ಧಾರಾವಾಹಿ ಸಂಗಾತಿ-127 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ತರಗತಿಗೆ ತಡವಾಗಿ ಹೋದ ಮಗಳು ತನ್ನನ್ನು ಅಪ್ಪಿಕೊಂಡ ಮಗಳ ತಲೆಯನ್ನು ನೇವರಿಸುತ್ತಾ…. ಏನಾಯ್ತು ಮಗಳೇ, ಇಷ್ಟೊಂದು ಸಂತೋಷದಲ್ಲಿರುವೆ? … ಎಂದು ಸುಮತಿ ಕೇಳಲು,…. “ಅಮ್ಮಾ …ನಿನಗೆ ಇನ್ನೂ ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸಹುದೆಂದು ಡಾಕ್ಟರ್ ಹೇಳಿದ್ದಾರೆ….. ನಾವು ಆದಷ್ಟು ಬೇಗ ಬೆಂಗಳೂರಿಗೆ ಹೋಗೋಣ…. ಅಲ್ಲಿನ ಕಿಡ್ನಿ ಫೌಂಡೇಶನ್ ಗೆ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೇವೆ”….ಎಂದು ಮಗಳು ಹೇಳಿದಾಗ…. “ಏನು ಹೇಳುತ್ತಿದ್ದಯಾ? ನಾವು ಬೆಂಗಳೂರಿಗೆ ಹೋಗುವುದೇ?… ಬೆಂಗಳೂರಿಗೆ ಹೋಗಬೇಕಾದರೆ ಹಾಗೂ ಅಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಹೆಚ್ಚಿನ ಹಣದ ಅಗತ್ಯವಿರುತ್ತದೆ…. ನಮ್ಮಲ್ಲಿ ಅಷ್ಟು ಹಣವಿಲ್ಲ…. ಸುಮ್ಮನೇ ತೊಂದರೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು ಬೇಡ”…. ಎಂದು ಸುಮತಿ ಹೇಳಿದಾಗ ಮಗಳು ತಾಯಿಯ ಹಸ್ತವನ್ನು ತನ್ನ ಕರದಲ್ಲಿ ಭದ್ರವಾಗಿ ಹಿಡಿದು….” ಅಮ್ಮಾ …. ನೀನೇನೂ ಚಿಂತಿಸಬೇಡ… ನೀನು ಚಿಕಿತ್ಸೆ ಪಡೆಯುವುದಕ್ಕೆ ತಯಾರಾಗು…. ಬೆಂಗಳೂರಿಗೆ ಹೋಗಲು ನಮಗೆ ಸಹಾಯ ಮಾಡುತ್ತೇವೆ ಎಂದು ಸಣ್ಣ ಸಾಹುಕಾರರು ಮತ್ತು ಅಮ್ಮ ಇಬ್ಬರೂ ಭರವಸೆ ನೀಡಿದ್ದಾರೆ…. ನಾನು ವೈದ್ಯರನ್ನು ಕಂಡು ಈ ಬಗ್ಗೆ ಮಾತನಾಡುತ್ತೇನೆ ಮತ್ತು ನಿನ್ನನ್ನು ಡಿಸ್ಚಾರ್ಜ್ ಮಾಡಲು ವಿನಂತಿಸಿಕೊಳ್ಳುತ್ತೇನೆ…. ಆದಷ್ಟು ಬೇಗ ನಾವು ಬೆಂಗಳೂರಿಗೆ ಹೋಗೋಣ…. ಈ ಬಗ್ಗೆ ತಂಗಿಯ ಜೊತೆಗೂ ಮಾತನಾಡಿದ್ದೇನೆ…ಅವಳು ಸರಿ ಹೋಗಿ ಬನ್ನಿ ನಾನು ಇಲ್ಲಿಯೇ ಇದ್ದು ಅಮ್ಮನ ಪರವಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ಅಕ್ಕನ ಮನೆಗೆ ಹೋಗಿ, ಬಾವ ನಮ್ಮ ಜೊತೆಗೆ ಬರುವಂತೆ ವಿನಂತಿಸಿಕೊಳ್ಳುತ್ತೇನೆ…. ಖಂಡಿತ ಅವರು