ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಆರೋಗ್ಯ, ಇತರೆ

ಮದರಂಗಿ (ಮೆಹೆಂದಿ)

ಮದರಂಗಿ (ಮೆಹೆಂದಿ) ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ. ಆಶಾ ಸಿದ್ದಲಿಂಗಯ್ಯ ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ. ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. ಮದರಂಗಿ ತಯಾರಿಕೆ ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ.  ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಉದಹರಣೆ ಎಂದರೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ… ಮದರಂಗಿ ಬ‍ಣ್ಣದ ಗುಟ್ಟು ಹಚ್ಚಿದ ಮದರಂಗಿಯನ್ನು ತುಂಬಾ ರಂಗಾಗಿಸಲು ಹಲವು ವಿಧಾನಗಳಿವೆ. ಒಂದು ವಿಧಾನ : ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು. ಎರಡನೇ ವಿಧಾನ : ನಿಂಬೆ ಹಣ್ಣಿನ ರಸವನ್ನು ಹಚ್ಚಬೇಕು. ಮೂರನೇ ವಿಧಾನ : ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು. ಔಷಧೀಯ ಗುಣ ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು.  ಗೋರಂಟಿಯ ಹೂವನ್ನು ಆವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ. ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು. ಗೋರಂಟಿಯ ಉಪಯೋಗಗಳು ಅಂಗೈ ಅಂಗಾಲು ಉರಿ ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳಿಗೆ ಲೇಪಿಸುವುದು. ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು 2ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು. ಬಿಳಿ ಕೂದಲು ಕಪ್ಪಾಗಲು (ಬಾಲನೆರೆ) ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ 25 ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು. ಕಾಮಾಲೆಯಲ್ಲಿ ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕುವುದು, ಬೆಳಿಗ್ಗೆ ಈ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ವೇಳೆ 7 ದಿನಗಳು ಕುಡಿಯುವುದು. ಮೂಲವ್ಯಾಧಿಯಲ್ಲಿ ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ತೆಳು ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ, ಅರ್ಧ ಟೀ ಚಮಚ ರಸಕ್ಕೆ ಎರಡು ಚಿಟಿಕೆ ಸುಟ್ಟಬಿಗಾರದ ಪುಡಿ ಸೇರಿಸಿ ಬೆಳಿಗ್ಗೆ ಒಂದೇ ವೇಳೆ ಸೇವಿಸುವುದು. ತಲೆ ಸುತ್ತು ಎರಡು ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಒಂದು ಟೀ ಚಮಚ ಶುದ್ಧ ಜೇನಿನಲ್ಲಿ ಮಿಶ್ರ ಮಾಡಿ ಸೇವಿಸುವುದು. ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು. ಬೆವರು ಸೆಲೆ ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ತಂದು ಚೆನ್ನಾಗಿ ಕುಟ್ಟಿ ಶುಭ್ರವಾದ ಬಟ್ಟೆಯಲ್ಲಿ ಸೋಸಿ ಚೆನ್ನಾಗಿ ರಸ ತೆಗೆಯುವುದು, ಈ ರಸವನ್ನು ಬೆವರು ಸೆಲೆಗೆ ಹಚ್ಚುವುದು. ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ ಮೊದಲು ಗಾಯ ಇರುವು ಕಡೆ ಒರಟು ಬಟ್ಟೆಯಿಂದ ಸ್ವಲ್ಪ ಉಜ್ಜುವುದು. 20ಗ್ರಾಂ ಗೋರಂಟಿ ಬೀಜಗಳನ್ನು ಗಟ್ಟಿ ಮೊಸರಿನಲ್ಲಿ 3ದಿನ ನೆನೆಹಾಕುವುದು, ಮೂರು ದಿನಗಳ ನಂತರ ಈ ಬೀಜಗಳನ್ನು ಚೆನ್ನಾಗಿ ರುಬ್ಬಿ ಲೇಪಿಸುವುದು. 2ಗ್ರಾಂ ಬೀಜಗಳ ಚೂರ್ಣವನ್ನು ಕಾದಾರಿದ ನೀರಿನಲ್ಲಿ ಹೊಟ್ಟೆಗೆ ಕೊಡುವುದು. ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗಳಿಗೆ ಈ ಮೂಲಿಕೆಯಲ್ಲಿ ರಕ್ತ ಶುದ್ದಿ ಮಾಡುವ ಗುಣವಿದೆ, 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು. ಮದರಂಗಿ ಕೈಯ ಮೇಲೆ ಹೇಗೆ ರಂಗು ಮೂಡಿಸುತ್ತದೆಯೋ ಹಾಗೆಯೇ ಪ್ರಾಕೃತಿಕ ಔಷಧವು ಹೌದು.. ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ… *******************

ಮದರಂಗಿ (ಮೆಹೆಂದಿ) Read Post »

ಇತರೆ, ಲಹರಿ

ಚಂದಿರನ ಬೆಳದಿಂಗಳಲ್ಲಿ

ಭಾವಲಹರಿ… ಭಾವಲಹರಿ… ರಶ್ಮಿ.ಎಸ್. ಒಬ್ಬಂಟಿಯೆನಿಸಿದಾಗಲೆಲ್ಲ ಬಾಲ್ಕನಿಗೆ ಬಂದು ನಿಲ್ತೇನಿ. ಅದೆಷ್ಟು ದೂರದ ