ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಸಾವಿನ ದಡದಾಚೆಯೂ
ಬೆಳಕಾಗಿ ಉಳಿಯುವ ಹೆಜ್ಜೆಯೇ ಅಮರತ್ವ,
ಕಾಲದ ಮರಳಿನ ಮೇಲೆ
ಅಳಿಯದ ಗುರುತು ಬಿಡುವ ಬದುಕೇ ಅಮರತ್ವ.

ಉಸಿರು ನಿಲ್ಲಬಹುದು,
ದೇಹ ಮಣ್ಣಿನಲ್ಲಿ ಬೆರೆತು ಹೋಗಬಹುದು,
ಆದರೆ ;
ಸತ್ಕಾರ್ಯದ ಸುಗಂಧ
ಯುಗಗಳವರೆಗೂ ಹರಡಬಹುದು.

ಮರವು ಬಿದ್ದು ಹೋದರೂ
ಅದರ ಬೀಜ ಕಾಡಾಗಿ ಬೆಳೆಯುವಂತೆ,
ಮನುಜನ ದೇಹ ಮರೆಯಾದರೂ ;
ಅವನ ಚಿಂತನೆಗಳು ಜೀವಂತವಾಗಿರುತ್ತವೆ.

ಕವಿಯು ಬರೆದ ಸಾಲುಗಳಲ್ಲಿ,
ವೀರನ ರಕ್ತದ ತ್ಯಾಗದಲ್ಲಿ,
ತಾಯಿಯ ಮಮತೆಯ ಸ್ಪರ್ಶದಲ್ಲಿ,
ಗುರುವಿನ ಜ್ಞಾನದ ಬೆಳಕಿನಲ್ಲಿ
ಅಮರತ್ವ ಮೌನವಾಗಿ ಅರಳುತ್ತದೆ.

ಅದು ದೇವರ ವರವಲ್ಲ,
ಮಾನವನ ಕರ್ಮದ ಫಲವೂ ಅಲ್ಲ ,
ಸ್ವಾರ್ಥದಾಚೆ ಬದುಕಿದ
ಆತ್ಮದ ಹುಸಿ ಕಲ್ಪನೆಯೂ ಅಲ್ಲ ;
ಅಮರತ್ವ ಎಂಬುದು ಕಾಯ ಕಾಯಕಗಳ
ಶಾಶ್ವತ ಪ್ರತಿಫಲ

ಕಾಲವು ಎಲ್ಲವನ್ನೂ ಕಸಿದುಕೊಳ್ಳಬಹುದು,
ಆದರೆ ಪ್ರೀತಿಯಿಂದ ಕಟ್ಟಿದ ನೆನಪುಗಳನ್ನು ಅಲ್ಲ;
ಸತ್ಯಕ್ಕಾಗಿ ಬದುಕಿದ ಜೀವವನ್ನು ಅಲ್ಲ,
ಮಾನವೀಯತೆಯ ಜ್ಯೋತಿಯನ್ನು ಅಲ್ಲ

ಈ ಕಾರಣ ಬದುಕು
ಕೇವಲ ಉಸಿರಿನ ಎಣಿಕೆಯಾಗಬಾರದು,
ಹೃದಯಗಳಲ್ಲಿ ಬೆಳಗುವ
ಒಂದು ದೀಪವಾಗಬೇಕು

ಆ ದೀಪವೇ ಅಮರತ್ವ,
ಆ ಬೆಳಕೇ ಶಾಶ್ವತತೆ,
ಮರಣವನ್ನೂ ಮೀರಿ ಉಳಿಯುವ
ಮನುಷ್ಯತ್ವದ ಮಹೋನ್ನತ ಗೀತೆ.


About The Author

1 thought on “ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ””

Leave a Reply

You cannot copy content of this page

Scroll to Top