ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೀಣಾ-ವಾಣಿ

“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್‌ ಗೌಡ‌ ಪಾಟೀಲ್

ಶಿಕ್ಷಣ ಸಂಗಾತಿ ವೀಣಾ ಹೇಮಂತ್‌ ಗೌಡ‌ ಪಾಟೀಲ್ “ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ ಎಲ್ಲವೂ ಆನ್ಲೈನ್ ನಲ್ಲಿ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣ ಕೂಡ ಆನ್ಲೈನ್ ನಲ್ಲಿ ಕಲಿಯುವ ದಿನಗಳು ಈಗಾಗಲೇ ಬಂದಿದ್ದು ಇನ್ನೇನು ಪೂರ್ಣ ಪ್ರಮಾಣದಲ್ಲಿ ದೊರೆಯುವ ದಿನಗಳು ದೂರವಿಲ್ಲ…. ಹಾಗಾದರೆ ಶಾಲೆಗಳ ಔಚಿತ್ಯವೇನು? ಎಂದು ನೀವು ಕೇಳಬಹುದು ಅಲ್ಲವೇ ? ಇದರ ಮುನ್ನ ನಮ್ಮ ದೇಶದಲ್ಲಿ ಶಿಕ್ಷಣ ಪದ್ಧತಿ ನಡೆದು ಬಂದ ರೀತಿಯನ್ನು ಅವಲೋಕಿಸೋಣ. ನಮ್ಮ ಭರತ ಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು ಶಿಕ್ಷಣದಲ್ಲಿ ಎರಡು ವಿಧಗಳನ್ನು ನಾವು ಕಾಣಬಹುದಾಗಿತ್ತು. ಒಂದು ಕೌಟುಂಬಿಕ ಶಿಕ್ಷಣವಾದರೆ ಮತ್ತೊಂದು ಗುರುಕುಲ ಪದ್ಧತಿಯ ಶಿಕ್ಷಣ. ಕೌಟುಂಬಿಕ ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಆ ಮನೆಯ ರೀತಿ-ನೀತಿ, ಸಂಪ್ರದಾಯಗಳ ಜೊತೆ ಜೊತೆಗೆ ಸಾಮಾಜಿಕ ನಿಯಮಗಳನ್ನು ಪಾಲಿಸುವ ಕುರಿತು ಇಡೀ ಕುಟುಂಬವೇ ಗುರುವಾಗಿ ಪಾಠ ಕಲಿಸುತ್ತಿತ್ತು. ಇಲ್ಲಿ ಕುಟುಂಬದ ಹಿರಿಯರಾಗಲಿ, ಪಾಲಕರಾಗಲಿ, ತಂದೆ-ತಾಯಿಗಳಾಗಲಿ ಕೈಯಲ್ಲಿ ಬಳಪ ಹಿಡಿಸಿ ಪಾಟಿಯ ಮೇಲೆ ಬರೆಸಿ ಇಲ್ಲವೇ ಉರು ಹೊಡೆಸಿ  ಪಾಠಗಳನ್ನು ಹೇಳಿಕೊಡಲಿಲ್ಲ…. ಬದಲಾಗಿ ತಮ್ಮ ನಡೆ ನುಡಿಗಳ ಮೂಲಕ ತಮ್ಮ ಮಕ್ಕಳಿಗೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಬದುಕಿನ ಪರಿಚಯವನ್ನು ಮಾಡಿಕೊಟ್ಟರು. ಇದರ ಜೊತೆ ಜೊತೆಗೆ ಗಂಡು ಮಕ್ಕಳಿಗೆ ಕುಟುಂಬದ ಕುಲ ಕಸುಬನ್ನು ಹಾಗೂ ಹೆಣ್ಣು ಮಕ್ಕಳಿಗೆ ಮನೆ ವಾರ್ತೆಯನ್ನು ಹೇಳಿಕೊಟ್ಟರು. ಒಕ್ಕಲುತನವೇ ಮೂಲ ಉದ್ಯೋಗವಾಗಿದ್ದ ನಮ್ಮ ಭಾರತ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಉದ್ಯೋಗ ಹಾಗೂ ಅದರ ಉಪ ಕಸುಬುಗಳಾದ ಕುಂಬಾರ, ಕಮ್ಮಾರ, ಬಡಿಗ, ಅಕ್ಕಸಾಲಿ, ಉಪ್ಪಾರ, ಚಮ್ಮಾರ, ಮ್ಯಾದಾರ ಹೀಗೆ ಹತ್ತು ಹಲವು ಉದ್ಯೋಗಗಳನ್ನು ಕೈಗೊಂಡಿದ್ದು ಅದನ್ನೇ ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಇನ್ನು ರಾಜ ಮಹಾರಾಜರು, ಪಂಡಿತರು, ಜ್ಞಾನಿಗಳು, ಬ್ರಾಹ್ಮಣರು 64 ವಿದ್ಯೆಗಳಲ್ಲಿ ಕೆಲವಷ್ಟನ್ನಾದರೂ ಗುರುಕುಲಗಳಲ್ಲಿ ಇದ್ದು ಕಲಿಯುತ್ತಿದ್ದರು. ಊರಿನಿಂದ ತುಸು ದೂರ ಯಾವುದಾದರೂ ಕಾಡಿನ ಪ್ರಶಾಂತ ವಾತಾವರಣದಲ್ಲಿ ನದಿಯ ಪಕ್ಕದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ನೆಲೆಸಿರುತ್ತಿದ್ದ ಗುರುಗಳಿಗೆ ಋಷಿಮುನಿಗಳಿಗೆ ರಾಜ ಮಹಾರಾಜರುಗಳು ಗುರುಕುಲವನ್ನು ನಡೆಸಲು ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇನ್ನು ಗುರುಕುಲಕ್ಕೆ ಬರುವ ವಿದ್ಯಾರ್ಥಿಗಳು ರಾಜನ ಮಗನಾದರೂ ಸರಿಯೇ ಸೈನಿಕನ ಇಲ್ಲವೇ ಬಡ ಬ್ರಾಹ್ಮಣನ ಮಗನಾದರೂ ಎಲ್ಲರಿಗೂ ಒಂದೇ ನಿಯಮ. ಪ್ರತಿದಿನ ಆಶ್ರಮದ ನಿಯಮದಂತೆ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅದರ ಜೊತೆಗೆ ಶಾಸ್ತ್ರೋಕ್ತವಾಗಿ ವಿವಿಧ ವಿದ್ಯೆಗಳನ್ನು ಕಲಿಯುವುದು ಅತ್ಯವಶ್ಯಕವಾಗಿತ್ತು.ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವ್ಯಾಕರಣ, ಛಂದಸ್ಸು, ಕಾವ್ಯ, ಪುರಾಣ ಮತ್ತಿತರ ವಿದ್ಯೆಗಳನ್ನು ಕಲಿಸಿದರೆ ರಾಜ ಮಹಾರಾಜರ,  ಮಂತ್ರಿಗಳ, ಸೇನಾಪತಿಗಳ ಹಾಗೂ ಸೈನಿಕರ ಮಕ್ಕಳುಶಸ್ತ್ರಾಸ್ತ್ರ ವಿದ್ಯೆಗಳಾದ ಧನುರ್ವಿದ್ಯೆ, ಕತ್ತಿ ವರಸೆ, ಭಲ್ಲೆ ಹಾಗೂ ಮತ್ತಿತರ ಆಯುಧಗಳ ಬಳಕೆಯ ಜೊತೆಗೆ ಕಾನೂನು ರಾಜಕೀಯ ನೀತಿಶಾಸ್ತ್ರ ಮುಂತಾದ ರಾಜ್ಯದ ಆಡಳಿತಕ್ಕೆ ಅತ್ಯವಶ್ಯಕವಾದ ವಿದ್ಯೆಗಳನ್ನು ಕಲಿಯುತ್ತಿದ್ದರು.  