ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-17 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ‌ ಮಹಾನ್ ಚೇತನ ಸವಿತಾ ದೇಶಮುಖ ರಜಾಕರರ ಹಾವಳಿಯಿಂದ ಮನೆಬಿಟ್ಟು ಓಡಿಬಂದ ನಿರಾಶ್ರಿತರ ದುಃಖವ ನೋಡಿ.,.., ತಾಯಿಯವರ ಹೃದಯದಲ್ಲಿ ಮೂಡಿದ ಕರುಣೆ.. ತಾಯಿತನದ ಕರೆಯಾಗಿ ಮೂಡಿದ ತ್ರಿಪದಿ…. *ಬಡ ಮಕ್ಕಳಿಗೆ ಹಾಲು|ತಾಯಿಗೆ ಸೀರೆಒಡಲ ತುಂಬ ಅನ್ನ ನೀಡುತ-ರೋಗಗಳಓಡಿಸ  ಬೇಕಯ್ಯಾ ಸಿದ್ದೇಶ|| ಈ ಕವನದಲ್ಲಿ ಹಾಲಿಲ್ಲದೆ ಅಳುವ ಮಕ್ಕಳನ್ನು ನೋಡಿ ಅವರ ಮನಸು ಕರಗುತ್ತದೆ.ಬಟ್ಟೆಯಿಲ್ಲದೆ ನಾಚಿಕೆಪಡುವ ತಾಯಂದಿರ ನೋವ ಕಂಡು ಕಳವಳ ಗೊಂಡರು.ಹಸಿವಿನಿಂದ ಕಂಗೆಟ್ಟ ಜನರಿಗೆ ಅನ್ನ ಕೊಡಬೇಕೆಂಬ ಹಂಬಲ……“ಸೀರೆ ಒಡಲ ತುಂಬ” …. ತಾಯಂದಿರ ಗೌರವ, ಮಾನವನ್ನು ಕಾಪಾಡುವ ಕಾಳಜಿ.“ಅನ್ನ ನೀಡುತ” “ರೋಗಗಳ ಓಡಿಸಬೇಕಯ್ಯಾ”  ಆರೋಗ್ಯ ಮತ್ತು ಸುರಕ್ಷತೆ ಕೂಡ ಅಗತ್ಯವೆಂಬ ಅರಿವು.ಕೊನೆಯಲ್ಲಿ “ಸಿದ್ದೇಶ” ಎಂದು ಕರೆಯುವ ತಾಯಿಯವರು, ತಮ್ಮ ಕರ್ತವ್ಯವನ್ನು ದೈವಿಕ ಶಕ್ತಿಗೆ ಅರ್ಪಿಸುತ್ತಿದ್ದಾರೆ. ಇದು ಅವರ ಭಕ್ತಿ, ವಿಶ್ವಾಸ ಮತ್ತು ಮಾನವೀಯತೆಯ ಸಂಕಲನ. ಈ ಕವನದ ಹಿನ್ನಲೆಯಲ್ಲಿ ಇರುವ ದೃಶ್ಯ ತುಂಬ ಹೃದಯವಿದ್ರಾವಕ….!!!ರಜಾಕರರ ಹಿಂಸೆಯಿಂದ ಓಡಿಬಂದ ಜನರು… ಭಯ, ಹಸಿವು, ನಿರಾಶ್ರಿತ ಜೀವನಕ್ಕೆ ತಾಯಿಯವರಂತಹ ಮಹಾನ್ ಹೃದಯಿ ಆಶ್ರಯ, ಆಹಾರ ಮತ್ತು ಆಶೆಯನ್ನು ನೀಡಿದರು. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ತಾಯಿಯವರಲಿದ್ದ ದಯೆ, ಕರುಣೆ ಮತ್ತು ಸೇವಾಭಾವ ತುಂಬ ಸ್ಪಷ್ಟವಾಗಿ ಕಾಣಿಸುತ್ತದೆ.ನಿಜಾಮನ ದಬ್ಬಾಳಿಕೆಯಿಂದ ಸಂಕಷ್ಟಕ್ಕೊಳಗಾದ ನಿರಾಶ್ರಿತರು ತಮ್ಮ ಊರುಗಳನ್ನು ಬಿಟ್ಟು,  ಕಣ್ಣೀರನ್ನು ಹೊತ್ತುಕೊಂಡು ಸೊಲ್ಲಾಪುರಕ್ಕೆ ಬಂದಾಗ, ಅವರ ಪರಿಸ್ಥಿತಿ ತುಂಬ ದಯನೀಯವಾಗಿತ್ತು. ಮನೆ ಇಲ್ಲ, ಊರು ಇಲ್ಲ, ಬದುಕಿನ ಭರವಸೆ ಇಲ್ಲ….!! “ಬೆಂದು ಬಂದ ಮಕ್ಕಳ” ಎನ್ನುವ ಪದ ಬಹಳ ಗಂಭೀರ. ಇದು ಅವರ ನೋವನ್ನು ತಾಯಿಯವರು ಎಷ್ಟು ಆಳವಾಗಿ ಅನುಭವಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.  ತಾಯಿಗೆ ಮಕ್ಕಳಂತೆ ಅವರು…..“ಎದ್ದು ಕಣ್ಣೀರ ಒರೆಸುವ ಭಾಗ್ಯ” — ಇಲ್ಲಿ ತಾಯಿಯವರು ಸೇವೆಯನ್ನು ಕರ್ತವ್ಯವಾಗಿ ಮಾತ್ರ ನೋಡುತ್ತಿಲ್ಲ. ಅದನ್ನು “ಭಾಗ್ಯ” ಎಂದುಕೊಂಡಿದ್ದಾರೆ. “ಸಿದ್ದ ನನಗೆ ನೀಡಿ ದುಡಿಸಿದಿ” ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ, ಈ ಜನರ ಸೇವೆ ಮಾಡುವ ಅವಕಾಶ ನೀಡಿದ್ದಾನೆ ಎಂದು ತಾಯಿಯವರು ಕೃತಜ್ಞತೆಯಿಂದ ಹೇಳುತ್ತಾರ. ತಾಯಿಯವರಲ್ಲಿ ಇರುವ  ಮಾನವೀಯತೆ ಮತ್ತು ದೈವಭಕ್ತಿ ತೊರುವದು.  ಅವರ ಸೇವೆಯನ್ನು ತಮ್ಮ ಕರ್ತವ್ಯ ತಮ್ಮ ಧರ್ಮದಂತೆ ಸ್ವೀಕರಿಸಿದ್ದು ಇಲ್ಲಿ ಗೋಚರಿಸುತ್ತದೆ. ಆಗಿನ ಕಾಲದಲ್ಲಿಶ್ರೀ ಚಂಡರಕಿ (ಬೆನಕೊಪ್ಪ) ಉರ್ದು ಭಾಷೆಯ ಕವಿಯೊಬ್ಬನು  ವೀರಗಾಸೆ ಕುಣಿತದಲ್ಲಿ ಪ್ರಸಿದ್ಧರಾದವರು. ಸೊಲ್ಲಾಪುರಕ್ಕೆ ಬಂದ ನಿರಾಶ್ರಿತರಿಗೆ  ಆಶ್ರಿತರಾಗಿ ನಿಂತ ತಾಯಿಯವರ ಬಗ್ಗೆ ಉರ್ದುನಲ್ಲಿ ಕವಿತೆ ಬರ್ತಾನೆ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಡಾ. ಶಂಕರ. ಮೂಗಿ(ನನ್ನ ತಂದೆ)*ತಾಯಿ ನಿನಗೆ ಸಲಾಮು ನಿನಗೆ ಸಲಾಮು * ಅಟ್ಟಿ ಜಡಿಸಿದ ಕಾಸೀಮ ಗಜನಿಕಟ್ಟಿಕೊಂಡು ರಜಾಕಾರರ ದಂಡುಓಡಿ ಬಂದೆವು ನಾವಂದುತೋಳ ಕಂಡ ಕುರಿಯ ಹಿಂಡು ಉಟ್ಟಿದ ಸೀರೆ ತೊಟ್ಟಿದ್ದವಲ್ಲಬೆನ್ನು ಬಿರಿವ ಬಿಸಿಲಿನಲ್ಲಿಸೊನ್ನಲಿಗೆ ಭೂಮಿಗೆ ಬಂದುನಿಂದೆವು ಸಿದ್ದನ ಛತ್ರದಲ್ಲಿ….., ಅಂತ‌ ತಾಯಿಯವರ ಬಗ್ಗೆ ಬರಿತಾನೆ…… ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು. *ಹೊಲದಲ್ಲಿ ಮನೆ ಕಟ್ಟಿಕೊಟ್ಟೀರಿಕೊಯ್ದಿರಿ ನಿಂತ ಫಸಲುಆ ವರುಷ ನಿಮಗಾಗಲಿಲ್ಲಬೆಳೆಯಲ್ಲಿ ಏನು ಅಸಲು ಕೂಸು ಕಂಡಿರಲಿಲ್ಲ ನೆತ್ತಿಗೆಣ್ಣೆಹೊಟ್ಟೆಗಿರಲಿಲ್ಲ ಹಾಲು ತೊಟ್ಟುಹೊದಿಕೆ ಹಾಸಿ, ಹಾಸು ಇರಲಿಲ್ಲತಂದು ಒಗಿಸಿದಿರಿ ಚಾದರದ ಕಟ್ಟು* ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಬೆಳೆಯನ್ನು ತೆಗೆಸಿ…ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು … ಬಡವರು ದಲಿತರು ನಿರಾಶ್ರಿತರು ಅದು ಯಾವುದೇ ಮತ ಕುಲಕ್ಕೆ ಸಂಬಂಧಿಸಿದ್ದರು ಎಲ್ಲರಿಗೂ ತಾಯಿ ಮಕ್ಕಳನ್ನು ನೋಡುವಂತೆ ನೋಡಿಕೊಂಡರು. *ಹಡೆದ ನಾರಿಯರ ಕರೆದುತಂದು ಮಾಡಿದಿರಿ ಆರೈಕೆತವರಿಗೆ ಕಡಿಮೆ ಅಲ್ಲದಂತೆಪಡೆದೆವು ಅಮ್ಮ ನಿನ್ನ ಹರಿಕೆ * ನಿರಾಶ್ರಿತ್ರಿರಗೆ ಆಶ್ರಯ ಕೊಡುವದು ಅಂಥ ಸುಲಭದ ಕೆಲಸವೇನು ಆಗಿರಲಿಲ್ಲ ಅದರಲ್ಲಿ ಬಾಣಂತಿಯರು ಗರ್ಭಿಣಿಯರಂಥ  ಸ್ತ್ರೀಯರು ಕೂಡ ಇದ್ದರು ಅವರೆಲ್ಲರಿಗೂ ಕರೆದು ಬಾಣಂತನವನ್ನು ಮಾಡಿಸಿ ನವಜಾತ ಶಿಶುಗಳ ಆರೈಕೆ ಮಾಡಿಸಿದರು. ಗರ್ಭಿಣಿಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಿದರು.ವಿವಿಧ ಸಂಸ್ಥಾನಗಳ ವಿಲೀನಿಕರಣ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ಶಕ್ತಿಯಾಗಿ ನಿಂತ ನಾಯಕ ಸರ್ದಾರ್ ವಲ್ಲಭಾಯಿ ಪಟೇಲರು.ಸ್ಥಿತಿ ಹಿಡಿತದಿಂದ ತಪ್ಪುತ್ತಿರುವುದು ಕಂಡಾಗ, ಪಟೇಲರು ತಕ್ಷಣವೇ ಶೀಘ್ರ ಹಾಗೂ ದೃಢ ಕ್ರಮ ಕೈಗೊಂಡರು. ಅವರ ದೃಷ್ಟಿಯಲ್ಲಿ ದೇಶದ ಏಕತೆ ಮತ್ತು ಭದ್ರತೆ ಅತ್ಯಂತ ಮುಖ್ಯವಾಗಿತ್ತು.ಶೀಘ್ರ ಕಾರ್ಯಾಚರಣೆಯಲಿ(ಕ್ವಕ ಆಕ್ಷನ್)ಪಟೇಲರ ದೃಢ ನಿಲುವು ತೆಗೆದುಕೊಂಡರು.ಈ ಸಂದರ್ಭದಲ್ಲಿ ಪಟೇಲರು ಮಾತುಕತೆ ಜೊತೆಗೆ ಅಗತ್ಯವಾದರೆ ಶಕ್ತಿಯನ್ನೂ ಬಳಸಬೇಕು ಎಂಬ ನಿಲುವನ್ನು ತಾಳಿದರು.ಹೈದರಾಬಾದ್ ಸಂಸ್ಥಾನದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಅವರು “ಪೊಲೀಸ್ ಆಕ್ಷನ್”  ಸೈನಿಕ ಕ್ರಮವನ್ನು ಜಾರಿಗೊಳಿಸಿದರು. ಇದನ್ನು *ಆಪರೇಷನ್ ಪೋಲೋ*ಎಂದು ಕರೆಯಲಾಗುತ್ತದೆ. ಈ ಕಾರ್ಯಾಚರಣೆಯ ಮೂಲಕ ಕೇವಲ ಐದು ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತದ ಭಾಗವನ್ನಾಗಿ ಮಾಡಲಾಯಿತು.ಪಟೇಲರ ನಾಯಕತ್ವದ ವೈಶಿಷ್ಟ್ಯದೃಢ ನಿರ್ಧಾರ ಶಕ್ತಿ,ತ್ವರಿತ ಕಾರ್ಯಾಚರಣೆ,ದೇಶದ ಏಕತೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆಯಲಿ ಇದ್ದರು ಪಟೇಲರು….. ಈ ಶೀಘ್ರ ಮತ್ತು ದೃಢ ಕ್ರಮಗಳ ಫಲವಾಗಿ, ಭಾರತ ಒಂದು ಏಕೀಕೃತ ರಾಷ್ಟ್ರವಾಗಿ ರೂಪುಗೊಂಡಿತು. *” ದೇಶದ ಏಕತೆಯ ಕಗ್ಗತ್ತಲಲ್ಲಿ ಬೆಳಕಾಗಿ ಕಾಣಿಸಿಕೊಂಡವರು ಸರ್ದಾರ್ ವಲ್ಲಭಾಯಿ ಪಟೇಲರು…..“ಭಾರತದ ಕಬ್ಬಿಣ ಮನುಷ್ಯನು” ಎಂದು ಜಯದೇವಿ ತಾಯಿಯವರು ಬಹಳ ಹೆಮ್ಮೆಯಿಂದ ಎಲ್ಲ ಭಾಷಣಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕೊನೆಗೊಮ್ಮೆ… ಅನುಭವಿಸಿದ ನೋವು, ನಿರಾಶೆ, ಅಲೆಮಾರಿ ಜೀವನದ ನಂತರ, ನಿರಾಶ್ರಿತರು ಮತ್ತೆ ತಮ್ಮ ಆಶ್ರಯದ ನೆಲೆಗೆ ಹಿಂದಿರುಗುವ ಕ್ಷಣ ಬಂದಾಗ, ಅದು ಅವರ ಬದುಕಿನ ಪುನರ್ಜನ್ಮದಂತಿತ್ತು. ಆ ಸಂತಸದ ದಿನ ಬಂದು ಒದಗಿದ್ದು ೩೦-೯-೪೮ ರಂದು. ನಿರಾಶ್ರಿತರು ತಮ್ಮ ಆಶ್ರಿತ ಸ್ಥಾನಕ್ಕೆ ಹೊರಟು ನಿಂತರು….. ಸ್ವಸ್ಥಾನಕ್ಕೆ ಹಿಂದುತ್ತಿರುವಾಗ ಅವರಲ್ಲಿ ಇದ್ದ ಆನಂದ ಉತ್ಸಾಹ ಹೇಳುತೀರದಾಗಿತ್ತು ….. ಅವರಿಗೆ ನಿಜವಾದ ಸ್ವಾತಂತ್ರ ಈಗ ಬಂದಾಗಿತ್ತು ..,!!!.ಎಲ್ಲರೂ ತಾಯಿಯವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸ್ತಾ ಹಾಡಿ ಹರಿಸಿ ಹೊಗಳಿ ಅಲ್ಲಿಂದ ತೆರಳಿದರು. ತಮ್ಮ ಮನೆಗಳ ಬಾಗಿಲುಗಳನ್ನು ಮತ್ತೆ ತೆರೆಯುವ ತವಕ …ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿಕೊಂಡವು…. ಆಸರೆ ಕೊಟ್ಟ ನೆಲವನ್ನು ಬಿಟ್ಟು ಹೋಗುವಾಗ. ..ಆ ಮಣ್ಣನ್ನು  ಸ್ಪರ್ಶಿಸಿದಾಗ ಅವರ ಹೃದಯ ತುಂಬ ಒಂದು ಶಾಂತಿಯ ಅಲೆ ಹರಡಿತು.ಭೂಮಿಗೆ ನಮಿಸಿದರು.ಮಕ್ಕಳು ಸಂತೋಷದಿಂದ ಓಡಾಡುತ್ತಿದ್ದರು, .ಪ್ರತಿ ಹೆಜ್ಜೆ   ಪ್ರತಿ ಉಸಿರು  ಒಂದು ಕಥೆ ಹೇಳುವಂತೆ ಇತ್ತು…..ಆ ಕ್ಷಣದಲ್ಲಿ ಅವರು ತಮ್ಮ ಕಷ್ಟಕಾಲದಲ್ಲಿ ತಾಯಿಯಂತೆ ನೆರವಾದ ಆ ಮಹಾನ್ ವ್ಯಕ್ತಿಯ ಜಯದೇವಿ ತಾಯಿಯವರನ್ನು ನೆನೆಸಿಕೊಂಡರು“ತಾಯಿ… ನಮ್ಮ ಜೀವ ಉಳಿಸಿದವಳು ನೀವು… ನಾವು ಕಳೆದುಕೊಂಡ ವಿಶ್ವಾಸವನ್ನು ಮತ್ತೆ ನಮ್ಮೊಳಗೆ ತುಂಬಿದವಳು ನೀವು… ನಮ್ಮ ನೆರಳಿಲ್ಲದ ಬದುಕಿಗೆ ಆಶ್ರಯವಾದವಳು ನೀವು… ಇಂದು ನಾವು ಮತ್ತೆ ನಮ್ಮ ನೆಲಕ್ಕಹಿಂದಿರುಗುತ್ತಿದ್ದೇವೆಆದರೆ ಈ ಸಂತೋಷದ ಪ್ರತಿಯೊಂದು ಹನಿ ನಿಮ್ಮ ಆಶೀರ್ವಾದವೇ…ನಾವು ನಿಮ್ಮ ಋಣವನ್ನು ಯಾವತ್ತೂ ತೀರಿಸಲಾರೆವು… ನಮ್ಮ ಹೃದಯದ ತುಂಬು ಕೃತಜ್ಞತೆಗಳನ್ನು ನಿಮಗೆ ಅರ್ಪಿಸುತ್ತೇವೆ ಎನ್ನುತ ಹಾಡಿ ಹರಸಿದರು……. *ಹೇಗೆ ತೀರಿಸಬೇಕು ತಾಯಿನಿನ್ನ ಋಣವ ಒಟ್ಟುನೆನೆವೆವು ಹಡೆದ ಮಕ್ಕಳಿಗೆ*ನಿನ್ನ ಹೆಸರು ಇಟ್ಟು,*‌‌….!!! ಜಯಭೇರಿ ಕೇಳಿ ಕುಣಿದೆವುಆಯಿತು ರಜಾಕರರ ಹೋಮಮಕ್ಕಳು ಮರಿ ಹೋಗಿ ಬರುವೆವುತಾಯಿ ನಿನಗೆ ಸಲಾಂ.. ನಿನಗೆ ಸಲಾಮ* (ಚಂಡರಕಿ ಉರ್ದು ಕವಿ) ಅವರ ಮುಖದಲ್ಲಿ ಕಂಡ ಆ ಸಂತಸ ಅವರ ಹೃದಯದಲ್ಲಿ ಮೂಡಿದ ಆ ಶಾಂತಿ—ಅದು ತಾಯಿಯ ಸೇವೆಗೆ ದೊರಕಿದ ಅತ್ಯಂತ ಮಹತ್ತರ ಗೌರವ.ಈ ದೃಶ್ಯ… ನೋವಿನಿಂದ ಆರಂಭವಾಗಿ, ಕೃತಜ್ಞತೆಯಲ್ಲಿ ಮುಗಿಯುವ ಒಂದು ಬದುಕಿನ ಪಯಣ.ಮುಂದುವರಿಯುವುದು ಸವಿತಾ  ದೇಶಮುಖ 

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ತಮ್ಮ ತಾನರಿಯದವರು ನಿಮ್ಮನ್ನೆತ್ತ ಬಲ್ಲರಯ್ಯ…. ನಾಳಿಗಿ ಬಸೋಜಂತಿ ಅದರೀ ಮನಿ ತೊಳಿಬೇಕು , ಅಂತ ಬಾಜು ಮನಿ ಅಕ್ಕೋರು ಅಂದಾಗ ನಮ್ಮ ಜಗಜ್ಯೋತಿ ಬಸವಣ್ಣನೂ ಒಬ್ಬ ದೇವರಾಗಿ ಕುಂತ ಅಂತನಸ್ತು.ಅವನೆಲ್ಲಿ ದೇವರಾದ , ನಾವು ದೇವ್ರು ಮಾಡಿಬಿಟ್ಟೆವು.ಅವನಿಗೊಂದು ಗುಡಿ ಕಟ್ಟಿ ಅದರೊಳಗ ಕೂಡ್ಸಿ ಕುಂಕುಮ ಅರಶಿಣದಿಂದ ಪೂಜಾ ಮಾಡಿ ಹೋಳಿಗಿ ನೌದಿ ತೋರಿಸಿ ಹಬ್ಬ ಮುಗಸತೀವಿ. ಬ್ಯಾಸಗಿದಾಗ ಬರೊ ಈ ಬಸೊಜಂತಿ ನಾವು ಸಣ್ಣವರಿದ್ದಾಗ ಹೋಳಗಿ ಮಾನಕಾಯಿ ರಸ ನೆನಪಿಸತಿತ್ತು.ಅವತ್ತು ಎಲ್ಲರ ಮನ್ಯಾಗ ಹೂರಣದ ಹೋಳಗಿ ಮಾನಕಾಯಿ ಸಿಕರಣಿ. ಬಸವಜಯಂತಿ ಅಂದ್ರ ಇದರ ಹೊರತಾಗಿ ಮತ್ತಾವದೂ ತಿಳಿದಿರಲಿಲ್ಲ.ವಚನ ಸಾಹಿತ್ಯ ಓದಿ ತಿಳಿದ ಮ್ಯಾಲ ಗೊತ್ತಾಗಿದ್ದು ಬಸವಣ್ಣ ನಮ್ಮಂಗ ಒಬ್ಬ ಮನುಷ್ಯ, ಆದ್ರಾ ಅವನ ವಿಚಾರಗಳಿಂದ ಅವನೊಬ್ಬ ಅಸಾಮಾನ್ಯ ಮಾನವನೆನೆಸಿಕೊಂಡ.ಅವನಂತೆ ಅವನ ಜೊತೆಗೆ ಎಳನೂರರ ಮ್ಯಾಲ ಶರಣರು ಇದ್ದರು , ಎಲ್ಲರೂ ಮನುಷ್ಯ ರೆ. ಆದ್ರ ಈಗ ಅವ್ರೆಲ್ಲರಿಗೂ ನಮ್ಮ ಸಮಾಜ ದೇವ್ರು ಮಾಡಿ ಕೂಡಿಸಿ ಬಿಟ್ಟಾರ.ಒಂದೊಂದು ಕಾಯಕಕ್ಕ ಒಂದೊಂದು ಜಾತಿ ಹೆಸರು ಕೊಟ್ಟು ಆಯಾ ಕಾಯಕದ ಒಬ್ಬೊಬ್ಬ ಶರಣರನ್ನ ತಮ್ಮ ಜಾತಿಯ ರಾಯಭಾರಿ ಮಾಡಿಕೊಂಡು ವರ್ಷಕ್ಕೊಮ್ಮೆ ಜಯಂತಿ ಮಾಡ್ತಾರ. ಜಯಂತಿ ಆಚರಣೆ ಮಾಡೋದು ತಪ್ಪಂತ ಹೇಳಲ್ಲ.ಅವರ ಜೀವನ ಚರಿತ್ರೆ , ಅವರ ಸಾಧನೆ , ಅವರು ಸಮಾಜಕ್ಕೆ ಕೊಟ್ಟ ಮಾರ್ಗದರ್ಶನ , ಇವೆಲ್ಲ ಮುಂದಿನ ಪಿಳಿಗಿಗಿ ನೆನಪಿರಬೇಕಾದ್ರ ಮಾಹಾ ನಾಯಕರ ಹುಟ್ಟು ಸಾವಿನ ಕುರಿತು ಪ್ರತಿಯೊಬ್ಬರಿಗೂ ತಿಳದಿರಬೇಕು , ಮತ್ತೊಬ್ಬರಿಗೆ ತಿಳಿಸಿ ಹೇಳಬೇಕು. ಇಂತಹ ಜಯಂತಿಗಳ ಆಚರಣೆಯಿಂದ ಮುಂದಿನ ಪೀಳಿಗೆ ಗಳಿಗೆ ನಾವು ಅವರು ಸಮಾಜದ ಉದ್ದಾರಕ್ಕಾಗಿ ಎನೇನು ಮಾಡಿದರು ಅನ್ನೊದು ತಿಳಿಸಿ ಹೆಳತಿಬೇಕು. ಆದ್ರ ಈಗೀನ ಮಹಾನಾಯಕರ ಜಯಂತಿ ಗಳೆಲ್ಲ ಆಯಾ ಜನಾಂಗಗಳ ಜನಬಲ ತೋರಿಸಿಕೊಳ್ಳಕ್ಕೆ ಸೀಮಿತ ಆಗತಿದ್ದಾವ.ಮಡಿವಾಳ ಮಾಚೀದೇವನ ಜಯಂತಿ ಕ್ಕಿಂತ ಅಂಬಿಗರ ಚೌಡಯ್ಯ ನ ಜಯಂತಿ ದೊಡ್ಡ ದಾಗಿ ಮಾಡಬೇಕು.ಬಸವಣ್ಣನ ಜಯಂತಿಗಿಂತ ಅಂಬೇಡ್ಕರ್ ಜಯಂತಿ ಭಾರಿ ಮಾಬೇಕು.ಅವ್ರು ಅಷ್ಟೇ ಜನ ಇದ್ರು.ನಾವು ಅವರಿಗಿಂತ ಹೆಚ್ಚು ಜನ ಸೇರಬೇಕು.ಅವರು ಹಾಕಿದ್ದ ಟೆಂಟ್ ಸಣ್ಣದಿತ್ತು.ನಾವು ಹಾಕೋ ಟೆಂಟ್ ನೋಡಿ ಜನ ದಂಗಾಗಬೇಕು. ಇದಕ್ಕೆಲ್ಲ ರೊಕ್ಕ ..! ಚಂದಾ ಎತ್ತಿದ್ರಾಯ್ತು.ತಮ್ಮ ತಮ್ಮ ಜಾತಿ ಬಲ ತೋರಸಿಕೊಳ್ಳಕ ಯಾರು ಹಿಂದ ಬಿಳಲ್ಲ.ಇನ್ನೂ ಸರ್ಕಾರಿ ಅಧಿಕಾರಿಗಳು ಯಾತಕ್ಕ ಇರತಾರ , ಅಂಜಿಸಿಯಾದ್ರೂ ಜಯಂತಿ ಗಳಿಗಿ ದುಡ್ಡು ವಸೂಲಿ ಮಾಡೋದೇ , ಇವೆಲ್ಲದರ ಮುಂದಾಳತ್ವ ವಹಿಸುವವರು ಎಷ್ಟು ಬಸವಣ್ಣನ ತತ್ವಗಳನ್ನು ಅರಿತಿರತಾರ…!ಎಷ್ಟು ಅಂಬೇಡ್ಕರ್ ಅವರ ಬಗ್ಗೆ ತಿಳಿದಿರತಾರ..! ಚಂದಾ ವಸೂಲಿ ಮಾಡಿ ಈ ಜಯಂತಿ ಗಳಲ್ಲಿ ಕುಣಿಯುವವರು ಹೆಚ್ಚಾಗಿ ಯುವಕರು.ಕುಡಿದು ಡಿ ಜೆ  ಸದ್ದಿಗೆ ಎರ್ರಾಬಿರ್ರಿ ಕುಣಿಯುತ್ತ ಅದರ ಅವಾಜಕ್ಕ ಉರವರೆಲ್ಲ ಹೈರಾಣ ಆಗಬೇಕು. ಅದಕ್ಕ ಜಯಂತಿ ಅಂತಾರ.ನಮ್ಮ ನಡೆ ನುಡಿ ಆಚರಣೆಗಳಲ್ಲಿ ಶರಣರ ಮಹಾನಾಯಕರ ಆದರ್ಶ ಆಳವಡಿಸಿಕೊಳ್ಳುವದಕ್ಕ ಜಯಂತಿ ಅನ್ನಲ್ಲ ಅಂತ ಇಂತವರ ವಾದ ಇರಬಹುದು. ಅಷ್ಟಕ್ಕೂ ಸಾರ್ವಜನಿಕ ವಾಗಿ ಜಯಂತಿ ಆಚರಿಸುವ ಅವಶ್ಯಕತೆ ಅಷ್ಟು ಇದೆಯಾ..! ಸ್ಕೂಲ್ ಕಾಲೇಜ್ ಗಳಲ್ಲಿ ಆಚರಿಸಿದರೆ ಮಕ್ಕಳಿಗೆ ಅವರ ಬಗ್ಗೆ ತಿಳಿತದ.ಪಠ್ಯ ಪುಸ್ತಕಗಳದಾಗ ಅವ್ರ ಜೀವನ ಚರಿತ್ರೆಗಳು ಇರಲಿ. ಶಾಲಾ ಕಾಲೇಜುಗಳು ಮಕ್ಕಳಲ್ಲಿ ವೈಚಾರಿಕ ನಡೆಗಳ ಮಹತ್ವ ತಿಳಿಸಲಿ.ಎಲ್ಲರೂ ತಮ್ಮ ತಮ್ಮ ಜಾತಿಯ ನಾಯಕರ ಜಯಂತಿ ಆಚರಿಸ್ತಾರ , ಟಿಪ್ಪು ಸುಲ್ತಾನ ನ ಜಯಂತಿಗೆ ಯಾಕ ವಿರೋಧಿಸಬೇಕು..! ಇತಿಹಾಸ ತಮ್ಮ ಮನಸ್ಸಿಗಿ ಬಂದಂಗ ತಿರುಚಿ ತಮ್ಮ ವಾದಕ್ಕೆ ಕಟ್ಟುಬಿಳುವದರಿಂದ ಸತ್ಯ ಸುಳ್ಳಾಗಲ್ಲ , ಸುಳ್ಳು ಸತ್ಯ ಆಗಲ್ಲ.ಟಿಪ್ಪು ಸುಲ್ತಾನ್ ಕೂಡ ನಮ್ಮ ದೇಶದ ಸ್ವತಂತ್ರ ಕ್ಕಾಗಿ ಬ್ರಿಟಿಷ್ ರೊಂದಿಗೆ ಹೊರಾಡಿದವನೆ , ಇಷ್ಟು ಸಾಕು ಅವನನ್ನು ನೆನಪಿಸಿಕೊಳ್ಳುವದಕ್ಕ. ಬಸವಾದಿ ಶರಣರ ಆಶಯಗಳು , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು , ಇವೆಲ್ಲ ನಾವು ಅವ್ರ ಪೋಟಕ್ಕ ಹೂವಿನ ಹಾರ ಹಾಕಿ ತೆಂಗು ಒಡೆದು ಮೆರವಣಿಗೆ ಮಾಡ್ಕೊಂತ ಕುಣ್ಣಕೊಂತ ಹೋಗಿದ್ರಿಂದ ನಮ್ಮಲ್ಲಿ ಆಳವಡಿಸಿಕೊಳ್ಳಕ್ಕ ಆಗುವದಿಲ್ಲ.ತನು ಶುಧ , ಮನ ಶುಧ್ದ ಎಂಬ ನಿಲುವು ನಮ್ಮಲ್ಲಿ ಬರಬೇಕಾದ್ರ ಮೊದಲು ಶರಣರ ನ್ನು ಅರಿಬೇಕು.ಅವರ ನಿಲುವುಗಳನ್ನು ನಮ್ಮ ಜೀವನದಾಗ ಆಳವಡಿಸಿಕೊಳ್ಳಬೇಕು. ಮೈಕ್ ನಲ್ಲಿ ಜೋರಾಗಿ ಭಾಷಣ ಮಾಡ್ತ ಅವರು ನಮ್ಮ ಜಾತಿಗಿ ಹಂಗ ಮಾಡಿದ್ರು ಹಿಂಗ್ ಮಾಡುದ್ರೂ ಅಂತ ಅರಚಾಡುವದು ಬಿಟ್ಟು ಈಗ ಅವರು ಹಾಕಿದ ಮಾರ್ಗದರ್ಶನ ದಾಗ ನಾವು ಹ್ಯಾಂಗ್ ಬದುಕಬೇಕು ಅನ್ನೊದು ತಿಳಕೋಬೇಕು.ಅದು ನಮ್ಮ ಜೀವನದಾಗ ಅಳವಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ವಚನಗಳ ಸಾರ , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು ತಿಳಿಸುವ ಪ್ರಯತ್ನಕ್ಕೆ ಶಿಕ್ಷಕರು ಹೆಚ್ಚಿನ ಮಹತ್ವ ಕೊಡಬೇಕು. ಬಸವಣ್ಣ ಲಿಂಗಾಯತರಿಗೆ ಮಾತ್ರ ಸೀಮಿತ , ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಎಂಬ ಸಿದ್ದಾಂತ ಕ್ಕೆ ಯುವಜನ ಒಳಪಡುತಿರೋದು ಶೋಚನೀಯ. ಇನ್ನೂ ಒಂದು ಮುಖ್ಯ ವಿಷಯ. ದಲಿತರು ಬಸವಣ್ಣ ನನ್ನು ಒಪ್ಪಿಕೊಂಡಷ್ಟು ದಲಿತೇತರು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿದ್ದೆವಾ..! ದಲಿತರು ಅಂಬೇಡ್ಕರ್ ಭಾವ ಚಿತ್ರದ ಜೊತೆ ಬಸವಣ್ಣ ಬುದ್ಧನ ಭಾವಚಿತ್ರ ಗಳಿಗೆ ಪೂಜಿಸೋದು ನೋಡಿದ್ದೆವೆ.ಎಷ್ಟು ಜನ ದಲಿತೇತರು ಲಿಂಗಾಯತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜಿಸ್ತೆವೆ..!ಪೂಜೆ ಅನ್ನೊದು ಒಂದು ಆಚರಣೆ ಅಷ್ಟೆ. ಗೌರವದಿಂದ ಒಪ್ಪಿಕೊಳ್ಳುವದು ಮುಖ್ಯ. ಶರಣರ ತತ್ವ ಗಳು , ಅಂಬೇಡ್ಕರ್  ರ ಆಶಯಗಳು ಎಂದಿಗೂ ಪ್ರಸ್ತುತ. ಬಸವೇಶ್ವರ ಅಂಬೇಡ್ಕರ್ ಇನ್ನೂ ಅನೇಕ ಮಹಾನಾಯಕರು ಮನುಕುಲದ ಉದ್ದಾರಕ್ಕಾಗಿ ಜೀವ ತೇದವರು.ಅವರೂ ಮನುಷ್ಯರೆ.ಅವ್ರಲ್ಲೂ ಪರಿಪೂರ್ಣ ತೆ ಹುಡುಕುವ ಕೆಲಸ ನಾವು ಮಾಡಬಾರದು.ಆದ್ರ ಅವರ ಮಾರ್ಗದರ್ಶನ ನಮ್ಮ ಜೀವನ ಮಟ್ಟ ಎಷ್ಟು ಬದಲಾಯಿಸ್ತದ ಅನ್ನುವದು ಅವರ ದಾರಿಯಲ್ಲಿ ಸಾಗಿದಾಗ ಮಾತ್ರ ತಿಳಿತದ. ಶರಣರ ಮಹಾನಾಯಕರ ಜಯಂತಿ ಗಳು ಸರ್ಕಾರಿ ಕಚೇರಿಗಳಲ್ಲಿ ಕಾಟಾಚಾರಕ್ಕಾಗಿ ಆಚರಿಸುವದನ್ನು ನೋಡ್ತೆವೆ.ಒಂದು ಪೋಟೋ ಇಟ್ಟು ಹೂವಿನ ಸರ ಹಾಕಿ ತೆಂಗಿನ ಕಾಯಿ ಒಡೆದು ಇಟ್ರ ಜಯಂತಿ ಮುಗಿತು.ಕಚೇರಿ ಮುಚ್ಚಿ ಮನಿಗಿ ಹೋದ್ರ ಆಯ್ತು . ಇನ್ನೂ ಡಿ ಜೆ ಹಚ್ಚಿ ಕುಣಿಯುವವರು ಪಟಾಕಿ ಹಚ್ಚೊರು ,  ಉರಾಗೆಲ್ಲ ಮೆರವಣಿಗಿ ಮಾಡೊರ ಹಾವಳಿ ಶುರು ಆಗತದ. ಇದರಿಂದ ನಮ್ಮ ಮುಂದಿನ ಪೀಳಿಗೆ ಏನು ಕಲಿತಾರ..! ನಮ್ಮ ನಮ್ಮ ಜಾತಿ ಅಥವಾ ಜನ ಬೆಂಬಲ ತೊರಿಸಬೇಕಾದ್ರ ಅದ್ದೂರಿ ಜಯಂತಿಗಳು ಆಚರಿಸಬೇಕು.ಅಂತ.ಇದರಿಂದಾಗುವ ಉಪಯೋಗ ಅನುಪಯೋಗ ಯಾರಿಗೂ ಬೇಕಾಗಿಲ್ಲ.ವಚನ ಸಾಹಿತ್ಯ ವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶರಣರ ಸಮಬಾಳು ಸಮಪಾಲು ಆಶಯಗಳು , ಕಾಯಕದ ಮಹಿಮೆ , ಬಹುತ್ವ ಆಚರಣೆಗಳನ್ನು ಗೌರವಿಸುವದು , ದಯೆ ಕರುಣೆಗಳ ಸಾರ , ಎಲ್ಲರನ್ನೂ ಒಳಗೊಂಡ ಸರ್ವಜನಾಂಗಗಳ ಸಾಮರಸ್ಯ..ಇವೆಲ್ಲವೂ ಬರಿ ಬಸವಣ್ಣಗ ಅಂಬೇಡ್ಕರ್ ಅವರಿಗೆ ಮೆರೆಸಿದರಾಗಲಿ , ವಚನ ಸಾಹಿತ್ಯ ತಲೆ ಮೇಲೆ ಹೊತ್ತು ತಿರುಗಿದರಾಗಲಿ ಸಿಗಬಹುದೇ..! ಇಲ್ಲ. ಆದರೂ ಮೆರವಣಿಗೆಯಂತ ಆಚರಣೆಗಳು ಅದ್ದೂರಿಯಾಗಿ ಯಾಕ ಜರುಗತಾವ.ಉತ್ತರ ಒಂದೇ , ಬರಿ ಪ್ರತಿಷ್ಟೆಗಾಗಿ ಮಾತ್ರ.ಪ್ರತಿಷ್ಟೆ ನಮಗ ವಿಕಾಸದ ದಾರಿಗೆ ಒಯ್ಯುವದಿಲ್ಲ.ಅಧಪತನದೆಡೆ ಒಯ್ಯುತ್ತದೆ.ಜಯಂತಿಯ ಆಚರಣೆಗಳು ಬರಿ ಪ್ರತಿಷ್ಟೆಗಳಾಗದೆ ಸರ್ವಜನರ ಮಾನಸಿಕ ವಿಕಾಸಕ್ಕಾಗಿ ಆಚರಿಸಲ್ಪಡಬೇಕು. ಜ್ಯೋತಿ , ಡಿ .ಬೊಮ್ಮಾ. ಜ್ಯೋತಿ ಡಿ ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರತಿ ತಿಂಗಳೂ ಸಂಗಾತಿ ಪತ್ರಿಕೆಗಾಗಿ ದೇಸಿನುಡಿಗಟ್ಟಿನಲ್ಲಿ ವಿಶೇಷವಾದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-23 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ನನ್ನ ಆತ್ಮಬಂಧು ಕೃಷ್ಣ ಬಂದನಂದು ನಾನೀಗ ಸುಧನ್ವನ ಎದುರು ನಿಂತಿದ್ದೆ. ಅವನ ಹೋರಾಟದ ಪರಿಯನ್ನು ಇದುವರೆಗೂ ಕಂಡಿದ್ದ ನಾನು ಈಗ ಅವನನ್ನು ತೀರಾ ಸನಿಹದಿಂದ ಕಂಡೆ. ನನಗೆ ಎಷ್ಟರವನಿವನು ಎನಿಸಿತು. ನನ್ನ ಯುದ್ಧಾನುಭವವೇನು! ಇವನ ವಯಸ್ಸೇನು! ಹೋರಾಡಬೇಕೇ ನಾನಿವನಲ್ಲಿ! ನಾನು ಗೆಲುವನ್ನು ಪಡೆಯುವುದಂತೂ ದಿಟ. ಗೆದ್ದರೂ ಸಣ್ಣವನೆದುರು ಗೆದ್ದಂತಾಗುತ್ತದಷ್ಟೇ. ಒಂದು ವೇಳೆ ಅಪ್ಪಿತಪ್ಪಿ ಸೋತೆನೆಂದಾದರೆ ಯುದ್ಧಾನುಯುದ್ಧಗಳನ್ನು ಗೆದ್ದ ಆ ಕಲಿ ಪಾರ್ಥ ಕದನದಭನುವವೇ ಇಲ್ಲದವನ ಎದುರು ಸೋತನಂತೆ ಎಂಬ ಸುದ್ದಿ ಹಬ್ಬುತ್ತದೆ. ಈ ಯುದ್ಧ ನನ್ನ ಯೋಗ್ಯತೆಗೆ ಸಲ್ಲುವಂಥದ್ದಲ್ಲ. ಇವನನ್ನು ಬೆದರಿಸಿಯೇ ಇಲ್ಲಿಂದ ತೊಲಗಿಸುವುದೊಳಿತು ಎನಿಸಿತು. ಅದು ನನ್ನೊಳಗಿನ ಅಹಂಕಾರದಿಂದ ಉದ್ಭವಿಸಿದ ಯೋಚನೆಯೋ, ನನಗದರ ಅರಿವಿಲ್ಲ.ದೊಡ್ಡ ಧ್ವನಿಯಲ್ಲಿ ಆರ್ಭಟಿಸಿದೆ ಸುಧನ್ವನಲ್ಲಿ. “ನನ್ನೊಡನೆ ಯುದ್ಧವನ್ನೇಕೆ ಬಯಸಿರುವೆ! ನೀನು ನಿಜಕ್ಕೂ ಅಪ್ರಬುದ್ಧ. ನನ್ನಂಥ ಪ್ರಸಿದ್ಧನೆದುರು ನಿನ್ನ ಹೋರಾಟವೇತಕ್ಕೆ! ನಿಮ್ಮ ಪಾಳಯದಲ್ಲಿ ಯಾರಾದರೂ ರಣ ಪರಾಕ್ರಮಿಗಳಿದ್ದರೆ ಅವರನ್ನು ಕಳುಹಿಸು ನನ್ನೆದುರು. ದ್ರೋಣ, ಭೀಷ್ಮ, ಕರ್ಣ ಮೊದಲಾದ ಘಟಾನುಘಟಿಗಳೇ ನನ್ನೆದುರು ಸೋತುಹೋಗಿದ್ದಾರೆ. ಈಗಲಾದರೂ ಇಲ್ಲಿಂದ ಹೊರಟುಹೋಗು. ಪ್ರಾಣ ಉಳಿಸಿಕೋ” ಎಂದು ಹೀಯಾಳಿಸಿದೆ.ಅದು ಆ ಕ್ಷಣಕ್ಕೆ ನಾನು ಪ್ರಯೋಗಿಸಿದ ಯುದ್ಧತಂತ್ರವೂ ಹೌದು. ಹಿಂದಣ ಸಾಧನೆಯನ್ನು ಮುಂದಿಟ್ಟುಕೊAಡು ಶತ್ರು ಸುಧನ್ವನ ಎದೆಬಲವನ್ನು ಕುಂದಿಸುವ ಯತ್ನ ಮಾಡಿದೆ. ನನ್ನ ಮಾತುಗಳಷ್ಟೂ ನಿಷ್ಪçಯೋಜಕವೆನಿಸಿದವು ಅವನ ಎದುರಲ್ಲಿ. ಶೌರ್ಯವದು ಅವನದು ಕಿರಿದಾಗಲಿಲ್ಲ. ಇಮ್ಮಡಿಸಿತು.ಪ್ರತಿಮಾತಿನಿಂದ ನನ್ನನ್ನು ಚುಚ್ಚಿದ. “ಕೌರವ ಸೇನೆಯ ವೀರರನ್ನು ನೀನು ಗೆದ್ದದ್ದು ನಿನ್ನ ಶಕ್ತಿಯಿಂದಲ್ಲ; ನಿನ್ನ ಸಾರಥಿಯಾಗಿದ್ದ ಆ ಶ್ರೀಕೃಷ್ಣನ ಬಲದಿಂದ. ಅವನಿಲ್ಲದೆ ನಿನಗಾವ ಗೌರವವಿದೆ ಈ ಧರೆಯಲ್ಲಿ! ಮೊದಲು ಕೃಷ್ಣನನ್ನು ಕರೆಸಿಕೋ. ನನ್ನನ್ನು ಜಯಿಸುವುದು ನಿನ್ನಿಂದ ಆಗುವಂಥದ್ದಲ್ಲ. ಗೆಲ್ಲುವ ಆಸೆಯನ್ನು ತೊರೆದುಬಿಡು” ಎಂದ.ಅಬ್ಬಾ! ಎಂತಹ ದಿಟ್ಟತನವಿತ್ತು ಆ ಮಾತಿನಲ್ಲಿ. ನನ್ನ ಅಸ್ತಿತ್ವದ ಮೂಲಬೇರಿಗೇ ಕೈಹಾಕಿ ಕೆದಕಿದ್ದ ಆ ಸುಧನ್ವ ಆ ಕ್ಷಣದಲ್ಲಿ. ಹೌದು! ನಾನು ಕೃಷ್ಣಸಖ. ಅವನಿಂದಲೇ ಬೆಳೆದವನು ಈ ಬದುಕಿನಲ್ಲಿ. ಶತ್ರುಗಳಾಗಿ ಮುಂದೆ ನಿಂತ ಬಂಧುಗಳನ್ನೂ, ಗುರು ಹಿರಿಯರನ್ನೂ ಎದುರಿಸಲಾರೆ ಎಂಬ ಖಿನ್ನತೆ ನನ್ನನ್ನು ಆವರಿಸಿದ ಆ ಕುರುಕ್ಷೇತ್ರ ರಣಕಣದಲ್ಲಿ ಜೀವನತತ್ವವನ್ನು ಬೋಧಿಸಿದವನು ಶ್ರೀಕೃಷ್ಣ. ನನ್ನ ಸಾಹಸ ಪ್ರದರ್ಶನಕ್ಕೆ ಪ್ರೇರಣೆಯಾದವನು ಶ್ರೀಕೃಷ್ಣ. ಅವನಿಂದಲೇ ನನ್ನ ಅಸ್ತಿತ್ವ. ಅವನ ನೆರವಿಲ್ಲದೆ ನಾನಿಷ್ಟು ಸಾಧಿಸುತ್ತಿರಲಿಲ್ಲ. ಅದು ಸರ್ವವೇದ್ಯ.