ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ನುಡಿಗೆ ನಮನ!
ಎಂದು ಮೈಕ್ ಹಿಡಿದ ಕ್ಷಣ,
ಸುಳ್ಳಿಗೂ ಸಿಗುತ್ತದೆ ಹೊಸ ಜನ್ಮ.

ವೇದಿಕೆಯ ಮೇಲೆ ವಿನಯದ ಪ್ರವಚನ,
ವೇದಿಕೆಯಿಂದ ಇಳಿದ ಮೇಲೆ ಅಹಂಕಾರದ ಪ್ರದರ್ಶನ!
ಮುಖಾಮುಖಿ “ಮಹಾನುಭಾವರೇ…”,
ಬೆನ್ನು ತಿರುಗಿದೊಡನೆ…
“ಅವನಾ? ಬಿಡ್ರಿ!” ಎನ್ನುವ ಅಭಿನಯ.

ಚಪ್ಪಾಳೆ ಹೊಡೆಯುವ ಕೈಗಳಿಗೆ ಗೊತ್ತು,
ಯಾರಿಗೆ ಹೊಡೆಯಬೇಕು ಎಂದು;
ಸತ್ಯಕ್ಕೆ ಅಲ್ಲ,
ಹುದ್ದೆಗೆ… ಅಧಿಕಾರಕ್ಕೆ… ಪ್ರಭಾವಕ್ಕೆ!

ಹೂಗುಚ್ಛಗಳ ರಾಶಿ,
ಶಾಲುಗಳ ಮಳೆ,
ಹೊಗಳಿಕೆಯ ಹೊಳೆ…
ಆದರೆ,
ಒಂದು ನೇರ ಮಾತು ಹೇಳುವ ಧೈರ್ಯ
ಎಲ್ಲೋ ದಾರಿಯಲ್ಲಿ ಕಳೆದುಹೋಗಿದೆ.

ಇಂದು,
ನುಡಿಗೆ ಬೆಲೆ ಇಲ್ಲ,
ನುಡಿಯ ಮಾರ್ಕೆಟಿಂಗ್ಗೆ ಬೆಲೆ!
ಸತ್ಯಕ್ಕೆ ವೇದಿಕೆ ಇಲ್ಲ,
ಸತ್ಯವನ್ನು ಅಲಂಕರಿಸುವವರಿಗೆ ಮಾತ್ರ ವೇದಿಕೆ!

“ನಿಮ್ಮ ಸೇವೆ ಅನನ್ಯ!”
ಎಂದು ಹೊಗಳುವವರೇ,
ನಾಳೆ ಮತ್ತೊಬ್ಬರ ಸೇವೆ “ಅದ್ವಿತೀಯ”
ಎಂದು ಹಾಡುವರು.
ಹೊಗಳಿಕೆಯೂ ಈಗ
ಟೆಂಡರ್ ಪದ್ಧತಿಯಲ್ಲಿ ನಡೆಯುತ್ತಿದೆ!

ನುಡಿ ನಮನದ ಸಮಾರಂಭ ಮುಗಿಯುತ್ತದೆ,
ಫೋಟೋಗಳು ಫೇಸ್‌ಬುಕ್‌ಗೆ ಹೋಗುತ್ತವೆ,
ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ.
ಆದರೆ…
ನುಡಿಯಲ್ಲಿ ಹೇಳಿದ  ‘ಒಂದೇ ಒಂದು ಮಾತು ‘
ಬದುಕಿನಲ್ಲಿ ಕಾಣುವುದಿಲ್ಲ.

“ನುಡಿ ನಮನ”  ಫಲಕ ಮಾತ್ರ ದೊಡ್ಡದು,
ಒಳಗಿರುವ ನುಡಿ ಮಾತ್ರ
ಅಕ್ಷರಗಳ ಅನಾಥಾಶ್ರಮ !


About The Author

Leave a Reply

You cannot copy content of this page

Scroll to Top