ಒಪ್ಪುತ್ತಾರೆ”… ಎಂದಳು ಸುಮತಿಗೆ ಸಂತೋಷವಾಯಿತು. ತಾನು ಪ್ರತಿದಿನವೂ ಅನುಭವಿಸುತ್ತಿರುವ ಸಂಕಟ, ನೋವು ಇನ್ನಾದರೂ ಕಡಿಮೆಯಾಗುತ್ತದೆ ಎನ್ನುವ ಸಮಾಧಾನವೂ ಆಯಿತು. ಆದರೆ ಬೆಂಗಳೂರಿಗೆ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು? ಎನ್ನುವ ಚಿಂತೆ ಕಾಡಿತು…. “ನೀನು ಹೇಳಿದ್ದು ಎಲ್ಲವೂ ಸರಿ ಮಗಳೇ…. ಆದರೆ ಅಲ್ಲಿ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು?”… ಎಂದು ಸುಮತಿ ಕೇಳಿದಾಗ…. “ಅಮ್ಮಾ …ಬೆಂಗಳೂರಿನಲ್ಲಿ ನಮ್ಮ ಹಿರಿಯ ಮಾವ ( ಸುಮತಿಯ ಹಿರಿಯ ತಮ್ಮ) ಕುಟುಂಬ ಸಮೇತ ಅಲ್ಲಿಯೇ ಇದ್ದಾರಲ್ಲವೇ ?… ಅವರು ಯಾವ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ದೊಡ್ಡಮ್ಮನನ್ನು ಕೇಳಿ ತಿಳಿದುಕೊಳ್ಳುತ್ತೇನೆ…. ಅವರ ವಿಳಾಸ ಪಡೆದು ಅಲ್ಲಿಗೆ ಹೋದರಾಯಿತು”…. ಎಂದಳು ಮಗಳು. ಅವಳು ಹೇಳಿದ್ದು ಸರಿ ಎನಿಸಿತು ಸುಮತಿಗೆ. ಹಾಸನದಿಂದ ಬೆಂಗಳೂರಿಗೆ ತನ್ನ ತಮ್ಮ ವರ್ಗವಾಗಿ ಹೋದ ನಂತರ ಸುಮತಿ ಒಮ್ಮೆಯೂ ಅವನನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ತಮ್ಮನನ್ನು ನೋಡಬಹುದು ಮತ್ತು ಆಸ್ಪತ್ರೆಗೆ ಹೋಗಿ ಬರಲು ನಮಗೆ ಅವನು ಖಂಡಿತಾ ಸಹಾಯ ಮಾಡಿಯೇ ಮಾಡುತ್ತಾನೆ ಎನ್ನುವ ಭರವಸೆಯೂ ಮೂಡಿತು…. “ಸರಿ ಹಾಗೆಯೇ ಆಗಲಿ ಮಗಳೇ…. ನಾಳೆ ಬೆಳಗ್ಗೆ ಡಾಕ್ಟರ್ ರೌಂಡ್ಸ್ ಗೆ ಬರುವಾಗ ಈ ಬಗ್ಗೆ ಅವರೊಂದಿಗೆ ಮಾತನಾಡು”…. ಎಂದು ಸುಮತಿ ಮಗಳಿಗೆ ಹೇಳಿದಳು. ನಾಳೆ ಬೆಳಗ್ಗೆ ಕಾಲೇಜು ಮುಗಿದ ನಂತರ ದೊಡ್ಡಮ್ಮನ ಮನೆಗೆ ಹೋಗಿ ಮಾವನ ಅಡ್ರೆಸ್ ಪಡೆಯುವುದು ಎಂದು ಆ ಹುಡುಗಿ ತೀರ್ಮಾನಿಸಿದಳು. ಸಂಜೆ ಆಶ್ರಮಕ್ಕೆ ಹೋಗಿ ಬಂದು ರಾತ್ರಿ ಅಮ್ಮನ ಜೊತೆಗೆ ಆಸ್ಪತ್ರೆಯಲ್ಲಿ ಉಳಿದುಕೊಂಡ ಹುಡುಗಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಒಂದೊಂದೇ ಲೆಕ್ಕಾಚಾರ ಮನದಲ್ಲಿ. ಏನೇನೋ ಆಲೋಚನೆಗಳು ಸುಳಿದು ಅವಳ ನಿದ್ರೆಗೆಡಿಸಿದ್ದವು. ಮೊದಲೇ ತೀರ್ಮಾನಿಸಿದಂತೆ ಬೆಳಗ್ಗೆ ಬೇಗನೆ ಎದ್ದು ಆಶ್ರಮಕ್ಕೆ ಹೋದಳು. ಅಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಹೊರಟಳು. ಅಂದು ಕಾಲೇಜಿಗೆ ತಡವಾಯಿತು. ಗಡಿಬಿಡಿಯಲ್ಲಿ ತರಗತಿಯ ಕಡೆಗೆ ಹೋಗುತ್ತಿದ್ದಾಗ ಅದಾಗಲೇ ಲೆಕ್ಚರರ್ ತರಗತಿಯೊಳಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದರು. ಹಾಗಾಗಿ ತರಗತಿಯ ಆಚೆಯೇ ನಿಂತಳು ಆ ಹುಡುಗಿ. ಪಕ್ಕದ ತರಗತಿಗೆ ಹೋಗಲು ಬಂದ ಅವಳ ಕಸಿನ್ ತರಗತಿಯ ಹೊರಗೆ ನಿಂತಿರುವ ಅವಳನ್ನು ಕಂಡು ಅವಳ ಬಳಿಗೆ ಬಂದು…. “ಏನಾಯ್ತು?…. ಏಕೆ ಇಷ್ಟು ತಡವಾಗಿ ಕಾಲೇಜಿಗೆ ಬಂದಿರುವೆ?… ಸದಾ ಬೇಗನೆ ಬರುತ್ತಿದ್ದ ನಿನಗೆ ಇಂದು ಏನಾಯಿತು?”… ಎಂದು ಕೇಳಿದ. ಅವಳ ಕಸಿನ್ ಕೂಡ ಇದೇ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಲೆಕ್ಚರರ್ ಆಗಿ ಸೇರ್ಪಡೆಗೊಂಡಿದ್ದ. ಕಸಿನ್ ಕೇಳಿದ ಪ್ರಶ್ನೆಗೆ…. “ನನ್ನ ತಾಯಿಯ ಆರೋಗ್ಯ ಸರಿ ಇಲ್ಲ…. ಅವಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ”…. ಎಂದು ಹೇಳುತ್ತಾ ಈವರೆಗೂ ನಡೆದ ಎಲ್ಲಾ ವಿಚಾರವನ್ನೂ ಆತನಿಗೆ ತಿಳಿಸಿದಳು. ಅತ್ತೆಗೆ ಹುಷಾರಿಲ್ಲ ಎನ್ನುವುದನ್ನು ಅರಿತ ಆತನ ಮನಸ್ಸಿಗೆ ತುಂಬಾ ಬೇಸರವಾಯಿತು…. “ಒಂದು ಕೆಲಸ ಮಾಡು…. ತರಗತಿಗಳು ಮುಗಿದ ನಂತರ ನೀನು ಆಸ್ಪತ್ರೆಗೆ ಹೋಗುವಾಗ ನನಗಾಗಿ ಸ್ವಲ್ಪ ಹೊತ್ತು ಇಲ್ಲಿಯೇ ಕಾದಿರು…. ನನ್ನ ತರಗತಿ ಮುಗಿದ ನಂತರ ನಾವಿಬ್ಬರೂ ಜೊತೆಯಾಗಿಯೇ ನಮ್ಮ ಮನೆಗೆ ಹೋಗೋಣ…. ಅತ್ತೆಯನ್ನು ನೋಡಲು ನಿನ್ನ ಜೊತೆಗೆ ನಾನೂ ಬರುತ್ತೇನೆ”.. ಎಂದು ಹೇಳಿ, ಅವಳ ತರಗತಿಯ ಬಾಗಿಲನ್ನು ಡಸ್ಟರ್ನಿಂದ ಮೆಲ್ಲಗೆ ತಟ್ಟಿದನು. ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಲೆಕ್ಚರರ್ ಬಾಗಿಲ ಕಡೆಗೆ ನೋಡಿದಾಗ ತನ್ನ ಗೆಳೆಯ ತನ್ನ ತರಗತಿಯ ವಿದ್ಯಾರ್ಥಿನಿಯೊಂದಿಗೆ ಹೊರಗಡೆ ನಿಂತಿರುವುದು ಕಂಡಿತು….” ಒಂದು ನಿಮಿಷ ಇರಿ ಮಕ್ಕಳೇ…. ಇದೋ ಬಂದೆ”…. ಎಂದು ಹೇಳುತ್ತಾ, ಗೆಳೆಯನಿಗೆ ಹಸ್ತಲಾಘವ ಕೊಟ್ಟು,… “ಇದೇನು ಹುಡುಗೀ…, ತರಗತಿಗೆ ಬರದೇ ಇಲ್ಲೇಕೆ ನಿಂತಿರುವೆ? ….. ದಿನವೂ ತರಗತಿಗೆ ಸರಿಯಾದ ಸಮಯದಲ್ಲಿ ಹಾಜರಾಗುತ್ತಿದ್ದ ನಿನಗೆ ಇಂದೇನಾಯಿತು?