ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್ ಚೇತನ ಸೊಲ್ಲಾಪುರದಿಂದ ದೆಹಲಿಯವರೆಗೆ *ಜವಾಹರ ನೆಹರು ಪಂಡಿತರಿಗೆ ನುಡದೇವಅವರವರ ನುಡಿಯಲಿ ರಾಜ್ಯವ, ನಡೆಯಲಿ ಅವಿಭಾಜ್ಯ ಭಾರತಕೆ ಬಲ ಬರಲಿ||*ಡಾ.ಜಯದೇವಿತಾಯಿ ೧೯೫೨ರ ಸಮಯ…… ಸಾರ್ವತ್ರಿಕ ಚುನಾವಣೆಯ ನಂತರ ವರ್ಷದ ಅಂತ್ಯದವರೆಗೂ ಆಂಧ್ರ ಮತ್ತು ಕರ್ನಾಟಕವನ್ನು ಪ್ರತ್ಯೇಕ ಪ್ರಾಂತ್ಯಗಳಾಗಿ ರಚಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆರಂಭದಲ್ಲಿ ಮನವಿ, ಅರ್ಜಿ ಮತ್ತು ವಿನಂತಿಗಳ ಮೂಲಕ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದರೂ, ನಂತರ ಹೋರಾಟ ಮತ್ತು ಪ್ರತಿಭಟನೆಯಂತಹ ಕಾರ್ಯಾಚರಣೆಗಳು ಆರಂಭವಾದವು.ಆಂಧ್ರದ ಪ್ರತ್ಯೇಕ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೀರ್ಘಕಾಲ ೬೮ ದಿನ ಉಪವಾಸ ಮಾಡಿದರು ….೬೮ ನೆ ದಿನ ಅವರು ನಿಧನರಾದರು. ಅವರ ಸಾವಿನಿಂದ ಆಂಧ್ರದಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.ಹೈದರಾಬಾದನ ನಾನಲ ನಗರದಲ್ಲಿ ನಡೆದ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ ಸಮಿತಿಯು ಆಂಧ್ರ ಪ್ರಾಂತ್ಯ ರಚನೆಯ ಬೇಡಿಕೆಯನ್ನು ಪರಿಗಣಿಸಿತು. ನಂತರ ಪ್ರಧಾನಿ ನೆಹರು ಸಂಸತ್ತಿನ ಡಿಸೆಂಬರ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕರ್ನಾಟಕದ ಬಗ್ಗೆ ಯಾವ ಮಾತನ್ನು ಅವರು ಎತ್ತಲಿಲ್ಲ. ಅದರ ಪರಿಣಾಮವಾಗಿ ಮಾರ್ಚ್ನಲ್ಲಿ ಪ್ರತ್ಯೇಕ ಆಂಧ್ರ ಪ್ರಾಂತ್ಯ ರಚನೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದರಿಂದ ಕನ್ನಡಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಯಿತು. ಆಂಧ್ರದ ಬೇಡಿಕೆಗೆ ಸ್ಪಂದಿಸಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಭಾವಿಸಿದರು. ಪರಿಣಾಮವಾಗಿ ಕನ್ನಡಿಗರು ಕಾಂಗ್ರೆಸ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ವಿಶಾಲ ಕರ್ನಾಟಕವನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಇನ್ನಷ್ಟು ಬಲವಾದದ ಆಶಯ ಮುಂದಿಟ್ಟರು. ಈ ಹೋರಾಟವೇ ಮುಂದೆ ಕರ್ನಾಟಕ ಏಕೀಕರಣ ಚಳವಳಿಗೆ ಮತ್ತಷ್ಟು ವೇಗ ನೀಡಿತು.ಈ ಘಟನೆ ಕರ್ನಾಟಕ ಏಕೀಕರಣ ಚಳವಳಿಯ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘಟ್ಟವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಆಡಳಿತಗಳ ಅಡಿಯಲ್ಲಿ ಚದುರಿಹೋಗಿದ್ದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮದ್ರಾಸ ಪ್ರಾಂತ್ಯದ ಕನ್ನಡ ಪ್ರದೇಶಗಳು ಹೀಗೆ ಕನ್ನಡಿಗರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ರಾಜ್ಯ ನಿರ್ಮಿಸಬೇಕು ಎಂಬ ಹಂಬಲ ಜನರಲ್ಲಿ ಬಲವಾಗುತ್ತಿತ್ತು. ನವೆಂಬರ ೧೯೫೨ರ ಅವಧಿಯಲ್ಲಿ ಈ ಬೇಡಿಕೆ ಕೇವಲ ಸಭೆ, ಮನವಿ ಮತ್ತು ನಿರ್ಣಯಗಳಿಗೆ ಸೀಮಿತವಾಗದೆ ತ್ಯಾಗ ಮತ್ತು ಹೋರಾಟದ ಹಂತಕ್ಕೆ ತಲುಪಿತು. ಅದರಗುಂಟೆ ಶಂಕರಗೌಡರು, ದೊಡ್ಡಮೇಟಿ ಅಂದಾನಪ್ಪ, ತಲ್ಲೂರ ರಾಯಣ್ಣಗೌಡರು ಮುಂತಾದ ಏಕೀಕರಣ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗಾಗಿ ಮರಣಾಂತ ಉಪವಾಸ ವ್ರತ ಕೈಗೊಂಡರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಸರ್ಕಾರದ ಗಮನ ಸೆಳೆಯಲು ಅವರು ಮುಂದಾದರು.ಈ ಉಪವಾಸ ಸತ್ಯಾಗ್ರಹವು ಕನ್ನಡಿಗರ ಬಹುದಿನಗಳ ಆಶಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಒಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿತ್ತು. ಉಪವಾಸಿಗರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಂತೆ ಏಕೀಕರಣ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳಲ್ಲಿ ಆತಂಕ ಹೆಚ್ಚಾಯಿತು. ಇಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಹೋರಾಟಗಾರರ ಬೆನ್ನಿಗೆ ದೃಢವಾಗಿ ನಿಂತರು. ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾಗ ಅವರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಅಗತ್ಯವಾಗಿತ್ತು. ಜಯದೇವಿ ತಾಯಿಯವರು* ತಮ್ಮ ರಕ್ತದಿಂದಲೇ ಹಸ್ತಾಕ್ಷರ ಹಾಕಿ ಉಪವಾಸ ಸತ್ಯಾಗ್ರಹಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು* ಎಂಬುದು ಅವರ ಹೋರಾಟದ ತೀವ್ರತೆ ಮತ್ತು ಬದ್ಧತೆಯನ್ನು ತೋರಿಸುವ ಅಪೂರ್ವ ಘಟನೆ. ಇದು “ಕರ್ನಾಟಕ ಏಕೀಕರಣಕ್ಕಾಗಿ ನಡೆಯುವ ನಿಮ್ಮ ಹೋರಾಟಕ್ಕೆ ನನ್ನ ಜೀವದ ಕೊನೆಯ ಹನಿಯವರೆಗೂ ಬೆಂಬಲವಿದೆ” ಎಂಬ ಸಂಕಲ್ಪದ ಸಂಕೇತವಾಗಿತ್ತು. ಅವರ ಈ ನಡೆ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಮಹಿಳೆಯರು ಕೂಡ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು, ಅಗತ್ಯವಾದರೆ ವೈಯಕ್ತಿಕ ತ್ಯಾಗಕ್ಕೂ ಸಿದ್ಧರಾಗಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು. *ನುಡಿನಾಡ ಮಾಡುವಗ |ಗಡಿನಾಡ ಮರಿಬ್ಯಾಡ್ರಿಬೇಡಿದೆವು ನ್ಯಾಯವ ಕೊಡಿರೆಂತ -ಸರ್ಕಾರಕತೊಡಕ ಇಡಬ್ಯಾಡರಿ ಕಡೆ ತನಕ||*ಎಂದು ಹಾಡುತ್ತಾ ಜಯದೇವಿ ತಾಯಿಯವರು ಸರ್ಕಾರಕ್ಕೆ ಎಚ್ಚರಿಸಲು ಪ್ರಯತ್ನಿಸಿದರು. ಹೋರಾಟದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇವಲ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿತು. ಕರ್ನಾಟಕದ ಏಕೀಕರಣದ ಪ್ರಶ್ನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ಕೊಂಡೊಯ್ಯಬೇಕಾಗಿತ್ತು. ಆದ್ದರಿಂದ ಜಯದೇವಿ ತಾಯಿಯವರು ತಮ್ಮ ಸಂಗಡಿಗರೊಂದಿಗೆ ಸೊಲ್ಲಾಪುರದಿಂದ ದೆಹಲಿಯವರೆಗೆ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದರು. ಪ್ರವಾಸ ಕನ್ನಡಿಗರ ನೋವು, ಅಸಮಾಧಾನ ಮತ್ತು ಅಖಂಡ ಕರ್ನಾಟಕದ ಆಶಯವನ್ನು ದೇಶದ ರಾಜಧಾನಿಗೆ ಕೊಂಡೊಯ್ಯುವ ಪ್ರತೀಕಾತ್ಮಕ ರಾಜಕೀಯ…ಸಾಮಾಜಿಕ ಯಾತ್ರೆಯಾಗಿತ್ತು. ದಾರಿಯುದ್ದಕ್ಕೂ ಕನ್ನಡಿಗರ ಸಮಸ್ಯೆಗಳನ್ನು ಜನರಿಗೆ ತಿಳಿಸುವುದು, ಕರ್ನಾಟಕ ಏಕೀಕರಣದ ಅಗತ್ಯವನ್ನು ವಿವರಿಸುವುದು ಮತ್ತು ಕೇಂದ್ರ ನಾಯಕರ ಗಮನ ಸೆಳೆಯುವುದು ಈ ಪ್ರಯತ್ನದ ಉದ್ದೇಶವಾಗಿತ್ತು. *ನಾಡೊಂದುಗೂಡಿಸಿ ಕೊಡಿರೆಂದು ಹೊಂದಿಸಿಬೇಡ ಹೋದೆವ ದಿಲ್ಲಿಯ ಸರ್ಕಾರಕನುಡಿದೇವ “ಕನ್ನಡ ನಾಡೊಂದೇ “*ಎಂದು ಹಾಡಿದ ಜಯದೇವಿ ತಾಯಿಯವರು ಸೊಲ್ಲಾಪುರದಿಂದ ದೆಹಲಿಯವರೆಗೆ ಸಾಗಿದ ಈ ಪ್ರಯತ್ನವು ಒಂದು ಮಹತ್ವದ ಸಂದೇಶವನ್ನು ನೀಡಿತು….ಕರ್ನಾಟಕ ಏಕೀಕರಣವು ಕನ್ನಡಿಗರ ಸಾಮೂಹಿಕ ಹಕ್ಕು ಮತ್ತು ಭಾವನೆಯಾಗಿದೆ. ಜಯದೇವಿ ತಾಯಿಯವರಂತಹ ಮಹಿಳಾ ಹೋರಾಟಗಾರ್ತಿಯರು ಈ ಹಂತದಲ್ಲಿ ವಹಿಸಿದ ಪಾತ್ರ ವಿಶೇಷವಾದದ್ದು. ಅವರು ಭಾಷಣಗಳನ್ನು ಮಾಡುತ್ತಾ, ಸಮಾಲೋಚನೆಗಳನ್ನು ಆಯೋಜಿಸುತ್ತಾ … ಅಲ್ಲಲ್ಲಿ ಸಭೆಗಳನ್ನು ನಡೆಸಿ,ಉಪವಾಸ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ…,, ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತೆ ಮಾಡಲು ಪ್ರಯತ್ನಿಸಿದರು.ಈ ಘಟನೆಯು ಜಯದೇವಿ ತಾಯಿಯವರ ಧೈರ್ಯ ಮತ್ತು ಕೆಚ್ಚೆದೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟವು ಕನ್ನಡಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರು. ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ಹಳ್ಳಿಕೇರಿ ರುದ್ರಪ್ಪ, ಬಿ. ಡಿ. ಜತ್ತಿ ಮುಂತಾದ ಪ್ರಮುಖ ನಾಯಕರು ಜಯದೇವಿ ತಾಯಿಯವರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಪ್ರಮುಖ ಆಶಯವಾಗಿತ್ತು.ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋರಾಟವನ್ನು ಹೇಗೆ ಸಂಘಟಿಸಬೇಕು, ಜನರಲ್ಲಿ ಕನ್ನಡ ನಾಡಿನ ಏಕೀಕರಣದ ಬಗ್ಗೆ ಜಾಗೃತಿ ಹೇಗೆ ಮೂಡಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇಗೆ ತರಬೇಕು, ಕನ್ನಡ ಭಾಷಿಕ ಪ್ರದೇಶಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ಹೇಗೆ ತರಬೇಕು ಎಂಬುದರ ಕುರಿತು ತಾಯಿಯವರು ಮತ್ತು ನಾಯಕರು ಸುದೀರ್ಘವಾಗಿ ಚರ್ಚಿಸುತ್ತಿದ್ದರು. ಜನಜಾಗೃತಿ ಹಾಗೂ ವಿವಿಧ ಹೋರಾಟಗಳ ಮೂಲಕ ಕನ್ನಡಿಗರ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.ಇದೇ ಅವಧಿಯಲ್ಲಿ ಭಾರತ ಸರ್ಕಾರವು ಫಜಲ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗವನ್ನು ರಚಿಸಿತು. ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಯಾವ ರೀತಿಯಲ್ಲಿ ಪುನರ್ವ್ಯವಸ್ಥೆಗೊಳಿಸಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿತ್ತು.ಈ ಸಂದರ್ಭದಲ್ಲಿ ಜಯದೇವಿ ತಾಯಿಯವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುವುದರ ಜೊತೆಗೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ರಾಜ್ಯ ಪುನರ ರಚನಾ ಆಯೋಗದ ಸದಸ್ಯರಾಗಿದ್ದ ಶ್ರೀ ಕೆ. ಎಂ. ಫಣಿಕ್ಕರ ಅವರೊಂದಿಗೆ ಜಯದೇವಿ ತಾಯಿಯವರು ಹಲವು ಬಾರಿ ಸುದೀರ್ಘವಾಗಿ ಚರ್ಚಿಸಿದರು. ಕನ್ನಡಿಗರು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳ ಭಾಷಾ-ಸಾಂಸ್ಕೃತಿಕ ಸಂಬಂಧಗಳು ಹೇಗಿವೆ, ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕಾದ ಅಗತ್ಯವೇನು, ಜನರ ಆಶಯವೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಕರ್ನಾಟಕದ ಏಕೀಕರಣವು ಆಡಳಿತಾತ್ಮಕ ಬದಲಾವಣೆಯ ಜೊತೆ ಜೊತೆಯಾಗಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಭಾವನಾತ್ಮಕ ಏಕತೆಯ ಪ್ರಶ್ನೆ ಎಂಬುದನ್ನು ತಾಯಿಯವರು ಹೇಳುತ್ತಿದ್ದರು.ಹೀಗೆ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆ, ಜನಜಾಗೃತಿ, ಹೋರಾಟ ಮತ್ತು ರಾಜ್ಯ ರಚನಾ ಆಯೋಗದೊಂದಿಗೆ ವಿಚಾರ ವಿನಿಮಯ ನಡೆಸುವ ಮೂಲಕ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ನಿರ್ಮಾಣದ ಮಹತ್ವದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಅವರ ಪ್ರಯತ್ನ ಚದುರಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ನಾಡಿನ ಅಡಿಯಲ್ಲಿ ಒಂದಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ದೊರೆಯಬೇಕು ಎಂಬ ಗಾಢವಾದ ಕನ್ನಡಾಭಿಮಾನವಿತ್ತು. ಇಂತಹ ಅನೇಕ ಹೋರಾಟಗಾರರ ನಿರಂತರ ಪ್ರಯತ್ನಗಳ ಫಲವಾಗಿಯೇ ಮುಂದೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಕನಸು ನನಸಾಗುವ ದಾರಿ ಸುಗಮವಾಯಿತು.(ಮುಂದುವರೆಯಲಿದೆ) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-32 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಕನ್ನಡನಾಡಿನ ಸೇವೆ ನಡುನಾಡಿನ ಅಣ್ಣಂದಿರೆ| ಗಡಿಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲಒಡ ಹುಟ್ಟಿದ ಕನ್ನಡ ಮಕ್ಕಳು||-ಡಾ.ಜಯದೇವಿತಾಯಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು.. ೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು… ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ) ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು. ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು. ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು. ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು. ಏಕೀಕರಣವು ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು. ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು. ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು. ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು. ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್ಸಂಘಟನೆಯಾಗಿ ಕಂಡರು. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು. ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ. ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ. ಕರ್ನಾಟಕ ಏಕೀಕರಣದ ಇತಿಹಾಸವು ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ. ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನುಬಚ್ಚ ಬರಿಯ ನಿತ್ಯ- ನುಡಿಗನ್ನಡಅಚ್ಚೊತ್ತಿಕೊಳ್ಳಲೇನ ಅಖಂಡ||ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.
ಧಾರಾವಾಹಿ ಸಂಗಾತಿ-31 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯಕ್ಕೆ ಪೂರ್ಣವಿರಾಮ ಅತ್ಯಂತ ಧೀಮಂತ ವ್ಯಕ್ತಿತ್ವ, ಪ್ರಖರ ವಾಗ್ಮಿತೆ ಮತ್ತು ಜನಮನ ಸೆಳೆಯುವ ಮಾತಿನ ಶೈಲಿಯನ್ನು ಹೊಂದಿದ್ದ ಜಯದೇವಿತಾಯಿಯವರು ರಾಜಕೀಯ ಕ್ಷೇತ್ರದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು. ಅವರ ಒಂದು ಭಾಷಣವೇ ಸಾವಿರಾರು ಜನರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳಲ್ಲಿ ಸತ್ಯದ ಕಿಡಿ, ಸಮಾಜದ ಕಳಕಳಿ ಮತ್ತು ಕನ್ನಡ ನಾಡಿನ ಬಗ್ಗೆ ಅಚಲವಾದ ಪ್ರೀತಿ ಪ್ರತಿಧ್ವನಿಸುತ್ತಿತ್ತು. ರಾಜಕೀಯ ಪಕ್ಷದ ಅಭ್ಯರ್ಥಿಯಾಗಲಿ, ಚುನಾವಣಾ ಕಣಕ್ಕಿಳಿದಾಗ ಪ್ರಚಾರ ನಡೆಸಲು ಜಯದೇವಿತಾಯಿಯವರನ್ನು ಆಹ್ವಾನಿಸುತ್ತಿದ್ದರು. ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಜನಸಾಗರವೇ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳುವಷ್ಟು ಶಾಂತಿ ಆವರಿಸುತ್ತಿತ್ತು. ಅವರ ಮಾತುಗಳು….ಸಮಾಜದ ಜಾಗೃತಿ, ನ್ಯಾಯ ಮತ್ತು ಜನಸೇವೆಯ ಸಂದೇಶವನ್ನು ಸಾರುತ್ತಿದ್ದವು.ಜಯದೇವಿತಾಯಿಯವರ ಪ್ರಭಾವ ಎಷ್ಟಿತ್ತೆಂದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜನರು ಅಭ್ಯರ್ಥಿಗಿಂತಲೂ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದರು. ಅವರ ಸತ್ಯನಿಷ್ಠೆ, ನಿರ್ಭೀತ ನಿಲುವು ಮತ್ತು ಜನಪರ ಕಾಳಜಿಯಿಂದ ಪಕ್ಷಗಳ ನಾಯಕರೂ ಅವರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು. ಜಯದೇವಿತಾಯಿಯವರನ್ನು ಕರೆಸಿಕೊಳ್ಳುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ೧೯೫೧ರ ಚುನಾವಣೆಯ ಅಭ್ಯರ್ಥಿಗಳು ಸಹಾಯ ಕೇಳಿ ಅವರನ್ನು ಕರೆದವರು…..ಲೋಕಸಭೆಯ ಅಭ್ಯರ್ಥಿಗಳಾಗಿದ್ದ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಮಹಾದೇವಮ್ಮ ಪಾಟೀಲ,ಶಂಕರ ಥಣಿ ಮುಂತಾದವರು ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು ಅವರು ಕರೆದಾಗ ಅಲ್ಲಿಯೂ ಕೂಡ ತಾಯಿಯವರು ಹೋಗುತ್ತಿದ್ದರು. ಜನತೆ ಅವರನ್ನು ಹರ್ಷಉಲ್ಲಾಸದಿಂದ ಸ್ವಾಗತಿಸುತ್ತಿದ್ದರು. ಅವರ ಭಾಷಣಕ್ಕೆ ಮಂತ್ರಮುಗ್ಧರಾಗುತ್ತಿದ್ದರು.ಒಂದು ಭಾಷಣ ಸಾವಿರಾರು ಜನರನ್ನು ಆಲೋಚನೆಗೆ ಹಚ್ಚುವ ಶಕ್ತಿಯನ್ನು ಹೊಂದಿತ್ತು. ಜಯದೇವಿತಾಯಿಯವರು ವೇದಿಕೆಗೆ ಏರಿದಾಗ ಅಭ್ಯರ್ಥಿಯ ಗೆಲುವಿಗಿಂತ ಸಮಾಜದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಭಾಷಣದ ಕೇಂದ್ರಬಿಂದು ಕನ್ನಡ ಭಾಷೆಯ ಅಭಿಮಾನ, ಕನ್ನಡ ನಾಡಿನ ಹಿತ, ಅಸ್ಪೃಶ್ಯರ ಉದ್ಧಾರ, ಮಹಿಳೆಯರ ಸ್ವಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾಜದಲ್ಲಿ ಸಮಾನತೆಯ ಸ್ಥಾಪನೆ ಆಗಿತ್ತು. ಅವರು ಯಾವುದೇ ಪಕ್ಷದ ಹೊಗಳಿಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ಜನರಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿ, ಸಮಾಜಮುಖಿ ಚಿಂತನೆ ಬೆಳೆಸುವ ಕೆಲಸ ಮಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಿದ್ದರು..*”ನಾನು ಇಲ್ಲಿ ಯಾವುದೇ ಅಭ್ಯರ್ಥಿಯ ಪರವಾಗಿ ಮತ ಕೇಳಲು ಬಂದಿಲ್ಲ. ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಬದುಕು ಹೇಗಿದೆ, ನಿಮ್ಮ ನೋವು ಏನು, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂಬುದನ್ನು ಅರಿಯಲು ಬಂದಿದ್ದೇನೆ. ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತೊಬ್ಬ ಅಭ್ಯರ್ಥಿ ಸೋಲುವುದು ಸಹಜ. ಸತ್ಯ, ನ್ಯಾಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಹಕ್ಕಾಗಿರಬೇಕು. ಆದ್ದರಿಂದ ಪಕ್ಷವನ್ನು ನೋಡಿ ಮತ ಹಾಕಬೇಡಿ…ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ನೀಡಿ.”*ಈ ಮಾತುಗಳು ಜನರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದವು. ರಾಜಕೀಯಕ್ಕಿಂತ ಜನಸೇವೆ ಮುಖ್ಯ ಎಂಬ ಸಂದೇಶವನ್ನು ಅವರು ಎಲ್ಲೆಡೆ ಸಾರಿದರು* ಅವರ ವ್ಯಕ್ತಿತ್ವವೇ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತಿತ್ತು. ಜನರು ಅವರನ್ನು ಸಮಾಜ ಸುಧಾರಕಿಯಾಗಿ ಕಾಣುತ್ತಿದ್ದರು.