ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ”

ಕಾವ್ಯ ಸಂಗಾತಿ ಕಾವ್ಯ ಸುಧೆ “ಮಾಯಾಜಾಲ” ನಿನ್ನೊಲುಮೆ ಭಾವದ ತೇರನು ಏರುತಾಹಾದಿಗುಂಟ ಹೂವ ಹಾಸಿ ಕಾದೆನುಇರುಳ ಒಂದು ಜಾವ ಕಳೆಯಲುನೆಟ್ಟ ನೋಟ ನಿನ್ನ ಜಾಡ ಅರಿಯದೆಮೂಕ ಮನದಿ ಮೌನ ರೋದನೆ ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣ, ಬೇಕು ಬೇಡಎನದೆ ಹೋದೆ ಕಾಣದಾಗೆ ತಲ್ಲಣನಿನ್ನ ಮಧುರ ನೆನಪು ಮರುಕಳಿಸಿಈಟಿಯಂಗಿರಿದು ಎದೆಗೆ ನೋವ ಬಿತ್ತರ ಭಾವಗೀತೆಯಂತೆ ನಲಿದ ಬಾಳಿನಲ್ಲಿತೊರೆದು ಹೋದೆ ಇರಿಸಿ ಬಾಧೆಮಾಯವಾದೆಯೇಕೆ ಮಾಯಾಮೃಗದಂತೆಕೈಗೆ ಸಿಗದೆ ಸುಳಿವು ಕೂಡ ನೀಡದೆ ಹೋದೆಕೆಣಕಿ ಶೋಧೆ ಸಿಲುಕಿಸೆನ್ನ ಜಾಲದಲಿ…..!! ಕಾವ್ಯ ಸುಧೆ.

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ” Read Post »

ಇತರೆ

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಜಸ್ಟಿಸ್ ಸಂದೀಪ್ ಮೆಹತಾ ಅವರು ನಿಮ್ಮ ಪತ್ನಿ ನಿಮ್ಮ ಕೆಲಸದಾಕೆ ಖಂಡಿತವಾಗಿಯೂ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. 21ನೇ ಶತಮಾನದತ್ತ ಕಾಲಿಡುತ್ತಿರುವ ಭಾರತೀಯ ಕೌಟುಂಬಿಕ ಬದುಕಿನಲ್ಲಿ ಈ ಹೇಳಿಕೆಯು ಅತ್ಯಂತ ಮಹತ್ವದ್ದೆ೦ದು ದಾಖಲಿಸಬಹುದು.ಅವರ ಈ ಹೇಳಿಕೆಯು ಮದುವೆ ಎನ್ನುವುದು ಗಂಡ ಮತ್ತು ಹೆಂಡತಿ ಇಬ್ಬರ ಪರಸ್ಪರರ ಸಾಂಗತ್ಯದ ಬದುಕು… ಇದನ್ನು ಪರಸ್ಪರರಿಗೆ ಗೌರವ ನೀಡುವ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ದಂಪತಿಗಳು ನಿರ್ವಹಿಸಬೇಕೇ ಹೊರತು 21ನೇ ಶತಮಾನಕ್ಕೆ ಅಥವಾ ಪ್ರಸ್ತುತ ದಿನಮಾನಗಳಿಗೆ ಹೊಂದದ ಲಿಂಗ ಸಂಬಂಧಿ ಜವಾಬ್ದಾರಿಗಳಂತೆ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.ಅವರ ಈ ಹೇಳಿಕೆಯು ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳು ಹಾಗೂ ಅದು ನಮ್ಮ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಕಾರಣ ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳದು ಎಂಬ ಪುರುಷ ಪಾರಮ್ಯದ ಭಾರತ ದೇಶದ ಲಿಖಿತ ನಿಯಮಗಳ ಕುರಿತು ಪ್ರಶ್ನೆ ಮಾಡುತ್ತಿದೆ. ಕಾನೂನಾತ್ಮಕ ಚೌಕಟ್ಟುಗಳು ಬದಲಾಗುತ್ತಿರುವ ಅಭಿವೃದ್ಧಿಪರ ಸಾಮಾಜಿಕ ಮೌಲ್ಯಗಳ ಜೊತೆಗೆ  ಹೊಂದಿಕೊಂಡು ನಡೆಯುತ್ತಿವೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನುಡಿಗಳು ಪ್ರತಿಪಾದಿಸುತ್ತಿದ್ದು ಪಿತೃ ಸತ್ತಾತ್ಮಕ ಯೋಚನೆಯ ಆಳವಾದ ಬೇರುಗಳನ್ನು ಬುಡ ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು ಸಾಮಾಜಿಕ ಕಾರ್ಯಕರ್ತರು ಈ ವಿಷಯವನ್ನು ಎತ್ತಿ ಹಿಡಿದಿದ್ದಾರೆ.ಸಮಾಜದಲ್ಲಿ ನಿಜವಾದ ಲಿಂಗ ಸಮಾನತೆಯನ್ನು ತರಬೇಕು ಎಂದರೆ ಗೃಹ ಕೃತ್ಯದಲ್ಲಿ ಇರುವ ಘನತೆಯನ್ನುಉಳಿದವರೆಗೂ ಗೊತ್ತು ಮಾಡಿಕೊಡಬೇಕು ಹಾಗೂ ಗೃಹ ಕೃತ್ಯ ಎಂಬುದು ಕೇವಲ ಹೆಣ್ಣು ಮಕ್ಕಳ ಕರ್ತವ್ಯವಲ್ಲ ಬದಲಾಗಿ ಭೂಮಿಯ ಮೇಲೆ ಇರುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಇದಾಗಿದೆ ಹಾಗೂ ಇದನ್ನು ಪಾಲಿಸುವುದನ್ನು ನಾವು ಕಲಿಯಲೇಬೇಕು… ಅದೆಷ್ಟೇ ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಕೌಟುಂಬಿಕವಾಗಿ ಗೃಹ ಕೃತ್ಯಗಳನ್ನು ಸಂಭಾಳಿಸಿಕೊಂಡು ನಡೆದರೆ ಮಾತ್ರ ಪುರುಷ ಈ ಜಗತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.ಆಹಾರವನ್ನು ಸೇವಿಸುವ, ಬಟ್ಟೆ ಬರೆಗಳನ್ನು ಧರಿಸುವ, ಮನೆಯೆಂಬ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಪ್ರತಿಯೊಬ್ಬರು ಕೂಡ ಈ ಮೂಲಭೂತ ಅವಶ್ಯಕತೆಯನ್ನು ಬದುಕಿನ ಭಾಗವಾಗಿ  ತಮ್ಮದಾಗಿಸಿಕೊಳ್ಳಲೇಬೇಕು.ಹೆಣ್ಣು ಮಕ್ಕಳ ಮೇಲೆ ಗೃಹಕೃತ್ಯದ ಭಾರವನ್ನು ಹೊರೆಸಿರುವ ಸಂಪ್ರದಾಯವಾದಿಗಳ ಮೇಲೆ ಸವಾಲೆಸೆಯುವಂತೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದ್ದು ಗೃಹ ಕೃತ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲಿನ ಅನಗತ್ಯ ಹೊರೆಯನ್ನು ನಿವಾರಿಸಲು ಪ್ರಯತ್ನಿಸಲೇಬೇಕು. ನೋಡಿದಿರಾ ಸ್ನೇಹಿತರೆ! ಅಜ್ಞರ ನೂರಾರು ಮಾತುಗಳಿಗಿಂತ ಪ್ರಾಜ್ಞರ ಒಂದು ಮಾತು, ಒಂದು ವಾಕ್ಯ ಬೀರುವ ಪರಿಣಾಮ ಬಹಳ ಮೌಲಿಕವಾದದ್ದು ಗುರುತರವಾದದ್ದು. ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಒಂದು ಪ್ರಶ್ನೆ ಸಾಮಾಜಿಕ ವಲಯದಲ್ಲಿ ಚಿಂತನೆಯ ಒಂದು ಕಿಡಿಯನ್ನು ಹಬ್ಬಿಸಿದ್ದು  ಹೆಣ್ಣು ಮಕ್ಕಳ ಹಿತರಕ್ಷಣೆಯ ಕಾನೂನುಗಳನ್ನು ರಕ್ಷಿಸುವಲ್ಲಿ  ಪರಸ್ಪರರ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಅತ್ಯಂತ ನ್ಯಾಯಯುತವಾದ, ಸೌಹಾರ್ದತೆಯಿಂದ ಕೂಡಿದ ಹಾಗೂ ಸಮತೋಲನದಿಂದ ಕೂಡಿದ ಸಾಂಗತ್ಯದ ವೈವಾಹಿಕ  ಬಂಧನಗಳು ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಬಲ್ಲವು.ಹೊಸ ಬಗೆಯ ವಿವಾಹಗಳು ಲಿಂಗ ಸಮಾನತೆಯನ್ನು ಹೊಂದಿದ್ದು ಜವಾಬ್ದಾರಿ ಹಾಗೂ ಹೊಣೆಗಾರಿಕೆಗಳನ್ನು ಹಂಚಲ್ಪಡುವ ನಿಟ್ಟಿನಲ್ಲಿ ಭಾರತ ದೇಶವು ಬದಲಾಗುತ್ತಿರುವುದು ಸ್ವಾಗತಾರ್ಹವಾಗಿದೆ.ಲಿಂಗ ಸಮಾನತೆಯ ಕೂಗು ಕಳೆದ ಎರಡು ಮೂರು ದಶಕಗಳಿಂದ ಕೇಳಿ ಬರುತ್ತಿದ್ದರು ಕೂಡ ಈ ಕುರಿತು ಅಷ್ಟಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ…. ಪ್ರಸ್ತುತ ದಿನಮಾನಗಳಲ್ಲಿ ಪುರುಷನಷ್ಟೇ ವಿದ್ಯಾರ್ಹತೆಯನ್ನು ಹೊಂದಿರುವ ಮಹಿಳೆ  ಆತನಷ್ಟೇ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿ ತನ್ನ ಮೇಲೆ ಅಧಿಕಾರ ಚಲಾಯಿಸುವ ಗಂಡನಾಗದೆ, ಬದುಕನ್ನು ಹಂಚಿಕೊಳ್ಳುವ ಸಂಗಾತಿಯಾಗಲಿ ಎಂದು ಆಕೆ ಬಯಸುತ್ತಾಳೆ. ತನ್ನ ಹಕ್ಕುಗಳ ಕುರಿತು ಸಂಪೂರ್ಣ ಅರಿವನ್ನು ಹೊಂದಿರುವ ಆಕೆ ಪುರುಷ ಪ್ರಧಾನ ಸಮಾಜದ ಬಹುತೇಕ  ರೀತಿ ನೀತಿಗಳನ್ನು ಈಗಾಗಲೇ ಧಿಕ್ಕರಿಸುತ್ತಿದ್ದು ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಸಮಾನತೆಯ ಬದುಕನ್ನು ಹಂಚಿಕೊಂಡು ಬಾಳಲು ಇಚ್ಚಿಸುತ್ತಿದ್ದಾಳೆ. ಇದರ ನಿಜವಾದ ತತ್ವವನ್ನು ಅರಿತಿರುವ ಬುದ್ಧಿಜೀವಿಗಳು ಕೂಡ ಇದನ್ನು ಅನುಮೋದಿಸಿದ್ದು  ಇದೀಗ ಸುಪ್ರೀಂ ಕೋರ್ಟ್ ಇದಕ್ಕೆ  ತನ್ನದೇ ಆದ ರೀತಿಯಲ್ಲಿ ಒಪ್ಪಿಗೆಯ ಮುದ್ರೆಯನ್ನು ಒತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವೀಣಾ ಹೇಮಂತಗೌಡ ಪಾಟೀಲ್

“ನಿಮ್ಮ ಪತ್ನಿ… ನಿಮ್ಮ ಕೆಲಸದಾಕೆ ಅಲ್ಲ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಕಾವ್ಯಯಾನ

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.”

ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ಅವ್ವ ನೀನಿನ್ನು ಇರಬೇಕಿತ್ತು.” ಮಕ್ಕಳೆಲ್ಲ ತವರಿಗೆ ಬಂದರೆಏನ್ ಸಡಗರ ಈ ಅವ್ವಗವಯಸ್ಸು ಮರುತ ಸಣ್ಣ ಹುಡುಗಿ ಆಗಿಬಿಡುತ್ತಿದ್ಲುರವೆ ಉಂಡೆ ಖಾರದ ಮಂಡಾಳ ಮುಂದಿಟ್ಟು ತಿನ್ನು ತಿನ್ನು ಅಂತಒಂದೇ ವರಾತ ಹಚ್ಚತಿದ್ಲು ಅವ್ವ ಅದಕ್ಕೆ ನೀನು ಇನ್ನಷ್ಟು ದಿನ ಇರಬೇಕಿತ್ತು. ಈಗ ಅಲ್ಲಿ ರವೆ ಉಂಡಿನೂ ಇಲ್ಲ ಮಂಡಾಳನು ಇಲ್ಲ ಬರೀ ಶೂನ್ಯ ನಿನ್ನ ಕೈ ರುಚಿ ತಿನ್ನೋ ಭಾಗ್ಯನು ಇನ್ನಿಲ್ಲ ಏನ್ ಚಂದ ನಿನ್ ಮಾತು ಏನ್ ಚೆಂದ ನಿನ್ನ  ನಗುಹಣೆ ತುಂಬಾ ಕುಂಕುಮ ತಲೆ ತುಂಬಾ ಸೆರಗು ತುರುಬಿನಲ್ಲಿ ಸದಾ ಹೂವಿನ ಮಾಲೆ. ನಿನ್ ನೋಡೋದೇ ಒಂದು ಸಡಗರ. ಅವ್ವ ಅದಕ್ಕೆ  ನೀನಿನ್ನು ಇರಬೇಕಿತ್ತು. ಆಷಾಢ ಮಾಸಾ ಶ್ರಾವಣ ಮಾಸ ಅಂತಉಡಿ ತುಂಬಿ ಹರಿಸಿ ಹಾರೈಸಿ ಕಳಿಸ್ತಿದ್ದೆನಿನ್ನಲ್ಲಿರೋದನ್ನೆಲ್ಲ ಮಕ್ಕಳಿಗೆ ಕೊಟ್ಟು ಪ್ರೀತಿಯ  ಅಮೃತದಾರೆ ಹರಿಸುತ್ತಿದ್ದೆ.ಅವ್ವ ನಿನ್ನ ಆಶೀರ್ವಾದ ಬಲದಿಂದ ಅಸಾಧ್ಯವೆಲ್ಲ ಸಾಧ್ಯವಾಗಿದ್ದು ಸತ್ಯ  ಅವ್ವ ಅದಕ್ಕೆ ನೀನಿನ್ನು  ಇರಬೇಕಿತ್ತು. ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ನಿನ್ನ ಸಂಭ್ರಮಕ್ಕೆ ಮಿತಿಯೇ ಇಲ್ಲ  ನಿನ್ನ ಜೀವನ ಪ್ರೀತಿಗೆ ಸಾಟಿಯೇ ಇಲ್ಲ. ನೀನು ಇಷ್ಟು ಬೇಗ ಅಗಲಿ ಅಂತ ನಾವೆಲ್ಲ ಅಂದುಕೊಂಡೆ ಇರಲಿಲ್ಲ ಅಪ್ಪನಗಲಿ ಒಂದು ದಿನ ಇದ್ದವಳಲ್ಲ ಈಗ ಅಪ್ಪ ಆಕಾಶ ದಿಟ್ಟಿಸತ್ತಾ ಮೌನವಾಗಿ ಕಣ್ಣೀರ್ ಆಗ್ತಾರೆ .  ಅವ್ವ ಅದಕ್ಕೆ ನೀನಿನ್ನು ಇರಬೇಕಿತ್ತು.  ಅವ್ವ ಎಲ್ಲರ ಸ್ಥಾನ ತುಂಬುತ್ತಾಳೆ  ಆದ್ರೆ ಅವ್ವನ ಸ್ಥಾನ ಯಾರು ತುಂಬೋಕಾಗಲ್ಲ ಅಂತ ಅರ್ಥ ಆಗಿದೆ.ನೀನಿಲ್ಲದ ಮನೆ ಮನೆಯೇ ಅಲ್ಲ ನೀರಿಲ್ಲದ ಕೆರೆಗೆ ಕರು ಹೋಗಿ  ಬಂದಂತೆ ಆಗಿದೆ ಮಕ್ಕಳ ಸ್ಥಿತಿ.  ನಿನ್ನ ಬಳೆಗಳ ಸದ್ದಿಲ್ಲದ ಅಡುಗೆ ಮನೆ ಮೌನವಾಗಿ ಮಲಗಿದೆ.ತಾಯಿ ಇದ್ರೆ ತವ್ರೆಚ್ಚು ಅದಕ್ಕೆ  ನೀನಿನ್ನು ಇರಬೇಕಿತ್ತು ಅವ್ವ. ಫೋನ್ ಹಚ್ಚಿ ಕೊಡಿ ಹಚ್ಚಿ ಕೊಡಿ ಅಂತ ಅಪ್ಪಗ ದುಂಬಾಲು ಬೀಳ್ತಿದ್ದೆ.ಫೋನ್ ಹಚ್ಚಿ ಕೊಟ್ರೆ ಮುಗಿಯಿತು ಗಂಟೆಗಟ್ಟಲೆ ಎಲ್ಲವನ್ನು ವಿಚಾರಸ್ತಿದ್ದೆ.ಈಗ್ ನಿನ್ ಫೋನು ಮಾತು ನಗುನಿನ್ನ ಸಾಮಿಪ್ಯ ಎಂದೆಂದಿಗೂ ದೂರಾದವು.ಅವ್ವ ಅದಕ್ಕೆ ನೀನು ಇನ್ನಷ್ಟು ದಿನ  ಇರಬೇಕಿತ್ತು. ಜಯಶ್ರೀ ಭ. ಭಂಡಾರಿ.

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.” Read Post »

ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಶಶಿಕಾಂತ್‌ ಪಟ್ಟಣ ರಾಮದುರ್ಗ ಷಟ್ಪದಿಯ ಕವಿ ರಾಘವಾಂಕ ರಾಘವಾಂಕನು ಹರಿಹರನ ಸೋದರಳಿಯ ಮತ್ತು ಶಿಷ್ಯ ತನ್ನ ಸಾಹಿತ್ಯ ರಚನೆಯ ಆರಂಭದಲ್ಲಿ ರಾಘವಾಂಕನು ಕೇವಲ ವೈಷ್ಣವ ಪರಂಪರೆಯ ಕಾವ್ಯಗಳನ್ನು ರಚಿಸಿದನೆಂದು ಮತ್ತು ತನ್ನ ಗುರು ಮತ್ತು ಸೋದರ ಮಾವನಿಗೆ ಆ ಪುರಾಣಗಳನ್ನು ತೋರಿಸಿದಾಗ ಸಿಟ್ಟಿಗೆದ್ದ  ಹರಿಹರ  ತನ್ನ ಶಿಷ್ಯ ಮತ್ತು ಸೋದರಳಿಯನಿಗೆ ಬಾಯಿಯ ಮೇಲೆ ಬಡಿದನೆಂದು  ಆಗ ಐದು ಹಲ್ಲುಗಳು ಉದರಿದವೆಂದು  ಮುಂದೆ ನೀನು ಶರಣರ ಜೀವನಾಧಾರಿತ ಕೃತಿಗಳನ್ನು ಬರೆಯಬೇಕು ಅಂದರೆ ಮಾತ್ರ ನಿನಗೆ ಉದುರಿ ಹೋದ ಹಲ್ಲುಗಳು ಮರಳಿ ಬರುತ್ತವೆ ಎಂದು ಆಜ್ಞಾಪಿಸಿದನಂತೆ.  ಆಗ  ರಾಘವಾಂಕ 1ಸಿದ್ಧರಾಮ ಪುರಾಣ2.ಸೋಮನಾಥ ಚರಿತೆ3. ವೀರೇಶ ಚರಿತೆ4.ಶರಭ ಚಾರಿತ್ರ5.ಹರಿಹರ ಮಹತ್ವ ಎಂಬ ಶರಣರ ಲಿಂಗಾಯತ ತತ್ವಗಳ ಚರಿತೆಯನ್ನು ಬರೆದನಂತೆ ಮತ್ತೆ ಹಲ್ಲುಗಳು ಕಾಣಿಸಿಕೊಂಡವು ಎಂಬ  ಪ್ರತೀತಿ ಇದೆ. ಇದು ಹರಿಹರನ ಸಾತ್ವಿಕ ಕೋಪ ಮತ್ತು  ರಾಘವಾಂಕನ ಗುರು ಭಕ್ತಿಯನ್ನು ತೋರುತ್ತದೆ.  ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ  ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು.ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ , ಹರಡಿಕೊಂಡಿವೆ.ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವಾಗಿ ಮಾಡಿಕೊಂಡ ಸಿದ್ದನಂಜೇಶನ ರಾಘವಾಂಕ ಚಾರಿತ್ರ ಒಂದು  ವಿಶೇಷ ರೀತಿಯ ಕೃತಿಯಾಗಿದೆ. ಜನನ ಮತ್ತು ಜೀವನ            ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . ‘ಉಭಯಕವಿ ಕಮಲರವಿ’ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ ‘ಕವಿಶರಭಭೇರುಂಡ’ ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ. ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತ್ರೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಹೆಸರು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ.ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು ಅನಂತರ ರಾಘವಾಂಕನು ಶೈವಕೃತಿ ಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು. ಕೃತಿಗಳುರಾಘವಾಂಕನ ಕಾವ್ಯಗಳು ಆರು  ಕೃತಿಗಳು೧.ಹರಿಶ್ಚಂದ್ರ ಕಾವ್ಯ.೨.ಸಿದ್ಧರಾಮ ಪುರಾಣ೩.ಸೋಮನಾಥ ಚರಿತೆ೪. ವೀರೇಶ ಚರಿತೆ೫.ಶರಭ ಚಾರಿತ್ರ೬.ಹರಿಹರ ಮಹತ್ವ – ಈ ಕೃತಿ ಇನ್ನೂ ಸಿಕ್ಕಿಲ್ಲ.            ಇವಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ.ಶರಭ ಚಾರಿತ್ರ ಹಾಗೂ ಹರಿಹರ ಮಹತ್ವ ಇನ್ನೂ ದೊರೆತಿಲ್ಲ.ಇದೂ ಅಲ್ಲದೆ “ದೇವಾಂಗ ದಾರಿಮಯ್ಯನ ಪುರಾಣ”ಎಂಬ ಸಾಂಗತ್ಯ ಗ್ರಂಥವೊಂದು ದೊರಕಿದ್ದು , ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೇ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ತಿಳಿಯಬೇಕಾಗಿದೆ. ವಿಮರ್ಶೆ:ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ.’ ಜನ ಬದುಕಬೇಕೆಂದು ಕಾವ್ಯಮುಖದಿಂಪೇಳ್ದನನಪೇಕ್ಶೆಯಿಂದ’ ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ , ವರಸುತನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು ತನ್ನದೇ ಆದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ.ತನಗೆ ಹಿನ್ನೆಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ವದ ಸಾಧನೆ.ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತೊಬ್ಬ ಕವಿ ರಾಘವಾಂಕ.ಹರಿಶ್ಚಂದ್ರಕಾವ್ಯಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೇ ಶ್ರೇಷ್ಥವಾದುದು ಮಾತ್ರವಲ್ಲ . ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ.ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕಾರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶಸೃಷ್ಟಿ , ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ ಎನ್ನುವ ತತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ.. ಇದರಲ್ಲಿ ಹದಿನಾಲ್ಕು ಸ್ಥಳಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ.ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೂರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿಹದ , ನಾಟ್ಯಮಯವಾದ ಸನ್ನಿವೇಶಗಳು , ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ , ಇವೆಲ್ಲವನ್ನೂ ವ್ಯಾಪಿಸಿರುವ ದರ್ಶನ ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು. ಸಿದ್ಧರಾಮ ಪುರಾಣ‘ಕಾಯಕವೇ ಕೈಲಾಸ’ ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ . ‘ ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ’ ಎಂಬ ಸೂತ್ರವೆ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ವ. ಇದು ರಾಘವಾಂಕನ ಧರ್ಮ ಶ್ರದ್ಧೆಯ ಸಾತ್ವಿಕ ಪ್ರತಿನಿಧಿಯಾಗಿದೆ.ಸೋಮನಾಥ ಚರಿತೆಸೌರಾಶ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಶ್ಟ್ರದ ಸೋಮನಾಥನನ್ನು ಅಲ್ಲಿಯ ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೆಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ.ವೀರೇಶ ಚರಿತೆ ಹಾಗೂ ಶರಭ ಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ.ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ.ಶಿವನ ಅವತಾರದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರೆ ದೇವತೆಗಳಿಗಿಂತ ಶಿವನೇ ಶ್ರೇಶ್ಠ ಎಂಬುದನ್ನು ಸಾರುವ ಉದ್ದೇಶ ಇಲ್ಲಿದೆ.ಶರಭ ಚಾರಿತ್ರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ.    ವಚನ ರಗಳೆಯ ನಂತರದ ನಡುಗನ್ನಡದ  ಸಾಹಿತ್ಯದ ಯುಗ ಪ್ರವರ್ತಕನೆಂದು  ಪ್ರತೀತಿ ಪಡೆದ ಹೊಸ ಪ್ರತಿಮೆಗಳನ್ನು ಬಳಸಿದ ಜ್ಞಾನವುಳ್ಳ ಕವಿಯಾಗಿದ್ದಾನೆ.ಸಿದ್ಧರಾಮನ ಚರಿತೆಯಲ್ಲಿ ಕಂಡು ಬೆರಗಾದರಾ ಪುಣ್ಯ ದಂಪತಿಗಳು ಎನ್ನುವ ಕಾವ್ಯದಲ್ಲಿಬಾಲಕನು ಮಲ್ಲಯ್ಯನನ್ನು ಕಾಣುವ ಹಂತದಲ್ಲಿ ಅಳುತ್ತ ಗುಹೆ ಗವ್ವರಗಳ ಮುಂದೆ ಮರಳಿನ ಹುಡಿಯಲ್ಲಿ ಬಿಕ್ಕುತ್ತಿರುವಾಗ ತರು ಗುಲ್ಮ ಲತೆಗಳೆದ್ದು ಅಳುತಿರ್ದವು, ಗುಹೆ ಗವ್ವರಗಳು ಬಾಲಕ ಸಿದ್ಧರ್ಮಯ್ಯನ ಅಳುವಿನ ಆಕ್ರಂದನವನ್ನು ಮಾರ್ದನಿಸುತ್ತಿದ್ದವು ಎಂದು ಸೊಗಸಾಗಿ ವರ್ಣಿಸಿದ್ದಾನೆ. ಶರಣರ ಆಶಯಗಳನ್ನು ಅರ್ಥೈಸಿಕೊಂಡು ನ್ಯಾಯ ಒದಗಿಸಲು ಶ್ರಮಿಸಿದ ದಿಟ್ಟ ಕವಿ ರಾಘವಾಂಕ. ರಾಘವಾಂಕರ ಹೆಸರಿನಲ್ಲಿ ಕೆಲ ಪ್ರಕ್ಷಿಪ್ತ ಚರಿತ್ರೆಗಳು ಸೊಲ್ಲಾಪೂರ ಭಾಗದಲ್ಲಿ ಹುಟ್ಟಿಕೊಂಡು ಸಾಹಿತ್ಯ ಮತ್ತು ಶರಣರ ಚರಿತ್ರೆಗೆದ್ರೋಹ ಮಾಡಿವೆ.————————————————————————– ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ

