ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಎಡ್ಗರ್‌ ಅಲಾನ್‌ ಪೋನ ಕತೆ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” ನ ರೂಪಾಂತರ “ಕೆಂಪು ಮೃತ್ಯುವಿನ ಛದ್ಮವೇಷ”ಬಿ. ವಿ. ರಾಮಪ್ರಸಾದ್ ಅವರಿಂದ

ಅನುವಾದ ಸಂಗಾತಿ ಬಿ. ವಿ. ರಾಮಪ್ರಸಾದ್ ಎಡ್ಗರ್‌ ಅಲಾನ್‌ ಪೋ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” “ಕೆಂಪು ಮೃತ್ಯುವಿನ ಛದ್ಮವೇಷ” ಕೆಂಪು ಮೃತ್ಯುವಿನ ಛದ್ಮವೇಷ ಎಡ್ಗರ್‌ ಅಲಾನ್‌ ಪೋನ ಕತೆ ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌ ನ ರೂಪಾಂತರ “ಕೆಂಪು ಮೃತ್ಯು” ದೀರ್ಘ ಕಾಲದವರೆಗೆ ನಾಡನ್ನು ಹಾಳುಗೆಡವಿತ್ತು. ಅಲ್ಲಿಯವರೆಗಿನ ಯಾವ ಜಾಡ್ಯವೂ ಅಷ್ಟು ಮಾರಣಾಂತಿಕ ಅಥವಾ ವಿಕಾರವಾಗಿರಲಿಲ್ಲ. ರಕ್ತವೇ – ರಕ್ತದ ಕೆಂಪು ಮತ್ತು ಅದರ ಭೀಕರತೆಯೇ – ಅದರ ಅವತಾರ, ಮೊಹರು. ಚುಚ್ಚಿದಂತ ನೋವು, ಮತ್ತು ತಲೆ ತಿರುಗುವಿಕೆ, ಮತ್ತು ರಂಧ್ರಗಳ ಮೂಲಕ ಸೋರುತ್ತಿರುವ ರಕ್ತ ಮತ್ತು ಕೀವು, – ಇವು ಅದರ ಲಕ್ಷಣಗಳು. ಬಲಿಪಶುವಿನ ದೇಹದ, ಅದರಲ್ಲೂ ಮುಖದ ಮೇಲಿನ ಕಡುಕೆಂಪು ಕಲೆಗಳು ಅವನನ್ನು ಕ್ರಿಮಿಯಾಗಿಸಿ ಸಹಚರರ ಸಹಾಯ ಹಾಗು ಸಹಾನುಭೂತಿಯಿಂದ  ದೂರ ಮಾಡುತ್ತಿದ್ದವು.  ಮತ್ತು ರೋಗ ಬರುವುದು, ಜೋರಾಗುವುದು, ಮತ್ತು ಸಾವಿನಲ್ಲಿ ಕೊನೆಗೊಳ್ಳುವುದು – ಕೇವಲ ಅರ್ಧ ತಾಸಿನ ಘಟನೆಗಳಾಗಿದ್ದವು. ಆದರೆ ದೊರೆ ಪ್ರಾಸ್ಪೆರೊ ಖುಷಿಯಾಗಿದ್ದ, ನಿರ್ಭೀತನಾಗಿದ್ದ ಮತ್ತು ಜಾಣನಾಗಿದ್ದ. ತನ್ನ ನಾಡಿನ ಜನಸಂಖ್ಯೆ ಅರ್ಧಕರ್ಧ ಅಳಿದುಹೋದಾಗ, ತನ್ನ ಆಸ್ಥಾನಿಕರಲ್ಲಿ ಗಂಡು ಹೆಣ್ಣು ಸೇರಿದಂತೆ ಗಟ್ಟಿಮುಟ್ಟಾದ ಮತ್ತು ಉಲ್ಲಾಸದಿಂದ ತುಂಬಿರುವ ಸಾವಿರ ಜನರನ್ನು ಸನ್ನಿಧಿಗೆ ಕರೆದು  ಕೋಟೆಯೊಂದರಲ್ಲಿ ಸಂಪೂರ್ಣ ಪ್ರತ್ಯೇಕ ವಾಸಕ್ಕೆ ತೆರಳಿದ. ಆ ಕೋಟೆಯೋ, ವಿಶಾಲವಾದ ಮತ್ತು ಮಹಾವೈಭವದ ಆಕೃತಿ – ದೊರೆಯ ವಿಲಕ್ಷಣ ಆದರೂ ಭವ್ಯ ಅಭಿರುಚಿಯ ಪ್ರತೀಕ. ಆ ಕೋಟೆಗೆ ಎತ್ತರದ ಗಟ್ಟಿಮುಟ್ಟಾದ ಗೋಡೆಯಿತ್ತು. ಈ ಗೋಡೆಗೆ ಕಬ್ಬಿಣದ ದ್ವಾರಗಳಿದ್ದವು. ಒಳಸೇರಿಕೊಂಡ ಆಸ್ಥಾನಿಕರು ಕುಲುಮೆಗಳನ್ನು ಮತ್ತು ಭಾರವಾದ ಸುತ್ತಿಗೆಗಳನ್ನು ತಂದು ಅಗಣಿಗಳನ್ನು ಜೋಡಿಸಿದರು. ಒಳಗಿನ ಹತಾಶೆ ಅಥವಾ ಉನ್ಮಾದದ ಹಠಾತ್‌ ಪ್ರಚೋದನೆಗಳಿಗೆ ಆಗಮನದ್ದಾಗಲೀ, ನಿರ್ಗಮನದ್ದಾಗಲೀ ಯಾವುದೇ ದಾರಿಯಿರಬಾರದೆಂದು ತೀರ್ಮಾನ ಮಾಡಿದರು. ಕೋಟೆಯಲ್ಲಿ ಸಾಕಷ್ಟು ಸಾಮಾನು ಸರಂಜಾಮುಗಳಿದ್ದವು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿರುವುದರಿಂದ ಆಸ್ಥಾನಿಕರು ಸೋಂಕಿಗೆ ಸವಾಲೆಸೆಯುವುದು ಸಾಧ್ಯವಿತ್ತು. ಹೊರ ಜಗತ್ತಿಗೆ ಏನಾದರೂ ಆಗಲಿ. ಅದಕ್ಕಾಗಿ ದುಃಖಿಸುವುದಾಗಲೀ, ಅದರ ಬಗ್ಗೆ ಚಿಂತಿಸುವುದಾಗಲೀ, ಮೂರ್ಖತನ. ದೊರೆ ವಿಲಾಸಕ್ಕೆ ಅಗತ್ಯವಾದ ಎಲ್ಲದ್ದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದ. ಅಲ್ಲಿ ವಿದೂಷಕರಿದ್ದರು. ಅಲ್ಲಿ ಆಶುಕವಿಗಳಿದ್ದರು, ಅಲ್ಲಿ ನರ್ತಕರಿದ್ದರು, ಅಲ್ಲಿ ಸಂಗೀತಗಾರರಿದ್ದರು, ಅಲ್ಲಿ ಸೌಂದರ್ಯವಿತ್ತು, ಅಲ್ಲಿ ಹೆಂಡವಿತ್ತು. ಇವೆಲ್ಲಾ ಮತ್ತು ರಕ್ಷಣೆಗೆ ಭಟರು ಒಳಗೆ: ಹೊರಗಡೆ ʼʼಕೆಂಪು ಮೃತ್ಯುʼʼ. ಈ ಗುಪ್ತವಾಸದಲ್ಲಿರುವ ಐದನೇ ಅಥವಾ ಆರನೇ ತಿಂಗಳು ಹತ್ತಿರ ಬಂದಾಗ, ಮತ್ತು ಹೊರಗಡೆ ಮಹಾಮಾರಿ ರೌದ್ರಾವತಾರದಲ್ಲಿ ಅಬ್ಬರಿಸುತ್ತಿರುವಾಗ, ದೊರೆ ತನ್ನ ಸಾವಿರ ಹಿಂಬಾಲಕರಿಗೆ ಅಸಾಮಾನ್ಯ ಭವ್ಯತೆಯ ಛದ್ಮವೇಷದ ಔತಣಕೂಟವನ್ನು ಏರ್ಪಟಿಸಿದನು. ಆ ಔತಣಕೂಟವೋ, ಅತೀವ ಭೋಗವಿಲಾಸದ್ದಾಗಿತ್ತು. ಆದರೆ ಮೊದಲು ಆ ಔತಣಕೂಟ ನಡೆದ ವಿಲಾಸ ಖಾನೆಯ ಕೊಠಡಿಗಳ ವಿವರಣೆ ಕೊಡುತ್ತೇನೆ ಇರಿ. ಅದು ಏಳು ಕೊಠಡಿಗಳ ಒಂದು ಸೌದ. ಅನೇಕ ಸೌದಗಳಲ್ಲಿ ಕೊಠಡಿಗಳು ಸಾಮಾನ್ಯವಾಗಿ ಒಂದರ ಪಕ್ಕ ಒಂದು ಮತ್ತು ಎದುರು ಬದುರು ಇದ್ದು ಅಷ್ಟನ್ನು ಒಟ್ಟಿಗೆ ನೋಡುವುದಕ್ಕಾಗುವ ಹಾಗಿರುತ್ತದೆ. ಆದರೆ ಇಲ್ಲಿ ಹಾಗಿರಲಿಲ್ಲ; ದೊರೆಯ ಅತಿರೇಕಗಳ ಮೇಲಿನ ಮೋಹ ಹಾಗಿರಲು ಬಿಡುತ್ತಿರಲಿಲ್ಲ. ಕೋಣೆಗಳು ಹೇಗೆ ಅಡ್ಡಾದಿಡ್ಡಿಯಾಗಿದ್ದವೆಂದರೆ ಒಮ್ಮೆಗೆ ಒಂದು ಕೋಣೆ ಮಾತ್ರ ಕಾಣುತಿತ್ತು. ಪ್ರತಿ ಇಪ್ಪತ್ತು ಮೂವತ್ತು ಗಜಗಳಲ್ಲಿ ಒಂದು ಹಠಾತ್‌ ತಿರುವಿತ್ತು, ಮತ್ತು ಪ್ರತೀ ತಿರುವಿನಲ್ಲೂ ಏನೋ ಹೊಸ ದೃಶ್ಯ. ಪ್ರತೀ ಗೋಡೆಯ ಮಧ್ಯಭಾಗದಲ್ಲಿ, ಎಡಕ್ಕೆ ಹಾಗು ಬಲಕ್ಕೆ, ಕಿರಿದಾದ, ನೀಳವಾದ ಕಿಟಕಿಗಳು. ಈ ಕಿಟಕಿಗಳಿಗೆ ಪ್ರತಿ ಕಿಟಕಿಯ ಒಳಗಿನ ಕೋಣೆಯಲ್ಲಿನ ಒಳಾಂಗಣ ವಿನ್ಯಾಸದ ಬಣ್ಣದ್ದೇ ಗಾಜು. ಉದಾಹರಣೆಗೆ, ತೀರಾ ಪೂರ್ವದ ಕೊಠಡಿಯಲ್ಲಿನ ಅಲಂಕಾರಿಕ ಬಟ್ಟೆಗಳ ಬಣ್ಣ ನೀಲಿ – ಮತ್ತು ಅದರ ಕಿಟಕಿಯ ಗಾಜುಗಳು ಅಚ್ಚ ನೀಲಿ ಬಣ್ಣದವು. ಎರಡನೇ ಕೊಠಡಿಯ ತೂಗು ಬಟ್ಟೆಗಳು ಬೂದಿ ಬಣ್ಣದ್ದು; ಅದರ ಕಿಟಕಿಯ ಗಾಜೂ ಬೂದಿ ಬಣ್ಣದ್ದು. ಮೂರನೆಯ ಕೊಠಡಿ ಹಸಿರುಮಯ, ಅದರ ಕಿಟಕಿಯ ಗಾಜುಗಳೂ ಅಷ್ಟೆ. ನಾಲಕ್ಕನೆಯ ಕೊಠಡಿಯ ಅಲಂಕಾರ ಹಾಗು ಬಣ್ಣ ಕಿತ್ತಳೆ, ಐದನೆಯದು ಬಿಳಿ, ಆರನೆಯದು ನೇರಳೆ. ಏಳನೆಯ ಕೊಠಡಿಯಲ್ಲಿ ಕಪ್ಪು ವೆಲ್ವೆಟ್‌ ಅಲಂಕಾರಿಕ ಬಟ್ಟೆಗಳು ತಾರಸಿ ಗೋಡೆಗಳ ಮೇಲೆಲ್ಲ ಆವರಿಸಿ ಕೆಳಗಿನ ಅದೇ ಬಣ್ಣದ ಅದೇ ರೀತಿಯ ನೆಲಹಾಸಿನ ಮೇಲೆ ಮಡಿಕೆ ಮಡಿಕೆಯಾಗಿ ಬಿದ್ದಿದ್ದವು. ಆದರೆ ಈ ಕೊಠಡಿಯಲ್ಲಿ ಮಾತ್ರ ಒಳಗಿನ ಅಲಂಕಾರದ ಬಣ್ಣಕ್ಕೆ ಸಮನಾಗಿ ಕಿಟಕಿ ಗಾಜಿನ ಬಣ್ಣವಿರಲಿಲ್ಲ. ಕಿಟಕಿ ಗಾಜುಗಳು ಕಡುಕೆಂಪಿನ ಬಣ್ಣದ್ದಾಗಿದ್ದವು – ರಕ್ತ ಕೆಂಪು ಬಣ್ಣ. ಏಳೂ ಕೊಠಡಿಗಳಲ್ಲಿ ಸುವರ್ಣ ಆಭರಣಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಆಥವಾ ತಾರಸಿಯಿಂದ ತೂಗುಹಾಕಿಸಿಕೊಂಡು ಇದ್ದವೇ ಹೊರತು ಯಾವುದರಲ್ಲೂ ದೀಪಗಳಾಗಲೀ, ದೀಪಸ್ತಂಭಗಳಾಗಲೀ ಇರಲಿಲ್ಲ. ಈ ವಿಲಾಸ ಖಾನೆಯ ಯಾವುದೇ ಕೊಠಡಿಗಳಲ್ಲಿ ದೀಪದಿಂದಾಗಲೀ, ಹಣತೆಯಿಂದಾಗಲೀ ಹರಡುವ ಬೆಳಕಿರಲಿಲ್ಲ. ಆದರೆ ಪ್ರತೀ ಕೊಠಡಿಯ ಹೊರಗಿನ ಹಜಾರದಲ್ಲಿ, ಪ್ರತೀ ಕಿಟಕಿಯ ಹೊರಗೆ ಒಂದು ದೊಡ್ಡ ಪಂಜು ಬೆಂಕಿ ಉಗುಳುತ್ತಾ ಬಣ್ಣದ ಗಾಜಿನ ಮೂಲಕ ಕಿರಣಗಳನ್ನು ತೂರಿಸಿ ಪ್ರತೀ ಕೊಠಡಿಗೆ  ಕಣ್ಣು ಕುಕ್ಕುವ ಬೆಳಕನ್ನು ಚೆಲ್ಲುತಿತ್ತು. ಮತ್ತು ಹೀಗೆ ಅನೇಕ ಆಡಂಬರದ ಭ್ರಾಮಕ ರೂಪಗಳು ಸೃಷ್ಟಿಯಾಗಿದ್ದವು. ಆದರೆ ಪಶ್ಚಿಮದ ಅಥವಾ ಕಪ್ಪು ಕೋಣೆಯಲ್ಲಿ ರಕ್ತ ಸಿಂಚಿತ ಗಾಜುಗಳ ಮೂಲಕ ಕಪ್ಪು ಪರದೆಗಳ ಮೇಲೆ ಹರಡಿದ ಬೆಂಕಿ-ಬೆಳಕಿನ ಪ್ರತಿಫಲನ ಎಷ್ಟು ಭಯಾನಕವಾಗಿತ್ತೆಂದರೆ, ಆ ಕೊಠಡಿಯನ್ನು ಪ್ರವೇಶಿಸಿದವರ ಮುಖ ಗಾಭರಿಯನ್ನು ವ್ಯಕ್ತಪಡಿಸುತಿತ್ತು ಮತ್ತು ಆ ಆವರಣದೊಳಗೆ ಕಾಲಿಡುವ ಧೈರ್ಯವನ್ನು ಮಾಡುವವರಾರೂ ಆ ಕೂಟದಲ್ಲಿ ಇರಲಿಲ್ಲ. ಈ ಕೊಠಡಿಯಲ್ಲೇ ಅದರ ಪಶ್ಚಿಮದ ಗೋಡೆಗೆ ನೇತುಹಾಕಿಕೊಂಡು ಕಾಡಿಗೆ ಕಪ್ಪು ಬಣ್ಣದ  ಮತ್ತಿ ಮರದಿಂದ ಮಾಡಿದ ಒಂದು ದೈತ್ಯ ಗಡಿಯಾರವಿತ್ತು. ಅದರ ಲೋಲಕ ನೀರಸ, ಗಂಭೀರ, ಏಕತಾನತೆಯ ಠೇಂಕಾರವನ್ನು ಮಾಡುತ್ತಾ ಆಚೆ ಈಚೆ ತೋಯ್ದಾಡುತ್ತಿತ್ತು. ಮತ್ತು ನಿಮಿಷದ ಮುಳ್ಳು ಒಂದು ಸುತ್ತು ಬಂದು ಗಂಟೆಯ ಘಂಟೆ ಬಾರಿಸಬೇಕಾದಾಗ ಆ ಗಡಿಯಾರದ ಲಜ್ಜೆಗೆಟ್ಟ ಶ್ವಾಸಕೋಶಗಳಿಂದ ಸ್ಪಷ್ಟವಾದ, ಗಟ್ಟಿಯಾದ, ಆಳವಾದ, ಮತ್ತು ಸಂಪೂರ್ಣವಾಗಿ ಸಂಗೀತಮಯವಾದ, ಆದರೆ  ತೀರ ವಿಚಿತ್ರ ಸ್ವರ ಮತ್ತು ಭಾವದಿಂದ ಕೂಡಿದ ಸದ್ದು ಹೊರಡುತಿತ್ತು. ಅದು ಎಷ್ಟು ವಿಲಕ್ಷಣವಾಗಿರುತ್ತಿತ್ತೆಂದರೆ, ಸಂಗೀತಗಾರರು ಆ ಸದ್ದಿಗೆ ಕಿವಿಕೊಡಲು ತಮ್ಮ ಪ್ರದರ್ಶನಕ್ಕೆ ವಿರಾಮ ಕೊಡಬೇಕಾಗುತಿತ್ತು; ಹೀಗಾಗಿ ನರ್ತಕರು ತಮ್ಮ ನರ್ತನವನ್ನು ನಿಲ್ಲಿಸಬೇಕಾಗುತಿತ್ತು; ಮತ್ತು ಆ ಇಡೀ ವಿಲಾಸಮಯೀ ಗುಂಪಿಗೆ ಸ್ವಲ್ಪ ಸಮಯದ ಆಯೋಮಯ ಪರಿಸ್ಥಿತಿ ಎದುರಾಗುತಿತ್ತು; ಮತ್ತು ಗಡಿಯಾರದ ಘಂಟೆ ಮೊಳಗುತ್ತಿರುವವರೆಗೆ ಅಳುಕಿನವರು ಪೇಲವವಾಗುತಿದ್ದರು ಮತ್ತು ಹೆಚ್ಚು ವಯಸ್ಸಾದವರು ಮತ್ತು ಸ್ತಿಮಿತ ಸ್ವಭಾವದವರು ಗೊಂದಲಮಯ ಸ್ವಪ್ನದಲ್ಲೋ, ಧ್ಯಾನದಲ್ಲೋ ಇರುವಂತೆ ಹಣೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. ಆದರೆ ಮಾರ್ದನಿಗಳು ಸಂಪೂರ್ಣವಾಗಿ ನಿಂತು ಹೋದಾಗ, ಆ ಕೂಟವನ್ನು ಹಗುರವಾದ ನಗು ಆವರಿಸಿಕೊಳ್ಳುತಿತ್ತು; ಸಂಗೀತಗಾರರು ತಮ್ಮದೇ ಪುಕ್ಕಲುತನವನ್ನು, ದಡ್ಡತನವನ್ನು  ಅಣಗಿಸಿಕೊಳ್ಳುವಂತೆ ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಿದ್ದರು, ಮತ್ತು  ಮುಂದಿನ ಬಾರಿ ಗಡಿಯಾರದ ಘಂಟೆ ಬಾರಿಸುವಾಗ ಈ ರೀತಿಯ ಅಂಜಿಕೆಗೆ ಎಡೆ ಮಾಡಿಕೊಡಬಾರದೆಂದು ತಮ್ಮ ತಮ್ಮಲ್ಲಿ ವಾದ ಮಾಡಿಕೊಳ್ಳುತ್ತಿದ್ದರು; ಮತ್ತೆ ಅರವತ್ತು ನಿಮಿಷಗಳು ಆದ ಮೇಲೆ ( ಅದು ಹರಿಯುತ್ತಿರುವ ಸಮಯದ ಮೂರು ಸಾವಿರ ಮತ್ತು ಆರು ನೂರು ಕ್ಷಣಗಳನ್ನು ಒಳಗೊಂಡಿರುತ್ತದೆ), ಮತ್ತೊಮ್ಮೆ ಘಂಟೆಯ ನಾದ ಮೊಳಗುತಿತ್ತು, ಮತ್ತು ಮತ್ತೆ ಅದೇ ಆಯೋಮಯತೆ, ಮತ್ತು ನಡುಕ ಮತ್ತು ಧ್ಯಾನ, ಹಿಂದಿನಂತೆ.  ಇದೆಲ್ಲಾ ಹೇಗೇ ಇದ್ದರೂ ಅದು ಒಂದು ವಿಲಾಸೀ ಹಾಗು ಅದ್ದೂರಿ ಉತ್ಸವವಾಗಿತ್ತು. ದೊರೆಯದು ವಿಲಕ್ಷಣವಾದ ಅಭಿರುಚಿ. ಬಣ್ಣ ಮತ್ತು ಅಲಂಕಾರದಲ್ಲಿ ಅವನ ಗ್ರಹಿಕೆ ಸೂಕ್ಷವಾಗಿತ್ತು. ಕೇವಲ ಕಟ್ಟಳೆಗೋಸ್ಕರ ಮಾಡುವ ಸಿಂಗಾರವನ್ನು ಅವನು ಕೈ ಬಿಟ್ಟನು. ಅವನ ಏರ್ಪಾಡುಗಳಲ್ಲಿ ದಿಟ್ಟತನ ಹಾಗೂ ಉನ್ಮಾದವಿತ್ತು ಮತ್ತು ಅವನ ಕಲ್ಪನೆಗಳಲ್ಲಿ ಒಂದು ಒರಟು ಹೊಳಪಿತ್ತು.  ಅವನು ಹುಚ್ಚ ಅಂದುಕೊಂಡ ಕೆಲವರಿದ್ದರು. ಅವನ ಅನುಯಾಯಿಗಳು ಅವನು ಹುಚ್ಚನಲ್ಲ ಅನ್ನುತ್ತಿದ್ದರು. ಅವನು ಹುಚ್ಚನಲ್ಲ ಎಂದು ಖಾತ್ರಿಯಾಗಬೇಕಾದರೆ ಅವನನ್ನು ಕೇಳಿಸಿಕೊಳ್ಳಬೇಕಾಗಿತ್ತು ಮತ್ತು ನೋಡಬೇಕಾಗಿತ್ತು ಮತ್ತು ಮುಟ್ಟಬೇಕಾಗಿತ್ತು. ಈ ಭವ್ಯ ಉತ್ಸವದ ಎಲ್ಲಾ ಚರ ಸಿಂಗಾರಗಳನ್ನೂ ಹೆಚ್ಚು ಕಮ್ಮಿ ಅವನೇ ಯೋಜಿಸಿದ್ದನು; ಮತ್ತು ಅವನ ಅಭಿರುಚಿಯೇ ಆ ಛದ್ಮವೇಷಕೂಟದ ಸ್ವಭಾವವನ್ನು ನಿರ್ದೇಶಿಸಿತ್ತು. ಅವು ಕಂಡಿತಾ ವಿಕೃತವಾಗಿದ್ದವು. ಅಲ್ಲಿ ಸಾಕಷ್ಟು ತಳುಕು ಮತ್ತು ಬಳುಕು ಮತ್ತು ಹೊಳಪು ಮತ್ತು ಭ್ರಾಂತು ಇದ್ದವು. ಅಸಂಮಜಸ ಕೈಕಾಲು ಮತ್ತು ಉಡುಪುಗಳಿದ್ದ ವಿಚಿತ್ರ ಆಕೃತಿಗಳಿದ್ದವು. ಹುಚ್ಚನೊಬ್ಬ ಸೃಷ್ಟಿಸಿದಂತ ಮತ್ತು ಬರಿಸುವ ಕಲ್ಪನೆಗಳಿದ್ದವು. ಸುಂದರವಾದದ್ದು ಸಾಕಷ್ಟಿತ್ತು, ಚಂಚಲವಾದದ್ದು ಸಾಕಷ್ಟಿತ್ತು, ವಿಕೃತವಾದದ್ದು ಸಾಕಷ್ಟಿತ್ತು, ಭೀಕರವಾದದ್ದು ಸಾಕಷ್ಟಿತ್ತು, ಮತ್ತು ಅಸಹ್ಯ ತರಿಸಿವಂತದ್ದೂ ಸ್ವಲ್ಪ ಮಟ್ಟಿಗೆ ಇತ್ತು. ಏಳೂ ಕೋಣೆಗಳಲ್ಲಿ ಅಸಂಖ್ಯ ಸ್ವಪ್ನಗಳು ಆಚೆ ಈಚೆ ಅಲೆದಾಡುತಿದ್ದವು. ಮತ್ತು ಇವು – ಈ ಸ್ವಪ್ನಗಳು –  ಕೊಠಡಿಗಳ ಬಣ್ಣವನ್ನೇ ಮೈಮೇಲೇರಿಸಿಕೊಂಡು ನರಳಾಡಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದವು ಮತ್ತು ವಾದ್ಯವೃಂದದ ಒರಟು ಸಂಗೀತ ಅವುಗಳ ಹೆಜ್ಜೆಗಳ ಮಾರ್ದನಿ ಅನ್ನಿಸುತಿತ್ತು. ಮತ್ತು, ಅಲ್ಲಿ ಕೇಳಿಸಿಕೊಳ್ಳಿ, ವೆಲ್ವೆಟ್‌ ಕೋಣೆಯಲ್ಲಿರುವ ಆ ಮತ್ತಿ ಮರದ ಗಡಿಯಾರ ಹೊಡೆಯಲಾರಂಭಿಸಿದೆ. ಸ್ವಪ್ನಗಳು ನಿಂತಲ್ಲೇ ಮರಗಟ್ಟಿವೆ. ಅದರೆ ಘಂಟಾನಾದದ ಮಾರ್ದನಿಗಳು ಕರಗಿ ಹೋಗುತ್ತಿವೆ – ಅವು ಒಂದು ಕ್ಷಣ ಮಾತ್ರ ಬದುಕಿದ್ದವು – ಮತ್ತು ಆ ಸದ್ದು  ಕರಗಿಹೋದಂತೆ ತಿಳಿಯಾದ, ಅರೆ ಅದುಮಿಟ್ಟ ನಗು ಹರಿದಾಡುತ್ತಿದೆ. ಈಗ ಮತ್ತೆ ಸಂಗೀತ ಭೋರ್ಗರೆಯುತ್ತಿದೆ – ಮತ್ತು ಸ್ವಪ್ನಗಳಿಗೆ ಜೀವ ಬಂದಿದೆ, ಮತ್ತು ಅವು ಪಂಜುಗಳ ಕಿರಣಗಳು ತೂರಿ ಬರುತ್ತಿರುವ ಕಿಟಕಿಗಳ ಗಾಜುಗಳ ಬೇರೆ ಬೇರೆ ಬಣ್ಣಗಳನ್ನು ಮೆತ್ತಿಕೊಂಡು ಉಲ್ಲಾಸದಿಂದ ಅತ್ತ ಇತ್ತ ನರಳಾಡುತ್ತಿವೆ. ಆದರೆ ಆ ಏಳು ಕೊಠಡಿಗಳಲ್ಲಿ ತೀರಾ ಪಶ್ಚಿಮಕ್ಕೆ ಇರುವ ಕೊಠಡಿಗೆ ಆ ಛದ್ಮವೇಷಿಗಳಲ್ಲಿ ಯಾರೂ ಕಾಲಿಡುವ ಧೈರ್ಯ ಮಾಡಿಲ್ಲ; ಯಾಕೆಂದರೆ ಕತ್ತಲು ಕರಗುತ್ತಿದೆ; ಮತ್ತು ಅಲ್ಲಿ ರಕ್ತವರ್ಣದ ಗಾಜುಗಳ ಮೂಲಕ ಕಾಂತಿಯುತ ಕೆಂಬಣ್ಣ ಪಸರಿಸುತ್ತಿದೆ; ಮತ್ತು ಕಡುಕಪ್ಪು ಬಣ್ಣದ ಪರದೆಗಳ ಮಂಕು ಗಾಭರಿ ಹುಟ್ಟಿಸುತ್ತಿದೆ; ಮತ್ತು ಕಪ್ಪು ರತ್ನಗಂಬಳಿಯ ಮೇಲೆ ಹೆಜ್ಜೆ ಇಡುವವನ ಕಿವಿಯ ಮೇಲೆ, ಇತರೇ ಕೊಠಡಿಗಳಲ್ಲಿ ಹೆಚ್ಚು ಅಪರಿಚಿತ ಮೋಜುಗಳಲ್ಲಿ ತೊಡಗಿರುವವರ ಕಿವಿಯ ಮೇಲೆ ಬೀಳುವುದಕ್ಕಿಂತ ಹೆಚ್ಚು ಖಚಿತವಾದ  ಮತ್ತಿ ಮರದ ಗಡಿಯಾರದ ಗದ್ಗದಿತ ನಿನಾದ ಬೀಳುತ್ತಿದೆ. ಆದರೆ ಈ ಇತರೆ ಕೊಠಡಿಗಳು ಜನಜುಂಗಳಿಯಿಂದ ತುಂಬಿರುತ್ತಿದ್ದವು, ಮತ್ತು ಅವುಗಳಲ್ಲಿ ಜೀವ ಹೃದಯ ಉದ್ರಿಕ್ತವಾಗಿ ಬಡಿದುಕೊಳ್ಳುತ್ತಿತ್ತು. ಗಡಿಯಾರವು ಮಧ್ಯರಾತ್ರಿಯ ಘಂಟೆ ಬಾರಿಸುವವರೆಗೆ ಸಂಭ್ರಮ ಕುಣಿದಾಡಿತು. ಮತ್ತು ಆಗ ನಾನು ಮೊದಲೇ ಹೇಳಿದಂತೆ ಸಂಗೀತ ಸ್ಥಗಿತವಾಯಿತು; ನರ್ತಕರ ನರ್ತನ ಸ್ತಂಭಿತವಾಯಿತು; ಮತ್ತು ಮೊದಲು ಆದ ಹಾಗೇ ಎಲ್ಲಾ ಚಟುವಟಿಕೆಗಳು ನಿಂತುಹೋದವು. ಆದರೆ ಈಗ ಗಡಿಯಾರದ ಘಂಟೆ ಹನ್ನೆರಡು ಬಾರಿ ಹೊಡೆಯಬೇಕಾಗಿತ್ತು; ಮತ್ತು ಬಹುಶಃ ಹಾಗಾಗಿ ಮೋಜು ಮಾಡುತ್ತಿರುವವರಲ್ಲಿ ವಿಚಾರಶೀಲರಾಗಿದ್ದವರ ಮಂಥನದಲ್ಲಿ ಹೆಚ್ಚು ಸಮಯವಾದಂತೆ ಹೆಚ್ಚು ವಿಚಾರಗಳು ಮೊಳಕೆಯೊಡೆದವು. ಮತ್ತು, ಬಹುಶಃ ಹಾಗಾಗಿ ಗಡಿಯಾರದ ಕೊನೆಯ ಠೇಂಕಾರದ ಪ್ರತಿಧ್ವನಿಗಳು ನಿಶಬ್ದದಲ್ಲಿ ಕರಗಿಹೋಗುವುದರ ಒಳಗೆಯೇ ಅಲ್ಲಿಯವರೆಗೆ ಯಾರೊಬ್ಬನೂ ಗಮನಿಸದೇ ಇರುವ ಛದ್ಮವೇಷಿಯೊಬ್ಬನ ಇರುವಿಕೆಯ ಅರಿವು ಆ ಗುಂಪಿನ ಅನೇಕರಿಗೆ ಆಯಿತು. ಈ ಹೊಸ ಅಸ್ತಿತ್ವದ ಸುದ್ದಿ ಪಿಸುಗುಟ್ಟಿನ ಮೂಲಕ ಹರಡಿದಂತೆ, ಆ ಇಡೀ ಗುಂಪಿನಿಂದ ಒಂದು ಗುಸುಗುಟ್ಟುವಿಕೆ, ಗೊಣಗಾಡುವಿಕೆ, ತೇಲಿ ಬಂತು

ಎಡ್ಗರ್‌ ಅಲಾನ್‌ ಪೋನ ಕತೆ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” ನ ರೂಪಾಂತರ “ಕೆಂಪು ಮೃತ್ಯುವಿನ ಛದ್ಮವೇಷ”ಬಿ. ವಿ. ರಾಮಪ್ರಸಾದ್ ಅವರಿಂದ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-125 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಗೆ ಡಯಾಲಿಸಿಸ್‌ ಮಾಡಿಸಲು ಮಗಳ ಪ್ರಯತ್ನ ಮರುದಿನ ಬೆಳಿಗ್ಗೆ ಸುಮತಿಯ ಎರಡನೇ ಮಗಳು ತನ್ನ ತಾಯಿಯ ಚಿಕಿತ್ಸೆಯನ್ನು ಮಾಡುತ್ತಿದ್ದ ವೈದ್ಯರ ಬಳಿಗೆ ಹೋದಳು. ಅವಳನ್ನು ನೋಡಿದ ವೈದ್ಯರು…. ಏನಮ್ಮ ನಿನ್ನ ತಾಯಿ ಹೇಗಿದ್ದಾರೆ?