ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ

ವಿಶೇಷ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?-ಬಸವಣ್ಣನವರ ದೃಷ್ಟಿಯಲ್ಲಿ “”ನೈಜ ಶೃಂಗಾರ””“ನೀರಿಂಗೆ ನೈದಿಲೆಯೆ ಶೃಂಗಾರಸಮುದ್ರಕ್ಕೆ ತೆರೆಯೆ ಶೃಂಗಾರನಾರಿಗೆ ಗುಣವೆ ಶೃಂಗಾರಗಗನಕ್ಕೆ ಚಂದ್ರಮನೆ ಶೃಂಗಾರನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವ ಇಂದಿನ ಜಗತ್ತಿನಲ್ಲಿ ‘ನೈಜ ಶೃಂಗಾರ’ ಅಥವಾ ನೈಜ ಸೌಂದರ್ಯ ಎಂದರೇನು ಎಂಬುದನ್ನು ವಿಶ್ವಗುರು ಬಸವಣ್ಣನವರು ಅತ್ಯಂತ ಸರಳ ಉದಾಹರಣೆಗಳ ಮೂಲಕ ಈ ವಚನದಲ್ಲಿ ಬಿಡಿಸಿಟ್ಟಿದ್ದಾರೆ. ಪ್ರಕೃತಿಯ ಸಹಜ ಗುಣಗಳನ್ನು ಲೌಕಿಕ ಬದುಕಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಸಮೀಕರಿಸುವ ಅವರ ದೃಷ್ಟಿಕೋನ ಸಾರ್ವಕಾಲಿಕವಾದುದು.ಲೌಕಿಕ ಜಗತ್ತಿಗೆ ಪೂರಕವಾದ ಅರ್ಥವನ್ನು ನೋಡುವುದಾದರೆ,ಲೌಕಿಕ ಅಥವಾ ಭೌತಿಕ ಜಗತ್ತಿನಲ್ಲಿ ನಾವು ದಿನನಿತ್ಯ ನೋಡುವುದೆಲ್ಲವೂ ಬಾಹ್ಯ ಆಕರ್ಷಣೆಗಳನ್ನೇ. ಆದರೆ ಅಪ್ಪ ಬಸವಣ್ಣನವರು ನೈಜ ಶೃಂಗಾರವು ಅದರ ಅಂತರ್ಗತ ಗುಣದಲ್ಲಿದೆ ಎನ್ನುತ್ತಾರೆ. ಕೇವಲ ನೀರಿದ್ದರೆ ಸಾಲದು, ಅದರಲ್ಲಿ ಅರಳುವ ನೈದಿಲೆ  ಆ ನೀರಿಗೆ ದೈವಿಕ ಸೌಂದರ್ಯವನ್ನು ನೀಡುತ್ತದೆ. ಅದೇ ರೀತಿಸಮುದ್ರಕ್ಕೆ ಅಲೆಯು ಸೌಂದರ್ಯವನ್ನು ನೀಡುತ್ತದೆ.ನಿಶ್ಚಲವಾಗಿ ನಿಂತ ನೀರು ಸಮುದ್ರವೆನಿಸದು. ನಿರಂತರವಾಗಿ ಏರಿಳಿಯುವ ಅಲೆಗಳೇ ಸಮುದ್ರದ ಜೀವಂತಿಕೆ ಮತ್ತು ಶೃಂಗಾರ. ನಮ್ಮ ಬದುಕಿನ ಏಳುಬೀಳುಗಳೂ ಸಹ ಬದುಕಿನ ಜೀವಂತಿಕೆಯನ್ನು ತೋರ್ಪಡಿಸುತ್ತವೆ.ಹಾಗೆಯೇ ..ನಾರಿಗೆ ಗುಣವೇ ಶೃಂಗಾರ: ಸಮಾಜದಲ್ಲಿ ಹೆಣ್ಣನ್ನು ಕೇವಲ ದೈಹಿಕ ಸೌಂದರ್ಯದ ತಕ್ಕಡಿಯಲ್ಲಿ ಅಳೆಯುವ ಕಾಲದಲ್ಲಿ, ಬಸವಣ್ಣನವರು ಹೆಣ್ಣಿಗೆ ಆಕೆಯ ‘ಸದ್ಗುಣ, ವಿವೇಕ ಮತ್ತು ನಡತೆಯೇ’ ನಿಜವಾದ ಶೃಂಗಾರ ಎಂದರು. ಬಾಹ್ಯ ಆಭರಣಗಳು ಕ್ಷಣಿಕ, ಆದರೆ ಆಕೆಯ ಉದಾತ್ತ ಗುಣಗಳು ಇಡೀ ಕುಟುಂಬ ಮತ್ತು ಸಮಾಜವನ್ನು ಬೆಳಗುತ್ತವೆ. ಇದು ಇಂದಿನ ಆಧುನಿಕ ಜಗತ್ತಿನ ಸ್ತ್ರೀ ಸಬಲೀಕರಣಕ್ಕೂ ಅತ್ಯಂತ ಪ್ರಸ್ತುತವಾದ ವಿಚಾರವಾಗಿದೆ.ಗಗನಕ್ಕೆ ಚಂದ್ರಮನೇ ಶೃಂಗಾರ ಅಂತ ನೋಡಿದಾಗ ..ವಿಶಾಲವಾದ ಕತ್ತಲ ಆಕಾಶಕ್ಕೆ ಕೇವಲ ನಕ್ಷತ್ರಗಳಿಗಿಂತ ಏಕಾಂಗಿಯಾಗಿ ನಿಂತು ತಂಪು ಬೆಳಕನ್ನು ನೀಡುವ ಚಂದ್ರನೇ ನಿಜವಾದ ಆಭರಣ.ಆಧ್ಯಾತ್ಮಿಕವಾದ  ಅರ್ಥಾನುಸಂಧಾನವನ್ನು  ನೋಡುವುದಾದರೆ,ವಚನದ ಕೊನೆಯ ಸಾಲಿನಲ್ಲಿ ಬಸವಣ್ಣನವರು ಲೌಕಿಕತೆಯಿಂದ ಆಧ್ಯಾತ್ಮದ ಅತ್ಯುನ್ನತ ಶಿಖರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. “ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಎನ್ನುವ ಮೂಲಕ ಶರಣರ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುತ್ತಾರೆ.ನೊಸಲ ವಿಭೂತಿ ಎಂದು… ಆಧ್ಯಾತ್ಮಿಕವಾಗಿ ವಿಭೂತಿ ಎಂದರೆ ಕೇವಲ ಬೂದಿಯಲ್ಲ. ಅದು ‘ಅಹಂಕಾರದ ಭಸ್ಮ’. ದೇಹವು ಒಂದು ದಿನ ಬೂದಿಯಾಗಿಯೇ ತೀರುತ್ತದೆ ಎಂಬ ನಶ್ವರತೆಯ ಅರಿವು.ಶರಣನಾದವನಿಗೆ ಐಹಿಕ ಭೋಗಗಳು, ಅಧಿಕಾರ, ಸಂಪತ್ತು ಯಾವುದೂ ಆಭರಣಗಳಲ್ಲ. ತನುವನ್ನು ದಂಡಿಸಿ, ಮನದ ಕಲ್ಮಷವನ್ನು ಸುಟ್ಟು, ಅಹಂ ಭಾವವನ್ನು ಭಸ್ಮ ಮಾಡಿ ಹಣೆಯ ಮೇಲೆ ಧರಿಸುವ ವಿಭೂತಿಯೇ ಆತನ ಜ್ಞಾನದ ಸಂಕೇತ.ಅಹಂಕಾರ ಅಳಿದು, ದೈವತ್ವವನ್ನು ಮೈಗೂಡಿಸಿಕೊಂಡ ಶರಣನ ಮುಖದಲ್ಲಿ ಮೂಡುವ ಶಾಂತಿ ಮತ್ತು ಜ್ಞಾನದ ತೇಜಸ್ಸೇ ಆತನ ನಿಜವಾದ ಶೃಂಗಾರವೆಂದು ಅರುಹಿದ್ದಾರೆ.ಬಸವಣ್ಣನವರ ಈ ವಚನವು ನಮಗೆ ಬದುಕಿನ ದಾರಿದೀಪವಾಗಿದೆ. ಕೇವಲ ತೋರ್ಪಡಿಕೆಯ, ಕೃತಕವಾದ ಅಲಂಕಾರಗಳ ಬೆನ್ನತ್ತಿ ಹೋಗುತ್ತಿರುವ ಇಂದಿನ ಸಮಾಜಕ್ಕೆ, ತನು-ಮನಗಳ ಶುದ್ಧತೆ ಹಾಗೂ ಸದ್ಗುಣಗಳೇ ನಿಜವಾದ ಆಸ್ತಿ ಎಂಬುದನ್ನು ಇದು ನೆನಪಿಸುತ್ತದೆ. ಪ್ರಕೃತಿಯಲ್ಲಿ ಹೇಗೆ ಸಹಜತೆ ಸೌಂದರ್ಯವೋ, ಹಾಗೆಯೇ ಮನುಷ್ಯನ ಬದುಕಿನಲ್ಲಿ ಸದ್ಗುಣ ಮತ್ತು ದೈವಿಕ ಭಕ್ತಿಯೇ ನಿಜವಾದ ಶೃಂಗಾರ ಎಂಬುದನ್ನು ಅರಿತು ಬಾಳಬೇಕಿದೆ.ಅದೇ ರೀತಿ ಇಂದಿನ ‘ಇನ್‌ಸ್ಟಾಗ್ರಾಮ್’ ಮತ್ತು ‘ಫಿಲ್ಟರ್’ಗಳ ಜಗತ್ತಿನಲ್ಲಿ ಯುವ ಪೀಳಿಗೆಗೆ ಸೌಂದರ್ಯ ಎಂದರೆ ಕೇವಲ ಬಾಹ್ಯ ರೂಪ, ಬ್ರಾಂಡೆಡ್ ಬಟ್ಟೆಗಳು ಮತ್ತು ಫೋಟೋಗಳಿಗೆ ಸಿಗುವ ಲೈಕ್ಸ್‌ಗಳಷ್ಟೇ ಆಗಿಬಿಟ್ಟಿದೆ. ಕೃತಕ ಸೌಂದರ್ಯದ ಬೆನ್ನತ್ತಿ ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಉತ್ಸಾಹದಲ್ಲಿ, ನಾವು ನಮ್ಮ ಮನಸ್ಸನ್ನು ಸಜ್ಜುಗೊಳಿಸಲು ಮರೆಯುತ್ತಿದ್ದೇವೆ.ಈ ಹೊತ್ತಿನಲ್ಲಿ ಬಸವಣ್ಣನವರ ಈ ವಚನ ಯುವಜನತೆಗೆ ಒಂದು ದಿವ್ಯೌಷಧವೆಂದು ಹೇಳಬಹುದು.ಪ್ರೊಫೈಲ್ ಅಂದಕ್ಕಿಂತ ಕ್ಯಾರೆಕ್ಟರ್ ಮುಖ್ಯವಾದುದು… ಸಾಮಾಜಿಕ ಜಾಲತಾಣದ ಪ್ರೊಫೈಲ್ ಸುಂದರವಾಗಿ ಕಾಣಿಸುವುದಕ್ಕಿಂತ, ನಮ್ಮ ವ್ಯಕ್ತಿತ್ವ  ಸುಂದರವಾಗಿರಬೇಕು. ಹೆಣ್ಣಾಗಲಿ, ಗಂಡಾಗಲಿ ಅವರ ನಡತೆ ಮತ್ತು ಸದ್ಗುಣಗಳೇ ನಿಜವಾದ ಆಕರ್ಷಣೆಯಾಗಿರುತ್ತವೆ.ಸವಾಲುಗಳೇ ನಮ್ಮ ಶಕ್ತಿಯಾಗಬೇಕು. ಸಮುದ್ರದ ಅಲೆಗಳು ಅದಕ್ಕೆ ಸೌಂದರ್ಯ ತರುವಂತೆ,  ಬದುಕಿನಲ್ಲಿ ಎದುರಾಗುವ ಸೋಲು, ಗೆಲುವು ಹಾಗೂ ಸವಾಲುಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಸವಾಲುಗಳಿಗೆ ಹೆದರಿ ಓಡುವ ಬದಲು, ಅವುಗಳನ್ನು ಬದುಕಿನ ಸಹಜ ಏರಿಳಿತಗಳೆಂದು ಸ್ವೀಕರಿಸಬೇಕು.ಅಹಂಕಾರ ಬಿಟ್ಟು ವಿನಯಶೀಲರಾಗಿ ಬಾಳಬೇಕು. ಶರಣರಿಗೆ ಹಣೆಯ ಮೇಲಿನ ವಿಭೂತಿ ಹೇಗೆ ಅಹಂಕಾರದ ನಾಶವನ್ನು ನೆನಪಿಸುತ್ತದೆಯೋ, ಹಾಗೆಯೇ ಇಂದಿನ ಯುವಜನತೆ ತಮಗಿರುವ ಶಿಕ್ಷಣ, ಉದ್ಯೋಗ ಅಥವಾ ಜ್ಞಾನದ ಬಗ್ಗೆ ಅಹಂ ಪಡದೆ, ವಿನಯವಂತರಾಗಿ ಬಾಳುವುದನ್ನು ಕಲಿಯಬೇಕಿದೆ.ಬಾಹ್ಯ ಶೃಂಗಾರವು ವಯಸ್ಸಿನೊಂದಿಗೆ ಕರಗಿಹೋಗುತ್ತದೆ, ಆದರೆ ಅಂತರಂಗದ ಶೃಂಗಾರವಾದ ‘ಮಾನವೀಯತೆ’ ಮತ್ತು ‘ಸತ್ ಚಿಂತನೆ’ ನಮ್ಮನ್ನು ಸಾವಿನ ನಂತರವೂ ಜೀವಂತವಾಗಿರಿಸುತ್ತದೆ. ಬನ್ನಿ, ಕೃತಕ ಮುಖವಾಡಗಳನ್ನು ಕಳಚಿಟ್ಟು, ಬಸವಣ್ಣನವರು ತೋರಿದ ಸಹಜ ಮತ್ತು ಸಾತ್ವಿಕ ಸೌಂದರ್ಯದ ಹಾದಿಯಲ್ಲಿ ಸಾಗೋಣ.ಒಂದು ಶ್ಲೋಕದ ಪ್ರಕಾರ ನೋಡಿದಾಗ…ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾಃ |ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ||ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ |ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ .ಮನುಷ್ಯನಿಗೆ ತೋಳುಬಂದಿ  ಆಭರಣವಲ್ಲ, ಚಂದ್ರನಂತೆ ಹೊಳೆಯುವ ಮುತ್ತಿನ ಹಾರಗಳಾಗಲಿ, ಸುಗಂಧ ದ್ರವ್ಯಗಳ ಲೇಪನವಾಗಲಿ, ಸ್ನಾನವಾಗಲಿ, ತಲೆಗೆ ಮುಡಿಯುವ ಹೂವುಗಳಾಗಲಿ ನಿಜವಾದ ಸೌಂದರ್ಯವನ್ನು ನೀಡುವುದಿಲ್ಲ. ಬದಲಿಗೆ ಸಂಸ್ಕಾರಯುತವಾದ ಮತ್ತು ವಿನಯದಿಂದ ಕೂಡಿ ಆಡುವ ‘ಒಳ್ಳೆಯ ಮಾತು’ ಒಂದೇ ಮನುಷ್ಯನಿಗೆ ಶಾಶ್ವತವಾದ ಆಭರಣ. ಲೋಕದ ಉಳಿದೆಲ್ಲಾ ಭೌತಿಕ ಆಭರಣಗಳು ಕಾಲಕ್ರಮೇಣ ಸವಿದು ಹೋಗುತ್ತವೆ, ಆದರೆ ಒಳ್ಳೆಯ ನಡತೆ ಹಾಗೂ ಮೃದುವಾದ ವಾಗ್ಭೂಷಣ ಮಾತ್ರ ಎಂದಿಗೂ  ಕ್ಷಯಿಸದ ನೈಜ ಶೃಂಗಾರವಾಗಿದೆಹೀಗೆ, ಅಂದಿನಿಂದ ಇಂದಿನವರೆಗೆ ಭಾರತೀಯ ತತ್ವಚಿಂತನೆಯು ಬಾಹ್ಯ ತೋರ್ಪಡಿಕೆಯ ಸೌಂದರ್ಯಕ್ಕಿಂತ ಅಂತರಂಗದ ಗುಣ ಸೌಂದರ್ಯಕ್ಕೇ ಅಗ್ರಸ್ಥಾನ ನೀಡುತ್ತಾ ಬಂದಿದೆ ಎಂಬುದಕ್ಕೆ ಬಸವಣ್ಣನವರ ಈ ವಚನ ಮತ್ತು ಈ ಶ್ಲೋಕವೇ ಅತ್ಯುತ್ತಮ ಸಾಕ್ಷಿ. ಪೂರ್ಣಿಮಾ ಮಹೇಶ ಮುತ್ನಾಳ.