ಸಾಧನೆಯ ಏಣಿಯನ್ನು ಹತ್ತುತ್ತಾ ಹತ್ತುತ್ತಾ ಹತ್ತನೆಯ ಮೆಟ್ಟಿಲಲ್ಲಿ ನಿಂತವನು ನಾನು. ಹತ್ತನೆಯ ಸಂಖ್ಯೆಯೇ ಆದವನು ನಾನು. ಕೃಷ್ಣನೆಂಬ ಒಂದು ಜೊತೆಗಿರಲು ನಾನು ಸಿಂಧು. ಇಲ್ಲವಾದರೆ ನಾನು ಬರಿಯ ಶೂನ್ಯ, ಬಿಂದು. ಸುಧನ್ವ ಕೋಪದಲ್ಲಾಡಿದ ಮಾತಿನಲ್ಲಿ ನನ್ನ ಬದುಕಿನ ನಿಜಸತ್ವವಿದೆ ಎನಿಸಿತು.ಅವನ ಮಾತನ್ನು ನಾನು ಈ ಬಗೆಯಲ್ಲಿ ಅರಗಿಸಿಕೊಳ್ಳುತ್ತಿದ್ದಾಗಲೇ ಅವನು ಪ್ರಯೋಗಿಸಿದ ಬಾಣವೊಂದು ಬಂದಪ್ಪಳಿಸಿತು ನನ್ನ ರಥಕ್ಕೆ. ತರ‍್ರನೆ ತಿರುಗಿತು ರಥ, ಬುಗುರಿಯನ್ನೂ ನಾಚಿಸುವಂತೆ. ನಿಜಕ್ಕೂ ಅವನ ಆ ಕೌಶಲ್ಯ ವಿಶಿಷ್ಟವಾದದ್ದೆನಿಸಿತು. ಎದುರಾಳಿಗಳ ರಥವನ್ನು ತಿರುಗುವಂತೆ ಮಾಡುವ ಸಾಮರ್ಥ್ಯ ಇದ್ದವರನ್ನು ನಾನು ಮೂರು ಲೋಕಗಳಲ್ಲಿಯೂ ಕಂಡಿರಲಿಲ್ಲ. ಅದ್ಭುತ ಭಾವ ನನ್ನೊಳಗೆ ಮೂಡಿತು. ಆದರೂ ಅದನ್ನು ತೋರಗೊಡದೆ “ನೀನಿನ್ನೂ ಹುಡುಗ. ಏಕೆ ಅಳಿವೆ ನನ್ನಿಂದ. ನಿನ್ನ ತಂದೆಯನ್ನು ಬರಹೇಳು. ಕುದುರೆಯನ್ನು ಬಿಟ್ಟುಬಿಡು” ಎಂದೆ.ಅವನು ಒಪ್ಪಿಕೊಳ್ಳಲಿಲ್ಲ. ಅದೆಷ್ಟೋ ಸಮಯ ನಮ್ಮ ನಡುವೆ ಕದನ ನಡೆಯಿತು. ನನ್ನ ಸಾರಥಿಯನ್ನೇ ಕೊಂದುಹಾಕಿದ ಸುಧನ್ವ. ಆ ಕ್ಷಣದಲ್ಲಿ ರಥವನ್ನೂ ನಾನೇ ನಡೆಸಬೇಕಾಯಿತು. ‘ಇವನನ್ನು ಎದುರಿಸಲಾರದ ತನ್ನದೂ ಒಂದು ಜನ್ಮವೇ!’ ಎಂಬ ವೈರಾಗ್ಯ ಭಾವ ನನ್ನನ್ನು ಆವರಿಸಿತು. ಅಶ್ವಮೇಧ ಯಾಗಕ್ಕೆ ಬಂದ ಬಹುದೊಡ್ಡ ತೊಡಕಿದು ಎನಿಸಿತು. ಆಪದ್ಬಾಂಧವ ಕೃಷ್ಣನನ್ನು ಕರೆಯದೆ ಬೇರೇನೂ ದಾರಿಯಿಲ್ಲ ಎನ್ನುವುದು ಖಚಿತವಾಯಿತು.ನೆನೆದೆ ಕೃಷ್ಣನನ್ನು. ಸ್ಮರಿಸಿದೆ ಹರಿಯನ್ನು. ಕಡುಗಾಲದಲ್ಲಿ ಬಿಡದೆ ಕಾಪಾಡುವ ಪೊಡವಿಗೊಡೆಯ ನಾನಿದ್ದೆಡೆಯಲ್ಲಿ ತಕ್ಷಣವೇ ಪ್ರತ್ಯಕ್ಷನಾದ. ಅದೇನೋ ನೂತನ ಶಕ್ತಿ ನನ್ನೊಳಗೆ ಪಸರಿಸಿದಂತಾಯಿತು. ಕೃಷ್ಣನ ದಿವ್ಯ ಚರಣಗಳಿಗೆ ಮಣಿದೆ. ಆಶೀರ್ವದಿಸಿದ. ಬಿಗಿದಪ್ಪಿಕೊಂಡ.ಕೃಷ್ಣನನ್ನು ದರ್ಶಿಸುತ್ತಿದ್ದ ಸುಧನ್ವನೊಳಗೂ ಭಕ್ತಿಭಾವ ಮೂಡಿತು. ಅವನು ಪುಳಕಿತನಾಗಿದ್ದ. ಅವನಿದ್ದ ಸ್ಥಳದಿಂದಲೇ ಸಾಷ್ಟಾಂಗ ಪ್ರಣಾಮ ಮಾಡಿದ. ತನ್ನ ಶೌರ್ಯಕ್ಕೆ ಸಾಕಿದು ಕೃಷ್ಣದರ್ಶನ! ಏನು ನೆನೆಸಿದ್ದೆನೋ ಅದು ಕೈಗೂಡಿದೆ ಎಂದು ಹಿರಿಹಿರಿ ಹಿಗ್ಗಿದ ಹಂಸಧ್ವಜಸುತ.ಕೃಷ್ಣನೀಗ ನನ್ನ ಜೊತೆಗಿದ್ದಾನೆ ಎಂಬ ಅಸೀಮ ಧೈರ್ಯ ಮೂಡಿತು ನನ್ನಲ್ಲಿ. ಅದೇ ಹುಮ್ಮಸ್ಸಿನಿಂದ ಸುಧನ್ವನ ಶಿರವನ್ನು ಇನ್ನು ಮೂರು ಬಾಣಗಳನ್ನಷ್ಟೇ ಪ್ರಯೋಗಿಸಿ ಕತ್ತರಿಸಿಹಾಕುವ ಪ್ರತಿಜ್ಞೆ ಮಾಡಿದೆ. ನನ್ನನ್ನೂ ಮೀರುವ ಹುಮ್ಮಸ್ಸಿನಲ್ಲಿ ಸುಧನ್ವ “ನೀನು ಬಿಡುವ ಸರ್ವಶಕ್ತ ಮೂರು ಬಾಣಗಳನ್ನು ನಡುವೆಯೇ ಕತ್ತರಿಸಿಹಾಕದಿದ್ದರೆ ಕಡುಪಾತಕಿಗೊದುವ ಗತಿ ನನಗೆ ಒದಗಲಿ” ಎಂದು ಪ್ರತಿಜ್ಞೆ ಮಾಡಿದ.ಹೀಗೆ ಮಾತನ್ನು ಮುಗಿಸಿದ ಅವನು ಬಿಟ್ಟ ಬಾಣದಿಂದ ಕೃಷ್ಣನಿದ್ದ ನನ್ನ ರಥ ನಾಲ್ಕುನೂರು ಮೊಳಗಳಷ್ಟು ದೂರ ಹಾರಿಹೋಯಿತು. ತಕ್ಷಣವೇ ಕೃಷ್ಣನಿಗೆ ಸುಧನ್ವನ ಅಂತಃಶ್ಶಕ್ತಿಯ ಅರಿವಾಯಿತು ಎನಿಸುತ್ತದೆ. ನನ್ನಲ್ಲಿ “ಯಾರೆದುರೂ ಸೋಲುವವನಲ್ಲ ಈತ. ಇವನೊಡನೆ ಯುದ್ಧ ಮಾಡುವವರಿಲ್ಲ. ನೀನು ನನ್ನಲ್ಲಿ ಸಮಾಲೋಚಿಸದೆ ಪ್ರತಿಜ್ಞೆ ಮಾಡಬಾರದಿತ್ತು” ಎಂದ. ಕೃಷ್ಣನೇ ಈ ಮಾತನ್ನು ಆಡಿದ ಮೇಲೆ!… ನನ್ನಲ್ಲೀಗ ಅಳುಕು ಮೂಡತೊಡಗಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾವಾಣಿ ವೀಣಾ ಹೇಮಂತ್‌ ಗೌಡಪಾಟೀಲ್ “ಜಗವೇ ಒಂದು ನಾಟಕ ರಂಗ…. ಷೇಕ್ಸಪಿಯರ್ ( ಹುಟ್ಟು ಹಬ್ಬದ ನಿಮಿತ್ತ )”  ಶೇಕ್ಸ ಪಿಯರ್ ನ ನಾಟಕವೊಂದರಲ್ಲಿ ಬರುವ‘ ಈ ಜಗವೇ ಒಂದು ನಾಟಕ ರಂಗ,ನಾವೆಲ್ಲರೂ ಇಲ್ಲಿ ನಟಿಸುವವರು’ ಎಂಬುದು ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಕ್ಯವಾಗಿದೆ. ಯಾವ ರೀತಿ ಬಳಸಿದರೂ ಕೂಡ ಇದು ಎಲ್ಲರಿಗೂ ಅನ್ವಯವಾಗುವ ರೀತಿಯಲ್ಲಿ ಇರುವ ಕಾರಣವೇ ಇದರ ಬಳಕೆ ಹೆಚ್ಚಾಗಿರುವುದು. ಶೇಕ್ಸ್ ಪಿಯರ್ ನ ನಾಟಕದ ಒಂದು ಪಾತ್ರವಾದ ಜಾಕ್ ಮಾನವ ಜೀವನದ ಕುರಿತಾದ ತನ್ನ ಒಂದು ಸಂವಾದದಲ್ಲಿ ಹೇಳಿದ್ದಾನೆ. ಆಸ್ ಯು ಲೈಕ್ ಇಟ್ ಎಂಬ ನಾಟಕದಲ್ಲಿ ಜಾಕ್ ಎಂಬ ಪಾತ್ರಧಾರಿ ಮನುಷ್ಯನ ಬದುಕಿನ ಕುರಿತಾದ ಈ ಅತ್ಯಂತ ಸರಳವಾದ ಆದರೆ ಅಷ್ಟೇ ಶಕ್ತಿಶಾಲಿಯಾದ ಈ ಹೋಲಿಕೆಯ ಮಾತು ಸಾರ್ವತ್ರಿಕವಾಗಿ ಮೆಚ್ಚುಗೆಯನ್ನು ಬೆಳೆಸಿತು ಮಾತ್ರವಲ್ಲ ಎಲ್ಲೆಡೆ ತನ್ನದೇ ಆದ ರೀತಿಯಲ್ಲಿ ರೂಪಾಂತರಗೊಂಡು ಹರಡಿತು. ಇಲ್ಲಿ ನಾಟಕಕಾರರಾದ ಶೇಕ್ಸ ಪಿಯರ್ ಬದುಕನ್ನೇ ಒಂದು ರಂಗಭೂಮಿಯನ್ನಾಗಿಸಿದ್ದು ಮತ್ತಷ್ಟು ವಿಶೇಷ.  ಈ ಹೋಲಿಕೆಯು ಈ ಜಗತ್ತು ಒಂದು ನಾಟಕ ರಂಗ. ಈ ಭೂಮಿಗೆ ಬಂದಿರುವ ನಾವೆಲ್ಲರೂ ವಿವಿಧ ಪಾತ್ರಗಳನ್ನು ವಹಿಸಿರುವ ಪಾತ್ರಧಾರಿಗಳು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಭಿನ್ನ ಪಾತ್ರವನ್ನು ತನಗೆ ಕೊಟ್ಟ ಸಮಯದಲ್ಲಿ ಮಾಡಲೇಬೇಕು. ಇಲ್ಲಿ ವ್ಯಕ್ತಿಯ ಅಸ್ಮಿತೆಯು ಅನಿಶ್ಚಿತವಾಗಿದ್ದು ಬದುಕಿನ ,ಹತ್ತು ಹಲವು ವಿಭಿನ್ನ ಹಂತಗಳಲ್ಲಿ ಹಾದು ಹೋಗುವ ನಾವುಗಳು ವೈವಿಧ್ಯಮಯವಾದ ಭಾವ,ಭಂಗಿ, ಯೋಚನೆ, ಯೋಜನೆ  ಹಾಗೂ ಗ್ರಹಿಕೆಗಳನ್ನು ಹೊಂದಿರುತ್ತೇವೆ. ಇಲ್ಲಿ ಪ್ರತಿಯೊಬ್ಬರ ನಡವಳಿಕೆಯು ವಿಭಿನ್ನ ಅವರ ಆಸೆ ಆಕಾಂಕ್ಷೆಗಳು ಭಾವನೆಗಳು ಬದುಕಿನ ಕುರಿತಾದ ಅವರ ಕಲ್ಪನೆಗಳು ಬೇರೆಯೇ ಆಗಿರುತ್ತವೆ. ತೆರೆಯ ಮೇಲೆ ಪಾತ್ರಗಳು ಬಂದು ಹೋಗುವಂತೆ ನಾವು ಕೂಡ ಬದುಕು ಎಂಬ ಈ ರಂಗಭೂಮಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಿ ಹೊರಟು ಹೋಗುತ್ತೇವೆ. ಈ ಸಂವಾದವು ಮುಂದುವರೆದಂತೆ ಶೇಕ್ಸ ಪಿಯರ್ ಶೈಶವಾವಸ್ತೆಯಿಂದ ವೃದ್ಧಾಪ್ಯದವರೆಗಿನ ಮನುಷ್ಯನ ಬದುಕಿನ ಏಳು ಹಂತಗಳನ್ನು ಪಾತ್ರಧಾರಿಯ ಮೂಲಕ  ವಿವರಿಸುತ್ತಾರೆ. ಪ್ರತಿಯೊಂದು ಪಾತ್ರವು ತನ್ನದೇ ಆದ ಸಮಯದ ಮಿತಿಯಲ್ಲಿ ಸುತ್ತಮುತ್ತಣ ಸಾಮಾಜಿಕ ಬದುಕಿನೊಂದಿಗೆ ಮಿಳಿತಗೊಂಡು ರೂಪುಗೊಳ್ಳುವ ವಿಧವನ್ನು ತೋರ್ಪಡಿಸುತ್ತಾರೆ. ಈ ಹಂತಗಳು ಮನುಷ್ಯನ ಬದುಕಿನಲ್ಲಿ ಉಂಟಾಗುವ ನಿರಂತರ ಬದಲಾವಣೆಗಳ ಕಾರಣದಿಂದಾಗಿ ಆತನ ಅಸ್ತಿತ್ವದಲ್ಲಿನ ಬದಲಾವಣೆಯನ್ನು ಕೂಡ ತೋರ್ಪಡಿಸುತ್ತದೆ. ಮತ್ತೇ ಕೆಲವೊಮ್ಮೆ ವ್ಯಕ್ತಿಯು ತನ್ನ ವೈಯುಕ್ತಿಕ ಆಯ್ಕೆಗಳ ಪರಿಣಾಮವಾಗಿ ಹಾಗೂ ಬಾಹ್ಯವಾಗಿ ತಾನು ಎದುರಿಸುವ ಸವಾಲುಗಳ ಪರಿಣಾಮವಾಗಿ ಬದಲಾಗುತ್ತಾನೆ ಎಂಬುದನ್ನು ಆತ ತನ್ನ ಪಾತ್ರಗಳ ಮೂಲಕ ಸೂಚಿಸುತ್ತಾರೆ. ಇದು ವ್ಯಕ್ತಿಯ ಬದುಕಿನ ವಿಶ್ವಾಸಾರ್ಹತೆಯ ಪ್ರತಿಫಲನವಾಗಿದ್ದು ಬದುಕನ್ನು ಆತ ರೂಢಿಸಿಕೊಂಡಂತೆ ಬದುಕು ಆತನಿಗೆ ದೊರೆಯುತ್ತದೆ. ಮನುಷ್ಯ ಮುಖವಾಡ ಧರಿಸಿಕೊಂಡು ಬದುಕುತ್ತಾನೆಯೋ ಇಲ್ಲವೋ ಎಂಬುದನ್ನು ಆತನ ನಡತೆಯಿಂದ ಎಷ್ಟೋ ಬಾರಿ ಗೊತ್ತು ಮಾಡಿಕೊಳ್ಳಬಹುದು…. ಷೇಕ್ಸ್ ಪಿಯರ್ ಇಲ್ಲಿ ಹೇಳುವುದು ಮನುಷ್ಯ ಸಂಘ ಜೀವಿ. ಸಾಮಾಜಿಕ ರೀತಿ ನೀತಿಗಳು ಬಹಳಷ್ಟು ಬಾರಿ ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ. ಅಂತಯೇ ಬದುಕಿನ ಆತನ ಪಾತ್ರವನ್ನು ಆತ ತನಗೆ ಸರಿ ಕಂಡಂತೆ ಬದುಕುತ್ತಾನೆ.  ಕೆಲಬಾರಿ ಮನುಷ್ಯ ಆತನ ಅಸಲಿಯತ್ತೇ ಗೊತ್ತಿರದಂತಹ ಮುಖವಾಡದ ಬದುಕನ್ನೇ ಬದುಕುತ್ತಾನೆ, ಬಹಳಷ್ಟು ಬಾರಿ ಮುಖವಾಡಗಳು ಕಳಚಿ ಬೀಳುತ್ತವೆ. ಆದಾಗ್ಯೂ, ಹೋಲಿಕೆ ಸಂಪೂರ್ಣವಾಗಿ ನಿರ್ಣಾಯಕವಲ್ಲ. ನಟರು ನಾಟಕಕ್ಕೆ ಜೀವ ತುಂಬುವಂತೆಯೇ, ವ್ಯಕ್ತಿಗಳು ತಮ್ಮ ಕ್ರಿಯೆಗಳ ಮೂಲಕ ಅಸ್ತಿತ್ವಕ್ಕೆ ಅರ್ಥವನ್ನು ನೀಡುತ್ತಾರೆ. ಪ್ರತಿಯೊಂದು ಪಾತ್ರವು ತಾತ್ಕಾಲಿಕವಾಗಿದ್ದರೂ ಸಹ, ಜೀವನದ ವಿಶಾಲ ಕಥೆಗೆ ಕೊಡುಗೆ ನೀಡುತ್ತದೆ. ಅರ್ಥವು ಶಾಶ್ವತತೆಯಿಂದಲ್ಲ, ಆದರೆ ಈ ಬದಲಾಗುತ್ತಿರುವ ಪಾತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉದ್ಭವಿಸುತ್ತದೆ.ತಾತ್ವಿಕ ದೃಷ್ಟಿಕೋನದಿಂದ, ಈ ಸಾಲು ಬದಲಾವಣೆಯ ಅನಿವಾರ್ಯತೆ ಮತ್ತು ಸಮಯದ ಅಂಗೀಕಾರವನ್ನು ಎತ್ತಿ ತೋರಿಸುತ್ತದೆ. ಜೀವನದ ಯಾವುದೇ ಹಂತವು ಶಾಶ್ವತವಲ್ಲ; ಪ್ರತಿಯೊಂದೂ ಅಂತಿಮವಾಗಿ ಇನ್ನೊಂದಕ್ಕೆ ದಾರಿ ಮಾಡಿಕೊಡುತ್ತದೆ. ಇದು ಶ್ರೀಮಂತಿಕೆ ಮತ್ತು ಅಸ್ಥಿರತೆಯ ಭಾವನೆಯನ್ನು ಸೃಷ್ಟಿಸುತ್ತದೆ – ಜೀವನವು ಅನುಭವದಿಂದ ತುಂಬಿದೆ, ಆದರೆ ಅಂತಿಮವಾಗಿ ಕ್ಷಣಿಕವಾಗಿದೆ.ಆಧುನಿಕ ಜಗತ್ತಿನಲ್ಲಿ ಈ ಕಲ್ಪನೆಯು ಪ್ರತಿಧ್ವನಿಸುತ್ತಲೇ ಇದೆ, ಅಲ್ಲಿ ಜನರು ನಿಯಮಿತವಾಗಿ ವಿದ್ಯಾರ್ಥಿ, ವೃತ್ತಿಪರ, ಪೋಷಕರು ಅಥವಾ ಸ್ನೇಹಿತರಂತಹ ಪಾತ್ರಗಳ ನಡುವೆ ಬದಲಾಗುತ್ತಾರೆ. ನಡವಳಿಕೆಯು ಹೆಚ್ಚಾಗಿ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ, ಶೇಕ್ಸ್‌ಪಿಯರ್ ವಿವರಿಸಿದ ಅದೇ ಪ್ರದರ್ಶನದ ಅಂಶವನ್ನು ಪ್ರತಿಬಿಂಬಿಸುತ್ತದೆ. ಅವರ ಒಳನೋಟವು ಸಾರ್ವತ್ರಿಕ ಮಾನವ ಅನುಭವವನ್ನು ಸೆರೆಹಿಡಿಯುವುದರಿಂದ ಅದು ಪ್ರಸ್ತುತವಾಗಿದೆ.ಈ ಸಾಲಿನ ಬಲವು ಅದರ ಸ್ಪಷ್ಟತೆ ಮತ್ತು ಆಳದಲ್ಲಿದೆ. ಜೀವನವನ್ನು ಒಂದು ಹಂತಕ್ಕೆ ಹೋಲಿಸುವ ಮೂಲಕ, ಶೇಕ್ಸ್‌ಪಿಯರ್ ಗುರುತು, ನಡವಳಿಕೆ ಮತ್ತು ಸಮಯವನ್ನು ಅರ್ಥಮಾಡಿಕೊಳ್ಳಲು ಸರಳವಾದ ಆದರೆ ಆಳವಾದ ಮಾರ್ಗವನ್ನು ನೀಡುತ್ತಾರೆ. ರೂಪಕವು ಗ್ರಹಿಸಲು ಸುಲಭ, ಆದರೆ ವ್ಯಾಖ್ಯಾನದಲ್ಲಿ ಸಮೃದ್ಧವಾಗಿದೆ.ಕೊನೆಯಲ್ಲಿ, “ಇಡೀ ಜಗತ್ತು ಒಂದು ವೇದಿಕೆ” ಎಂಬುದು ಕಾವ್ಯಾತ್ಮಕ ಅಭಿವ್ಯಕ್ತಿಗಿಂತ ಹೆಚ್ಚಿನದಾಗಿದೆ – ಇದು ಮಾನವ ಅಸ್ತಿತ್ವದ ಆಳವಾದ ಪ್ರತಿಬಿಂಬವಾಗಿದೆ. ಜೀವನವು ಒಂದೇ, ಸ್ಥಿರ ಗುರುತಿನಿಂದ ವ್ಯಾಖ್ಯಾನಿಸಲ್ಪಟ್ಟಿಲ್ಲ, ಆದರೆ ಸಮಯ, ಸಮಾಜ ಮತ್ತು ಅನುಭವದಿಂದ ರೂಪುಗೊಂಡ ಪಾತ್ರಗಳ ಸರಣಿಯಿಂದ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಇದು ನಮಗೆ ನೆನಪಿಸುತ್ತದೆ. ಈ ಕಲ್ಪನೆಯ ಮೂಲಕ, ಶೇಕ್ಸ್‌ಪಿಯರ್ ನಾವು ಹೇಗೆ ಬದುಕುತ್ತೇವೆ, ನಾವು ವಹಿಸಿಕೊಳ್ಳುವ ಪಾತ್ರಗಳು ಮತ್ತು ನಮ್ಮ ದಿನಚರಿಯ ಉದ್ದಕ್ಕೂ ನಾವು ಸೃಷ್ಟಿಸುವ ಅರ್ಥದ ಬಗ್ಗೆ ಯೋಚಿಸಲು ಪ್ರೋತ್ಸಾಹಿಸುತ್ತಾನೆ. ವೀಣಾ ಹೇಮಂತ್ ಗೌಡ ಪಾಟೀಲ್