…. ಎಂದು ಕೇಳಿದರು. ಹಿಂದಿನ ದಿನ ತಂಗಿಯು ಹೇಳಿದ್ದ ವಿಚಾರವನ್ನು ಮಾತನಾಡಲೆಂದು ಅವಳು ವೈದ್ಯರಲ್ಲಿಗೆ ಬಂದಿದ್ದಳು…. _ಸರ್ ನನ್ನ ತಾಯಿಯ ಆರೋಗ್ಯ ಸುಧಾರಿಸಲು ಬೇರೆ ಯಾವ ಚಿಕಿತ್ಸೆಯೂ ಇಲ್ಲವೇ?”… ಎಂದು ಕೇಳಿದಳು. ಆಗ ವೈದ್ಯರು…. “ಇದೆಯಮ್ಮಾ….. ಆದರೆ ಅದು ಬಹಳ ದುಬಾರಿ…. ನಿನ್ನ ತಾಯಿಯ ಆಂತರಿಕ ಅಂಗಾಂಗಗಳೆಲ್ಲವೂ ತಮ್ಮ ಕಾರ್ಯವನ್ನು ನಿರ್ವಹಿಸಲು ವಿಫಲವಾಗಿವೆ….. ಆದರೆ ಆಗಾಗ ಡಯಾಲಿಸಿಸ್ ಮಾಡಿಸುವ ಮೂಲಕ ನಿನ್ನ ತಾಯಿಯ ಆರೋಗ್ಯವನ್ನು ಸ್ವಲ್ಪ ಹೆಚ್ಚು ಕಾಲ ಸುಧಾರಿಸಿಕೊಳ್ಳುವಂತೆ ಮಾಡಬಹುದು”….. ಎಂದು ವೈದ್ಯರು ಹೇಳಿದ ಈ ವಿಚಾರ ಆ ಹುಡುಗಿಗೆ ಸರಿಯಾಗಿ ತಿಳಿದಿರಲಿಲ್ಲ ಹಾಗಾಗಿ…._ “ಡಯಾಲಿಸಿಸ್ ಎಂದರೇನು, ಸರ್?”… ಎಂದು ಕೇಳಿದಳು….”ನಮ್ಮ ಶರೀರವನ್ನು ನಿರಂತರವಾಗಿ ಶುದ್ಧೀಕರಣಗೊಳಿಸಲು ಮುಖ್ಯವಾಗಿ ಕಿಡ್ನಿಗಳು ಕೆಲಸ ಮಾಡಬೇಕು…. ಅವುಗಳು ಕೆಲಸ ಮಾಡಲು ವಿಫಲವಾದಾಗ ರಕ್ತದಲ್ಲಿನ ವಿಷಕಾರಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ಫಿಲ್ಟರ್ ಮಾಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯುತ್ತಾರೆ…. ಇದನ್ನು ಮಾಡಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಕಾಲ ನಿನ್ನ ತಾಯಿ ಜೀವಂತವಾಗಿರಬಹುದು…. ಆದರೆ ಇದನ್ನು ಆಗಾಗ ಮಾಡಿಸುತ್ತಿರಬೇಕಾಗುತ್ತದೆ…. ಇದರ ಖರ್ಚು ಅಧಿಕ…. ಎಂದರು”….. “ಹಾಗಾದರೆ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಬಹುದಲ್ಲವೇ?”… ಎಂದು ಕೇಳಿದಳು.  ಅವಳ ಮಾತಿಗೆ,… “ಹೌದು ಆಕೆಯು ಹೆಚ್ಚಿನ ಕಾಲ ಬದುಕುಳಿಯಬೇಕಾದರೆ ಈ ಚಿಕಿತ್ಸೆಯನ್ನು ನಿಮ್ಮ ತಾಯಿಗೆ ಕೊಡಿಸಲೇಬೇಕು”…. ಎಂದಾಗ….” ಸರ್ ದಯವಿಟ್ಟು ಆದಷ್ಟು ಬೇಗ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಿಸಿ”…. ಎಂದು ಆ ಹುಡುಗಿ ಕೇಳಿಕೊಂಡಾಗ, ಅವಳ ಮುಗ್ದತೆಯನ್ನು ಅರಿತ ವೈದ್ಯರು…. “ಮಗು ಈ ಚಿಕಿತ್ಸೆಯನ್ನು ಇಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊಡಲು ಸಾಧ್ಯವಿಲ್ಲ…. ಅದಕ್ಕೆ ಬೇಕಾದ ಉಪಕರಣಗಳು ಇಲ್ಲಿಲ್ಲ…. ಈ ಚಿಕಿತ್ಸೆಯನ್ನು ಕೊಡಲು ವಿಶೇಷ ಯಂತ್ರವು ಬೇಕಾಗಿದೆ…. ಇದು ಬಹಳ ಅಪರೂಪಕ್ಕೆ ಈ ಚಿಕಿತ್ಸೆಗೆಂದೇ ವಿಶೇಷವಾದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ”…. ಎಂದು ವೈದ್ಯರು ಹೇಳಿದಾಗ…. “ಯಾವ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದು?… ಎಂದು ಕೇಳಿದಳು,…. “ಬೆಂಗಳೂರಿನ ಕಿಡ್ನಿ ಫೌಂಡೇಶನ್ ಎನ್ನುವ ಆರೋಗ್ಯ ಸಂಸ್ಥೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ…. ಸಾಧ್ಯವಾದರೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಮ್ಮ”…. ಎಂದು ವೈದ್ಯರು ಹೇಳಿದರು.‌ ಅದನ್ನು ಕೇಳಿದ ಹುಡುಗಿಯ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನು ಮಾಡಬೇಕು ಎನ್ನುವುದು ಹೊಳೆಯಲಿಲ್ಲ. ವೈದ್ಯರಿಗೆ ಧನ್ಯವಾದ ತಿಳಿಸಿ, ಕೊಠಡಿಯಿಂದ ಹೊರ ನಡೆದಳು.  ಆಸ್ಪತ್ರೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು ಆಲೋಚನೆ ಮಾಡ ತೊಡಗಿದಳು. ಅಕ್ಕ-ಬಾವನಿಗೆ ಹೇಳಿದರೆ ಹೇಗೆ? ಅವರು ಏನಾದರೂ ಸಹಾಯ ಮಾಡಬಹುದೇ? ಹಾಗೆ ಯೋಚಿಸಿದಾಗ ಅವರಿಂದ ಅದು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ಏಕೆಂದರೆ ಅವರು ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಬಾವ ಟಿಂಬರ್ ಕೆಲಸದಿಂದ ಬರುವ ಆದಾಯದಲ್ಲಿ ಅಕ್ಕ ಮತ್ತು ಮಕ್ಕಳ ಖರ್ಚು ವೆಚ್ಚ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದಾರೆ.  