ಗುರುಗಳು ಹೇಳಿದ ಮಾತುಗಳನ್ನು ವೇದ ವಾಕ್ಯದಂತೆ ಭಾವಿಸುವ, ಆಶ್ರಮದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುವ ಈ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಸುಮಾರು 6 ರಿಂದ 12 ವರ್ಷಗಳ ಕಾಲ ಶಾಸ್ತ್ರ ವಿದ್ಯೆಯ ಜೊತೆಗೆ ವೃತ್ತಿ ಶಿಕ್ಷಣವು ಕೂಡ ದೊರೆಯುತ್ತಿತ್ತು ಎಂದರೆ ತಪ್ಪಿಲ್ಲ. ಇದರ ಜೊತೆಗೆ ಕೋಶವನ್ನು ಓದುವ ಹಾಗೂ ದೇಶವನ್ನು ಸುತ್ತುವ ಕೆಲಸವನ್ನು ಅಂತಿಮವಾಗಿ ವಿದ್ಯಾರ್ಥಿಯು ಮಾಡುವ ಮೂಲಕ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯತ್ಯಾಸಗಳನ್ನು ಅರಿಯುವ ಅವಕಾಶ ಕೂಡ ಅವರಿಗೆ ದೊರೆಯುತ್ತಿತ್ತು. ನಂತರದ ಕಳೆದೆರಡು ಶತಮಾನಗಳವರೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅದರಲ್ಲೂ ಮಠಗಳಲ್ಲಿ, ಅಗ್ರಹಾರಗಳಲ್ಲಿ ಆಯಾ ಊರಿನ ಪಂಡಿತರು ಜ್ಞಾನಿಗಳು ಮಕ್ಕಳಿಗೆ ಶಿಕ್ಷಣ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಇಲ್ಲೂ ಕೂಡ ಅದೇ ಕಟ್ಟುನಿಟ್ಟಿನ ನಿಯಮಗಳಿದ್ದರೂ ಮಕ್ಕಳು ತಮ್ಮ ಮನೆಯ ವಾತಾವರಣದಲ್ಲಿ ಮುಂಜಾನೆ ಮತ್ತು ರಾತ್ರಿಗಳನ್ನು ಕಳೆಯುತ್ತಿದ್ದರು. ಮುಂಜಾನೆಯಿಂದ ಸಾಯಂಕಾಲದ ವರೆಗೆ ಶಿಕ್ಷಣ ನಂತರ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಪಾಲಕರೊಂದಿಗೆ ವಾಸ ಇರುತ್ತಿತ್ತು. ಅದರ ನಂತರ ಕಳೆದ ಎರಡು ಶತಮಾನಗಳಿಂದ ಆರಂಭವಾಗಿದ್ದು ಇಂದಿಗೂ ಚಾಲ್ತಿಯಲ್ಲಿ ಇರುವುದು ಇಂದಿನ ಪದ್ಧತಿ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಪ್ರೌಢಶಾಲೆ ಕಾಲೇಜು ಸ್ನಾತಕೋತ್ತರ ಹೀಗೆ ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ನೀಡುವ ಪದ್ಧತಿ ಆರಂಭವಾಯಿತು. ಮೊದಲ ಹತ್ತು ವರ್ಷಗಳವರೆಗೆ ಸಾಂಪ್ರದಾಯಿಕವಾಗಿ ಆಯಾ ಪ್ರದೇಶದ ಆಡಳಿತ ಭಾಷೆ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಗಳ ಜೊತೆ ಜೊತೆಗೆ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದ್ದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಪರಿಚಯಿಸಲಾಯಿತು. ಭಾಷೆಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕದಲ್ಲಿ ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಆ ಭಾಷೆಯ ಕಥೆ,ಕಾವ್ಯ, ಕವನ, ಗದ್ಯ, ಪದ್ಯ, ಹಳಗನ್ನಡ, ನಡುಗನ್ನಡ ನವ್ಯ ಸಾಹಿತ್ಯ, ನಾಟಕ ಇತಿಹಾಸ ವ್ಯಾಕರಣ, ಕವಿ ಕರ್ತೃಗಳ ಪರಿಚಯ, ಬದುಕು ಬರಹ ಇವುಗಳ ಕುರಿತು ಮಕ್ಕಳಿಗೆ ಆಯಾ ತರಗತಿಗಳಿಗೆ ಅನುಸಾರವಾಗಿ ಪಠ್ಯವನ್ನು ಇಡಲಾಗುತ್ತದೆ. ಗಣಿತದಲ್ಲಿ ಅಂಕಿಗಳನ್ನು ಬರೆಯುವ, ಓದುವ  ಎಣಿಸುವ ಹೇಳುವುದರಿಂದ ಆರಂಭಿಸಿ ಕೂಡಿಸುವ ಕಳೆಯುವಾಗ ಗುಣಾಕಾರ ಮಾಡುವ ಭಾಗಿಸುವ ಲೆಕ್ಕಗಳನ್ನು ಇದರ ಮುಂದಿನ ಭಾಗವಾಗಿ ಗಣಿತದ ಮತ್ತೆ ವಿಷಯಗಳಾದ ದಶಮಾಂಶ ಪದ್ಧತಿ ಭಿನ್ನರಾಶಿ ಸಮೀಕರಗಳು ಪ್ರಮೇಯಗಳನ್ನು ಹಂತ ಹಂತವಾಗಿ ಕಲಿಸುವ ಯೋಜನೆಗಳು ರೂಪುಗೊಂಡವು. ಗಣಿತದಲ್ಲಿ ಅಂಕಗಣಿತ ಬೀಜಗಣಿತ ಹಾಗೂ ರೇಖಾಗಣಿತ ಎಂಬ ಮೂರು ವಿಭಾಗಗಳನ್ನು ಮಾಡಿದರು. ಸಮಾಜಶಾಸ್ತ್ರದಲ್ಲಿ ಇತಿಹಾಸ,ಭೂಗೋಳ ಹಾಗೂ ನಮ್ಮ ಸಂವಿಧಾನದ ನೀತಿಗಳನ್ನು ಅರಿಯುವ ಪೌರನೀತಿ ಎಂಬ ಮೂರು ವಿಭಾಗಗಳನ್ನು ಮಾಡಿ ಭೂಗೋಳದಲ್ಲಿ ಭೂಮಿಯ ಸಂರಚನೆಯ ಕುರಿತು ವೈವಿಧ್ಯಮಯ ಪ್ರದೇಶಗಳ ಕುರಿತು ಪ್ರಸ್ಥಭೂಮಿ ಮರುಭೂಮಿ ಕಾಡು ಹುಲ್ಲುಗಾವಲು ಮುಂತಾದ ಪ್ರಾದೇಶಿಕ ವೈವಿಧ್ಯತೆಗಳನ್ನು ಪಠ್ಯದ ಭಾಗವಾಗಿಸಿದರು.  ಹೀಗೆ ಎಲ್ಲ ವಿಷಯಗಳು ಕುರಿತು ನುರಿತ ಭಾಷಾ ತಜ್ಞರನ್ನು, ವಿದ್ವಾಂಸರನ್ನು  ಸಂಶೋಧಕರನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿ  ಆಯಾ ತರಗತಿಗಳಿಗೆ ಅನುಗುಣವಾಗಿ ಪಠ್ಯಗಳನ್ನು  ಮೂಲಭೂತ ವಿಷಯಗಳ ಪಟ್ಟಿಯಲ್ಲಿ ಅಡಕಗೊಳಿಸಿ ವಯೋಮಿತಿಗೆ ತಕ್ಕಂತೆ ಅವುಗಳನ್ನು ಮಕ್ಕಳ ಕಲಿಕೆಯಲ್ಲಿ ಅಳವಡಿಸಿದರು.  ಇದೀಗ ಆನ್ಲೈನ್ ನಲ್ಲಿ ಕೂಡ ವೈವಿಧ್ಯಮಯ ಕೋರ್ಸುಗಳ ವಿಷಯಗಳ ಕುರಿತು ನಾವು ಕಲಿಯಬಹುದು. ಈ ಎಲ್ಲಾ ಕಲಿಕೆಗೆ ಮೂಲ ನಮ್ಮ ಆಸಕ್ತಿ ಆಗಿರಬೇಕು. ಇಂತಹ ಕಲಿಕೆಯನ್ನು ಕಲಿಸಲು ಶಾಲೆ ಪುಸ್ತಕ ಗುರುಗಳು ಬೇಕಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಭೌತಿಕವಾಗಿ ಶಾಲೆಗಳ ಅಸ್ತಿತ್ವ ಇರುತ್ತದೆಯೇ ಎಂಬ ಪ್ರಶ್ನೆ ಕೇಳಿದರೆ ಬಹುಶಹ ಇಲ್ಲ ಎಂದು ಹೇಳಬಹುದು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮದೇ ಆದ ಅನುಕೂಲಕರ ವಾತಾವರಣದಲ್ಲಿ ಕುಳಿತು ನಿಂತು ಮಲಗಿ ಆನ್ಲೈನ್ ನಲ್ಲಿ ಶಿಕ್ಷಕರ ಪಾಠಗಳನ್ನು ಕೇಳಿ ಪರೀಕ್ಷೆಗಳನ್ನು ಬರೆದು ಪದವಿಗಳಿಸಬಹುದಾದ ದಿನಗಳು ಮುಂದೊಂದು ದಿನ ಬರಬಹುದು. ಹಾಗಾದರೆ ಶಿಕ್ಷಣ ಎಷ್ಟರಮಟ್ಟಿಗೆ ಪ್ರಸ್ತುತ ? ಶಾಲೆಗಳ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸಬಹುದು  ಖಂಡಿತವಾಗಿಯೂ ಶಾಲೆಗಳ ಅವಶ್ಯಕತೆ ಇದೆ. ಮಕ್ಕಳು ಚಿಕ್ಕಂದಿನಿಂದಲೂ ಒಂದು ಸಾಂಫಿಕ ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು, ಬದುಕಿನಲ್ಲಿ ಮೌಲ್ಯಗಳ ಅಳವಡಿಕೆಯ ಪಾಠವನ್ನು ಕಲಿಯಲು ಶಿಕ್ಷಣ ಬೇಕು. ಆದರೆ ಅಂತಹ ಶಿಕ್ಷಣ ದೊರೆಯುವುದು ಕೇವಲ ಶಾಲೆಗಳಲ್ಲಿ ಮಾತ್ರ. ಸತ್ಯ,ಧರ್ಮ,ನ್ಯಾಯ, ನೀತಿ, ಕರುಣೆ, ದಯೆ,ಪ್ರೀತಿ, ವಿಶ್ವಾಸ, ನಂಬಿಕೆ, ದೇಶಪ್ರೇಮ, ದೇಶದ ಕುರಿತು ಅಭಿಮಾನ, ರಾಷ್ಟ್ರೀಯ ಜಾಗೃತಿ ಸಂವಿಧಾನದ ಪರಿಕಲ್ಪನೆ  ನಮ್ಮ ರಾಷ್ಟ್ರೀಯ ನಾಯಕರ ಕುರಿತ ಕಥೆಗಳು, ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಬದುಕಿನ ಪಾಠಗಳು, ಆಟಗಳು ಆಟದ ಮೂಲಕ ಒಪ್ಪಿಕೊಳ್ಳಲು ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಅತ್ಯವಶ್ಯಕವಾದ ಎಲ್ಲಾ ಬಗೆಯ ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ನಮಗೆ ಶಾಲೆಗಳು ಅತ್ಯವಶ್ಯಕ.  ಶಿಕ್ಷಣವನ್ನು ಬೇಕಾದರೆ ಆನ್ಲೈನ್ ನಲ್ಲಿ ಪಡೆಯಬಹುದು… ಮಕ್ಕಳಲ್ಲಿ ವ್ಯಕ್ತಿತ್ವದ ವಿಕಸನವನ್ನು ಚಾರಿತ್ರ್ಯ ನಿರ್ಮಾಣವನ್ನು ಶಿಕ್ಷಣದಂತೆ ಕೇವಲ ಒಂದು ಇಲ್ಲವೇ ಎರಡು ವರ್ಷಗಳಲ್ಲಿ ಕಲಿಸಿ ಮುಗಿಸಲು ಸಾಧ್ಯವಿಲ್ಲ ಅದೊಂದು ನಿರಂತರ ಪ್ರಕ್ರಿಯೆ…. ಅದಕ್ಕೆ ತನ್ನದೇ ಆದ ಗತಿಯಿದ್ದು ಆ ಗತಿಯಲ್ಲಿಯೇ ಮಕ್ಕಳು ತಮ್ಮ ಬದುಕಿನಲ್ಲಿ ಶಾಲೆಗಳ ಮೂಲಕ, ಶಿಕ್ಷಕರ ಮೂಲಕ, ಸಹಪಾಠಿಗಳ ಜೊತೆಗೆ, ಹಿರಿಕಿರಿಯ ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆ ಎಂಬ ದೊಡ್ಡ ಆವರಣದ ಆಟದ ಮೈದಾನದಲ್ಲಿ, ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ನಿರಂತರವಾಗಿ ಕಲಿಯಬೇಕು ಇದಕ್ಕೆ ಶಾಲೆ ಅತ್ಯಂತ ಸೂಕ್ತವಾದ ಸ್ಥಳ.  ಜನನೀ ಜನ್ಮ ಭೂಮಿಶ್ಚ.. ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯನ್ನು ನಮಗೆ ಕಟ್ಟಿಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ನಾಗರಿಕರಾಗಿ ನಮ್ಮ ದೇಶದ ಸಂವಿಧಾನದ ಮೂಲಕ ನಾವೆಲ್ಲರೂ ಒಂದು ಎಂಬ ವಿವಿಧತೆಯಲ್ಲಿ ಏಕತೆಯ ಪಾಠವನ್ನು ಹೇಳಿಕೊಡುವುದು ಶಾಲೆಯೇ. ಸಿರಿವಂತರ ಮಗನಾಗಲಿ ಗುರು ಪುತ್ರನಾಗಲಿ ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯ ಮಗನಾಗಲಿ ಶಾಲೆಯ ವಾತಾವರಣದಲ್ಲಿ ಏಕರೂಪದ ಸಮವಸ್ತ್ರವನ್ನು ಧರಿಸಿ ಮೇಲು-ಕೀಳು, ಬಡವ-ಬಲ್ಲಿದ, ವರ್ಗ-ವರ್ಣ ಎಂಬ ಯಾವುದೇ ಭೇದಗಳಿಲ್ಲದೆ ಕಲಿಯುವ ವಾತಾವರಣವನ್ನು ಕಲ್ಪಿಸಿ ಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ಶಾಲೆಗಳೇ ಮಕ್ಕಳ ವ್ಯಕ್ತಿತ್ವ ವಿಕಸನದ ಅದ್ಭುತವಾದ ಕಾರ್ಯ ಆಧಾರಗಳು ಅಂತಹ ಶಾಲೆಗಳಲ್ಲಿ ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಹೇಗೆ ಇರಬೇಕು ಎಂಬುದರ ಪ್ರಾಥಮಿಕ ಪಾಠವನ್ನು ಕಲಿಯುತ್ತಾ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಒಂದೊಂದೇ ಹಂತದ ನೈತಿಕ, ಮೌಲಿಕ, ಸಾಮಾಜಿಕ ಐತಿಹಾಸಿಕ ಸಾಂಸ್ಕೃತಿಕ ಜೀವನ ಪಠ್ಯಗಳನ್ನು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಸಾಗುತ್ತಾರೆ. ಧೈರ್ಯ, ಸಾಹಸ, ರಾಷ್ಟ್ರೀಯವಾದ, ಸೇವಾ ಮನೋಭಾವ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಯುವ ಮಕ್ಕಳ ಬದುಕಿನಲ್ಲಿ ಮೂಡುವುದು ಶಾಲೆಯ ಮೂಲಕವೇ ಮುಂದೆ ಮಕ್ಕಳು ತಮ್ಮ ಬದುಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಮಿಂಚಿ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು.. ಆದರೆ ಅದೆಲ್ಲಕ್ಕೂ ಮುಖ್ಯವಾದ ಮೂಲಭೂತವಾದ ಅಡಿಪಾಯವನ್ನು ಶಾಲೆಗಳು ಹಾಕಿಕೊಡುತ್ತವೆ. ಸೋಲು ಗೆಲುವಿನ ನೋವು ನಲುವಿನ ನೂರಾರು ಪಾಠಗಳನ್ನು ಕೂಡ ಶಾಲೆಗಳು ಕಲಿಸಿಕೊಡುತ್ತವೆ. ಹೀಗಾಗಿ ಮಕ್ಕಳ ಚಾರಿತ್ರ್ಯ ನಿರ್ಮಾಣದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಗಳು ಬೇಕೇ ಬೇಕು ಅಂತಹ ಶಾಲೆಗಳ ಅಸ್ತಿತ್ವವನ್ನು ಗುರುತಿಸುವ ಸಂವೇದನಾಶೀಲ ಸಶಕ್ತ ಸಮಾಜದ ಹರಿಕಾರರು ನಾವಾಗಬೇಕು. ಆ ಮೂಲಕ ಶಿಕ್ಷಣ ಪದ್ಧತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತೀಕರಿಸಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸಮಾಜದ ನಾವೆಲ್ಲರೂ ಒಂದುಗೂಡಿ ಕಾರ್ಯ ನಿರ್ವಹಿಸೋಣ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್‌ ಗೌಡ‌ ಪಾಟೀಲ್ Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಸಾವಿಲ್ಲದ ಮನೆಯ ಸಾಸಿವೆ ಹುಡುಕುತ್ತ… ಒಂದೊಂದು ಸಲ ಬದುಕು ಅಂದ್ರ ಏನಂತ ತಿಳಿವಲ್ದು. ರಾತ್ರಿ ಮಲಕ್ಕೊಂಡು ಮರುದಿನದ ಬೆಳಕು ನೊಡಿದ್ರ ಅದೇ ಬದುಕು. ಮುಂದಿನ ಕ್ಷಣ ಏನು ಎತ್ತ ಅಂತ ಚಿಂತಿ ಮಾಡೊವಷ್ಟರಾಗ ಏನೇನೊ ಘಟಿಸಿ ಬಿಡಲತದ. ಚಿಕ್ಕವರಿದ್ದಾಗ ಸಾವು ವಯಸ್ಸಾದವ್ರಿಗಿ ಮಾತ್ರ ಬರತದ ಅಂತ ತಿಳಕೊಂಡ ಕಾಲ ಒಂದಿತ್ತು. ಹಾಗೆ ಘಟಿಸತಿತ್ತು.