ಒಮ್ಮೆ ನಡೆದ ಚುನಾವಣೆಯಲ್ಲಿ ಅವರ ಉಪಸ್ಥಿತಿ ಮತ್ತು ಭಾಷಣಗಳು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸಿದವು ಎಂದು ಹೇಳಲಾಗುತ್ತದೆ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷ ಉತ್ತಮ ಸಾಧನೆ ಮಾಡಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎನ್ನುವ ಮಾತು ಜನರಲ್ಲಿ ಪ್ರಚಲಿತವಾಯಿತು. *ಜಯದೇವಿತಾಯಿಯವರು ಜಯವನ್ನು ತಮ್ಮ ಸಾಧನೆ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. “ಗೆಲ್ಲಬೇಕಾದದ್ದು ಒಬ್ಬ ವ್ಯಕ್ತಿಯ ಸತ್ಯ ಮತ್ತು ಸಮಾಜದ ಹಿತ” ಎಂಬುದೇ ಅವರ ನಿಲುವಾಗಿತ್ತು.*ಆದರೂ ಚುನಾವಣೆಯ ನಂತರ ಅವರು ರಾಜಕೀಯ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದರು. ಚುನಾವಣಾ ವೇದಿಕೆಗಳು ತಮ್ಮ ಆದರ್ಶಗಳಿಗೆ ಸೂಕ್ತವಾದ ಸ್ಥಳವಲ್ಲ ಎಂಬ ಅರಿವು ಅವರಿಗೆ ಮೂಡಲಾರಂಭಿಸಿತು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶಭಕ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಮತ್ತು ಗಾಂಧೀಜಿಯವರ ಆದರ್ಶಗಳ ಪ್ರತೀಕವಾಗಿತ್ತು. ಜಯದೇವಿತಾಯಿಯವರೂ ಇದೇ ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರು. . ಸ್ವಾತಂತ್ರ್ಯಾನಂತರದ ರಾಜಕೀಯ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ತ್ಯಾಗ ಮತ್ತು ಸೇವೆಯ ಸ್ಥಾನದಲ್ಲಿ ಅಧಿಕಾರದ ಹಂಬಲ, ಸ್ವಾರ್ಥ ರಾಜಕಾರಣ ಮತ್ತು ಗುಂಪುಗಾರಿಕೆ ತಲೆ ಎತ್ತುತ್ತಿರುವುದನ್ನು ಜಯದೇವಿತಾಯಿಯವರು ನೋವಿನಿಂದ ಗಮನಿಸಿದರು.ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಬಡವರ ಪರವಾದ ರಾಜಕಾರಣ ಕ್ರಮೇಣ ಮರೆಯಾಗುತ್ತಿರುವಂತೆ ಅವರಿಗೆ ಭಾಸವಾಯಿತು.ಒಮ್ಮೆ ಆದರ್ಶಗಳಿಗಾಗಿ ಬದುಕಿದ್ದ ಪಕ್ಷದಲ್ಲಿ ಈಗ ಆ ಆದರ್ಶಗಳು ಕೇವಲ ಭಾಷಣಗಳಲ್ಲಷ್ಟೇ ಕೇಳಿಬರುತ್ತಿದ್ದವು…..ಆದರೆ ಆಚರಣೆಯಲ್ಲಿ ಅವುಗಳ ಪ್ರತಿಫಲನ ಕಾಣುತ್ತಿರಲಿಲ್ಲ. ಮಾತು ಮತ್ತು ಕೃತಿಯ ನಡುವೆ ಹೆಚ್ಚುತ್ತಿರುವ ಅಂತರ ಅವರನ್ನು ತೀವ್ರವಾಗಿ ಕಾಡಿತು. ಅಧಿಕಾರಕ್ಕಾಗಿ ನಡೆಯುತ್ತಿದ್ದ ರಾಜಕೀಯ ಅವರ ಅಂತರಂಗವನ್ನು ನೋಯಿಸಿತು. ಜನಸೇವೆಯೇ ರಾಜಕಾರಣದ ಆತ್ಮವಾಗಿರಬೇಕು ಎಂಬ ಅವರ ನಂಬಿಕೆಗೆ ಬೆಳವಣಿಗೆಗಳು ವಿರುದ್ಧವಾಗಿದ್ದವು. ಅಂತಹ ಸಂದರ್ಭದಲ್ಲಿ ಆಗಿನ ಹೈದರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ. ಕೃಷ್ಣರಾವ ಅವರು, ಕಾಂಗ್ರೆಸ ಪ್ರಭಾವಿ ಸದಸ್ಯೆಯಾಗಿದ್ದ ಜಯದೇವಿತಾಯಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ವಿಶೇಷವಾಗಿ ಒತ್ತಾಯಿಸಿದರು. ಅವರ ಜನಪ್ರಿಯತೆ, ವಾಗ್ಮಿತೆ ಮತ್ತು ಜನರ ಮೇಲಿನ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳಲು ಬಯಸಿತು.ಆದರೆ ಜಯದೇವಿತಾಯಿಯವರ ಮನಸ್ಸಿನಲ್ಲಿ ಆಗಲೇ ತೀವ್ರವಾದ ಆತ್ಮಸಂಘರ್ಷ ನಡೆಯುತ್ತಿತ್ತು. ಅಂತಹ ವಾತಾವರಣದಲ್ಲಿ ಮುಂದುವರಿಯುವುದು ತಮ್ಮ ಅಂತರಾತ್ಮಕ್ಕೆ ವಿರುದ್ಧ ಎಂದು ಸ್ಪಷ್ಟವಾಗಿ ಅರಿತುಕೊಂಡರು.ಅವರು ದೃಢವಾಗಿ ಹೇಳಿದರು…..“ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾಗಿ ಸಾಗುತ್ತಿರುವ ಪಕ್ಷದಲ್ಲಿ ನನ್ನ ಅಂತರಾತ್ಮ ಜನಸೇವೆ ಮಾಡಲು ಒಪ್ಪುವುದಿಲ್ಲ. ರಾಜಕಾರಣವು ಅಧಿಕಾರದ ದಾಹವೆ ಆಗಿದೆ…. ಜನರ ಉದ್ಧಾರಕ್ಕಾಗಿ ಇರಬೇಕು. ಆದರ್ಶಗಳಿಲ್ಲದ ರಾಜಕೀಯದಲ್ಲಿ ನನಗೆ ಸ್ಥಾನವಿಲ್ಲ.ಈ ನಿರ್ಧಾರವು ಕ್ಷಣಿಕ ಭಾವೋದ್ವೇಗದಿಂದ ಬಂದದ್ದಲ್ಲ. ಅದು ದೀರ್ಘ ಆತ್ಮಪರಿಶೀಲನೆಯ ಫಲವಾಗಿತ್ತು. ಅಧಿಕಾರ, ಹುದ್ದೆ ಅಥವಾ ರಾಜಕೀಯ ಭವಿಷ್ಯಕ್ಕಿಂತ ತಮ್ಮ ಆತ್ಮಸಾಕ್ಷಿಯ ವಿರುದ್ಧ ನಾನು ಹೋಗಲಾರೆ” ಎಂದು ಘೋಷಿಸಿದರು. ಜಯದೇವಿತಾಯಿಯವರು ಕಾಂಗ್ರೆಸ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದರು. ಅಧಿಕಾರದ ಹಾದಿಯನ್ನು ತೊರೆದು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು. ನಂತರ ತಮ್ಮ ಜೀವನವನ್ನು ಕನ್ನಡ ಭಾಷೆಯ ಅಭಿವೃದ್ದಿ, ಮಹಿಳಾ ಸಬಲೀಕರಣ, ಅಸ್ಪೃಶ್ಯರ ಉದ್ಧಾರ, ಶಿಕ್ಷಣದ ಪ್ರಸಾರ ಮತ್ತು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕೆ ಸಮರ್ಪಿಸಿದರು.ಜಯದೇವಿತಾಯಿಯವರ ಈ ನಿರ್ಧಾರವು ತತ್ವಕ್ಕಾಗಿ ಅಧಿಕಾರವನ್ನು ತ್ಯಜಿಸಿದ ಅಪರೂಪದ ವ್ಯಕ್ತಿತ್ವದ ಘೋಷಣೆಯಾಗಿತ್ತು. ಅವರ ಈ ನಿಲುವು ಒಂದು ಸತ್ಯವನ್ನು ಸಾರಿತು…..ಹುದ್ದೆಗಿಂತ ಮೌಲ್ಯಗಳು ಶ್ರೇಷ್ಠ, ಅಧಿಕಾರಕ್ಕಿಂತ ಅಂತರಾತ್ಮ ದೊಡ್ಡದು, ರಾಜಕಾರಣಕ್ಕಿಂತ ಜನಸೇವೆ ಪವಿತ್ರವಾದುದೆಂದು. ಸಮಾಜ ಸೇವೆ, ಶಿಕ್ಷಣ, ಕನ್ನಡ ಭಾಷೆಯ ಉಳಿವು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯೇ ತಮ್ಮ ಜೀವನದ ನಿಜವಾದ ಧ್ಯೇಯ ಎಂದು ಅವರು ನಿಶ್ಚಯಿಸಿದರು. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಹೋದದ್ದು ಅದೇ ಮೊದಲೂ, ಅದೇ ಕೊನೆಯೂ ಆಯಿತು. ನಂತರ ತಮ್ಮ ಸಂಪೂರ್ಣ ಜೀವನವನ್ನು ಜನಸೇವೆ, ಕನ್ನಡದ ಸೇವೆ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಸಮರ್ಪಿಸಿ, ಆದರ್ಶ ಸಮಾಜ ಸುಧಾರಕಿಯಾಗಿ ಚಿರಸ್ಥಾಯಿಯಾಗಿ ಉಳಿದರು. (ಮುಂದುವರಿಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು. ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು. ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು. ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ. ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ .
ಧಾರಾವಾಹಿ ಸಂಗಾತಿ-29 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್ ಚೇತನ ಕನ್ನಡ ಕೋಟಿ ಪ್ರಕಾಶನ ನಿರ್ಮಾಣ ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು. ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು. ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು. ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ ಪ್ರಕಾಶನವನ್ನು ಪ್ರಾರಂಭಿಸಿದರು.ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು. ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು. ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು. ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ. “ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.“ನಮ್ಮವರು ಕಲಿಸಿದರು ಸರಳ ಶೈಲಿಯನು” ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು. ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು. ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು. ಜಯದೇವಿ ತಾಯಿಯವರಿಗೆ ಕನ್ನಡವೆಂದರೆ ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು. ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು. ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ. “ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |ಜೇನು ಸವಿದಂತೆ ತುಂಬಿದ – ಪದಗಳದನಿ ದನಿಗೂಡಿಸಿ ಹಾಡುವೆನು || ಎನ್ನುತ ಜಯದೇವಿ ತಾಯಿಯವರುಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.(ಮುಂದುವರೆಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಹೈದರಾಬಾದ ಕರ್ನಾಟಕ ವಿಮೋಚನಾ ಸಂಘಟನೆ ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು. ಈ ನಾಯಕರಿಗೆ ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು. ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ, ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.*ಕನ್ನಡ ಮಕ್ಕಳು ಕನವರಿಸಿ ಕರೆದಾಗಇನ್ನಾವ ನೆವ ಹೇಳದೆ ನನ ಮನತನ್ನಿಂದ ತಾನೇ ಎಳದಿತ್ತ* ಎಂದೆನ್ನುತ ಜಯದೇವಿತಾಯಿ ಅವರುಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ. ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ. ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು ವ್ಯಕ್ತಪಡಿಸುತ್ತವೆ. ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು. ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು. ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ|| ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ. ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು ಮೊಸರು ಕಡಿತ ಸಿಗಲಿಲ್ಲ -ರೈತಣ್ಣಉಸ್ಸೆಂದಾನ ತನ್ನ ಬಾಳೇಕ|| ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ. ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ. ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು. ಜಯದೇವಿ ತಾಯಿಯವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ–27 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ *ನಿಜಾಂ ಪ್ರಾಂತಿಕ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡವಚನ ಸಾಹಿತ್ಯದ ಜಾಗೃತಿ* ಹನ್ನೆರಡನೇ ಶತಮಾನದ ಶರಣರ ವಚನಗಳು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದವು. ಈ ವಚನಗಳ ಪ್ರಭಾವವು ಇಂದಿನ ಕಲ್ಯಾಣ ಕರ್ನಾಟಕ ಹೈದರಾಬಾದ ಕರ್ನಾಟಕ ಪ್ರದೇಶದ ಗಡಿಭಾಗಗಳಲ್ಲಿಯೂ ಆಳವಾಗಿ ಬೇರೂರಿತ್ತು.ನಿಜಾಂ ಆಡಳಿತದ ಕಾಲದಲ್ಲಿ ಕನ್ನಡ ಭಾಷೆ ಮತ್ತು ವಚನ ಸಾಹಿತ್ಯಕ್ಕೆ ಸೂಕ್ತ ಪ್ರೋತ್ಸಾಹ ದೊರೆಯದಿದ್ದರೂ, ಕನ್ನಡಾಭಿಮಾನಿಗಳು ಮತ್ತು ಶರಣ ತತ್ವದ ಅನುಯಾಯಿಗಳು ಈ ಪರಂಪರೆಯನ್ನು ಜೀವಂತವಾಗಿಡಲು ನಿರಂತರವಾಗಿ ಶ್ರಮಿಸಿದರು. ಅದೇ ಸಮಯದಲ್ಲಿ ೧೯೩೪ ರಲ್ಲಿ ಹರಡೇಕರ್ ಮಂಜಪ್ಪನವರು ವಚನ ಧರ್ಮ ಗ್ರಂಥವೆಂದು ವಚನ ಸಪ್ತಾಹವನ್ನು ಪ್ರಾರಂಭಿಸಿದ್ದರು.ಬೀದರ ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ತುಂಬಾ ವ್ಯಾಪಕವಾಗಿತ್ತು.ಪ್ರಭುರಾಜ ಕಂಬಳಿ ಬಾಬಾ, ಸಂಗ್ರಾಮಪ್ಪ ವಕೀಲ ಹಾಗೂ ಜಯದೇವಿ ತಾಯಿಯವರು ಒಂದಾಗಿ “ನಿಜಾಂ ಪ್ರಾಂತಿಕ ಪರಿಷತ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. *ಕತ್ತಲೆಯೆಂಬ ಅಜ್ಞಾನ |ಭ್ರಾಂತಿಎಂಬೋ ಭೂತರಾತರಿ ಹಗಲು ಕುಣಿದಿತ್ತು- ಲೋಕದಪ್ರೇತಗಳೆಲ್ಲ ಭೂತಾಗಿ ಕೂಣಿದಿತ||* ಎನ್ನುವಂತೆ…. ಜಗದಿ ಅಜ್ಞಾನವೆಂಬುವುದು ಭೂತ ಪ್ರೇತವಾಗಿ ಕುಣಿಯುವ ಸಮಯದಲ್ಲಿ ವಚನಗಳನ್ನು ಶರಣರು ನಮ್ಮ ಕೈಯಲ್ಲಿ ಇಟ್ಟರು. ಇಂಥ ಅಮೂಲ್ಯವಾದ ಜ್ಞಾನವನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವದುಕ್ಕೆ ಕರೆ ನೀಡಿದರು….ಜಯದೇವಿತಾಯಿಯವರು . ಪರಿಷತ್ತಿನ ಪ್ರಮುಖ ಧ್ಯೇಯ ಕನ್ನಡ ಭಾಷೆ, ಶರಣರ ವಚನ ಸಾಹಿತ್ಯ ಮತ್ತು ಬಸವ ತತ್ವಗಳನ್ನು ಜನಸಾಮಾನ್ಯರಲ್ಲಿ ಹರಡುವುದಾಗಿತ್ತು.ಪರಿಷತ್ತಿನ ಆಶ್ರಯದಲ್ಲಿ ಒಂದು ವಾಚನಾಲಯ ಸ್ಥಾಪಿಸಲಾಯಿತು. ಅಲ್ಲಿ ಬಸವ ಸಾಹಿತ್ಯ, ವಚನ ಸಂಕಲನಗಳು ಹಾಗೂ ಕನ್ನಡದ ಅಮೂಲ್ಯ ಕೃತಿಗಳನ್ನು ಸಾರ್ವಜನಿಕರ ಓದಿಗಾಗಿ ಲಭ್ಯವಾಗುವಂತೆ ಮಾಡಲಾಯಿತು. ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ವಾಚನಾಲಯ ಪ್ರಮುಖ ಕೇಂದ್ರವಾಯಿತು.ಅಷ್ಟೇ ಅಲ್ಲದೆ, ಜಗಜ್ಯೋತಿ ಬಸವೇಶ್ವರ, ಅಕ್ಕ ಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣ ಮಹಾತ್ಮರ ಜಯಂತಿಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.ಜಯಂತಿ ಕಾರ್ಯಕ್ರಮಗಳಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು.ಈ ರೀತಿಯಾಗಿ ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆಯ ಉಳಿವು, ವಚನ ಸಾಹಿತ್ಯದ ಪ್ರಸಾರ ಮತ್ತು ಶರಣ ಸಂಸ್ಕೃತಿಯ ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. *ಅಪರೂಪವಾದ |ಅಪರಮಿತ ಜ್ಞಾನವಿಪರೀತ ಅಜ್ಞಾನದ ಮಾಯೆ ನುಂಗಿದವುವಚನಗಳು, ರೂಪಿಸಿ ಶರಣರ ಲೋಕವ || *ಎಂದು ಸಾರುತ….. ಜಯದೇವಿ ತಾಯಿಯವರ ನೇತೃತ್ವ ಮತ್ತು ಸಹೋದ್ಯೋಗಿಗಳ ಸೇವಾಭಾವದಿಂದ ಈ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಮತ್ತು ವಚನ ಚಳವಳಿಗೆ ಹೊಸ ಚೈತನ್ಯವನ್ನು ನೀಡಿತು. ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಬಸವತತ್ವದ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸಿತು…..ಇಂಥ ಉದ್ದೇಶಕ್ಕಾಗಿ ಮೈಸೂರು ಮತ್ತು ಬೆಂಗಳೂರಿನಂತಹ ಕನ್ನಡದ ಸಾಂಸ್ಕೃತಿಕ ಕೇಂದ್ರಗಳಿಂದ ಖ್ಯಾತ ಸಾಹಿತಿಗಳು, ಚಿಂತಕರು ಮತ್ತು ಉಪನ್ಯಾಸಕರನ್ನು ಆಹ್ವಾನಿಸಿ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು.ಅಂತಹ ಪ್ರಮುಖ ಅತಿಥಿಗಳಲ್ಲಿ…. ತಾ.ರಾ.ಸು. ಮತ್ತು ಅ.ನಾ.ಕೃ ಮೊದಲಾದ ಪ್ರಸಿದ್ಧ ಸಾಹಿತಿಗಳೂ ಭಾಗವಹಿಸಿ, ಕನ್ನಡ ಸಾಹಿತ್ಯ, ಶರಣರ ವಚನಗಳು ಮತ್ತು ಬಸವ ತತ್ವಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಈ ಸಂಘಟನೆಯ ಕಾರ್ಯಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಜನಪರ ಚಳವಳಿಯಾಗಿದ್ದವು. ಕಾರ್ಯಕರ್ತರು ಹಳ್ಳಿಹಳ್ಳಿಗೆ ತೆರಳಿ ಬಸವತತ್ವದ ಸಮಾನತೆ, ಕಾಯಕ, ದಾಸೋಹ, ಜಾತ್ಯಾತೀತತೆ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದರು. ಸಮಾಜದಲ್ಲಿ ಅಸಮಾನತೆ, ಅಜ್ಞಾನ ಮತ್ತು ಸಾಮಾಜಿಕ ಬೇಧಭಾವವನ್ನು ನಿವಾರಿಸಿ, ಸಮಾನತೆಯ ಸಮಾಜ ನಿರ್ಮಾಣವೇ ಅವರ ಪ್ರಮುಖ ಧ್ಯೇಯವಾಗಿತ್ತು. *ನೆಲದ ಸತ್ವದ ಮೇಲೆ |ಹೊಲ ಬೆಳೆಯುವಂತೆಮೂಲ ತನ್ನ ಅರುವಿನ ಬೀಜ- ಬೆಳೆದಿತ್ತುಸಕಲ ಶರಣ ತತ್ವ ಪ್ರಪಂಚ ವಿಸ್ತಾರ||* ತನ್ನರಿವನ್ನೇ ಗುರುವನ್ನಾಗಿಸಿ ದೇಹವನ್ನೇ ದೇಗುಲುಮಾಡಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಕರೆ ಕೊಡುವ ವಚನಗಳನ್ನು ಪ್ರಚಾರಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ರೀತಿಯ ಕಾರ್ಯಕ್ರಮಗಳಿಗೆ ನಿಜಾಂ ಸರ್ಕಾರದಿಂದ ಹಲವು ರೀತಿಯ ಪ್ರತಿರೋಧ ಮತ್ತು ನಿರ್ಬಂಧಗಳು ಎದುರಾದರೂ, ಪರಿಷತ್ತಿನ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ.ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಚನ ಸಪ್ತಾಹವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದರು. ಈ ಸಪ್ತಾಹದಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರಣರ ಆದರ್ಶಗಳ ಕುರಿತು ವಿಶೇಷ ಪ್ರವಚನಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆದು, ಕನ್ನಡ ಭಾಷೆ, ಶರಣ ಸಂಸ್ಕೃತಿ ಮತ್ತು ಶರಣ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೂ ಯಶಸ್ವಿಯಾಗಿ ತಲುಪಿಸಲಾಯಿತು. ವಚನ ಸಪ್ತಾಹ ಮತ್ತು ಕನ್ನಡ ಜಾಗೃತಿಯ ಕಾರ್ಯಕ್ರಮಗಳು ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ವಚನ ಸಪ್ತಾಹವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಯ ಮಹೋತ್ಸವವಾಗಿತ್ತು. *ನಿಮ್ಮಅಡಿಗಳು ದೊರೆತು|ಹಮ್ಮು ಜರಿದು ಹೋಯ್ತು ನೆಮ್ಮದಿಯಿತು ಎನ ಮನಕ್ಕೆ -ಬಸವಣ್ಣ ಒಮ್ಮನವಾಯಿತು ನಿಮ್ಮಲ್ಲಿ||*ಎಂದು ಬಸವಣ್ಣನನು ಹಾಡಿ ಹೊಗಳುತ್ತಾ ತತ್ವಗಳನ್ನು ಪ್ರಚಾರ ಮಾಡಲಾರಂಭಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಖ್ಯಾತ ವಿದ್ವಾಂಸರು, ಧಾರ್ಮಿಕ ಮುಖಂಡರು, ಸಾಹಿತಿಗಳು ಹಾಗೂ ಸಮಾಜ ಸುಧಾರಕರು ಆಗಮಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.ಈ ಕಾರ್ಯಕ್ರಮಗಳಲ್ಲಿ ತರಳಬಾಳು ಸ್ವಾಮಿಗಳು, ಎಸ್ ನಿಜಲಿಂಗಪ್ಪ, ಎಂ.ಆರ್ ಶ್ರೀನಿವಾಸ್ ಮೂರ್ತಿ, ಸ್ವಾಮಿ ರಮಾನಂದ ತೀರ್ಥರು, ಮಾನ್ವಿ ನರಸಿಂಹರಾಯರು, ಸಿದ್ದಯ್ಯ ಪುರಾಣಕ, ಬಾಮಣಗಾವ್ಕರ್ ಅಮರಾವತಿ ,ಬಸಪ್ಪ ಮಂಡಗಿ ವಕೀಲರು ,ಚನ್ನಬಸವ ಪಟ್ಟದೇವರು, ವಿಶ್ವನಾಥ್ ರೆಡ್ಡಿ ಮುದನ್ನಾಳ, ವಿದ್ಯಾಧರ್ ಗುರೂಜಿ, ಬಿ. ಮಹದೇವಪ್ಪ, ಭೀಮಣ್ಣ ಖಂಡ್ರೆ ಮೊದಲಾದ ದಿಗ್ಗಜರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು ಹಾಗೂ ಸಮಾಜದ ಗಣ್ಯರು ಭಾಗವಹಿಸುತಿದ್ದರು. ಶರಣರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿತ್ತು. ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಾಮ ವಾಚನಾಲಯಗಳ ಸ್ಥಾಪನೆ, ಕನ್ನಡ ಶಾಲೆಗಳ ಆರಂಭ ಹಾಗೂ ಕನ್ನಡ ಶಿಕ್ಷಣದ ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿತ್ತು.