…. ಎಂದಾಗ ಆತನ ಗೆಳೆಯ ತನ್ನ ಕಸಿನ್ ಬಗ್ಗೆ ಎಲ್ಲಾ ವಿವರವನ್ನೂ ತಿಳಿಸಿದ. ಆ ಲೆಕ್ಚರರ್ ಹುಡುಗಿಯನ್ನು ನೋಡಿ ಅನುಕಂಪದಿಂದ…. “ಸರಿ ಹೋಗು…. ತರಗತಿಯಲ್ಲಿ ಕುಳಿತುಕೋ”… ಎಂದು ಹೇಳಿ, ಮತ್ತೆ ಸಿಗೋಣ ಎಂದು ಗೆಳೆಯನಿಗೆ ಹೇಳುತ್ತಾ ಕೈ ಬೀಸಿ, ಲೆಕ್ಚರರ್ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಾರಂಭಿಸಿದರು. ಅವಳ ಗೆಳತಿಯರು ಮತ್ತು ಇತರೇ ವಿದ್ಯಾರ್ಥಿಗಳು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆದರೆ ಇವಳ ಗಮನ ಯಾರಡೆಗೂ ಇರಲಿಲ್ಲ. ತರಗತಿಗಳೆಲ್ಲವೂ ಮುಗಿದ ನಂತರ ಇಂದು ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಳು. ತರಗತಿಯಲ್ಲಿ ಪಾಠದ ಕಡೆಗೆ ಕೂಡ ಗಮನ ಹರಿಸಲು ಅವಳಿಂದ ಸಾಧ್ಯವಾಗಲಿಲ್ಲ. ತರಗತಿಗಳಿಲ್ಲವೂ ಮುಗಿದ ಕೂಡಲೇ ಕಾಲೇಜಿನ ಆವರಣದಲ್ಲಿದ್ದ ಮರದ ಕೆಳಗೆ ಕುಳಿತು ತನ್ನ ಕಸಿನ್ ಬರುವಿಕೆಗಾಗಿ ಕಾಯುತ್ತಿದ್ದಳು. ಕಸಿನ್ ಬಂದು ಕೂಡಲೇ ಎದ್ದು ಆತನ ಜೊತೆಗೆ ಅವನ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ ಮೌನವಾಗಿದ್ದ ಆ ಹುಡುಗಿಯನ್ನು ಕಂಡು ಆತನ ಮನ ಮರುಗಿತು.
ಕಾವ್ಯ ಸುಧೆ ಅವರ ಕವಿತೆ “ಭಾವಯಾನ “
ಕಾವ್ಯ ಸಂಗಾತಿ ಕಾವ್ಯ ಸುಧೆ “ಭಾವಯಾನ “ ತುಂಬಿದ ನಿನ್ನೊಲವ ಜೋಳಿಗೆಯಿಂದನನಗೂ ತುಸು ಉಣಬಡಿಸಬಾರದೇಕನಸು ಮುನಿಸು ಸಮವಾಗಿ ಜೋಡಿಸುಶುರುವಾಗಲಿ ನಮ್ಮಿ ಭಾವಯಾನ ಜೊತೆಗಿರಲು ಬೇಕಷ್ಟಿಷ್ಟು ಸಡಿಲತೆಇರಬೇಕು ಎಚ್ಚರಿಕೆ ಇನಿತುನೆನಪಲೆ ನಗುವ ಕಲಿಯಲಿ ಮನಮಧುರ ಸಂಯಮವೇ ಹೆಸರದಕೆ ಅದೇನಿದ್ದರೂ ನಿನ್ನ ನಂತರನಿನ್ನ ಅನುರಾಗವೇ ನಿರಂತರಹಾಕಲ್ಹೇಗೆ ಮನಕೆ ಕಡಿವಾಣಭೇದಿಸುವುದೇ ಪ್ರೇಮದ ನಿಯಮ….!! ಕಾವ್ಯ ಸುಧೆ.