ಆತ್ಮಹತ್ಯೆ ಅಂದರ ಏನು ಅಂತ ಕೂಡ ತಿಳದಿರಲಿಲ್ಲ.ಈಗಿಗ ಚಿಕ್ಕ ಪ್ರಾಯದವರ ಸಾವು ಬಹಳ ಕಂಗೆಡಸತದ.ಬದುಕು ಕಾಣಬೇಕಾದವ್ರು ಅಕಾಲಿಕವಾಗಿ ತೀರಿ ಹೋದ್ರ ಮನಸ್ಸು ಒಂಥರಾ ವಿಷಾದ ಆಗತದ.ಅದರಲ್ಲೂ ಆತ್ಮಹತ್ಯೆ ಅಂತ ಸಾವುಗಳಿಗಿ ಮರುಗಬೇಕೋ ಸಿಟ್ಟು ಮಾಡ್ಕೋಬೇಕೋ ತಿಳಿವಲ್ದು. ಆತ್ಮಹತ್ಯೆಗಳಿಗಿ ಚಿಕ್ಕವಯಸ್ಸಿನವರೆ ಹೆಚ್ಚು ಬಲಿ ಆಗತಿದ್ದಾರ.ದುಡುಕಿನ ಮತ್ತು ಸಿಟ್ಟಿನಲ್ಲಿ ತಗೊಂಡ ನಿರ್ದಾರಗಳು ಅದೆಷ್ಟು ಬೇಗ ಜೀವ ತಗೊಂಡು ಬಿಡತಾವ. ಸಾಯಲಕ್ಕ ತೋರಿಸೋ ದೈರ್ಯ ಬದುಕಲಕ್ಕ ಯಾಕ ತೋರಿಸೋದಿಲ್ಲ..! ಸಾಯುವಷ್ಟು ದೈರ್ಯ ಬದುಕಲಿಕ್ಕ ಬೇಕಾಗಿಯೂ ಇಲ್ಲ. ಬದುಕು ಅದರ ಪಾಡಿಗದು ನಡಿತಿರತದ.ಆದ್ರ ಈಗಿನ ಯುವ ಜನ ಒಂದು ಸ್ವಲ್ಪ ಜೀವನದಾಗ ಏರು ಪೇರಾದ್ರೂ ಜೀವಕ್ಕ ಸಂಚಕಾರ ತಂದುಕೊಳ್ಳತಿದ್ದಾರ. ಚಿಕ್ಕ ವಯಸ್ಸಿನವವರದು ದುಡುಕಿನ ನಿರ್ದಾರ ಅನ್ನಬಹುದು. ಜೀವನದ ಅರ್ದ ಶತಮಾನದ ಏಳು ಬೀಳುಗಳನ್ನು ನೋಡಿದವ್ರು ಯಾವದೊ ಒಂದು ಕಾರಣಕ್ಕ ಜೀವನಾನೆ ಬಲಿ ತಗೊಂಡು ಬಿಡತಿದ್ದಾರಂದ್ರ ..ಏನು ಕಾರಣ ಹುಡುಕಬೇಕು. ಆತ್ಮ ಹತ್ಯೆಗ ಮುಖ್ಯ ಕಾರಣ ಖಿನ್ನತೆ ಅಂತ ಮೇಲ್ನೋಟಕ್ಕೆ ತಿಳಿಬಹುದು.ಜೊತೆಗಿರುವವರು ಖಿನ್ನತೆಗೆ ಒಳಪಟ್ಟವರನ್ನು ಹೇಗೆ ಗುರುತಿಸಬೇಕು.ಎಲ್ಲರ ಜೋತೆ ಚಂದ ಉಂಡು ಓಡಾಡಿ ಮಾತಾಡಿ ಯಾವದೊ ಒಂದು ಕ್ಷಣದಲ್ಲಿ ತಂತಾನೆ ಲೋಕದಿಂದ ನಿರ್ಗಮಿಸಿ ಬಿಟ್ಟ ಸಂಬಂಧ ಪಟ್ಟವರು ತಡಕೊಳ್ಲೋದು ಎಷ್ಟು ಕಷ್ಟ.ಜೀವನ ಪರ್ಯಂತ ಅವರ ಸಾವಿಗಿ ಕಾರಣ ಹುಡುಕಾಡೊದು ಬಿಟ್ಟು ಮತ್ತೆನು ಮಾಡ್ಲಿಕ್ಕಾಗತದ. ನಾನು ನೋಡಿದ ಮಟ್ಟಿಗಿ ಖಿನ್ನತೆ ಕಾಡುವದು ಎಲ್ಲಾ ಉಳ್ಳವರಿಗಿ.ದಿನಾ ದುಡದು ತಿನ್ನೊವರ್ರಿಗಿ ಇದು ಹೆಚ್ಚಾಗಿ ಕಾಡಲ್ಕ ಅನಿಸ್ತದ. ಮೈ ಮುರಿದು ದುಡಿಯೋರಿಗಿ ಮನಸ್ಸು ಖುಷಿಯಾಗಿ ಇರಲು ಬೇಕಾದ  ಡೂಪ್ ಮೀನ್ ಎಂಬ ಹಾರ್ಮೊನ್ ತನ್ನ ತಾನೆ ಉತ್ಪತ್ತಿ ಆಗತದ. ಎಲ್ಲಾ ಸೌಲಭ್ಯ ಇರೋರು , ಸದಾ ಕಂಫರ್ಟ ಝೊನ್ ನಲ್ಲಿ ಇರೋರಿಗಿ , ಮೈಗಳ್ಳರಿಗಿ ,ದೇಹಕ್ಕ ವ್ಯಾಯಾಮ ಇಲ್ದವರಿಗಿ ಡೋಪ್ ಮೀನ್ ಹಾರ್ಮೊನ್ ಉತ್ಪತ್ತಿ ಆಗೋದೆ ಇಲ್ಲ. ಆಗ ಮನಸ್ಸು ಬೇಜಾರು , ನಿರಾಸೆಗೆ ಒಳಪಡತದ.ಎಲ್ಲದರ ಮ್ಯಾಲಿನ ಆಸಕ್ತಿ ಕಮ್ಮಿ ಆಗತದ.ಎಲ್ಲರೊಂದಿಗೆ ಛಲೋ ವರ್ತಿಸತಿದ್ರು ಅವ್ರು ಒಳಗ ಅಸಮಾಧಾನದಿಂದ ಇರತಾರ.ಸದಾ ಒಂಟಿ ಆಗಿ ಇರಲಕ್ಜ ಬಯಸ್ತಾರ. ಇಲ್ಲ ಬರೀ ಪೋನ್ ನೊಂದಿಗೆ ಇರತಾರ.ಪೋನ್ ನೊಡೊದ್ರಿಂದ ಮಿದುಳಿನಾಗ ಡೂಪ್ಮೀನ್ ಹಾರ್ಮೊನು ಉತ್ಪತ್ತಿ ಆಗಿ ಮನಸ್ಸು ಸಮಾಧಾನದಿಂದ ಇಡತದ.ಅದಕ್ಕ ಎಲ್ರೂ ಈಗ ಪೋನ್ ವ್ಯಸನಿಗಳಾಗಿರೋದು. ಪೋನ್ ಹಿಡಕ್ಕೊಂಡು ಕುಂತಷ್ಟು ಹೊತ್ತು ತಲೆಯೊಳಗ ಯಾವ್ದೆ ಆಲೋಚನೆ ಬರಲಾರದೆ ಈ ಹಾರ್ಮೊನ್ ತಡಿತದ. ಪೋನ್ ಬಿಟ್ಟ ತಕ್ಷಣ ಮತ್ತ ಮತ್ತ ಪೋನ್ ಕಡಿಗೆ ಮನಸ್ಸು ಏಳಿತದ. ಅಲ್ಕೋಹಾಲ್ ಕುಡಿದಾಗ , ಗುಟಕಾ ತಿನ್ನುವಾಗ , ದೂಮಪಾನ ಮಾಡುವಾಗ ಹೀಗೆ ಈ ಎಲ್ಲಾ ಚಟಗಳು ಆ ಸಮಯದಲ್ಲಿ ನಮ್ಮ ದೇಹದ ಖುಷಿಯ ಹಾರ್ಮೋನ್ ಬಿಡುಗಡೆಗೊಳಿಸಿ ನಮ್ಮನ್ನು ಪದೆ ಪದೆ ಅದನ್ನೆ ಮಾಡಲು ಪ್ರೇರೆಪಿಸ್ತದ. ಆದ್ರ ಈ ಎಲ್ಲಾ ಚಟಗಳು ನಮಗ ಯಾವಾಗ ವ್ಯಸನಗಳಾಗಿ ಬದಲಾಗತಾವ ನಮಗ ಅರಿವಿಗಿ ಬರೊದಿಲ್ಲ.ಅಷ್ಟರಲ್ಲಿ ತಡ ಆಗಿರತದ.ವ್ಯಸನ ಮನುಷ್ಯ ನನ್ನು ಖಿನ್ನತೆಗೆ ಒಳಪಡಸ್ತದ. ವ್ಯಸನಗಳಿಲದೆಯು ಮನುಷ್ಯ ಖಿನ್ನತೆಗೆ ಹೋಗಬಹುದು.ಚಿಕ್ಕವಯಸ್ಸಿನಲ್ಲಿ ಆಗಿರೋ ಅಹಿತಕರ ಘಟನೆಗಳು , ಅಥವಾ ಪೋಷಕರಿಂದ ಸಿಗಬೇಕಾದ ಪ್ರೀತಿ ಮಮತೆಗಳು ಸಿಗದೆ ಇದ್ದಾಗ , ಕೌಟುಂಬಿಕ ದೌರ್ಜನ್ಯ ಗಳು , ಪ್ರೀತಿ ಪಾತ್ರರನ್ನು ಕಳಕೊಂಡ ನೋವು ಇವುಗಳು ಖಿನ್ನತೆಗೆ ದೂಡತಾವ.ಆದ್ರ ಇದರ ಅರಿವು ಆಗೊವಷ್ಟರಲ್ಲಿ ಅವ್ರು ಪೂರ್ಣವಾಗಿ ಖಿನ್ನತೆಯೊಳಗ ಜಾರಿಬಿಟ್ಟಿರತಾರ. ಜೀವನದ ಬಗ್ಗೆ ಬ್ಯಾಸರ. ನಿರಾಸಕ್ತಿ , ಯಾವದರಲ್ಲೂ ಆಸಕ್ತಿ ಇಲ್ಲದಿರೋದು , ನಿದ್ಧೆ ಬರದೆ ಇರೋದು , ಅತೀ ಭಾವುಕರಾಗೋದು , ಸದಾ ನೆಗೆಟಿವ್ ಆಲೋಚನೆಗಳು , ನಾನು ಎಲ್ಲರಿಂದ ನಿರಾದರಕ್ಕ ಒಳಪಟ್ಟಿದ್ದೆನೆಂಬ ಭ್ರಮೆ , ಇವೆಲ್ಲವೂ ಖಿನ್ನತೆಯ ಲಕ್ಷಣಗಳು. ಅವರಿಗೆ ಗೊತ್ತಿಲ್ಲದಂತೆ ಮನಸ್ಸಿನಾಗ ಆತ್ಮಹತ್ಯೆ ವಿಚಾರಗಳು ಬರತಾವ.ಒಟ್ಟು ಜೀವನ ಕೊನೆಗಾಣಿಸಬೇಕು ಎಂಬ ತುಡಿತ ಸದಾ ಇರತದ.ಇಂತಹ ವಿಚಾರಗಳು ಅವ್ರು ಯಾರ ಹತ್ರನೂ ಹಂಚಿಕೊಳ್ಳೊದಿಲ್ಲ.