ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನನ್ನನ್ನು
ನೆರಳಿನ ಗಾಢತೆಯಿಂದ ಅಳೆಯುತ್ತೀರಿ
ಬೇರುಗಳ ಆಳವನ್ನು
ಯಾರೂ ಗಮನಿಸುವುದಿಲ್ಲ!

ನಾನು ನಿಂತಿರುವುದು
ನಿಮಗೆ ಸುಲಭವೆನಿಸುತ್ತದೆ;
ನೆಲದೊಳಗೆ ಪ್ರತಿದಿನ
ಕುಸಿಯದೆ ಹಿಡಿದಿಟ್ಟುಕೊಳ್ಳುವ
ಬೇರಿನ ಹೋರಾಟ ನಿಮಗೆ ಕಾಣುವುದಿಲ್ಲ

ನನ್ನ ಕೊಂಬೆಗಳಲ್ಲಿ
ಹಕ್ಕಿಗಳು ಗೂಡು ಕಟ್ಟಿದಾಗ
ಅದು ಅವುಗಳ ಮನೆಯೆನ್ನುತ್ತೀರಿ;
ಗಾಳಿ ಅವನ್ನು ಕೆಡವಿದಾಗ
ನನ್ನನ್ನೇ ಶಾಪಗ್ರಸ್ತವೆನ್ನುತ್ತೀರಿ!

ನಾನು ಉದುರಿಸಿದ ಎಲೆಗಳು
ನನ್ನ ಸೋಲಲ್ಲ ಕೇಳಿರಿ;
ಹೊಸ ಋತುವಿಗೆ ಬರೆದ
ಮುನ್ನುಡಿಯಷ್ಟೇ ನೋಡಿರಿ!

ನನ್ನ ಹಣ್ಣುಗಳ ಸಿಹಿಯನ್ನು
ನಿಮ್ಮ ನಾಲಿಗೆ ನೆನಪಿಡುತ್ತದೆ;
ಆ ಸ್ವಾದಕ್ಕೆ ಕಾರಣವಾದ
ನನ್ನ ಕಹಿ ಬೇರುಗಳನ್ನು
ಯಾರೂ ನೆನಪಿಸಿಕೊಳ್ಳುವುದಿಲ್ಲ!

ಕಲ್ಲೆಸೆದ ಕೈಗಳಿಗೂ
ನೆರಳನ್ನೇ ಕೊಟ್ಟಿದ್ದೇನೆ!
ಆದರೂ ನನ್ನ ಮೌನವನ್ನು
ದುರ್ಬಲತೆಯೆಂದು ಕರೆಯುತ್ತೀರಿ!

ನಾನು ಆಕಾಶದ ಕಡೆ
ಎತ್ತರವಾಗಿ ಬೆಳೆದಂತೆಯೇ
ಭೂಮಿಯ ಆಳಕ್ಕೆ
ವಿನಯದಿಂದ ಇಳಿದಿದ್ದೇನೆ!

ಕೊನೆಗೆ ನನ್ನನ್ನು ಇಂಚಿಂಚು ಕಡಿದು
ಮೇಜು ಬಾಗಿಲು ಚಿತೆಯನ್ನಾಗಿ ಮಾಡುತ್ತೀರಿ;
ರೂಪಗಳು ಬದಲಾಗುತ್ತವೆ!
ನನ್ನ ಮರತ್ವ ಮಾತ್ರ ಸಾಯುವುದಿಲ್ಲ!

ನೀವು ಕಾಣುವುದು
ಮರದಂತಹ ನನ್ನ ಸಪೂರ ದೇಹ!
ನಾನು ಬದುಕುವುದು
ಬೇರುಗಳ ಗಾಢ ನಿಗೂಢ ಮೌನ!

ನಿಮ್ಮ ನೋಟಕ್ಕೆ
ನಾನು ಕೇವಲ ಮರದಂತ ಸ್ವತ್ರು!
ನನ್ನ ಆತ್ಮದ ಸಮಾಧಾನಕ್ಕೆ
ಲೋಕದ ಸತ್ಯ ವ್ಯವಹಾರಕ್ಕು
ನಾನೇ ಒಂದು ಭೂಮಿ ಸಂಪತ್ತು!


About The Author

Leave a Reply

You cannot copy content of this page

Scroll to Top