“ದೊಡ್ಡ ಸಿರಿ – ಹೃದಯ ಸಿರಿ” ಜಯಶ್ರೀ.ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ದೊಡ್ಡ ಸಿರಿ – ಹೃದಯ ಸಿರಿ” ಒಬ್ಬ ವ್ಯಕ್ತಿ ಅವನ ಗೆಳೆಯನ ಮನೆಗೆ ಬಂದಿದ್ದ. ‘ಈ ಮನೆ ಯಾರದು?’ ಎಂದು ಗೆಳೆಯನಿಗೆ ಕೇಳಿದ. ವ್ಯಕ್ತಿ ಹೇಳಿದ ‘ಇದು ನನ್ನದೇ ಮನೆ ಎಂದು. ಅದನ್ನು ಕೇಳಿದ ಅಡುಗೆ ಮನೆಯಲ್ಲಿದ್ದ ಆ ವ್ಯಕ್ತಿಯ ಪತ್ನಿ ಮುಗುಳುನಗೆಯನ್ನು ಬೀರಿ ಸುಮ್ಮನಾದಳು. ಏಕೆಂದರೆ ಆ ಮನೆಯನ್ನು ಆಕೆಯ ತಂದೆ ಅಂದರೆ ಮಾವ ಕಾಣಿಕೆಯಾಗಿ ನೀಡಿದ್ದ. ಆದ್ದರಿಂದ ಆತನ ಪತ್ನಿ ಮುಗುಳ್ನಗೆ ಬೀರಿ ತನ್ನದೆಂದು ಹೇಳುತ್ತಾನೆ ಹೇಳಲಿ ಎಂದು ಮೌನವಾದಳು. ಹಾಗೆಯೇ ಎಲ್ಲವನ್ನೂ ನಾವು ನಿಸರ್ಗದಿಂದ ಪಡೆದು, ಈ ಮನೆ ನನ್ನದು ಈ ಹೊಲ ನನ್ನದು ಕಣ್ಣಿಗೆ ಕಂಡಿದ್ದೆಲ್ಲ ನನ್ನದು ಎಂದು ಹೇಳುತ್ತೇವೆ. ‘ನಾನು ಆಗರ್ಭ ಶ್ರೀಮಂತ.’ ಎಂದು ಜಂಭದಿAದ ಹೇಳಲು ಮುಂದಾಗುತ್ತೇವೆ. ಇದನ್ನು ಕೇಳಿದ ನಿಸರ್ಗದೇವತೆ ಮರಳು ಮಾನವ ಏನೂ ತಿಳಿಯದೇ ಹೇಳುತ್ತಾನೆಂದು ಮೌನ ವಹಿಸುತ್ತಾಳೆ.ಕೂಡಿಡುವ ಸ್ವಭಾವಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಒಯ್ಯುವುದಿಲ್ಲ ಅಂತ ಗೊತ್ತಿದ್ದರೂ ಭೂಮಾತೆಯ ಗರ್ಭವನ್ನು ಬಗೆದು ಕಾಡುಗಳನ್ನು ಕಡಿದು ಪ್ರಾಣಿಗಳನ್ನು ತನ್ನ ಲಾಭಕ್ಕೆ ಉಪಯೋಗಿಸಿಕೊಂಡು ಸ್ವಾರ್ಥ ಜೀವನ ನಡೆಸುವ ಪ್ರಕೃತಿ ಮಾತೆ ಮುನಿಸಿಕೊಂಡಾಗ ಮನುಷ್ಯನದ್ದು ಏನೂ ನಡೆಯುವುದಿಲ್ಲ. ಸೃಷ್ಟಿಯಲ್ಲಿರುವ ಯಾವ ಪ್ರಾಣಿಗಳು ತನಗೆ ಹೊಟ್ಟೆ ತುಂಬಿದ ಮೇಲೆ ಯಾವ ಪ್ರಾಣಿಗಳನ್ನು ಭೇಟಿ ಆಡಲು ಹೋಗುವುದಿಲ್ಲ. ತನ್ನ ಗಾತ್ರಕ್ಕಿಂತ ೧೫೦ ಪಟ್ಟು ಜಾಸ್ತಿ ಭಾರವನ್ನು ಹೊರುವ ಇರುವೆ ಸಕ್ಕರೆ ಡಬ್ಬದ ಸುತ್ತ ಸುತ್ತುತ್ತಿದ್ದರೂ ಸಕ್ಕರೆ ಡಬ್ಬಿಯನ್ನು ಹೊತ್ತಯ್ಯುವ ಯೋಜನೆ ಹಾಕುವುದಿಲ್ಲ. ಮಳೆಗಾಲದಲ್ಲಿ ಆಹಾರ ಅಭಾವ ಕಾಡುವುದೆಂದು ಮುಂದಾಲೋಚನೆಯಿAದ ಸಂಗ್ರಹ ಮಾಡುತ್ತದೆ. ಆದರೆ ಮುಂದಿನ ಪೀಳಿಗೆಗೆ ಆಗುವಷ್ಟು ಬೇಕೆಂದು ದುರಾಸೆಯಿಂದ ಹೆಚ್ಚೆಚ್ಚು ಕೂಡಿಡುವುದಿಲ್ಲ. ಆದರೆ ಮನುಷ್ಯ ಮಾತ್ರ ಬೇಡವಾದಾಗಲೂ ತಿನ್ನುವ, ಅವಶ್ಯಕತೆ ಇಲ್ಲದಿರುವಾಗಲೂ ಕೊಳ್ಳುವ, ತನಗೆ ಎಲ್ಲವೂ ಸಿಗಬೇಕೆನ್ನುವ, ತನ್ನ ಹತ್ತಿರ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿರಬೇಕೆಂದು ಕೂಡಿಡುವ ಸ್ವಭಾವ ಹೊಂದಿದ್ದಾನೆ.ಹಣವಿದ್ದರೆ?ಅರೆ! ಇದೇನು ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ ಅಂತಿರೇನು? ಪ್ರತಿಯೊಬ್ಬರೂ ಅದನ್ನು ತಮ್ಮದಾಗಿಸಿಕೊಳ್ಳಬೇಕೆಂದೇ ಹಗಲು ರಾತ್ರಿ ಹಂಬಲಿಸುತ್ತಾರೆ. ಬಹುಶಃ ಅದರ ಹಿಂದೆ ಬೀಳದವರು ಬಹುತೇಕ ಇಲ್ಲವೆಂದರೂ ಅತಿಶಯೋಕ್ತಿ ಏನಲ್ಲ. ಸಿರಿತನ ಒಂದಿದ್ದರೆ ಸಾಕು ಮನದಲ್ಲಿಯ ಬಯಕೆಗಳನ್ನೆಲ್ಲ ಈಡೇರಿಸಬಹುದು. ನಮ್ಮವರಿಗೆ ಏನೇನು ಬೇಕೋ ಅದನ್ನು ಅವರು ಬಾಯಿ ತೆಗೆಯುವ ಮುನ್ನವೇ ಕಣ್ಮುಂದೆ ಹಿಡಿಯಬಹುದು. ನಮ್ಮಲ್ಲಿ ಹಣವಿದ್ದರೆ ಎಲ್ಲ. ಇಲ್ಲದಿದ್ದರೇನೂ ಇಲ್ಲ ಎನ್ನುವ ಮನೋಭಾವ ಬೇರೂರಿ ಬಿಟ್ಟಿದೆ. ಲಕ್ಷಿö್ಮದೇವಿಯ ಮಹಿಮೆಗೆ ಮರಳಾಗದವರು ಯಾರಿದ್ದಾರೆ? ಹಣವಂತನ ಜೀವನದಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ ಎಂಬ ಸುಳ್ಳು ಸಂಗತಿ ಬೇರೆ ತಲೆಯಲ್ಲಿ ಅಚ್ಚಳಿಯದಂತೆ ಅಚ್ಚೊತ್ತಿದೆ. ಶ್ರೀಮಂತಿಕೆ.ಶ್ರೀಮAತಿಕೆ ಅನ್ನುವುದು ಗೆಲುವಿನಂತೆ ವ್ಯಾಖ್ಯಾನಿಸುವುದು ಸುಲಭವಲ್ಲ. ಏಕೆಂದರೆ ಒಬ್ಬೊಬ್ಬರು ಒಂದೊAದು ಅರ್ಥ ಕೊಡುತ್ತಾರೆ. ಸಾಮಾನ್ಯವಾಗಿ ಬಹುತೇಕರು ಹೇಳುವುದು ಕೈ ತುಂಬ ಹಣ ಕೈಗೊಂದು ಆಳು ಕಾಲಿಗೊಂದು ಆಳು ಇದ್ದರೆ ಅವರು ಶ್ರೀಮಂತರು. ಮನೆಯಲ್ಲಿ ಲಕ್ಚಿö್ಮÃ ನೆಲೆಸಿರಬೇಕು. ಸಿರಿ-ಸಂಪತ್ತು ಆಸ್ತಿ ಐಶ್ವರ್ಯ ಹಣಕಾಸಿನ ಸಮೃದ್ಧತೆ ಯಾವುದಕ್ಕೂ ಕೊರತೆ ಇರಬಾರದು. ಲೆಕ್ಕ ಹಾಕದೇ ಖರ್ಚು ಮಾಡುವಷ್ಟು ಹಣವಿರಬೇಕು. ಐಷಾರಾಮಿ ಬದುಕು ಸಾಗಿಸಲು ಯಾವುದೇ ಅಡೆತಡೆ ಇರಬಾರದು. ಏನೇ ಬೇಕಾದರೂ ಕೊಂಡುಕೊಳ್ಳುವ ಶಕ್ತಿ ಇರಬೇಕು. ಬಯಸಿದ್ದನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಪಡೆಯವುದು. ಬಂಧು ಬಾಂಧವರ ಮುಂದೆ ನಾವು ಹೆಂಗಿದಿವಿ ನೋಡಿ ಅಂತ ಗರ್ವದಿಂದ ಮೆರೆಯಬೇಕು.ಮಾನದಂಡಹೀಗೆ ಶ್ರೀಮಂತಿಕೆಯ ಬಗೆಗೆ ವಿವಿಧ ರೀತಿಯ ಅಭಿಪ್ರಾಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದನ್ನೆಲ್ಲ ನೋಡಿದಾಗ ಶ್ರೀಮಂತಿಕೆ ಎಂಬುದು ಕೇವಲ ಹಣಕಾಸಿನ ಶ್ರೀಮಂತಿಕೆಯೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಶ್ರೀಮಂತಿಕೆಯನ್ನು ಅಳೆಯಲು ಹಣಕಾಸಿನ ಒಂದೇ ಒಂದು ಮಾನದಂಡ ಸಾಕೇ? ಎಂಬ ಪ್ರಶ್ನೆಯೂ ಅದರ ಬೆನ್ನ ಹಿಂದೆಯೇ ಹುಟ್ಟಿಕೊಳ್ಳುತ್ತದೆ. ದೈಹಿಕ, ಮಾನಸಿಕ ಸ್ಥಿತಿಗತಿ ಇವು ಯಾವವೂ ಲೆಕ್ಕಕ್ಕೆ ಬರುವುದಿಲ್ಲವೇ ಎಂಬ ಸಂದೇಹವೂ ಬರುತ್ತದೆ.