ತಾಯಿಯ ತಮ್ಮಂದಿರು ಹಾಗೂ ನೆಂಟರಿಷ್ಟರನ್ನು ಕೇಳುವಂತೆ ಇಲ್ಲ. ತಾಯಿಯ ಎರಡನೇ ತಮ್ಮ ಅವರ ಕೈಲಿ ಆಗುವಷ್ಟು ಮತ್ತು ಅವರ ಶಕ್ತಿಯನ್ನೂ ಮೀರಿ ಹಲವು ಸಲ ನಮಗೆ ಸಹಾಯ ಮಾಡಿದ್ದಾರೆ. ಇನ್ನು ನೆಂಟರಿಷ್ಟರು ಇದ್ದರೂ ಕೂಡ ಅಮ್ಮನ ಕಷ್ಟಕರ ಜೀವಿತ ಹಾಗೂ ಅಪ್ಪ ತೀರಿ ಹೋದ ನಂತರ ಒಬ್ಬರ ಸುಳಿವೂ ಇಲ್ಲ. ನೆಂಟರಿಷ್ಟರಾದ ಯಾರನ್ನೂ ಆಶ್ರಯಿಸದೇ ಸ್ವಾಭಿಮಾನದಿಂದ ಬದುಕಿದ ತಾಯಿ ನಮಗೂ ಅದನ್ನೇ ಕಲಿಸಿದ್ದಾರೆ. ಇನ್ನು ಉಳಿದಿರುವುದು ನಮಗೆ ಆಶ್ರಯವಿತ್ತು ನಮ್ಮ ಕಷ್ಟಕ್ಕೆ ಸದಾ ಹೆಗಲಾಗಿ ನಿಂತಿರುವವರು ನಮ್ಮ ಎಸ್ಟೇಟಿನ ದಯಾಳುವಾದ ಸಾಹುಕಾರರು ಮತ್ತು ಅವರ ಪತ್ನಿ ‘ಅಮ್ಮ’. ಅವರಲ್ಲಿ ಈ ಬಗ್ಗೆ ತಿಳಿಸಿ ನೋಡೋಣ. ಏಕೆಂದರೆ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ಈವರೆಗೂ ಅಮ್ಮನಿಗೆ ಬೇಕಾದ ಇನ್ಸುಲಿನ್ ಚುಚ್ಚುಮದ್ದು ಹಾಗೂ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರೆ ಚಿಕಿತ್ಸೆಗಳಿಗೆ ಅವರು ಸಹಾಯ ಮಾಡಿದ್ದಾರೆ. ಬಹುಶಃ ಈ ವಿಚಾರ ತಿಳಿದರೆ ಖಂಡಿತ ನಮಗೆ ಏನಾದರೂ ಒಂದು ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ವಿಚಾರ ಮನಸ್ಸಿಗೆ ಬಂದಾಗ, ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಾಗಲೇ ನಾನು ಎಸ್ಟೇಟ್ ಗೆ ಹೋಗಿ ಅಲ್ಲಿ ಸಾಹುಕಾರರನ್ನು ಕಂಡು ಅವರಲ್ಲಿ ಈ ಬಗ್ಗೆ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಅವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಮೂಡಿದ ಕೂಡಲೇ ಕುಳಿತಲ್ಲಿಂದ ಎದ್ದು ನೇರವಾಗಿ ವಾರ್ಡಿಗೆ ಹೋದಳು.  ಈ ವಿಷಯವನ್ನು ತಾಯಿಗೆ ತಿಳಿಸಲಿಲ್ಲ. ಏನಾದರೂ ಒಂದು ವ್ಯವಸ್ಥೆ ಆದ ಮೇಲೆ ತಿಳಿಸಿದರಾಯ್ತು. ಈಗಲೇ ಹೇಳಿ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ತರಿಸುವುದು ಬೇಡವೆಂದು ತೀರ್ಮಾನಿಸಿದಳು. ತಾಯಿ ಊಟ ಮಾಡಿದ ನಂತರ ಅಲ್ಲಿಂದ ಆಶ್ರಮಕ್ಕೆ ಹೊರಟಳು. ಅವಳ ಕಾಲೇಜಿನ ಕಲಿಕೆ ಆಶ್ರಮದ ಮಕ್ಕಳಿಗೆ ಪಾಠ ಮಾಡುವುದು ಜೊತೆಗೆ ಅಮ್ಮನ ಆರೈಕೆ ಅವಳ ಗೆಳತಿಯ ಸಹಾಯದಿಂದ ನಿರಾತಂಕವಾಗಿ ನಡೆಯುತ್ತಿತ್ತು. ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಅವರನ್ನು ಭೇಟಿ ಮಾಡಿದಳು. ನಾಳೆ ತಾನು ಕಾಲೇಜಿಗೆ ರಜೆ ಹಾಕಿ ಎಸ್ಟೇಟಿಗೆ ಹೋಗಿ ಸಾಹುಕಾರರನ್ನು ಹಾಗೂ ಅವರ ಪತ್ನಿ ‘ಅಮ್ಮ’ನನ್ನು ಕಂಡು ತನ್ನ ತಾಯಿಯ ಡಯಾಲಿಸಿಸ್ ಗೆ ಸಹಾಯವನ್ನು ಕೋರಿ, ಅಲ್ಲಿರುವ ತನ್ನ ತಂಗಿಯನ್ನು ಕಂಡು ಅವಳಿಗೆ ವಿಷಯ ತಿಳಿಸಿ ಸಂಜೆ ಪುನಹ ಆಶ್ರಮಕ್ಕೆ ಬರುರುವುದಾಗಿ ವಿನಂತಿಸಿಕೊಂಡು ಅವರ ಅನುಮತಿಯನ್ನು ಪಡೆದಳು. ಆತ ಒಬ್ಬ ದಯಾಳು ಮನುಷ್ಯನಾದ ಕಾರಣ ಹಾಗೂ ಸುಮತಿಯ ಮಗಳ ಜವಾಬ್ದಾರಿಯುತ ನಡೆಯನ್ನು ಮೆಚ್ಚುತ್ತಿದ್ದ ಕಾರಣ ಅವಳಿಗೆ ತನ್ನಿಂದಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದರು. ತನ್ನ ಗೆಳತಿಗೂ ಈ ವಿಷಯವನ್ನು ತಿಳಿಸಿದಳು. ಅವಳು…. “ನಿಶ್ಚಿಂತೆಯಿಂದ ಹೋಗಿ ಬಾ… ಇಲ್ಲಿನ ಎಲ್ಲಾ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ…. ಮೊದಲು ನಿನ್ನ ತಾಯಿಯ ಆರೋಗ್ಯದ ಕಡೆ ನಿನ್ನ ಗಮನವನ್ನು ಹರಿಸು…. ಆದಷ್ಟು ಬೇಗ ನಿನ್ನ ತಾಯಿ, ಚಿಕಿತ್ಸೆಯನ್ನು ಪಡೆಯುವಂತಾಗಲಿ”… ಎಂದಳು.