ಒಂದು ವ್ಯಾಳೆ ಹೇಳಿದ್ರು ಮನೆಯವರು ಮೊದಲು ಮಾಡೋದೆ ದೇವ್ರು ದೆವ್ವ ಎಂಬ ಪ್ರಯೋಗಗಳು.ಮಾನಸಿಕ ರೋಗ ತಜ್ಞ ರಲ್ಲಿ ಹೋಗಬೇಕೆಂಬ ಆಲೋಚನೆಯೂ ಮಾಡೊದಿಲ್ಲ. ಎಷ್ಟೋ ಜನ ನಾವು ಖಿನ್ನತೆಗೆ ಒಳಪಟ್ಟಿವಿ ಎಂದು ನಂಬಲಿಕ್ಕೂ ತಯ್ಯಾರಿರಲ್ಲ.ಖಿನ್ನತೆ ಅಂದ್ರ ಹುಚ್ಚು ಅಂತ ತಿಳಕೊಂಡಿರೋರು ಇದ್ದಾರ.ಅಂತವರು ಮಾನಸಿಕ ರೋಗ ತಜ್ಞ ರ ಹೆಸರು ಕೆಳಿದ್ರ ಅಂಜತಾರ. ಅಂತ ಡಾಕ್ಟರ ಹತ್ದ ಹೊದ್ರ ಜನ ಎಲ್ಲಿ ತಮಗ ಹುಚ್ಚರ ಪಟ್ಟ ಕಟ್ಟಾತಾರೋ ಅನ್ನೊ ಅಂಜಿಕಿ ಇರತದ. ತಮ್ಮ ಖಿನ್ನತೆ ನಿಭಾಯಿಸಲಕ್ಕ ಆಗ್ಧ ಕೊನೆಗೆ ಸಾವಿನಲ್ಲಿ ಪರಿಹಾರ ಕಾಣತಾರ. ಮಕ್ಕಳಲ್ಲಿ ಖಿನ್ನತೆ ಲಕ್ಷಣ ಹ್ಯಾಂಗ್ ಗುರುತಿಸಬೇಕು.ಅವ್ರು ದಿನಾ ಉಣ್ಣತಾರ ,ತಿಂತಾರ , ಸಾಲಿಗಿ ಹೋಗತಾರ ,ನಗತಾರ ,ಅಳತಾರ ,ಜಗಳ ಆಡತಾದ..ಒಟ್ಟಿನಾಗ ಎಲ್ರೂ ಇರೊ ಹಂಗ ಇರತಾರ . ಒಮ್ಮ ನೇಣಿಗಿ ಶರಣಾಗತಾದ.ಆಗ ಯಾವ ಕಾರಣ ಹುಡುಕಬೇಕು.ಹೆತ್ತವರು ಹ್ಯಂಗ್ ಬದುಕಬೇಕು.ಜೀವನ ಪರ್ಯಂತ ಈ ಪ್ರಶ್ನೆಗೆ ಉತ್ತರ ಹುಡುಕ್ಕೊಂತ ಬದುಕುವ ಅವರ ಪಾಡು ಹ್ಯಾಂಗ್ ವರ್ಣಿಸಬೇಕು..! ಕಾಲೇಜು , ಹಾಸ್ಟೆಲ್ ನಲ್ಲಿರುವ ಮಕ್ಕಳು ಈ ರೀತಿ ಮಾಡಿಕೊಳ್ಳುವದಕ್ಕ ಮುಖ್ಯ ಕಾರಣ ಖಿನ್ನತೆ.ಒತ್ತಡ. ಓದುವ ಅಥವಾ ಪ್ರೆಮ ವೈಫಲ್ಯ , ಮನೆಯವರು ಬೈದರೆಂದು , ಶಿಕ್ಷಕರು ಹೊಡೆದರೆಂದು , ಮೊಬೈಲ್ ಕಸಕೊಂಡರು ಎಂದು ಸಣ್ಣ ಸಣ್ಣ ಕಾರಣಗಳಿಗಿ ಆತ್ಮಹತ್ಯೆ ಮಾಡ್ಕೊಳ್ಳೊದು ಹೆಚ್ಚು ಆಗಲತದ. ಇದಕ್ಕ ಕಾರಣ ಹುಡುಕಿದ್ರ ಮೊಟ್ಟಮೊದಲು ಕಾಣೋದು ಮಕ್ಳು ಮತ್ತು ಹರೆದವರಿಗಿ ಒತ್ತಡ ನಿಭಾಯಿಸಲಿಕ್ಕ ಆಗ್ದೆ ಇರೋದು.ಸದಾ ಆರಾಮ ಮತ್ತು ಕಂಫರ್ಟ ನ್ನು ಹೆತ್ತವರು ಮಕ್ಳಿಗಿ ಕೊಡತಿದ್ದಾರ.ಅವ್ರು ಬೇಡಿದ್ಚು ಕೊಡ್ಸಿ ಅವ್ರು ಕೇಳಿದ್ದು ತಿನ್ಸಿ ಅವ್ರನ್ನ ಏನು ಮಾಡ್ಲಿಕ್ಕ ಬಿಡದಂಗ ಮಾಡಿ ಅವ್ರನ್ನ ಒಂದು ಕಂಫರ್ಟ ಎಂಬ ಒಂದು ವರ್ತುಲ ದೊಳಗ ಸಿಕ್ಕಿ ಹಾಕ್ತಿವಿ.ಹೊರಗ ಏನು ಚಂದಿಲ್ಲ ಎಂಬ ನಿಗರಾನಿಯೊಳಗ ಬೆಳೆಸ್ತಿವಿ .ಒಂದಿಷ್ಟು ಜೀವನದೊಂದಿಗೆ ಹೋರಾಡೋ ಶಕ್ತಿನೂ ಅವ್ರರಲ್ಲಿ ತುಂಬದೆ ಬೆಳೆಸಿತಿದ್ದಿವಿ.ಯಾವದೋ ಒಂದು ಹಂತದಲ್ಲಿ ಒತ್ತಡ ನಿಭಾಯಿಸ್ಲಿಕ್ಕ ಆಗ್ದೆ ಆತ್ಮಹತ್ಯೆ ಗೆ ಶರಣಾಗತಾರ. ಎಷ್ಟು ದುಡುಕಿನ ನಿರ್ಧಾರ. ಮಕ್ಕಳು ಮನಬಿಚ್ಚಿ ತಂದೆತಾಯಿಯೊಂದಿಗೆ ಮಾತಾಡಲಾರದಂಗ ಆಗತುದ್ದಾರ.ತಮ್ಮ ಆತಂಕಗಳನ್ನು ಅಲೆಕ್ಸಾ  ಅಥವಾ ಗೂಗಲ್ ಗೆ ಹೇಳತಾರ ಹೊರತಾಗಿ ಹೆತ್ತವ್ರಿಗಿ ಹೇಳಲ್ಲ.ಎಷ್ಟು ವಿಪರ್ಯಾಸ. ಸಾವು ಎಂಬುದು ಹುಟ್ಟುತ್ತಲೆ ಬದುಕಿಗೆ ಅಂಟಿಕೊಂಡೆ ಬಂದಿರತದ.ಅದು ಬರುವಾಗ ಬಂದೆ ಬರತದ.ಅಲ್ಲಿವರೆಗೆ ಬದುಕಬೇಕು.ಸುಖ ದುಃಖ ಗಳೆಲ್ಲ ಚಕ್ರದಂಗ ತಿರುಗತಾ ಇರತಾವ.ಒಂದರ ಬೆನ್ನಿಗಿ ಒಂದು. ಚಕ್ರ ನಿಲ್ಲಿಸಲಿಕ್ಕ ಆಗೊದಿಲ್ಲ.ಕೆಟ್ಟ ಸಂದರ್ಭಗಳಲ್ಲಿ ತಾಳ್ಮೆ ಒಂದೇ ಸಂಜೀವಿನಿ. ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಎರಡು ಜೀವನದ ದೊಡ್ಡ ಶತ್ರುಗಳು.ಇದು ಜೀವನಾನೆ ಅಲ್ಲೊಲ ಕಲ್ಲೋಲ ಮಾಡ್ತದ.ಹಾಗಂತ ಜೀವ ಕಳಕೊಳ್ಳೊದು ಮೂರ್ಖತನ. ಹೌದು ,ಎಷ್ಟೊಂದು ಓದಿರತಿವಿ , ಕೇಳಿರತೀವಿ , ಉಪದೇಶನೂ ಮಾಡಿರತೀವಿ.ಆದ್ರ ಖಿನ್ನತೆ ಅದಾವ ಮಾಯದಾಗ ಆವರಿಸಿಕೊಂಡು ಬಿಡತದ ಅರಿವುಗೂ ಬರಲ್ಲ.ಇದಕ್ಕ ಪರಿಹಾರ ಅಂದ್ರ ಮನಸ್ಸು ಬಿಚ್ಚಿ ಮಾತಾಡೋದು.ತಂದೆತಾಯಿ ಗೆಳೆಯರು ಬಳಗದವ್ರು ಯಾರೊಂದಿಗಾದ್ರೂ ಮನಸ್ಸು ಬಿಚ್ಚಿ ಮಾತಾಡೋದು.ಯಾರಿಗೂ ಹೇಳಬೇಕು ಅನಿಸದಿದ್ರ ಬರೆದು ಬಿಸಾಕೋದು. ಖಿನ್ನತೆಯನ್ನು ಬೆರೆಯವರು ಗುರುತಿಸೊದಕ್ಕಿಂತ ಮೊದಲು ನಾವೆ ಅದನ್ನ ಪತ್ತೆ ಹಚ್ಚಕೊಳ್ಳಬೇಕು.ಎಲ್ಲರೊಂದಿಗೆ ಇದ್ರು ಒಂಟಿತನ ಭಾದಿಸ್ತಾ ಇದ್ರೆ.ರಾತ್ರಿ ನಿದ್ರೆ ಬರದಿದ್ರೆ ನಿರುತ್ಸಾಹ ನಿರಾಸಕ್ತಿಇವೆಲ್ಲ ಬಾಳ ದಿನಗಳಿಂದ ನಮಗ ಕಾಡತಿದ್ರ ಮಾನಸಿಕ ತಜ್ಞ ರಲ್ಲಿ ಹೋಗೊದಕ್ಕ ಹಿಂದಮುಂದ ನೋಡ್ಲೆಬಾರ್ದು.ನಮ್ಮ ಜೊತೆಗಿರುವವರಿಗೆ ಈ ಸಮಸ್ಯೆ ಗಳು ಕಾಡತಿದ್ರೆ ಅವ್ರನ್ನ ಡಾಕ್ಟರ್ ಹತ್ರ ಕರಕೊಂಡು ಹೋಗಲು ಒಪ್ಪಿಸಬೇಕು. ಎಷ್ಟೋ ತಿಳವಳಿಕೆ ಉಳ್ಳವ್ರು ಸಾಯುವಂತ ದುಡುಕಿನ ನಿರ್ಧಾರ ತಗೊಳ್ತಿರೋದು ಆತಂಕದ ಸಂಗತಿ. ಬುಧ್ದಿಯಿಂದ ಅತಿ ಶಕ್ತಿಶಾಲಿಯಾದ ಮನುಷ್ಯ ಆತ್ಮಹತ್ಯೆ ಯಂತ ನಿರ್ಣಯಗಳಲ್ಲಿ ಎಷ್ಟು ದುರ್ಬಲನಾಗತಾನ. ಅತೀ ವಿದ್ಯಾವಂತರೆ ಇಂತಹ ಘಟನೆಗಳಿಗೆ ಬಲಿಯಾಗ್ತಿರೋದು ಯಾಕೆ ಎಂದು ತಿಳಿತಿಲ್ಲ.ಸದಾ ಎಲ್ಲರ ಮುಂದೆ ಒಳ್ಳೆಯವರಾಗಿರಬೇಕು , ಶ್ರೇಷ್ಟರಾಗಿರಬೇಕು , ಜಾಣ ಎನಿಸಿಕೊಳ್ಳಬೇಕು ಎಂಬ ಇಂತಹ ಹಂಬಲಗಳು ಕೂಡ ಮನುಷ್ಯ ಗ ದುರ್ಬಲ ಮಾಡಿಬಿಡತಾವ.