ಆರೋಗ್ಯ ಸಂಪತ್ತುಮೇಲ್ನೋಟಕ್ಕೆ ಹಣಕಾಸಿನ ಸ್ಥಿತಿಗತಿ ಸಿರಿವಂತಿಕೆಯನ್ನು ನಿರ್ಧರಿಸುತ್ತದೆ ಹೌದಾದರೂ ವಾಸ್ತವವಾಗಿ ಹೇರಳ ಹಣವೊಂದೇ ಶ್ರೀಮಂತಿಕೆಯಲ್ಲ. ಕುಬೇರನ ವಂಶಸ್ತನೇ ಇರಬೇಕು ಎನ್ನುವಷ್ಟು ಶ್ರೀಮಂತಿಕೆ ಇದ್ದರೂ ದೇಹ ರೋಗದ ಗೂಡಾಗಿದ್ದರೆ ಬಯಸಿದ್ದನ್ನು ಬಾಯಿಗೆ ಹಾಕದೇ ಕೊರಗಬೇಕಾಗುತ್ತದೆ. ಕಣ್ಮುಂದೆ ಏನೆಲ್ಲ ಇದ್ದರೂ ತಿನ್ನುವ ಭಾಗ್ಯ ಅವನಿಗಿರುವುದಿಲ್ಲ. ಅವನ ಪಾಲಿಗೆ ಔಷಧಿಯೇ ಆಹಾರ ಇಲ್ಲಿ ನಾನು ಹೇಳ ಹೊರಟಿದ್ದು ಇಷ್ಟೆ ಹಣದಿಂದ ಔಷಧಿಯನ್ನು ಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಿರಿಯರು ಹೇಳಿದ್ದು ಆರೋಗ್ಯ ಸಂಪತ್ತಿಗಿAತ ದೊಡ್ಡ ಸಂಪತ್ತಿಲ್ಲವೆAದು.ಹಣವಿದ್ದೂ , , , ,ಹಣಕಾಸಿನ ಅನುಕೂಲತೆ ಇದ್ದು, ಆರೋಗ್ಯ ಚೆನ್ನಾಗಿದ್ದು ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಸಾಕ್ಷಾತ್ ನರಕ ದರ್ಶನ. ಹಣದಿಂದ ಒಂದೊಳ್ಳೆ ಹಾಸಿಗೆಯನ್ನು ಕೊಳ್ಳಬಹುದು. ಆದರೆ ನಿದ್ದೆಯನ್ನಲ್ಲ. ಒಳ್ಳೆಯ ಮನೆ ಕೊಂಡುಕೊಳ್ಳಬಹುದು. ಆತ್ಮೀಯರ ಪ್ರೀತಿ ವಿಶ್ವಾಸ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಣವಿದ್ದು ಅದನ್ನು ಉಳಿಸುವ ಬೆಳೆಸುವ ಜ್ಞಾನವಿರದಿದ್ದರೆ ಸಿರಿವಂತಿಕೆ ಅಧೋಗತಿ ಕಾಣುವುದು ಖಂಡಿತ. ಹಣದಿಂದ ಪುಸ್ತಕವನ್ನು ಕೊಳ್ಳಬಹುದೇ ಹೊರತು ಜ್ಞಾನವನ್ನಲ್ಲ. ಇವೆಲ್ಲ ಉದಾಹರಣೆಗಳಿಂದ ತಿಳಿದು ಬರುವುದೇನೆಂದರೆ ಹಣವೊಂದೇ ಸಿರಿವಂತಿಕೆಯಲ್ಲ. ಯಾರಿಗೆ ಯಾವುದು ಇಲ್ಲವೋ ಅದನ್ನು ಪಡೆದುಕೊಳ್ಳಲು ಹೋರಾಡಿ ಪಡೆಯುವುದು ಶ್ರೀಮಂತಿಕೆ.ಕೃಷಿಮನುಷ್ಯರಿಗೆ ಹೋಲಿಸಿದರೆ ಲಕ್ಷಾಂತರ ಪಟ್ಟು ಚಿಕ್ಕದಿರುವ ಇರುವೆಯ ಬದುಕಿನಿಂದ ನಾವು ಕಲಿಯಬೇಕಾದ್ದು ಬಹಳ ಇದೆ. ಯಶಸ್ವಿ ಸಹಬಾಳ್ವೆ, ವ್ಯವಸ್ಥಿತ, ಅತ್ಯಂತ ಸಮರ್ಥ ಜೀವನ ಕೌಶಲವನ್ನು ಅಳವಡಿಸಿಕೊಳ್ಳಬೇಕಿದೆ. ಇತ್ತೀಚಿನ ಶೋಧಗಳ ಪ್ರಕಾರ ಪ್ರಸ್ತುತ ಧರೆಯಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ೮೦೧ ಕೋಟಿ ಜನರ ಪ್ರತಿಯೊಬ್ಬರಿಗೂ ಸರಾಸರಿ ಹನ್ನೆರಡುವರೆ ಲಕ್ಷ ಇರುವೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಈ ಅಲ್ಪಗಾತ್ರದ ಜೀವಿ ಬೆರಗು ಹುಟ್ಟಿಸುವ ಕೌತುಕಗಳಿಂದ ಕೂಡಿದೆ. ಪ್ರಕೃತಿಗೆ ಇರುವೆಗಳಿಂದ ಮಹತ್ತರ ಕೊಡುಗೆಯೂ ಇದೆ. ಇಡೀ ಜೀವಲೋಕದಲ್ಲಿ ಕೃಷಿ ಕೆಲಸ ಕೈಗೊಳ್ಳುವ ಏಕೈಕ ಮನುಷ್ಯೇತರ ಪ್ರಭೇದ ಇರುವೆ ಲೋಕದಲ್ಲಿದೆ. ರೈತ ಇರುವೆ ಎಂದೇ ಹೆಸರಾಗಿರುವ ಈ ಇರುವೆಗಳು ನಿಧಿಷ್ಟ ಸಸ್ಯಗಳ ಎಲೆಗಳನ್ನು ಕತ್ತರಿಸಿ ಸಾಗಿಸಿ ಗೂಡಿನಲ್ಲಿ ರಾಶಿ ಹಾಕುತ್ತವೆ. ಆ ಎಲೆ ರಾಶಿಯ ಮೇಲೆ ವಿಶಿಷ್ಟ ಶಿಲೀಂದ್ರಗಳನ್ನು ಬಿಟ್ಟು ಆಹಾರ ತಯಾರಿಸಿಕೊಳ್ಳುತ್ತವೆ. ಆಧುನಿಕ ಮನುಷ್ಯ ಪ್ರಕೃತಿ ಪ್ರೇಮಿಯಾಗಿ ಬಾಳಬೇಕಿದೆ.ಕಾರಣಪರಿಸರ ಸ್ನೇಹಿ ಬದುಕನ್ನು ಬದುಕುವ ಇರುವೆಗಳಂತೆ ನಾವು ಆಪತ್ಕಾಲಕ್ಕೆ ಮಾತ್ರ ಕೂಡಿಡುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಬಳಿ ಎಷ್ಟು ಹಣವಿದೆ ಎಂದು ನಮಗೆ ತಿಳಿರುತ್ತದೆ. ಆದರೆ ನಮ್ಮ ಬಳಿ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ. ಸಮಯ ಬರುವ ಮುನ್ನ ಶ್ರೀಮಂತಿಕೆಯ ಭ್ರಮೆಯಲ್ಲಿ ಬದುಕುವುದನ್ನು ಬಿಡಬೇಕು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಎಲ್ಲವೂ ನನಗೆ ಬೇಕು ಎಂಬ ಭಾನೆಯೇ ಕಾರಣವಾಗಿದೆ. ಈ ಭಾವ ನಾಶವಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಮನಸ್ಸು ಸುಮಧುರ ಸ್ಥಿತಿಯಲ್ಲಿದ್ದಾಗ ಆರೋಗ್ಯಕರ ಭಾವನೆಗಳು ಹೊರಹೊಮ್ಮುತ್ತವೆ.ದೊಡ್ಡ ಸಿರಿ ಶ್ರೀಮಂತರೆAದು ಅಟ್ಟಹಾಸ ಮೆರೆದವರು ಯಾರೂ ಜನಮಾನಸದ ನೆನಪಿನಲ್ಲಿ ಉಳಿದಿಲ್ಲ. ಹೃದಯ ಸಿರಿವಂತರು ಮಾತ್ರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಭಾವ ಮಾಧುರ್ಯದ ಶ್ರೀಮಂತಿಕೆಯಿAದ ಕೂಡಿರುವ ಜೀವನ ಜನಪ್ರಿಯವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸಿರಿವಂತಿಕೆ ಕೇವಲ ಪಡೆಯುವುದರÀಲ್ಲಿಲ್ಲ. ಅವಶ್ಯವಿರುವವರಿಗೆ ದಾನ ಮಾಡುವುದರಲ್ಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿದೆ. ಚೂರಾದ ಮನಗಳನ್ನು ಪೋಣಿಸೋಣ. ಇನ್ನಾದರೂ ಎಚ್ಚೆತ್ತುಕೊಂಡು ಹೃದಯಸಿರಿಯೇ ದೊಡ್ಡ ಸಿರಿಯೆಂದು ಸರಿಯಾಗಿ ತಿಳಿದುಕೊಂಡು ಒಬ್ಬರಿಗೊಬ್ಬರು ಅಕ್ಕರೆಯ ಸಕ್ಕರೆಯ ತಿನಿಸುತ್ತ ಮಾನವೀಯತೆಯ ಸಿರಿವಂತಿಕೆಯನ್ನು ಮೆರೆಯೋಣವಲ್ಲವೇ? ಜಯಶ್ರೀ.ಜೆ. ಅಬ್ಬಿಗೇರಿ