ಅಳ್ನಾವರ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-126 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಡಯಾಲಿಸಿಸ್‌ ಗೆ ಬೆಂಗಳೂರಿಗೆ? ರಾತ್ರಿ ತಾಯಿಯ ಜೊತೆಗೆ ಆಸ್ಪತ್ರೆಯಲ್ಲಿ ಮಲಗಲು ಬಂದ ಮಗಳು ಮಾರನೇ ದಿನ ಕಾಲೇಜಿಗೆ ರಜೆ ಹಾಕಿ ಬೆಳಗಿನ ಬಸ್ಸಿನಲ್ಲಿ ತನ್ನ ಊರಿಗೆ ಹೊರಟಳು. ಅಲ್ಲಿ ಹೋಗಿ ತೋಟದ ಸಾಹುಕಾರರು ಹಾಗೂ ಅವರ ಪತ್ನಿ ‘ಅಮ್ಮ’ ಅವರನ್ನು ಭೇಟಿ ಮಾಡಿದಳು. ತನ್ನ ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸೂಚಿಸಿರುವ ಬಗ್ಗೆ ಎಲ್ಲಾ ವಿವರಗಳನ್ನು ಅವರಿಗೆ ತಿಳಿಸಿದಳು….ನಿನ್ನ ಅಕ್ಕನಿಗೂ ತಿಳಿಸಿ ಕೊಡಿಸಬೇಕಾದ ಚಿಕಿತ್ಸೆಯನ್ನು ಕೊಡಿಸು….ಇಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ನೀವು ಹೋಗಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡುತ್ತೇವೆ…. ಎಂದರು. ಸಾಹುಕಾರರು ಹಾಗೂ ಅವರ ಪತ್ನಿಯ ಮಾತನ್ನು ಕೇಳಿದ ಹುಡುಗಿಗೆ ಸಂಜೀವಿನಿ ಸಿಕ್ಕಷ್ಟು ಸಂತೋಷವಾಯಿತು. ತನ್ನ ತಾಯಿಯ ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಹಾಯಕ್ಕೆ ನಿಲ್ಲುವ ಸಾಹುಕಾರರು ಅವರ ಪತ್ನಿಯ ಬಗ್ಗೆ ಗೌರವ ಹೆಚ್ಚಿತು.‌ ತನ್ನ ಕೃತಜ್ಞತೆಯನ್ನು ತಿಳಿಸಲು ಅವಳಿಗೆ ಪದವಿಲ್ಲದಾಯಿತು.  ಸಾಹುಕಾರರಿಗೆ ಹಾಗೂ ಅವರ ಪತ್ನಿಗೆ ವಂದಿಸಿ ತುಸು ನೆಮ್ಮದಿಯಿಂದ ತಂಗಿಯನ್ನು ಭೇಟಿ ಮಾಡಲು ಮನೆಗೆ ಹೋದಳು. ತಂಗಿ ಶಾಲೆಗೆ ಹೊರಡುವ ತರಾತುರಿಯಲ್ಲಿದ್ದಳು. ಅಕ್ಕ ಇದ್ದಕ್ಕಿದ್ದ ಹಾಗೆ ಮನೆಗೆ ಬಂದಿರುವುದನ್ನು ಕಂಡು, ತಂಗಿಗೆ ಆಶ್ಚರ್ಯವಾಯಿತು. ಆದರೆ ತಾಯಿಗೆ ಹೆಚ್ಚಿನ ಚಿಕಿತ್ಸೆ ದೊರಕುವ ವಿಷಯ ತಿಳಿದು ಅವಳು ಸಂತೋಷ ಕೊಟ್ಟಳು…. “ಹಾಗಾದರೆ ತಾಯಿಯನ್ನು ಹೇಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೀಯಾ?…. ತಾಯಿಗೆ ಹೆಚ್ಚು ನಡೆದಾಡಲು ಸಾಧ್ಯವಿಲ್ಲ ಅಲ್ಲವೇ?…. ನಿನಗೆ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೋಗಿ ಅಭ್ಯಾಸವಿಲ್ಲ… ಯಾರ ಜೊತೆಗೆ ಹೋಗುತ್ತೀಯಾ?…. ಒಬ್ಬಳೇ ಅಮ್ಮನನ್ನು ಕರೆದುಕೊಂಡು ಹೋಗಲು ಸಾಧ್ಯವೇ ನಿನಗೆ? …. ನಾನು ಈ ಕೆಲಸವನ್ನು ಬಿಟ್ಟು ನಿನ್ನ ಜೊತೆ ಬರುವುದು ಸಾಧ್ಯವಿಲ್ಲ…. ಅದೂ ಅಲ್ಲದೇ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮತ್ತು ಚಿಕಿತ್ಸೆ ಕೊಡಿಸಲು ಹೆಚ್ಚು ಹಣ ಬೇಕಲ್ಲವೇ ನಮ್ಮಲ್ಲಿ ಅಷ್ಟು ಹಣ ಇಲ್ಲವಲ್ಲ”…. ಎಂದು ಚಿಂತಿತಳಾಗಿ ಅಕ್ಕನನ್ನು ಕೇಳಿದಳು.  ತಂಗಿಯು ಕೇಳಿದ ಪ್ರಶ್ನೆಗಳಿಗೆ….”ತೋಟದ ಸಾಹುಕಾರರು ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ…. ಅವರ ಕಾರಿನಲ್ಲಿಯೇ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಕೂಡಾ ತಿಳಿಸಿದ್ದಾರೆ…. ನೋಡೋಣ ….ಚಿಕಿತ್ಸೆಯ ಖರ್ಚಿಗೆ ಹಣವನ್ನು ಅವರು ಕೊಡಬಹುದು…. ಅಮ್ಮನನ್ನು ಕರೆದುಕೊಂಡು ಹೋಗಲು ಜೊತೆಗೆ ಬಾವನನ್ನು ಬರುವಂತೆ ಕೇಳಿಕೊಳ್ಳುತ್ತೇನೆ…. ನೀನು ಹೆಚ್ಚು ಯೋಚನೆ ಮಾಡಬೇಡ…. ನೀನೊಬ್ಬಳೇ ಇಲ್ಲಿರುವುದನ್ನು ಯೋಚಿಸಿ ನನ್ನ ಮನಸ್ಸು ಸದಾ ಚಿಂತೆಗೆ ಒಳಗಾಗುತ್ತಿದೆ…. ನಮ್ಮ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀನು ಒಬ್ಬಳೇ ಇಲ್ಲಿದ್ದು ಅಮ್ಮನ ಕೆಲಸವನ್ನು ಕೂಡ ಮಾಡುತ್ತಿದ್ದೀಯಾ….. ನನ್ನ ಜೊತೆಗೆ ಹೆಗಲುಕೊಟ್ಟು ನಿಂತಿರುವ ನೀನು ಇಷ್ಟು ಚಿಕ್ಕ ವಯಸ್ಸಿಗೆ ನನಗಿಂತ ದೊಡ್ಡವಳಾಗಿ ಬಿಟ್ಟೆ”….. ಎಂದು ಹೇಳುತ್ತಾ ತಂಗಿಯನ್ನು ಬಿಗಿಯಾಗಿ ಅಪ್ಪಿಕೊಂಡಳು…. ಅಕ್ಕ ಈಗ ನಮಗೆ ನಾವೇ ಇರುವುದು…. ಹಾಗಾಗಿ ನಾವಿಬ್ಬರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು…. ನೀನು ಧೈರ್ಯವಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ…. ನನಗೆ ಈಗ ಒಬ್ಬಳೇ ಇದ್ದು ಅಭ್ಯಾಸವಾಗಿ ಹೋಗಿದೆ”….