ಅತೀ ಮಹತ್ವಾಕಾಂಕ್ಷೆಯು ಮನುಷ್ಯ ನನ್ನು ದುಃಖಿತ ನನ್ನಾಗಿಸ್ತದ.ಭಾವನೆಗಳನ್ನು ನಿಯಂತ್ರಿಸಿಕೊಳ್ಳೊದು ಕಲಿತರೆ ಜೀವನ ಅರ್ಧ ಗೆದ್ದಂಗೆ.ಅದರಲ್ಲೂ ಸಿಟ್ಟಿನ ಕೈಗೆ ಬುದ್ದಿ ಎಂದೂ ಕೋಡ್ಲೆಬಾರದು. ಈಗೀಗ ನಾವು ಎಷ್ಟು ಒಂಟಿ ಆಗತಿದ್ದೆವೆ ಅಂದ್ರ ನಮ್ಮ ಸಮಸ್ಯೆ ಹೆತ್ತವ್ರಿಗೆ ಗೆಳೆಯರಿಗೆ ತಿಳಿಸಲಿಕ್ಕೆ ಆಗದಿರುವಷ್ಟು.ಆಪ್ತ ಸಮಾಲೋಚರಿಗೆ ನಮ್ಮ ಸಮಸ್ಯೆ ಮುಕ್ತ ವಾಗಿ ಹೇಳಿಕೊಂಡಷ್ಟು ನಮ್ಮ ಜೊತೆಗಿರುವರಿಗೆ ಹೇಳಕೊಳ್ಳಕ್ಕ ಆಗ್ತಿಲ್ಲ ಅಂದ್ರ ಸಂಭಂಧಗಳು ಎಷ್ಟು ಅರ್ಥಹೀನ ಆಗ್ತಿವೆ ಎಂದು ಚಿಂತಿಸಬೇಕಾಗ್ತದ. ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗು.ಇದನ್ನು ತಡೆಯಲು ನಾವು ಪ್ರಯತ್ನಿಸಬೆಕಂದ್ರೆ ನಮ್ಮ ಸುತ್ತಲಿರುವವರೊಂದಿಗೆ ಮನಸ್ಸು ಬಿಚ್ಚಿ ಮಾತಾಡೋದು.ಆತಂಕವನ್ನು ಮತ್ತೊಬ್ಬ ರೊಂದಿಗೆ ಹಂಚಕೊಳ್ಳೊದು.ಪ್ರೀತಿ ಕೊಟ್ಟು ಪಡಕೊಳ್ಳೊದು.ಖಿನ್ನತೆ ಬಗ್ಗೆ ತಿಳಿದುಕೊಂಡು ಮತ್ತೊಬ್ಬರಿಗೆ ಅದರ ಬಗ್ಗೆ ತಿಳಿಸೊದು.ಪ್ರಯತ್ನ ನಿರಂತರ ಜಾರಿಯಲ್ಲಿರಲಿ. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಜಯದೇವಿ ತಾಯಿ ಲಿಗಾಡೆ ಅವರ ಜೀವನಗಾಥೆ
ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-108 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ “ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು.  ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು.  ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ? ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು.  ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು. 

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಸುವರ್ಣಯುಗ ಎನ್ನುವುದು ಕೆಳದಿ ಅರಸರ ಕಾಲದಲ್ಲಿ. ಕೃಷಿ ವಾಣಿಜ್ಯ ತೆರಿಗೆ ಸುಧಾರಣೆಗಳನ್ನು ಅನುಷ್ಠಾನಗೊಳಿಸಿ ಸಮೃದ್ಧ ರಾಜ್ಯವನ್ನು ಮಾಡಿದ ಕೀರ್ತಿ ಕೆಳದಿ ಅರಸರಿಗೆ ಸಲ್ಲುತ್ತದೆ. ಶಿವಪ್ಪ ನಾಯಕ (ಶಿವಪ್ಪ ನಾಯಕ) (1645–1660), ಕೆಳದಿ ಶಿವಪ್ಪ ನಾಯಕ ಎಂದು ಜನಪ್ರಿಯವಾಗಿ ನಾಯಕರು, ಒಬ್ಬ ಭಾರತೀಯ ರಾಜ ಮತ್ತು ಕೆಳದಿ ನಾಯಕ ಸಾಮ್ರಾಜ್ಯದ ಆಡಳಿತಗಾರ. ಕೆಳದಿ ನಾಯಕರು 16 ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದ ಕರ್ನಾಟಕದ ಕರಾವಳಿ ಮತ್ತು ಮಲೆನಾಡು (ಬೆಟ್ಟ) ಜಿಲ್ಲೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ನಂತರದ ಲಿಂಗಾಯತ ಉತ್ತರಾಧಿಕಾರಿಗಳಾಗಿದ್ದರು. ಅವರ ಉತ್ತುಂಗದಲ್ಲಿ, ನಾಯಕರು 1763 ರಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ಶರಣಾಗುವ ಮೊದಲು, ಆಧುನಿಕ ಕರ್ನಾಟಕದ ಕರಾವಳಿ, ಬೆಟ್ಟ ಮತ್ತು ಕೆಲವು ಆಂತರಿಕ ಜಿಲ್ಲೆಗಳನ್ನು ( ಬಯಲುಸೀಮೆ ) ಒಳಗೊಂಡ ಸ್ಥಾಪಿತ ಸಾಮ್ರಾಜ್ಯವನ್ನು ನಿರ್ಮಿಸಿದರು,   ಕೆಳದಿ ಅರಸರು ತೆರಿಗೆಯನ್ನು  ಪರಿಚಯಿಸಿದರು.  ಯುದ್ಧ ಮತ್ತು ವಿಜಯಗಳು ಶಿವಪ್ಪ ನಾಯ್ಕ ಒಬ್ಬ ಸಮರ್ಥ ಆಡಳಿತಗಾರ ಮತ್ತು  ಶೂರ ಸೈನಿಕ . ಅವರು 1645 ರಲ್ಲಿ ಸಿಂಹಾಸನವನ್ನು ಏರಿದರು. ಈ ಸಮಯದಲ್ಲಿ, ವೆಲ್ಲೂರಿನಿಂದ ಆಳಿದ ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಶ್ರೀರಂಗರಾಯ III ಬಿಜಾಪುರ ಸುಲ್ತಾನರಿಂದ ಸೋಲಿಸಲ್ಪಟ್ಟರು ಮತ್ತು ಶಿವಪ್ಪನ ಆಶ್ರಯವನ್ನು ಪಡೆದರು. ಪೋರ್ಚುಗೀಸರ ಬೆದರಿಕೆಯನ್ನು 1653 ರ ಹೊತ್ತಿಗೆ ತೊಡೆದುಹಾಕಲಾಯಿತು ಮತ್ತು ಮಂಗಳೂರು, ಕುಂದಾಪುರ ಮತ್ತು ಹೊನ್ನಾವರ ಬಂದರುಗಳನ್ನು ಕೆಳದಿ ನಿಯಂತ್ರಣಕ್ಕೆ ತರಲಾಯಿತು.  ಕನ್ನಡ ಕರಾವಳಿಯನ್ನು ಗೆದ್ದ ನಂತರ, ಅವರು ಆಧುನಿಕ ಕೇರಳದ ಕಾಸರಗೋಡು ಪ್ರದೇಶಕ್ಕೆ ದಂಡೆತ್ತಿ ಹೋಗಿ ನೀಲೇಶ್ವರದಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದರು. ಚಂದ್ರಗಿರಿ, ಬೇಕಲ್, ಅಡ್ಕ ಕೋಟೆ, ಆರಿಕ್ಕಾಡಿ ಮತ್ತು ಮಂಗಳೂರಿನ ಕೋಟೆಗಳನ್ನು ಶಿವಪ್ಪ ನಾಯಕ ನಿರ್ಮಿಸಿದ. ನಂತರ ಅವರು ತುಂಗಭದ್ರಾ ನದಿಯ ಉತ್ತರಕ್ಕೆ ದಾಳಿ ಮಾಡಿದರು ಮತ್ತು ಆಧುನಿಕ ಧಾರವಾಡ ಜಿಲ್ಲೆಯಲ್ಲಿ ಬಿಜಾಪುರ ಸುಲ್ತಾನರಿಂದ ಪ್ರದೇಶವನ್ನು ವಶಪಡಿಸಿಕೊಂಡರು. ದಕ್ಷಿಣದಲ್ಲಿ, ಆಧುನಿಕ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಅವನು ಆಕ್ರಮಣ ಮಾಡಿ ಮುತ್ತಿಗೆ ಹಾಕಿದಾಗ, ಅವನ ಸೈನ್ಯದಲ್ಲಿ ಸಾಂಕ್ರಾಮಿಕ ರೋಗವು ಅವನನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು.  ದಕ್ಷಿಣದಲ್ಲಿ, ಅವರು ಕರಾವಳಿ ಪ್ರದೇಶದ ಎಲ್ಲಾ ಪೋರ್ಚುಗೀಸ್ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಕೆನರಾ ಪ್ರದೇಶದಲ್ಲಿ ಪೋರ್ಚುಗೀಸ್ ರಾಜಕೀಯ ಶಕ್ತಿಯನ್ನು ನಾಶಪಡಿಸಿದರು.  ಶಿವಪ್ಪ ನಾಯಕ ಅವರು ಸಿಸ್ಟ್ ಎಂಬ ರಾಜಸ್ವ ಪರಿಹಾರ ಯೋಜನೆಯನ್ನು ಪರಿಚಯಿಸಿದರು , ಇದು ಮೊಗಲ್ ಚಕ್ರವರ್ತಿ ಅಕ್ಬರ್ ರೂಪಿಸಿದ ಕಂದಾಯ ಯೋಜನೆಗಳಿಗೆ ಅನುಕೂಲಕರ ಹೋಲಿಕೆಯನ್ನು ಕಂಡುಕೊಂಡಿದೆ.  ಈ ಯೋಜನೆಯ ಪ್ರಕಾರ, ಮಣ್ಣಿನ ಪ್ರಕಾರ ಮತ್ತು ಲಭ್ಯವಿರುವ ನೀರಾವರಿ ಸೌಲಭ್ಯಗಳ ಆಧಾರದ ಮೇಲೆ ಕೃಷಿ ಭೂಮಿಯನ್ನು ಐದು ವಿಧಗಳಾಗಿ ವಿಂಗಡಿಸಲಾಗಿದೆ. ಖಂಡುಗ ಎಂಬ ಬಿತ್ತನೆ ಸಾಮರ್ಥ್ಯದ ಘಟಕವನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಪ್ರತಿ ನೀರಾವರಿ ಭೂಮಿಗೆ ಈ ಘಟಕದ ಆಧಾರದ ಮೇಲೆ ವಿವಿಧ ಮೊತ್ತಗಳಲ್ಲಿ ತೆರಿಗೆ ವಿಧಿಸಲಾಯಿತು. ತೆರಿಗೆಯ ದರವು ಈ ಐದು ರೀತಿಯ ಭೂಮಿಯಲ್ಲಿ ಪ್ರತಿಯೊಂದರ ಇಳುವರಿಯನ್ನು ಅವಲಂಬಿಸಿದೆ, ದರವು ಹಳ್ಳಿಯಿಂದ ಗ್ರಾಮಕ್ಕೆ ಬದಲಾಗುತ್ತದೆ ಮತ್ತು ಒಟ್ಟು ಇಳುವರಿಯಲ್ಲಿ ಮೂರನೇ ಒಂದು ಭಾಗದಷ್ಟು ಇರುತ್ತದೆ. ಶಿವಪ್ಪ ನಾಯಕ ಅವರು ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿದರು, ಇದು ಕೃಷಿ ಆರ್ಥಿಕತೆಯನ್ನು ವಿಸ್ತರಿಸಲು ಕಾರಣವಾಯಿತು.  *ಧಾರ್ಮಿಕ  ಸಹಿಷ್ಣು*  ಧಾರ್ಮಿಕ ಮತ್ತು ಸಹಿಷ್ಣು ವ್ಯಕ್ತಿ, ಶಿವಪ್ಪ ನಾಯಕ ಲಿಂಗಾಯತ   ಆಚರಣೆಗಳನ್ನು ಮಾಡಿದರು ಮತ್ತು ಶೃಂಗೇರಿಯ ಹಿಂದೂ ಅದ್ವೈತ ಕ್ರಮವನ್ನು ಪೋಷಿಸಿದರು. ಶೃಂಗೇರಿಯ ಮಠ ಗುಡಿ ಕಟ್ಟಿ ಕೊಟ್ಟರು. ಅವರು ಕ್ರಿಶ್ಚಿಯನ್ನರ ಬಗ್ಗೆ ಸಹಿಷ್ಣುರಾಗಿದ್ದರು ಮತ್ತು ಅವರಿಗೆ ಕೃಷಿ ಮಾಡಲು ಭೂಮಿ ನೀಡಿದರು. ಅವರು ದಕ್ಷಿಣ ಭಾರತದ ವಾಣಿಜ್ಯ ಸಮುದಾಯಗಳಾದ ಕೋಮಟಿಗಳು ವೈಶ್ಯರು ಮತ್ತು ಕೊಂಕಣಿಗಳನ್ನು ತಮ್ಮ ರಾಜ್ಯದಲ್ಲಿ ನೆಲೆಸಲು ಮತ್ತು ವ್ಯವಹಾರಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದರು.  ಕಾಶ್ಮೀರಿ ಪಂಡಿತರು ವಲಸೆ ಬಂದಾಗ ಅವರಿಗೆ ಹೊಸನಗರ ಪ್ರದೇಶದಲ್ಲಿ ಆಶ್ರಯ ನೀಡಿ ಪೋಷಿಸಿದರು. *ಸ್ವಾರಸ್ಯಕರ ಪ್ರಸಂಗ* ಶಿವಪ್ಪ ನಾಯಕನ ಆಳ್ವಿಕೆಯ ಕಾಲದ ಸ್ವಾರಸ್ಯಕರ ಪ್ರಸಂಗ ಹೀಗಿದೆ. ಗಣೇಶ್ ಮಲ್ಯ ಎಂಬ ಬಡ ಬ್ರಾಹ್ಮಣನು ಉದ್ಯೋಗ ಹುಡುಕುವ ಉದ್ದೇಶದಿಂದ ರಾಜಧಾನಿ ಕೆಳದಿಗೆ ಬಂದನು. ಹಣವಿಲ್ಲದ ಕಾರಣ ಮನೆಯಲ್ಲಿ ಬೆಳೆದ ತೆಂಗಿನಕಾಯಿ ತುಂಬಿದ ಚೀಲವನ್ನು ಹೊತ್ತೊಯ್ದರು. ನಗರವನ್ನು ಪ್ರವೇಶಿಸುವ ಮೊದಲು, ಪ್ರತಿಯೊಬ್ಬ ಪ್ರಯಾಣಿಕರು ಎಂಟು ಟೋಲ್ ಗೇಟ್‌ಗಳ ಮೂಲಕ ಹಾದುಹೋಗಬೇಕಾಗಿತ್ತು, ಪ್ರತಿಯೊಂದೂ ತೆರಿಗೆಯನ್ನು ಸಂಗ್ರಹಿಸುತ್ತದೆ. ಅವರು ಯಾವುದೇ ಹಣವನ್ನು ಸಾಗಿಸದ ಕಾರಣ, ಗಣೇಶ್ ಮಲ್ಯ ಅವರು ಪ್ರತಿ ಟೋಲ್ ಗೇಟ್‌ನಲ್ಲಿ ಎರಡು ತೆಂಗಿನಕಾಯಿಗಳನ್ನು ಹಂಚಿಕೊಳ್ಳಬೇಕಾಯಿತು, ಒಂದನ್ನು ತೆರಿಗೆ ಮತ್ತು ಇನ್ನೊಂದನ್ನು ಅಧಿಕಾರಿಗೆ ಉಡುಗೊರೆಯಾಗಿ ನೀಡಲಾಯಿತು. ನಗರದ ಪ್ರವೇಶ ದ್ವಾರದಲ್ಲಿ ಎರಡು ತೆಂಗಿನಕಾಯಿ ಸಹ ಪಾವತಿಸಿದರು. ಎಲ್ಲಾ ಟೋಲ್‌ಗಳಿಂದ ನಿರಾಶೆಗೊಂಡ ಮಲ್ಯ ಅವರು ಧೈರ್ಯದಿಂದ ತಮ್ಮದೇ ಆದ ಟೋಲ್ ಗೇಟ್ (ಒಂಬತ್ತನೇ ಟೋಲ್ ಗೇಟ್) ಸ್ಥಾಪಿಸಿದರು ಮತ್ತು ತಮ್ಮ ಸ್ವಂತ ರಿಜಿಸ್ಟರ್‌ನಲ್ಲಿ ನಗರಕ್ಕೆ ಬರುವ ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ನೋಂದಾಯಿಸಿದ ನಂತರ ಟೋಲ್ ಸಂಗ್ರಹಿಸಿದರು. ಟೋಲ್‌ಗೆ ಪ್ರತಿಯಾಗಿ, ಗಣೇಶ್ ಮಲ್ಯ ಅವರು ಹದಿನೆಂಟು ತೆಂಗಿನಕಾಯಿಗಳಿಗೆ ಹೊಸ ಕಸ್ಟಮ್ ಸ್ಟೇಷನ್, ಕುಮಟಾದ ಗಣೇಶಯ್ಯ ರಾಜರ ಸಹಿಯೊಂದಿಗೆ ಚೀಟಿಯನ್ನು ನೀಡಿದರು . ಇದು ಹದಿನೆಂಟು ತಿಂಗಳುಗಳ ಕಾಲ ರಾಜ ಶಿವಪ್ಪ ನಾಯಕನಿಗೆ ಕೇಳುವ ಮೊದಲು ಯಾರೂ ಗಮನಿಸಲಿಲ್ಲ. ರಾಜನು ಕರೆಸಿದಾಗ, ಜೀವನೋಪಾಯಕ್ಕಾಗಿ ಅಕ್ರಮ ಜಕಾತು ತೆರಿಗೆ ಸಂಗ್ರಹಿಸಿದ್ದಾಗಿ ಗಣೇಶ್ ಮಲ್ಯ ಒಪ್ಪಿಕೊಂಡಿದ್ದಾನೆ. ಅವರ ಪ್ರಾಮಾಣಿಕತೆ ಮತ್ತು ವ್ಯವಹಾರ ಕುಶಾಗ್ರಮತಿಯಿಂದ ಪ್ರಭಾವಿತರಾದ ಶಿವಪ್ಪ ನಾಯಕ ಗಣೇಶ್ ಮಲ್ಯರನ್ನು ತಮ್ಮ ಸೇವೆಗೆ ತೆಗೆದುಕೊಂಡರು.  ಶಿವಪ್ಪ ನಾಯಕನ ನಂತರ 1660 ರಲ್ಲಿ ಅವನ ಕಿರಿಯ ಸಹೋದರ ಚಿಕ್ಕ ವೆಂಕಟಪ್ಪ ನಾಯಕನು ಸಿಂಹಾಸನವನ್ನು ಅಲಂಕರಿಸಿದನು. ಶಿವಪ್ಪ ನಾಯಕ ಕೆಳದಿ ಅರಸರ ಮೊದಲ ದೊರೆ. ಇವನ ಕಾಲದ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಹಲವು ಭಾಗಗಳಲ್ಲಿ ಕಾಣುತ್ತೇವೆ.  