ಈ ಎಲ್ಲಾ ಚಟುವಟಿಕೆಗಳ ಮೂಲ ಉದ್ದೇಶ ಕನ್ನಡ ಭಾಷೆಯನ್ನು ಬೆಳೆಸುವುದು, ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆಯುವುದು ಮತ್ತು ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹದ ತತ್ವಗಳ ಆಧಾರದ ಮೇಲೆ ಜಾತಿ–ಧರ್ಮ ಭೇದವಿಲ್ಲದ, ಪ್ರಗತಿಪರ ಸಮಾಜವನ್ನು ನಿರ್ಮಿಸುವುದಾಗಿತ್ತು.ನಿಜಾಂ ಆಡಳಿತದ ಪರಿಸ್ಥಿತಿಯಲ್ಲಿಯೂ ಈ ಕಾರ್ಯಗಳು ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆಯನ್ನು ನೀಡಿದವು. ಸೋಲಾಪುರ ಗಡಿಭಾಗ, ಕನ್ನಡಿಗರ ಆಶಯ ಮತ್ತು ಕರ್ನಾಟಕ ಸೇರ್ಪಡೆಗೆ ನಡೆದ ಚಳವಳಿ ೧೯೪೯ರ ಸಮಯ….ಸೋಲಾಪುರ ಪ್ರದೇಶವು ಭಾಷೆ, ಸಂಸ್ಕೃತಿ ಮತ್ತು ಆಡಳಿತದ ದೃಷ್ಟಿಯಿಂದ ಪ್ರಮುಖ ಚರ್ಚೆಯ ಕೇಂದ್ರವಾಗಿತ್ತು.ಆ ಕಾಲದಲ್ಲಿ ಸೋಲಾಪುರ ತಾಲೂಕನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ದಕ್ಷಿಣ ಸೋಲಾಪುರ ಮತ್ತು ಉತ್ತರ ಸೋಲಾಪುರ ಎಂದು ವಿಭಜಿಸಲಾಯಿತು. ವಿಭಜನೆಯು ಆಡಳಿತಾತ್ಮಕವಾಗಿದ್ದರೂ, ಆ ಭಾಗದಲ್ಲಿ ವಾಸಿಸುತ್ತಿದ್ದ ವಿವಿಧ ಭಾಷಿಕ ಸಮುದಾಯಗಳ ಆಶಯಗಳಿಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿತು.ಅದೇ ಅವಧಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸಂಘಟನೆಯನ್ನು ಯುವಜನರ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದವು.೧೯೪೯ರಲಿ ಜವಹರಲಾಲ್ ನೆಹರು ಸೋಲಾಪುರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಜನರ ಪಾತ್ರ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅವರು ಕರೆ ನೀಡಿದರು. ಈ ಪ್ರದೇಶದ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಸೂಕ್ತ ಆಡಳಿತ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕನ್ನಡ ಭಾಷೆಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಮರ್ಪಕ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆಯನ್ನು ಅವರು ರಾಷ್ಟ್ರೀಯ ನಾಯಕರ ಮುಂದಿಟ್ಟರು. ಸೋಲಾಪುರ ಮತ್ತು ಅದರ ಸುತ್ತಮುತ್ತಲಿನ ಗಡಿಭಾಗಗಳಲ್ಲಿ ಕನ್ನಡಿಗರ ಜೊತೆಗೆ ಮರಾಠಿ ಭಾಷಿಕರೂ ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಕನ್ನಡ ಮಾತನಾಡುವ ಜನ ೪೮% ಇದ್ದರೆ ೩೪% ಅಷ್ಟು ಜನ ಮರಾಠಿ ಮಾತನಾಡುವರು ಹಾಗೂವಿಜಯಪುರ ಅಂದಿನ ಬಿಜಾಪುರ ಮತ್ತು ಅಕ್ಕಲಕೋಟಿನ ಜನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನಂಟು ಹೊಂದಿದ್ದ ಅನೇಕ ಗಡಿಭಾಗಗಳ ಜನರು ತಮ್ಮ ಪ್ರದೇಶವು ಕರ್ನಾಟಕದೊಂದಿಗೆ ಸೇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಭಾಷಾವಾರು ರಾಜ್ಯಗಳ ಪರಿಕಲ್ಪನೆ ಬಲವಾಗುತ್ತಿದ್ದ ಸಂದರ್ಭದಲ್ಲಿ, ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಬೇಕು ಎಂಬ ಅಭಿಪ್ರಾಯವೂ ಬೆಳೆಯತೊಡಗಿತು.ಇಂಥ ಚಳವಳಿಗಳು ನಂತರ ಭಾಷಾವಾರು ರಾಜ್ಯಗಳ ಪುನರ್ರಚನೆ ಕುರಿತ ರಾಷ್ಟ್ರೀಯ ಚರ್ಚೆಗೆ ಪೂರಕವಾದವು. ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಮತ್ತು ಆಡಳಿತಾತ್ಮಕ ನ್ಯಾಯಕ್ಕಾಗಿ ನಡೆದ ಈ ಪ್ರಯತ್ನಗಳು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹಿನ್ನೆಲೆಯಾಗಿ ಪರಿಣಮಿಸಿದವು. (ಮುಂದುವರೆಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-26 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕನ್ನಡಾಬಿಮಾನ *ಗಡಿ ಭಾಗವೆಂದರೆ |ಕಡಿಮೆ ಇಲ್ಲ ಕನ್ನಡಕೆ ಉಡಿಯ ತುಂಬುವೆ ಕನ್ನಡ -ತಾಯಿಗೆಒಡವೆಯ ಇಡಿಸುವೆ ಪದಗಳ||*ಅಂತ ಹಾಡುತ ಜಯದೇವಿ ತಾಯಿಯವರು ಗಡಿಭಾಗದಲ್ಲಿರುವ ಕನ್ನಡಿಗರ ಕನ್ನಡಾಭಿಮಾನವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ. ಗಡಿಭಾಗದಲ್ಲಿ ವಾಸಿಸುವುದರಿಂದ ಕನ್ನಡದ ಮೇಲಿನ ಪ್ರೀತಿ, ಗೌರವ ಅಥವಾ ನಿಷ್ಠೆ ಕಡಿಮೆಯಾಗುವುದಿಲ್ಲ ಸ್ಪಷ್ಟಪಡಿಸುತ್ತ* ಉಡಿಯ ತುಂಬುವೆ ಕನ್ನಡ ಪದಗಳ …ಎಂಬುದು ಸಾಂಕೇತಿಕವಾಗಿದೆ. ಮುತ್ತೈದೆಯಾದ ಕನ್ನಡಾಂಬೆಯ ಉಡಿಯನ್ನು ಕನ್ನಡದ ಮಧುರ ಪದಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯಿಂದ ತುಂಬಿಸಿ ಅವಳನ್ನು ಗೌರವಿಸುವ ಸಂಕಲ್ಪವನ್ನು ವ್ಯಕ್ತಪಡಿಸುತ್ತ…. *ಒಡವೆ ಇಡಿಸುವೆ ಕನ್ನಡ ಪದಗಳ* ಎಂಬುದು ಕನ್ನಡದ ಸುಂದರ ಪದಗಳೇ ಕನ್ನಡ ತಾಯಿಗೆ ಧರಿಸುವ ಅಮೂಲ್ಯ ಆಭರಣಗಳೆಂಬ ಭಾವವನ್ನು ತಿಳಿಸುತ್ತದೆ. ಬಂಗಾರ, ಬೆಳ್ಳಿ ಅಥವಾ ರತ್ನಗಳಿಗಿಂತ ಶ್ರೇಷ್ಠ ಕನ್ನಡದ ಪದಗಳು…. ಸಾಹಿತ್ಯ ಮತ್ತು ಸಂಸ್ಕೃತಿಯೇ ಕನ್ನಡಾಂಬೆಯ ನಿಜವಾದ ಅಲಂಕಾರವೆಂದು ಸಾರುವ ತ್ರಿಪದಿ ಗಡಿಭಾಗದ ಕನ್ನಡಿಗರ ಅಚಲ ಕನ್ನಡಾಭಿಮಾನವನ್ನು, ಕನ್ನಡ ತಾಯಿಯನ್ನು ಪದಗಳ ಮೂಲಕ ಆರಾಧಿಸುವ ಮನೋಭಾವವನ್ನು ಹಾಗೂ ಕನ್ನಡ ಭಾಷೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮತ್ತಷ್ಟು ಶ್ರೀಮಂತಗೊಳಿಸುವ ಸಂಕಲ್ಪವನ್ನು ಸುಂದರವಾಗಿ ಅಭಿವ್ಯಕ್ತಿಸುತ್ತ… ಮನದಾಳಕ್ಕೆ ಇಳಿಯುವಂತಹ ತ್ರಿಪದಿಗಳು ರಚಿಸಿದರು…. ಗಡಿನಾಡಿನಲ್ಲಿ ಬದುಕಿದ ತಾಯಿಯವರು…ನಿಸರ್ಗದ ಮಡಿಲಿನಲ್ಲಿ ಹುಟ್ಟಿದ ನದಿಯೊಂದು ತನ್ನ ತಾಯಿನಾಡನ್ನು ತೊರೆದು ಹರೆವಂತೆ ಕನ್ನಡದ ಅಸ್ಮಿತೆಯನ್ನು ಎಲ್ಲೆಡೆ ಹರಡಿದವರಲ್ಲಿ ಒಬ್ಬರಾದರು!!! ಜಯದೇವಿ ತಾಯಿಯವರ ಹೃದಯವೂ ಕನ್ನಡದ ನೆಲ, ಕನ್ನಡದ ಜನ ಮತ್ತು ಕನ್ನಡದ ಸಂಸ್ಕೃತಿಯನ್ನು ಎಂದಿಗೂ ಬಿಟ್ಟು ದೂರವಾಗಲಿಲ್ಲ.ಬೆಟ್ಟಗಳಂತೆ ಅಚಲವಾದ ಅವರ ಕನ್ನಡ ಪ್ರೇಮ, ಸಾಗರದಷ್ಟು ವಿಶಾಲವಾಗಿತ್ತು. ಮಳೆಯ ಹನಿಗಳು ಭೂಮಿಗೆ ಜೀವ ತುಂಬುವಂತೆ, ಅವರ ಕನ್ನಡದ ಪ್ರೀತಿ ಸಾವಿರಾರು ಜನರ ಮನಗಳಲ್ಲಿ ಭಾಷೆಯ ಮೇಲಿನ ಗೌರವವನ್ನು ಅರಳಿಸಿತು.ವಸಂತ ಬಂದಾಗ ಮರಗಳು ಹೊಸ ಚಿಗುರು ಬಿಡುವಂತೆ, ತಾಯಿಯವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಹೊಸ ಚೈತನ್ಯ ಮೊಳೆಯುತ್ತಿತ್ತು. ಪರಿಮಳವನ್ನು ಎಲ್ಲೆಡೆ ಹರಡುವ ಹೂವಿನಂತೆ, ಅವರ ಕನ್ನಡದ ಅಭಿಮಾನ ಎಲ್ಲೆಡೆ ಪಸರಿಸಿತು. ಅವರು ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ನೋಡದೆ, ಬದುಕಿನ ಮೌಲ್ಯಗಳನ್ನು ಬೆಳೆಸುವ ಸಂಸ್ಕೃತಿಯ ಭಾಷೆಯಾಗಿ ಕಂಡರು. ಜಯದೇವಿ ತಾಯಿಯವರಿಗೆ ಕನ್ನಡವೇ ಉಸಿರು, ಅವರ ಆತ್ಮ, ಅವರ ಬದುಕಿನ ಧ್ಯೇಯವಾಗಿತ್ತು…. ಕನ್ನಡವನ್ನೇ ಬದುಕಿದರು…!!!ಅವರ ಪ್ರತಿಯೊಂದು ಮಾತಿನಲ್ಲಿ ಕನ್ನಡದ ಲಾಲಿತ್ಯ,ಪ್ರತಿಯೊಂದು ಬರಹದಲ್ಲಿ ಕನ್ನಡದ ಸೌಂದರ್ಯ, ಪ್ರತಿಯೊಂದು ಕಾರ್ಯದಲ್ಲಿ ಕನ್ನಡದ ಪರಿಮಳ ತುಂಬಿಕೊಂಡಿತ್ತು. ಅವರ ದೃಷ್ಟಿಯಲ್ಲಿ ಕನ್ನಡ ಎಂದರೆ ಕರುಣೆ, ಸಂಸ್ಕಾರ, ಶರಣ ತತ್ವಗಳ ಪ್ರತಿಪಾದನೆ, ಜ್ಞಾನ ಮತ್ತು ಆತ್ಮಗೌರವದ ಪ್ರತೀಕ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಓದಬೇಕು, ಕನ್ನಡದಲ್ಲೇ ಯೋಚಿಸಬೇಕು ಎಂಬ ಆಶಯವನ್ನು ಅವರು ತಮ್ಮ ಬದುಕಿನ ಮೂಲಕವೇ ಸಾರಿದರು. ಅವರಿಗೆ ಕನ್ನಡ ತಾಯಿ ಎಂದರೆ ದೇವತೆ. ತಾಯಿಯ ಮಡಿಲು ಮಗುವಿಗೆ ಹೇಗೆ ಸುರಕ್ಷಿತ ಆಶ್ರಯವೋ, ಹಾಗೆಯೇ ಕನ್ನಡ ಭಾಷೆ ಕನ್ನಡಿಗರಿಗೆ ಆತ್ಮೀಯ ನೆಲೆ ಎಂದು ಅವರು ನಂಬಿದ್ದರು. ಆ ಕಾರಣಕ್ಕಾಗಿಯೇ ಕನ್ನಡದ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ಕೂ ಅವರು ತಮ್ಮ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿದರು. ಕನ್ನಡದ ಮೇಲಿನ ಅವರ ಪ್ರೀತಿ ಆಕಾಶದಷ್ಟು ಅಪಾರ, ಭೂಮಿಯಷ್ಟು ಸಹನಶೀಲ, ನದಿಯಷ್ಟು ನಿರಂತರ, ವಟವೃಕ್ಷದಷ್ಟು ಆಶ್ರಯದಾಯಕವಾಗಿತ್ತು. ಕನ್ನಡದ ಗೌರವ ಕುಂದಿದಾಗ ಅವರ ಮನ ನೋಯುತ್ತಿತ್ತು, ಕನ್ನಡದ ಕೀರ್ತಿ ಹೆಚ್ಚಾದಾಗ ಅವರ ಮುಖ ಅರಳಿದ ಹೂವಿನಂತೆ ಸಂತೋಷದಿಂದ ಕಂಗೊಳಿಸುತ್ತಿತ್ತು.ಜಯದೇವಿ ತಾಯಿಯವರ ಕನ್ನಡಾಭಿಮಾನ ಇಂದು ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶ. ಭಾಷೆಯನ್ನು ಪ್ರೀತಿಸುವುದು ಎಂದರೆ ಭಾಷೆಯ.. ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಕನ್ನಡಾಭಿಮಾನ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾರಿ ತೋರಿಸಿದರು. *ಶರಣ ಸಾಹಿತ್ಯವು ….