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಡಾ.ಶಶಿಕಾಂತಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತಪಟ್ಟಣ ರಾಮದುರ್ಗ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಗುರುವಾದರೂ ಲಿಂಗವ ಪೂಜಿಸಬೇಕು, ಲಿಂಗವಾದರೂ ದೇವತ್ವವಿರಬೇಕು, ಜಂಗಮವಾದರೂ ಲಿಂಗವ ಪೂಜಿಸಬೇಕು, ಜಂಗಮಕ್ಕೆ ಲಿಂಗವಿಲ್ಲದೆ ಪ್ರಮಾಣವಿಲ್ಲ, ಅದಿಯಾಧಾರವಿಲ್ಲದೆ ಜಗವೇನೂ ಇಲ್ಲ, ಆರಿದಹನೆಂದರೆ ಅಂಗದಲ್ಲಿ ಲಿಂಗವಿರಬೇಕು, ಕಲಿದೇವಯ್ಯನರಿಯುವುದಕ್ಕೆ, ಇದೇ ಮಾರ್ಗ ಚಂದಯ್ಯ. ಮಡಿವಾಳ ಮಾಚಿದೇವ ಶತಮಾನದದಿಂದಲೂ ನಮ್ಮ ಸಮಾಜವು ಶೋಷಣೆ ದಬ್ಬಾಳಿಕೆ ಸುಲಿಗೆ ಕಂದಾಚಾರದಿಂದ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡು ಗಟ್ಟಿ ಮೃತ ಪ್ರಾಯವಾಗಿತ್ತು .ವೈದಿಕರ ಮನುವಾದಿಗಳ ಅಸ್ಪ್ರಶ್ಯತೆ ಆಚರಣೆ , ಜಾತಿ ಪದ್ಧತಿ ತಾಂಡವವಾಡುತಿತ್ತು .ಯಜ್ಞ ಹವನ ಹೋಮ ಪ್ರಾಣಿ ಬಲಿ ಸ್ತ್ರೀ ಶಿಶು ಹತ್ತ್ಯೆ ಸತಿ ಪದ್ಧತಿ ಹೀಗೆ ದಲಿತರು ಪಂಚಮ ಸ್ತ್ರೀ ಕುಲವು ನಲುಗಿ ಹೋಗಿತ್ತು. ಹನ್ನೆರಡನೆಯ ಶತಮಾನವು ಈ ಜಗವು ಕಂಡ ಸುವರ್ಣ ಯುಗ . ಬಸವನ್ನನೆಂಬ ವೈಚಾರಿಕ ಪುರುಷ ಕರ್ನಾಟಕದ ಇಂದಿನ ಬಿಜಾಪುರದ ಬಾಗೇವಾಡಿಯಲ್ಲಿ ಮಧುವರಸ ಮಾದಲಾ೦ಬಿಕೆಯರ ಹೊಟ್ಟೆಯಲ್ಲಿ 1131 ರಲ್ಲಿ ಹುಟ್ಟಿದನು . ಬಸವಣ್ಣ ಜಗವು ಕಂಡ ಶ್ರೇಷ್ಟ ದಾರ್ಶನಿಕ ಚಿಂತಕ ಮುಕ್ತ ಸಮಾಜದ ಕಾರಣಕರ್ತ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಶಾಂತಿ ಸಹ ಬಾಳ್ವೆ ,ದುಡಿಮೆ ಕಾಯಕ ದಾಸೋಹ , ಬದುಕಿನಲ್ಲಿ ಧರ್ಮದ ಸರಳ ಆಚರಣೆ ,ನೀತಿ,ತತ್ವ ವೈಚಾರಿಕತೆ ಅಭಿವ್ಯಕ್ತಿ ಸ್ವಾತಂತ್ರ ಧಾರ್ಮಿಕ ಸಾಮಾಜಿಕ ಚಿಂತನೆ ಹೀಗೆ ಪ್ರತಿ ಹಂತದಲ್ಲೂ ಬಸವಣ್ಣ ಗಟ್ಟಿ ಮುಟ್ಟಾದ ಆಯಾಮವನ್ನು ಸ್ರಷ್ಟಿಸಿದನು. ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ ಸ್ವತಂತ್ರ ಧರ್ಮ,ಬುದ್ಧನಿಂದ ಆಗದ ಅಂತರ ಜಾತಿ ವಿವಾಹ ಬಸವಣ್ಣನವರು ನೆರವೇರಿಸಿದರು . ಶತಮಾನದ ಜಾತಿ ಶೋಷಣೆ ದಬ್ಬಾಳಿಕೆ ಮೋಸ ಸುಲಿಗೆಗೆ ಬಸವಣ್ಣನವರು  ಕೊನೆ ಹಾಡಿದರು . ದೇವರು ಮತ್ತು ಭಕ್ತನ ಮಧ್ಯೆ ಇರುವ ಪುರೋಹಿತರ ದಲ್ಲಾಳಿತನಕ್ಕೆ ಏಟು ಬಿತ್ತು. ಬಸವ ಪೂರ್ವದಲ್ಲಿ ದಲಿತರು ಮಹಿಳೆಯರು ಪಂಚಮರು ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದರು.ಅವರಿಗೆ ಧಾರ್ಮಿಕ ಸಾಮಾಜಿಕ,ಆರ್ಥಿಕ ರಾಜಕೀಯ ಹಕ್ಕು ಸಿಕ್ಕಿರಲಿಲ್ಲ .ಬಸವಣ್ಣ ಆಗಮನದಿಂದ ಎಲ್ಲರೂ ಎಲ್ಲಾ ಬಂದನದಿಂದ ಮುಕ್ತವಾದರು . ಕರ್ಮಲತೆಯ ಜನಿವಾರ ಕಿತ್ತು ಸನಾತನಿಗಳಿಗೆ ಸವಾಲು ನೀಡಿದ ಬಸವಣ್ಣ ಮನುವಾದಿಗಳಿಗೆ ನಡುಕ ಹುಟ್ಟಿಸಿದನು . ಬಸವಣ್ಣ ವರ್ಗ ವರ್ಣ ಲಿಂಗ ಆಶ್ರಮ ಬೇಧಗಳನ್ನು ಕಿತ್ತು ಸರ್ವಕಾಲಿಕ ಸಮಾನತೆಯ ಸಮಾಜವನ್ನು ಸುಂದರಗೊಳಿಸಿದರು. ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿಗೆ ಬಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ . ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ  Karl Marx has taught us the dignity of labour but Basavanna has taught us dignity and divinity of labour ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣನವರು  ಹೊಸ ಚೇತನ ನೀಡಿದರು  . ಬತ್ತಿ ಹೋಗಿದ್ದ ಬದುಕಿಗೆ ಭರವಸೆ ಆದನು ಬಸವಣ್ಣ . ಬಸವ ಪೂರ್ವ ಯುಗದಲ್ಲಿ ದಲಿತರಿಗೆ ಪಂಚಮರಿಗೆ ಹೊಲೆಯರಿಗೆ ಮಂದಿರ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲಾ.ಬ್ರಾಹ್ಮಣರ ಹೊರತು ಪಡಿಸಿ ಇನ್ನೊಬ್ಬರಿಗೆ ಪೂಜಿಸುವ ಅಧಿಕಾರವಿರಲಿಲ್ಲ . ಅವರನ್ನು ಪಶುಗಳಂತೆ ಕಾಣುವ ಕಾಲವದು.ನಾಯಿ ಬೆಕ್ಕು ಆಕಳು ಕುರಿಗಳನ್ನೂ ಮುಟ್ಟುವ ಬ್ರಾಹ್ಮಣರು ಮನುಷ್ಯರನ್ನು ಮುಟ್ಟುತ್ತಿರಲಿಲ್ಲ .ಇಂತಹ ಅಸಮಾನತೆ ಕೊನೆಗಾಣಿಸಲು ಬಸವಣ್ಣನವರು  ಇಷ್ಟ ಲಿಂಗವನ್ನು ಕಂಡು ಹಿಡಿದರು . ನಿರಾಕರ ನಿರ್ಗುಣ ನಿರಹಂಕಾರ  ಕುರುಹನ್ನು ತಮ್ಮ ಕರಸ್ಥಲಕ್ಕೆ ಕೊಟ್ಟರು ಬಸವಣ್ಣನವರು. ಶರಣರ ಅರಿವೇ ಗುರು ಆಚಾರವೇ ಲಿಂಗ ಶರಣರ ಅನುಭಾವವೇ ಜಂಗಮ ,ಇಂತಹ ಒಂದು ಸರಳ ಸುಂದರ ಸಿದ್ಧಾಂತವೇ ಶರಣ ಸಾಹಿತ್ಯ . ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ! ಸಕಲ ವಿಸ್ತಾರದ ರೂಹು ನೀನೇ ದೇವ. ವಿಶ್ವತಶ್ಚಕ್ಷು ನೀನೇ ದೇವ, ವಿಶ್ವತೋಮುಖ ನೀನೇ ದೇವ. ವಿಶ್ವತೋಬಾಹು ನೀನೇ ದೇವ. ವಿಶ್ವತೋಪಾದ ನೀನೇ ದೇವ. ಕೂಡಲಸಂಗಮದೇವ. ವಿಶ್ವಾತ್ಮನನ್ನು ನಿರಾಕರಗೊಳಿಸಿ ಅವನ ಬಾಹು ಅವನ ಕಣ್ಣು ಅವನ ಮುಖ ಅವನ ರೂಪ ಆತನ ಜ್ಞಾನ ಸಮಾಜವೇ ಆಗಿರುತ್ತದೆ .ಒಂದು ಕಡೆಗೆ ಸ್ಥಾವರವನ್ನು ವಿರೋದಿಸಿದ ಬಸವಣ್ಣ ಮತ್ತು ಶರಣರು ಇಷ್ಟಲಿಂಗವನ್ನು ಪ್ರತಿಪಾದಿಸಿದರು. ಬಸವಣ್ಣ ಮೂರ್ತಿ ಭಂಜಕ  , ಸ್ಥಾವರವನ್ನು ವಿರೋಧಿಸಿದವನು . ತನ್ನ ನಂಬಿದವರಿಗೆ ಒಂದು ಪರ್ಯಾಯ ಮತ್ತು ನಿಶ್ಚಿತ ಉಪಾಸನ ಆಯಾಮ ನೀಡಲು ಇಷ್ಟಲಿಂಗವನ್ನು ಕಂಡು ಹಿಡಿದರು. ಇದು ಮನ್ಸುಹ್ಯನ ಚಿತ್ಕಳೆ ಪ್ರತಿಬಿಂಬಿಸುತ್ತದೆ , ಬಸವ ಕಾಲದ ಎಲ್ಲ ಶರಣರಿಗೆ ಸ್ತ್ರೀ ಮತ್ತು ಪುರುಷರಿಗೆ ಇಷ್ಟಲಿಂಗ ಕಡ್ಡಾಯ ,ಕಾಯಕ ಅನಿವಾರ್ಯ, ದಾಸೋಹ ಅಗತ್ಯತೆ . ಜಗತ್ತಿನಲ್ಲಿ ದುಡಿದು ತಿನ್ನುವ ಧರ್ಮ ಬಂದ ಮತ್ತು  ಆದಾಯದಲ್ಲಿ ಹಂಚಿ ತಿನ್ನುವ ಧರ್ಮವಿದ್ದರೆ ಅದು ಬಸವ ಧರ್ಮ ,ಲಿಂಗಾಯತ ಧರ್ಮ . ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವ ನೀ ಕೇಳಯ್ಯ ,ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಗುಡಿ ಗುಂಡಾರ ಮಠಗಳ ಸಂಸ್ಕೃತಿ ಗಟ್ಟಿಯಾಗಿ ವಿರೋಧಿಸಿದ ಬಸವಣ್ಣ ಮನುಷ್ಯನ ಚೈತನ್ಯವೇ ದೇವರು ಆ ಪರಮಾತ್ಮನ ಕುರುಹು ಇಷ್ಟಲಿಂಗ . ತನ್ನ ತಾ ಅರಿವ ಅನನ್ಯ ಪ್ರಯೋಗವೇ ಇಷ್ಟಲಿಂಗ ಸಾಧನೆ .ಆದರೆ ಇದನ್ನೇ ಆದರಿಸಿ ಕುಳಿತು ಕೊಳ್ಳುವ ಸಾಧಕರಿಗೆ ಬಸವಣ್ಣ ಕಿವಿ ಮಾತು ಹೇಳುತ್ತಾನೆ . ಕಾಯಕದಲ್ಲಿ ನಿರತನಾದರೆ ಗುರುಲಿಂಗ ಜಂಗಮದ ಹಂಗು ತೊರೆಯಬೇಕು . ಕಾಯಕವೇ ಕೈಲಾಸ , ದುಡಿಯದೆ  ಇನ್ನೊಬ್ಬರ ಹಂಗಿನಲ್ಲಿ ಉಣ್ಣುವ ಹಾಗಿಲ್ಲ  ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಕೂಡಲ ಸಂಗಮ ದೇವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು. ಆಧ್ಯಾತ್ಮವೇ ಸರ್ವಸ್ವವಲ್ಲ ಕಾಯಕ ದಾಸೋಹದಿಂದ ಮಾಡುವ ಅನುಭಾವವೇ ಆಧ್ಯಾತ್ಮದ ಮೂಲ ಮಂತ್ರವಾಗಿತ್ತು .ರಾಜನಾಗಲಿ ರಂಕನಾಗಲಿ,ಮಂತ್ರಿಯಗಲಿ ಸೇವಕನಾಗಲಿ ಎಲ್ಲರಿಗೂ ಕಾಯಕ ಮತ್ತು ದಾಸೋಹ ಕಡ್ಡಾಯ ಮತ್ತು ಅನಿವಾರ್ಯವಾಗಿತ್ತು . ಭಕ್ತನ ಶರೀರವೇ ಲಿಂಗಮಯವಾಗಬೇಕು .,ಆತನ ಚಿಂತನವು ಸಮಾಜ ಮುಖಿಯಾಗಿರಬೇಕು . ಮರದ ಬಾಯಿ ಬೇರು ಮತ್ತು ಲಿಂಗದ ಬಾಯಿ ಜಂಗಮವಾಗಿರಬೇಕು ಇದು ಬಸವ ವಚನದ ಆಶಯವಾಗಿದೆ . ಇಲ್ಲಿ ಜಂಗಮ ಜಾತಿ ಅಲ್ಲ ಅದು ಸಮಾಜ ವ್ಯವಸ್ಥೆ ,ಸಮುದಾಯಮಾತ್ರ .ಲಿಂಗವು ನಮ್ಮ ಅರಿವಿನ ಕುರುಹು ಇತ್ತೀಚಿಗೆ ನಮ್ಮ ಶರೀರದ ಪ್ರಮುಖ ಕೇಂದ್ರ ಮೆದುಳು ಅಲ್ಲಿ ಆಜ್ಞಾ ಚಕ್ರವನ್ನು ವಿಜ್ಞಾನಿಗಳು ಉಪಕರಣಗಳ ಮುಖಾಂತರ ಅರಿವಿನ ಆಜ್ಞಾ ಚಕ್ರ ಕೇಂದ್ರವನ್ನು Pineal Gland ನೋಡಿದಾಗ ಅದು ಲಿಂಗದ ಆಕಾರದ್ದಾಗಿದೆ . ಶರಣರು ವಿಜ್ಞಾನವನ್ನು ಬಲ್ಲವರು . ಇದನ್ನು ಅಲ್ಲಮರು ಅರಿವನರಿಯಲೆಂದು ಗುರು ಕೊಟ್ಟ ಕುರುಹ ಕುರುಹ ಹಿಡಿದು ಅರಿವ ಮರೆತ ಕುರುಬನ ನೋಡ ಗುಹೇಶ್ವರ ಇಂದು ಲಿಂಗಾಯತರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಕೇವಲ ಲಿಂಗವ ಕಟ್ಟಿದರೆ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದರೆ ಲಿಂಗಾಯತರೇ ,ಇವು ಎರಡೂ ಅಲ್ಲ ,ಲಿಂಗ ಜಂಗಮದ ಸಮಷ್ಟಿಯ ಪ್ರಜ್ಞೆ ಹೊಂದಿ ಕಾಗೆ ಕೋಳಿ ಪಶು ಪಕ್ಷಿಗಳನೋಳಗೊಂಡ ಸಕಲ ಜೀವಾತ್ಮರ    ಲೇಸ ಬಯಸುವವನೆ ಲಿಂಗಾಯತ .   ಲಿಂಗಾಯತ   ಎನ್ನುವುದು ಧರ್ಮವೆನ್ನುವದಕ್ಕಿ೦ತಲೂ  ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿಯ ಚಳುವಳಿ ಎನ್ನಬಹುದು. ಅತ್ಯಂತ ಸಾಮಾನ್ಯರಿಂದ ರೂಪಗೊಂಡ ಈ ಚಳುವಳಿಯ   ನೇತಾರ ಬಸವಣ್ಣನವರು  .    ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಅಂತ ಜನಪದಿಗರು ಬಸವನ ಆಗಮನವನ್ನು ಹೊಗಳಿದ್ದಾರೆ ಅದೇ ರೀತಿ ಕಾಯಕವ ಕಲಿಸುದಕೆ ನಾಯಕನು ಬಸವಯ್ಯ ತಂದು ಚೆಲ್ಲಿದನು ಹೊಸಬೆಳಕ ,ಹೊಸಮತದ ಸೂರ್ಯ ಉದಯಿಸಿದ .ಬಸವಣ್ಣ ಲಿಂಗಾಯತ ಧರ್ಮದ ಚಳುವಳಿಯ ನೇತಾರ ಎಂದು ನಮ್ಮ ಮೂಲನಿವಾಸಿಗಳು ಹಾಡಿ ಹೊಗಳಿದ್ದಾರೆ . *Istalinga  is  not  an  object , it  is  subject   to    realize  consciousness  .*  ಇಷ್ಟಲಿಂಗವೂ ಒಂದು ಸ್ಥಾವರವೇ? ಎಂದು ವಾದಿಸುವರೂ ಉಂಟು ಅಹುದು ಸಮುದಾಯದ ಪ್ರಜ್ಞೆ ಮರೆತು ,ಕೇವಲ ಆಸ್ತಿ ಹಣ ಸುಖಕ್ಕಾಗಿ ಹಪಹಪಿಸುವ ಜನರಿಗೆ ಬಸವಣ್ಣ ಚಾಟಿ ಏಟು ಕೊಡುತ್ತಾರೆ . ಕಲ್ಲ ನಾಗರ ಕಂಡರೆ ಹಾಲ ನೆರೆವರಯ್ಯ ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ ಉಂಬುವ  ಜಂಗಮನಿಗೆ ಎಡೆಯಿಲ್ಲ ನಡೆಯೇ೦ಬರು ಉ೦ಬದಾ ಲಿಂಗಕ್ಕೆ ಬೋಣವ ಹಿಡಿವರು ಕೂಡಲ ಸಂಗನ ಶರಣರ ಉದಾಸೀನವ ಮಾಡಿದರೆ  ಕಲ್ಲು ತಾಗಿದ ಮಿಟ್ಟೆ  ಎಂತಿರ್ಪರಯ್ಯಾ  ಅದೇ ರೀತಿ ಬಸವಣ್ಣನವರು ವೃಥಾ ಆಚರಣೆಗೆ ಮಹತ್ವ ಕೊಡದೆ  ಕಾಯಕ ದಾಸೋಹಕ್ಕೆ ಮಹತ್ವ ನೀಡಿ ಸಂಮಜವನ್ನು ಉನ್ನತಿಗೆ ತರಲು ಪ್ರಯತ್ನಿಸಿದರು..  ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಕೂಡಲ ಸಂಗಮ ದೇವಾ ಜಂಗಮಕ್ಕೆ ಎರೆದರೆ ಸ್ಥಾವರವು ನೆನೆದಿತ್ತು.  ಇಲ್ಲಿಯೂ ಕೂಡ ಬಸವಣ್ಣ ಲಿಂಗವನ್ನು ಪೂಜಿಸಿ ಅದರ ಹಿಂದಿನ ಕರ್ತವ್ಯ ಮತ್ತು ಸಮಾಜ ನಿರ್ವಹನೆಯ ಆದ್ಯತೆಯ ಬಗ್ಗೆ ಬಸವಣ್ಣ ಎಚ್ಚರಿಸುತ್ತಾನೆ .  ಅಮಾಜಕ್ಕೆ ನೀಡಿದರೆ ಲಿಂಗವು ಸಂತೋಷದಿಂದ ಉಬ್ಬಿ ಉಬ್ಬಿ ನೆನೆಯುವುದು ಅಂತಾ ಅರ್ಥ . ಬಸವಣ್ಣನವರಿಗೆ ಇಂತಹ ಭಕ್ತಿಯ ಮಾಡುವವರನ್ನು ಕಂಡರೆ ಎಲ್ಲಿಲ್ಲದ ಸಂತೋಷ . ಅಡವಿಯಲ್ಲೊಬ್ಬ ಕಡು ನೀರಡಿಸಿ, ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯ! ಕುರುಡ ಕಣ್ಣ ಹಡೆದಂತೆ, ಬಡವ ನಿಧಾನವ ಕಂಡಂತಾಯಿತ್ತಯ್ಯ! ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ. ನೀರಡಿಕೆಯದವ ಕಾಡಿನಲ್ಲಿ  ಅಲೆದು ಸುಸ್ತಾದಾಗ ಕಾಲಿನ ಬಳಿಯೇ ನೀರು ಕಂಡಂತೆ ,ಮತ್ತು ಹುಟ್ಟು ಕುರುಡುನಿಗೆ ಕಣ್ಣು ಬಂದಂತೆ ಮತ್ತು ಬಡವನಿಗೆ ನಿಧಿ ಸಿಕ್ಕಂತೆ ಶರಣರ ಬರವು ಅಂತ ಹೇಳುತ್ತಾ ವಿಷಯ ನಿಷ್ಟತೆಗೆ ಆದ್ಯತೆನೀಡಿದ್ದಾನೆ .     ಶರಣರು ಹಿಂದುಗಳಂತೆ ಬಹುದೆವೊಪಾಸನೆ ಆಚರಿಸಲಿಲ್ಲ, ಅವರಿಗೆ ತಮ್ಮ ಆತ್ಮದ ಚಿತ್ಕಳೆಯನ್ನು ಪೂಜಿಸುವ ಸರಳ ವಿಧಾನ ಸಿಕ್ಕಿತು . ಭಾರತಿಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕಲ್ಲು ಮಣ್ಣು ಮರ ಪೂಜಿಸುತ್ತಾರೆ ,ಇದನ್ನು ವ್ಯಂಗವಾಗಿ ಹೇಳಿದ ಬಸವಣ್ಣನವರು .ಕಲ್ಲು ದೈವ ಮರ ದೈವ ಮಡಿಕೆ ದೈವ ಕೊಳಗ ದೈವ ಬಿಲ್ಲು ನಾರಿ ದೈವ ದೈವ ದೈವ ಕಾಲಿಡಲಿ೦ಬಿಲ್ಲಾ ಎಂದಿದ್ದಾರೆ. ನೀರ ಕಂಡಲ್ಲಿ ಮೂಳಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ   ಬತ್ತುವ ಜಲವ ಒಣಗುವ ಮರವ ನೆಚ್ಚಿದವರ  ನಿಮ್ಮನೆತ್ತ ಬಲ್ಲ ನಮ್ಮ ಕೂಡಲ ಸಂಗಮದೇವ  ನೀರು ನದಿ ಭಾವಿ ಕೆರೆಯಲ್ಲಿ ಬತ್ತಿಹೊಗುವದು ,ಮರವು ನೀರಿಲ್ಲದೆ ಒಣಗುವದು ಇಂತಹ ಭೌತಿಕ ವಸ್ತುಗಳನ್ನು ದೇವರು ಅಂತ ನಂಬಿದ ನಿಮ್ಮನ್ನು ಯಾರು ನಂಬುವರು . ಇದು ಅಪ್ಪ ಬಸವನ ವಚನ . ದೇವಲೋಕ ಮರ್ತ್ಯಲೋಕದ ಬೇರೆ ಬೇರೆ ಕಲ್ಪನೆಗಳನ್ನು ಶರಣರು ಒಪ್ಪುವದಿಲ್ಲ ,  ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?  ಇಹಲೋಕದೊಳಗೇ ಮತ್ತನಂತಲೋಕ! ಶಿವಲೋಕ ಶಿವಾಚಾರವಯ್ಯ,  ಶಿವಭಕ್ತನಿದ್ದ ಠಾವೇ ದೇವಲೋಕ, ಭಕ್ತನಂಗಳವೇ ವಾರಣಾಸಿ,  ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ. ಇದು ಭಕ್ತ ಪ್ರಧಾನವಾದ ಚಿಂತನೆ ಕಾರಣ ಭಕ್ತನ ಕಾಯಕ ಪರಿಶುದ್ಧವಾಗಿದ್ದು ಆತನ ದಾಸೋಹವು ಶ್ರೇಷ್ಟತೆಯನ್ನು ಪಡೆದು ಸಮಾಜ ಮುಖಿಯಾದ ಜೀವನಕ್ಕೆ ನಾಂದಿ ಹಾಡುತ್ತದೆ . ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?  ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?  ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ  ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ ಬಸವಣ್ಣನವರ

ಸಾವಿಲ್ಲದ ಶರಣರು ಮಾಲಿಕೆ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಡಾ.ಶಶಿಕಾಂತಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-116 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಗಂಭೀರವಾದ ಸುಮತಿಯ ಆರೋಗ್ಯ ಪರಿಸ್ಥಿತಿ ವೈದ್ಯರು ಮಗಳನ್ನು ಉದ್ದೇಶಿಸಿ….”ಮಗು ನೀನು ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡು ಬಾ”….. ಎನ್ನಲು ಮಗಳು ಸರಿ ಎನ್ನುವಂತೆ ತಲೆಯಾಡಿಸಿ, ವೈದ್ಯರ ಕೊಠಡಿಯಿಂದ ನೇರವಾಗಿ ಪ್ರಯೋಗಾಲಯಕ್ಕೆ ಹೋಗಿ ತಾಯಿಯ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡಳು. ಕೊಠಡಿಗೆ ಬಂದಾಗ ವೈದ್ಯರು ಸುಮತಿಯ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು. ಒಮ್ಮೆ ಪರೀಕ್ಷಿಸಿ ಸಂದೇಹ ಬಂದು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದರು. ಮಗಳು ಕೊಠಡಿಯ ಒಳಗೆ ಬಂದು ವೈದ್ಯರ ಮೇಜಿನ ಮೇಲೆ ವರದಿಯನ್ನು ಇಟ್ಟಳು. ಸುಮತಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದ ವೈದ್ಯರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು….”ಕಳೆದ ಬಾರಿ ನೀವು ಬಂದಾಗ ನಿಮಗೆ ರಕ್ತದ ಒತ್ತಡವು ಇತ್ತೇ ಸುಮತಿ ಅವರೇ?…ಎಂದು ಕೇಳಿದಾಗ, ಮಗಳು ಅಮ್ಮನ ಹಳೆಯ ಚೀಟಿಗಳನ್ನು ವೈದ್ಯರ ಮುಂದೆ ಹಿಡಿದಳು. ಅವುಗಳನ್ನು ತೆಗೆದುಕೊಂಡು ವೈದ್ಯರು ಪರೀಕ್ಷಿಸಿದರು. ಆದರೆ ಆಗ ರಕ್ತದೊತ್ತಡವು ಸರಿಯಾಗಿಯೇ ಇತ್ತು. ಮೇಜಿನ ಮೇಲೆ ಇದ್ದ ವರದಿಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರು. ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಎಂದಿಗಿಂತ ಅತಿಯಾಗಿ ಕಂಡಿತು. ವೈದ್ಯರು ಮತ್ತೊಮ್ಮೆ ಸುಮತಿಯ ಹಳೆಯ ಚೀಟಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಕೆಲವು ನಾಲ್ಕು ತಿಂಗಳ ಹಿಂದಿನ ಹಳೆಯ ಚೀಟಿಗಳಾಗಿದ್ದವು. ಹಾಗಾದರೆ ಸುಮತಿ ಇತ್ತೀಚೆಗೆ ಯಾವುದೇ ಪರಿಶೀಲನೆಗೆ ಒಳಪಟ್ಟಿರಲಿಲ್ಲ ಎನ್ನುವುದು ವೈದ್ಯರಿಗೆ ಮನವರಿಕೆಯಾಯಿತು.  ವಿಷಾದದ ನೋಟ ಸುಮತಿಯೆಡೆಗೆ ಬೀರಿ…. “ಸುಮತಿ ಅವರೇ ನಾಲ್ಕು ತಿಂಗಳಿನಿಂದ ನೀವು ಆಸ್ಪತ್ರೆಗೆ ಬಂದು ಎಂದಿನಂತೆ ಪರಿಶೀಲನೆಯನ್ನು ಮಾಡಿಸಿಕೊಂಡಿಲ್ಲವೇಕೆ?” ಎಂದು ವೈದ್ಯರು ಕೇಳಲು, ಸುಮತಿ ಮೇಜಿನ ಮೇಲೆ ಇದ್ದ ಚೀಟಿಯನ್ನು ನೋಡುತ್ತಾ….”ಏಕೋ ಬರಲು ಸಾಧ್ಯವಾಗಲಿಲ್ಲ ಸರ್…. ಶಾಲೆಗೆ ಹೋಗಿ ಬರುವುವಾಗ ಬಹಳ ಆಯಾಸವಾಗಿರುತ್ತಿತ್ತು…. ತರಕಾರಿಯನ್ನು ವಾರಕ್ಕೊಮ್ಮೆ ಮಗಳು ಪೇಟೆಯಿಂದ ತಂದುಕೊಡುತ್ತಿ‌ದ್ದುದರಿಂದ ನಾನು ಪೇಟೆಯ ಕಡೆಗೆ ಬರಲೇ ಇಲ್ಲ”… ಎಂದಳು. ಅವಳ ಅಸಹಾಯಕ ಪರಿಸ್ಥಿತಿಯನ್ನು ಅರಿತಿದ್ದ ವೈದ್ಯರು ಹೆಚ್ಚಾಗಿ ಏನನ್ನೂ ಹೇಳದೇ…. “ಸುಮತಿಯವರೇ ನೀವು ಕೆಲವು ದಿನಗಳ ಕಾಲ ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ….ನಿಮಗೆ ತುರ್ತು ಚಿಕಿತ್ಸೆಯನ್ನು ನೀಡಬೇಕಾದ ಅಗತ್ಯವಿದೆ”…. ಎಂದು ಹೇಳಿ ಮೇಜಿನ ಮೇಲಿದ್ದ ಬೆಲ್ಲನ್ನು ಒತ್ತಿ ಅಟೆಂಡರ್ ಅನ್ನು ಕರೆದು,….”ಈ ಅಮ್ಮನನ್ನು ಕರೆದುಕೊಂಡು ಹೋಗಿ ವಾರ್ಡಿಗೆ ದಾಖಲು ಮಾಡಪ್ಪ”…. ಎಂದು ಒಂದು ಚೀಟಿಯಲ್ಲಿ ಸುಮತಿಯನ್ನು ದಾಖಲು ಮಾಡುವ ಬಗ್ಗೆ ಬರೆದು ಅಟೆಂಡರ್ ಕೈಲಿ ಕೊಟ್ಟರು. ಮಗಳ ಕಡೆಗೆ ನೋಡುತ್ತಾ… “ಮಗೂ….ಅಮ್ಮನನ್ನು ವಾರ್ಡಿನಲ್ಲಿ ದಾಖಲು ಮಾಡಿ ನನ್ನನ್ನು ಬಂದು ಭೇಟಿ ಮಾಡು…. ಕೆಲವು ಔಷಧಿ ಮಾತ್ರೆಗಳನ್ನು ಬರೆದುಕೊಡುತ್ತೇನೆ…. ಹೊರಗಿನಿಂದ ತರಬೇಕಾಗುತ್ತದೆ”… ಎಂದರು. ಸರಿ ಎನ್ನುವಂತೆ ತಲೆಯಾಡಿಸಿ ಸುಮತಿಯ ಕೈಹಿಡಿದು ಕರೆದುಕೊಂಡು ಅಟೆಂಡರ್ ಹಿಂದೆ ಮಗಳು ನಡೆದಳು.  ಇಬ್ಬರನ್ನೂ ವಾರ್ಡಿಗೆ ಕರೆದುಕೊಂಡು ಹೋದ ಅಟೆಂಡರ್ ವಾರ್ಡನಲ್ಲಿ ಕುಳಿತಿದ್ದ ಡ್ಯೂಟಿ ನರ್ಸ್ಗೆ ವೈದ್ಯರ ಚೀಟಿಯನ್ನು ತೋರಿಸಿ….” ಈ ಯಮ್ಮನನ್ನು ಡಾಕ್ಟರ್ ಇಲ್ಲಿ ಅಡ್ಮಿಟ್ ಮಾಡಲು ಹೇಳಿದ್ದಾರೆ”…. ಎಂದನು.‌ ಚೀಟಿಯನ್ನು ಪರಿಶೀಲಿಸಿದ ನರ್ಸ್, ಅಲ್ಲಿನ ಆಯಮ್ಮನನ್ನು ಕರೆದು…. “ನೋಡು ಇವರಿಗೆ ಇಲ್ಲಿಯೇ ಪಕ್ಕದಲ್ಲಿರುವ ಹಾಸಿಗೆಯನ್ನು ತಯಾರು ಮಾಡು”….ಎಂದು ಹೇಳಿ… “ಸುಮತಿಯವರೇ ಇಲ್ಲಿಯೇ ಇರುವ ಸ್ಟೂಲ್ ಮೇಲೆ ಕುಳಿತುಕೊಳ್ಳಿ…. ಆಯಾ ಹಾಸಿಗೆ ತಯಾರು ಮಾಡಿದ ನಂತರ ಅಲ್ಲಿ ಮಲಗಿಕೊಳ್ಳಿ…. ವೈದ್ಯರ ಸಲಹೆಯಂತೆ ನಿಮಗೆ ಇಂಜೆಕ್ಷನ್ ಕೊಡುವುದಿದೆ”…. ಎಂದು ಹೇಳಿದರು. ಆಯಮ್ಮ ಹಾಸಿಗೆ ರೆಡಿ ಮಾಡಿ ಸುಮತಿಗೆ ಅಲ್ಲಿ ಮಲಗಿಕೊಳ್ಳುವಂತೆ ಹೇಳಿದರು. ಮಗಳು ಸುಮತಿಯನ್ನು ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು…. “ಅಮ್ಮಾ ನೀನು ಮಲಗಿ ವಿಶ್ರಾಂತಿ ತೆಗೆದುಕೋ…. ನಾನು ಡಾಕ್ಟರನ್ನು ಭೇಟಿ ಮಾಡಿ ಅವರು ಬರೆದುಕೊಡುವ ಔಷಧಿಯನ್ನು ಹೊರಗಿನ ಮೆಡಿಕಲ್ ಶಾಪಿಗೆ ಹೋಗಿ ಖರೀದಿಸಿ ತರುತ್ತೇನೆ”…. ಎಂದು ಹೇಳಿ, ನರ್ಸ್ ಬಳಿ ಹೋಗಿ ತನ್ನನ್ನು ಡಾಕ್ಟರ್ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಎಂದು ಹೇಳಿ ಅವರ ಸಮ್ಮತಿ ಪಡೆದು ವಾರ್ಡಿನಿಂದ ಹೊರ ನಡೆದಳು. ವಾರ್ಡ್ ನಿಂದ ಆಚೆ ಬರುವಾಗ ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು…” ಶ್ರೀ ಕೃಷ್ಣಾ ನನ್ನ ತಾಯಿಗೆ ಯಾವುದೇ ತೊಂದರೆ ಆಗದಿರಲಿ…..ನೀನೊಬ್ಬನೇ ನಮಗೆ ದಿಕ್ಕು… ನಮ್ಮನ್ನು ಸದಾ ಕಾಪಾಡುತ್ತಿರುವವನು ನೀನು…. ಆದಷ್ಟು ಬೇಗ ಅಮ್ಮ ಚೇತರಿಸಿಕೊಳ್ಳುವಂತೆ ಮಾಡು”…. ಎಂದು ಬೇಡಿಕೊಂಡಳು. ವೈದ್ಯರ ಕೊಠಡಿಯ ಬಳಿ ಬಂದಾಗ ಇನ್ನೂ ಅನೇಕ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಅಲ್ಲಿಯೇ ನಿಂತಿದ್ದ ಅಟೆಂಡರ್ ನನ್ನು… ನಾನು ಈಗ ವೈದ್ಯರನ್ನು ಭೇಟಿ ಮಾಡಬಹುದೇ?…ಎಂದು ಕೇಳಿದಳು. ….”ಒಳಗೆ ವೈದ್ಯರ ಬಳಿ ಕುಳಿತಿರುವ ರೋಗಿ ಹೊರಬಂದ ನಂತರ ನೀನು ಹೋಗಿ ವೈದ್ಯರನ್ನು ಕಾಣಬಹುದು”… ಎಂದನು. ಸ್ವಲ್ಪ ಹೊತ್ತು ಅಲ್ಲಿಯೇ ಬೆಂಚಿನ ಮೇಲೆ ಕುಳಿತಿದ್ದ ಹುಡುಗಿ ಒಳಗಿನಿಂದ ರೋಗಿಯೊಬ್ಬರು ಹೊರಗೆ ಬಂದ ನಂತರ ವೈದ್ಯರ ಕೊಠಡಿಯನ್ನು ಪ್ರವೇಶಿಸಿದಳು. ಸುಮತಿಯ ಮಗಳನ್ನು ಕಂಡ ವೈದ್ಯರು… “ಬಾರಮ್ಮಾ …ಇಲ್ಲಿ ಕುಳಿತುಕೋ…. ಎಂದು ತಮ್ಮ ಮುಂದೆ ಇದ್ದ ಕುರ್ಚಿಯ ಕಡೆಗೆ ಕೈ ಮಾಡಿದರು…. “ನಿನ್ನ ತಾಯಿಯನ್ನು ವಾರ್ಡಿಗೆ ಅಡ್ಮಿಟ್ ಮಾಡಿ ಆಯಿತೇ?…. ಎಂದು ಕೇಳಿದರು. ಹೌದು ಎನ್ನುವಂತೆ ಹುಡುಗಿ ತಲೆಯಾಡಿಸಿದಳು. ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ….. “ಮಗೂ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲವೇ?…. ಎಂದಾಗ…. “ನಮ್ಮ ಮನೆಯಲ್ಲಿ ನಮ್ಮ ತಾಯಿ ನಾನು ಮತ್ತು ಒಬ್ಬಳು ತಂಗಿ ಮಾತ್ರ ಈಗ ಇರುವುದು…. ನನ್ನ ಅಕ್ಕನಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇದ್ದಾರೆ…. ಕೊನೆಯ ತಂಗಿ ದೂರದ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾನೂ ಕೂಡ ಇಲ್ಲಿ ಒಂದು ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ…. ಅಮ್ಮನ ಜೊತೆ ಮನೆಯಲ್ಲಿ ಇರುವುದು ತಂಗಿ ಮಾತ್ರ”…. ಎಂದಳು. ಅವಳು ಹೇಳಿದ ಮಾತನ್ನು ಕೇಳಿದ ವೈದ್ಯರು ಚಿಂತಾಕ್ರಾಂತರಾದರು. ಆದರೂ ವಿಷಯವನ್ನು ಈ ಹುಡುಗಿಗೆ ತಿಳಿಸಲೇಬೇಕಿತ್ತು. ಹಾಗಾಗಿ…. “ನೋಡು ಮಗೂ ….ಕೆಲವು ಮುಖ್ಯವಾದ ವಿಚಾರವನ್ನು ನಿನಗೆ ತಿಳಿಸುವುದಿತ್ತು…. ಹಾಗಾಗಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲವೇ ಎಂದು ಕೇಳಿದೆ…. ಎಂದರು. 