Read Post »

ಇತರೆ

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು”

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ. “ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು”ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತಿಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ. ನಿನಗೆ ಅದರಿಂದ ಬೇಸರ ಆಗುವುದಿಲ್ಲವೇ?” ಜೇನು ಹುಳು ಹೇಳಿತು: ‘ಇಲ್ಲ ಜನರು ನನ್ನ ಜೇನನ್ನು ಕದಿಯಬಹುದು, ಆದರೆ ಯಾರೊಬ್ಬರೂ ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.’  ಇದರ ಅರ್ಥ ಇಷ್ಟೇ ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ” ಪೂರ್ವ ವೈಭವ ಮೊದಲೆಲ್ಲ ನಮ್ಮ ತಾತ ಮುತ್ತಾಂದಿರು ನೂರು ವರ್ಷಗಳ ತುಂಬು ಜೀವನ ಸಂತೃಪ್ತಿಯಿoದ ಬಾಳಿ ಬದುಕುತ್ತಿದ್ದರು. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಮನೆ ಮನವನ್ನು ಬೆಳಗುವ ಜ್ಯೋತಿಯಾಗುತ್ತಿದ್ದರು. ಹೆಣ್ಣಾದರೆ ತವರು ಮನೆಯ ಕೀರ್ತಿಯನ್ನು ಬೆಳಗುವ ಸದಾಶಯದೊಂದಿಗೆ ಸದಾ ಜೀವವನ್ನು ಸವೆಸುತ್ತಿದ್ದಳು. ಬದುಕಿನ ಪಯಣದಲ್ಲಿ ಬರುವ ಎಲ್ಲ ನೋವನ್ನು ನುಂಗಿಕೊoಡು ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಳು. ಗಂಡಾದರೆ ಹೊಲದ ಕೃಷಿ ಕೆಲಸಗಳಲ್ಲಿ ವೃತ್ತಿ ವ್ಯಾಪಾರ ಕರ್ತವ್ಯದಲ್ಲಿ ಶ್ರಮವಹಿಸುತ್ತಿದ್ದರು. ಬದುಕು ಹೋರಾಟ ಎರಡೂ ಬೇರೆ ಬೇರೆ ಅಲ್ಲ ಎನ್ನುವ ತಲೆಮಾರಿಗೆ ಸೇರಿದವರಾಗಿದ್ದರು. ಅನನ್ಯ ಜೀವನದ ಅನುಭವವನ್ನು ಪಡೆಯುತ್ತಿದ್ದರು. ಬಹುಶಃ ಆ ತಲೆಮಾರಿನ ಕೊನೆಯ ಕೊಂಡಿಗಳು ಕಳಚಿ ಹೋಗಿವೆ. ನಮ್ಮ ಹಿರಿಯರ ಬದುಕು ನಮಗೆ ಜೀವನದ ವಿಶಿಷ್ಟ ಹೊಳಹುಗಳನ್ನು ನೀಡುತ್ತದೆ. .ಪೂರ್ವಜರ ಬದುಕು ಅವರ  ಪಾರಂಪರಿಕ ಜ್ಞಾನ ವಿಜ್ಞಾನವನ್ನು ಪರಿಚಯಿಸುತ್ತದೆ. ಜನಪದ ಸಾಹಿತ್ಯ ಅವರ ಅಗಾಧ ಜ್ಞಾನಕ್ಕೆ ತೋರುಬೆರಳಿನಂತಿದೆ. ಬದಲಾದ ಕಾಲ ಈಗ ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ ಅಗಾಧವೆನಿಸುವಷ್ಟು ಬದಲಾಗಿದೆ. ವ್ಯಕ್ತಿತ್ವದ ವಕ್ರತೆಯನ್ನು ತಿದ್ದಿಕೊಳ್ಳುವ ಮನಸ್ಥಿತಿ ಕಡಿಮೆಯಾಗಿದೆ. ಒತ್ತಡ ದಾವಂತ ಹೆಚ್ಚಿದೆ. ಹೀಗಾಗಿ ನೂರು ವಸಂತಗಳನ್ನು ಸಂತಸದಿoದ  ಕಳೆಯುವುದು ದುರ್ಭರವಾಗಿದೆ. ಐಶಾರಾಮಿ ಬದುಕಿನ ಆಕರ್ಷಣೆಗೆ ಒಳಗಾಗಿ ಮೋಸ ವಂಚನೆ ದರೋಡೆ ಸುಲಿಗೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಸರಳ ಜೀವನವೇ ಸುಖೀ ಜೀವನವೆಂಬ ಕಲೆಯನ್ನು ಕಲಿತರೆ ಎತ್ರರವು ವಿಸಾರವೂ ಆಗಿರುವ ಅಮೂಲ್ಯ ಬದುಕನ್ನು ಸವಿಯಬಹುದು. ಜೀವನವೆಂದರೆ.. ಜೀವನಕ್ಕೆ ಒಂದೇ ಮುಖವಿಲ್ಲ.  ಹಲವಾರು ಮುಖಗಳಿವೆ. ಇದೊಂದು ಜೈವಿಕ ಜಗತ್ತಿನ ವ್ಯಾಪಾರ.ಜೀವನವೆಂಬುದು ಒಂದು ಸಾಗರವಿದ್ದಂತೆ ಅದನ್ನು ಈಜುವುದು ಬಹಳ ಕಷ್ಟ. ಅದಕ್ಕೆ ದಾಸರು ‘ಈಸಬೇಕು ಇದ್ದು ಜಯಿಸಬೇಕು.’ ಎಂದು ಹೇಳಿದರು. ಈಸುವುದು ಬಲು ಕಠಿಣ. ಈಜಿ ದಡ ಸೇರುವುದೇ ಜೀವನ. ದಾರ್ಶನಿಕರು ಶರಣರು ಸಾಧು ಸಂತರು ತತ್ವಜ್ಞಾನಿಗಳು ಮೇದಾವಿಗಳು ತಾವು ಕಂಡoತೆ ಅದನ್ನು ವ್ಯಾಖ್ಯಾನಿಸಿದರು ಕೆಲವರು ಹೋರಾಟವೆಂದರು. ಇನ್ನೂ ಕೆಲವರು ಒಂದು ಆಟವೆಂದರು ನಾಟಕವೆಂದರು ಸವಾಲೆಂದರು. ಇದನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಎನ್ನಬಹುದುಅನುಭವಿಸುವಂಥದ್ದುಜೀವನವೆoದರೆ ಅರ್ಥ ಮಾಡಿಕೊಳ್ಳುವಂಥದ್ದಲ್ಲ. ಅನುಭವಿಸುವಂತದ್ದು. ಸೋಲು ಗೆಲುವು ಅಳುವು ನಗುವು ಜೀವನದ ಅವಿಭಾಜ್ಯ ಅಂಗಗಳು. ಸುಖ ದುಃಖಗಳು ಇದರ ಭಾಗಗಳು. ಅವು ಒಂದರ ನಂತರ ಒಂದು ಬರುತ್ತವೆ. ಸುಖ ದುಃಖಗಳನ್ನುಸಮಾನವಾಗಿ ಸ್ವೀಕರಿಸುವುದು  ಸಮಾಧಾನದಿಂದ ಇರುವುದೇ ಕಷ್ಟಗಳಿಗೆ ಮದ್ದು. ಬಲ್ಲವರು ಹೇಳಿದ ಮಾತಿನಂತೆ ’ಸೋಲಿನ ಪಾಠ ಚಂದ. ಹಸಿವಿನ ಊಟ ಚೆಂದ ಪ್ರೀತಿಯ ಕೋಪ ಚೆಂದ ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ.’ಜೀವಿಸುವುದು ಮುಖ್ಯವಲ್ಲಜೀವನದಲ್ಲಿ ಕೇವಲ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ನಮಗಾಗಿ ಜೀವಿಸುವುದಕ್ಕಿಂತ ನಮ್ಮವರಿಗಾಗಿ ಮತ್ತು ಬೇರೆಯವರಿಗಾಗಿ ಜೀವಿಸುವುದು ಹೆಚ್ಚು ಬೆಲೆಯನ್ನು ತರುತ್ತದೆ. ಬದುಕನ್ನು ಒಂದು ಕ್ಷಣದಲ್ಲಿ ಬದಲಿಸಲು ಸಾಧ್ಯವಿಲ್ಲ. ಆದರೆ, ಆ ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಬದಲಿಸಬಲ್ಲದು. ಐದು ಸಂಗತಿಗಳು  ಹೇಳಿದ ವಿಷಯವನ್ನು ಬಿಟ್ಟು ಸಂಬoಧವೇ ಇಲ್ಲದ ಬೇರೆ ವಿಷಯದ ಬಗ್ಗೆ ಮಾತನಾಡುವುದು, ಮಾಡಿದ ಕೆಲಸವು ಸಮರ್ಪಕವಾಗಿದ್ದರೂ ಕಾರಣವಿಲ್ಲದೇ ದ್ವೇಷಿಸುವುದು, ಅವಶ್ಯವಾಗಿ ಇರಬೇಕಾದ ಸ್ಥಳದಲ್ಲಿ ಇಲ್ಲದೇ ಇರುವುದು, ತಮ್ಮ ಸಂಶಯ ನಿವಾರಣೆಗೆ ಯಾರೇ ಯಾವುದೋ ಒಂದು ಪ್ರಶ್ನೆ ಮಾಡಿದಾಗ ಉತ್ತರಿಸದೇ ಇರುವುದು ಮತ್ತು ಪ್ರೀತಿಯಿಂದ ಆಮಂತ್ರಣ ಕೊಟ್ಟಾಗ ಉಪೇಕ್ಷಾ ಭಾವದಿಂದ ಅಲ್ಲಿಗೆ ಹೋಗದೇ ಇರುವುದು ಈ ಐದು ಸಂಗತಿಗಳು ಗುಣರಹಿತನ ಲಕ್ಷಣಗಳಾಗಿವೆ.