ಎಂದಳು. ಇಬ್ಬರ ಕಣ್ಣುಗಳೂ ಹನಿ ಗೂಡಿದವು. ಕೆಲಸಕ್ಕೆ ಹೋಗುವ ಸಮಯವಾಗಿದ್ದರಿಂದ ತಂಗಿ ಮನೆಗೆ ಬೇಗ ಹಾಕಿ ಹೊರಟಳು. ಅಕ್ಕನೂ ಬಸ್ ನಿಲ್ದಾಣದ ಕಡೆಗೆ ಹೊರಟಳು.  ಹಿಂತಿರುಗಿ ಸಕಲೇಶಪುರಕ್ಕೆ ಹೋಗಲು ಮಧ್ಯಾಹ್ನದ ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಹಾಗಾಗಿ ಆ ಹುಡುಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಕುಳಿತುಕೊಂಡು ತನ್ನ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲಸಗಾರರು ಈ ಹುಡುಗಿಯನ್ನು ನೋಡಿ…. “ಸುಮತಿ ಟೀಚರ್ ಹೇಗಿದ್ದಾರೆ?”…. ಎಂದು ವಿಚಾರಿಸಿಕೊಳ್ಳುತ್ತಿದ್ದರು…. “ಪರವಾಗಿಲ್ಲ…. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಸುಧಾರಿಸಿಕೊಳ್ಳುತ್ತಿದ್ದಾರೆ”…. ಎಂದು ಉತ್ತರ ಕೊಡುತ್ತಿದ್ದಳು. ಅದೇ ರೀತಿ ತಮ್ಮ ಕುಟುಂಬಕ್ಕೆ ಆಪ್ತರಾದ ಮಲಯಾಳಿ ಡ್ರೈವರ್ ಹಾಗೂ ಅವರ ಪತ್ನಿ ಆ ದಾರಿಯಲ್ಲಿ ಬಂದರು. ಸುಮತಿಯ ಎರಡನೇ ಮಗಳನ್ನು ಕಂಡು ಅವಳ ಬಳಿಗೆ ಬಂದು, ಸುಮತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ಅವರು ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಕಾರಣ ಎಲ್ಲಾ ವಿಚಾರವನ್ನು ಆ ಹುಡುಗಿ ಅವರಿಗೆ ತಿಳಿಸಿದಳು. ಅವರಿಬ್ಬರೂ ಕೂಡ ಎಸ್ಟೇಟಿನ ಸಾಹುಕಾರರು ಹಾಗೂ ಅಮ್ಮನನ್ನು ಕೊಂಡಾಡಿದರು…. “ನೀನು ಯಾವುದಕ್ಕೂ ಹೆದರಬೇಡ…. ನಮ್ಮ ಸಾಹುಕಾರರು ಮತ್ತು ಅಮ್ಮ ಇದ್ದಾರೆ…. ಅವರಿಬ್ಬರೂ ಬಹಳ ಒಳ್ಳೆಯವರು…. ದಯಾಳುಗಳು…. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರು…. ನೀನು ಧೈರ್ಯವಾಗಿ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಬಾ….. ಎಲ್ಲವೂ ಒಳ್ಳೆಯದಾಗಲಿ”…. ಎಂದು ಹೇಳಿ ಆ ಹುಡುಗಿಯ ತಲೆಯನ್ನು ನೇವರಿಸಿ ಅಲ್ಲಿಂದ ಹೊರಟುಹೋದರು.  ಮಧ್ಯಾಹ್ನದ ಹನ್ನೆರಡು ಗಂಟೆಯ ಬಸ್ಸು ಬಂದಿತು. ಬಸ್ಸಿನಲ್ಲಿ ಹುಡುಗಿಯು ಸಕಲೇಶಪುರದ ಕಡೆಗೆ ಹೊರಟಳು. ಅವಳು ಆಶ್ರಮಕ್ಕೆ ಬಂದಾಗ ಅವಳ ಗೆಳತಿ ಮಧ್ಯಾಹ್ನದ ಅಡುಗೆಯನ್ನು ಮಾಡಿ ಮುಗಿಸಿ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದಳು. ಸುಮತಿಯ ಮಗಳನ್ನು ಕಂಡೊಡನೆ, ಹೋದ ವಿಷಯ ಏನಾಯ್ತು ಎಂದು ಉತ್ಸುಕತೆಯಿಂದ ಕೇಳಿದಳು. ಸಾಹುಕಾರರು ಮತ್ತು ಅವರ ಪತ್ನಿ ಹೇಳಿದ ವಿಷಯವನ್ನು ತಿಳಿಸಿದಳು. ಅವಳಿಗೂ ಸಂತೋಷವಾಯಿತು…. “ಸರಿ ನಡಿ ಊಟ ಮಾಡು…. ಆಸ್ಪತ್ರೆಗೆ ಹೋಗಿ ನಿನ್ನ ತಾಯಿಗೆ ಈ ವಿಷಯವನ್ನ ತಿಳಿಸು…. ಅವರಿಗೂ ಬಹಳ ಸಂತೋಷವಾಗುತ್ತದೆ”…. ಎಂದಳು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದರು. ನಂತರ ಸುಮತಿಯ ಮಗಳು ತಾಯಿಯನ್ನು ನೋಡಲು ಆಸ್ಪತ್ರೆಗೆ ಹೊರಟಳು. ತಾಯಿಯ ಬಳಿಗೆ ಹೋಗಿ ಈ ಸಂತಸದ ಸುದ್ದಿ ಯಾವಾಗ ತಿಳಿಸುತ್ತೇನೋ ಎನ್ನುವ ತವಕ ಅವಳಲ್ಲಿತ್ತು. ಹಾಗಾಗಿ ಬೇಗನೇ ಹೆಜ್ಜೆ ಹಾಕಿದಳು. ಲಘುಬಗೆಯಿಂದ ಆಸ್ಪತ್ರೆಯ ಮೆಟ್ಟಿಲು ಹತ್ತಿದಳು. ಓಡು ನಡಿಗೆಯಲ್ಲಿ ವಾರ್ಡ್ ತಲುಪಿದಳು. ಸುಮತಿ ಆಸ್ಪತ್ರೆಯಿಂದ ದೊರೆತ ಮಧ್ಯಾಹ್ನದ ಊಟವನ್ನು ಮಾಡಿ, ಸಣ್ಣಗೆ ನಿದ್ರೆ ಮಾಡುತ್ತಿದ್ದಳು. ಯಾರೋ ಬಂದು ನಿಂತದ್ದು ಅರಿವಾಗಿ ಕಣ್ಣುಬಿಟ್ಟಳು. ಮಗಳ ಮುಖವನ್ನು ನೋಡಿದಳು ಅವಳು ಇಂದು ಬಹಳ ಖುಷಿಯಲ್ಲಿ ಇರುವಂತೆ ಕಂಡಿತು. ನಿಧಾನವಾಗಿ ಎದ್ದು ಕುಳಿತು ….”ಮಗಳೇ ಊಟ ಮಾಡಿದೆಯಾ?”…. ಎಂದು ಕೇಳಿದಳು ಅದಕ್ಕುತ್ತರವಾಗಿ ‘ಹೂಂ’ ಎಂದು ಹೇಳಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಳು. 

Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಅವರ ಗಜಲ್‌

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್‌ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ     ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು  ಕರಗಿ ಹೋಗುವಉತ್ಕಟ ಬಯಕೆಬೆರೆತ ಕನಸಿಗೆ ಮೊಳಕೆ ಚಿಗುರಿಮೇಲಕೆ ಹಾರಲಿ ನಿತ್ಯವೂ ಆರಾಧನೆ ಗುಡಿಯ ಒಳಗೆವಿರಾಜಿಪ ದೇವಗೆಸತ್ಯದ ನಿವೇದನೆ ರಾಧೆಯ ಬಾಳಲಿಶುಭವ ಕೋರಲಿ  ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಗಜಲ್‌ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” ಐದು ದಶಕದ ಹಿಂದೆ,ಕಾಲ ಸರಳವಾಗಿತ್ತು,ಬದುಕು ಹಸನಾಗಿತ್ತು;ಮಣ್ಣ ಗೋಡೆಯ ತೊಲೆಯ ಹಳೆ ಮನೆಯೊಳಗೆ,ಬೆಳಕಿಂಡಿಯ ಪ್ರೀತಿ ಬೆಳಕುಬಡ ರೈತರ ಬದುಕು ಮೊಬೈಲ್ ಇರದ ದಿನಗಳಲ್ಲಿ,ಮಾತುಗಳು ಮನಸ್ಸನ್ನು ಮುಟ್ಟುತ್ತಿದ್ದವು;ಪತ್ರದ ಬರುವಿಕೆಗಾಗಿ ಕಾಯುವ ಕಣ್ಣುಗಳು,ಬಾಂಧವ್ಯದ ಆಳ ಅಳೆಯುತ್ತಿದ್ದವು. ಜಾತ್ರೆ ಪಾರಿಜಾತದ ಸದ್ದುಓಣಿ ತುಂಬಾ ಆಟದ ಗದ್ದಲ,ಸಿಡಿಯಲು ಸಿದ್ಧ ಪಟಾಕಿ ಮದ್ದುಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,ಕೂಡು ಕುಟುಂಬವೇ ನಮಗೆಒಂದು ದೊಡ್ಡ ನೀತಿ. ಬೀದಿ ದೀಪದ ಕೆಳಗಿನ ಓದು,ಚಿಮಣಿ ಬಡ್ಡಿಯ ಸುತ್ತ ಮಸುಕಾದ ಬೆಳಕು;ಕಷ್ಟ ದುಃಖದ ಮಧ್ಯೆಮಂದಹಾಸದ  ನಗೆ ಇತ್ತು,ಬರಿಗಾಲಲಿ ಶಾಲೆ ಪಾಠನಿತ್ಯ ಕಸರತ್ತು ಇಂದು ಕಾಲ ಬದಲಾಗಿದೆ, ವೇಗ ಹೆಚ್ಚಾಗಿದೆ,ಕೈಯಲ್ಲಿ ಜಗತ್ತಿದೆ, ಆದರೆ ಮನುಜ ಒಂಟಿಯಾಗಿರುವಐದು ದಶಕದ  ಆ ದಿನಗಳು,ನೆನಪಿನ ಪುಟಗಳಲ್ಲಿಅಚ್ಚಳಿಯದೆ ಉಳಿದಿವೆ. ಎಷ್ಟೋ ವರುಷಗಳ ಮೇಲೆಅವಳ ಭೇಟಿಕಣ್ಣಿನಲ್ಲಿ ಮಾತು ಹರಿದವುಮೌನ ಮುರಿದು ಮಾತುಸಂಜೆ ಬಾನಿನ  ಚುಕ್ಕಿ ಮೂಡಿದವುಹುಣ್ಣಿಮೆಯ ಚಂದ್ರ ನಕ್ಕನುಮತ್ತೆ ಗೂಡು ಸೇರಿದೆವು ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” Read Post »

ಇತರೆ, ಜೀವನ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ.

