪ್ರಕೃತಿ ಸಂವೇದನೆಗೆ ಕಾರವಾರದ ಅನುಭವವೂ ಒಂದು ಪ್ರಮುಖ ಪ್ರೇರಣೆಯಾಗಿತ್ತು ಎಂದು ಸಾಹಿತ್ಯ ಅಧ್ಯಯನಕಾರರು ಅಭಿಪ್ರಾಯಪಡುತ್ತಾರೆ.“ನಿರ್ಜರರ ಸ್ವಪ್ನಭಂಗ” – ಪ್ರಕೃತಿಯೊಳಗಿನ ಆತ್ಮಜಾಗೃತಿಕಾರವಾರ ಪ್ರವಾಸದ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಮೂಡಿದ ಭಾವನೆಗಳು ನಂತರ ಹಲವು ಕಾವ್ಯಗಳಲ್ಲಿ ಪ್ರತಿಫಲಿಸಿದವು. ವಿಶೇಷವಾಗಿ “ನಿರ್ಜರರ ಸ್ವಪ್ನಭಂಗ” ಕವನದಲ್ಲಿ ಪ್ರಕೃತಿಯೊಳಗಿನ ಜೀವಚೈತನ್ಯವನ್ನು ಅವರು ಹೀಗೆ ಚಿತ್ರಿಸುತ್ತಾರೆ: “ಇಂದು ಈ ಪ್ರಭಾತದ ರವಿಕಿರಣಹೇಗೆ ಪ್ರವೇಶಿಸಿತು ಜೀವದೊಳಗೆ…” ಈ ಸಾಲುಗಳಲ್ಲಿ ಪ್ರಕೃತಿ ಮಾನವನ ಆತ್ಮವನ್ನು ಜಾಗೃತಿಗೊಳಿಸುವ ಶಕ್ತಿಯಾಗಿ ಕಾಣಿಸುತ್ತದೆ. ಕಾರವಾರದ ನಿಶ್ಶಬ್ದ ಪ್ರಕೃತಿ ಮತ್ತು ಸಮುದ್ರದ ಅಲೆಗಳ ಸಂಗೀತವು ಈ ಕಾವ್ಯಭಾವನೆಗೆ ಹಿನ್ನೆಲೆಯಾದವು ಎನ್ನುವುದು ಅತಿಶಯೋಕ್ತಿಯಲ್ಲ.“ಗೀತಾಂಜಲಿ” – ವಿಶ್ವಕ್ಕೆ ಭಾರತದ ಆತ್ಮಧ್ವನಿ1913ರಲ್ಲಿ ಗೀತಾಂಜಲಿ ಕೃತಿಗೆ ನೊಬೆಲ್ ಪ್ರಶಸ್ತಿ ಲಭಿಸಿದಾಗ ಭಾರತೀಯ ಸಾಹಿತ್ಯ ವಿಶ್ವದ ಗಮನಸೆಳೆಯಿತು. “Where the mind is without fear…” ಎಂಬ ಅವರ ಅಮರ ಕಾವ್ಯಪಂಕ್ತಿಗಳು ಇಂದಿಗೂ ಮಾನವ ಸ್ವಾತಂತ್ರ್ಯದ ಘೋಷಣೆಯಾಗಿ ಓದಲಾಗುತ್ತವೆ.ಅದರ ಕನ್ನಡಾರ್ಥ ಹೀಗಿದೆ: “ಭಯವಿಲ್ಲದ ಮನಸ್ಸು ಇರುವಲ್ಲಿ,ತಲೆ ಎತ್ತಿ ನಿಲ್ಲುವ ಮಾನವ ಇರುವಲ್ಲಿ,ಜ್ಞಾನವು ಮುಕ್ತವಾಗಿರುವಲ್ಲಿ…” ಠಾಗೋರರ ಸಾಹಿತ್ಯದಲ್ಲಿ ರಾಷ್ಟ್ರಪ್ರೇಮ ಇದ್ದರೂ ಅದು ಸಂಕುಚಿತ ರಾಷ್ಟ್ರಭಾವನೆಯಲ್ಲ; ಮಾನವತೆಯ ಆಧಾರದ ವಿಶ್ವಸೌಹಾರ್ದದ ಕನಸಾಗಿತ್ತು.ಪ್ರಕೃತಿ, ಮಾನವತೆ ಮತ್ತು ಶಿಕ್ಷಣದ ತ್ರಿವೇಣಿಠಾಗೋರರು ಸಾಹಿತ್ಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಕ್ರಾಂತಿ ತಂದವರು. ಅವರು ಸ್ಥಾಪಿಸಿದ ವಿಶ್ವಭಾರತಿ ಯುನಿವರ್ಸಿಟಿ ವಿಶ್ವಮಾನವೀಯ ಮೌಲ್ಯಗಳ ಪ್ರತೀಕವಾಗಿತ್ತು. ಪ್ರಕೃತಿಯ ಮಧ್ಯೆ ಶಿಕ್ಷಣ ನೀಡಬೇಕು ಎಂಬ ಅವರ ಕನಸು ಕಾರವಾರದಂತಹ ನಿಸರ್ಗತಾಣಗಳಲ್ಲಿ ಪಡೆದ ಅನುಭವಗಳಿಂದಲೇ ಮತ್ತಷ್ಟು ಗಾಢವಾಯಿತೆಂದು ಹೇಳಲಾಗುತ್ತದೆ.ಅವರ ಅನೇಕ ಕಾವ್ಯಗಳಲ್ಲಿ ಸಮುದ್ರ, ಗಾಳಿ, ಮಳೆ, ಹಕ್ಕಿಗಳು ಮತ್ತು ಅರಣ್ಯಗಳು ಜೀವಂತ ಪಾತ್ರಗಳಾಗಿ ಕಾಣಿಸುತ್ತವೆ. ಪ್ರಕೃತಿಯನ್ನು ಕೇವಲ ದೃಶ್ಯವಲ್ಲ, ಆತ್ಮೀಯ ಅನುಭವವಾಗಿ ನೋಡುವ ದೃಷ್ಟಿಯನ್ನು ಅವರು ಸಾಹಿತ್ಯಕ್ಕೆ ನೀಡಿದರು. ಕಾರವಾರದ ಹೆಮ್ಮೆ. ಇಂದು ಕಾರವಾರವನ್ನು ನೆನೆಸಿದಾಗ ಕಾರವಾರ ಕೇವಲ ಪ್ರವಾಸಿ ತಾಣವಲ್ಲ; ಮಹಾಕವಿ ಠಾಗೋರರ ಕಾವ್ಯಸ್ಮೃತಿಗಳನ್ನು ಹೊತ್ತ ಸಾಹಿತ್ಯಭೂಮಿಯೂ ಆಗಿದೆ. ಅವರು ಕೆಲ ದಿನಗಳ ಕಾಲ ಇಲ್ಲಿ ಕಳೆದಿದ್ದರೂ, ಆ ಅನುಭವಗಳು ಅವರ ಸಾಹಿತ್ಯ ಚಿಂತನೆಗೆ ಶಾಶ್ವತ ಸ್ಪರ್ಶ ನೀಡಿದವು.ಕಾಳಿ ನದಿ, ಅರಬ್ಬೀ ಸಮುದ್ರ, ಮೌನಮಯ ಸಂಜೆಯ ಹೊತ್ತು – ಇವುಗಳ ನಡುವೆ ನಿಂತು ನೋಡಿದಾಗ, ಇನ್ನೂ ಎಲ್ಲೋ ಠಾಗೋರರ ಕಾವ್ಯದ ಪ್ರತಿಧ್ವನಿ ಕೇಳಿಬರುವಂತೆ ಭಾಸವಾಗುತ್ತದೆ.ಅಂತಿಮವಾಗಿರವೀಂದ್ರನಾಥ ಠಾಗೋರರು ಕೇವಲ ಒಂದು ಯುಗದ ಕವಿಯಲ್ಲ; ಮಾನವ ಆತ್ಮದ ಶಾಶ್ವತ ಧ್ವನಿ. ಅವರ ಸಾಹಿತ್ಯ ನಮಗೆ ಪ್ರಕೃತಿಯನ್ನು ಪ್ರೀತಿಸಲು, ಮಾನವನನ್ನು ಗೌರವಿಸಲು ಹಾಗೂ ವಿಶ್ವವನ್ನು ಒಂದು ಕುಟುಂಬವಾಗಿ ಕಾಣಲು ಕಲಿಸುತ್ತದೆ.  ಕಾರವಾರದ ಕರಾವಳಿಯಲ್ಲೊಮ್ಮೆ ಅರಳಿದ ಆ ಕಾವ್ಯಚೇತನ ಇಂದು ಕೂಡ ಕನ್ನಡನಾಡಿನ ಮನಸ್ಸಿನಲ್ಲಿ ಜೀವಂತವಾಗಿದೆ ಎನ್.‌ ಜಯಚಂದ್ರನ್

