ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ ಪಾತ್ರದೊಳಗಿಂದ ಅನುರಣಿಸುವ ಶಬ್ಧ, ಬಾವಿಯ ಜತೆಗೆ ಬಿಂದಿಗೆ ಪಿಸುಮಾತಲ್ಲಿ ಸಲ್ಲಪಿಸುವಂತೆ ಆಪ್ತವೂ ನೈಜವೂ ಆಗಿತ್ತು. ತೆಂಗಿನ ಹುರಿಹಗ್ಗ ಹಿಡಿದು ಒಂದೊಂದೇ ಉಸಿರಿನ ಜತೆಗೆ ಒಂದೊಂದೇ ಕೈಯಳತೆಯಷ್ಟು ಎಳೆಯುತ್ತಾ ಬಾವಿಯ ಆಕರ್ಷಣೆಗೆ ವಿರುದ್ಧವಾಗಿ ಕೊರಳಿಗೆ ಉರುಳು ಸಿಕ್ಕಿಸಿದ ಬಿಂದಿಗೆ ಮೇಲೇರುತ್ತಿತ್ತು. ಅಕ್ಕ ಕೊಡ ಬಗ್ಗಿಸಿ ನನ್ನ ಪುಟ್ಟ ಬೊಗಸೆ ತುಂಬಾ ನೀರು ಸುರಿದಾಗ ಅವಳ ಸ್ತ್ರೀ ಸಹಜ ಪ್ರೀತಿಯೇ ಬೊಗಸೆ ತುಂಬಾ. ನೀರೂ ಅಷ್ಟೇ, ನೆಲದವ್ವನ ಒಡಲ ಜೀವ ಜಲವದು. ವೃತ್ತಾಕಾರದ ಕಟ್ಟೆ, ಬಾವಿಯ ಮುಖಪರಿಚಯ. ಬಾವಿಯೊಳಗೆ ಇಣುಕಿದರೆ, ನಿಶ್ಚಲವಾಗಿ ಶಾಂತವಾಗಿ ನೀರು, ಆಗಸಕ್ಕೂ, ಬಾವಿಯ ಒಳ ಅಂಚಿಗೂ ಕನ್ನಡಿಯಾಗುತ್ತೆ. ಬಾವಿಯೊಳಗೆ ಇಣುಕಿದರೆ ಅದು ನಿಮಗೆ ನಿಮ್ಮದೇ ಮುಖವನ್ನು ತೋರಿಸುತ್ತದೆ, ಗಗನದ ಬಿಂಬದ ಹಿನ್ನೆಲೆಯಲ್ಲಿ. ತಿಳಿನೀರಿಗೆ ಕಡಲೇ ಗಾತ್ರದ ಕಲ್ಲೆಸೆದರೆ, ಅಷ್ಟೂ ಬಿಂಬಗಳು ವಕ್ರ ವಕ್ರವಾಗಿ, ಅಲೆಗಳ ಹಿಂದೆ ಅಲೆಯತ್ತವೆ. ಬಾವಿಯ ಇನ್ನೊಂದು ವಿಶೇಷತೆ, ಶಬ್ಧದ ಪುನರಾವರ್ತನೆ( ಇಖೋ) ಮತ್ತು ತತ್ಪರಿಣಾಮವಾಗಿ ಸ್ವರವರ್ಧನೆ. ಮಕ್ಕಳು ಬಾವಿಯ ಮುಖಕ್ಕೆ ಮುಖ ಹಚ್ಚಿ, ಹೂಂ.. ಅಂದರೆ, ಬಾವಿಯೊಳಗಿಂದ ಯಾರೋ ಹೂಂ…ಹೂಂ.. ಅಂತ ಸ್ವರಾನುಕರಣೆ ಮಾಡಿದಂತೆ, ಮಕ್ಕಳಿಗೆ ಬಾವಿಯೊಳಗೆ ರಾಕ್ಷಸ ಇದ್ದಾನೋ ಎಂಬ ಕಲ್ಪನೆ ಮೂಡಿ, ಬಾವಿಯೊಳಗಿಂದ ಕಥೆಯ ಕವಲುಗಳು ಚಿಗುರುತ್ತವೆ. ಬಾವಿಯೊಳಗೆ ನೀವು ಇಳಿದು ಮೇಲೆ ನೋಡಿದರೆ, ನಿಮಗೆ ಕಾಣಿಸುವುದು ಆಗಸದ ಒಂದು ಚಿಕ್ಕ ತುಂಡು ಮಾತ್ರ. ಬಾವಿ ಆಳವಾಗಿದ್ದರೆ, ಬಾವಿಯೊಳಗಿಂದ ಹೊರಜಗತ್ತಿನತ್ತ ನೋಟದ ವ್ಯಾಪ್ತಿ, ನಿಮ್ಮ ಕಣ್ಣಿನ ಕ್ಷಮತೆಗಿಂತ ಹೆಚ್ಚು, ಬಾವಿಯ ಹೊರಬಾಯಿಯ ಅಳತೆಯ ಮೇಲೆಯೇ ಅವಲಂಬಿಸಿರುತ್ತೆ. ಬಾವಿಯ ಅಂಚಿನಲ್ಲಿಯೂ ಜರಿಗಿಡಗಳಂಥಹಾ ಹತ್ತು ಹಲವು ಸಸ್ಯ ಪ್ರಬೇಧಗಳು ಬೇರಿಳಿಸಿ ಜೀವನೋತ್ಸಾಹದ ದ್ಯೋತಕವಾಗಿ ತೊನೆಯುತ್ತವೆ. ನೀರ ಸೆಲೆಯೇ ಜೀವಸಂಕುಲದ ನೆಲೆ ಎನ್ನುವ ಪ್ರಪಂಚವದು. ಬಾವಿಯೊಳಗೆ ಅಂಚುಗಳಲ್ಲಿ ಪಾಚಿಯೂ ಬೆಳೆಯುತ್ತೆ. ಬಾವಿಯೊಳಗೆ ಕಪ್ಪೆ, ಅದರ ಮಕ್ಕಳು ಮರಿಗಳು ಎಲ್ಲಾ ಸೇರಿ ಸುಖೀ ಸಂಸಾರ ಕಟ್ಟುತ್ತವೆ. ಬಾವಿಯಲ್ಲಿ ಜೀವಜಲದ ಒರತೆಯಿದೆಯಷ್ಟೇ. ಅದರ ಜತೆಗೇ ಬಾವಿಯಿಂದ ನೀರು ಯಾವುದೋ ಸೆರೆಯಲ್ಲಿ ಹೊರ ಹರಿಯುವ ದಾರಿಯೂ ಇದೆ. ಈ ಒಳಹರಿವು ಮತ್ತು ಹೊರ ಹರಿವಿನ ಚಲನಶೀಲತೆಯಿಂದಾಗಿ ಬಾವಿಯ ಜಲಜ್ಞಾನಸಂಗ್ರಹ ಒಂದು ಮಟ್ಟದಲ್ಲಿರುತ್ತೆ ಮತ್ತು, ನೀರು ಸದಾ ಸ್ವಚ್ಛ ನೂತನವಾಗಿರುತ್ತೆ. ಬಾವಿ ನೀರು ನೆಲದಮ್ಮನ ಮೊಲೆಹಾಲಿನಂತೆ. ಮಣ್ಣಿನ ಖನಿಜ ಸಾರಗಳು, ಅದರ ವಿಶಿಷ್ಠವಾದ ಪರಿಮಳ ನೀರಿಗೆ ರುಚಿ ಆರೋಪಿಸುತ್ತೆ. ಬಾವಿನೀರು ನಮ್ಮ ನೋಟಕ್ಕೆ ಸಿಗದ ಲಕ್ಷಾಂತರ ಜೀವಾಣುಗಳ ಸಾಮ್ರಾಜ್ಯವೂ ಹೌದು. ಲಂಗದಾವಣಿ ತೊಟ್ಟ ಹುಡುಗಿಯರು ಬಿಂದಿಗೆ ಹಿಡಿದು ಬಾವಿಯ ನೀರು ಕೊಂಡೊಯ್ಯಲು ಬಂದರೆ ಅದನ್ನು ನೋಡಿ ಹಳ್ಳಿಗೆ ಹಳ್ಳಿಯೇ ಗಜಲ್ ಬರೆಯುತ್ತೆ. ಬಾವಿ ಕಟ್ಟೆಯ ಸುತ್ತಮುತ್ತ, ಪ್ರಣಯಗೀತೆಗಳ ಗುಂಜಾರವ ಗುನುಗುನಿಸುತ್ತೆ. ಜತೆ ಜತೆಗೆ ಬಾವಿಯ ನೀರು ಕೊಂಡೊಯ್ಯಲು ಬಂದ ಗೃಹಿಣಿಯರು ಬಾವಿಯೊಳಗಿನ ದರ್ಪಣದಲ್ಲಿ, ಪರಸ್ಪರ ತಮ್ಮ ಭಾವವನ್ನೂ ಬಿಂಬಿಸಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಕಣ್ಣೀರ ಬಿಂದುಗಳು, ಆನಂದ ಭಾಷ್ಪಗಳು ಬಾವಿ ನೀರಿನಲ್ಲಿ ತಂಪು ಕಾಣುತ್ತವೆ. ಬೇಂದ್ರೆಯವರ ಪುಟ್ಟ ಮಗಳು ಒಂದು ಸಂಜೆ ಬಿಂದಿಗೆ ಹಿಡಿದು, ಬಾವಿಯತ್ತ ಹೆಜ್ಜೆ ಹಾಕುವ ದೃಶ್ಯ ನೋಡಿದ ನಡಿಗೆಯ ಹೆಜ್ಜೆಯ ಗೆಜದಜೆಯ ಲಯದಂತಹಾ ” ಸಂಜೆಯ ಜಾವಿಗೆ ಹೊರಟಾಳ ಬಾವಿಗೆ” ಅಂತ ಬರೆಯುತ್ತಾರೆ!. “ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ || ಕಿರಗೀಯ ನೀರಿಗೆ | ಒದೆಯೂತ ದಾರಿಗೆ || ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ || ಏನಾರ ನಡಿಗೆ | ಯಾವೂರ ಹುಡಿಗೆ || ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||” ಬೇಂದ್ರೆಯವರ ಪದಗಳು ನಾಟ್ಯಾಂಗನೆಯ ಪದಗಳು. ಹುಡುಗಿ, ಪುಟ್ಟ ಸೀರೆಯುಟ್ಟು, ನಡೆಯೋದಲ್ಲ, ಹಾದಿಗೆ ಪುಟ್ಟ ಪಾದಗಳಿಂದ ಹಾದಿಯನ್ನು ಒದಿಯೂತ ನಡೆಯುವಾಗ, ಆಕೆಯ ಗೆಜ್ಜೆ, ಹೆಜ್ಜೆ ಮತ್ತು ನಡಿಗೆಯಲ್ಲಿ ಸಂಭ್ರಮ ಪದ್ಯವಾಗಿದೆ. ಆಕೆ ಬಿಂದಿಗೆಯಲ್ಲಿ ಜಲತುಂಬಿ ಹಿಂತಿರುಗಿ ನಡೆಯುವ ಭಂಗಿ ಈ ಕೆಳಗಿನ ಸಾಲುಗಳು. “ಮೂಗಿನ ನೇರಿಗೆ | ಹೊರಳೀದೆ ಊರಿಗೆ || ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ || ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ || ಝಣ್ಝಣ ಅಂದಿಗೆ | ಅಂದಾವ ಹೊಂದಿಗೆ || ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ” ಪು.ತಿ.ನರಸಿಂಹಾಚಾರ್ ಅವರು ಬಾವಿಯ ಮೂಲಕ ತತ್ವದರ್ಶನ ಮಾಡುತ್ತಾರೆ. ” ಬಾಯಾರಿಕೆಯೊಳು ಬೇಯುತ ಬಂದಿತು ಬುದ್ಧಿ ಎದೆಯ ಬಾವಿಯ ಬಳಿಗೆ ಹೇರಾಳದ ಕಗ್ಗತ್ತಲ ತಳದೊಳು ಅಮೃತ ರುಚಿಯ ತಿಳಿನೀರೆಡೆಗೆ “ ತರ್ಕಿಸುವ ಮನಸ್ಸು ಚಿಂತನೆಯ ಬೆಂಕಿಯಲ್ಲಿ ಕಾದು, ಬಾಯಾರಿ ಬರುವುದು ಎದೆಯ ಬಾವಿಯ ಬಳಿಗೆ. ಕಾವ್ಯದ ಭಾಷೆಯಲ್ಲಿ, ಎದೆ ಎಂದರೆ ಭಾವ, ಕಲ್ಪನ , ಪ್ರೀತಿ. ಆ ಬಾವಿಯ ತಳದಲ್ಲಿದೆ ತಿಳಿಯಾದ ನೀರು, ತಿಳಿವಿನ ನೀರು. ಆ ಅರಿವಿಗೆ ಅಮೃತದ ರುಚಿಯಿದೆ, ಬುದ್ಧಿ ಕೆತ್ತುವ ಲಾಜಿಕ್ ನ ವಾಸ್ತುಶಿಲ್ಪಕ್ಕೆ ಆ ರುಚಿಯಿಲ್ಲ. ಗೋಪಾಲಕೃಷ್ಣ ಅಡಿಗರ ಕವನ, ‘ ಭೂತ’ ಎಂಬ ಕವನದಲ್ಲೂ ಬಾವಿ ಪ್ರತಿಮೆಯ ಅಪೂರ್ವ ಪ್ರಯೋಗವಿದೆ. “ಬಾವಿಯೊಳಗಡೆ ಕೊಳವೆ ನೀರು ; ಮೇಲಕ್ಕಾವಿ ; ಆಕಾಶದುದ್ದವೂ ಅದರ ಕಾರಣ ಬೀದಿ ; ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು ನವಮಾಸವೂ ಕಾವ ಭ್ರೂಣರೂಪಿ— ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ— ಭೂತರೂಪಕ್ಕೆ ಮಳೆ ವರ್ತಮಾನ ; ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ; ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ.” ಬಾವಿಯೊಳಗೆ ಭೂತಕಾಲದ ನೀರೊರತೆ, ವರ್ತಮಾನದಲ್ಲಿ ಆವಿ, ಮೋಡವಾಗಿ ಮಳೆ ಸುರಿಯುತ್ತೆ. ಕಾಲಾಂತರ ಮತ್ತು ರೂಪಾಂತರಗಳು ಸಮಾನಾಂತರವಾಗಿ ಸಂಭವಿಸುವ ಪ್ರಕ್ರಿಯೆ ಶುರುವಾಗುವುದು ಬಾವಿಯಿಂದ. ಬಾವಿಯ ಬಗ್ಗ ಲಂಕೇಶ್ ಅವರು ಬರೆಯುವ ಈ ಸಾಲನ್ನು ಗಮನಿಸಿ! ” ಕವಿಯ ಊರಿಗೆ ಹೋದಾಗ ಅಲ್ಲಿಯ ಬಾವಿಯಲ್ಲಿ ಪಾಚಿಗಟ್ಟಿತ್ತು” ಶಿವರುದ್ರಪ್ಪನವರು ಬಾವಿಯನ್ನು ಭಾವದ ಬಾವಿಯಾಗಿ ಕಾಣುತ್ತಾರೆ. ” ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ. ದಾರಿ ನೂರಾರಿವೆ ಬೆಳಕಿನರಮನೆಗೆ! ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ; ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ. ನಾ ಬಲ್ಲೆ, ಇವು ಎಲ್ಲ ಏರುವೆಯ ಒಂದೊಂದು ಹಂತ. ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ. ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ.” ನೂರಾರು ಭಾವದ ಬಾವಿಯಿಂದ ಬೇಕಾದಷ್ಟು ಸಿಹಿನೇರನ್ನು ಎತ್ತಿಕೋ. ಯಾವ ಪಾತ್ರೆಯಲ್ಲಿ ನೀರು ತುಂಬುತ್ತೇವೋ ಆ ಪಾತ್ರೆಯ ಆಕಾರ ನೀರಿನದ್ದು!. ಸಿದ್ಧಾಂತದ ಬಂಧ ಮತ್ತು ಪೂರ್ವನಿರ್ಧಾರಿತ ಆಕಾರ, ಅಂಚುಗಳು, ಚೂಪುಗಳು ಅಗತ್ಯವೇ?. ಬಾವಿಯ ನೂರು ಭಾವಗಳ ಸಿಗಿನೀರಿನ ಮೂಲ ಉದ್ದೇಶ ಆಕಾರ ಪಡೆಯುವುದೇ? ಅಥವಾ ದಾಹ ತಣಿಸುವುದೇ?. ಹೀಗೆ ಹಲವು ಪ್ರತಿಮೆಗಳಿಗೆ ಆಕಾರ ಕೊಡುವ ಬಾವಿಯನ್ನು