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಸವಿತಾ ದೇಶಮುಖ ಭಾರತಕ್ಕೆ ಸ್ವಾತಂತ್ರವೇನೋ ದೊರೆತಿತ್ತು ನಿಜ ಆದರೆಅನೇಕ ಸ್ಥಿತ್ಯಂತರಗಳು ಹಾಗೂ ಸಮಸ್ಯಗಳ ಕುರಿತು ಪರಿಹಾರ ಹುಡುಕಬೇಕಾಗಿತ್ತು.ಇಂತಹ ಕಾಲದಲ್ಲಿ ಜನತೆಗಾಗಿ ದೇಶದ ಅಭಿವೃದ್ಧಿಗೆ ಪೂರಕವಾಗ ಬೇಕೆಂತಹ ಕಾರ್ಯಗಳನ್ನು ಹಮ್ಮಿಕೊಳ್ಳ ಬೇಕಾಗಿದನ್ನು ಅರಿತುಕೊಂಡಿದ್ದರು ಜಯದೇವಿ ತಾಯಿಯವರು ಹಾಗೂ ಅವರ ಸಂಘಟನಾ ಸದಸ್ಯರು. ೧೯೪೭ ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ದೇಶದ ಮುಂದೆ ದೊಡ್ಡ ಸವಾಲಾಗಿ ನಿಂತದ್ದು ಸಂಸ್ಥಾನಗಳ ವಿಲೀನಿಕರಣ …… ಸುಮಾರ ೫೬೫ ಕ್ಕೂ ಹೆಚ್ಚು ಸಂಸ್ಥಾನಗಳು ಇದ್ದವು ಮತ್ತು ಅವುಗಳಿಗೆ ಸ್ವತಂತ್ರವಾಗಿರುವದೇ ಅಥವಾ ಭಾರತ ಇಲ್ಲವೇ ಪಾಕಿಸ್ತಾನಕ್ಕೆ ಸೇರೋದು ಎಂಬ ಆಯ್ಕೆ ನೀಡಲಾಗಿತ್ತು…..ಇದರಿಂದ ಅನೇಕ ಸಮಸ್ಯೆಗಳು ಉಂಟಾದವು. ಸ್ವಾತಂತ್ರ್ಯದ ಆಸೆ ಯಿಂದಾಗಿ ಕೆಲವು ರಾಜರು ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೂ ಸೇರುವುದನ್ನು ಬಯಸದೇ, ಸ್ವತಂತ್ರ ರಾಷ್ಟ್ರವಾಗಿರಲು ಯತ್ನಿಸಿತ್ತು ಅದುವೇ* ಹೈದರಾಬಾದ ಸಂಸ್ಥಾನ*…..ಇದರಿಂದ ದೇಶ ತುಂಡಾಗಿ ಹೋಗುವ ಭೀತಿ  ಉಂಟಾಯಿತು.ಧರ್ಮ ಮತ್ತು ಭೌಗೋಳಿಕವಾಗಿ ಕೆಲವು ಸಂಸ್ಥಾನಗಳಲ್ಲಿ ಜನಸಂಖ್ಯೆ ಮತ್ತು ರಾಜರ ಧರ್ಮ ಭಿನ್ನವಾಗಿತ್ತು.*ಜುನಾಗಢದ*ಲಿ….ಹಿಂದೂ ಜನರು…ಮುಸ್ಲಿಂ ನವಾಬ ಇದ್ದನು..ಅದೇ‌ ರೀತಿ ಕಾಶ್ಮೀರದಲ್ಲಿಮುಸ್ಲಿಂ ಜನರು…ಹಿಂದೂ ರಾಜನಿದ್ದ….ಇದರಿಂದ ಗೊಂದಲ, ಹೋರಾಟಗಳು ನಡೆದವು. ಇಲ್ಲಿ ಮೈಸೂರು ಸಂಸ್ಥಾನ ಒಂದು ಪ್ರಮುಖ ಸಂಸ್ಥಾನವಾಗಿತ್ತು….ಮೈಸೂರು ಅರಸರು ಭಾರತ ಸೇರುವುದನ್ನು ವಿರೋಧಿಸಿದಾಗ ಜನರು ದಂಗೆ ಎದ್ದಾಗ ಅಲ್ಲಿ ಗೋಲಿಬಾರ್ ಆಗಿ ಕೆಲ ಜನರು ಅನಾಹುತಕ್ಕೆ ಇಡಾದರು…. ಇದನ್ನು ಖಂಡಿಸಿ *ಜಯದೇವಿ ತಾಯಿಯವರು* ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟ ಧೀರ ಮಹಿಳೆ.ಅದರಂತೆ ಮುಂದೆ ಮಹಾರಾಜ ಜಯಚಾಮರಾಜೇಂದ್ರ ವಡಿಯರ.  ೯ ಆಗಸ್ಟ್೧೯೪೭ ರಂದು ಭಾರತಕ್ಕೆ ಸೇರುವ ಒಪ್ಪಂದಕ್ಕೆ ಸಹಿ ಹಾಕಿದರು.ಮುಂದೆ ಮೈಸೂರು ಶಾಂತಿಯುತವಾಗಿ ಭಾರತಕ್ಕೆ ಸೇರಿತು‌. ಇಲ್ಲಿ ಸಮಸ್ಯೆ ಉದ್ಭವಿಸಿದ್ದು ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ……!!! ಹೈದರಾಬಾದ್ ಸಂಸ್ಥಾನವು ಭಾರತದ ಅತಿ ದೊಡ್ಡ ಮತ್ತು ಶ್ರೀಮಂತ ಸಂಸ್ಥಾನವಾಗಿತ್ತು.ಜನಸಂಖ್ಯೆಯಲ್ಲಿ ಬಹುಪಾಲು ಹಿಂದೂಗಳು, ಆದರೆ ಆಡಳಿತ ಮುಸ್ಲಿಂ ನಿಜಾಮನ ಕೈಯಲ್ಲಿ ಇತ್ತು.ನಿಜಾಮ್ ತನ್ನ ರಾಜ್ಯವನ್ನು “ಸ್ವತಂತ್ರ ದೇಶ”ವಾಗಿ ಉಳಿಸಿಕೊಳ್ಳಲು ಬಯಸಿದ “ಮಿರ್ ಒಸ್ಮಾನ್ ಅಲಿ ಖಾನನು ಭಾರತಕ್ಕೂ ಸೇರುವುದಿಲ್ಲ,ಪಾಕಿಸ್ತಾನಕ್ಕೂ ಸೇರುವುದಿಲ್ಲವೆಂದು…..“ಸ್ವತಂತ್ರ ಹೈದರಾಬಾದ್ ರಾಷ್ಟ್ರ” ನಿರ್ಮಿಸಲು ಬಯಸಿದ ಅವರು ಭಾರತ ಸರ್ಕಾರದ ಜೊತೆ  “ಸ್ಟ್ಯಾಂಡ್ ಸ್ಟಿಲ್” ಒಪಂದ ಮಾಡಿಕೊಂಡು ಸಮಯ ಕಳೆಯಲು ಪ್ರಯತ್ನಿಸಿದ. ನಿಜಾಮನ ಆಡಳಿತದಲ್ಲಿ, ವಿಶೇಷವಾಗಿ ರಜಾಕಾರ್ ದಳದ ಕಾರಣದಿಂದ ಜನರು ತುಂಬಾ ಸಂಕಷ್ಟ ಅನುಭವಿಸಿದರು.ಕಾಸಿಂ ರಿಜ್ವಿ ನೇತೃತ್ವದಲ್ಲಿ ರಜಾಕಾರ ಸಂಘಟನೆಗ್ರಾಮಗಳಲ್ಲಿ ದಾಳಿ, ಹಿಂಸೆ, ಲೂಟಿ ಮಹಿಳೆಯರ ಮೇಲೆ ಅತ್ಯಾಚಾರಗಳಂಥ ದುಷ್ಕೃತ್ತಿಗಳು ನಡೆದವು..ಇದರಿಂದ ಸಾವಿರಾರು ಜನರು ಮನೆಬಿಟ್ಟು ಓಡಿನಿರಾಶ್ರಿತರ ಆಗಿ ಬೇರೆ ಪ್ರದೇಶಗಳಿಗೆ ಹೋದರುರೈತರು ಮತ್ತು ಸಾಮಾನ್ಯ ಜನರ ಸ್ಥಿತಿ ಹೇಳತೀರದಾಗಿತ್ತು….. ಜಮೀನ್ದಾರರು ದೌರ್ಜನ್ಯಕೆ ಒಳಪಟ್ಟು ಭಾರೀ ತೆರಿಗೆ ಕಟ್ಟಬೇಕಾಗಿ ಬಂತು…ಬಡ ರೈತರು ಹಿಂಸೆಗೆ ಒಳಗಾದರು…..ಇದಕ್ಕೆ ಪ್ರತಿಯಾಗಿಹೈದರಾಬಾದ್ ಜನರು ಸ್ವಾತಂತ್ರ್ಯ ಬಂದರೂ ಕೂಡಸ್ವಾತಂತ್ರ್ಯದ ಸುವಾಸನೆ ಅನುಭವಿಸಲಿಲ್ಲ… ನಿಜಾಮನ ಸ್ವತಂತ್ರವಾಗಿ ರಾಜ್ಯ ಕಟ್ಟುವ ಆಸೆ ಜನರಿಗೆ ಸಂಕಷ್ಟವಾಯಿತು…ಹೈದರಾಬಾದ್ ಸಂಸ್ಥಾನದಲ್ಲಿ ಮಿರ್ ಒಸ್ಮಾನ್ ಅಲಿ ಖಾನ್ ಅವರ ಆಡಳಿತದ ಕೊನೆಯ ದಿನಗಳಲ್ಲಿ, ವಿಶೇಷವಾಗಿ ರಜಾಕಾರ್ ಹಿಂಸಾಚಾರದ ಸಮಯದಲ್ಲಿ, ಸಾವಿರಾರು ಜನರು ನಿರಾಶ್ರಿತರಾಗಿ ಭಾರೀ ಸಂಕಷ್ಟ ಅನುಭವಿಸಿದರು. ರಜಾಕಾರ್ ದಾಳಿಗಳು ಹಠಾತಆಗಿ ನಡೆಯುತ್ತಿತ್ತುಗ್ರಾಮಗಳಲ್ಲಿ ಹತ್ಯೆ, ಬೆಂಕಿ ಹಚ್ಚುವುದು, ದೋಚಾಟ ಸಾಮಾನ್ಯವಾಗಿತ್ತು ಜನರು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಯಿತು….ಮನೆಗಳನ್ನು ಸುಟ್ಟುಹಾಕುವುದು ಧಾನ್ಯ, ಪಶು, ಆಸ್ತಿ ದೋಚಿಕೊಳ್ಳುವಂಥ ದುಷ್ಕೃತ್ಯಗಳು ನಡೆದವು. ಒಂದೇ ರಾತ್ರಿಯಲ್ಲಿ ಜನರು ಎಲ್ಲವನ್ನೂ ಕಳೆದುಕೊಂಡರು.  ಮಹಿಳೆಯರ ಮೇಲಿನ ಹಿಂಸೆ ಅತ್ಯಾಚಾರ, ಅವಮಾನಕಾರಿ ವರ್ತನೆಯಿಂದಾಗಿ ಕುಟುಂಬಗಳು ಭೀತಿಯಿಂದ ಊರು ಬಿಟ್ಟು ಹೋಗುವ ಪರಿಸ್ಥಿತಿ  ಬಂದಿತು,ಆಹಾರ ಮತ್ತು ಆಶ್ರಯದ ಕೊರತೆಯಿಂದಾಗಿ ಓಡಿಹೋಗುವಾಗ ಆಹಾರ ಇಲ್ಲದೆ ನರಳಿದರು ….ಚಿಕ್ಕ ಮಕ್ಕಳೊಂದಿಗೆ ಕಾಡು, ಹೊಲಗಳಲ್ಲಿ ಅಲೆದಾಡಲಾರಂಭಿಸಿದರು.ಹಸಿವು, ದಾಹ, ರೋಗಗಳಿಂದ ನರಳಿದರು. ಓಡಾಟದಲ್ಲಿ ಕುಟುಂಬದವರು ಬೇರೆಯಾದರು ಮಕ್ಕಳು, ಮಹಿಳೆಯರು ಕಳೆದುಹೋಗುವ ಘಟನೆಗಳು ನಡೆದವು…. ಹೀಗಾಗಿಹೈದರಾಬಾದ್ ಸಂಸ್ಥಾನದ ಜನರು ಹತ್ತಿರದ *ಮೈಸೂರು ಪ್ರದೇಶ *…ಇಂದಿನ ಕರ್ನಾಟಕಕ್ಕೆ ಸುರಕ್ಷಿತ ಪ್ರದೇಶಗಳಿಗೆ ಕುಟುಂಬ ವನ್ನು ರವಾನಿಸಿದರು.ಬಳ್ಳಾರಿ,ರಾಯಚೂರು ಪ್ರದೇಶಗಳಿಗೆ ಹಲವರು ಹೋದರು……ಇಲ್ಲಿ ಜನರು ತಾತ್ಕಾಲಿಕ ಆಶ್ರಯ ಪಡೆದರು. ಇನ್ನು ಹಲವರು* ಬಾಂಬೆ ಪ್ರೆಸಿಡೆನ್ಸಿ* ಭಾಗಗಳು  ಅಂದರೆ ಇಂದಿನ ಮಹಾರಾಷ್ಟ್ರ. ಸೋಲಾಪುರ,ಪೂಣೆಗಡಿ ಪ್ರದೇಶಗಳಿಗೆ ಹೆಚ್ಚಿನ ಜನರು ಹರಿದು ಬಂದರು. ಇನ್ನು ಹಲವರು *ಮದ್ರಾಸ್ ಪ್ರೆಸಿಡೆನ್ಸಿ *ಭಾಗಗಳು ಇಂದಿನ ಆಂಧ್ರಪ್ರದೇಶ ಮತ್ತು ತಮಿಳುನಾಡು, ಕುರ್ನೂಲ್,ಗುಂಟೂರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡರು…. ಎಲ್ಲ ಪ್ರದೇಶಗಳಲ್ಲಿ ಅಲ್ಲಲ್ಲಿ ನಿರಾಶ್ರಿತ್ರಿಗೆ ಶಿಬಿರಗಳಲ್ಲಿ ತಂಗಿದರು.ಸರ್ಕಾರ ಮತ್ತು ಸಮಾಜದಿಂದ ಸ್ವಲ್ಪ ಸಹಾಯ ದೊರೆತರೂ ಅನಿಶ್ಚಿತ ಭವಿಷ್ಯ “ನಮ್ಮ ಊರು ಯಾವಾಗ ಮರಳಿ ಸಿಗುತ್ತೆ?” ಎಂಬ ನೋವು ಹೊತ್ತು ಬಾಳುತ್ತಿದ್ದರು. *ಈ ಸಮಯದಲ್ಲಿ ಸಾವಿರಾರು ಜನರು ಸೊಲ್ಲಾಪುರದತ ಧಾವಿಸಿದರು ರಜಾಕಾರರ ರಕ್ಕಸಿಯ ದವಡೆಗೆ ಸಿಲುಕಿದ ನಿರಾಶ್ರಿತರಿಗೆ ಅನ್ನ ಅರಿವೆ ಆಶ್ರಯವನ್ನು ಜಯದೇವಿ ತಾಯಿಯವರು ಕೊಟ್ಟ‌ ಸಲುಹಿದರು* ಮನೆಮಾರ ತೊರೆದಾರ, ಕನವರೆಸಿ ಬಂದಾರಅನ್ನ ನೀರಿಗೆ ದಿಕ್ಕಿಲ್ಲ ,ನನ್ನ ಜನಸೊನ್ನಲಿಗಿ ದಾರೀ ಹಿಡಿದಾರ !! ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿಗೆ ವಾರದ  ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು.  ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ಬಡವರು ದಲಿತರ ಬದುಕನ್ನು ತಮ್ಮ ಹಿತಾಸಕ್ತಿಗಾಗಿ ನಾಶ ಮಾಡುತ್ತಿದ್ದಂತೆ ಜಮೀನ್ದಾರಿ ವರ್ಗಕ್ಕೆ ವೆತರಿಕ್ತವಾಗಿ ಜನಪರ ಕೆಲಸವನ್ನು ಮಾಡುತ್ತಾ ಬಂದರು.  ಶಾಲಾ ವಿದ್ಯಾರ್ಥಿಗಳಿಗೆ ಕುಂಟೋಜಿ ಮಠದಲ್ಲಿ ಇವರಿಗೆ ವ್ಯವಸ್ಥೆ ಮಾಡಲಾಯಿತು. ನಿರಾಶ್ರಿತರಿಗೆ  ಬೇಕಾದ ಸಾಮಾನುಗಳು ದವಸ ಧಾನ್ಯ ಪಟ್ಟಿಯನ್ನು ಮಾಡಿ ಉದ್ಯಮಿ ಪತಿಗಳು ನಿಗದಿತ ಸ್ಥಳಕ್ಕೆ ತಂದು ತಲುಪಿಸುವಂಥ ಯೋಜನೆಗಳನ್ನು ಹಾಕಿದರು. ಇಂಥ ಕೆಲಸಗಳಲ್ಲಿಜಯದೇವಿ ತಾಯಿಯವರ ಜೊತೆಗೂಡಿದವರು  ಶ್ರೀಮತಿ ಘಾಟಿಗೆ ಸುಮಿತ್ರಾಬಾಯಿ ,ವಾರದ ಬಾಬಾ ಸಾಹೇಬ ,ನಾಗಪ್ಪ ಕಾಡದಿ, ಚಾಕುತಿ ಈರಮ್ಮ, ಸಂಗವ್ವ ಮಡಿಕೆ ಮೊದಲಾದ ಪ್ರಮುಖರು ಸಭೆಯೊಂದು ಸೇರಿ ಸೌಲಭ್ಯ ಒದಗಿಸುವ ನಿರ್ಣಯವನ್ನು ತೆಗೆದುಕೊಂಡರು .ಬೀದರ್ ರೈಚೂರ್ ಕಲ್ಬುರ್ಗಿಯಿಂದ ವಲಸಿ ಬಂದ ಮಕ್ಕಳಿಗೆ ಕಾಡದೇ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು . ಜಯದೇವಿ ತಾಯಿಯವರು ತಮ್ಮ ಮನೆಯಾದ ಜೈನಿಕೇತನದಿಂದಲೇ  ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು  ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು …ಅವರಿಗಾಗಿ ೫ ಲಕ್ಷ ೮೦೧೪ ರೂಪಾಯಿಗಳನ್ನು ಸಂಗ್ರಹಿಸಿದರು . ಸಾವಿರಾರು  ಸೀರೆಗಳು ಮತ್ತು ಅಷ್ಟೇ ಬೆಲೆ ಬಾಳುವ ರಘ ಪಡೆದರು. ಸರಿಯಾಗಿ ಹಂಚಿ ಅವುಗಳನ್ನು ವಿತರಿಸಿದರು ವುಲನ್ ತಂದು ಶಾಲಾ ಶಿಕ್ಷಕಿಯರಿಂದ ಸ್ವೀಟರ್ ಗಳನ್ನು ಹೆಣಿ‌ಸಿ ನಿರಾಶೆತ್ರಿಗೆ ಕೊಡುತ್ತಿದ್ದರು. ಇನ್ನುಳಿದ ಮಕ್ಕಳಿಗೆ ಅನುಕೂಲವಾಗುವಂತೆ ಮಾಧ್ಯಮಿಕ ಶಾಲೆಯನ್ನು ಕೂಡ ಪ್ರಾರಂಭಿಸಿದರುತಾಯಿಯವರು ಹೇಳ್ತಾರೆ. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-22 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಸುಧನ್ವನ ಸಾಹಸವದು ಸೂರೆಗೊಂಡಿತು ನಮ್ಮ ಸೇನೆಯನು                 ಈಗ ಪಶ್ಚಾತ್ತಾಪ ಭಾವ ಮೂಡಿತು ಪುರೋಹಿತ ಲಿಖಿತನಲ್ಲಿ. ಕೃಷ್ಣಭಕ್ತನಾದ ಸುಧನ್ವನಿಗೆ ತೊಂದರೆ ಆಗಲೆಂದು ಬಯಸಿದ ತನಗೆ ಮರಣವೇ ಸರಿಯಾದ ಶಿಕ್ಷೆ ಎಂಬ ಭಾವನೆ ಮೂಡಿತ್ತು ಅವನಲ್ಲಿ. ಸುಧನ್ವನಿದ್ದ ಆ ಎಣ್ಣೆ ಕೊಪ್ಪರಿಗೆಗೆ ಜಿಗಿದ. ಕೃಷ್ಣಭಕ್ತನ ಸಂಗದ ಘನಪರಿಣಾಮದಲಿ ಉಷ್ಣಾತಿಉಷ್ಣ ತೈಲದಲಿ ಬಿದ್ದರೂ ಸಹ ಲಿಖಿತ ಉಷ್ಣರಹಿತ ಸ್ಥಿತಿಯನ್ನು ಅನುಭವಿಸಿದ. ತಂಪುತಂಪಾದ ಕೊಳದಂತೆ ಭಾಸವಾಯಿತು ಆ ಕೊಪ್ಪರಿಗೆಯ ಒಳಗು ಅವನಿಗೆ.      ಅರಸ ಹಂಸಧ್ವಜನಿಗೆ ನಂಬಲಸಾಧ್ಯವಾದ ವಿಸ್ಮಯವಾಯಿತು. ಒಡನೆ ಬಂದವನು ಸುಧನ್ವ ಲಿಖಿತ ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊAಡ. “ನಿನ್ನ ಮಗನ ದೆಸೆಯಿಂದ ನಮ್ಮ ಈ ನಗರ ಧನ್ಯವಾಯಿತಿಂದು” ಎಂದು ಹಂಸಧ್ವಜನಲ್ಲಿ ಸುಧನ್ವನನ್ನು ಮನಸಾರೆ ಹೊಗಳಿದ ಲಿಖಿತ.     ಕೃಷ್ಣಲೀಲೆಗೆ ಪಾತ್ರನಾದ ಸುಧನ್ವ ಈಗ ವೀರಾಗ್ರಣಿಯ ಪಾತ್ರ ಧರಿಸಿ ರಣರಂಗಪ್ರವೇಶ ಮಾಡಿದ. ಈ ಮೊದಲು ಮಗನನ್ನು ತೆಗಳಿದ್ದ ಹಂಸಧ್ವಜನಲ್ಲಿ ಈಗ ಅದೇ ಮಗನ ಬಗೆಗೆ ಹೆಮ್ಮೆಯ ಭಾವನೆಯಿತ್ತು. ಮಕ್ಕಳಾದವರ ಬದುಕಿನ ನಿಜ ಸಾರ್ಥಕತೆಯಿದು ಎನಿಸಿತು ನನಗೆ ಆ ಕ್ಷಣದಲ್ಲಿ. ತಂದೆ ತಾಯಿ ಅವರಿವರಲ್ಲಿ ಹೇಳಿಕೊಂಡು ಹೆಮ್ಮೆಪಡುವಂತಹ ರೀತಿಯಲ್ಲಿ ಬದುಕುವುದಕ್ಕಿಂತ ಮಿಗಿಲಾದದ್ದು ಏನಿದೆ ಮಕ್ಕಳ ಪಾಲಿಗೆ! ಹಂಸಧ್ವಜನ ಆ ಪ್ರೌಢ ಮೊಗದಲ್ಲಿ ಸಂತಸದ ಭಾವ ತಾಂಡವವಾಡುತ್ತಿತ್ತು.     ತಂದೆಯ ಚರಣಕ್ಕೆ ನಮಿಸಿದ ಸುಧನ್ವ ಯುದ್ಧಕ್ಕೆ ಸಿದ್ಧನಾಗಿ ಚತುರಂಗ ಬಲವನ್ನು ನಮ್ಮೆಡೆಗೆ ಮುನ್ನಡೆಸಿದ. ಮುಂದೆ ಮುಂದೆ ಬಂದ ಸೇನೆ ನಮ್ಮ ಕುದುರೆಯನ್ನು ಹಿಡಿಯಿತು. ತಕ್ಷಣವೇ ಪದ್ಮವ್ಯೂಹವನ್ನು ರಚಿಸಿದರು ಚಂಪಕಾಪುರಿಯ ಸೈನಿಕರು. ಆ ವ್ಯೂಹದೊಳಗೆ ಬಂಧಿಯಾಯಿತು ನಮ್ಮ ಕುದುರೆ.     ಈ ವಿಚಾರ ತಿಳಿದ ತಕ್ಷಣವೇ ನಾನು ಹೊರಳಿದ್ದು ಶ್ರೀಕೃಷ್ಣ ಸುತನೆಡೆಗೆ. ವಿಷಯ ತಿಳಿಸಿದೆ. ಮಾಡಬಹುದೇನೀಗ ಎಂದು ಕೇಳಿದೆ. ಕೆಲವೊಮ್ಮೆ ಹಾಗೆಯೇ, ಬದುಕೆಂಬ ಯುದ್ಧರಂಗದಲ್ಲಿ ಅನುಭವಕ್ಕಿಂತಲೂ ಕಿರಿಯರ ತಕ್ಷಣದ ಸಲಹೆಯೇ ಮುಖ್ಯ ಎನಿಸಿಬಿಡುತ್ತದೆ. ತಾನೊಬ್ಬನೇ ಪದ್ಮವ್ಯೂಹವನ್ನು ಹೊಕ್ಕು ಕುದುರೆಯನ್ನು ಬಿಡಿಸಿ ತರುತ್ತೇನೆ ಎಂಬ ಧೀರನುಡಿಯನ್ನಾಡಿದ ಪ್ರದ್ಯುಮ್ನ. ಅವನಿಗೊಂದು ಅವಕಾಶ ಕೊಟ್ಟುನೋಡುವುದು ಒಳ್ಳೆಯದು ಎನಿಸಿತು.     ಅಷ್ಟರಲ್ಲಿ ಬಳಿಬಂದ ಕರ್ಣಸುತ ವೃಷಕೇತು “ಇಂದಿನ ಯುದ್ಧವಿದು ನನ್ನನ್ನು ಸೆಳೆಯುತ್ತಿದೆ. ಶತ್ರುಸೇನೆಯನ್ನು ಪುಡಿಗಟ್ಟಿ ಕುದುರೆಯನ್ನು ತಾರದೇ ಹೋದರೆ ನಾನು ಕರ್ಣನಿಗೆ ಜನಿಸಿದವನೇ ಅಲ್ಲ” ಎಂದ. ಪ್ರದ್ಯುಮ್ನನ ಮಾತಿಗಿಂತಲೂ ಇವನ ಮಾತಿನಲ್ಲಿ ಬಿರುಸು ಅಧಿಕವಿದೆ ಎನಿಸಿತು. ಅವನನ್ನೇ ಕಳುಹಿಸಿಕೊಟ್ಟೆ ಸುಧನ್ವನಿಗೆ ಎದುರಾಗಿ.     ಯುದ್ಧಕ್ಕೆ ಹೋದ ವೃಷಕೇತುವಿನ ಗುರುತು ಮೊದಲಿಗೆ ಸಿಗಲಿಲ್ಲ ಸುಧನ್ವನಿಗೆ. ಕೇಳಿದ. “ನೀನಾರು? ಯಾರ ಮಗ? ಯಾವ ಕುಲ ನಿನ್ನದು?”     