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್ Read Post »

ಇತರೆ, ಜೀವನ

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ “ಹಿರಿಯ ಮಗುವಿಗೆ…. ಹೊರೆಯಾಗದಿರಲಿ ಭ್ರಾತೃತ್ವ” ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ  ಮಕ್ಕಳು ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು ತಮ್ಮ ತಂದೆಯ ಮರಣ ನಂತರ ಕುಟುಂಬದ ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.ಪಾಲಕರಿಗೆ ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ. ಆದರೆ ಕಾಲಘಟ್ಟ ಯಾವುದೇ ಇರಲಿ  ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು ನಿಧಾನ ಎಂದು ಚಿಕ್ಕ ಮಗುವನ್ನು ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ. ಇದಕ್ಕೆ ಕಾರಣ ಹತ್ತು ಹಲವು…. ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ ಹಾಗೆ ಹೇಳುವ ಭರದಲ್ಲಿ, ಮಗು ಹುಟ್ಟಿದ ನಂತರ ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ. ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು,  ಸಿಡಿದೇಳಬಹುದು.ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.ಇದುವರೆಗೂ ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ ಸಿಲುಕುತ್ತದೆ.ಇಂತಹ ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ  ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ… ಇದು ಅಗೋತರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು ಅಗಲವಾಗುತ್ತಾ ಹೋಗುತ್ತದೆ…ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.ನಿಮ್ಮ ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.ಮಕ್ಕಳು ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.ಒಂದು ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ.ಪಾಲಕರು ತಮ್ಮ ಒಂದು ಮಗುವನ್ನು ಚಿನ್ನ ರನ್ನ ಎಂದು ಮತ್ತೊಂದು ಮಗುವನ್ನು ಹರಕೆಯ ಕುರಿ ಎಂಬಂತೆ  ಭಾವಿಸಬಾರದು.ಎರಡನೇ ಮಗುವನ್ನು ಪಾಲಿಸಲಿ ಎಂದು ಆಶಿಸುವ ಪಾಲಕರು ಮಗುವಿನ ಮೇಲೆ ಎಲ್ಲ ರೀತಿಯ ಭಾವನಾತ್ಮಕ ಹೊರೆಯನ್ನು ಹೊರಿಸುತ್ತಾರೆ… ಇದು ಖಂಡಿತವಾಗಿಯೂ ತಪ್ಪು. ಮಗುವಿನ ಎಳೆಯ ಹೆಗಲಿಗೆ ಅದಕ್ಕೂ ಮುಖ್ಯವಾಗಿ ಮನಸ್ಸಿಗೆ ಇದು ಖಂಡಿತವಾಗಿಯೂ ಬೆಟ್ಟವನ್ನು ಹೊತ್ತಂತಹ ಭಾವವನ್ನು ಸೃಷ್ಟಿಸಿ ಮೊದಮೊದಲು ಮಾನಸಿಕವಾಗಿ ನಲುಗುವ ಮಗು ಮುಂದೆ ಹೋಲಿಕೆಗಳಿಂದ ಬೇಸತ್ತು ಹೋಗುತ್ತದೆ. ಅದರ ಸುಪ್ತ ಮನಸ್ಸು ಮೊದಮೊದಲು ಹಿಂಜರಿದರೂ ನಂತರ ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯೆಸುತ್ತದೆ. ನಾನೇ ಮಾಡಬೇಕು ಎಂಬುದರಿಂದ ನೊಂದು ನಾನೇಕೆ ಮಾಡಬೇಕು ಎಂದು ಸಿಡಿದು ನಿಲ್ಲುವ ಮಟ್ಟಿಗೆ ಅದರ ಪಯಣ ಸಾಗುತ್ತದೆ. ಇದು ಖಂಡಿತವಾಗಿಯೂ ಪಾಲಕರು ಎಚ್ಚರಗೊಳ್ಳಬೇಕಾದ ವಿಷಯವೇ ಸರಿ.