ಕಾವ್ಯ ಸುಧೆ ಅವರ ಕವಿತೆ “ಭಾವಯಾನ “ Read Post »
ಬಾಗೇಪಲ್ಲಿ ಅವರ ಕವಿತೆ “ಗಾಜು”
ಕಾವ್ಯ ಸಂಗಾತಿ ಬಾಗೇಪಲ್ಲಿ “ಗಾಜು” ನಂಬಿಕೆ ಗಾಜಿ ನಂತೆನಮ್ಮನೋಟ ಒಳ ತೂರಿ ಹೋಗುವಷ್ಟು ಸ್ಪಷ್ಟ ಸ್ವಚ್ಛ ಜಾಗ್ರತೆ ರಹಿತ ನಮ್ಮ ಸ್ಪರ್ಶ ನೆನಪಿಡಲು ಅದು ಬಲು ಸೂಕ್ಷ್ಮ ಮೊದಲ ಬಾರಿಯ ಅಂತ ಸ್ಪರ್ಶಕೆ ಒಡೆಯದೆ ಉಳಿದಿದೆಎಲ್ಲಿಯವರೆಗೆ? ಒಂದು ಸಾಮಾನ್ಯ ದಿನ ಬಹು ಸಣ್ಣ ಒತ್ತಡಕೆ ಅದರಲಿ ಬಿರುಕು ಕಾಣಲೂ ಬಹುದುನಮ್ಮ ಸಂಬಂಧಗಳೂ ಬಹುಶಃ ಹಾಗೆಯೇ! ಅದು ನಮಗರಿವಿಗೆ ಬರುವುದು ಸರಿಪಡಿಸ ಹೋದಾಗಅದು ಆಗಲೇ ಬಿರಕು ಬಿಟ್ಟಿದೆ ಎಂದು.(ಮು.ಪು ವಿನ ಆಂಗ್ಲ ಬರಹದ ಕನ್ನಡೀಕರಣ.) ಬಾಗೇಪಲ್ಲಿ
ಬಾಗೇಪಲ್ಲಿ ಅವರ ಕವಿತೆ “ಗಾಜು” Read Post »
“ಏಕ ಪೋಷಕತ್ವ” ವಿಶೇಷ ಲೇಖನ, ಡಾ.ರೇಖಾ ಉದಯ್
ವಿಶೇಷ ಸಂಗಾತಿ ಡಾ.ರೇಖಾ ಉದಯ್ “ಏಕ ಪೋಷಕತ್ವ” ನದಿಗಳ ಕೊನೆಗೆ ಸೇರುವುದು ಸಮುದ್ರವನ್ನೇ ಎಂದು ಹೇಳುವುದು ಸಹಜವಾದ ಮಾತು. ಆದರೆ ಕೆಲವು ನದಿಗಳು ಸಮುದ್ರ ಸೇರದೆ ಕೆರೆ-ತೊರೆಗಳಾಗಿ ವಸುಂಧರೆಯ ಚೆಲುವನ್ನು ಹೆಚ್ಚಿಸುತ್ತವೆ. ಈ ಮಾತನ್ನು ಏಕೆ ಹೇಳುತ್ತಿರುವೆ ಎಂದರೆ ಸಿಂಗಲ್ ಪೇರೆಂಟ್ಸ ಅಥವಾ ಏಕ ಪೋಷಕತ್ವ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳುತ್ತಿರುವ ಮತ್ತು ನೋಡುತ್ತಿರುವ ವಿಷಯವಾಗಿದೆ. ನಾನು ತುಂಬಾ ಹತ್ತಿರದಲ್ಲಿ ನೋಡಿರುವುದಕ್ಕೆ ಈ ವಿಚಾರ ಬರೆಯಲು ತೆಗೆದುಕೊಂಡೆ ಎಲ್ಲೋ ಕೇಳಿದಾಗ, ಮತ್ತೆಲ್ಲೂ ಓದಿದಾಗ, ಯಾರನ್ನೋ ನೋಡಿದಾಗ ಮನಸ್ಸಿಗೆ ಅಷ್ಟು ನಾಟದೆ ಇರಬಹುದು. ಆದರೆ ನಮ್ಮ ಆತ್ಮೀಯರು ಇಂತಹ ಪರಿಸ್ಥಿತಿಗಳನ್ನ ಎದುರಿಸಿದಾಗ ಸಹಜವಾಗಿ ನೋವಾಗುತ್ತದೆ. ಮಾನಸಿಕ ಯಾತನೆ ಉಂಟಾಗುತ್ತದೆ.