“ದೊಡ್ಡ ಸಿರಿ – ಹೃದಯ ಸಿರಿ” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

“ವಿಶ್ವ ಹಾಲು ಪೂರೈಕೆ ಹಾಗೂ ಭಾರತದಲ್ಲಿ ಮಹಿಳಾ ಸಬಲೀಕರಣ” ವಿಶೇಷ ಲೇಖನ ಎನ್.ವಿ.ರಮೇಶ್

ಮಹಿಳಾ ಸಂಗಾತಿ ಎನ್.ವಿ.ರಮೇಶ್ “ವಿಶ್ವ ಹಾಲು ಪೂರೈಕೆ ಹಾಗೂ ಭಾರತದಲ್ಲಿ ಮಹಿಳಾ ಸಬಲೀಕರಣ” “ನಾವು ಹಿಂದಿನ ಗ್ರಾಮೀಣ ಮಹಿಳೆಯರಲ್ಲ – ಇಂದು ವಿಶ್ವ ಮಾನ್ಯತೆ ಪಡೆದವರು” “ಪುಟ್ಟಮರಿ ಪುಟ್ಟಮರಿ ಏನು ಮಾಡುವೆ?ಹಾಲು ಕುಡಿದು ಗಟ್ಟಿಯಾಗಿ ನಾನು ಆಡುವೆ” ಹಾಡಿನ ಈ ಸಾಲುಗಳನ್ನು ಕೇಳಿದಾಗ ನಿಮ್ಮ ಕಣ್ಣು ಮುಂದೆ ಏನು ಬರುತ್ತದೆ? ಕೃಷ್ಣನ ಬಾಲರೂಪದಲ್ಲಿ ನಾವು ಅನೇಕ ಚಿತ್ರಗಳಲ್ಲಿ, ಕ್ಯಾಲೆಂಡರ್‌ಗಳಲ್ಲಿ, ಹಾಲು ಕುಡಿಯುತ್ತಾ, ಕೈಯಲ್ಲಿ ಬೆಣ್ಣೆ ಹಿಡಿದುಕೊಂಡಿರುವ ಮುದ್ದು ಬಾಲಕೃಷ್ಣನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹುಟ್ಟಿದ ನಂತರ ತಾಯಿಯ ಹಾಲು, ನಂತರ ಮೇಲಿನ(ಹಸುವಿನ) ಹಾಲು ಹಾಗೂ ಮೂರರಿಂದ ಐದು ವರ್ಷವಾಗುವವರೆಗೆ ಪ್ರತಿನಿತ್ಯ ಹಸಿವಿನ ಹಾಲನ್ನು ಕೊಡುತ್ತಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ಕೊಡುವ ತಾಯಂದಿರ ಜೊತೆಗೆ ಈ ಹಾಲು ಉತ್ಪಾದಿಸುವ ಹೈನುಗಾರಿಕೆಯ ಕ್ಷೇತ್ರದಲ್ಲಿ ಅನೇಕ ಭಾರತೀಯ ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣ ಎಂದು ಗಮನಿಸಿದಾಗ ಭಾರತದ ಸಾವಿರಾರು ಹಳ್ಳಿಗಳಲ್ಲಿ ಮಹಿಳೆಯರು ಹೈನುಗಾರಿಕೆ ಕ್ಷೇತ್ರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಸಹಕಾರ ತತ್ವದ ಡೈರಿಗಳ ಮೂಲಕ ತಾವು, ತಮ್ಮ ಕುಟುಂಬ, ತಮ್ಮ ಹಳ್ಳಿ ಇವುಗಳನ್ನು ಅಭಿವೃದ್ಧಿಪಡಿಸಿರುವುದಲ್ಲದೇ ರಾಷ್ಟಿçÃಯ ಅಭಿವೃದ್ಧಿಗೂ ಸತತ ತಮ್ಮ ಹಾಲು ಕೊಡುತ್ತಾ, ಪುರುಷರೊಂದಿಗೆ ಸರಿಸಮಾನವಾಗಿ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯ ಅರಿಕಾರರಾಗಿದ್ದಾರೆ. ಈಗಲೂ ಎಷ್ಟೋ ಜನ ಬೆಳಗ್ಗೆ ಒಂದು ಗ್ಲಾಸ್ ಹಾಲು ಕುಡಿಯುತ್ತಾರೆ. ಹಾಗೂ ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿಹಾಲನ್ನು ಕುಡಿದು ಮಲಗುವ ಪದ್ಧತಿ ಬಹಳ ಜನರಲ್ಲಿದೆ. ಸ್ವಲ್ಪ ನೆಗಡಿ, ಕೆಮ್ಮು, ಮೈಕೈನೋವಿದ್ದರೆ, ರಾತ್ರಿ ಮಲಗುವ ಮೊದಲು ಕುಡಿಯುವ ಒಂದು ಗ್ಲಾಸ್ ಹಾಲಿಗೆ ಕೊಂಚ ಅರಿಶಿನ, ಒಂದೆರಡು ಜಜ್ಜಿದ ಮೆಣಸು ಹಾಕಿ ಕುಡಿದರೆ, ಚೆನ್ನಾಗಿ ರಾತ್ರಿ ನಿದ್ದೆ ಬರುವುದಲ್ಲದೇ ಬೆಳಗ್ಗಿನ ಹೊತ್ತಿಗೆ ಆರೋಗ್ಯ ಸುಧಾರಿಸಿಕೊಳ್ಳುತ್ತದೆ ಎಂಬ ಅನುಭವ ನನ್ನಂತಹವರದು. ಆರೋಗ್ಯ ರಕ್ಷಣೆಗೆ ಹಾಲು ಪರಿಪೂರ್ಣ ಆಹಾರ ಎಂದು ತಜ್ಞರು ಹೇಳುತ್ತಾರೆ. ನಂತರದ ಕಾಲದಲ್ಲಿ ಹಸು/ಎಮ್ಮೆ ಹಾಲಿಗೆ ಪರ್ಯಾಯವಾಗಿ ಅನೇಕ ಕೃತಕ ಹಾಲಿನ ಪುಡಿಗಳು, ಸುವಾಸನೆ ಬೀರುವ ಹಾಲು, ಇವೆಲ್ಲಾ ಮಾರುಕಟ್ಟೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದಲ್ಲಿ ಜೂನ್ ಒಂದರಂದು “ವಿಶ್ವ ಹಾಲಿನ ದಿನ”ವನ್ನು ಆಚರಿಸುತ್ತಾರೆ. ಹೀಗಾಗಿ ಈ ದಿನದ ಮಹತ್ವವನ್ನು ಸಂಕ್ಷಿಪ್ತವಾಗಿ ಈಗ ತಿಳಿಯೋಣ. ಜೂನ್ ಒಂದರಂದು ವಿಶ್ವದಾದ್ಯಂತ ಆಚರಿಸುವ ವಿಶ್ವ ಹಾಲು ದಿನಾಚರಣೆ ಯಂದು ಹಾಲು ಹಾಗೂ ಅದಕ್ಕೆ ಸಂಬಂಧಪಟ್ಟ ಹೈನುಗಾರಿಕೆ ವಿಭಾಗದ ಬಗ್ಗೆ ಕೊಂಚ ಗಮನಿಸೋಣ.ಈ ದಿನಾಚರಣೆಯ ಕೇಂದ್ರೀಕೃತ ಗಮನವು ಜನರ ಪಥ್ಯ-ಆಹಾರದಲ್ಲಿಯ ಹಾಲಿನ ಮಹತ್ವದ ಅರಿವಿನ ಬಗ್ಗೆ ಇದೆ. ಒಂದೆಡೆ ನಮ್ಮ ಆಹಾರ ಉತ್ಪಾದನೆಯ ಮೇಲೆ ಹಾಲಿನ ಪರಿಣಾಮ ಗಮನಿಸಿದರೇ ಇನ್ನೊಂದೆಡೆ ಹೈನುಗಾರಿಕೆಯಲ್ಲಿ ಇರುವವರ ಜೀವನ ಮಟ್ಟದ ಬಗ್ಗೆ ಇದೆ. ಹಾಲಿನ ಉತ್ಪನ್ನಗಳಾದ, ಮೊಸರು, ಬೆಣ್ಣೆ, ಚೀಸ್, ಪನ್ನೀರ್ ಇವೆಲ್ಲಾ ನಮ್ಮ ದೇಹಕ್ಕೆ ಅವಶ್ಯಕವಾದ ಜೀವಸತ್ವಗಳು, ಖನಿಜಗಳು, ಇವುಗಳನ್ನು ಪೂರೈಸಿ ನಮ್ಮ ಜೀವನಶೈಲಿಯನ್ನು ಆರೋಗ್ಯವಂತ ಜೀವನಕ್ಕೆ ಕೊಂಡೊಯ್ಯುವುದು. ಹಾಲು ನಮ್ಮ ಮೂಳೆಗಳ ರಕ್ಷಣೆಗೆ ಬೇಕಾದ ಕ್ಯಾಲ್ಸಿಯಂನ್ನು ಕೊಡುತ್ತದೆ. ಅಲ್ಲದೇ ನಮಗೆ ಬೇಕಾದ ಉತ್ತಮ ಗುಣಮಟ್ಟದ ಸಸಾರಜನಕ, ಅತ್ಯಾವಶ್ಯಕವಾದ ಬಿ-೧೨ ಹಾಗೂ ಡಿ ಜೀವಸತ್ವಗಳನ್ನು ಪೂರೈಸುತ್ತದೆ. ಅಲ್ಲದೇ ಇದು ಹೃದಯ ರೋಗ, ಮಂಡಿಯ ಮೂಳೆ ಸವೆಯುವುದು, ಹಾಗೂ ಮಧುಮೇಹ-೨ ಇವುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಹಾಲು ಪೋಟ್ಯಾಸಿಯಂದ ಉತ್ತಮ ಮೂಲವಾಗಿದ್ದು, ಇದು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ೨೦೨೫ರಲ್ಲಿ ಚಿಲಿ ದೇಶದ ಸಾಂಟಿಯಾಗೋದಲ್ಲಿ ನಡೆದ ಐ.ಡಿ.ಎಫ್. ವಿಶ್ವ ಹೈನುಗಾರಿಕೆ ಸಮಾವೇಶದಲ್ಲಿ, ಭಾರತದ ರಾಷ್ಟಿçÃಯ ಡೈರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮೀನೇಶ್ ಷಾಅವರು ತಮ್ಮ ಉಪನ್ಯಾಸದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿಯ ಮಹಿಳೆಯರ ಸಬಲೀಕರಣಕ್ಕಾಗಿ ಭಾರತ ದೇಶದ ಮುಖ್ಯ ಘಟ್ಟಗಳ ಬಗ್ಗೆ ಒತ್ತಿ ಹೇಳಿದರು. ಭಾರತ ದೇಶದಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಲು ಉತ್ಪಾದನೆಯನ್ನು ಸಾಧಿಸಿರುವುದರ ಜೊತೆಗೆ ದೇಶದಾದ್ಯಂತ ಗ್ರಾಮೀಣ ಸಮುದಾಯಗಳಲ್ಲಿಯ ಮಹಿಳೆಯರ ಸಾಮಾಜಿಕ ಪರಿವರ್ತನೆಗೆ ವೇಗ ದೊರತಿರುವುದರ ಬಗ್ಗೆ ಇವರು ವಿವರಿಸಿದರು. ನಮ್ಮ ದೇಶದಲ್ಲಿ ಸಣ್ಣ ಪ್ರಮಾಣದ ಕೃಷಿ ವ್ಯವಸ್ಥೆ ಇರುವುದರಿಂದ, ದೇಶದಲ್ಲಿಯ ೨,೩೦೦೦೦ ಗ್ರಾಮೀಣ ಹಾಲು ಸಹಕಾರ ಸಂಸ್ಥೆಗಳು ಹದಿನೆಂಟು ದಶಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಜೀವನ ನೀಡಿವೆ. ಸಹಕಾರಿ ಕ್ಷೇತ್ರದ ಸದಸ್ಯರಲ್ಲಿ ಮೊದಲು ೩೫% ಜನ ಮಹಿಳೆಯರಿದ್ದರು. ಇದು ಸತತವಾಗಿ ಬೆಳೆಯುತ್ತಾ ಒಟ್ಟೂ ಸದಸ್ಯತ್ವದಲ್ಲಿ ೫೦%ರಷ್ಟು ಈಗ ಮಹಿಳೆಯರಿದ್ದಾರೆ. ನಮ್ಮ ಪ್ರತಿನಿತ್ಯದ ಡೈರಿ ವ್ಯವಸ್ಥೆ ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಇದು ಸಣ್ಣ ಪ್ರಮಾಣದ ಹೈನುಗಾರಿಕೆ ಕೃಷಿ ವ್ಯವಸ್ಥೆ. ಇಲ್ಲಿ ಉತ್ಪಾದನೆ ಮಾಡುವವರು ಸಹಸ್ರಾರು ಜನ ೯೨% ಪ್ರಮಾಣ ಹೈನುಗಾರಿಕೆ ಕೃಷಿ ಮಾಡುವವರಲ್ಲಿ ೯೨% ಜನ ಒಂದರಿAದ ನಾಲ್ಕು ಹಸು ಅಥವಾ ಎಮ್ಮೆ ಹೊಂದಿದ್ದಾರೆ. ಇದು ೮೦ ದಶಲಕ್ಷ ಗ್ರಾಮೀಣ ಮನೆಗಳ ಜೀವನಕ್ಕೆ ಅನುಕೂಲ ಒದಗಿಸಿ ಕೊಟ್ಟಿದ್ದು, ಹಾಲಿನಿಂದ ಕುಟುಂಬದ ಸದಸ್ಯರಿಗೆ ಪೌಷ್ಠಿಕತೆ ದೊರೆಯುತ್ತಿದೆ. ಸಹಕಾರ ತತ್ವದ ಈ ಮಾದರಿ ಸದ್ಯದಲ್ಲಿ ಮಹಿಳಾ ಸಬಲೀಕರಣದ ಒಂದು ದಾರಿಯಾಗಿದೆ. ಇದು ಅವರವರ ಮನೆಗಳಲ್ಲೇ ಹೆಚ್ಚು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರö್ಯ ಹಾಗೂ ಅಧಿಕಾರ ಕೊಡಿಸಿದೆ. ಅಲ್ಲದೇ ಡಿಜಿಟಲೀಕರಣ ಇವರಿಗೆ ಬ್ಯಾಂಕ್ ಖಾತೆ ಸಂಪರ್ಕ, ಅನನ್ಯತೆಯ ದೃಢೀಕರಣ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಮಹಿಳೆಯರು ಸಹಕಾರಿ ಸಂಸ್ಥೆಗಳ ಸದಸ್ಯರಾಗುತ್ತಿದ್ದಾರೆ. ಒಟ್ಟೂ ಸಹಕಾರಿ ಸಂಸ್ಥೆಗಳು ಪ್ರತಿದಿನ ೬೮ ದಶಲಕ್ಷ ಲೀಟರ್ ಹಾಲು ಸಂಗ್ರಹಿಸಿದರೆ ಮಹಿಳೆಯರು ೨೪ ದಶಲಕ್ಷ ಲೀಟರ್ ಹಾಲಿನ ತಮ್ಮ ಸಂಗ್ರಹದ ಪಾಲನ್ನು ಕೊಡುತ್ತಿದ್ದಾರೆ.ಮಹಿಳೆಯರಿಗೆ ಇದರಿಂದ ಸಂಪಾದನೆಗೆ ನೇರ ಮಾರ್ಗ ಸಿಕ್ಕಿದ್ದು, ಕುಟುಂಬದ ಕಲ್ಯಾಣಕ್ಕಾಗಿ, ಶಿಕ್ಷಣ, ಆರೋಗ್ಯ, ಉತ್ತಮ ಜೀವನ ಮಟ್ಟಗಳಿಗಾಗಿ ಅವರು ಈ ಹಣವನ್ನು ತೊಡಗಿಸಲು ಅವಕಾಶ ಸೃಷ್ಟಿಸಲಾಗಿದೆ. ಇದು ಮಹಿಳೆಯರ ವಿಶ್ವಾಸ ಹೆಚ್ಚು ಮಾಡಿ ಅವರು ಕುಟುಂಬ ಹಾಗೂ ಸಮುದಾಯಗಳ ವಿಷಯಗಳಲ್ಲಿ ನಿರ್ಧಾರ ಮಾಡುವ ಮುಖ್ಯ ಪಾತ್ರವನ್ನು ಕೊಟ್ಟಿದೆ. ಗಮನಿಸಿ ನೋಡಿದರೆ, ಹೈನುಗಾರಿಕೆಗೆ ಸಂಬAಧಪಟ್ಟ ಕೆಲಸಗಳಲ್ಲಿ ಶೇಕಡಾ ೬೦ ರಿಂದ ಶೇಕಡಾ ೯೫ ರವರೆಗೆ ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಶೇಕಡಾ ೫೦ ರಷ್ಟು ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಸಫಲರಾಗಿದ್ದಾರೆ.ಇಡೀ ಜಗತ್ತಿನಲ್ಲಿ ವಿಶ್ವ ಹಾಲು ದಿನಗಳಂದು ಹಾಲು ಕರೆಯುವ ಪ್ರದರ್ಶನಗಳು, ಕೃಷಿ ಭೂಮಿಗೆ ಭೇಟಿ, ಆಟಗಳು, ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮಗಳು, ಹಾಲಿನ ಉತ್ಪನ್ನಗಳ ಹಂಚಿಕೆ, ನಡೆಯುತ್ತವೆ. ಇದೇ ದಿನ ಹೆಚ್ಚಿನದನ್ನು ತಿಳಿದು ಕಲಿಯಲು ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಸಮಾವೇಶಗಳು ಹಾಗೂ ವಿಚಾರ ಸಂಕೀರ್ಣಗಳು ನಡೆಯುತ್ತವೆ.ನಮ್ಮ ದೇಶದಲ್ಲಿಯ ಹೈನುಗಾರಿಕೆ ವಿಭಾಗದಲ್ಲಿ ಮಹಿಳೆಯರ ಸಬಲೀಕರಣದ ಪ್ರಭಾವಕ್ಕೆ ಅಂತರ್ ರಾಷ್ಟಿçÃಯ ಮಾನ್ಯತೆ ಸಿಕ್ಕಿದ್ದು, ಐ.ಡಿ.ಎಫ್. ಸಂಶೋಧನಾ ಪ್ರಶಸ್ತಿ ಸಹ ಸಿಕ್ಕಿದೆ. ಸೃಜಾ ಉತ್ಪಾದನಾ ಸಂಘದ ಅಧ್ಯಕ್ಷರಾದ ಶ್ರೀದೇವಿ ಅವರನ್ನು ಗಮನಿಸಿದರೆ ಒಬ್ಬ ಸಾಮಾನ್ಯ ಹಾಲು ಉತ್ಪಾದಕರ ಸ್ಥಾನದಿಂದ ನಾಯಕರಾಗಿ ಮುಂದೆ ಬಂದಿರುವ ಇವರ ಪರಿವರ್ತನಾ ಪ್ರಯಾಣವನ್ನು ಗಮನಿಸಬಹುದು. ಇವರ ಮಗಳು ಈಗ ಅಮೆರಿಕಾದಲ್ಲಿ ಉಚ್ಛ ಶಿಕ್ಷಣ ಪಡೆಯುತ್ತಿದ್ದಾಳೆ. ಇಂತಹ ಹಲವಾರು ಉದಾಹರಣೆಗಳಿಂದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಪಾತ್ರಗಳಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಗ್ರಾಮೀಣ ಉತ್ಪಾದನಾ ಕಾರ್ಯದ ಬೇರಿನಿಂದ ಹೊರಟು ವಿಶ್ವದ ಮಾನ್ಯತೆಯನ್ನು ಪಡೆದಿದ್ದಾರೆ. ಇವರ ಅನುಭವಗಳಿಂದ ತಿಳಿಯುವುದೇನೆಂದರೆ, ಆರ್ಥಿಕ ಸಬಲೀಕರಣದ ಪ್ರಭಾವದಿಂದ ವಿಶಾಲ ಸಾಮಾಜಿಕ ಪರಿಣಾಮವನ್ನು ಹೊಂದಿ ಮುಖ್ಯ ಕ್ಷೇತ್ರಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಸತತ ಬೆಂಬಲ ದೊರೆಯಲು ಇವು ಕಾರಣೀಭೂತವಾಗಿವೆ. ಎನ್.ವಿ.ರಮೇಶ್