ಸಹೋದರರು ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ.. ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು  ಅಶಂಕೆಗಳಿಗೆ ಮೂಲ ಬೇರು ಪಾಲಕರೇ ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ, ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು ಕಾರಣವಾಗಿರುತ್ತವೆ.ಎಲ್ಲ ಮನೆಗಳಲ್ಲಿಯೂ ಹೀಗೆಯೇ ಆಗಬೇಕು ಎಂದಿಲ್ಲ ಮತ್ತು ಆಗುತ್ತದೆ ಎಂದು ಭಾವಿಸುವಂತಿಲ್ಲ. ಆಗಬಹುದು ಎಂಬ ಕಾರಣಗಳನ್ನು ಹೀಗೆ ಪಟ್ಟಿ ಮಾಡಲಾಗಿದ್ದು ಈ ಕುರಿತು ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ,ಆದರೆ ಖಂಡಿತವಾಗಿಯೂ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬಾರದಂತೆ ಅವರನ್ನು ಪಾಲಿಸುವ ಬೆಳೆಸುವ ಜವಾಬ್ದಾರಿ ಮಾತ್ರ ಪಾಲಕರದ್ದೇ. ಸಂತ ಸೂಕ್ಷ್ಮ ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.ಈ ಹಿಂದೆ ಮಕ್ಕಳಾಗಿ ಒಡಹುಟ್ಟಿದವರಾಗಿ ತಮ್ಮ ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹಿರಿಯರಾದ ಹೊತ್ತಿನಲ್ಲಿ ನೆನೆದು ನಗುವ ಜನರಿರುವಂತೆಯೇ, ತಮ್ಮ ಬದುಕಿನ ಎಲ್ಲಾ ಅವಘಡಗಳಿಗೂ ತಮ್ಮ ಪಾಲಕರು ಮತ್ತು ಒಡಹುಟ್ಟಿದವರೇ ಕಾರಣ ಎಂದೂ, ಬಾಲ್ಯದಲ್ಲಿ ತಮ್ಮನ್ನು ಪರಿಗಣಿಸದೆ ಹೋದ ಕಾರಣ ತಾವು ಹೀಗಿರುವುದು ಎಂದು ಮತ್ತೆ ಕೆಲವರು ಹೇಳಬಹುದು. ಯಾವ ರೀತಿ ಎಲ್ಲಾ ಬೆರಳುಗಳು ಒಂದೇ ಸಮನೆ ಇರುವುದಿಲ್ಲವೋ ಅದೇ ರೀತಿ ಎಲ್ಲರ ಮನಸ್ಥಿತಿಯೂ ಒಂದೇ ಸಮನಾಗಿ ಇರುವುದಿಲ್ಲ… ಅವರವರ ಬುದ್ಧಿಗೆ, ಗ್ರಹಿಕೆಗೆ ಮತ್ತು ಭಾವಕ್ಕೆ ತಕ್ಕಂತೆ ಮನುಷ್ಯನ ವರ್ತನೆ ಇರುತ್ತದೆ.ಪಾಲಕರಾಗಿ ಇದನ್ನು ನಾವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.ಮತ್ತೆ ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ. ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು  ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.ಎಲ್ಲ ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ ಪಾಲಕತ್ವದ ನಿಜವಾದ ಗುರಿ. ವೀಣಾ ಹೇಮಂತ್ ಗೌಡ ಪಾಟೀಲ್

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ರಂಗಭೂಮಿ

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ.

ರಂಗ ಸಂಗಾತಿ ಗೊರೂರು ಅನಂತರಾಜು, ಹಾಸನ. ರಂಗ ಪ್ರಯೋಗ “ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿವಮೊಗ್ಗದ ರಂಗಾಯಣ ಕಲಾವಿದರು ಬೋಳುವಾರು ಮಹಮದ್ ಕುಂಞ ಅವರ ಕಾದಂಬರಿ ಆಧಾರಿತ ಸ್ವಾತಂತ್ರö್ಯದ ಓಟ ನಾಟಕವನ್ನು ಕಳೆದ ಭಾನುವಾರ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು.  ಪ್ರಸಿದ್ಧ ಕಥೆಗಾರರು, ಕಾದಂಬರಿಕಾರರು,  ನಾಟಕಕಾರರು ಆದ ಬೋಳುವಾರು ಮಹಮದ್ ಕುಂಞಯವರು ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂಸ್ಕೃತಿ ಮತ್ತು ಬದುಕನ್ನು ಸೃಜನಶೀಲ ಗದ್ಯಕ್ಕೆ ಪರಿಚಯಿಸಿದವರು.  ತಮ್ಮ ಕಥೆಗಳ ಮೂಲಕ ಮುಸ್ಲಿಂ ಸಮುದಾಯದ ನಂಬಿಕೆ, ಆಚರಣೆ ಮತ್ತು ಸಾಮಾಜಿಕ ವಾಸ್ತವತೆಗಳನ್ನು ಚಿತ್ರಿಸಿದ್ದಾರೆ. ಇವರ ಸ್ವಾತಂತ್ರö್ಯದ ಓಟ ಒಂದು ಮೈಲುಗಲ್ಲು ಕಾದಂಬರಿ, ಇದಕ್ಕೆ ೨೦೧೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೪೭ರಲ್ಲಿ ದೇಶ  ವಿಭಜನೆಯಿಂದ ಪ್ರಾರಂಭವಾಗುವ ಕಥಾವಸ್ತು ೬೦ ವರ್ಷ ಕಾಲ ಚಾಂದ್ ಅಲಿ ಎಂಬ ವ್ಯಕ್ತಿಕೇಂದ್ರಿತ ಕಥೆಯಾಗಿ ಆ ಕಾಲಘಟ್ಟದ ನೈಜ ಬದುಕನ್ನು ಚಿತ್ರಿಸುತ್ತದೆ. ಭಾರತ ಪಾಕಿಸ್ತಾನ ಗಡಿಯ ವಾಘಾದಲ್ಲಿ ಆರಂಭವಾಗುವ ಕಥೆ ಕೊನೆಗೆ ಅಲ್ಲಿಯೇ ಮುಕ್ತಾಯಗೊಳ್ಳುವ  ಜಾತ್ಯಾತೀತ ಪರಿಕಲ್ಪನೆಯಲ್ಲಿ ರೂಪು ತೆಳೆದಿದೆ.   ಗೋಮಾರದಹಳ್ಳಿ ಮಂಜುನಾಥ್  ನಾಟಕಕ್ಕೆ ರೂಪಾಂತರಿಸಿದ್ದು, ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ  ನಟರಾಜ್ ಹೊನ್ನವಳ್ಳಿಯವರದು.  ಸಹ ನಿರ್ದೇಶನ ಸಲ್ಮಾ ದಂಡಿನ್.  ಈ ಹಿಂದೆ ನಟರಾಜ್ ಹೊನ್ನವಳ್ಳಿಯವರು ಇದೇ ಕಲಾಭವನದಲ್ಲಿ ಪ್ರದರ್ಶಿಸಿದ್ಧ  ಪಿ.ಲಂಕೇಶರ ಗುಣಮುಖ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದ್ದರು. ಆಗ ನೋಡಿ ಬರೆದಿದ್ದು ನನ್ನ ರಂಗಪ್ರಯೋಗ (೨೦೧೧) ಕೃತಿಯಲ್ಲಿ ದಾಖಲಾಗಿದೆ.ಒಂದು ಸಾವಿರದ ಒಂದು ನೂರಾ ಹನ್ನೊಂದು ಪುಟಗಳ ಸುಧೀರ್ಘ ಕಾದಂಬರಿಯನ್ನು ಮೂರೂವರೆ ಗಂಟೆಯಲ್ಲಿ  ಪ್ರೇಕ್ಷಕರಿಗೆ ಇಷ್ಟವಾಗುವ ನಾಟಕವಾಗಿ ರೂಪಿಸುವಲ್ಲಿ   ನಿರ್ದೇಶಕರ ಜಾಣ್ಮೆ, ಕಲಾವಿದರ ತಲ್ಲೀನ ನಟನೆ, ರಂಗ ಸಂಗೀತ, ವಸ್ತç ವಿನ್ಯಾಸ, ರಂಗ ಪರಿಕರ,  ಬೆಳಕು ಈ ಎಲ್ಲವೂ ಒಗ್ಗೂಡಿದೆ.  ನಾಟಕದ ಪೂರ್ವಾರ್ಧ ದೇಶ ವಿಭಜನೆ, ಅದರ ಪರಿಣಾಮಗಳನ್ನು ಹೇಳಿದರೆ ಉತ್ತರಾರ್ಧ ಭಾಗವು ಮುತ್ತುಪಾಡಿಯ ಗ್ರಾಮ್ಯ ಕತೆಯನ್ನು ಮನಮುಟ್ಟವಂತೆ ಹೇಳುತ್ತದೆ. ದೇಶ ವಿಭಜನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಸಿಖ್ ಮಾಲಿಕತ್ವದ ಕಬ್ಬಿಣದ ಕುಲುಮೆಯಲ್ಲಿ ಕೆಲಸ ಮಾಡುವ ಅನಾಥ ಹುಡುಗ  ಚಾಂದ್ ಆಲಿ ನಾಟಕದ ಕೇಂದ್ರ ಪಾತ್ರ. ದೇಶ ವಿಭಜನೆಗೆ ದುರಂತ ಸಾಕ್ಷಿಯಾಗಿ ಕಂಡುಬರುವ ಈ ಪಾತ್ರ  ನಾಟಕದುದ್ದಕ್ಕೂ ಪ್ರಧಾನ ಭೂಮಿಕೆಯಲ್ಲಿ  ಮೂರು ಹಂತಗಳಲ್ಲಿ  ಹದಿನೈದರ ವಯೋಮಾನದ ಹುಡುಗ, ಮದುವೆ ವಯಸ್ಸಿನ ಪ್ರಾಯಕ್ಕೆ ಬಂದ ಯುವಕ, ಇಳಿವಯಸ್ಸಿನ  ವೃದ್ಧ ಹೀಗೆ ಬರುವ ಪಾತ್ರಗಳನ್ನು ಮೂರು ಕಲಾವಿದರ ಪ್ರಸ್ತುತಿಯಲ್ಲಿ ತನ್ನ ಸುತ್ತಲಿನ ಸನ್ನಿವೇಶ ಸಮಯಕ್ಕೆ ತಕ್ಷಣಕ್ಕೆ ಉದ್ಭವಿಸುವ ವಿದ್ಯಮಾನಗಳಿಗೆ ಬಾಗಿಯಾಗುತ್ತಾ  ಕಥೆಯ ಪಾತ್ರ ಸಾಗುತ್ತದೆ. ಇಲ್ಲಿ  ಭಾವನಾತ್ಮಕ ಸಂಬAಧಗಳು  ಭಾವ್ಯಕ್ಯ ಭಾರತವನ್ನು ಎತ್ತಿ ಹಿಡಿಯುತ್ತವೆ. ನಾಟಕದ ಪೂರ್ವಾರ್ಧದ ದೇಶ ವಿಭಜನೆ ಕಾಲದ ಘಟನೆಗಳು ಭಾವಾವೇಶಗಳ ರೋಚÀಕತೆ ಇಲ್ಲದೆ ತಣ್ಣಗೆ ನಿರೂಪಿಸುತ್ತಾ ಸಾಗುತ್ತದೆ. ತನ್ನ ಕುಟುಂಬದವರಿAದ ಬೇರ್ಪಟ್ಟು ಜೀವ ಉಳಿಸಿಕೊಳ್ಳುವ ಭರದಲ್ಲಿ ಭಾರತ ಪ್ರವೇಶಿಸುವ ಸಿಖ್ ಕುಟುಂಬದ ತನ್ವೀರ್, ಮೊಹಿಂದರ್ ಬಾಭಿ ಜೊತೆಗೆ   ಚಾಂದ್ ಅಲಿ ಕೂಡ ಭಾರತ ಪ್ರವೇಶಿಸುತ್ತಾನೆ. ತಾನು ಲಾಹೋರ್‌ಗೆ ವಾಪಸ್ಸು ಹೋಗಬೇಕೆನ್ನುವ ಚಾಂದ್ ಅಲಿಯ ಆಸೆಗೆ ಅನೇಕ ಸಿಕ್ಕುಗಳು ಎದುರಾಗಿ ನಲುಗುತ್ತಾನೆ. ಬದುಕಿನ ತಿರುವಿನಲ್ಲಿ ಉತ್ತರ ಭಾರತದಿಂದ ದಕ್ಷಿಣದ ಮುತ್ತುಪ್ಪಾಡಿಗೆ ಬರುವ   ಅನೇಕ ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅಚಾನಕ್ ಹೊನ್ನು, ಹೆಣ್ಣು, ಆಸ್ತಿಯ ಅದೃಷ್ಟವು ಒಲಿದು ಬರುತ್ತದೆ. ನಾಟಕದ ಅಂತ್ಯದಲ್ಲಿ ಅದೇ ವಾಘಾ ಗಡಿಯಲ್ಲಿ ವಿಭಜನೆ ಕಾಲದಲ್ಲಿ ಕಳೆದು ಹೋದವರ ಪುನರ್ ಮಿಲನದೊಂದಿಗೆ ನಾಟಕ ಸುಖಾಂತ್ಯಗೊಳ್ಳುತ್ತದೆ. ಉತ್ತರಾರ್ಧ ಮಹಾತ್ಮ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ ಗ್ರಾಮವಾಗಿ ಮುತ್ತುಪಾಡಿ ಕಾಣಿಸಿಕೊಳ್ಳುತ್ತದೆ. ಈ ನಡುವೆ ನಾಟಕದ ಮಧ್ಯೆ ನಡೆಯುವ ಗಾಂಧಿಹತ್ಯೆಗೆ ಚಾಂದ್ ಆಲಿ ಮೂಕಸಾಕ್ಷಿಯಾಗುತ್ತಾನೆ.   ನನ್ನ ದೇವರು ಸತ್ತು ಹೋದ ಎಂದು ಹೇಳುವುದು ಮಾರ್ಮಿಕವಾಗಿದೆ. ಇಲ್ಲಿ  ಗಾಂಧಿ ಪಾತ್ರವನ್ನು ರಂಗಕ್ಕೆ ತರದೆ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಚರಕವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಹೊರಡುವ ಚಂದನ್ ಹೆಸರಿನಲ್ಲಿ ದಾಖಲಾಗಿ ಭಾರತಕ್ಕೆ ಬಂದ ಚಾಂದ್ ಅಲಿ ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸಿನ ಕೂಸಾಗಿ ಪ್ರತಿಬಿಂಬಿಸುತ್ತಾನೆ.   ನಾಟಕದ ಉತ್ತರಾರ್ಧ  ಮುತ್ತುಪ್ಪಾಡಿ ಎಂಬ ಗ್ರಾಮದ  ಸಾಮರಸ್ಯದ ಬದುಕಿನ ಸೊಗಸಾದ ಕತೆ ಸ್ವತಂತ್ರ ಆಯಾಮದಲ್ಲಿ  ತೆರೆದುಕೊಳ್ಳುತ್ತದೆ. ಇಲ್ಲಿ ನಿರ್ದೇಶಕರು ಚಾಂದ್ ಅಲಿಯನ್ನೇ ಪ್ರಧಾನ ಎಳೆಯಾಗಿಸಿ ದೃಶ್ಯರೂಪಕದಲ್ಲಿ ಸರಾಗವಾಗಿ ನಾಟಕ ಸಾಗಿಸುವ ದಿಶೆಯಲ್ಲಿ ಬೇಕಾದ ಉಪಕಥೆಗಳನ್ನು ಆರಿಸಿಕೊಂಡಿದ್ದಾರೆ. ಹೀಗೆ ಸೇರಿದ  ಉಪಕಥೆಯಲ್ಲಿ ಬ್ಯಾರಿ ಮೂಸಜ್ಜ, ಆತನ ಹೆಂಡತಿ ಕೈಜುನ್ನಿಸಾ ಮತ್ತು ಮನೆ ಬಿಟ್ಟು ಹೋಗಿ  ಸೂಫಿ ಫಕೀರನಾಗಿರುವ  ಇವರ ಮಗ ಬದ್ರುದ್ಧೀನ್ ಪ್ರಮುಖರು. ಚಾಂದ್ ಅಲಿಯನ್ನು ಫಕೀರ ಬದ್ರುದ್ಧೀನ್ ತನ್ನದೇ ಮನೆಗೆ ಬಿಟ್ಟು ಹೋಗುವುದು ನಾಟಕೀಯ ತಿರುವು.  ಮುಂದೆ  ಮೂಸಜ್ಜ ಸತ್ತು ನಂತರದಲ್ಲಿ ಉದ್ಭವವಾಗುವ ಇಸ್ಲಾಂ ಧರ್ಮದ ನಂಬಿಕೆಗಳು. ಆಸ್ತಿಗಾಗಿ ಕಣ್ಣಾಕುವ ಊರಿನ ಪಾತ್ರಗಳು. ಸಭೆ, ತೀರ್ಮಾನ, ಮದುವೆ ಸಂಪ್ರದಾಯ ಎಲ್ಲವೂ ರಂಗದ ಮೇಲೆ ಬಂದು ಹೋಗುತ್ತವೆ. ಮಗನಿಲ್ಲದ ಮನೆಯಲ್ಲಿ ಉಳಿದುಕೊಂಡವನೇ ಆಸ್ತಿ ಒಡೆಯನಾಗಿ ಮತ್ತು ಈ ಕಾರಣಕ್ಕಾಗಿಯೇ ಮಾತೃಭೂಮಿಗೆ ವಾಪಸ್ಸು ಹೋಗಲಾಗದೆ ಅಲ್ಲಿಯೇ ಉಳಿಯಬೇಕಾಗಿ ಬರುವ ಅಲಿಯ  ಉಭಯ ಸಂಕಟಗಳು ಒಂದು ಕಡೆಯಾದರೇ, ಮಗನಂತೆ ಕಂಡ ಬದ್ರುದ್ಧೀನ್ ತಾಯಿ ಖೈಜುನ್ನಿಸಾಳ ಸಾವು, ಸಾವಿನ ಹೊತ್ತಲ್ಲೇ ಮತ್ತೆ ಮನೆಗೆ ಬಂದ ಫಕೀರ ಬದ್ರುದ್ದೀನ್ ಆಸ್ತಿಯನ್ನು ಅಲಿಗೆ ತ್ಯಾಗ ಮಾಡಿ ಉಪದೇಶ ಹೇಳಿ ಹೋಗುವುದು ಹೀಗೂ ಉಂಟೆ..! ಎನಿಸುತ್ತದೆ.  ಖೈಜುನ್ನಿಸಾ, ರಾಘಣ್ಣ, ಪಂಡಿತ, ಸುಮತಿ, ಅನಂತು, ಲತೀಫ್, ಪೋಡಿಯಪ್ಪ   ಹೀಗೆ ಬರುವ ಪಾತ್ರಗಳೆಲ್ಲಾ ಮುತ್ತುಪ್ಪಾಡಿ ಎಂಬ ಹಳ್ಳಿಯ ಸಾಮರಸ್ಯದ ಬದುಕನ್ನು ಸಾಕ್ಷೀಕರಿಸುತ್ತವೆ.  ನಾಟಕದ ಅಂತ್ಯದಲ್ಲಿ ಚಾಂದ್ ಅಲಿ ಕಡೆಗೂ  ತನ್ನಲ್ಲಿದ್ದ ಸಿಖ್ ಕುಟುಂಬದ ಒಡವೆ ಗಂಟನ್ನು ಅವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುತ್ತದೆ.  ಇಡೀ ನಾಟಕದ ಶಕ್ತಿ ಕೇಂದ್ರ ಅದರ ಸಂಗೀತ ಮತ್ತು ವಸ್ತç ವಿನ್ಯಾಸ. ಭಜನ್, ಕವ್ವಾಲಿ, ಕಬೀರ ದೋಹೆಗಳು ರಂಗಸಂಗೀತವಾಗಿ ಹಾಡುಗಳು ಮತ್ತು ರಂಗದಲ್ಲಿ ನೃತ್ಯಗಳು ಹಿಡಿದಿಡುತ್ತವೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧. 

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ. Read Post »

ಇತರೆ, ಲಹರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ “ದೊಡ್ಡ ಸಿರಿ – ಹೃದಯ ಸಿರಿ”

ಕಾವ್ಯ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ದೊಡ್ಡ ಸಿರಿ – ಹೃದಯ ಸಿರಿ” ಒಬ್ಬ ವ್ಯಕ್ತಿ ಅವನ ಗೆಳೆಯನ ಮನೆಗೆ ಬಂದಿದ್ದ. ‘ಈ ಮನೆ ಯಾರದು?’ ಎಂದು ಗೆಳೆಯನಿಗೆ ಕೇಳಿದ. ವ್ಯಕ್ತಿ ಹೇಳಿದ ‘ಇದು ನನ್ನದೇ ಮನೆ ಎಂದು. ಅದನ್ನು ಕೇಳಿದ ಅಡುಗೆ ಮನೆಯಲ್ಲಿದ್ದ ಆ ವ್ಯಕ್ತಿಯ ಪತ್ನಿ ಮುಗುಳುನಗೆಯನ್ನು ಬೀರಿ ಸುಮ್ಮನಾದಳು. ಏಕೆಂದರೆ ಆ ಮನೆಯನ್ನು ಆಕೆಯ ತಂದೆ ಅಂದರೆ ಮಾವ ಕಾಣಿಕೆಯಾಗಿ ನೀಡಿದ್ದ. ಆದ್ದರಿಂದ ಆತನ ಪತ್ನಿ ಮುಗುಳ್ನಗೆ ಬೀರಿ ತನ್ನದೆಂದು ಹೇಳುತ್ತಾನೆ ಹೇಳಲಿ ಎಂದು ಮೌನವಾದಳು. ಹಾಗೆಯೇ ಎಲ್ಲವನ್ನೂ ನಾವು ನಿಸರ್ಗದಿಂದ ಪಡೆದು, ಈ ಮನೆ ನನ್ನದು ಈ ಹೊಲ ನನ್ನದು ಕಣ್ಣಿಗೆ ಕಂಡಿದ್ದೆಲ್ಲ ನನ್ನದು ಎಂದು ಹೇಳುತ್ತೇವೆ. ‘ನಾನು ಆಗರ್ಭ ಶ್ರೀಮಂತ.’ ಎಂದು ಜಂಭದಿoದ ಹೇಳಲು ಮುಂದಾಗುತ್ತೇವೆ. ಇದನ್ನು ಕೇಳಿದ ನಿಸರ್ಗದೇವತೆ ಮರಳು ಮಾನವ ಏನೂ ತಿಳಿಯದೇ ಹೇಳುತ್ತಾನೆಂದು ಮೌನ ವಹಿಸುತ್ತಾಳೆ. ಕೂಡಿಡುವ ಸ್ವಭಾವ ಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಒಯ್ಯುವುದಿಲ್ಲ ಅಂತ ಗೊತ್ತಿದ್ದರೂ  ಭೂಮಾತೆಯ ಗರ್ಭವನ್ನು ಬಗೆದು ಕಾಡುಗಳನ್ನು ಕಡಿದು ಪ್ರಾಣಿಗಳನ್ನು ತನ್ನ ಲಾಭಕ್ಕೆ ಉಪಯೋಗಿಸಿಕೊಂಡು ಸ್ವಾರ್ಥ ಜೀವನ ನಡೆಸುವ ಪ್ರಕೃತಿ ಮಾತೆ ಮುನಿಸಿಕೊಂಡಾಗ ಮನುಷ್ಯನದ್ದು ಏನೂ ನಡೆಯುವುದಿಲ್ಲ. ಸೃಷ್ಟಿಯಲ್ಲಿರುವ ಯಾವ ಪ್ರಾಣಿಗಳು ತನಗೆ ಹೊಟ್ಟೆ ತುಂಬಿದ ಮೇಲೆ ಯಾವ ಪ್ರಾಣಿಗಳನ್ನು ಭೇಟಿ ಆಡಲು ಹೋಗುವುದಿಲ್ಲ. ತನ್ನ ಗಾತ್ರಕ್ಕಿಂತ ೧೫೦ ಪಟ್ಟು ಜಾಸ್ತಿ ಭಾರವನ್ನು ಹೊರುವ ಇರುವೆ ಸಕ್ಕರೆ ಡಬ್ಬದ ಸುತ್ತ ಸುತ್ತುತ್ತಿದ್ದರೂ ಸಕ್ಕರೆ ಡಬ್ಬಿಯನ್ನು ಹೊತ್ತಯ್ಯುವ ಯೋಜನೆ ಹಾಕುವುದಿಲ್ಲ. ಮಳೆಗಾಲದಲ್ಲಿ ಆಹಾರ ಅಭಾವ ಕಾಡುವುದೆಂದು ಮುಂದಾಲೋಚನೆಯಿoದ ಸಂಗ್ರಹ ಮಾಡುತ್ತದೆ. ಆದರೆ ಮುಂದಿನ ಪೀಳಿಗೆಗೆ ಆಗುವಷ್ಟು  ಬೇಕೆಂದು ದುರಾಸೆಯಿಂದ ಹೆಚ್ಚೆಚ್ಚು ಕೂಡಿಡುವುದಿಲ್ಲ. ಆದರೆ ಮನುಷ್ಯ ಮಾತ್ರ ಬೇಡವಾದಾಗಲೂ ತಿನ್ನುವ, ಅವಶ್ಯಕತೆ ಇಲ್ಲದಿರುವಾಗಲೂ ಕೊಳ್ಳುವ, ತನಗೆ ಎಲ್ಲವೂ ಸಿಗಬೇಕೆನ್ನುವ, ತನ್ನ ಹತ್ತಿರ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿರಬೇಕೆಂದು ಕೂಡಿಡುವ ಸ್ವಭಾವ ಹೊಂದಿದ್ದಾನೆ.   ಹಣವಿದ್ದರೆ? ಅರೆ! ಇದೇನು ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ ಅಂತಿರೇನು? ಪ್ರತಿಯೊಬ್ಬರೂ ಅದನ್ನು ತಮ್ಮದಾಗಿಸಿಕೊಳ್ಳಬೇಕೆಂದೇ ಹಗಲು ರಾತ್ರಿ ಹಂಬಲಿಸುತ್ತಾರೆ. ಬಹುಶಃ ಅದರ ಹಿಂದೆ ಬೀಳದವರು ಬಹುತೇಕ ಇಲ್ಲವೆಂದರೂ ಅತಿಶಯೋಕ್ತಿ ಏನಲ್ಲ. ಸಿರಿತನ ಒಂದಿದ್ದರೆ ಸಾಕು ಮನದಲ್ಲಿಯ ಬಯಕೆಗಳನ್ನೆಲ್ಲ ಈಡೇರಿಸಬಹುದು. ನಮ್ಮವರಿಗೆ ಏನೇನು ಬೇಕೋ ಅದನ್ನು ಅವರು ಬಾಯಿ ತೆಗೆಯುವ ಮುನ್ನವೇ ಕಣ್ಮುಂದೆ ಹಿಡಿಯಬಹುದು. ನಮ್ಮಲ್ಲಿ ಹಣವಿದ್ದರೆ ಎಲ್ಲ. ಇಲ್ಲದಿದ್ದರೇನೂ ಇಲ್ಲ ಎನ್ನುವ ಮನೋಭಾವ ಬೇರೂರಿ ಬಿಟ್ಟಿದೆ. ಲಕ್ಷ್ಮೀದೇವಿಯ ಮಹಿಮೆಗೆ ಮರಳಾಗದವರು ಯಾರಿದ್ದಾರೆ?  