ಕುಲದ ಪ್ರಶ್ನೆಯೆತ್ತಿದ್ದಕ್ಕೆ ಘಟಾನುಘಟಿಗಳ ಎದುರೇ ಸಿಡಿದುನಿಂತವನು ಕರ್ಣ. ಅವನ ಮಗನಾದ ವೃಷಕೇತುವಿನಲ್ಲಿಯೂ ಕಾಣಿಸಿಕೊಂಡಿತು ಅದೇ ಬಗೆಯ ಅಸಮಾಧಾನ, ಸುಧನ್ವ ಪ್ರಶ್ನೆ ಕೇಳಿದಾಗ. “ನಯನಕ್ಕೆ ಅಗೋಚರವಾಗಿರುವ ಹೂವೊಂದು ಪರಿಮಳವನ್ನು ಪಸರಿಸುತ್ತದೆ. ಕುಲ ಯಾವುದು ಎನ್ನುವುದು ಅರಿವಿಗೆ ಬರಬೇಕಾದದ್ದು ಪೌರುಷದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ನಿನಗೆ ನನ್ನ ಗುರುತು ಇಲ್ಲವೆಂದ ಮಾತ್ರಕ್ಕೆ ನಾನು ಪರಾಕ್ರಮ ತೋರಿಸದೇ ಇರುವವನಲ್ಲ” ಎಂದ ಕರ್ಣತನಯ.     ನನಗವನ ಮಾತು ಸರಿಯೆಂದು ತೋರಿತು. ಕುಲದ ಪ್ರಶ್ನೆಯನ್ನು ಮುಂದಿಟ್ಟುಕೊAಡು ಅವಕಾಶವನ್ನು ಕೊಡುವುದಾಗಲೀ, ಅವಕಾಶವನ್ನು ನಿರಾಕರಿಸುವುದಾಗಲೀ ಸರಿಯಲ್ಲ. ಕುಲವನ್ನು ಇನ್ನೊಬ್ಬರು ಹೇಳಿಕೊಳ್ಳಬೇಕಾದ ಅಗತ್ಯವೂ ಇಲ್ಲ.    ಯುದ್ಧಕ್ಕಿಳಿದರು ಸುಧನ್ವ ವೃಷಕೇತು. ಇದ್ದವರೆಲ್ಲರೂ ಅಚ್ಚರಿಯಿಂದ ನೋಡುವ ತೆರದಲ್ಲಿ ಶೌರ್ಯಭರಿತವಾಗಿ ಕದನ ನಡೆಯಿತು. ಹಂಸಧ್ವಜಸುತ ಪ್ರಯೋಗಿಸಿದ ಬಾಣಗಳು ಕರ್ಣಸುತನ ಶರೀರದೆಲ್ಲೆಡೆ ನಾಟಿ ಅವನನ್ನು ಅತೀವವಾಗಿ ಜರ್ಜರಿತಗೊಳಿಸಿದವು. ಪ್ರಜ್ಞೆ ಕಳೆದುಕೊಂಡ ವೃಷಕೇತು. ಸುಧನ್ವನ ಗೆಲುವಿಗೆ ಪ್ರಜ್ಞೆಬಂತು. ರಥವನ್ನು ತಿರುಗಿಸಿದ ಸಾರಥಿ ವೃಷಕೇತುವಿನ ಜೀವವನ್ನು ಉಳಿಸಿದ.    ಆಗಲೇ ಸುಧನ್ವನೆದುರು ಹೋಗಿ ಕದನಕ್ಕೆ ಮನಮಾಡಿದ ಪ್ರದ್ಯುಮ್ನ. ಎಂಟು ಬಾಣಗಳು ಸಿಡಿದು ಬಂದವು ಕೃಷ್ಣಪುತ್ರನೆಡೆಗೆ, ಹಂಸಧ್ವಜಪುತ್ರನ ಬಿಲ್ಲಿನಿಂದ. ಪ್ರದ್ಯುಮ್ನನೂ ಅದೇ ಬಗೆಯ ಉತ್ತರವಿತ್ತ. ಅವನ ಪ್ರತಿಕ್ರಿಯೆಯನ್ನು ಸಹಿಸುವುದಕ್ಕಾಗಲಿಲ್ಲ ಸುಧನ್ವನಿಗೆ. “ಕೃಷ್ಣಸುತ ನೀನೆಂದು ಇದುವರೆಗೂ ಸಹಿಸಿದೆ. ಇನ್ನು ನಾನು ಸಹಿಸುವವನಲ್ಲ. ನನ್ನ ಬಾಣವದು ಬಾಯಾರಿದೆ. ನಿನ್ನೊಡಲಲ್ಲಿ ಕೆಂಪುಜಲವಿದೆ. ನನ್ನ ಬಾಣಕ್ಕೆ ಆ ಜಲವನ್ನು ಕುಡಿಸದೆ ಬಿಡುವವನಲ್ಲ” ಎಂದು ಹೇಳುತ್ತಲೇ ಪ್ರದ್ಯುಮ್ನನ ಬಾಣವನ್ನು ಏಳು ತುಂಡುಗಳಾಗಿ ಕತ್ತರಿಸಿದ. ಸುಧನ್ವ ಶೌರ್ಯದ ಮುಂದೆ ಪ್ರದ್ಯುಮ್ನ ಪರಾಕ್ರಮವದು ಕಳೆಗುಂದಿತು.     ಸುಧನ್ವನನ್ನು ಸೋಲಿಸದೆಯೇ ಮರಳುವವರಲ್ಲ ಎಂದು ವೀರಾವೇಷದಿಂದ ಹೋದ ಕೃತವರ್ಮ ಸೋಲಿನ ಮುಖ ಹೊತ್ತು ಮರಳುವಂತಾಯಿತು. ಅನುಸಾಲ್ವನ ಸಾಮರ್ಥ್ಯವದು ಸಾಲದೇ ಹೋಯಿತು. ನಮ್ಮ ಸೇನೆಯನ್ನು ಸಂಪೂರ್ಣವಾಗಿ ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ ಆತ ಎನ್ನುವುದು ಗೊತ್ತಾಗುತ್ತಿತ್ತು. ನಮ್ಮ ಕಡೆಯ ವೀರಾಧಿವೀರರನ್ನು ಬಹುಬೇಗ ಕೊನೆಗಾಣಿಸಿ ಕ್ಷಿಪ್ರವಾಗಿ ಕೃಷ್ಣದರ್ಶನಗೈಯ್ಯುವ ಉತ್ಸುಕತೆ ಸುಧನ್ವನಲ್ಲಿ ಇದ್ದಂತಿತ್ತು. ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದ ನಮ್ಮ ಸೇನೆಯ ಆನೆ ಕುದುರೆ ರಥ ಸೈನಿಕರು ಎಲ್ಲವೂ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದುದು ಗಗನದೆತ್ತರವಾಗಿದ್ದ ಸುಧನ್ವ ಪರಾಕ್ರಮವನ್ನು. ಬರಿಯ ಕೃಷ್ಣಭಕ್ತ ಇವನಲ್ಲ, ಯುದ್ಧದಲ್ಲಿ ಸರ್ವಶಕ್ತ ಎಂದೆನಿಸಿತು ನನಗೆ. ಆದರೂ ನನ್ನ ಶಕ್ತಿಗೆ ಸಮನಲ್ಲ ಎಂಬ ಮೇಲರಿಮೆಯ ಭಾವವೂ ಮೂಡಿತು.    ಇನ್ನು ನಾನು ಯುದ್ಧರಂಗವನ್ನು ಪ್ರವೇಶಿಸದಿದ್ದರೆ ಗೆಲುವು ದೊರೆಯುವಂಥದ್ದಲ್ಲ ಎಂದು ಹೇಳುತ್ತಿತ್ತು ನನ್ನ ಅಂತರಂಗ. ಸುಧನ್ವನನ್ನು ಎದುರಿಸಲು ಸಜ್ಜಾದೆ…      ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-15 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ. ಲೇ:ಸವಿತಾ ದೇಶಮುಖ  ೧೯೪೭ರ ಸಮಯ… ದೇಶಕ್ಕೆ ಸ್ವಾತಂತ್ರ್ಯದ ಸುಳಿವು ಸಿಗುತ್ತಿದ್ದಂತೆಯೇ, ಜಯದೇವಿ ತಾಯಿಯವರು ಸ್ತ್ರೀಯರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಸಲಾರಂಭಿಸಿದರು.ಸ್ವಾಭಿಮಾನಿ ಸಮಾಜ, ಸ್ತ್ರೀಯರ ಕರ್ತವ್ಯ ಮತ್ತು ಸ್ವಾತಂತ್ರ ಭಾರತದ ಬದುಕಿನ ಬಗ್ಗೆ ಊರು-ಊರುಗಳಲ್ಲಿ ಜಾಗೃತಿ ಮೂಡಿಸಿದರು. ಮನೆಯಲ್ಲಿ ಗಂಡನ ಆರೋಗ್ಯ ಸರಿಯಿಲ್ಲದಿದ್ದರೂ, ಕುಟುಂಬದ ಬೆಂಬಲದೊಂದಿಗೆ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡರು. ಕೊನೆಗೂ… ಆ ಮಹಾನ್ ಕ್ಷಣ ಬಂತು ಭಾರತ ಮಾತೆ ಬಿಡುಗಡೆ ಹೊಂದುವ ದಿನ ಬಂದೇಬಿಟ್ಟಿತು… ಭಾರತದ ಕೊನೆಯ ಬ್ರಿಟನ್  ವೈಸರಾಯ ಲೂಯಿಸ್ ಲಾರ್ಡ್ ಮೌಂಟ್ ಬೆಂಟನ್   ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿದ…… ೧೪-೮-೧೯೪೭ ರಂದು ದೇಶ ಸ್ವಾತಂತ್ರ್ಯವಾಗುವ ಸಂತಸದ ಮುನ್ನಾ ದಿನ…. ಅಂದು ಸಂಜೆ ತಾಯಿ ಸಂಗವ್ವನವರು,  ಅಜ್ಜಿಯಂದಿರಾದ ಬಸವ್ವಬಾಯಿ ವಾರದ ಮತ್ತು ಗೌರವ್ವ ಬಾಯಿ ವಾರದ ಮುಂತಾದ ಹಿರಿಯರೊಡನೆ ಜಯದೇವಿ ತಾಯಿಯವರು ಶಿವಯೋಗಿ ಸಿದ್ದರಾಮೇಶ್ವರನ ಮಂದಿರದಲ್ಲಿ ಅವನ ಸನ್ನಿಧಿಗೆ ಬಂದರು …ಮೊಟ್ಟಮೊದಲ ಬಾರಿಗೆ ಸಿದ್ದರಾಮನ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದರು ‌.ಇಡೀ ರಾತ್ರಿ ಅಲ್ಲಿಯೇ ಉಳಿದರು…. ಆ ಕಡೆ ದೇಶ ಸ್ವಾತಂತ್ರವಾಗುತ್ತಿದ್ದರೆ ಈಕಡೆ ಎಲ್ಲ ತಾಯಿಯಂದಿರು ಮಂದಿರದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು‌. ಧ್ಯಾನ ಭಜನೆ ಜಾಗರಣೆಯು ಪ್ರಾರಂಭವಾಗಿತ್ತು. ೧೫-೮-೧೯೪೭ ರ ಸುಪ್ರಭಾತದಲ್ಲಿ ಗೌರವ್ವಬಾಯಿ ವಾರದ ಧ್ವಜಾರೋಹಣ ಮಾಡಿದರು.  ಎಲ್ಲರೂ ಕೂಡಿ ಇಡೀ ಊರಿಗೆ ಊಟ ಕೊಟ್ಟರು .ಸ್ವಾತಂತ್ರದ ಸಂಭ್ರಮಾಚರಣೆ ಮಾಡಿದರು. ಸ್ವಾತಂತ್ರ್ಯ ಸಿಗುವ ಹಿಂದಿನ ದಿನದಿಂದ ಅಂದರೆ ೧೪ ರಿಂದ ೧೮ ತಾರೀಖಿನ ಮುಂಜಾನೆಯವರೆಗೂ  ಮೂರು ದಿನ ಮತ್ತು ನಾಲ್ಕು ರಾತ್ರಿಗಳು ಸತತವಾಗಿ ಎಲ್ಲ ತಾಯಂದಿರು ದೇವಾಲಯದ ಆವರಣದಲ್ಲಿಯೇ ಹಗಲು ಹೊತ್ತು ಚರಕದ ಮೂಲಕ ನೂಲ ತೆಗೆಯುವ ನೇಯ್ಗಗೆ ಕಾಯಕ ಮತ್ತು ಅನ್ನದಾಸೋಹ ಮಾಡಿದರು….ರಾತ್ರಿ ಹೊತ್ತು ಸಿದ್ದರಾಮನ ಸನ್ನಿಧಿಯಲ್ಲಿ ಕಾಲ ಕಳೆದರು.ಊರಿನ ಎಲ್ಲರಿಗೂ ಅನ್ನದಾಸೋಹ ನಡೆಯಿತು.ಮೂರು ದಿನಗಳ ಕಾಲ ಸೇವೆ, ಭಕ್ತಿ ಮತ್ತು ಕಾಯಕ ಒಂದಾಗಿ ಬೆಸೆದವು. ಭಾರತಾಂಬೆಯ ಬಿಡುಗಡೆಯ ಸಂದರ್ಭವನ್ನು ಜಯದೇವಿ ತಾಯಿಯವರು ನಮ್ಮೆದುರಿಗೆ ಈ ರೀತಿಯಾಗಿ ವಿವರಿಸಿ ಹೇಳುತ್ತಿದ್ದರು…….  ಭಾರತಭೂಮಿಯ ಇತಿಹಾಸದಲ್ಲಿ ಒಂದು ಹೊಸ ಬೆಳಗಿನ ಉದಯವಾಗಿತ್ತು. ಶತಮಾನಗಳ ದಾಸ್ಯದಿಂದ ಬಳಲಿದ ಜನರ ಹೃದಯಗಳಲ್ಲಿ, ಆ ದಿನ ಉದಯಿಸಿದ ಸೂರ್ಯ ಕೇವಲ ಬೆಳಕನ್ನ ಅಲ್ಲಸ್ವಾತಂತ್ರ್ಯದ ಉಸಿರಾಟಕ್ಕೆ ಉಸಿರು ತಂದನು.  “ಭಾರತ ದೇಶಕ್ಕೆ ಸ್ವಾತಂತ್ರ್ಯ”……ಘೋಷಣೆ ಆಗುತ್ತಿದ್ದಂತೆ, ದೇಶದಾದ್ಯಂತ ಒಂದು ಅದ್ಭುತ ಭಾವನಾತ್ಮಕ ಅಲೆ ಹರಡಿತು.ಗ್ರಾಮದಿಂದ ನಗರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿ ಹೃದಯದಲ್ಲೂ ಒಂದೇ ಮಾತು……“ನಾವು ಸ್ವತಂತ್ರರು!”ರಾತ್ರಿಯ ಮಧ್ಯದಲ್ಲಿ ರೇಡಿಯೋಗಳ ಮುಂದೆ ಕುಳಿತು ಜನರ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು……ಆ ಕಣ್ಣೀರು… ಅನೇಕ ಶೂರರು ವೀರರ ತ್ಯಾಗ ಬಲಿದಾನದ ಕನಸು ನೆರವೇರಿದ ಸಂತಸದ ಕಣ್ಣೀರು……!!!ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮದ ವಾತಾವರಣಮಕ್ಕಳು ಯುವಕರು ಹಿರಿಯರು ಓಡಾಡುತ್ತಾ “ವಂದೇ ಮಾತರಂ” ಎಂದು ಕೂಗುತ್ತಿದ್ದರು, ಮಹಿಳೆಯರು ಮನೆ ಮುಂಭಾಗ ರಂಗೋಲಿ ಹಾಕಿ, ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು, ಎಲ್ಲಹಳೆಯ ಕಷ್ಟಗಳನ್ನು ಮರೆತು ಎಲ್ಲರೂ ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು. ರಸ್ತೆಗಳು ಜನಸಾಗರದಿಂದ ತುಂಬಿ ಹೋಗಿದ್ದವು.ತ್ರಿವರ್ಣ ಧ್ವಜವು ಗಾಳಿಯಲ್ಲಿ ಹಾರಾಡುತ್ತಿತ್ತು…… *ಜನರ ಹೃದಯದಲಿ ಗರ್ವದ ಬಾವುಟ ಹಾರಾಡುತಿತ್ತು..*ಜನರು ನೃತ್ಯ ಮಾಡಿ, ಹಾಡಿ, ಸಿಹಿ ಹಂಚಿಕೊಂಡು ಉಲ್ಲಾಸದಲ್ಲಿ ಮುಳುಗಿದ್ದರು. ಅಂದು ಕೆಲವರು ತಮ್ಮ ಜೀವವನ್ನು ತ್ಯಾಗ ಮಾಡಿದವರನ್ನು ನೆನೆದು ಮೌನವಾಗಿ ಕಣ್ಣೀರಿಟ್ಟರು.ಸುಭಾಷ್ ಚಂದ್ರ ಬೋಸ್- ಭಗತ್ ಸಿಂಗ್ ಹೀಗೆ ಅನೇಕ ವೀರರ ಬಲಿದಾನವೇ ಈ ಸ್ವಾತಂತ್ರ್ಯದ ಬೆಲೆ ಎಂಬ ಅರಿವು ಜನರಲ್ಲಿ ಗಾಢವಾಗಿತ್ತು.ಹೃದಯಗಳಲ್ಲಿ ಒಂದೇ ಭಾವನೆ….“ಇದು ನಮ್ಮ ದೇಶ… ನಮ್ಮ ಸ್ವಾತಂತ್ರ್ಯ… ನಮ್ಮ ಭವಿಷ್ಯ!”ಆ ದಿನದ ಹರುಷವನ್ನು ಪದಗಳಲ್ಲಿ ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲ.ಅದು ನಮ್ಮ ದೇಶದ ಪುನರ್ಜನ್ಮ ಸಂದರ್ಭ….ದೇಶದ ಆತ್ಮ ಪುನಃ ಹುಟ್ಟಿದ ಕ್ಷಣ…….ಆ ಕ್ಷಣದಲ್ಲೇ ಜನರು ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡರು….ನಮ್ಮ ಭಾರತ ದೇಶವು ಅಂದಿನಿಂದಬಡತನವಿಲ್ಲದ ದೇಶ, ಸಮಾನತೆಯ ಸಮಾಜ, ಶಾಂತಿಯ ಭಾರತ ಕಟ್ಟವ ಕನಸು ಕಂಡುಕೊಳ್ಳಲಾರಂಭಿಸಿದ್ದೇವು…ಆದರೆ…ಆ ಹರುಷದ ನಡುವೆಯೇ ವಿಭಜನೆಯ ನೋವು ಕೂಡ ಎಲ್ಲ ಹೃದಯಗಳನ್ನು ಕಾಡುತ್ತಿತ್ತು. ಆದರೂ, ಆ ದಿನದ ಸಂತೋಷದ ಹೊಳೆಯು ಆ ನೋವನ್ನು ಸಹ ಮಸುಕಾಗಿಸಿತು.೧೯೪೭ ರ ಆ ದಿನ…ಭಾರತದ ಪ್ರತಿಯೊಂದು ಹೃದಯವೂ ಒಂದೇ ಲಯದಲ್ಲಿ ಹಾಡುತಿತ್ತು…….*ಜೈ ಹಿಂದ*.. ಜೈ ಹಿಂದ್… ಭಾರತ ಮಾತೆಗೆ ಜಯವಾಗಲಿ…. ಭಾರತ ಮಾತಾ ಕಿ ಜೈ ಎನ್ನುವ ಕೂಗು ಎಲ್ಲಡೇಗೂ ಕೇಳುತ್ತಿತ್ತು…….!!!! ಭಾರತೀಯರು ಸ್ವಾತಂತ್ರ್ಯದ ದಿನಗಳನ್ನು ಅನುಭವಿಸುವದ್ರಲ್ಲಿಯೇ ದೇಶಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು ….ಸ್ವಾತಂತ್ರ ಲಭಿಸಿದ ಕೆಲವು ತಿಂಗಳೊಳಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ತೆ ಆಗಿತ್ತು……..ಈ ದುರಂತ ಜಯದೇವಿ ತಾಯಿಯವರನ್ನು ಬಹಳ ದುಃಖಕ್ಕೆ ಇಡುಮಾಡಿತ್ತು…  ತಾಯಿಯವರು ಹೇಳುತ್ತಿದ್ದಂತೆ ಗಾಂಧೀಜಿಯವರು ತೀರಿಕೊಂಡಾಗ ಇಡೀ ದೇಶವೇ ಸ್ಮಶಾಣದ ಮೌನದಲಿ ಮುಳಗಿತ್ತು.. ಅಘಾತಕ್ಕೆ ಒಳಗಾಗಿತ್ತು…ಗಾಂಧೀಜಿಯವರ ಹತ್ಯೆ (೧೯೪೮ ಜನವರಿ ೩0) ದೇಶದ ಇತಿಹಾಸದಲ್ಲಿ ಅತಿ ದುಃಖಭರಿತ ಕ್ಷಣವಾಗಿತ್ತು….. ಜನ- ಮನಗಳನ್ನು ತಲ್ಲಣಗೊಳಿಸಿತು. ಜಯದೇವಿ ತಾಯಿಯವರು ಈ ಸುದ್ದಿಯನ್ನು ಕೇಳಿದಾಗ ಅವರ ಮನ ಕುಸಿದುಹೋಯಿತು. ….“ದೇಶಕ್ಕೆ ಅಹಿಂಸೆಯ ದೀಪ ಹಚ್ಚಿದ ಮಹಾತ್ಮನನ್ನು ಕತ್ತಲೆಯು ನುಂಗಿದೆ. ಅಹಿಂಸೆಯ ಪಾಠ ಹೇಳಿಕೊಟ್ಟ ಮಹಾತ್ಮರು ಹಿಂಸೆಯ ಅಟ್ಟಹಾಸಕ್ಕೆಬಲಿಯಾದರು….ಅವರು ಬದುಕಿದ್ದರೆ ನಮ್ಮ ಹಾದಿ ಬೆಳಗುತ್ತಿತ್ತು… ಈಗ ನಮ್ಮೊಳಗೆ ನಾವು ಬೆಳಕಾಗಬೇಕು.ಗಾಂಧೀಜಿಯವರ ದೇಹ ಹೋಗಿರಬಹುದು, ಆದರೆ ಅವರ ತತ್ತ್ವಗಳು ಸಾಯುವುದಿಲ್ಲ” ಎಂದು ಜನರಿಗೆ ಧೈರ್ಯ ತುಂಬಿದರು.ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು.. ಜೊತೆಗೆ ಹೃದಯದಲ್ಲಿ ಒಂದು ದಿಟ್ಟ ಸಂಕಲ್ಪ ಹುಟ್ಟಿತು….. ಗಾಂಧೀಜಿಯ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಪಣತೊಟ್ಟರು. ದೇಶದಾದ್ಯಂತ .. ಜನರ ನೋವು ಆಕ್ರೋಶದಲಿ ಮೂಳಗಿರುವುದನ್ನು ನೋಡಿದಾಗ….. ಗಾಂಧೀಜಿಯವರು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದು ತೋರುತ್ತಿತ್ತು….“ಇನ್ನು ಮುಂದೆ ದೇಶಕ್ಕೆ ದಾರಿ ತೋರುವರು ಯಾರು?! ಎಂಬ ಪ್ರಶ್ನೆ ಜನರನ್ನು ಕಾಡಿತು.ಹೊಸತಾಗಿ ಸಿಕ್ಕ ಸ್ವಾತಂತ್ರ್ಯದ ಸ್ಥಿರತೆಗೆ ಬಗ್ಗೆ ಯೋಚಿಸಿ ಜನರಲ್ಲಿ ಭಯ ಉಂಟಾಯಿತು. ಜೊತೆ ಜೊತೆಗೆ ಧರ್ಮ, ಜಾತಿ ಭೇದಗಳಿಂದ ದೂರ ಇರಬೇಕು ಎಂಬ ಅರಿವು ಮೂಡಿಸುವ ಸಲುವಾಗಿಗ್ರಾಮಗಳಲ್ಲಿ, ನಗರಗಳಲ್ಲಿ ಶೋಕ ಸಭೆಗಳು ನಡೆದಸಿದರು….. ಗಾಂಧೀಜಿಯವರು ಬೋಧಿಸಿದ ಅಹಿಂಸೆ, ಸತ್ಯದ ಮಾರ್ಗವನ್ನು ಮತ್ತೆ ನೆನಪಿಸಿಕೊಟ್ಟರು .ಜನರು ತಮ್ಮೊಳಗಿನ ನಾಯಕತ್ವವನ್ನು ಹುಡುಕಲು ಪ್ರೇರೇಪಿಸಿದರು.“ನಾವು ಗಾಂಧೀಜಿಯವರಂತೆ ಬದುಕಬೇಕು” ಎಂಬ ಮನೋಭಾವನ್ನು ಬೆಳೆಸಲು ಸತತವಾಗಿ ಪ್ರಯತ್ನಿಸಿದರು .ಜಯದೇವಿ ತಾಯಿಯವರು ಜನರನ್ನು ಉದ್ದೇಶಿಸಿ“ಗಾಂಧೀಜಿಯವರ ರಕ್ತದ ಪ್ರತಿಯೊಂದು ಹನಿ ನಮ್ಮ ಹೃದಯದಲ್ಲಿ ದೇಶಭಕ್ತಿಯ ಬೀಜವಾಗಬೇಕು.ಕೋಪದಿಂದ ಅಲ್ಲ, ಪ್ರೀತಿಯಿಂದ ಈ ದೇಶವನ್ನು ಕಟ್ಟೋಣ…..