ಕನ್ನಡಾಂಬೆಯ ದಿವ್ಯ ಬೆಳಕು*ಶರಣ ಸಾಹಿತ್ಯವು ಕನ್ನಡ ನಾಡಿನ ಆತ್ಮ, ಕನ್ನಡ ಭಾಷೆಯ ದಿವ್ಯ ಬೆಳಕು, ಕನ್ನಡಾಂಬೆಗೆ ಬೆಳಗುವ ಅಮರ ದೀಪವಾಗಿದೆ. ಇದು ಬದುಕನ್ನು ಬೆಳಗಿಸುವ ಜ್ಞಾನಜ್ಯೋತಿ. ಅಜ್ಞಾನ, ಅಂಧಶ್ರದ್ಧೆ, ಜಾತಿ-ಮತದ ಸಂಕೋಲೆಗಳನ್ನು ಕಳಚಿ ಸಮಾನತೆ, ಪ್ರೀತಿ, ಕರುಣೆ, ಸತ್ಯ ಮತ್ತು ನೈತಿಕತೆಯ ದಾರಿಯನ್ನು ತೋರಿದ ಮಹಾನ್ ಚಳುವಳಿ ನಡೆದದ್ದು ವಚನ ಸಾಹಿತ್ಯದ ಮೂಲಕ ಕನ್ನಡದಲ್ಲಿ ಅಂತ ಹೇಳುತ್ತಿದ್ದರು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಕನ್ನಡವನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದರು. ಅರಮನೆಯ ಭಾಷೆಯಾಗಿದ್ದ ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ ರೂಪಿಸಿದರು. ಅವರ ವಚನಗಳು ಇಂದಿಗೂ ದಾರಿದೀಪಗಳಾಗಿ ಹೊಳೆಯುತ್ತಿವೆ. ಆದ್ದರಿಂದ ಶರಣ ಸಾಹಿತ್ಯವನ್ನು ಕನ್ನಡದ ದಿವ್ಯ ಬೆಳಕು ಎಂದು ಕರೆಯುವುದು ಅತ್ಯಂತ ಸಮಂಜಸ. *ಕತ್ತಲನ್ನು ಓಡಿಸುವ ಸೂರ್ಯನ ಕಿರಣಗಳಂತೆ, ಶರಣ ಸಾಹಿತ್ಯವು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಹರಡುವದೆಂದು ಜಯದೇವಿ ತಾಯಿಯವರು ಅಭಿಮಾನದಿಂದ ನುಡಿಯವರು * ಮಳೆಯು ಭೂಮಿಯನ್ನು ಹಸನಾಗಿಸುವಂತೆ, ಈ ಸಾಹಿತ್ಯವು ಮನಸ್ಸುಗಳನ್ನು ಪ್ರೀತಿ, ಸಹಾನುಭೂತಿ ಮತ್ತು ಮಾನವೀಯತೆಯಿಂದ ಹಸನಾಗಿಸಿದೆಂದು. ಕನ್ನಡಿಗರ ಅಮೂಲ್ಯ ಸಂಪತ್ತಾಗಿ….ಇಡೀ ಮಾನವಕುಲಕ್ಕೆ ಸ್ಫೂರ್ತಿಯಾಗಿರುವ ಶ್ರೇಷ್ಠ ಪರಂಪರೆಯಾಗಿದೆ. ಶರಣ ಸಾಹಿತ್ಯದ ಬೆಳಕು ಎಂದಿಗೂ ಆರದು. ಅದು ಪ್ರತಿಯೊಂದು ಕನ್ನಡಿಗನ ಹೃದಯದಲ್ಲಿ ಸತ್ಯದ ಜ್ಯೋತಿಯಾಗಿ, ಸಮಾನತೆಯ ಸಂದೇಶವಾಗಿ, ಮಾನವೀಯತೆಯ ಮಹಾಪ್ರಕಾಶವಾಗಿ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ. ಕನ್ನಡ ಇರುವವರೆಗೆ, ಕನ್ನಡದ ದಿವ್ಯ ಬೆಳಕಾಗಿ ಶರಣ ಸಾಹಿತ್ಯವು ಅನಂತ ಕಾಲದವರೆಗೆ ಜನಮನಗಳನ್ನು ಪ್ರಕಾಶಮಾನಗೊಳಿಸುತ್ತಲೇ ಇರುತ್ತದೆ. ಎಂದು ರಾಜಾರೋಷವಾಗಿ ಎಲ್ಲ ಭಾಷಣಗಳಲ್ಲಿ ತಾಯಿಯವರು ಸಾರುತ್ತಿದ್ದರು. *ಕನ್ನಡದ ದಿವ್ಯ ಬೆಳಕಾದ ಶರಣ ಸಾಹಿತ್ಯವು ಕನ್ನಡವನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿತು ಅಂತ ಜಯದೇವಿ ತಾಯಿಯವರು ನುಡಿಯುತ್ತಿದ್ದರು…!!! ಹನ್ನೆರಡನೇ ಶತಮಾನದಲ್ಲಿ ಶರಣರ ವಚನ ಕ್ರಾಂತಿಯು ಇಡೀ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿತ್ತು. ಆದರೆ ಕಾಲಕ್ರಮೇಣ, ವಿಶೇಷವಾಗಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಹಲವು ಶತಮಾನಗಳ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಿಂದ ತೆಲುಗು, ಮರಾಠಿ ಹಾಗೂ ಉರ್ದು ಭಾಷೆಗಳ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮವಾಗಿ ಕನ್ನಡ ಭಾಷೆಯ ಬಳಕೆ, ಅದರ ಬಳಕೆ ಮತ್ತು ಶರಣ ಸಾಹಿತ್ಯದ ಅರಿವು ಅನೇಕ ಪ್ರದೇಶಗಳಲ್ಲಿ ಕ್ಷೀಣಿಸತೊಡಗಿತು. ಇಂತಹ ಸಂದರ್ಭದಲ್ಲಿ, ಕನ್ನಡದ ಆತ್ಮಸ್ವರೂಪವಾಗಿರುವ ಶರಣ ಸಾಹಿತ್ಯದ ಜ್ಯೋತಿಯನ್ನು ಮತ್ತೆ ಜನಮನಗಳಲ್ಲಿ ಪ್ರಜ್ವಲಿಸುವ ಮಹತ್ತರ ಸಂಕಲ್ಪವನ್ನು ಜಯದೇವಿ ತಾಯಿಯವರು ಕೈಗೊಂಡರು. ವಚನ ಸಾಹಿತ್ಯವನ್ನು ಮನೆಮನೆಗೆ, ಮನಸ್ಸುಮನಸ್ಸಿಗೆ ತಲುಪಿಸುವ ಮೂಲಕ ಕನ್ನಡದ ಆತ್ಮಗೌರವವನ್ನು ಮರುಜಾಗೃತಗೊಳಿಸಿದರು. ಅವರ ಪ್ರಯತ್ನವು ಸಾಹಿತ್ಯದ ಪ್ರಸಾರ ಮಾಡುತ… ಕನ್ನಡದ ಮೆರುಗನ್ನು ಪುನರುಜ್ಜೀವನಗೊಳಿಸುವ ಶರಣರ ಮೌಲ್ಯಗಳ ಪುನರ್ಸ್ಥಾಪನೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಮಹಾಯಜ್ಞವಾಗಿತ್ತು. ಸತ್ಯಶರಣರ ಪಾದವ ನೆನೆದರೆ |ಚಿಂತೆ ಚಿತೆಯು ಶಮನಾಗುವದು ||ಶಾಂತ ಚಿತ್ತ ನಿಜ ಹಂತವನೇರುತ |ತಸಂತಸದಿ ನಲಿದಾಡುವದು||ಎನ್ನುತ…..ಶರಣರ ವಚನಗಳನ್ನು ಜನಜೀವನದೊಂದಿಗೆ ಬೆಸೆದು, ಕನ್ನಡದ ದಿವ್ಯ ಬೆಳಕನ್ನು ಮತ್ತೆ ಪ್ರಜ್ವಲಿಸಿದ ಸಾಂಸ್ಕೃತಿಕ ಸಾಧಕಿಯಾಗಿ ಜಯದೇವಿ ತಾಯಿಯವರು ಚಿರಸ್ಮರಣೀಯರಾಗಿದ್ದಾರೆ. ಅವರ ಸೇವೆಯಿಂದ ಶರಣ ಸಾಹಿತ್ಯವು ಮತ್ತೊಮ್ಮೆ ಜನಮನಗಳಲ್ಲಿ ಜ್ಞಾನಜ್ಯೋತಿಯಾಗಿ ಹೊಳೆಯಿತು…. ಕನ್ನಡದ ಹೊಳಪು ಹೊಸ ಉತ್ಸಾಹದಿಂದ ನಾಡಿನಾದ್ಯಂತ ಹರಡಿತು. ಜಯದೇವಿ ತಾಯಿಯವರಲ್ಲಿ ಶರಣ ಸಾಹಿತ್ಯದ ಮೇಲಿನ ಅಭಿರುಚಿ ಬಾಲ್ಯದಲ್ಲಿಯೇ ಮೊಳಕೆಯೊಡೆದಿತ್ತು. ವಚನಗಳಲ್ಲಿದ್ದ ಮೌಲ್ಯಗಳು, ಸಮಾನತೆಯ ಸಂದೇಶ ಮತ್ತು ಸರಳವಾದ ಜೀವನದರ್ಶನವು ಅವರ ಮನಸ್ಸನ್ನು ಆಳವಾಗಿ ಸೆಳೆದಿತ್ತು.ವಚನಗಳನ್ನು ಓದಿ ಅರ್ಥೈಸಬೇಕೆಂಬ ಅಪಾರ ಜಿಜ್ಞಾಸೆಯೇ ಅವರಿಗೆ ಕನ್ನಡ ಕಲಿಯುವ ಪ್ರೇರಣೆಯಾಯಿತು.ಅಕ್ಷರಜ್ಞಾನವನ್ನು ಗಳಿಸುವುದಕ್ಕಾಗಿಯೇ, ಶರಣರ ವಚನಗಳ ಅಮೃತ ಸತ್ವವನ್ನು ಆಸ್ವಾದಿಸುವ ಮಹದಾಸೆಯಿಂದ ಅವರು ಕನ್ನಡವನ್ನು ಅಭ್ಯಾಸ ಮಾಡಿದರು. ಕನ್ನಡ ಭಾಷೆಯನ್ನು ಸಂವಹನದ ಮಾಧ್ಯಮವಾಗಿ..ಶರಣರ ಚಿಂತನೆಗಳ ಅಪೂರ್ವ ಲೋಕಕ್ಕೆ ಕರೆದೊಯ್ಯುವ ಪವಿತ್ರ ಸೇತುವೆಯೆಂದು ಭಾವಿಸಿದರು.ವಚನಗಳ ಮೇಲಿನ ಅಪಾರ ಪ್ರೀತಿ, ಅಧ್ಯಯನಶೀಲತೆ ಮತ್ತು ಕನ್ನಡಾಭಿಮಾನವೇ ಮುಂದೆ ಅವರನ್ನು ಶರಣ ಸಾಹಿತ್ಯದ ಪ್ರಚಾರಕಿ, ಕನ್ನಡ ಸಂಸ್ಕೃತಿಯ ಮುಂಚೂಣಿ ಸೇವಕಿ ಹಾಗೂ ವಚನ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಮಹಾನ್ ಸಾಧಕಿಯನ್ನಾಗಿ ರೂಪಿಸಿತು.(ಮುಂದುವರೆಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-25 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ನೇತ್ರ ಚಿಕಿತ್ಸೆ ಶಿಬಿರ ೧೯೫೦ ಮತ್ತು೧೯೫೧ ರ ಸಮಯ…….ಈ ಅವಧಿಯಲ್ಲಿ ಜಯದೇವಿ ತಾಯಿಯವರು ಕೈಗೊಂಡ ನೇತ್ರ ಚಿಕಿತ್ಸಾ ಶಿಬಿರಗಳು ಆ ಕಾಲದ ಸಾಮಾಜಿಕ ಸೇವೆಯ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗಿ ಉಳಿದವು. ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದ ಸಾವಿರಾರು ಬಡಜನರಿಗೆ ಚಿಕಿತ್ಸೆ ದೊರೆಯುವುದು ಅತ್ಯಂತ ಕಷ್ಟಕರವಾಗಿದ್ದ ಸಮಯ ಅಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಪ್ರಸಿದ್ಧ ನೇತ್ರತಜ್ಞರಾದ ಡಾ.ಎಮ.ಸಿ.ಮೋದಿ ಅವರನ್ನು ಆಹ್ವಾನಿಸಿ ಬೃಹತ್ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದರು. ಆ ಕಾಲದಲ್ಲಿ ಕಾಚಬಿಂದು, ಮೇಲ್ವಿಂದು, ಕಣ್ಣಿನ ಸೋಂಕುಗಳು, ಓರೆಕಣ್ಣು ಹಾಗೂ ಇತರ ನೇತ್ರ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕ ಜನರು ಚಿಕಿತ್ಸೆಯ ಕೊರತೆಯಿಂದ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಈ ನೋವನ್ನು ಅರಿತ ಜಯದೇವಿ ತಾಯಿಯವರು *ಜನಸೇವೆಯೇ ದೇವಸೇವೆ* ಎಂಬ ಧ್ಯೇಯದೊಂದಿಗೆ ಈ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದರು. ಒಂದು ವಾರ ಕಾಲ ನಡೆದ ಈ ಬೃಹತ್ ಶಿಬಿರದಲ್ಲಿ ಸುಮಾರು ,೩000 ಜನರಿಗೆ ಕಾಚಬಿಂದು, ಮೇಲ್ವಿಂದು, ಹೂತುಂಬುವಿಕೆ ಹಾಗೂ ಓರೆಕಣ್ಣು ಸರಿಪಡಿಸುವಂತಹ ಚಿಕಿತ್ಸೆಗಳು ನೀಡಲಾಯಿತು. ಅಲ್ಲದೆ ೨,000ಕ್ಕೂ ಹೆಚ್ಚು ಜನರಿಗೆ ನೇತ್ರ ಪರೀಕ್ಷೆ, ಔಷಧೋಪಚಾರ ಮತ್ತು ಸಲಹೆಗಳನ್ನು ಒದಗಿಸಲಾಯಿತು. ಕಣ್ಣಿನ ತೊಂದರೆಗಳಿಂದ ನರಳುತ್ತಿದ್ದ ಜನರಿಗೆ ಈ ಶಿಬಿರ ಹೊಸ ಆಶಾಕಿರಣವಾಗಿ ಪರಿಣಮಿಸಿತು. ತೀವ್ರ ಸಮಸ್ಯೆ ಹೊಂದಿದ್ದ ೪೫ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಷ್ಟೇ ಅಲ್ಲದೆ ೩೭೫ ಜನರಿಗೆ ವಿವಿಧ ರೀತಿಯ ಪ್ರಮುಖ ಶಸ್ತ್ರಚಿಕಿತ್ಸೆಗಳೂ ನೆರವೇರಿಸಲ್ಪಟ್ಟವು. ಆ ಕಾಲದ ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಕಿತ್ಸಾ ಕಾರ್ಯ ನಡೆಯುವುದು ನಿಜಕ್ಕೂ ಅಸಾಧಾರಣ ಸಾಧನೆಯಾಗಿತ್ತು.ಈ ಮಹತ್ಕಾರ್ಯದಲ್ಲಿ ಶ್ರೀ ಎಂ.ಪಿ. ಪಾಟೀಲರು ಹಾಗೂ ಶ್ರೀ ಪಠಣೆ ಅವರು ಜಯದೇವಿ ತಾಯಿಯವರೊಂದಿಗೆ ಕೈಜೋಡಿಸಿದರು. ಶಿಬಿರಕ್ಕೆ ಆಗಮಿಸಿದ ರೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಒಟ್ಟು ೫೭೮೦ ಜನರಿಗೆ ಹಾಸಿಗೆ, ಹೊದಿಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು. ದೂರದ ಊರುಗಳಿಂದ ಬಂದ ಜನರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.ಅದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಯಾವುದೇ ಕೊರತೆ ಉಂಟಾಗದಂತೆ ಜಯದೇವಿ ತಾಯಿಯವರು ಸ್ವತಃ ಮೇಲ್ವಿಚಾರಣೆ ವಹಿಸಿದ್ದರು. ರೋಗಿಗಳು, ಅವರ ಸಂಬಂಧಿಕರು, ವೈದ್ಯರು ಹಾಗೂ ಸ್ವಯಂಸೇವಕರಿಗೆ ಅಗತ್ಯವಾದ ಆಹಾರ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಯಿತು. ಸೇವಾಭಾವ, ಸಂಘಟನಾ ಸಾಮರ್ಥ್ಯ ಮತ್ತು ಮಾನವೀಯ ಕಾಳಜಿಯ ಅಪೂರ್ವ ಉದಾಹರಣೆಯಾಗಿ ಈ ಶಿಬಿರಗಳು ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿದವು. ನೇತ್ರ ಚಿಕಿತ್ಸಾ ಶಿಬಿರಗಳ ಮೂಲಕ ಸಾವಿರಾರು ಜನರು ಮತ್ತೆ ಬೆಳಕನ್ನು ಕಂಡರು. ಅನೇಕರ ಜೀವನದಲ್ಲಿ ಹೊಸ ಆಶಾಭರವೂ ಮೂಡಿತು. ಜಯದೇವಿ ತಾಯಿಯವರ ಜನಪರ ಕಾಳಜಿ, ದಯೆ ಮತ್ತು ಸೇವಾ ಮನೋಭಾವದ ಜೀವಂತ ಸಾಕ್ಷಿಯಾಗಿ ಈ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ. (ಸಹಕಾರ ಚಳುವಳಿ)೧೯೫೧ರ ಸಮಯದಲಿ… ಇನ್ನೊಂದಡೆ ಭಾರತವು ಸ್ವಾತಂತ್ರ್ಯವಾಗಿ ರಾಜಕೀಯವಾಗಿ ಸ್ವತಂತ್ರವಾಗಿದ್ದರೂ, ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಭಾಷೆ, ಧರ್ಮ, ಜಾತಿ, ವೃತ್ತಿ ಹಾಗೂ ಪ್ರಾಂತಗಳ ಆಧಾರದ ಮೇಲೆ ಜನರು ವಿಭಜಿತರಾಗಿದ್ದರು. ಒಂದೇ ದೇಶದ ಪ್ರಜೆಗಳಾಗಿದ್ದರೂ ಪರಸ್ಪರ ಭಿನ್ನಾಭಿಪ್ರಾಯಗಳು, ಪ್ರಾಂತೀಯತೆ ಮತ್ತು ಮತೀಯ ಭಾವನೆಗಳು ಸಮಾಜದಲ್ಲಿ ಬೇರೂರಿದ್ದವು. ಇಂತಹ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಾಮರಸ್ಯ ಅತ್ಯಗತ್ಯ ಎಂಬುದನ್ನು ಜಯದೇವಿ ತಾಯಿಯವರು ಮನಗಂಡರು.