ವಿಶೇಷ ಸಂಗಾತಿ ಡಾ.ಯಲ್ಲಮ್ಮ ಕೆ. “ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಇನ್ನೂ ಗಟ್ಟಿ ಇದ್ಲು ಏನಿಲ್ಲಾಂದ್ರೂ ಎಂಟ್ಹತ್ತು ವರುಷ ಬಾಳು ಸವೆಸಬಹುದಿತ್ತು, ಮೊಮ್ಮಕ್ಕಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸು ಹೊತ್ತಿದ್ದ ಶಿವಮ್ಮ; ಎದ್ದು ಓಡಾಡುವ ತ್ರಾಣ ಇಲ್ಲದಿದ್ದರೂ ಹಣ್ಣ ಹಣ್ಣ ಮುದೇಕಿಯೇನೂ ಆಗಿರಲಿಲ್ಲ, ದೇವರು ತನ್ಮೇಲೆ ಯಾಕೆ ಹಾಕೋತ್ತಾನೆ? ಏನಾದರೂ ಒಂದು ಕುಂಟುನೆಪ ಹೇಳಿ ತನ್ನೆಡೆಗೆ ಕರಕೋತ್ತಾನೆ ಅಷ್ಟೇ ಎಂದು ಅಮ್ಮನ ವಾರಿಗೆಯವ್ರು ಕಣ್ಣೀರು ಹಾಕ್ತಾ ಪಾರ್ಥಿವ ಶರೀರದ ಮುಂದೆ ಕೂತು ಕಣ್ಣೀರ ಮಳೆಗಾರೆಯುತ್ತಿದ್ದರು! ಕಳೆದ ಐದಾರು ವರುಷಗಳ ಹಿಂದೆ ಕಣ್ ಆಪರೇಷನ್ ಮಾಡಿಸಬೇಕು ಅಂತ ಮನೆ ಮಂದಿಯೆಲ್ಲ ಯೋಚಿಸಿದಾಗ ಡಾಕ್ಟರ್ ಸಾರಾಸಗಟಾಗಿ ನಿರಾಕರಿಸಿದ್ದ ಆಪರೇಷನ್ ಮಾಡಿದರೂ ಕಣ್ ಬರೋ ಚಾನ್ಸಸ್ ಬಾಳ ಕಮ್ಮಿ ಅಂತ್ಹೇಳಿ,  ಆಗಲೇ ಆ ವಿಚಾರಕ್ಕೆ ಎಳ್ಳು-ನೀರು ಬಿಟ್ಟಾಗಿತ್ತು. ಕಣ್ಣು ಪುಟ್ಟ ಪೂರಾ ಕಾಣತ್ತಿದ್ದಿಲ್ಲ ಅಂತೇನಿಲ್ಲ ಮಸಗು ಮಸಗು ಆಗಿ ಕಾಣತ್ತಿದ್ದವು ಅಂತಿದ್ಲು. ಅದ್ಯಾವ ವಿಷಗಳಿಯೋ ನಾನರಿಯೆ? ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ ತಪಾಸಣಾ ಶಿಬಿರಕ್ಕೆ ಅದ್ಯಾರೋ ಮಾತು ಕೇಳಿ, ಮತ್ಯಾರನ್ನೋ ಕರಕೊಂಡು ಹೋಗಿ ಬಂದ್ಮೇಲಿಂದ ಒಂದೇ ಹಠ! ಕಣ್ ಬರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ, ನನಗೆ ಕಣ್ ಆಪರೇಷನ್ ಮಾಡಿಸಿ ಎಂದು; ಅದೂ ಇದೂ ಅಂತ್ಹೇಳಿ ಒಂದು ಮೂರೂ ತಿಂಗಳು ಮುಂದಕ್ಕೆ ತಳ್ಳಿಕೊಂಡು ಹೊಂಟಿದ್ವೀ.., ಅವರಿವರು ಏನಂತಾರೆ? *ಮನೆಯಲ್ಲಿ ದುಡಿದು ತಿನ್ನುವ ಮಕ್ಕಳ್ನಾ ಬಿಡು, ಮಗಳು ನೌಕರಿ ಮಾಡ್ತಾಳ, ಮೊಮ್ಮಗಳು ನೌಕರಿ ಮಾಡ್ತಾಳೆ ಅಷ್ಟೇ ಅಲ್ಲದೇ ಮೊಮ್ಮಗಳ ಗಂಡನೂ ನೌಕರಿ ಮಾಡ್ತಾನೆ ಕಣ್ ಆಪರೇಶನ್ ಮಾಡಿಸೋಕೆ ಏನು? ದುಡ್ಡಿನ ಮಕ ನೋಡ್ತಾರೆ* ಅನ್ನೋ ತಿರಸ್ಕಾರದ ಮಾತುಗಳನ್ನು ಕೇಳಿದ ಮೇಲೂ ಸುಮ್ನೆ ಇರೋದು ಹೇಗೆ ಹೇಳಿ? *ಜೀವ ಮತ್ತು ಜೀವನ ಕೊಟ್ಟ ಅಮ್ಮನಿಗೆ ಕಣ್ ಬಂದ್ರೆ ಎಲ್ಲರಿಗೂ ಖುಷಿ ತಾನೇ* , ಅಮ್ಮನ ಆಸೆ ಮತ್ತು ಹಠಕ್ಕೆ ಸೋತು ಆಪರೇಷನ್ ಸಜ್ಜಾಗೆ, ಪೇಟೆಯ ಮೈಲಾರ ಆಸ್ಪತ್ರೆಗೆ ಹೋಗಿ ಇಡೀ ದಿನ ಕಾದು ತಪಾಸಣೆ ಮುಗಿದಮೇಲೆ ಫಿಟ್ ಇದ್ದಾರೆ, ಬಿ.ಪಿ ನಾರ್ಮಲ್ ಇದೆ, ಆಪರೇಷನ್ ಮಾಡಿ ಲೆನ್ಸ್ ಹಾಕಿದ್ರಾಯ್ತು.., *ನಾಳೆ ಬನ್ನಿ ಎಂದು ಡಾಕ್ಟರ್ ಹೇಳಿ ಕಳಿಸಿದ್ಮೇಲೆ ಲವಲವಿಕೆಯಿಂದ ಇದ್ದ ಅಮ್ಮನ ಮುಖದಲ್ಲಿ ಹೊಸ ಕಳೆ ಬಂದಂತಿತ್ತು!* ಮಾರನೇ ದಿನ ದುಡ್ಡು ಹೊಂದಿಸಿ ಕೊಟ್ಟು ನಾನು ಕೆಲಸಕ್ಕೆ ಹೋದೆ, ಮಗನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಆದ್ರು, ಹನ್ನೆರೆಡುಗಂಟೆ ಹೊತ್ತಿಗಾಗಲೇ ಆಪರೇಷನ್ ಮುಗಿತು, ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ ಅಂತ ಅಣ್ಣ ಕಾಲ್ ಮಾಡಿ ಹೇಳಿದ್ದ, ಸಾಯಂಕಾಲ ಆರರೊಳಗೆ ಮೂರು- ನಾಲ್ಕು ಬಾರಿ ಕಾಲ್ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಕೆಲಸ ಮುಗಿಸಿಕೊಂಡು ಬಂದು ಅಮ್ಮನನ್ನು ಕಂಡು ಮಾತನಾಡಿಸಿ ಇಡ್ಲಿ-ಸಾಂಬಾರ್ ತಿನಿಸಿ, ಚಹಾ ಕುಡಿಸಿದೆ, *ಮಸಗು ಕಣ್ಣಿಗ್ಹಾಕಿದ ಲೆನ್ಸ್ ನೊಂದಿಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಹೆಬ್ಬಯಕೆ ಅಮ್ಮನ ಮೊಗದಿ ಎದ್ದು ಕಾಣುತ್ತಿತ್ತು!