ವರ್ತಮಾನದ ಕವಯಿತ್ರಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರು ತುಂಬಾ ವಿಭಿನ್ನವಾಗಿ ಕವಿತೆಗಿಳಿಸಿದ್ದಾರೆ. ** ** ** ** ಬಾವಿ ಕಟ್ಟೆ “ಗುದ್ದಿ ಗುದ್ದಿ ಆಳಕ್ಕೆ ಅಗೆದು ಸಿಕ್ಕ ಜೀವ ಜಲಕ್ಕೆ ಅತ್ತ ಇತ್ತ ಮಿಸುಕಾಡದಂತೆ ಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆ ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ ಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿ ರೊಯ್ಯನೆ ಡುಬುಕಿ ಹೊಡೆದಾಗ ಕೊಡ ಸೇರಿ ಜಗತ್ತು ನೋಡುವ ಕಾತರಕ್ಕೆ ಬಾವಿಯ ಮೈ ತುಂಬಾ ಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆ ಚಹಕ್ಕೆ ನೀರು ಸದ್ದಿಲ್ಲದೇ ಕಲಬೆರಕೆಯಾಗುವ ಸಂಕಟಕ್ಕೆ ಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆ ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ ಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರು ಗಿಡದ ಬುಡಕ್ಕೋ ಅಡುಗೆ ಮನೆಯ ವ್ಯಂಜನಕ್ಕೋ? ಕುತೂಹಲ ತಣಿದ ದಿನ ಕಣ್ಣು ಹೊಳಪು ಕಳೆದುಕೊಂಡು ಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ** ** ** ** ಬಾವಿ ತೋಡುವ ಕಠಿಣ ಕೆಲಸ ಮಾಡಿ,ಸಿಕ್ಕಿದ ನೀರು ಹೊರಗೆ ಹರಿಯಬಾರದಲ್ಲಾ. ಅದನ್ನು ಹರಿಯದಂತೆ ಬಂಧಿಸಲು ಬಾವಿಗೆ ಕಟ್ಟೆ ಕಟ್ಟಬೇಕು. ಬಾವಿ, ನೀರು, ಕಟ್ಟೆ ಇವುಗಳು ಏನನ್ನು ಪ್ರತಿನಿಧಿಸುತ್ತವೆ? ಓದುಗರಿಗೆ ಬಿಡುವೆ. ಈ ಕವಿತೆಯಲ್ಲಿ, ಬಾವಿ ಮತ್ತು ಬಿಂದಿಗೆ ಎರಡು ಪ್ರಮುಖ ಪಾತ್ರಗಳು. ಅವುಗಳು ಪರಸ್ಪರ ಸಂವಾದಿಸುತ್ತಾ ಕವಿತೆ ಸಾಗುತ್ತೆ. ಬಾವಿ ಆಗಸದತ್ತ ಕಣ್ಣು ನೆಟ್ಟರೆ ಅದಕ್ಕೆ ಕಾಣಸಿಗುವುದು ತುಂಡು ಆಗಸ ಮಾತ್ರ. ಬಾಹ್ಯಪ್ರಪಂಚಕ್ಕೆ ಅದರ ಸಂಬಂಧ ಹೊಂದಿಸುವುದು ಬಿಂದಿಗೆಯೇ. ಅಷ್ಟೇ ಪ್ರೀತಿ, ಆತುರ ಬಿಂದಿಗೆಗೆ. ಬಾವಿಯನ್ನು ಹೇಗೆ ಕಟ್ಟೆ ಬಂದಿಯಾಗಿಸಿದೆಯೋ, ಹಾಗೆಯೇ ಬಿಂದಿಗೆಯ ಕೊರಳಿಗೆ ಹಗ್ಗ ಬಿಗಿದಿದೆ. ಬಾವಿಯ ನೀರಿನ ಜತೆಗೆ ಬಿಂದಿಗೆಯ ಸಮಾಗಮ, ಪ್ರೇಮಜಲ ಸಿಂಚನ, ಸ್ಪರ್ಶದ ಪುಳಕ, ಅಲೆ ಎಲ್ಲವೂ ಇದೆ. ಹಾಗೆ ತುಂಬಿದ ಕೊಡ, ಬಾವಿಯಿಂದ ಹೊರಬಂದ ನಂತರವೂ ಸ್ವತಂತ್ರವಲ್ಲ, ಅದರೊಳಗಿನ ನೀರು, ಅನ್ನಕ್ಕೆ, ಸಾಂಬಾರಿಗೆ ಉಪಯೋಗವಾಗುತ್ತೆ. ಇಲ್ಲಿ ಕವಯಿತ್ರಿ ‘ಕಲಬೆರಕೆ’ ಪದ ಪ್ರಯೋಗ ಮಾಡಿದ್ದಾರೆ. ನೀರಿನ ಇಚ್ಛೆ ಸಾಂಬಾರು ಆಗುವುದು ಅಂತಿಲ್ಲ. ತಿಳಿಯಾದ ನೀರು ಸಾಂಬಾರ್ ಆದಾಗ ಅದೂ ಕಲಬೆರಕೆಯೇ. ರುಚಿಹಿಡಿದ ಆಸ್ವಾದಕನಿಗೆ ಸಾಂಬಾರ್ ರುಚಿ, ತಿಳಿಯಾಗಿದ್ದ ನೀರಿನ, ಬಾವಿಯ ಫ್ರೇಮ್ ಆಫ್ ರೆಫರೆನ್ಸ್ ನಲ್ಲಿ ಅದು ಕಲಬೆರಕೆ. ಬಿಂದಿಗೆ ತುಂಬಿದ್ದ ನೀರನ್ನು ಹೊಯ್ದಂತೆ, ಖಾಲಿಯಾಗುವ ಅನುಭವ ಕೂಡಾ ಒಂದು ಅನೂಹ್ಯ ಪ್ರಕ್ರಿಯೆಯ ಪ್ರತಿಮೆಯೇ. ಕವಿತೆಯ ಕೆಳಗಿನ ಸಾಲುಗಳು ಖಂಡಿತಾ ಹಿಂದಿ ಶಾಯರಿಗಳಲ್ಲಿ ಕಾಣಸಿಗುವ ಪಂಚ್ ಲೈನ್ ಗಳು. ” ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ಅಂದರೆ ಬಾವಿ, ಕೊಡ, ಬಾವಿಯೊಳಗಿನ ನೀರು, ಸಮಾನಾಂತರವಾಗಿ ನಡೆಯುವ ಒಡಲಾಳದ ಸದ್ದು ಮತ್ತು ಎದೆ ಬಡಿತ, ಕವಿತೆಯ ಮೇಲಿನ ಅಷ್ಟೂ ಸಾಲುಗಳಿಗೆ ಒಂದು ಇತ್ಯಾತ್ಮಕ ಅರ್ಥದತ್ತ ಮಾರ್ಗ ಸೂಚಿಯಾಗುತ್ತವೆ. ಸದಾ ಹೊರಜಗತ್ತಿನತ್ತ ಸಂಬಂಧ ಬೆಳೆಸುವ ಹಂಬಲ, ಕಾತರ,ಹಸಿವು ಬಾವಿಗಿದೆ. ತಿಳಿಯಾದ ಸ್ವಂತಿಕೆ ಸಮಾಜದ ಅಳವಡಿಕೆಯಲ್ಲಿ ಕಲಬೆರಕೆಯಾಗುವ ನೋವಿದೆ. ಅದು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಅಸಹನೆಯೂ ಇದೆ. ಒಡಲಾಳದ ಪ್ರೀತಿಯನ್ನು ಬಿಂದಿಗೆಯಲ್ಲಿ ಮೊಗೆ ಮೊಗೆದು ಕೊಡುವಾಗ ತುಂಬುವ ಖುಷಿಯೂ, ಹಂಚುವಾಗಿನ ಖಾಲಿಯಾಗುವ ಸಂತೃಪ್ತಿಯೂ ಕವಿತೆಯಲ್ಲಿ ಕಾಣಿಸುತ್ತೆ.