ಈ ಹಿನ್ನೆಲೆಯಲ್ಲಿ ಅವರು *ಸಹಕಾರ ಚಳುವಳಿ* ಯನ್ನು ಜನಜಾಗೃತಿಯ ಸಾಧನವಾಗಿ ಬಳಸಿದರು. “ನಾವು ಮೊದಲು ಭಾರತೀಯರು, ನಂತರ ಭಾಷಿಕರು, ಮತೀಯರು ಅಥವಾ ಪ್ರಾಂತೀಯರು” ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿದರು. ವಿವಿಧ ಸಮುದಾಯಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆತಂದು ಸಂವಾದಗಳನ್ನು ನಡೆಸಿದರು. *ಸಹಕಾರವಿರೆ ಮನೆಯು | ಸಹಕಾರವಿದೆ ಮಠವುಸಹಕಾರವಿದೆ ಬದುಕು ಬಾಳುವೆ – ತಿಳಿಯಣ್ಣ,ಸಹಕಾರದಿಂದಲೇ ಸರ್ಕಾರವು.||* ಈ ಅರ್ಥಪೂರ್ಣ ವಚನವನ್ನು ಜಯದೇವಿ ತಾಯಿಯವರು ತಮ್ಮ ಜೀವನದ ಆದರ್ಶವನ್ನಾಗಿಸಿಕೊಂಡಿದ್ದರು. ಮನುಷ್ಯನ ಬದುಕಿನಲ್ಲಿ ಸಹಕಾರಕ್ಕೆ ಪರ್ಯಾಯವೇ ಇಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಒಂದು ಕುಟುಂಬ ಸುಖವಾಗಿ ನೆಮ್ಮದಿಯಿಂದ ಇರಬೇಕಾದರೆ ಪರಸ್ಪರ ಸಹಕಾರ ಅಗತ್ಯ. ಒಂದು ಮಠ, ಸಂಘ ಅಥವಾ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ನಡುವೆ ಅನ್ಯೋನ್ಯತೆ ಮತ್ತು ಒಗ್ಗಟ್ಟು ಇರಬೇಕು.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಜನರ ಸಹಕಾರ, ಪರಸ್ಪರ ವಿಶ್ವಾಸ ಮತ್ತು ಒಮ್ಮತದ ಮೇಲೆ ನಿಂತಿರುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ಪ್ರೇರಿತನಾಗಿ, ಪ್ರಾಮಾಣಿಕನಾಗಿ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡುತ್ತಿದ್ದರು. ವ್ಯಕ್ತಿಯ ಉದಾತ್ತ ಗುಣಗಳೇ ಸಂಘಟನೆಗಳ ಶಕ್ತಿಯಾಗುತ್ತವೆ ಎಂದು ಅವರು ನಂಬಿದ್ದರು. ಅಹಂಕಾರ, ಸ್ವಾರ್ಥ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಕೈಜೋಡಿಸಿದಾಗ ಮಾತ್ರ ಯಾವುದೇ ಸಂಘ ಅಥವಾ ಸಂಸ್ಥೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವೆಂದು ತಿಳಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಅದು ಹೃದಯಗಳನ್ನು ಜೋಡಿಸುವ ಮಾನವೀಯ ಮೌಲ್ಯ. ಒಬ್ಬರ ದುಃಖದಲ್ಲಿ ಮತ್ತೊಬ್ಬರು ಭಾಗಿಯಾಗುವುದು, ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಬೆನ್ನೆಲುಬಾಗುವುದು, ಸಮಾಜದ ಹಿತಕ್ಕಾಗಿ ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು…. ಇವೆಲ್ಲವೂ ಸಹಕಾರದ ನಿಜವಾದ ರೂಪಗಳೆಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದಲೇ ಅವರು ಸಹಕಾರ ಚಳವಳಿಯ ಬೆಳವಣಿಗೆಯನ್ನು ಕಂಡು ಹರ್ಷಿಸುತ್ತಾ, *”ಒಂದಕ್ಕೆ ಹತ್ತಾಗಿ, ಹತ್ತಕ್ಕೆ ನೂರಾಗಿ,ನೂರಕ್ಕೆ ಸಾವಿರಾರು ಸಹಕಾರದ ಬಳ್ಳಿ ಹಬ್ಬಲಿ!* ಎಂದು ಹೃದಯಪೂರ್ವಕವಾಗಿ ಹಾರೈಸುತ್ತಿದ್ದರು. ಸಹಕಾರದ ಬೀಜವು ಪ್ರತಿಯೊಂದು ಮನಸ್ಸಿನಲ್ಲಿ ಮೊಳಕೆಯೊಡೆದು, ಅದರ ಬಳ್ಳಿ ಊರುಗಳಿಂದ ನಗರಗಳಿಗೆ, ಕುಟುಂಬಗಳಿಂದ ಸಮಾಜಕ್ಕೆ, ಸಮಾಜದಿಂದ ರಾಷ್ಟ್ರದವರೆಗೆ ವ್ಯಾಪಿಸಲಿ ಎಂಬುದು ಅವರ ಕನಸಾಗಿತ್ತು. ಒಗ್ಗಟ್ಟು, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದಲೇ ಸಮೃದ್ಧ ಸಮಾಜ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಸಹಕಾರ ಸಂಘಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕೆಂದು ಒತ್ತಿಹೇಳಿದರು.ಆ ಸಮಯದಲ್ಲಿ ದೇಶದ ಗಡಿಭಾಗಗಳ ಸಮಸ್ಯೆಗಳು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿದ್ದವು. ಆದ್ದರಿಂದ ತಾಯಿಯವರು ಜನರಿಗೆ, “ಮೊದಲು ದೇಶದ ಗಡಿಗಳನ್ನು ಭದ್ರಗೊಳಿಸಿ, ರಾಷ್ಟ್ರೀಯ ಏಕತೆಯನ್ನು ಬಲಪಡಿಸೋಣ. ನಂತರ ಭಾಷಿಕ ಪ್ರಾಂತಗಳ ಬೇಡಿಕೆಗಳನ್ನು ಶಾಂತಿಯುತವಾಗಿ ಚರ್ಚಿಸೋಣ” ಎಂದು ಕರೆ ನೀಡಿದರು. ಭಾಷೆಯ ಹೆಸರಿನಲ್ಲಿ ಸಂಘರ್ಷ ಮಾಡುವುದಕ್ಕಿಂತ ದೇಶದ ಹಿತಾಸಕ್ತಿಯನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದು ತಿಳಿಸಿದರು.ಅವರು ನಡೆಸಿದ ಸಭೆಗಳಲ್ಲಿ ಕನ್ನಡಿಗರು, ಮರಾಠಿಗರು, ತೆಲುಗಿಗರು, ಉರ್ದು ಭಾಷಿಕರು ಸೇರಿದಂತೆ ವಿವಿಧ ಸಮುದಾಯದ ಜನರು ಭಾಗವಹಿಸುತ್ತಿದ್ದರು. ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೋಧಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿದರು. ಸಹಕಾರ ಸಂಘಗಳ ಮೂಲಕ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರನ್ನು ಒಗ್ಗೂಡಿಸಿ, ಸಮುದಾಯದ ಸಮಸ್ಯೆಗಳನ್ನು ಸಮೂಹವಾಗಿ ಪರಿಹರಿಸುವ ಮಾರ್ಗವನ್ನು ತೋರಿಸಿದರು. ಜಯದೇವಿ ತಾಯಿಯವರ ಈ ಪ್ರಯತ್ನಗಳು ರಾಷ್ಟ್ರ ನಿರ್ಮಾಣದ ಕಾರ್ಯವಾಗಿತ್ತು. ವಿಭಜನೆಯತ್ತ ಸಾಗುತ್ತಿದ್ದ ಸಮಾಜವನ್ನು ಒಗ್ಗಟ್ಟಿನ ದಾರಿಯಲ್ಲಿ ನಡೆಸುವ ಅವರ ಸಂಕಲ್ಪವು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಭಾಷೆ, ಧರ್ಮ ಮತ್ತು ಜಾತಿಯ ಭೇದಗಳನ್ನು ಮೀರಿ ಮಾನವೀಯತೆ ಹಾಗೂ ರಾಷ್ಟ್ರೀಯತೆಯ ಭಾವನೆಗಳನ್ನು ಬಲಪಡಿಸಿದ ಅವರ ಸೇವೆ ಇಂದಿಗೂ ಆದರ್ಶಪ್ರಾಯವಾಗಿದೆ. “ಹಾಗೆಯೇ ಅವರಿಗೆ ತಾಯಿ ಭಾಷೆಯ ಮೇಲಿನ ಪ್ರೇಮವೂ ಅಪಾರವಾಗಿತ್ತು. ವಿಶೇಷವಾಗಿ ಕನ್ನಡದ ಮೇಲಿನ ಅವರ ಅಭಿಮಾನ ಮತ್ತು ತಾಯ್ನುನುಡಿ ಮೇಲಿನ ಗೌರವ ಅಚಲವಾಗಿತ್ತು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೆಂದು ಅವರು ನಂಬಿದ್ದರು. ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ, ಕನ್ನಡದ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕನ್ನಡವೆಂದರೆ ಅವರಿಗೆ ಜೀವದಷ್ಟೇ ಪ್ರೀತಿ. ಕನ್ನಡದ ಸೊಗಡು, ಸಂಸ್ಕೃತಿ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿ ಅವರ ಹೃದಯದಲ್ಲಿ ಸದಾ ಜಾಗೃತವಾಗಿತ್ತು. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ ಎಂಬ ದೃಢ ನಂಬಿಕೆಯೊಂದಿಗೆ ಅವರು ಭಾಷಾ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. *ಜಯದೇವಿ ತಾಯಿಯವರಿಗೆ ಕನ್ನಡ ಅವರ ಉಸಿರಾಗಿದ್ದರೆ, ಇತರ ಭಾಷೆಗಳು ಅವರ ಹೃದಯದ ಆತ್ಮೀಯ ಅತಿಥಿಗಳಾಗಿದ್ದವು.* ಕನ್ನಡವನ್ನು ಅವರು ಎಷ್ಟು ಪ್ರೀತಿಸುತ್ತಿದ್ದರೋ, ಅಷ್ಟೇ ಗೌರವ ಮತ್ತು ಆದರವನ್ನು ಮರಾಠಿ ಹಾಗೂ ಹಿಂದಿ ಭಾಷೆಗಳಿಗೂ ನೀಡುತ್ತಿದ್ದರು. ಆ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿ, ಅವುಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಆಸ್ವಾದಿಸುತ್ತಿದ್ದರು. ಆದರೆ ತಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಇತರ ಭಾಷೆಗಳನ್ನು ತಿರಸ್ಕರಿಸುವುದಲ್ಲ ಎಂಬುದನ್ನು ಅವರು ಸದಾ ಹೇಳುತ್ತಿದ್ದರು. ‘ಪ್ರತಿಯೊಬ್ಬರಿಗೂ ಅವರ ತಾಯಿಭಾಷೆ ತಾಯಿಯಂತೆಯೇ. ಕನ್ನಡಿಗನಿಗೆ ಕನ್ನಡ ಹೇಗೆ ಅಮೂಲ್ಯವೋ, ಮರಾಠಿಗನಿಗೆ ಮರಾಠಿ, ಹಿಂದಿ ಭಾಷಿಕನಿಗೆ ಹಿಂದಿಯೂ ಅಷ್ಟೇ ಅಮೂಲ್ಯ. ತಮ್ಮ ತಾಯಿಭಾಷೆಯನ್ನು ಗೌರವಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಅವರು ಪ್ರೀತಿಯಿಂದ ತಿಳಿಸುತ್ತಿದ್ದರು. *ಭಾಷೆಗಳು ಮನುಷ್ಯರನ್ನು ಬೇರ್ಪಡಿಸಲು ಅಲ್ಲ, ಹೃದಯಗಳನ್ನು ಜೋಡಿಸಲು* ಎಂಬುದು ಅವರ ನಂಬಿಕೆಯಾಗಿತ್ತು. ನುಡಿ ಭಾಷೆಯ ಮೇಲೆ ಹೆಮ್ಮೆ ಇಟ್ಟುಕೊಂಡು, ಇತರರ ತಾಯ್ನುಡಿಯನ್ನು ಸಹ ಗೌರವಿಸುವ ವಿಶಾಲ ಮನೋಭಾವವನ್ನು ಅವರು ಜೀವನದುದ್ದಕ್ಕೂ ಪಾಲಿಸಿದರು. ಭಾಷೆಗಳ ನಡುವೆ ಗೋಡೆಗಳನ್ನು ಕಟ್ಟದೆ, ಪ್ರೀತಿ ಮತ್ತು ಪರಸ್ಪರ ಗೌರವದ ಸೇತುವೆಗಳನ್ನು ನಿರ್ಮಿಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತು.( ಮುಂದುವರೆಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ24 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನ ಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಮಹಾನ್ ಚೇತನ *ಜಯದೇವಿ ತಾಯಿಯವರ ಸಮಾಜಮುಖಿ, ಸಾಹಿತ್ಯಿಕ ಹಾಗೂ ಭಕ್ತಿಮಯ ಬದುಕು* ಜಯದೇವಿ ತಾಯಿಯವರ ವ್ಯಕ್ತಿತ್ವವು ಕೇವಲ ಕುಟುಂಬದ ಚೌಕಟ್ಟಿನೊಳಗೆ ಸೀಮಿತವಾಗಿರಲಿಲ್ಲ. ಸಂಸಾರದ ಹೊಣೆ ಹೊತ್ತು… ಸಿದ್ದರಾಮೇಶ್ವರರ ಶ್ರೇಷ್ಠ ಭಕ್ತಿಯಾಗಿ, ತ್ರಿಭಾಷಾ ಪಾಂಡಿತ್ಯವನ್ನು ಪಡೆದು ,ಕನ್ನಡ ಸರಸ್ವತ ಲೋಕದ ಕಣ್ಣಾಗಿ, ಕನ್ನಡಿಗರ ತಾಯಿಯಾಗಿ , ಶ್ರೇಷ್ಠ ಶಿವಶರಣಿಯಾಗಿ ಬದುಕಿ… ಜನಮನಗಳಲ್ಲಿ ಅಳಿಯದ ಛಾಪು ಮೂಡಿಸಿದ ಮುಂದಿನ ಬದುಕನ್ನು ನೋಡೋಣ ಬನ್ನಿ …… *ಸವಿಧಾನ ಜೀವನ| ನೋವು ನಾವುಗೆಲಿದು ಪಾವನ ಬದುಕಿ -ನಂದನವನಲಿದು ಬೇವು ಬೆಲ್ಲಾಗಿ ಸವಿದೇನ*|| ಎನ್ನುತ ಸಮಾಜದ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಜಯದೇವಿ ತಾಯಿಯವರು ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಡವರು, ನಿರ್ಗತಿಕರು, ಮಹಿಳೆಯರು ಹಾಗೂ ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಶಿಕ್ಷಣ ಮತ್ತು ಸಂಸ್ಕಾರಗಳು ಬೆಳೆಯಬೇಕು ಎಂಬ ಆಶಯದಿಂದ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ಜೀವನದ ಅನುಭವಗಳು, ಭಕ್ತಿ, ಸಾಮಾಜಿಕ ಚಿಂತನೆಗಳು ಮತ್ತು ಸ್ತ್ರೀ ಸಂವೇದನೆಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸಿದರು. ಅವರ ಬರಹಗಳು ಕೇವಲ ಓದಿಗಾಗಿ ಅಲ್ಲ, ಬದುಕಿಗೆ ದಾರಿದೀಪವಾಗುವಂತಿದ್ದವು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿಯು ಅನೇಕ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾಯಿತು. *ಬರದೇನೆನ್ನುವ ಭಾವ| ಬರಿತಾಯ್ತೆನಗವ್ವ ಕರೆದೇನೆನ್ನುವ ಭಕುತಿ ಬಯಲಾಯ್ತ- ತಾಯವ್ವಕೊರಗೇನೆಂಬುವ ಮನ ಮಾಯಾಯಿತು||* ಎನ್ನುತ ಶ್ರೀ ಸಿದ್ದರಾಮೇಶ್ವರಲಿ ಅಪಾರ ಭಕ್ತಿಯ ಲೀನರಾಗಿದ್ದರು. ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ, ಸಮಾಜ ಸೇವೆಯೇ ನಿಜವಾದ ದೇವರ ಸೇವೆ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು .*ಕೃಪೆ ಮಾಡಿ ಎನಗೆ | ಶ್ರೀಪಾದವ ತೋರಿದನುಉಪಮೀಸ ಬಾರದ ಸಂತಸ -ಗೊಳಿಸಿದಆ ಪರಬ್ರಹ್ಮನಿಗೆ ಶರಣೆಂಬೆ||* ಎನ್ನುವಂತೆ ಸಮಾಜ ಸೇವೆಯೇ ದೇವರ ಸೇವೆಯಂತೆ ಸ್ವೀಕರಿಸಿದರು.ಸಿದ್ದರಾಮರ ಆದರ್ಶಗಳಾದ ದಾಸೋಹ, ಕಾಯಕ, ಸಮಾನತೆ ಮತ್ತು ಮಾನವ ಪ್ರೇಮವನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು. ಈಗ ಒಂದೊಂದಾಗಿ ತಿಳಿದುಕೊಳ್ಳೋಣ. ಅವರ ಬದುಕಿನ ಅಧ್ಯಾಯಗಳು ನಿಸ್ವಾರ್ಥ ಸೇವೆ, ಆಧ್ಯಾತ್ಮಿಕತೆ ಮತ್ತು ಜನಪರ ಕಾಳಜಿಯ ಅಮೂಲ್ಯ ಕಥನಗಳಾಗಿವೆ.ಆದರ್ಶ ಗೃಹಿಣಿ, ಸಮಾಜಸೇವಕಿ, ಸಾಹಿತಿ ಮತ್ತು ಶ್ರೇಷ್ಠ ಭಕ್ತೆಯಾಗಿ ಜಯದೇವಿ ತಾಯಿಯವರು ನಡೆಸಿದ ಬದುಕು ಬಹುಮುಖ ಸಾಧನೆಯ ಪ್ರತೀಕವಾಗಿದೆ. *ಬಿಂಕಿನ ಮಾತಿಲ್ಲ ಕೊಂಕೀನ ನುಡಿಯಲ್ಲಕಿಂಕರಳ ಕೂಗು ಕೇಳಿರಿ,- ಶರಣರಲೆಂಖಿನ ನಾ ನೋಡಿ ನಂಬೀದ* ಎನ್ನುತ ಕಿಂಕರರಲಿ ಕಿಂಕರಳಾಗಿ ಕನ್ನಡಾಂಬೆಯ ಸೇವೆಯಲ್ಲಿ ಜನಸೇವೆಯಲ್ಲಿ ತೊಡಗಿದರು. ೧೯೪೯ರಲ್ಲಿ ಕಲ್ಬುರ್ಗಿಯಲ್ಲಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ೩೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು* ಶ್ರೀ ಉತ್ತಂಗಿ ಚನ್ನಪ್ಪನವರು* ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ತಾಯಿಯವರು ಮಹಿಳಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದರು. ೧೯-೨-೧೯೫೦ ರಂದು ಸೊಲ್ಲಾಪುರದಲ್ಲಿ ೩೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು ಇಲ್ಲಿ ಶ್ರೀ ಎಂ ಆರ್ ಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಮಹಿಳಾಪರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಂದೆ ೨೫-೧೨-೧೯೫೦ರಂದು ಮುಂಬೈಯಲ್ಲಿ ೩೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಇಲ್ಲಿ ರಾಷ್ಟ್ರಕವಿ* ಶ್ರೀ ಮಂಜೇಶ್ವರ ಗೋವಿಂದ ಪೈ *ಅವರು ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೂ ಕೂಡ ಮಹಿಳೆಯರ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದರು.ಈ ಮೂರು ಸಮ್ಮೇಳನಗಳ ಮಹಿಳಾ ಗೋಷ್ಟಿಯಲ್ಲಿ ಜಯದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಜಯದೇವಿ ತಾಯಿಯವರ ಶಿಕ್ಷಣ ಕ್ರಾಂತಿ ಸೊಲ್ಲಾಪುರದ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ.೧೯೪೯ನೇ ವರ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇನ್ನೂ ಕೆಲವು ವರ್ಷಗಳಷ್ಟೇ ಆಗಿದ್ದವು. ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ನಿರಕ್ಷರತೆ ವ್ಯಾಪಕವಾಗಿದ್ದ ಕಾಲ ಅದು. ವಿಶೇಷವಾಗಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಾಗೂ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಜೀವನೋಪಾಯಕ್ಕಾಗಿ ದಿನವಿಡೀ ದುಡಿಯಬೇಕಾಗಿದ್ದ ಕಾರಣ ಅವರಿಗೆ ಶಾಲೆಯ ಮುಖವೇ ಕಾಣುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಜಯದೇವಿ ತಾಯಿಯವರು ಸಮಾಜದ ತಳಮಳವನ್ನು ಕಂಡು “ಶಿಕ್ಷಣವೇ ಬದುಕಿನ ಬೆಳಕು” ಎಂಬ ದೃಢ ನಂಬಿಕೆಯೊಂದಿಗೆ ಅವರು ಒಂದು ಮಹತ್ತರ ಸಾಮಾಜಿಕ ಚಳವಳಿಗೆ ಚಾಲನೆ ನೀಡಿದರು….. ಯಾವುದೇ ದೊಡ್ಡ ಕಟ್ಟಡವಿಲ್ಲ, ಸರ್ಕಾರದ ನೆರವಿಲ್ಲ. ಆದರೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಮತ್ತು ಮಾನವೀಯತೆ ಅವರಲ್ಲಿತ್ತು.ತಮ್ಮ ಮನೆಯ ಆವರಣದಲ್ಲಿಯೇ ಒಂದು ಸಣ್ಣ ಶಾಲೆಯನ್ನು ಆರಂಭಿಸುವ ಮೂಲಕ ಅವರು ಶಿಕ್ಷಣ ಯಜ್ಞಕ್ಕೆ ನಾಂದಿ ಹಾಡಿದರು. ಗಿರಣಿಯಲ್ಲಿ ದುಡಿಯುತ್ತಿದ್ದ ಸುಮಾರು ೩೦,೦೦೦ ಕಾರ್ಮಿಕರ ಕುಟುಂಬಗಳ ಮಕ್ಕಳು ಹಾಗೂ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕನಸನ್ನು ಕಂಡರು.ಆರಂಭದಲ್ಲಿ ಕೆಲವು ಅಡೆತಡೆಗಳು ಬಂದರೂ ತಾಯಿಯವರ ಪ್ರೀತಿ, ತಾಳ್ಮೆ ಮತ್ತು ಸೇವಾ ಭಾವದಿಂದ ಆ ಪ್ರಯತ್ನ ಬೇಗನೆ ಜನಮನ ಗೆದ್ದಿತು. ನಂತರ* ಕಾರ್ಮಿಕ ಸಾಕ್ಷರತಾ ಸಮಿತಿಯ* ಸಹಯೋಗದೊಂದಿಗೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು. ಮೊದಲಿಗೆ ೨೫ ಕೇಂದ್ರಗಳು ಆರಂಭವಾದವು. ಕೇಂದ್ರಗಳಲ್ಲಿ ಮಕ್ಕಳ ಜೊತೆಗೆ ಅಕ್ಷರಜ್ಞಾನವಿಲ್ಲದ ಕಾರ್ಮಿಕರಿಗೂ ಓದು-ಬರಹ ಕಲಿಸಲಾಗುತ್ತಿತ್ತು. ಶಿಕ್ಷಣವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಬೇಕು ಎಂಬುವದು ಅವರ ಉದ್ದೇಶವಾಗಿತ್ತು. ತಾಯಿಯವರ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಈ ಚಳವಳಿ ದಿನದಿಂದ ದಿನಕ್ಕೆ ವಿಸ್ತರಿಸಿತು. ೨೫ ಕೇಂದ್ರಗಳಾಗಿದ್ದವು ಮುಂದೆ ೧೨೫ ಶಿಕ್ಷಣ ಕೇಂದ್ರಗಳಾಗಿ ಬೆಳೆದವು. ಸಾವಿರಾರು ಮಕ್ಕಳು ಮತ್ತು ವಯಸ್ಕರು ಈ ಕೇಂದ್ರಗಳ ಮೂಲಕ ಅಕ್ಷರಜ್ಞಾನ ಪಡೆದರು. ಶಿಕ್ಷಣದ ಬೆಳಕು ಮನೆಮನೆಗೂ ಹರಡಿತು.ಈ ಕಾರ್ಯ ಶಾಲೆಗಳನ್ನು ಆರಂಭಿಸಿದ ಸಾಧನೆಯೊಂದಿಗೆ….*ಅದು ಸಮಾಜ ಪರಿವರ್ತನೆಯ ಚಳವಳಿಯಾಗಿತ್ತು. * ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಹೊಸ ಭವಿಷ್ಯಕೆ ದಾರಿ ಮಾಡಿಕೊಟ್ಟರು ಬಡವರ ಮನೆಗಳಲ್ಲಿ ಆಶಾಕಿರಣ ಮೂಡಿಸಿದ ಪ್ರಯತ್ನವಾಗಿತ್ತು. ಅನೇಕ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿಸಿದ ಮಹಾನ ಸೇವೆಯಾಗಿತ್ತು.ಆದ್ದರಿಂದಲೇ ಜಯದೇವಿ ತಾಯಿಯವರು ಕೈಗೊಂಡ ಶೈಕ್ಷಣಿಕ ಅಭಿಯಾನ ಸೊಲ್ಲಾಪುರದ ಶೈಕ್ಷಣಿಕ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿ ಗುರುತಿಸಲ್ಪಟ್ಟಿದೆ. ಒಬ್ಬ ಮಹಿಳೆ ತನ್ನ ಮನೆಯ ಆವರಣದಲ್ಲಿ ಆರಂಭಿಸಿದ ಸಣ್ಣ ಶಿಕ್ಷಣ ಸೇವೆ ಮುಂದೆ ೧೨೫ ಕೇಂದ್ರಗಳ ಮಹಾ ಚಳವಳಿಯಾಗಿ ಬೆಳೆದು ಸಾವಿರಾರು ಜನರ ಬದುಕನ್ನು ಬೆಳಗಿಸಿತು ಎಂಬುದು ನಿಜಕ್ಕೂ ಅಪೂರ್ವ ಸಾಧನೆ.ಜಯದೇವಿ ತಾಯಿಯವರ ಈ ಕಾರ್ಯ ನಮಗೆ ಶಿಕ್ಷಣದ ಮಹತ್ವವನ್ನು ಯಾವ ರೀತಿಯಲ್ಲಿ, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಇತಿಹಾಸವನ್ನೇ ಬದಲಾಯಿಸಬಲ್ಲದು ಎಂಬುದನ್ನೂ ಸಾರುತ್ತದೆ. ಅವರ ಜೀವನವು ಸೇವೆ, ತ್ಯಾಗ ಮತ್ತು ಶಿಕ್ಷಣದ ಮೂಲಕ ಸಮಾಜೋತ್ಥಾನ ಮಾಡಿದ ಆದರ್ಶದ ಪ್ರತೀಕವಾಗಿದೆ. ಶಿಕ್ಷಣವು ಎಲ್ಲರಿಗೂ ಲಭಿಸಬೇಕು, ಸಮಾನತೆಯನ್ನು ಮೂಡಿಸಬೇಕು ಅನ್ನುವ ಉದ್ದೇಶ ಶಿಕ್ಷಣದ ತಳಹದಿಯಾಗಿರಬೇಕು ಅನ್ನುತ್ತಿದ್ದರು. *ಜಗವು ಒಂದಾಗಲಿ |ನಗುತ ಕೈಗೂಡಿಸಿರಿಬಗೆಯಲಿ ಅಣ್ಣತಮ್ಮರಂತೆ ಲೋಕದಿಹಗೆ ಎಂಬ ಭಾವ ಅಳಿಯಲಿ||* (ಮುಂದುವರೆಯುವುದು) ಸವಿತಾ ದೇಶಮುಖ