ಜೊತೆಗಾರ ಅಥವಾ ಜೊತೆಗಾತಿ ಇದ್ದು ಅನೇಕ ಸಮಸ್ಯೆಗಳನ್ನ ಇಂದು ಎದುರಿಸುತ್ತಿರುವಾಗ ಒಂಟಿಯಾಗಿ ಎಲ್ಲವನ್ನೂ ಎದುರಿಸುವುದು ಇದೆಯಲ್ಲ ಅದು ಹೇಳಲಸಾಧ್ಯ ಹಿಂಸೆ, ಅದರಲ್ಲೂ ಒಬ್ಬ ಹೆಣ್ಣುಮಗಳು ಸಿಂಗಲ್ ಪೇರೆಂಟ್ಸ್ ಆದಾಗ ತಂದೆ ಪ್ರೀತಿ, ತಾಯಿ ಪ್ರೀತಿ ಒಬ್ಬಳೇ ನೀಡುತ್ತಾ ಅನೇಕ ಸವಾಲುಗಳನ್ನು ಎದುರಿಸುತ್ತಾ ಹೋರಾಡಬೇಕು. ವಿಚ್ಛೇದನ, ಸಂಗಾತಿ ಸಾವು, ಅಥವಾ ದತ್ತು ತೆಗೆದುಕೊಂಡು ಸಾಕುವುದು,ಇದರ ಹಂತವಾಗಿರುತ್ತದೆ “ಯಾವ ಹಾದಿಯಲ್ಲಾದರು ನಡೆ, ನಿನ್ನ ಆತ್ಮವಿಶ್ವಾಸವೇ ನಿನಗೆ ದಾರಿ ದೀಪ” ಎಂಬ ಕುವೆಂಪುರವರ ಮಾತು ಸ್ಪೂರ್ತಿ ನೀಡುತ್ತದೆ. ಜೀವನ ಪಥದಲ್ಲಿ ಒಂಟಿಯಾಗಿ ಸಾಗುವಾಗ ಮಗುವಿನ ಸುಖ ಸಂತೋಷ, ವಿದ್ಯಾಭ್ಯಾಸ ಆರೋಗ್ಯ ಹೀಗೆ ಹತ್ತು ಹಲವಾರು ಜವಾಬ್ದಾರಿ ಹೊರುವ ದೀಪ ಸ್ತಂಭವಿದ್ದಂತೆ, ಬಿರುಗಾಳಿಯೇ ಬರಲಿ ,ಸುನಾಮಿ ಅಲೆಗಳೇ ಅಪ್ಪಳಿಸಲಿ ಮಗುವಿನ ಭವಿಷ್ಯಕ್ಕಾಗಿ ಎಲ್ಲವನ್ನು ಎದುರಿಸುತ್ತಲೆ ಸಾಗುತ್ತಾಳೆ.ಒಮ್ಮೆ ತಮ್ಮ ಸಂಬಂಧಗಳಿಂದ ಹೊರ ಬಿದ್ದು ಸಿಂಗಲ್ ಪೇರೆಂಟ್ ಎಂಬ ಹಣೆ ಪಟ್ಟಿ ಬಿದ್ದ ಮೇಲೆ ಅವಳ ಅಸ್ತಿತ್ವವನ್ನೇ ಅಲ್ಲಾಡಿಸಿ ಅವಳ ಜಂಘಾಬಲ ಉಡುಗಿಸಿ ಬಿಡುತ್ತಾರೆ ಸುತ್ತಮುತ್ತಲಿನವರು. ಗಂಡ ಇಲ್ಲದೆ ಇರುವ ಮಹಿಳೆಯರು ಮೇಲೆ ಒಂದು ತೆರನಾದ ಅನುಕಂಪ, ಅಯ್ಯೋ ಪಾಪ ಹೀಗಾಗಬಾರದಿತ್ತು ,ಮಗು ಚಿಕ್ಕದು ಎಂಬ ಕಾರಣಗಳಿಂದ, ಒಂದು ಕಡೆಯಿಂದ ಮಾನಸಿಕ ಬೆಂಬಲ ಅಥವಾ ಆರ್ಥಿಕ ಬೆಂಬಲ ಕೂಡ ದೊರೆಯಬಹುದು, ಅವಳ ಕಷ್ಟಕ್ಕೆ ಎಲ್ಲರೂ ಸಾತ್ ಕೊಡಬಹುದು. ಆದರೆ ಎಲ್ಲರಿಗೂ ಹೀಗೆ ಆಗಬೇಕು ಎಂಬುವ ಹಾಗಿಲ್ಲ, ಅವಳಿಗೆ ತವರು ಮನೆಯಲ್ಲಿ, ಗಂಡನ ಮನೆಯಲ್ಲಿ ಸ್ಥಾನ ಸಿಗದೇ ಒಂಟಿಯಾಗಿ ಸಮಾಜದ ಕೊಂಕು ನುಡಿಗಳನ್ನ ,ಸಮಸ್ಯೆಗಳನ್ನ ಎದುರಿಸುತ್ತಾ ಮಗುವನ್ನು ಬೆಳೆಸಿ ಒಳ್ಳೆಯ ಶಿಕ್ಷಣ ,ಆರೋಗ್ಯ ಕೊಟ್ಟು ಪಾಲನೆ ಪೋಷಣೆ ಮಾಡುವುದು ಒಂದು ದೊಡ್ಡ ಸವಾಲು ಎಂಬುದು ಸುಳ್ಳಲ್ಲ.ವಿಚ್ಛೇದಿತ ಮಹಿಳೆಗೆ ಇಂತಹ ಸಂಪೂರ್ಣ ಬೆಂಬಲ ಸಿಗಲಾರದು ಏಕೆಂದರೆ ಡಿವೋಸ೯ ತಗೋತಾ ಇರೋದೇ ಮೊದಲು ಕುಟುಂಬದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ, ಹೊಂದಿಕೊಂಡು ಹೋಗುವುದರ ಬಗ್ಗೆ ಸಾಕಷ್ಟು ತಿಳಿ ಹೇಳಿರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಆದರೆ ಅವಳ ದಿಟ್ಟ ನಿರ್ಧಾರ ಕೆಲವರಲ್ಲಿ ಅಸಮಾಧಾನ ಉಂಟು ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಅವಳು ಏಕಾಂಗಿ ಹೋರಾಟ ನಡೆಸಲೇ ಬೇಕಾಗುತ್ತದೆ ತನ್ನ ದುಡಿಮೆಯೊಂದಿಗೆ ಮಗುವಿನ ಆಗುಹೋಗುಗಳ ಜವಾಬ್ದಾರಿ ಹೆಗಲೇರುತ್ತದೆ. ಎಲ್ಲಾ ಸಮಸ್ಯೆಗಳನ್ನ ಒಂಟಿಯಾಗಿ ನಿಭಾಯಿಸುತ್ತಾ ಆರ್ಥಿಕವಾಗಿ, ಮಾನಸಿಕವಾಗಿ ,ಸಾಮಾಜಿಕವಾಗಿ, ಸದೃಡರಾಗಬೇಕಾಗುತ್ತದೆ. ಮಗು ದೊಡ್ಡದಾಗುತ್ತಾ ಬಂದಂತೆ ಮಗುವಿನ ಬದುಕಿನ ಮಜಲುಗಳನ್ನು ತಿಳಿಸಬೇಕಾಗುತ್ತದೆ. ಎಲ್ಲ ರೀತಿಯ ಪ್ರೀತಿಯ ಹೂಮಳೆ ಸುರಿಸಬೇಕಾಗುತ್ತದೆ, ಕೆಲವೊಮ್ಮೆ ಇದೆಂತಹ ಬದುಕು ಅನ್ನಿಸದಿರದು. ಮಗುವಿಗಾಗಲಿ, ತನಗೆ ಆಗಲಿ ಆರೋಗ್ಯ ಸಮಸ್ಯೆಗಳು ಉಂಟಾದಾಗ ಆಸ್ಪತ್ರೆ, ಮನೆ, ಮಗು ,ಹಣ ಇವೆಲ್ಲವು ಪೇಡಂಭೂತವಾಗಿ ಕಾಡುತ್ತದೆ .