* ಅದೇ ಭರವಸೆಯಲ್ಲಿ ಮನೆಗೆ ಬಂದೆ, ಅಮ್ಮನಿಗೆ ತಾನು ಕಣ್ಣಾದ ಬಗೆಗೆ ನೆನೆದು ನೆಮ್ಮದಿಯ ನಿದ್ದೆಗೈದೆ. ಮರುದಿನ ಪರೀಕ್ಷಾ ಕಾರ್ಯ ನಿಮಿತ್ತ ಅಮ್ಮನನ್ನು ಕಾಣದೇ ಕಾಲೇಜಿಗೆ ಹೋದೆ.., ಸಾಂಕಾಲದೊತ್ತಿಗೆ ರಾಘಣ್ಣ ಅಮ್ಮನ ಕಣ್ಪಟ್ಟಿ ತೆಗೆಸಿ, ಕರಿಕನ್ನಡಕ ಹಾಕಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದ, ಮನೆ ತುಂಬೆಲ್ಲಾ ಹೂನಗೆ ಚೆಲ್ಲಿತ್ತು. *ಕಪ್ಪು ಕನ್ನಡಕ ಅಮ್ಮನಿಗೆ ಚಂದವಾಗಿ ಒಪ್ಪಿತ್ತು,* ರಾತ್ರಿ ಗಂಜಿ ಕುಡಿದು, ಗುಳುಗಿ ನುಂಗಿ ಅಮ್ಮ ಮಲಗಿದ್ದಳು. ನಿತ್ಯದ ದಿನಚರಿಯಂತೆ ನಾನೆದ್ದು ರೆಡಿಯಾಗಿ ಕಾಲೇಜಿಗೆ ಹೊರಟು ನಿಂತಿದ್ದೆ, ಇನ್ನೂ ಹಾಸಿಗೆಯಲ್ಲಿ ಮಗ್ಗಲು ಹೊರಳಿಸಿದ್ದ ಅಮ್ಮನನ್ನ ಕಂಡು ಯಾಕೆ ಅಮ್ಮ ಸಪ್ಗಿದ್ದೀಯಾ? ನಿದ್ದೆ ಆಗಿಲ್ವಾ? ಎಂದಿದ್ದಕ್ಕೆ; ಕಣ್ಣು ಸ್ವಲ್ಪ ನೋವಾಗಿದೆ, ಎರಡು ಮೂರು ಬಾರಿ ಭೇದಿ ಆಯ್ತು, ಎದ್ದು ಹೋಗಿ ಬಂದು, ಹೋಗಿ ಬಂದು ಕೈ-ಕಾಲು ಸೋತಂಗಾಗಿದೆ ಅಂದ್ಲು, ಮಗನಿಗೆ ಮೆಡಿಕಲ್ ಶಾಪ್ ನಿಂದ ಒಂದೆರಡು ಭೇದಿ ಗುಳಿಗೆ ತಂದು ಕೊಡು ಅಮ್ಮ ನುಂಗ್ತಾಳೆ, ಆರಾಮ್ ಅನಿಸಿಲ್ಲ ಅಂದ್ರೆ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಹೇಳಿ ನಾನು ಕಾಲೇಜಿಗೆ ಹೊರಟೆ, ನಾನಿನ್ನೂ ಕಾಲೇಜ್ ಮುಟ್ಟಿದ್ದಿಲ್ಲ.., ನಂತರದ ಬೆಳವಣಿಗೆ ಆಘಾತವನ್ನುಂಟು ಮಾಡಿತ್ತು. ಅಮ್ಮನಿಗೆ ಮತ್ತೆರಡು ಬಾರಿ ಭೇದಿ ಆಯ್ತಂತೆ, ಸುಸ್ತು, ಡಾಕ್ಟರನ್ನು ಕರೆಸಿ ಸೂಜಿ ಹಾಕ್ಸರಿ ಅಂತ ಕೇಳಿದ್ದಾಳೆ, ಮನೆಯಲ್ಲಿ ಅತ್ತಿಗೆ, ರಶ್ಮಿ, ದೀಪಾ, ಶಶಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳಿದ್ದರು, ಅಪ್ಪ, ಅಣ್ಣ ಎಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದರು. ದೈವಿಕ್ [ಮರಿ ಮೊಮ್ಮಗ] ಎದ್ದು ಕೂಡಲೇ ಮನೆಯ ಮುಂದಿನ ಮೆಟ್ಟಿಲ ಮೇಲೆ ಆತನನ್ನು ತೊಡೆಯಮೇಲೆ ಕೂಡಿಸಿಕೊಂಡು ಮುದ್ದು ಮಾಡುತ್ತಾ.., ದಾರಿಗುಂಟ ಹೋಗಿ ಬರೋರನ್ನು ಎದ್ರಾ, ಉಂಡ್ರಾ- ತಿಂದ್ರಾ ಎಂದು ಲೋಕಾಭಿರಾಮವಾಗಿ ಮಾತನಾಡಿಸುತ್ತಾ, ಆಗ್ತಾನೇ ಗೂಡಿನಿಂದ ಹೊರಬಿದ್ದ ಕೋಳಿ-ಮರಿಗಳಿಗೆ ಕಾಳು ಹಾಕುತ್ತಾ ಆಡಿಸುತ್ತಾ ಕೂಡುವುದು ಅಮ್ಮನದು  ನಿತ್ಯದ ದಿನಚರಿ. ಎಂದಿನಂತೆ ಇಂದು ಮೊಮ್ಮಗ ಬಂದು ಅವ್ವ ಅವ್ವ ಎಂದು ಕರೆದಾಗ ದೈವಿಕ್ ಇವತ್ತು ನನ್ನ ಕರಿಬೇಡಪ್ಪಾ..,   ನನ ಹತ್ತಿರ ಬರಬೇಡಪ್ಪಾ.., ಹೋಗು ಎಂದು ತನ್ನೊಳಗಿನ ಚಡಪಡಿಕೆ, ದುಃಖದಿಂದ ಗದರಿಸಿದಳೋ ಏನೋ? ಅವನು ಅಳುತ್ತಾ ಬಂದವನು ಮತ್ತೆ ಅವ್ವ ಎನ್ನಲಿಲ್ಲ. ಪಕ್ಕದ ಮನೆಯವರು ಎದುರಿನ ಮನೆಯ ಕುಮಾರಸ್ವಾಮಿ ಅಣ್ಣ, ಆತನ ಮಗ ಕಾರ್ತಿಕ್ ಓಡಿ ಬಂದಿದ್ದಾರೆ, ಲೋಕಲ್ [ಆರ್.ಎಮ್.ಪಿ] ಡಾಕ್ಟರ್ ನ ಕರೆಸಿ ಒಂದು ಇಂಜೆಕ್ಷನ್ ಮಾಡಿಸಿದ್ದಾರೆ, ಅಮ್ಮ ಸುಸ್ತಾಗಿ ಮಲಗ್ಬಿಟ್ಟಿದ್ದಾಳೆ, *ಮೈ-ಕೈ ಎಲ್ಲಾ ತಣ್ಣಗಾಗಿದ್ದನ್ನು ಕಂಡು ಅತ್ತಿಗೆ ಒಲಿಬೂದಿ ತಂದು ಕೈಕಾಲಿಗೆ ತಿಕ್ಕಿದ್ದಾಳೆ,*  ತಡಮಾಡದೆ.., ಕೂಡಲೇ ಆಟೋ ಬಾಡಿಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ, *ಆಸ್ಪತ್ರೆಯ ಆವರಣದಲ್ಲಿ ಡಾಕ್ಟರ್ ಓಡಿ ಬಂದು ಚೆಕ್ ಮಾಡಿ ಅಮ್ಮ ಇನ್ನಿಲ್ಲ* ಎಂದು ದೃಢೀಕರಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಕಾಲೇಜಿಂದ ಹೊರಬಿದ್ದೆ ಮನೆಗೆ ಬಂದು ಸೇರುವಷ್ಟರಲ್ಲಿ ಒಂದು ಗಂಟೆ ಆಗಿತ್ತು, ಮನೆಯ ಮುಂದೆ ಪೆಂಡಾಲ್ ಹಾಕಿ, ಚಪ್ಪರದಡಿಯಲ್ಲಿ ಮಂಚದ ಮೇಲೆ ಹೊಸ ಸೀರೆ ತೊಟ್ಟು ಮಂದಹಾಸದಿ ಮಲಗಿದ್ದ ಅಮ್ಮನ ಮುಖದಲ್ಲಿ ಚೆಲುವಿತ್ತು!  