ಕಾವ್ಯ ಸಂಗಾತಿ
ಅರುಣಾ ನರೇಂದ್ರ
“ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ”


ಇಲ್ಲಿ ಇವರೆಲ್ಲರೂ ಹೊಟ್ಟೆ ತುಂಬಿದವರೇ ಇದ್ದಾರೆ ಸೋನಂ
ಹಸಿವಿನ ಬೆಲೆ ತುಸುವಾದರೂ ತಿಳಿಯದವರೇ ಇದ್ದಾರೆ ಸೋನಂ
ಉಪವಾಸ ಸತ್ಯಾಗ್ರಹಗಳಿಗೆ ಹಿರೇಮಣಿಗಳು ಹೇಗೆ ಮಣಿದಾರು
ಕೇವಲ ಕುರ್ಚಿಗಾಗಿ ಹಣಾ ಹಣಿ ನಡೆಸಿದವರೇ ಇದ್ದಾರೆ ಸೋನಂ
ಬಾಳಿ ಬೆಳಗಬೇಕಾದ ಮಕ್ಕಳ ಕಳೆದುಕೊಂಡವರು ಅಳುತ್ತಿದ್ದಾರೆ
ಯಾರಿಗಿದೆ ಬಾಧಕ ಕರುಳು ಅರಿಯದವರೇ ಇದ್ದಾರೆ ಸೋನಂ
ಇಲ್ಲಿ ಪ್ರಶ್ನೆ ಪತ್ರಿಕೆ ಸೋರುತ್ತದೆ ಅಲ್ಲಿ ಅತ್ಯಾಚಾರ ನಡೆಯುತ್ತದೆ
ಅನೈತಿಕತೆಯನೇ ಹೊತ್ತುಕೊಂಡು ಮೆರೆದವರೇ ಇದ್ದಾರೆ ಸೋನಂ
ಕ್ಷೀಣಿಸುತ್ತಿರುವ ನಿನ್ನ ಉಸಿರಿಗಾಗಿ ನಾವು ಉಸಿರು ಬಿಗಿ ಹಿಡಿದಿದ್ದೇವೆ
ಜೀವ ಹೋಗಿ ನೆತ್ತರು ಹರಿದರೂ ನಮ್ಮನು ನೋಡದವರೇ ಇದ್ದಾರೆ ಸೋನಂ
ದುಡಿದುಣ್ಣುವ ಶ್ರಮಿಕರು ಜೊತೆಗಿದ್ದು ಹಕ್ಕಿಗಾಗಿ ಹೋರಾಡುತ್ತೇವೆ
ನ್ಯಾಯ ನೀತಿ ಪ್ರೀತಿ ಎಂದರೆ ಗೊತ್ತಿಲ್ಲದವರೇ ಇದ್ದಾರೆ ಸೋನಂ
ಕೆಟ್ಟು ನಾರುತಿರುವ ವ್ಯವಸ್ಥೆಗೆ ರೋಸಿ ಹೋಗಿದ್ದಾಳೆ ಅರುಣಾ
ಶೈಕ್ಷಣಿಕ ಬದಲಾವಣೆ ತರಲು ಒಲ್ಲದವರೇ ಇದ್ದಾರೆ ಸೋನಂ
ಅರುಣಾ ನರೇಂದ್ರ




Nice lines
ತುಂಬಾ ಅರ್ಥಪೂರ್ಣ, ವಾಸ್ತವ ಗಜಲ್!