ಇವುಗಳ ಬಗ್ಗೆ ಅಲಕ್ಷö್ಯ ಮಾಡದೇ ಸದ್ಗುಣವಂತನಾಗಲು ಪ್ರಯತ್ನಿಸಬೇಕು ಅಪರಮಿತ ತ್ಯಾಗ ಮಾಡಿದ ಬದುಕಿಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ಹಿಡಿ ಪ್ರೀತಿ ಮಾತಿಲ್ಲದಿದ್ದರೆ ಜೀವನವೇ ಮೂಕವಾಗುತ್ತದೆ. ಕೊಂಕು ಮಾತುಗಳು ಹೆಚ್ಚಾದರೆ ಮೂಕರೋಧನವನ್ನು ಅನುಭವಿಸಬೇಕಾಗುತ್ತದೆ. ಯಾರೇ ಆಗಲಿ ಬಯಸುವುದು ಒಂದು ಹಿಡಿ ಪ್ರೀತಿಯನ್ನು. ಮಾತೆಯ ಮಮತೆಯನ್ನು ಧಾರೆಯೆರೆಯುವ ಹೃದಯ ನಮ್ಮದಾಗಬೇಕು. ಪ್ರತಿಯೊಬ್ಬರೊಂದಿಗೂ ಪ್ರೀತಿ ವಿಶ್ವಾಸ ವಾತ್ಸಲ್ಯದೊಂದಿಗೆ ನಡೆದುಕೊಳ್ಳಬೇಕು. ಒಪ್ಪ ಓರಣ ಶಿಸ್ತು ಸಹನೆ ಕಲಿಯಬೇಕು. “ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ,”ಎಲ್ಲವನ್ನೂ ಅನುಭವಿಸುತ್ತ ಬಾಳುವುದೇ ಬದುಕು. ಕೈಯಲ್ಲಿ ಅಧಿಕಾರವಿರುವಾಗ ಸ್ಥಾನದ ಮಹತ್ವವನ್ನು ಅರಿಯದೆ, ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಅಧಿಕಾರವಿರುವಾಗ ಅರಿತು ನಡೆದುಕೊಳ್ಳಬೇಕು. ಹಣವಿದೆ ಆಸ್ತಿಯಿದೆ ಎಂಬ ಕಾರಣಕ್ಕೆ ಅಸಭ್ಯವಾಗಿ ವರ್ತಿಸುವುದು ಉಚಿತವಲ್ಲ. ಜಗಕೆ ಮಾದರಿಯಾಗಿ ಬಾಳಬೇಕು. ಸಭ್ಯ ಸಂಸ್ಕೃತಿಯ ಹರಿಕಾರರಾಗಬೇಕು. ಪ್ರತಿಯೊಬ್ಬರ ಅಭಿರುಚಿ ಆಸಕ್ತಿ ಹವ್ಯಾಸಗಳು ವಿಭಿನ್ನ.ಆದ್ದರಿಂದ ತಿಳಿದು ನಡೆಯಬೇಕು. ಸವಾಲುಗಳು ಸವಾಲುಗಳು ಏಕಾಏಕಿ ಹರಡಿಕೊಳ್ಳುತ್ತವೆ. ಇನ್ನೇನು ಜೀವನ ಮುಗಿದು ಹೋಯಿತಲ್ಲ ಎನ್ನುವಷ್ಟರಲ್ಲಿ ಭರವಸೆಯ ಬೆಳಕಿನ ಕಿರಣವೊಂದು ಮೂಡುತ್ತದೆ. ಬದುಕಿನ ಏರಿಳಿತಗಳು ಇತ್ತೀಚಿಗೆ ಮೈ ತಾಳಿದ ವಿದ್ಯಮಾನಗಳಲ್ಲ. ಅನಾದಿಕಾಲದಿಂದಲೂ ಈ ಜೀವನ ಇರುವುದೇ ಹೀಗೆ. ಸುಖ ದುಃಖಗಳು ಪ್ರತಿ ಕ್ಷಣವನ್ನು ವರ್ಣಮಯವಾಗಿಸುತ್ತದೆ. ಬದುಕು ನಮಗೆ ಬದುಕುವುದನ್ನು ಕಲಿಸುತ್ತದೆಯೇ? ಎಂಬ ಪ್ರಶ್ನೆ ಕೇಳಬಹುದು. ಬದುಕೇ ಅದಕ್ಕೆ ಉತ್ತರ ನೀಡುತ್ತದೆ. ಜೀವನದಲ್ಲಿ ಬಗೆಬಗೆಯ ಪಾಠಗಳಿವೆ.ಅವುಗಳ ಪಟ್ಟಿ  ನಮ್ಮ ಪದಕೋಶದಲ್ಲೇ ಇಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಜೀವನದಲ್ಲಿ ಕಹಿ ಅನುಭವಾದಾಗಲೇ ಆ ವ್ಯಕ್ತಿಗೆ ಹೊಸ ಜೀವನ ಶುರು ಆದಂತೆ.  ಹೇಗೆಂದರೆ ಇಲ್ಲಿ ಯಾರಿಗೆ ಯಾರೂ ಇಲ್ಲ. ನಮಗೆ ನಾವೇ ಎಲ್ಲ ಅನ್ನೋ ಸತ್ಯ ಆಗಲೇ ಸ್ಪಷ್ಟವಾಗಿ ಅರ್ಥವಾಗೋದು.’ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ. ಎನ್ನುವುದೇ ಬದುಕು ಕಲಿಸುವ ಪಾಠ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು. ಮುಳ್ಳಿನ ಗಿಡವಾಗುವುದಕ್ಕಿಂತ, ನೆರಳು ನೀಡುವ  ಫಲಭರಿತ ವೃಕ್ಷವಾಗಬೇಕು. ಕೊನೆ ಹನಿ ನಿನ್ನೆಯದನ್ನು ಚಿಂತಿಸಬಾರದು. ನಾಳೆ ಏನಾಗುತ್ತದೆಂದು ಅತಿಯಾಗಿ ಯೋಚಿಸಬಾರದು. ಇಂದಿನ ಬದುಕನ್ನು ವ್ಯಥೆಗೆ ದೂಡಿ ವ್ಯರ್ಥವಾಗಿ ಮಾಡಿಕೊಳ್ಳಬಾರದು. ವರ್ತಮಾನವೆಂಬುದು ಭಗವಂತನ ಮೌಲಿಕ ಕಾಣಿಕೆಯೆಂದು ಬಾಳಬೇಕು. ಇದೇ ಮಾತನ್ನು ಸುಭಾಷಿತವೊಂದು ಹೀಗೆ ಹೇಳುತ್ತದೆ. ‘ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ ಹಾರಾಡಲಿ ಬಿಡಿ. ಆದರೆ, ಅಲ್ಲೇ ಗೂಡು ಕಟ್ಟಲು ಅವಕಾಶ ನೀಡಬೇಡಿ.’ ಜೀವನವೆಂಬುದು, ಹೆಮ್ಮರದ ತುದಿಯಲ್ಲಿ ಕಟ್ಟಿದ ಜೇನುಗೂಡುಗಳಿಂದ ತುಪ್ಪವನ್ನು ತೆಗೆಯುವಂತಿದೆ. ಆ ಕುಶಲತೆಯನ್ನು ಕಲಿತುಕೊಂಡರೆ ಜೀವನದ ಸವಿಜೇನು ಚಪ್ಪರಿಸಬಹುದು. ಜಯಶ್ರೀ.ಜೆ. ಅಬ್ಬಿಗೇರಿ.

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳುಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರುಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಒಲವಿನಾಸರೆ” ಬರಡು ಬಿರುಕು ನೆಲಕೆ   ,ನೀ ತಂದೆ ಪ್ರೀತಿಯಸ್ನೇಹ ಸಿಂಚನ.ಕತ್ತಲೆಯ ಹಾದಿಯಲಿ ಕೈಹಿಡಿದು,ಬೆಳಗಿಸಿದೆ ಒಲವಿನಶುಭ್ರ ಹಗಲನು. ಸೋತು ಕುಳಿತಾಗ ಸನಿಹ ಬಂದು,ನೀನಾದೆ ಒಲವಿನಾಸರೆ.ನಿನ್ನ ನಗುವಿನ ಮುಗ್ಧ ನೋಟಕೆ,ಕರಗುವುದು ಮನದ  ಬೇಸರ. ಮಾತುಗಳೇ ಇಲ್ಲದ ಮೌನದಲ್ಲೂ,ಭಾವನೆಗಳ ಅರಿತ ಜೀವ ನೀನು.ಕೋಟಿ ಜನ್ಮದಪುಣ್ಯದಂತೆ ಸಿಕ್ಕ,ನನ್ನ ಬಾಳಿನ ಬೆಳಕು ನೀನು.  ಇದ್ದು ಬಿಡು   ಜೊತೆಯಾಗಿ,ಕೊನೆಯವರೆಗೆಇರಲಿ ಈ ಪ್ರೀತಿಯ  ಭಾವ ಬಂಧನ.ನಿನ್ನೊಲವಿನ ಆಸರೆಯ ನೆರಳಲ್ಲೇ,ಸಾಗಲಿ ನನ್ನೀ ಜೀವನ.  ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ” Read Post »

You cannot copy content of this page

Scroll to Top