ಇತ್ತೀಚೆಗೆ ಸಿಂಗಲ್ ಪೇರೆಂಟ್ ಎಂಬುದು ಟ್ರೆಂಡ್ ಆಗಿದೆ, ಇದೆಲ್ಲ ಕಾಮನ್ ಎಂಬ ಮಾತು ಎಲ್ಲರ ಬಾಯಲ್ಲೂ ಸಹಜವಾಗಿ ಬರತೊಡಗಿದೆ. ಹಿರಿಯರ ವಿರೋಧ ಸದಾ ಇದಕ್ಕೆ ಇದ್ದೇ ಇರುತ್ತದೆ ,ಅವರ ಮನಸ್ಸು ಇಂಥವುಗಳಿಗೆ ಒಪ್ಪದು, ಆದರೆ ಜಮಾನ ಬದಲಾಗಿದೆ. ಭಾವನೆಗಳ ನೆಲಗಟ್ಟಿನ ಮೇಲೆ ಬದುಕು ಸಾಗುತ್ತಿಲ್ಲ. ನಾನು ಎಂಬ ಅಹಂ ತಾಂಡವವಾಡುತ್ತಿದೆ.ಅಡ್ಜೇಸ್ಟ ಆಗಬೇಕಾ?,ನಾನೇ ಆಗಬೇಕಾ? ಯಾಕೆ ಆಗಬೇಕು, ನಾನು ದುಡಿತಾ ಇಲ್ವಾ,ಎಂಬ ಪ್ರಶ್ನೆಗಳ ಸುರಿಮಳೆ, ಇಬ್ಬರಲ್ಲೂ ಅಹಂ ಹೆಚ್ಚಾದಂತೆ ಸಂಬಂಧಗಳ ನಡುವೆ ಬಿರುಕು ಸರ್ವೇಸಾಮಾನ್ಯ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವರಿಬ್ಬರ ಜಗಳ ಮನಸ್ತಾಪಗಳಿಂದ ಮಗು ಖಿನ್ನತೆಗೆ ಒಳಗಾಗಬಹುದು. ಅಥವಾ ದುರ್ಮಾರ್ಗ, ದುರಭ್ಯಾಸಗಳಗತ್ತ ವಾಲಬಹುದು.ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸಮಾಧಾನದಿಂದ ಕುಳಿತು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ!? ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಒಂದು ವೇಳೆ ಇದು ಅಸಾಧ್ಯ ಎಂದಾಗ ಅನಿವಾರ್ಯ. ಆದರೆ ಮಕ್ಕಳ ಬೆಳವಣಿಗೆಯಲ್ಲಿ ಇಬ್ಬರ ಪಾತ್ರ ಎಷ್ಟು ಮುಖ್ಯವಾದದ್ದು .ಒಂಟಿಯಾದಾಗ ಆ ಜವಾಬ್ದಾರಿ ದ್ವಿಗುಣವಾಗುತ್ತೆ ಮಗುವಿನ ಮನಸ್ಥಿತಿಗೆ ಸ್ಪಂದಿಸುತ್ತಾ ಅವರಲ್ಲಿ ಒಂದು ಸಕಾರಾತ್ಮಕ ಸದೃಢ ಭಾವನೆ ಬೆಳೆಸಿ ಒಂಟಿಯಾಗಿದ್ದರು ಎಷ್ಟು ಚೆನ್ನಾಗಿ ಮಗುವನ್ನು ಬೆಳೆಸಿದ್ದಾರೆ, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ ಎಂದು ಬಾಯಿ ಮೇಲೆ ಬೆರಳು ಇಡುವಂತಾಗಬೇಕು, ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಬೇಕು ಅಷ್ಟೇ…. ಡಾ.ರೇಖಾ ಉದಯ
“ಏಕ ಪೋಷಕತ್ವ” ವಿಶೇಷ ಲೇಖನ, ಡಾ.ರೇಖಾ ಉದಯ್ Read Post »