ಇಂತಹ ಜನಪರ ಅರಸು ಸಾಮಾಜಿಕ ಬದಲಾವಣೆಯ ಕನಸುಗಾರ ಶ್ರೀ ಶಿವಪ್ಪ ನಾಯಕ ಇವರಿಗೆ ಅನಂತ ಕೋಟಿ ನಮನಗಳು ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ಶ್ರೀ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ ನಾನು ಬಾಲಕನಾಗಿದ್ದಾಗ ನನ್ನ ಅಜ್ಜ ಲಿಂಗೈಕ್ಯ  ಶ್ರೀ ವೀರಭದ್ರಪ್ಪ ವಾಲಿ ಅವರು ನನಗೆ ನಿತ್ಯ ಸಂಜೆ  ರಾತ್ರಿ  ಕಥೆ ಹೇಳುತ್ತಿದ್ದರು ಅವರು ಹೇಳಿದ ಒಂದು ಸಹಜ ಪ್ರಕರಣದ ಭಾಗವನ್ನು ಇಲ್ಲಿ ಸ್ಮರಿಸುತ್ತೇನೆ. ಮುಳಗುಂದ ವ್ಯಾಪಾರಸ್ಥರು  ಒಮ್ಮೆ ಶ್ರೀ  ಪಂಚಾಕ್ಷರಿ ಗವಾಯಿಗಳನ್ನು   ಜಾತ್ರಾ ಮಹೋತ್ಸವಕ್ಕೆ ಮುಳಗುಂದಕ್ಕೆ ಕರೆಸಿದರಂತೆ ಕಾರ್ಯಕ್ರಮ ಮುಗಿದ ಮೇಲೆ ಶ್ರೀ   ಶ್ರೀ  ಪಂಚಾಕ್ಷರಿ ಗವಾಯಿಗಳು ತಾವು ತಂದ ಧೋತರ ಅಲ್ಲಿನವರು ಬೇರೆಯವರ ಧೋತರಗಳ ಜೊತೆಗೆ ಬೆರೆಸಿ ಇಟ್ಟಿದ್ದರಂತೆ ,ಇವರ ತೀಕ್ಷ್ಣತೆ ಪರೀಕ್ಷೆ ಮಾಡಲು, ಇಪ್ಪತ್ತು ದೋತುರಗಳಲ್ಲಿ ಶ್ರೀ  ಪಂಚಾಕ್ಷರಿ ಗವಾಯಿಗಳು ತಮ್ಮ ದೋತುರವನ್ನೇ ಆಯ್ಕೆ ಮಾಡಿಕೊಂಡರಂತೆ. ಅದೇ ರೀತಿ ಅವರ ಉಣ್ಣುವ ಗಂಗಾಳ ಮತ್ತು ಚರಿಗೆಯನ್ನು ಅವರು ಪತ್ತೆ ಹಚ್ಚಿ ಜನರಿಗೆ ಆಶ್ಚರ್ಯವನ್ನು   ಉಂಟು ಮಾಡುತ್ತಿದ್ದರಂತೆ ,ಇದನ್ನು ನನ್ನ ಅಜ್ಜ ಸ್ವತಹ ಕಣ್ಣಿಂದ  ಕಂಡ ದೃಶ್ಯವೆಂದರೆ ಶ್ರೀ  ಪಂಚಾಕ್ಷರಿ ಗವಾಯಿಗಳು ಎಷ್ಟು ತೀಕ್ಷ್ಣಮತಿಗಳಾಗಿದ್ದರು ಎಂದು ತಿಳಿಯುತ್ತದೆ. ಇಂತಹ ಅಪ್ರತಿಮ ಸಂಗೀತ ಸಾಮ್ರಾಟನ ಪರಿಚಯ ಮಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ.  ಕರ್ನಾಟಕವು ಅದರಲ್ಲೂ ಉತ್ತರ ಕರ್ನಾಟಕವು ಸಂಗೀತ ಸಾಹಿತ್ಯ ದಿಗ್ಗಜರನ್ನು ನಾಡಿಗೆ ಸಮರ್ಪಿಸಿದೆ .ಅಂತಹ ಸಾಧಕರಲ್ಲಿ ನಮ್ಮ ಪಂಚಾಕ್ಷರಿ ಗವಾಯಿಗಳು. ಶ್ರೀ ಪಂಚಾಕ್ಷರ ಗವಾಯಿಗಳು  ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ”ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ದಿನಾಂಕ: ೨, ಫೆಬ್ರುವರಿ ೧೮೯೨ರಂದು. ಇವರ ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು. ಗದಿಗೆಯ್ಯ ಹಾಗು ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟು ಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.ಹಾನಗಲ್ ಕುಮಾರಸ್ವಾಮಿಗಳು ಇವರಿಗೆ ಸಂಗೀತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಸಂಗೀತ ಶಿಕ್ಷಣ ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ. ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ “ಪಂಚಾಕ್ಷರಿ ಗವಾಯಿ” ಎಂದು ಉದ್ಘೋಷಿತರಾದರು. ಆ ಬಳಿಕ ಸಹ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು. ಸಂಗೀತದ ಮೂಲಕವೆ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು. *ಸಂಗೀತ ಪ್ರಚಾರ* _________________ ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ ಒಂದು ಸಂಚಾರೀ ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೧೪ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳವರು ಬಸವ ಜಯ೦ತಿಯ೦ದು ಸ್ಥಾಪಿಸಿಕೊಟ್ಟರು. ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ! ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ ೧೯೩೦ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು. *ಕನ್ನಡ ಪ್ರೇಮಿ ____________ ಎಚ್.ಎಮ್.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಟ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು. *ಸ್ವದೇಶಾಭಿಮಾನಿ ಗ್ರಾಮ್ಯ ಸಂಸ್ಕೃತಿ* —————————————— ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ. ಕೊನೆಗೂ ಇದೇ ರೋಗಕ್ಕೆ ಗವಾಯಿಗಳು ಬಲಿಯಾದರು. *ಲಿಂಗೈಕ್ಯ* ——————- ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧, ಜೂನ್ ೧೯೪೪ರಂದು ಪಂಚಾಕ್ಷರ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು ಮತ್ತು ನಿಧನರಾದರು. ತಮ್ಮ ಜೀವಿತ ಐವತ್ತೆರಡು ವರುಷಗಳಲ್ಲಿ ಸಂಗೀತ ಸಾಮ್ರಾಜ್ಯವನ್ನು ಕಟ್ಟಿದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top