“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ
ಮಹಿಳಾ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ “ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಸ್ಟಿಸ್ ಸಂದೀಪ್ ಮೆಹತಾ ಅವರು ನಿಮ್ಮ ಪತ್ನಿ ನಿಮ್ಮ ಕೆಲಸದಾಕೆ ಖಂಡಿತವಾಗಿಯೂ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. 21ನೇ ಶತಮಾನದತ್ತ ಕಾಲಿಡುತ್ತಿರುವ ಭಾರತೀಯ ಕೌಟುಂಬಿಕ ಬದುಕಿನಲ್ಲಿ ಈ ಹೇಳಿಕೆಯು ಅತ್ಯಂತ ಮಹತ್ವದ್ದೆ೦ದು ದಾಖಲಿಸಬಹುದು.ಅವರ ಈ ಹೇಳಿಕೆಯು ಮದುವೆ ಎನ್ನುವುದು ಗಂಡ ಮತ್ತು ಹೆಂಡತಿ ಇಬ್ಬರ ಪರಸ್ಪರರ ಸಾಂಗತ್ಯದ ಬದುಕು… ಇದನ್ನು ಪರಸ್ಪರರಿಗೆ ಗೌರವ ನೀಡುವ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ದಂಪತಿಗಳು ನಿರ್ವಹಿಸಬೇಕೇ ಹೊರತು 21ನೇ ಶತಮಾನಕ್ಕೆ ಅಥವಾ ಪ್ರಸ್ತುತ ದಿನಮಾನಗಳಿಗೆ ಹೊಂದದ ಲಿಂಗ ಸಂಬಂಧಿ ಜವಾಬ್ದಾರಿಗಳಂತೆ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.ಅವರ ಈ ಹೇಳಿಕೆಯು ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳು ಹಾಗೂ ಅದು ನಮ್ಮ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಕಾರಣ ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳದು ಎಂಬ ಪುರುಷ ಪಾರಮ್ಯದ ಭಾರತ ದೇಶದ ಲಿಖಿತ ನಿಯಮಗಳ ಕುರಿತು ಪ್ರಶ್ನೆ ಮಾಡುತ್ತಿದೆ. ಕಾನೂನಾತ್ಮಕ ಚೌಕಟ್ಟುಗಳು ಬದಲಾಗುತ್ತಿರುವ ಅಭಿವೃದ್ಧಿಪರ ಸಾಮಾಜಿಕ ಮೌಲ್ಯಗಳ ಜೊತೆಗೆ ಹೊಂದಿಕೊಂಡು ನಡೆಯುತ್ತಿವೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನುಡಿಗಳು ಪ್ರತಿಪಾದಿಸುತ್ತಿದ್ದು ಪಿತೃ ಸತ್ತಾತ್ಮಕ ಯೋಚನೆಯ ಆಳವಾದ ಬೇರುಗಳನ್ನು ಬುಡ ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು ಸಾಮಾಜಿಕ ಕಾರ್ಯಕರ್ತರು ಈ ವಿಷಯವನ್ನು ಎತ್ತಿ ಹಿಡಿದಿದ್ದಾರೆ.ಸಮಾಜದಲ್ಲಿ ನಿಜವಾದ ಲಿಂಗ ಸಮಾನತೆಯನ್ನು ತರಬೇಕು ಎಂದರೆ ಗೃಹ ಕೃತ್ಯದಲ್ಲಿ ಇರುವ ಘನತೆಯನ್ನುಉಳಿದವರೆಗೂ ಗೊತ್ತು ಮಾಡಿಕೊಡಬೇಕು ಹಾಗೂ ಗೃಹ ಕೃತ್ಯ ಎಂಬುದು ಕೇವಲ ಹೆಣ್ಣು ಮಕ್ಕಳ ಕರ್ತವ್ಯವಲ್ಲ ಬದಲಾಗಿ ಭೂಮಿಯ ಮೇಲೆ ಇರುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಇದಾಗಿದೆ ಹಾಗೂ ಇದನ್ನು ಪಾಲಿಸುವುದನ್ನು ನಾವು ಕಲಿಯಲೇಬೇಕು… ಅದೆಷ್ಟೇ ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಕೌಟುಂಬಿಕವಾಗಿ ಗೃಹ ಕೃತ್ಯಗಳನ್ನು ಸಂಭಾಳಿಸಿಕೊಂಡು ನಡೆದರೆ ಮಾತ್ರ ಪುರುಷ ಈ ಜಗತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.ಆಹಾರವನ್ನು ಸೇವಿಸುವ, ಬಟ್ಟೆ ಬರೆಗಳನ್ನು ಧರಿಸುವ, ಮನೆಯೆಂಬ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಪ್ರತಿಯೊಬ್ಬರು ಕೂಡ ಈ ಮೂಲಭೂತ ಅವಶ್ಯಕತೆಯನ್ನು ಬದುಕಿನ ಭಾಗವಾಗಿ ತಮ್ಮದಾಗಿಸಿಕೊಳ್ಳಲೇಬೇಕು.ಹೆಣ್ಣು ಮಕ್ಕಳ ಮೇಲೆ ಗೃಹಕೃತ್ಯದ ಭಾರವನ್ನು ಹೊರೆಸಿರುವ ಸಂಪ್ರದಾಯವಾದಿಗಳ ಮೇಲೆ ಸವಾಲೆಸೆಯುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದ್ದು ಗೃಹ ಕೃತ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲಿನ ಅನಗತ್ಯ ಹೊರೆಯನ್ನು ನಿವಾರಿಸಲು ಪ್ರಯತ್ನಿಸಲೇಬೇಕು. ನೋಡಿದಿರಾ ಸ್ನೇಹಿತರೆ! ಅಜ್ಞರ ನೂರಾರು ಮಾತುಗಳಿಗಿಂತ ಪ್ರಾಜ್ಞರ ಒಂದು ಮಾತು, ಒಂದು ವಾಕ್ಯ ಬೀರುವ ಪರಿಣಾಮ ಬಹಳ ಮೌಲಿಕವಾದದ್ದು ಗುರುತರವಾದದ್ದು. ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಒಂದು ಪ್ರಶ್ನೆ ಸಾಮಾಜಿಕ ವಲಯದಲ್ಲಿ ಚಿಂತನೆಯ ಒಂದು ಕಿಡಿಯನ್ನು ಹಬ್ಬಿಸಿದ್ದು ಹೆಣ್ಣು ಮಕ್ಕಳ ಹಿತರಕ್ಷಣೆಯ ಕಾನೂನುಗಳನ್ನು ರಕ್ಷಿಸುವಲ್ಲಿ ಪರಸ್ಪರರ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ನ್ಯಾಯಯುತವಾದ, ಸೌಹಾರ್ದತೆಯಿಂದ ಕೂಡಿದ ಹಾಗೂ ಸಮತೋಲನದಿಂದ ಕೂಡಿದ ಸಾಂಗತ್ಯದ ವೈವಾಹಿಕ ಬಂಧನಗಳು ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಬಲ್ಲವು.ಹೊಸ ಬಗೆಯ ವಿವಾಹಗಳು ಲಿಂಗ ಸಮಾನತೆಯನ್ನು ಹೊಂದಿದ್ದು ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ಹಂಚಲ್ಪಡುವ ನಿಟ್ಟಿನಲ್ಲಿ ಭಾರತ ದೇಶವು ಬದಲಾಗುತ್ತಿರುವುದು ಸ್ವಾಗತಾರ್ಹವಾಗಿದೆ.ಲಿಂಗ ಸಮಾನತೆಯ ಕೂಗು ಕಳೆದ ಎರಡು ಮೂರು ದಶಕಗಳಿಂದ ಕೇಳಿ ಬರುತ್ತಿದ್ದರು ಕೂಡ ಈ ಕುರಿತು ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ…. ಪ್ರಸ್ತುತ ದಿನಮಾನಗಳಲ್ಲಿ ಪುರುಷನಷ್ಟೇ ವಿದ್ಯಾರ್ಹತೆಯನ್ನು ಹೊಂದಿರುವ ಮಹಿಳೆ ಆತನಷ್ಟೇ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿ ತನ್ನ ಮೇಲೆ ಅಧಿಕಾರ ಚಲಾಯಿಸುವ ಗಂಡನಾಗದೆ, ಬದುಕನ್ನು ಹಂಚಿಕೊಳ್ಳುವ ಸಂಗಾತಿಯಾಗಲಿ ಎಂದು ಆಕೆ ಬಯಸುತ್ತಾಳೆ. ತನ್ನ ಹಕ್ಕುಗಳ ಕುರಿತು ಸಂಪೂರ್ಣ ಅರಿವನ್ನು ಹೊಂದಿರುವ ಆಕೆ ಪುರುಷ ಪ್ರಧಾನ ಸಮಾಜದ ಬಹುತೇಕ ರೀತಿ ನೀತಿಗಳನ್ನು ಈಗಾಗಲೇ ಧಿಕ್ಕರಿಸುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾನತೆಯ ಬದುಕನ್ನು ಹಂಚಿಕೊಂಡು ಬಾಳಲು ಇಚ್ಚಿಸುತ್ತಿದ್ದಾಳೆ. ಇದರ ನಿಜವಾದ ತತ್ವವನ್ನು ಅರಿತಿರುವ ಬುದ್ಧಿಜೀವಿಗಳು ಕೂಡ ಇದನ್ನು ಅನುಮೋದಿಸಿದ್ದು ಇದೀಗ ಸುಪ್ರೀಂ ಕೋರ್ಟ್ ಇದಕ್ಕೆ ತನ್ನದೇ ಆದ ರೀತಿಯಲ್ಲಿ ಒಪ್ಪಿಗೆಯ ಮುದ್ರೆಯನ್ನು ಒತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವೀಣಾ ಹೇಮಂತಗೌಡ ಪಾಟೀಲ್
“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ Read Post »