ಅಮ್ಮನ ಬಳಗ ಅಪ್ಪನ ಬಳಗ, ಬಂಧು-ಬಳಗ ಆಗಲೇ ನೆರದಿತ್ತು, ಅವರುಗಳು ತಂದ ಹೂಮಾಲೆಗಳು ರಾಶಿ ರಾಶಿ ಅಮ್ಮನ ಮೇಲೆ ಬಿದ್ದಿತ್ತು, ಅಮ್ಮನ ಜಾತ್ರೆಗೆ ತೇರು ಸಿದ್ದಗೊಂಡಿತ್ತು.., ಮಂತ್ರ ಘೋಷ, ಸನಾಯಿ ನಾಧಾ ಮೊಳಗುತ್ತಲೇ  ಅಮ್ಮನ ತೇರು ಮುಂದೆ ಮುಂದೆ ಸಾಗಿದರೆ ನಾವು ಅವರತ್ತ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ಹಿಂದೆ ಹಿಂದೆ ಸಾಗಿದೆವು ಮಸಣದ ಕಡೆಗೆ.., *ಅಮ್ಮನ ಸಿದಿಗೆ ಹೊತ್ತವರು ಹೆಗಲು ಬದಲಿಸುತ್ತಾ.., ಅಮ್ಮನಿಗೆ ನೋವಾಗದಿರಲೆಂದು ನಿಧಾನ ಹೆಜ್ಜೆ ಹಾಕುತ್ತಾ ಸಾಗಿ* ಕುಣಿಯ ತಲುಪಿ ಅಲ್ಲಿ ಅಮ್ಮನಿಗೆ ಕಡೆಯದಾಗಿ ಬಾಯಿಗೆ ನೀರು ಬಿಟ್ಟು, ಅಂತಿಮ ಪೂಜೆ-ಪುನಸ್ಕಾರ ಮಾಡಿ ಕೈ ಮುಗಿದು ನಿಂತೆವು..,  *”ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿ ತಿಳಿನೀರು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಕಂದಮ್ನ ಪಾದದ ಧೂಳ ತೊಳದೇನ”* ಎಂಬ ಅಮ್ಮನ ಜೋಗುಳ ಕೇಳಿ ಮಲಗಿದ *ಮಕ್ಕಳೆಲ್ಲರೂ ಸೇರಿ ಅಮ್ಮನನ್ನು ಗುಂಡಿಯಲಿಟ್ಟು ಮಣ್ಣುಗೂಡಿಸಿ ಬರುವಾಗ ಕರುಳು ಕಿತ್ತು ಬಾಯ್ಗೆ ಬಂದಂತಾಯ್ತು,* ಅಮ್ಮ ಪಾಪ ಅದೆಷ್ಟು ನೊಂದುಕೊಂಡಳೋ..? ಒಬ್ಬಂಟಿಯಾಗಿ ಹೋದಳು, ಕುಣಿ ಮುಂದೆ ನಿಂತುಕೊಂಡು ಮಾದಿಗರ ಚಂದಪ್ಪ.., ಮಸಣದಿ ನೆರೆದ ಜನಸ್ತೋಮದೆದಿರು ಸಲಿಕೆಗೆ ಒಂದು ನಾಣ್ಯದಿಂದ ಗಂಟೆಯಂತೆ ಭಾರಿಸುತ್ತ – *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* ಎಂದು ಮೂರೂ ಬಾರಿ ಸಾರಿದ ಮೇಲೆ; ಅಮ್ಮನ ಅಗಲಿಕೆಯು ಕಣ್ಣು ಕಳೆದುಕೊಂಡ ಕುರುಡರಾದಂತಹ ಅನುಭವ, ಅಕ್ಷರಶಃ ನನ್ನನ್ನು ಅನಾಥಳನ್ನಾಗಿಸಿ ಹೊರಟೆ ಬಿಟ್ಟಳು ಬಾರದ ಲೋಕಕ್ಕೆ, *ಸಗ್ಗದ ಸಿರಿ-ಸೀಮೆಯ, ಸೊಬಗ ಸವಿಯಲು ತನ್ನೆರೆಡು ಕಣ್ಗಳು ಸಾಲದೆಂದು ಲೆನ್ಸ್ ಹಾಕಿಸಿಕೊಂಡು ಹೋದ ಅಮ್ಮ ಮತ್ತೆ ಎಂದಿಗೂ ಬಾರಳು, ಆದರೆ ಅಲ್ಲಿ ಕಂಡುಂಡ ಅನುಭವಗಳನ್ನು ಅಮ್ಮ ಚಿತ್ತದಿ ದಾಖಲಿಸಿಕೊಂಡು ಮರೆಯದೆ ನನಗೆ ಟಪಾಲು ಬರೆದು ಕಳುಹಿಸಬಹುದು* ಎಂದು ಆಸೆಗಣ್ಣಲಿ ಅಂಚೆಯಣ್ಣನ ದಾರಿ ಕಾಯುತ್ತಿರುವೆ. ನನ್ನ ತಂಗಿ, ಮಗ, ಮಗಳು ಆಡ್ಯಾಡಿಕೊಂಡು ಅತ್ತು ಹಗುರಾದರು, ನೆರೆದವರು ಏನೆಂದುಕೊಂಡರೋ ಏನೋ? ನನ್ನ ಬಗ್ಗೆ ನನಗೆ ಅಳಲು ಬಾರದು, ಕಣ್ಣೀರು ತನ್ತಾನೇ ಸುಮ್ಮನೆ ತಣ್ಣಗೆ ಸುರಿವ ಜಿಟಿ ಜಿಟಿ ಮಳೆಯಂತೆ ಜಿನುಗುಟ್ಟುತ್ತಿತ್ತಿ.., *ಅವ್ಯಕ್ತ ಭಾವನೆಗಳನ್ನು ಹತ್ತಿಕ್ಕಲಾಗದೆ.., ಬರೆದು ಹಗುರ ಆಗೋಣವೆಂದುಕೊಂಡು.., ಒಂದೇ ಉಸಿರಿನಲ್ಲಿ ಬರೆದೆ..,* ನನ್ನ ಬರಹವನ್ನು ಮತ್ತೆ ಮತ್ತೆ ನಾನೇ ಮನಸಿನಲ್ಲಿ ಓದಿಕೊಂಡಂತೆಲ್ಲ; ನನ್ನ ಮನ‌ಸಿನ ನೋವೇ ಅಕ್ಷರ ರೂಪು ಪಡೆದಿವೆಅನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ ಎನಿಸಿ *ಅಳು ಜುಳು-ಜುಳು ದಳಿ-ದಳಿ  ಹರಿಯುತ್ತಿತ್ತು.*  *ಅಮ್ಮ ಕನಸಿನಲ್ಲಿ ಬರಬಹುದೂ, ತನ್ನ ಸಾವಿಗೂ ಮುನ್ನ ಅನುಭವಿಸಿದ ಚಡಪಡಿಕೆಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು  ಎನ್ನುವ ನಿರೀಕ್ಷೆಯಲ್ಲಿ ಮಲಗಿದ್ದೇ,* ಅಮ್ಮ ತನ್ನ ಏನೊಂದೂ ಕಷ್ಟ ಹೇಳಿಕೊಳ್ಳದೆ ಪಕ್ಕದಿ ಕೂತು ತಲೆ ನೇವರಿಸುತ್ತಾ ಜೋಗುಳ ಹಾಡುತ್ತಿದ್ದಳು ನಾನು ಹಸುಗಂದಮ್ಮನಂತೆ ನಿದ್ದೆಗೆ ಜಾರಿದೆ. ಡಾ. ಯಲ್ಲಮ್ಮ ಕೆ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ. Read Post »

You cannot copy content of this page

Scroll to Top