ಕಾವ್ಯ ಸಂಗಾತಿ
ಡಾ. ನಟರಾಜ್ ಆರ್ಯ
“ಅರಳಿಯ ನೆರಳು”


ಬೆಟ್ಟ ಗುಡ್ಡದ ತೋಳಲಿ
ಕೆರೆಯೂರ ಕೇರಿ;
ಅರಳಿಯ ನೆರಳಲಿ
ಊರು ಉಸಿರಾಡಿತು.
ಕರುಗಳ ಮೊರೆ,
ಒಲೆ ಹೊಗೆ,
ಒನಕೆಯ ತಾಳಕೆ
ಬೆಳಗು ಮೂಡಿತು.
ಹುಟ್ಟು ಬಂದರೆ
ಅರಳಿಯ ಕೆಳಗೆ;
ಸಾವು ಬಂದರೂ
ಅರಳಿಯ ಕೆಳಗೆ.
“ಅರಳಿ ಕಡೀಬೇಡಯ್ಯ…
ಒಳಗ ದೇವರಿರ್ತಾರೆ…”
ಹಿರಿಯರ ನುಡಿ
ಗಾಳಿಯಲಿ ತೇಲಿತು.
ಹೊನ್ನಯ್ಯನ ಕೊಡಲಿ
ಬೇರಿಗೆ ಇಳಿಯಿತು.
ಕೊಂಬೆ ಮುರಿಯಿತು.
ಗೂಡು ಉದುರಿತು.
ಮರಿ ಬಿತ್ತು.
ಊರು ಮೌನವಾಯಿತು.
ತಾಯಿಹಕ್ಕಿ ಅತ್ತಿತು;
ಗಾಳಿ ನಿಟ್ಟುಸಿರಿಟ್ಟಿತು;
ಅರಳಿಯ ಎಲೆಗಳು
ಮಾತಿಲ್ಲದೆ ಉದುರಿದವು.
ಅರಳಿ ಬಿದ್ದ ಮೇಲೆ
ಬಿಸಿಲು ಹರಡಿತು;
ಕೇರಿಯ ದಾರಿಯಲಿ
ನೆರಳು ಕಳೆದುಹೋಯಿತು.
ಹೂವಯ್ಯ
ಕಣ್ಣು ಮುಚ್ಚಿದ.
ಅರಳಿ ಬಿದ್ದ ಜಾಗದಲ್ಲಿ
ಇಂದಿಗೂ
ಗಾಳಿ ಬೀಸಿದರೆ
ಮೌನ ಅಲುಗಾಡುತ್ತಿದೆ.
ಡಾ. ನಟರಾಜ್ ಆರ್ಯ




ನನಗೆ ನನ್ನ ಬಾಲ್ಯ ಮತ್ತು ನನ್ನ ಹಳ್ಳಿ ಕಣ್ಣಿಗೆ ಕಟ್ಟಿದ ಹಾಗಾಯತು ನಿಮ್ಮ ಕವಿತೆ ಧನ್ಯವಾದಗಳು ಸರ್
ಸುಂದರವಾದ ಅರ್ಥಪೂರ್ಣ ಕವಿತ
ಈ ಕವಿತೆ ನಮ್ಮ ಈಗಿನ ಪರಿಸ್ಥಿತಿಯನ್ನು ಬಣ್ಣಿಸುತ್ತದೆ..ಬಹಳ ಅರ್ಥಪೂರ್ಣವಾಗಿ ಈ ಕವಿತೆ ಮೂಡಿ ಬಂದಿದೆ..ಈ ಕವಿತೆ ಭಾವನೆ ಮತ್ತು ಮನುಷ್ಯನ ಜೀವನದ ಅದೋಗತಿಯನ್ನು ಪ್ರತಿಬಿಂಬಿಸುತ್ತದೆ..
ನಟರಾಜ್ ಸರ್ ಅಭಿನಂದನೆಗಳು ಇಂಥ ಅದ್ಭುತ ಕವಿತೆಗೆ.
ಡಾ.ಎಚ್. ನಟರಾಜ್ ಅವರು ಈಗಾಲೇ ಕಾವ್ಯ ಕ್ಷೇತ್ರದಲ್ಲಿ ವಿಹಾರ ಮಾಡಿದ್ದಾರೆ. ಅವರ ಕವಿತೆಗಳು ಸಾಕಷ್ಟು ಸಂಚಲನ ಮೂಡಿಸಿವೆ. ಈ ಕವಿತೆಯೂ ಮಣ್ಣಿನ ಗುಣದ ಸಂಸ್ಕೃತಿ ಬಿಂಬಿಸಿದೆ. ಅಭಿನಂದನೆಗಳು ಸರ್.
ಜೀವ ವೃಕ್ಷದ ಬಗ್ಗೆ ಬರೆದ ಈ ಕವಿತೆ, ಎಲ್ಲರಿಗೂ ಪಾಠ.