ಹಣವಂತನ ಜೀವನದಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ ಎಂಬ ಸುಳ್ಳು ಸಂಗತಿ ಬೇರೆ ತಲೆಯಲ್ಲಿ ಅಚ್ಚಳಿಯದಂತೆ ಅಚ್ಚೊತ್ತಿದೆ. ಶ್ರೀಮಂತಿಕೆ ಶ್ರೀಮoತಿಕೆ ಅನ್ನುವುದು ಗೆಲುವಿನಂತೆ ವ್ಯಾಖ್ಯಾನಿಸುವುದು ಸುಲಭವಲ್ಲ. ಏಕೆಂದರೆ ಒಬ್ಬೊಬ್ಬರು ಒಂದೊoದು ಅರ್ಥ ಕೊಡುತ್ತಾರೆ. ಸಾಮಾನ್ಯವಾಗಿ ಬಹುತೇಕರು ಹೇಳುವುದು ಕೈ ತುಂಬ ಹಣ ಕೈಗೊಂದು ಆಳು ಕಾಲಿಗೊಂದು ಆಳು ಇದ್ದರೆ ಅವರು ಶ್ರೀಮಂತರು. ಮನೆಯಲ್ಲಿ ಲಕ್ಷ್ಮೀ ನೆಲೆಸಿರಬೇಕು. ಸಿರಿ-ಸಂಪತ್ತು ಆಸ್ತಿ ಐಶ್ವರ್ಯ ಹಣಕಾಸಿನ ಸಮೃದ್ಧತೆ ಯಾವುದಕ್ಕೂ ಕೊರತೆ ಇರಬಾರದು. ಲೆಕ್ಕ ಹಾಕದೇ ಖರ್ಚು ಮಾಡುವಷ್ಟು ಹಣವಿರಬೇಕು. ಐಷಾರಾಮಿ ಬದುಕು ಸಾಗಿಸಲು ಯಾವುದೇ ಅಡೆತಡೆ ಇರಬಾರದು. ಏನೇ ಬೇಕಾದರೂ ಕೊಂಡುಕೊಳ್ಳುವ ಶಕ್ತಿ ಇರಬೇಕು. ಬಯಸಿದ್ದನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಪಡೆಯವುದು. ಬಂಧು ಬಾಂಧವರ ಮುಂದೆ ನಾವು ಹೆಂಗಿದಿವಿ ನೋಡಿ ಅಂತ ಗರ್ವದಿಂದ ಮೆರೆಯಬೇಕು. ಮಾನದಂಡ ಹೀಗೆ ಶ್ರೀಮಂತಿಕೆಯ ಬಗೆಗೆ ವಿವಿಧ ರೀತಿಯ ಅಭಿಪ್ರಾಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದನ್ನೆಲ್ಲ ನೋಡಿದಾಗ ಶ್ರೀಮಂತಿಕೆ ಎಂಬುದು ಕೇವಲ ಹಣಕಾಸಿನ ಶ್ರೀಮಂತಿಕೆಯೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಶ್ರೀಮಂತಿಕೆಯನ್ನು ಅಳೆಯಲು ಹಣಕಾಸಿನ ಒಂದೇ ಒಂದು ಮಾನದಂಡ ಸಾಕೇ? ಎಂಬ ಪ್ರಶ್ನೆಯೂ ಅದರ ಬೆನ್ನ ಹಿಂದೆಯೇ ಹುಟ್ಟಿಕೊಳ್ಳುತ್ತದೆ. ದೈಹಿಕ, ಮಾನಸಿಕ  ಸ್ಥಿತಿಗತಿ ಇವು ಯಾವವೂ ಲೆಕ್ಕಕ್ಕೆ ಬರುವುದಿಲ್ಲವೇ ಎಂಬ ಸಂದೇಹವೂ ಬರುತ್ತದೆ.ಆರೋಗ್ಯ ಸಂಪತ್ತುಮೇಲ್ನೋಟಕ್ಕೆ ಹಣಕಾಸಿನ ಸ್ಥಿತಿಗತಿ ಸಿರಿವಂತಿಕೆಯನ್ನು ನಿರ್ಧರಿಸುತ್ತದೆ ಹೌದಾದರೂ ವಾಸ್ತವವಾಗಿ ಹೇರಳ ಹಣವೊಂದೇ ಶ್ರೀಮಂತಿಕೆಯಲ್ಲ. ಕುಬೇರನ ವಂಶಸ್ತನೇ ಇರಬೇಕು ಎನ್ನುವಷ್ಟು ಶ್ರೀಮಂತಿಕೆ ಇದ್ದರೂ ದೇಹ ರೋಗದ ಗೂಡಾಗಿದ್ದರೆ ಬಯಸಿದ್ದನ್ನು ಬಾಯಿಗೆ ಹಾಕದೇ ಕೊರಗಬೇಕಾಗುತ್ತದೆ. ಕಣ್ಮುಂದೆ ಏನೆಲ್ಲ ಇದ್ದರೂ ತಿನ್ನುವ ಭಾಗ್ಯ ಅವನಿಗಿರುವುದಿಲ್ಲ. ಅವನ ಪಾಲಿಗೆ ಔಷಧಿಯೇ ಆಹಾರ ಇಲ್ಲಿ ನಾನು ಹೇಳ ಹೊರಟಿದ್ದು ಇಷ್ಟೆ  ಹಣದಿಂದ ಔಷಧಿಯನ್ನು ಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಿರಿಯರು ಹೇಳಿದ್ದು ಆರೋಗ್ಯ ಸಂಪತ್ತಿಗಿoತ ದೊಡ್ಡ ಸಂಪತ್ತಿಲ್ಲವೆoದು.  ಹಣವಿದ್ದೂ , , , , ಹಣಕಾಸಿನ ಅನುಕೂಲತೆ ಇದ್ದು, ಆರೋಗ್ಯ ಚೆನ್ನಾಗಿದ್ದು ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಸಾಕ್ಷಾತ್ ನರಕ ದರ್ಶನ. ಹಣದಿಂದ ಒಂದೊಳ್ಳೆ ಹಾಸಿಗೆಯನ್ನು ಕೊಳ್ಳಬಹುದು. ಆದರೆ ನಿದ್ದೆಯನ್ನಲ್ಲ. ಒಳ್ಳೆಯ ಮನೆ ಕೊಂಡುಕೊಳ್ಳಬಹುದು. ಆತ್ಮೀಯರ ಪ್ರೀತಿ ವಿಶ್ವಾಸ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಣವಿದ್ದು ಅದನ್ನು ಉಳಿಸುವ ಬೆಳೆಸುವ ಜ್ಞಾನವಿರದಿದ್ದರೆ  ಸಿರಿವಂತಿಕೆ ಅಧೋಗತಿ ಕಾಣುವುದು ಖಂಡಿತ. ಹಣದಿಂದ ಪುಸ್ತಕವನ್ನು ಕೊಳ್ಳಬಹುದೇ ಹೊರತು ಜ್ಞಾನವನ್ನಲ್ಲ. ಇವೆಲ್ಲ ಉದಾಹರಣೆಗಳಿಂದ ತಿಳಿದು ಬರುವುದೇನೆಂದರೆ ಹಣವೊಂದೇ ಸಿರಿವಂತಿಕೆಯಲ್ಲ. ಯಾರಿಗೆ ಯಾವುದು ಇಲ್ಲವೋ ಅದನ್ನು ಪಡೆದುಕೊಳ್ಳಲು ಹೋರಾಡಿ ಪಡೆಯುವುದು ಶ್ರೀಮಂತಿಕೆ. ಕೃಷಿ ಮನುಷ್ಯರಿಗೆ ಹೋಲಿಸಿದರೆ ಲಕ್ಷಾಂತರ ಪಟ್ಟು ಚಿಕ್ಕದಿರುವ ಇರುವೆಯ ಬದುಕಿನಿಂದ ನಾವು ಕಲಿಯಬೇಕಾದ್ದು ಬಹಳ ಇದೆ. ಯಶಸ್ವಿ ಸಹಬಾಳ್ವೆ, ವ್ಯವಸ್ಥಿತ, ಅತ್ಯಂತ ಸಮರ್ಥ ಜೀವನ ಕೌಶಲವನ್ನು ಅಳವಡಿಸಿಕೊಳ್ಳಬೇಕಿದೆ. ಇತ್ತೀಚಿನ ಶೋಧಗಳ ಪ್ರಕಾರ ಪ್ರಸ್ತುತ ಧರೆಯಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ೮೦೧ ಕೋಟಿ ಜನರ  ಪ್ರತಿಯೊಬ್ಬರಿಗೂ ಸರಾಸರಿ  ಹನ್ನೆರಡುವರೆ ಲಕ್ಷ ಇರುವೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಈ ಅಲ್ಪಗಾತ್ರದ ಜೀವಿ ಬೆರಗು ಹುಟ್ಟಿಸುವ ಕೌತುಕಗಳಿಂದ ಕೂಡಿದೆ. ಪ್ರಕೃತಿಗೆ ಇರುವೆಗಳಿಂದ ಮಹತ್ತರ ಕೊಡುಗೆಯೂ ಇದೆ. ಇಡೀ ಜೀವಲೋಕದಲ್ಲಿ ಕೃಷಿ ಕೆಲಸ ಕೈಗೊಳ್ಳುವ ಏಕೈಕ ಮನುಷ್ಯೇತರ ಪ್ರಭೇದ ಇರುವೆ ಲೋಕದಲ್ಲಿದೆ. ರೈತ ಇರುವೆ ಎಂದೇ ಹೆಸರಾಗಿರುವ ಈ ಇರುವೆಗಳು ನಿಧಿಷ್ಟ ಸಸ್ಯಗಳ ಎಲೆಗಳನ್ನು ಕತ್ತರಿಸಿ ಸಾಗಿಸಿ ಗೂಡಿನಲ್ಲಿ ರಾಶಿ ಹಾಕುತ್ತವೆ. ಆ ಎಲೆ ರಾಶಿಯ ಮೇಲೆ ವಿಶಿಷ್ಟ ಶಿಲೀಂದ್ರಗಳನ್ನು ಬಿಟ್ಟು ಆಹಾರ ತಯಾರಿಸಿಕೊಳ್ಳುತ್ತವೆ. ಆಧುನಿಕ ಮನುಷ್ಯ ಪ್ರಕೃತಿ ಪ್ರೇಮಿಯಾಗಿ ಬಾಳಬೇಕಿದೆ. ಕಾರಣ ಪರಿಸರ ಸ್ನೇಹಿ ಬದುಕನ್ನು ಬದುಕುವ ಇರುವೆಗಳಂತೆ ನಾವು ಆಪತ್ಕಾಲಕ್ಕೆ ಮಾತ್ರ ಕೂಡಿಡುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಬಳಿ ಎಷ್ಟು ಹಣವಿದೆ ಎಂದು ನಮಗೆ ತಿಳಿರುತ್ತದೆ. ಆದರೆ ನಮ್ಮ ಬಳಿ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ. ಸಮಯ ಬರುವ ಮುನ್ನ ಶ್ರೀಮಂತಿಕೆಯ ಭ್ರಮೆಯಲ್ಲಿ ಬದುಕುವುದನ್ನು ಬಿಡಬೇಕು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಎಲ್ಲವೂ ನನಗೆ ಬೇಕು ಎಂಬ ಭಾನೆಯೇ ಕಾರಣವಾಗಿದೆ. ಈ ಭಾವ ನಾಶವಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಮನಸ್ಸು ಸುಮಧುರ ಸ್ಥಿತಿಯಲ್ಲಿದ್ದಾಗ ಆರೋಗ್ಯಕರ ಭಾವನೆಗಳು ಹೊರಹೊಮ್ಮುತ್ತವೆ. ದೊಡ್ಡ ಸಿರಿ ಶ್ರೀಮಂತರೆoದು ಅಟ್ಟಹಾಸ ಮೆರೆದವರು ಯಾರೂ ಜನಮಾನಸದ ನೆನಪಿನಲ್ಲಿ ಉಳಿದಿಲ್ಲ. ಹೃದಯ ಸಿರಿವಂತರು ಮಾತ್ರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಭಾವ ಮಾಧುರ್ಯದ ಶ್ರೀಮಂತಿಕೆಯಿoದ ಕೂಡಿರುವ ಜೀವನ  ಜನಪ್ರಿಯವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸಿರಿವಂತಿಕೆ ಕೇವಲ ಪಡೆಯುವುದರಲ್ಲಿಲ್ಲ. ಅವಶ್ಯವಿರುವವರಿಗೆ ದಾನ ಮಾಡುವುದರಲ್ಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿದೆ. ದ ಮನಗಳನ್ನು ಪೋಣಿಸೋಣ. ಇನ್ನಾದರೂ ಎಚ್ಚೆತ್ತುಕೊಂಡು ಹೃದಯಸಿರಿಯೇ ದೊಡ್ಡ ಸಿರಿಯೆಂದು ಸರಿಯಾಗಿ ತಿಳಿದುಚೂರಾಕೊಂಡು  ಒಬ್ಬರಿಗೊಬ್ಬರು ಅಕ್ಕರೆಯ ಸಕ್ಕರೆಯ ತಿನಿಸುತ್ತ ಮಾನವೀಯತೆಯ ಸಿರಿವಂತಿಕೆಯನ್ನು ಮೆರೆಯೋಣವಲ್ಲವೇ? ಜಯಶ್ರೀ.ಜೆ. ಅಬ್ಬಿಗೇರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ “ದೊಡ್ಡ ಸಿರಿ – ಹೃದಯ ಸಿರಿ” Read Post »

You cannot copy content of this page

Scroll to Top