“ವಿಶ್ವ ಹಾಲು ಪೂರೈಕೆ ಹಾಗೂ ಭಾರತದಲ್ಲಿ ಮಹಿಳಾ ಸಬಲೀಕರಣ” ವಿಶೇಷ ಲೇಖನ ಎನ್.ವಿ.ರಮೇಶ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಮದನಾರಿಯಂತಿತ್ತು ಮಣಿಪುರ ಮದನಾರಿಯಂತಿತ್ತು ಮಣಿಪುರ ಮಣಿಪುರವನ್ನು ನಾವು ಸೇರಿದ ವೇಳೆಗೆ ಮಳೆಯ ಮಣಿಗಳು ಗಗನಮುಖದಿಂದ ಧರಣಿವದನದೆಡೆಗೆ ಬೀಳುತ್ತಿದ್ದವು. ವರ್ಷ ಕಾಲ ಆರಂಭವಾಗಿತ್ತು. ಮಳೆಯ ನೀರಿಗಾಗಿಯೇ ಕಾದುಕುಳಿತಿದ್ದ ಚಾತಕ ಪಕ್ಷಿಗಳು ಹನಿಹನಿಗಳನ್ನು ಕುಡಿಯುತ್ತಿದ್ದ ಪರಿಯನ್ನು ಕಂಡು ಅಸೂಯೆಯನ್ನು ತಾಳದಾದವು ಹಂಸಗಳು. ತಮಗೆ ಸಲ್ಲಬೇಕಾದ ವರ್ಷಧಾರೆಯನ್ನು ಭೂಮಿ ಸೇರುವುದಕ್ಕೂ ಮೊದಲೇ ಕುಡಿದು ಮುಗಿಸುತ್ತಿವೆ ಚಾತಕ ಪಕ್ಷಿಗಳು ಎಂಬ ಮತ್ಸರ ಹಂಸಗಳಲ್ಲಿ. ಭರದಿಂದ ಓಡುತ್ತಿದ್ದವು ಆಚೆಗೆ.ಮಣಿಪುರದ ಸಮೃದ್ಧತೆಯನ್ನೇ ಕಾಣುತ್ತಾ ಬರುತ್ತಿದ್ದೆ ನಾನು. ಚಿನ್ನ ಬೆಳ್ಳಿಗಳ ಕೋಟೆಗಳಿದ್ದವು. ಮಾಣಿಕ್ಯ ವಜ್ರವೈಢೂರ್ಯಗಳಿಂದ ಮಾಡಲ್ಪಟ್ಟ ಕೊತ್ತಳಗಳ ಸಾಲುಗಳಿದ್ದವು. ಕೆಂಪು ಹವಳದ ತೋರಣಗಳಿದ್ದವು. ಮುತ್ತು ರತ್ನಗಳಿಂದ ನಿರ್ಮಿಸಲಾದ ಗೋಪುರಗಳಿದ್ದವು. ಚಿತ್ರಚಿತ್ತಾರಗಳಿಂದ ಶೋಭಿಸುತ್ತಿದ್ದವು ಅಲ್ಲಿಯ ದ್ವಾರಗಳು. ಹಗಲಿಗೆ ಹೆದರಿ ಚದುರಿಹೋಗಿದ್ದ ಬೆಳದಿಂಗಳು ಮಣಿಪುರವನ್ನು ಹೊಕ್ಕು, ಮುತ್ತಿಗೆ ಹಾಕಿ, ಯುದ್ಧಕ್ಕಾಗಿ ಕಾದು ಕುಳಿತಿರಲು ಅದರ ಜೊತೆಗಿನ ಯುದ್ಧಕ್ಕಾಗಿ ಇಲ್ಲಿಗೆ ಬಂದು ಇಡಿಯ ನಗರವನ್ನು ವಶಪಡಿಸಿಕೊಂಡಿದೆ ಎಳೆಬಿಸಿಲು ಎಂಬAತೆ ತೋರುತ್ತಿತ್ತು ಮಣಿಪುರದಲ್ಲಿದ್ದ ಸೌಧಗಳು, ಕೋಟೆಗಳು. ಬೆಳದಿಂಗಳ ಕಾಂತಿಯನ್ನು ಎತ್ತರೆತ್ತರದ ಸೌಧಗಳಲ್ಲಿ ಕಾಣಬಹುದಾಗಿತ್ತು. ಹೊಚ್ಚಹೊಸತಾದ ಚಿನ್ನದ ಕೋಟೆಗಳ ಹೊಳಪದು ಎಳೆಬಿಸಿಲಿನ ನೆನಪನ್ನು ಮೂಡಿಸುವಂತಿತ್ತು.ಶ್ರೇಷ್ಠವಾದ ಗಿರಿಶಿಖರಗಳನ್ನು ಮೀರಿಸುವಂತಿದ್ದ ಅಲ್ಲಿಯ ಚಿನ್ನದ ಗೋಪುರಗಳು ಹೆಣ್ಣಿನ ದಪ್ಪ ಮೊಲೆಯಂತೆ ತೋರಿದವು, ನನ್ನ ಕಣ್ಣಿಗೆ. ಲಾವಣ್ಯವತಿಯ ಬಾಹುಬಳ್ಳಿಯಂತೆ ಕಾಣುತ್ತಿತ್ತು ಅಲ್ಲಿಯ ರಾಜಮಾರ್ಗ. ಕಮಲಮುಖಿಯ ಸುಂದರ ವದನದಂತಿತ್ತು ಅರಮನೆ. ಮೇಲೆ ಹಾರಾಡುತ್ತಿದ್ದ ಧ್ವಜಗಳು ಮುಗುದೆಯ ಮುಂಗುರುಳನ್ನು ಜ್ಞಾಪಿಸುವಂತಿದ್ದವು. ಮದನಾರಿಯ ಮಣಿಹಾರವಾಗಿತ್ತು ಕಟ್ಟಿದ್ದ ತೋರಣಗಳು. ಕೋಟೆಗಳವು ಹೆಣ್ಣಿನ ಮೈಯ್ಯಲ್ಲಿ ಶೋಭಿಸುವ ಉಡುಗೆಯಿದ್ದ ಹಾಗೆ. ನಗರದ ಗಡಿಯದು ಸುಂದರಿಯ ಸೊಂಟವನ್ನಲAಕರಿಸುವ ಡಾಬು. ಅಲ್ಲಿನ ಶ್ವೇತವರ್ಣದ ಗೃಹಗಳು ಹೆಣ್ಣಿನ ದಂತಗಳು. ಮಣಿಪುರ ನಗರವದು ಚೆಲುವ ನಾರಿಯಂದದಿ ಗೋಚರವಾಯಿತು ನನ್ನ ದೃಷ್ಟಿಗೆ.ಅತೀವ ಜನಸಮೂಹವಿತ್ತು ನಗರದೊಳಗೆ. ಗುಂಪುಗುAಪಾಗಿ ನಗರವನ್ನು ಪ್ರವೇಶಿಸುವವರಿದ್ದರು. ಅಲ್ಲಿಂದ ತಂಡೋಪತAಡವಾಗಿ ಹೊರಹೋಗುವವರಿದ್ದರು. ಆನೆಗಳು, ಕುದುರೆಗಳು ಎಲ್ಲೆಡೆಯೂ ಕಾಣಸಿಗುತ್ತಿದ್ದವು. ಪುರಜನರು ತೋರುತ್ತಿದ್ದರು ದೆಸೆದೆಸೆಯಲ್ಲಿ. ಮಣಿಪುರದ ಅರಸನಾಗಿದ್ದವ ಬಭ್ರುವಾಹನ. ಇವನಿಗೆ ಅನುದಿನವೂ ಸಾವಿರ ಬಂಡಿಗಳಷ್ಟು ಧನಕನಕಗಳು ಸಲ್ಲುತ್ತಿದ್ದವು ರಾಜರ ಕಡೆಯಿಂದ. ನನ್ನ ಜೊತೆಯಲ್ಲಿದ್ದ ಹಂಸಧ್ವಜ ಅರಸನೂ ಸಹ ಬಭ್ರುವಾಹನನಿಗೆ ತಪ್ಪದೆಯೇ ಕಪ್ಪಕಾಣಿಕೆಗಳನ್ನು ಸಲ್ಲಿಸುವವನಾಗಿದ್ದ.“ಅಧಿಕ ಸೊಗಸಿನಿಂದ ಕಂಗೊಳಿಸುತ್ತಿದೆ ಈ ನಗರ. ಇದನ್ನಾಳುತ್ತಿರುವ ಅರಸ ಯಾರು? ಅವನು ಕುದುರೆಯನ್ನು ಕಟ್ಟಿ, ನಮ್ಮೊಡನೆ ಯುದ್ಧ ಹೂಡುವ ಮನಸ್ಸು ಮಾಡಿಯಾನೇ?” ಎಂದು ಪ್ರಶ್ನಿಸಿದೆ ಹಂಸಧ್ವಜನಲ್ಲಿ.ಮಣಿಪುರದರಸನ ಸಾಮರ್ಥ್ಯವನ್ನು ಬಣ್ಣಿಸತೊಡಗಿದ ಚಂಪಕಾ ನಗರಿಯ ದೊರೆ. “ಮಣಿಪುರವೆಂಬ ಈ ನಗರವನ್ನು ಪಾಲಿಸುತ್ತಿರುವವನು ಬಭ್ರುವಾಹನ ಎಂಬ ರಾಜ. ಸಮರ್ಥ ದೊರೆ ಎಂಬ ಪ್ರಸಿದ್ಧಿ ಪಡೆದವನವನು. ದೊರೆಗಳಲ್ಲಿ ಶ್ರೇಷ್ಠನೆನಿಸಿಕೊಂಡವನು. ಇವನ ಸಾಮರ್ಥ್ಯ ಸಾಧನೆಗಳನ್ನು ಒಪ್ಪಿಕೊಂಡ ಅರಸರು ಪ್ರತೀದಿನವೂ ತಪ್ಪದೆ ಸಾವಿರ ಬಂಡಿ ಕನಕವನ್ನು ತಂದೊಪ್ಪಿಸುತ್ತಾರೆ ಇವನಿಗೆ. ಒಂದುವೇಳೆ ಲೋಪವಾದರೆ ಶಿಕ್ಷೆಯಿತ್ತಾನು ಎಂಬ ಭೀತಿ ಎಲ್ಲರಲ್ಲಿಯೂ ಇದೆ” ಎಂದ ಹಂಸಧ್ವಜ, ಬಭ್ರುವಾಹನನ ಸಚಿವನ ಬಗೆಗೆ ಹೇಳತೊಡಗಿದ.“ಸುಬುದ್ಧಿಯೆಂಬ ಸಚಿವನಿದ್ದಾನೆ ಇವನಿಗೆ. ಈ ನಗರವನ್ನು ನಿಜಾರ್ಥದಲ್ಲಿ ಪಾಲಿಸುತ್ತಿರುವವನು ಅವನೇ. ಧರ್ಮಕ್ಕೆ ಒಂದಿಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾನೆ. ಪ್ರಜೆಗಳ ಬಗೆಗೆ ಅನುರಾಗವನ್ನು ಇಟ್ಟುಕೊಂಡಿದ್ದಾನೆ. ಪುರದ ಜನರಿಗೆ ಸೌಖ್ಯ ನೀಡುವವರಾಗಿ ಗುರುತಿಸಿಕೊಂಡಿದ್ದಾರೆ ಈ ರಾಜ ಸಚಿವರು” ಎಂದ ಹಂಸಧ್ವಜನಿಗೆ ಬಭ್ರುವಾಹನನ ಸೇನೆಯ ಸಾಮರ್ಥ್ಯ ತಿಳಿದಿತ್ತು.ಒಂದೇ ಕಿವಿಯಿರುವ ಕಪ್ಪನೆಯ ಕುದುರೆಗಳು, ಶುದ್ಧ ಶ್ವೇತವರ್ಣದ ಆನೆಗಳು, ಚಿನ್ನದ ರಥಗಳು ಅಗಣಿತ ಸಂಖ್ಯೆಯಲ್ಲಿದ್ದವು ಮಣಿಪುರದಲ್ಲಿ. ಅವುಗಳ ಸಂಖ್ಯೆ ಅದೆಷ್ಟು ಎನ್ನುವುದು ಬಭ್ರುವಾಹನನ ಕರಣಿಕರಿಗೇ ತಿಳಿದಿರಲಿಲ್ಲ. ಉಳಿದ ಸಾಮಾನ್ಯ ಕುದುರೆ, ಆನೆ, ರಥಗಳ ಲೆಕ್ಕಾಚಾರವದು ಸುಲಭವಾಗಿ ಸಿಗುವಂತಿರಲಿಲ್ಲ. ಪರಾಕ್ರಮಶಾಲಿಯಾದ ಅರಸನಿವನು ಎನ್ನುವುದು ನನಗೆ ದೃಢವಾಯಿತು.ಮಣಿಪುರದಲ್ಲಿದ್ದ ಜನರೆಲ್ಲರೂ ಹರಿಭಕ್ತರಾಗಿದ್ದರು. ವೇದ ಶಾಸ್ತçಗಳನ್ನು ತಿಳಿದವರಾಗಿದ್ದರು. ಸತ್ಯವನ್ನೇ ನುಡಿಯುವ ವ್ರತವನ್ನು ಪಾಲಿಸುತ್ತಿದ್ದರು. ಕೋಪವನ್ನು ತೊರೆದವರಾಗಿದ್ದರು. ಅಹಿಂಸೆಯೆಡೆಗೆ ಮನಸ್ಸು ಮಾಡಿದ್ದರು. ತಮ್ಮನ್ನು ತಾವು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು. ಕದನ ಸಮರ್ಥರಾಗಿದ್ದರು. ದಾನದ ಗುಣವಿತ್ತು. ಅಸೂಯೆ ಇದ್ದವರಲ್ಲ. ಅಲ್ಲಿಯ ಸಕಲ ನಾರಿಯರು ಪತಿವ್ರತೆಯರೆನಿಸಿಕೊಂಡಿದ್ದರು. ಹೀಗೆ ಸರ್ವ ಸಜ್ಜನರನ್ನೇ ಒಳಗೊಂಡ ಈ ನಗರವನ್ನು ಶ್ರೀಮನ್ನಾರಾಯಣ ಎರಡನೇ ವೈಕುಂಠವಿದು ತನ್ನ ಪಾಲಿಗೆ ಎಂಬ ಮಮಕಾರದಿಂದ ಪೊರೆಯುತ್ತಿದ್ದ.“ಬಭ್ರುವಾಹನನೆಂಬ ಈ ಬಲುವೀರ ಕಟ್ಟದಿರುತ್ತಾನೆಯೇ ಯಜ್ಞಾಶ್ವವನ್ನು!” ಎಂದ ಹಂಸಧ್ವಜ. ಹೀಗೆ ಅವನು ನುಡಿದ ಕ್ಷಣದಲ್ಲಿಯೇ ಹದ್ದೊಂದು ಹಾರಿಬಂದು ನನ್ನ ಕಿರೀಟದ ತುದಿಯಲ್ಲಿ ಕಾಲೂರಿ ಕುಳಿತಿತು. ನನ್ನ ಗಮನಕ್ಕಿದು ಬಂದಿರಲಿಲ್ಲ. ನನ್ನ ಜೊತೆಗಿದ್ದ ವೀರರು ವಿವರಿಸಿದರು ಇದನ್ನು. ಸೋಲಿನ ಸೂಚನೆಯಿದು ಎಂದು ನುಡಿದರವರು ಆತಂಕದಿAದ.ಹೀಗೆ ಚಿಂತೆಯ ಕಾರ್ಮೋಡವೊಂದು ನಮ್ಮನ್ನು ಕವಿದ ಕ್ಷಣದಲ್ಲಿಯೇ ಬಭ್ರುವಾಹನ ಅವನ ಸೇವಕರನ್ನು ಅಟ್ಟಿ, ನಮ್ಮ ಕುದುರೆಯನ್ನು ಕೊಂಡೊಯ್ದು, ಕಟ್ಟಿಸಿಯೇಬಿಟ್ಟ. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಅವರ”ಮಳೆಗೊಂದು ಮನವಿ”