ಗಾಂಧೀಜಿಯವರ ಹತ್ಯೆ ಕೇವಲ ಒಬ್ಬ ಮಹಾನ್ ವ್ಯಕ್ತಿಯ ಮರಣವಲ್ಲ,ಅದು ಒಂದು ಯುಗದ ಅಂತ ಆದರೆ ಮತ್ತೊಂದು ಯುಗದ ಆರಂಭವೂ ಹೌದು …. ಜನರು ಅವರ ಮಾರ್ಗವನ್ನು ಅನುಸರಿಸಲು ಪ್ರೇರೇಪಿತವಾಗು ಕ್ಷಣ ಬಂದೋದಗಿದೆ .ನಾವೆಲ್ಲರೂ ಸೇರಿ ಭಾರತ ಮಾತೆಯ ಸೇವೆ ಗ್ಯ್ಯೋಣ ಎಂದು ಸಾರಿದರು. ಗಾಂಧೀಜಿಯವರ ಹತ್ಯೆಯಾದ ಸಮಯದಲ್ಲಿ ಜಾತಿ ಮತಗಳ ಮಧ್ಯೆ ಕಲಹ ಪ್ರಾರಂಭವಾಗಿತ್ತು ಸಾಮರಸ್ಯ ಕಳೆದು ಹೋಗಿದ್ದು ಬಹುತೇಕ ಜನರು ಜಾತಿಗಲಭೆ ನಡೆಯುತ್ತಿದ್ದವು ಅಲ್ಲಲ್ಲಿ ಭಾವಿಸಿ ತಾಯಿಯವರು ಸಹನೆ ಸಾಮರಸ್ಯದಂತ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಕೊಳ್ಳುವಲ್ಲಿ  ಪ್ರಯತ್ನ ಪಟ್ಟರು. ಗಾಢ ದುಃಖ, ಆತಂಕ ಮತ್ತು ಜಾಗೃತಿ ತುಂಬಿದ ಒಂದು ಭಾಷಣವನ್ನು ಜತದೇವಿ ತಾಯಿಯವರು“ಸಹೋದರ ಸಹೋದರಿಯರೇ…”ಇಂದು ನಮ್ಮ ಹೃದಯಗಳು ಒಡೆದಿವೆ…ನಮ್ಮ ದೇಶದ ಆತ್ಮವೇ ಆಗಿದ್ದ ಮಹಾತ್ಮ ಗಾಂಧೀಜಿ ಅವರು ನಮ್ಮನ್ನೆ ಬಿಟ್ಟು ಹೋಗಿದ್ದಾರೆ.ಅವರ ದೇಹ ಕೊನೆಗೊಂಡಿರಬಹುದು… ಆದರೆ ಅವರ ಚಿಂತನೆ, ಅವರ ಅಹಿಂಸೆಯ ಮಾರ್ಗ ಯಾವತ್ತೂ ಸಾಯುವುದಿಲ್ಲ.ಇಂತಹ ಸಮಯದಲ್ಲಿ, ಕೆಲವರು ಜಾತಿ-ಧರ್ಮದ ಹೆಸರಿನಲ್ಲಿ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆಗಾಂಧೀಜಿ ಅವರು ತಮ್ಮ ಪ್ರಾಣವನ್ನೇ ಕೊಟ್ಟದ್ದು ಏಕೆ?ಅವರು ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ… ಎನ್ನದೇ“ನಾವು ಎಲ್ಲರೂ ಭಾರತೀಯರು” ಎಂದು ಬದುಕಿದರು…ಅದೇ ಮಾತನ್ನು ಅವರು ಕೊನೆಯ ಉಸಿರಿನಲ್ಲೂ ಹೇಳಿ ಹೋಗಿದ್ದಾರೆ.ಇಂದು ನಾವು ಜಗಳ ಮಾಡಿದರೆ…ಅದು ಗಾಂಧೀಜಿಯವರ ಆತ್ಮಕ್ಕೆ ನೋವು ಕೊಡುತ್ತದೆ.ಅವರು ನಮಗೆ ತೋರಿಸಿದ ದಾರಿ — ಪ್ರೀತಿ, ಸಹನೆ, ಸೌಹಾರ್ದ — ಅದನ್ನೇ ನಾವು ಅನುಸರಿಸಬೇಕು.ಜಾತಿ ಎನ್ನುವುದು ನಮ್ಮ ನಡುವೆ ಗೋಡೆ ಕಟ್ಟಲು ಅಲ್ಲ…ಅದು ವೈವಿಧ್ಯದ ಸುಂದರತೆಯನ್ನು ಅರಿಯಲು.ಇಂದು ನಾನು ನಿಮಗೆ ವಿನಂತಿ ಮಾಡುತ್ತೇನೆ  ಕೋಪ ದ್ವೇಷ ಕಲಹವನ್ನು ಬಿಡಿ…ಹೃದಯವನ್ನು ತೆರೆದುಕೊಳ್ಳಿ…ಒಬ್ಬರನ್ನೊಬ್ಬರು ಅಪ್ಪಿಕೊಳ್ಳಿ…ಗಾಂಧೀಜಿ ಜೀವಂತವಾಗಿರುವುದು ನಮ್ಮ ನಡೆ-ನುಡಿಯಲ್ಲಿ…ನಮ್ಮ ಒಗ್ಗಟ್ಟಿನಲ್ಲಿ… ನಮ್ಮ ಮಾನವೀಯತೆಯಲ್ಲಿ…ನಾವು ಒಟ್ಟಿಗೆ ನಿಂತರೆ… ಭಾರತ ಸದಾ ಶಕ್ತಿಶಾಲಿಯಾಗಿರುತ್ತದೆ. “ಸಿದ್ದರಾಮ ಬಸವ| ಬುದ್ಧ ಗಾಂಧೀಜಿಯುತಿದ್ದಲು ಜನ ಮನ ದುಡದಾರ- ಲೋಕವೂಶುದ್ಧ ಸದಾಚಾರಿ ಮಾಡಲು!!”

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಬಸವೋತ್ತರ ಕಾಲದ ಶರಣರು ಮತ್ತು ಶಿವಯೋಗ ಸಾಧಕರಲ್ಲಿ ಪರಮ ಪೂಜ್ಯ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಕಾರ್ಯ ಅವಿಸ್ಮರಣೀಯ.ಇವರ ಕರ ಸಂಜಾತ ಹಾಗೂ ಅವರ ಪಡಿನೆರಳಿನಂತೆ ಬದುಕಿ ಬಸವ ಜಯಂತಿ ಆಚರಣೆ ಆರಂಭಿಸಿದ ಧೀಮಂತ ಶಿವಯೋಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು. ಕಾಶಿ ಬಿಟ್ಟು ಅಥಣಿಗೆ ಬಂದ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು. ಅವತ್ತಿನ ಶ್ರೇಷ್ಠ ಲಿಂಗಾಯತ ಧರ್ಮದ ಹಿರಿಯ ಸ್ವಾಮಿಗಳು ನಾಯಕನೂರಿನ ಕಾಶಿನಾಥ ಶಾಸ್ತ್ರಿಗಳು ಅವರಿಗೆ ಭೇಟಿ ಮಾಡಿ ತಾವು ಕಾಶಿಗೆ ಹೋಗ ಬೇಕೆನ್ನುವ ಪ್ರಬಲ ಇಚ್ಛೆಯನ್ನು ಮೃತ್ಯುಂಜಯ ಸ್ವಾಮಿಗಳು ವ್ಯಕ್ತ ಪಡಿಸುತ್ತ ಕಾಶಿಗೆ ಹೋಗುವ ತಯಾರಿ ಬಗ್ಗೆ ಕಾಶಿನಾಥ ಶಾಸ್ತ್ರಿಗಳನ್ನು ಕೇಳಿದರು. ಆಗ ಶ್ರೀ ಕಾಶಿನಾಥ  ಶಾಸ್ತ್ರಿಗಳು ದೂರದ ಊರಿಗೆ ಹೋಗಿ ತಿಳಿಯದ ಸಂಸ್ಕೃತ ಭಾಷೆ ಕಲಿಯುವಕ್ಕಿಂತ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಹತ್ತಿರ ವಚನ ಸಾಹಿತ್ಯ ಮತ್ತು ಶಿವಯೋಗ ಸಾಧನೆ ಮಾಡು ಎಂದು ಸಲಹೆ ನೀಡಿದರಂತೆ.  ಅವರ ಸಲಹೆ ಮತ್ತು ವಿಚಾರದಂತೆ ಶ್ರೀ ಮೃತ್ಯುಂಜಯ ಸ್ವಾಮಿಗಳು ನೇರವಾಗಿ ಅಥಣಿಗೆ ಬಂದು ತಮ್ಮ ಅಧ್ಯಯನ ವಿದ್ಯಾಭ್ಯಾಸದ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಆಗ ಅಥಣಿ ಶ್ರೀ ಗಳು ಇವರನ್ನು ಪರೀಕ್ಷಿಸಲೆಂದು ಬಾಲಕನತ್ತ ಹೆಚ್ಚು ಗಮನ ನೀಡದೆ ಸುಮ್ಮನಾದರು.  ಏಕೋ ಬೇಸರಗೊಂಡ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಲ್ಲಿರುವ ಮಠದ ಸೇವಕರನ್ನು ವಿಚಾರಿಸುತ್ತಾ, ಯಾವ ಕೆಲಸ ಮಾಡಿದರೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಕೇಳಿದರು. ಆಗ ಮಠದ ಸ್ಥಳೀಯರು ಶಿವಯೋಗಿಗಳಿಗೆ ಬೆಳಿಗ್ಗೆ ಐದಕ್ಕೆದ್ದು ಮಠದ ಅಂಗಳ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವುದು ಅವರಿಗೆ ಪ್ರೀತಿಯ ಕೆಲಸ. ನೀನು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಈ ಕೆಲಸ ಮಾಡಿದರೆ, ನಿನ್ನನ್ನು ಶಿವಯೋಗಿಗಳು ಶಿಷ್ಯನನ್ನಾಗಿ ಸ್ವೀಕರಿಸುವರು ಎಂದು ಸಲಹೆ ನೀಡಿದರಂತೆ.  ಇದರಿಂದ ಪುಳುಕಿತನಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸಿ ಮತ್ತೆ ತಮ್ಮ ಕೋಣೆಗೆ ಹೋಗಿ ಮಲಗಿದರು. ಬೆಳಿಗ್ಗೆ ಎಂದಿನಂತೆ ಎದ್ದು ಮಠದ ಕಸ ಹೊಡೆಯಲು ಪೂಜ್ಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಇದ್ದಾಗ ಮಠವು ಸಂಪೂರ್ಣ ಸ್ವಚ್ಛವಾಗಿತ್ತು. ಹಿತ್ತಲದಲ್ಲಿ ನೀರು ಕಾಯಿಸಲು ಹೋದಾಗ  ಅಲ್ಲಿ ಹಂಡೆಯಲ್ಲಿ ನೀರು ಬೆಂಕಿಯಾಗಿದ್ದವು.  ಯಾರೋ ಈ ಕಾರ್ಯ ಮಾಡಿರ ಬಹುದೆಂದು ಶಿವಯೋಗಿಗಳು ಅಂದು ತಾವು ಕಾಯಕ ಮಾಡದ ಕಾರಣ ಎರಡೂ ಹೊತ್ತು  ಪ್ರಸಾದ ಸೇವಿಸದೆ ಮಲಗುತ್ತಾರೆ. ಮತ್ತೆ ಬೆಳಿಗ್ಗೆ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಬೆಳಗಿನ ಜಾವದ ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವ ಕಾರ್ಯ ಮುಂದುವರೆಸುತ್ತಾರೆ. ಮತ್ತೆ ಎಂದಿನಂತೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ನಿರಾಸೆಯಾಗುತ್ತಾರೆ. ಮತ್ತೆ ಪ್ರಸಾದ ಸೇವಿಸದೆ ಮಠದ ಇತರ ಕಾರ್ಯ ಮಾಡುತ್ತಾ ಇಷ್ಟ ಲಿಂಗ ಪೂಜೆ ಸಲ್ಲಿಸಿ ಮಲಗುತ್ತಾರೆ.  ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಉಪವಾಸದ  ಕೆಲಸ ಮಠದ ಯಾರಿಗೂ ಗೊತ್ತಾಗುವುದಿಲ್ಲ. ಒಂದು ದಿನ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಈ ಕೆಲಸ ಮಾಡುತ್ತಾರೆ ಎಂದು ನೋಡ ಬೇಕೆಂದು ರಾತ್ರಿಯಿಡಿ ಎಚ್ಚರವಿದ್ದು  ಯಾರು ಈ ಕಾರ್ಯವನ್ನು ಮಾಡುತ್ತಾರೆ ಎಂದು ನೋಡುತ್ತಾ ಕುಳಿತು ಕೊಳ್ಳುತ್ತಾರೆ. ಬೆಳಿಗ್ಗೆ ಬಾಲಕ ಮತ್ತೆ ಮಠದ ಕಸವ ಹೊಡೆಯಲು ಮುಂದಾದಾಗ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದು ಏಕೆ ಹೀಗೆ ಅಪರಾತ್ರಿಯಲ್ಲಿ ನೀನು ಕಸವನ್ನು ಹೊಡೆಯುತ್ತಿ ಎಂದು ಗದರಿಸಿದಾಗ ಬಾಲಕ ಭಯ ಪಟ್ಟು ಜೋರಾಗಿ ಅಳತೊಡಗಿದನು. ಆಗ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳನ್ನು ಅಪ್ಪಿ ಮುದ್ದಾಡಿ ಅವರಿಗೆ ಲಿಂಗ ದೀಕ್ಷೆ ನೀಡಿ ಅಪ್ಪಟ ಬಸವ ತತ್ವ ಅಧ್ಯಯನ ಮಾಡಲು ಅವಕಾಶ ಮಾಡಿ ಕೊಡುವುದಲ್ಲದೆ. ಧಾರವಾಡದ ಡಬಗಳ್ಳಿ ಮಠದ ಉಸ್ತುವಾರಿ ನೋಡಿಕೊಳ್ಳಲು ಹೇಳುತ್ತಾರೆ. ಮುರುಘಾ ಪರಂಪರೆಯ ಶ್ರೇಷ್ಠ ಶಿವಯೋಗ ಸಾಧಕರನ್ನಾಗಿ ಮಾಡಿ ಧಾರವಾಡ ಮುಳುಗುಂದ ಮುಂತಾದ ಅನೇಕ ಮಠಗಳಲ್ಲಿ ಪೂಜ್ಯರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಗುರು ಲಿಂಗ ಜಂಗಮ ಸೇವೆ ಸಲ್ಲಿಸಿದ ಅಪ್ರತಿಮ ಶರಣ ಸಂಸ್ಕೃತಿ ಪ್ರಚಾರಕರಾಗಿ ಪ್ರತಿಯೊಬ್ಬರಿಗೂ ಆದರಣೀಯರಾಗಿದ್ದಾರೆ.  ಧಾರವಾಡದ ಶ್ರೀ ಮುರುಘಾ ಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳವರು (ಮೃತ್ಯುಂಜಯ ಅಪ್ಪಗಳು) ಕರ್ನಾಟಕದ ಶರಣ ಪರಂಪರೆಯ ಉಜ್ವಲ ಚೇತನಗಳಲ್ಲೊಬ್ಬರು. ಅವರ ಜೀವನ ಚರಿತ್ರೆಯ ಅರಿತುಕೊಳ್ಳುವುದು ನಮ್ಮ ಪುಣ್ಯದ ಕೆಲಸ. 1. *ಜನನ ಮತ್ತು ಬಾಲ್ಯ* ಜನನ: ಇವರು 1888ರ ಏಪ್ರಿಲ್ 9 ರಂದು ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಾಯಿ: ಇವರ ತಂದೆ ಕಂತಯ್ಯ ಸ್ವಾಮಿ ಮತ್ತು ತಾಯಿ ಚೆನ್ನವೀರಮ್ಮ. ಬಾಲ್ಯ: ಇವರ ಪೂರ್ವಾಶ್ರಮದ ಹೆಸರು ಮೃತ್ಯುಂಜಯ. ಬಾಲ್ಯದಲ್ಲೇ ಸಂಗೀತ ಮತ್ತು ಆಧ್ಯಾತ್ಮಿಕತೆಯತ್ತ ವಿಶೇಷ ಒಲವು ಹೊಂದಿದ್ದರು.  2. *ಶಿಕ್ಷಣ ಮತ್ತು ಸನ್ಯಾಸ* ಪ್ರಾಥಮಿಕ ಶಿಕ್ಷಣದ ನಂತರ, ಇವರು ಗದಗದ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಪ್ರಭಾವಕ್ಕೆ ಒಳಗಾದ ಇವರು, ಅವರಿಂದ ಲಿಂಗದೀಕ್ಷೆ ಮತ್ತು ಸನ್ಯಾಸ ಸ್ವೀಕರಿಸಿದರು.  3. ಧಾರವಾಡದ ಮುರುಘಾ ಮಠಕ್ಕೆ ಆಗಮನ (1916) ಮೃತ್ಯುಂಜಯ ಸ್ವಾಮಿಗಳು 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಬಂದಾಗ, ಮಠವು ಕೇವಲ ಒಂದು ಸಣ್ಣ ಕೊಠಡಿಯಂತಿದ್ದು, ಸುತ್ತಲೂ ಮುಳ್ಳಿನ ಕಂಟಿಗಳಿಂದ ಕೂಡಿತ್ತು. ತಮ್ಮ ಸಂಕಲ್ಪಶಕ್ತಿಯಿಂದ ಪಾಳುಬಿದ್ದಿದ್ದ ಮಠವನ್ನು ಇಂದು ನಾವು ನೋಡುತ್ತಿರುವ ಭವ್ಯ ದಾಸೋಹ ಕೇಂದ್ರವಾಗಿ ಪರಿವರ್ತಿಸಿದರು.  4. ಪ್ರಮುಖ ಕಾರ್ಯಗಳು ಮತ್ತು ಸಾಧನೆಗಳು ತ್ರಿವಿಧ ದಾಸೋಹ: ಅನ್ನ, ಜ್ಞಾನ ಮತ್ತು ಅಧ್ಯಾತ್ಮ – ಈ ಮೂರೂ ದಾಸೋಹಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದರು. ಉಚಿತ ಪ್ರಸಾದ ನಿಲಯ (1917): ಬಡ ವಿದ್ಯಾರ್ಥಿಗಳಿಗಾಗಿ 1917ರಲ್ಲಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇಂದು ಈ ನಿಲಯಕ್ಕೆ 100 ವರ್ಷಗಳ ಇತಿಹಾಸವಿದ್ದು, ಸಾವಿರಾರು ಬಡ ಮಕ್ಕಳು ಇಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ. 63 ಪುರಾತನರ ವಸತಿ ನಿಲಯ: ಶಿವಶರಣರ ನೆನಪಿಗಾಗಿ 63 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದರು. ಅಖಿಲ ಭಾರತ ಶಿವಾನುಭವ ಸಂಸ್ಥೆ: ಶರಣ ತತ್ವಗಳ ಪ್ರಸಾರಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ, ನಾಡಿನಾದ್ಯಂತ ಧಾರ್ಮಿಕ ಜಾಗೃತಿ ಮೂಡಿಸಿದರು.  5. ವ್ಯಕ್ತಿತ್ವ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೃತ್ಯುಂಜಯ ಅಪ್ಪಗಳು, ಯಾರೇ ಮಠಕ್ಕೆ ಬಂದರೂ ಪ್ರಸಾದ ಮಾಡದೆ ಕಳುಹಿಸುತ್ತಿರಲಿಲ್ಲ. ಇವರು ಕೇವಲ ಧಾರ್ಮಿಕ ಗುರುವಾಗಿರದೆ, ಶಿಕ್ಷಣ ತಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ನಾಡಿನ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.  ಬಯಲಲ್ಲಿ ಬಯಲಾದರು  1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಆಗಮಿಸಿದ ಅವರು, ಸುಮಾರು 48 ವರ್ಷಗಳ ಕಾಲ ಮಠದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಮಠವನ್ನು ನಾಡಿನ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದರು.  ಧಾರವಾಡದ ಮುರುಘಾ ಮಠದ ಕೀರ್ತಿಶೇಷರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು (ಮೃತ್ಯುಂಜಯ ಅಪ್ಪಗಳು) 1964ರ ಜೂನ್ 16 ರಂದು ಲಿಂಗೈಕ್ಯರಾದರು. ಡಾ ಡಿ ಸಿ ಪಾವಟೆ ಅವರು ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪಿಸಿ ಜ್ಞಾನ ದಾಸೋಹ ಮಾಡಿದ್ದಾರೆ. ಅವರಿಗೆ ಪೂರಕವಾಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು ಅನ್ನ ದಾಸೋಹ ನೀಡಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಬಡ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಸಂಕಷ್ಟ ನಿವಾರಿಸಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಅವರ ಉಜ್ವಲ ಭವಿಷ್ಯದ ರೂವಾರಿಯಾದರು. ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಮಹಾಂತ ಅಪ್ಪಗಳು ಮೃತ್ಯುಂಜಯ ಅಪ್ಪಗಳ ಹಾದಿಯಲ್ಲೇ ನಡೆದು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು __________________________ ಡಾಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top