ಕಾವ್ಯ ಸಂಗಾತಿ ಮಾಲಾ ಚೆಲುವನಹಳ್ಳಿ “ಮಳೆಗೊಂದು ಮನವಿ” ಬಾ ಮಳೆಯೇ ಬಾಕಂಗಾಲಾದ ರೈತರಬದುಕಿಗೆ ಬೆಂಗಾವಲಾಗಿ ಬಾ ಮಿಂಚುತ್ತಾ, ಗುಡುಗುತ್ತಾಆಮಿಷ ತೋರದೇ ಬಾ, ತೋರುತ್ತಾ, ಹಾರುತ್ತಾಹಂಗಿಸಿ, ಅಣಕಿಸದೇ ಬಾ, ನೊಂದು ಹೋದ  ರೈತರಬೆಂದೆದೆಯ ಬೃಂದಾವನ ಮಾಡು ಬಾ ನಿಕೃಷ್ಟವಾದ ಬಡವರಬದುಕ ಉಥ್ಕೃ ಷ್ಟವಾಗಿಸಲು ಬಾ, ಮೇರೆ ಮೀರಿ ಮೆರೆಯುತ್ತಿರುವಸೂರ್ಯನ ತಾಪ ನೀಗಿಸಲು ಬಾ, ಇಳೆಯರಸಿ ನಾ ಕಾಯುತಿರುವೆಮಳೆಯರಸ ನೀ ಬಂದು ಸೇರೆನ್ನ ಮಾಲಾ ಚೆಲುವನಹಳ್ಳಿ

ಮಾಲಾ ಚೆಲುವನಹಳ್ಳಿ ಅವರ”ಮಳೆಗೊಂದು ಮನವಿ” Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯಸಂಗಾತಿ ಹಮೀದಾಬೇಗಂ ದೇಸಾಯಿ ಗಜಲ್ ಮರಳ  ಹೆಜ್ಜೆಗಳನು ಕಡಲು ಅಳಿಸಿದಂತಾಗಿದೆ  ಈ ಬದುಕುಇರುಳು ಕಂಡ ಬಾವಿಗೆ  ಹಗಲು  ಬಿದ್ದಂತಾಗಿದೆ ಈ ಬದುಕು ತಣ್ಣಗೆ  ಉರಿಯುವ  ಬೂದಿಮುಚ್ಚಿದ  ಕೆಂಡ  ಇದಲ್ಲವೇಕೆಸರಿನಲಿ ಅವಿತ ಮುಳ್ಳಿನ ಮೊನೆಯಂತಾಗಿದೆ  ಈ ಬದುಕು ಸಂತೈಸುವ ಕೈಗಳೇ  ಬಸಿರಿಗೆ ಕೊಳ್ಳಿ ಇಟ್ಟು ನಗುತಿವೆಕತ್ತಲೆಯ ಗರ್ಭದಿ ಬೆಳಕು ಕಳೆದಂತಾಗಿದೆ ಈ ಬದುಕು ಹಗಲು ವೇಷಧಾರಿಗಳ ಮೋಜು ಬಲುಜೋರು ಇಲ್ಲಿಸತ್ತ ಹೆಣಗಳ ಸಿಂಗಾರ ನೋಡುವಂತಾಗಿದೆ ಈ ಬದುಕು ಭಾವಗಳ ರೆಕ್ಕೆ  ಮುರಿದು ಬೆತ್ತಲೆಯಾಗಿವೆ ನೊಂದು ಬೇಗಂಪ್ರೀತಿಯನು ಎದೆಯ ಗೋರಿಯಲಿ ಹುಗಿದಂತಾಗಿದೆ ಈ  ಬದುಕು ಹಮೀದಾಬೇಗಂ ದೇಸಾಯಿ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

“ಶಿರಬಾಗಿದರೆ ಆಶೀರ್ವಾದ” ಕವಿತಾ ಶ್ರೀನಿವಾಸ್ ನಾಯಕ್ 

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  “ಶಿರಬಾಗಿದರೆ ಆಶೀರ್ವಾದ” ​ಶಿರಬಾಗಿದರೆ ಆಶೀರ್ವಾದ ಈ ನಾಲ್ಕು ಪದಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ದೊಡ್ಡ ತತ್ವ ಅಡಗಿದೆ. ಹಿರಿಯರು, ಗುರುಗಳು ಮತ್ತು ದೇವರಿಗೆ ತಲೆಬಾಗಿ ನಮಸ್ಕರಿಸುವುದು ಕೇವಲ ಒಂದು ಪದ್ಧತಿಯಲ್ಲ, ಅದು ನಮ್ಮ ಅಂತರಂಗದ ಅಹಂಕಾರವನ್ನು ಅಳಿಸಿ, ದೊಡ್ಡವರ ಜ್ಞಾನ ಮತ್ತು ಶಕ್ತಿಯನ್ನು ನಮ್ಮದಾಗಿಸಿಕೊಳ್ಳುವ ಒಂದು ಪ್ರಕ್ರಿಯೆ.​ಅಹಂಕಾರದ ವಿಸರ್ಜನೆ :-​ಮನುಷ್ಯನ ಶಿರಸ್ಸು ಅಹಂಕಾರದ ಕೇಂದ್ರ ಎಂದು ಹೇಳಲಾಗುತ್ತದೆ. ನಾನು, ನನ್ನದು ಎಂಬ ಭಾವನೆಗಳು ನಮ್ಮ ತಲೆಯಲ್ಲಿ ತುಂಬಿರುತ್ತವೆ. ನಾವು ಯಾವಾಗ ಹಿರಿಯರ ಮುಂದೆ ತಲೆಬಾಗುತ್ತೇವೆಯೋ, ಆಗ ನಮ್ಮ ಅಹಂಕಾರವನ್ನು ಅವರ ಪಾದಗಳಿಗೆ ಸಮರ್ಪಿಸುತ್ತೇವೆ. ಅಹಂಕಾರ ಕರಗಿದಾಗ ಮಾತ್ರ ಮನಸ್ಸು ತಿಳಿಯಾಗುತ್ತದೆ.​ಗುರುಗಳ ಮುಂದೆ ಶಿಷ್ಯನು ಶಿರಬಾಗುವುದು ಅಜ್ಞಾನದಿಂದ ಜ್ಞಾನದ ಕಡೆಗೆ ನಡೆಯುವ ಮೊದಲ ಹೆಜ್ಜೆ. ಜಲಪಾತದ ನೀರು ಕೆಳಗಿರುವ ಕಣಿವೆಯತ್ತ ಹರಿಯುವಂತೆ, ಜ್ಞಾನವು ಎತ್ತರದ ವ್ಯಕ್ತಿಯಿಂದ ನಮ್ರತೆಯಿಂದ ಇರುವ ವ್ಯಕ್ತಿಗೆ ಹರಿಯುತ್ತದೆ. ತಲೆಬಾಗುವುದು ಅಂದರೆ ನಾನು ಕಲಿಯಲು ಸಿದ್ಧನಿದ್ದೇನೆ ಎಂದು ಒಪ್ಪಿಕೊಳ್ಳುವುದು.​ಕೃತಜ್ಞತಾ ಭಾವನೆ:-​ನಮಸ್ಕಾರ ಮಾಡುವುದು ನಮಗೆ ನೆರವಾದವರಿಗೆ, ನಮ್ಮನ್ನು ಸಾಕಿ ಸಲಹಿದವರಿಗೆ ತೋರುವ ಕೃತಜ್ಞತೆಯ ಸಂಕೇತ. ತಂದೆ-ತಾಯಿಯ ಪಾದಗಳಿಗೆ ಶಿರಬಾಗಿದಾಗ, ಅವರು ನಮಗಾಗಿ ಮಾಡಿದ ತ್ಯಾಗಕ್ಕೆ ನಾವು ಗೌರವ ಸಲ್ಲಿಸುತ್ತೇವೆ. ಈ ಕೃತಜ್ಞತಾ ಭಾವನೆಯೇ ಜೀವನದಲ್ಲಿ ಶಾಂತಿಯನ್ನು ತರುತ್ತದೆ.​ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ತಲೆಬಾಗುತ್ತೇವೆ. ಇದು ನಮ್ಮ ಮಿತಿಯನ್ನು ಒಪ್ಪಿಕೊಂಡು, ನಮಗಿಂತ ದೊಡ್ಡದಾದ ದೈವಿಕ ಶಕ್ತಿಯ ಮೇಲೆ ಶರಣಾಗತಿಯನ್ನು ತೋರಿಸುತ್ತದೆ. ಭಕ್ತಿಯಿಂದ ಶಿರಬಾಗಿದಾಗ, ದೇವರ ಕೃಪೆ ಮತ್ತು ಆಶೀರ್ವಾದ ನಮಗೆ ಲಭಿಸುತ್ತದೆ.​ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದಲೂ ನಮ್ರತೆ ಅತಿ ಮುಖ್ಯ ಗುಣ. ಜ್ಞಾನ ಹೆಚ್ಚಾದಂತೆ ವ್ಯಕ್ತಿ ನಮ್ರನಾಗುತ್ತಾನೆ. ಅತಿಯಾಗಿ ತಲೆಬಾಗದ ಮರ ಮುರಿದುಬೀಳಬಹುದು, ಆದರೆ ಬಾಗಿದ ಬಿದಿರು ಎಂತಹ ಚಂಡಮಾರುತವನ್ನೂ ತಡೆದುಕೊಳ್ಳುತ್ತದೆ. ನಮ್ರತೆ ನಮ್ಮನ್ನು ಇತರರ ಪ್ರೀತಿಗೆ ಪಾತ್ರರಾಗುವಂತೆ ಮಾಡುತ್ತದೆ.​ಲೇಖನದ ಸಾರಾಂಶ:​ಶಿರಬಾಗುವುದು ದೌರ್ಬಲ್ಯದ ಸಂಕೇತವಲ್ಲ, ಬದಲಾಗಿ ಅದು ಆಂತರಿಕ ಶಕ್ತಿ ಮತ್ತು ಸಂಸ್ಕಾರದ ಪ್ರದರ್ಶನ. ನಾವು ಹಿರಿಯರ ಮುಂದೆ ತಲೆಬಾಗಿದಾಗ, ಅವರು ನೀಡುವ ಆಶೀರ್ವಾದವು ನಮ್ಮನ್ನು ಜೀವನದ ಕಠಿಣ ಹಾದಿಯಲ್ಲಿ ಮುನ್ನಡೆಸುವ ದಾರಿದೀಪವಾಗುತ್ತದೆ.“ನಮಸ್ಕಾರ ಮಾಡುವವನಿಗೆ ನಮ್ರತೆಯ ಸಂಸ್ಕಾರವಿರಲಿ, ಆಶೀರ್ವದಿಸುವವನಿಗೆ ಮಮತೆಯ ಸಂಸ್ಕಾರವಿರಲಿ. ಶಿರಬಾಗಿದಾಗ ಕೈಗಳು ಆಶೀರ್ವದಿಸದಿದ್ದರೆ, ಅಲ್ಲಿ ಸಂಸ್ಕಾರವು ಪೂರ್ಣಗೊಳ್ಳುವುದಿಲ್ಲ.”ನಮ್ರತೆಯಿಂದ ಶಿರಬಾಗಿ, ನಾವೆಲ್ಲರೂ ಆಶೀರ್ವಾದದ ಮಳೆಯಲ್ಲಿ ಮೀಯೋಣ. ಲೇಖನ : ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳಉಡುಪಿ ಜಿಲ್ಲೆ.

“ಶಿರಬಾಗಿದರೆ ಆಶೀರ್ವಾದ” ಕವಿತಾ ಶ್ರೀನಿವಾಸ್ ನಾಯಕ್  Read Post »

You cannot copy content of this page

Scroll to Top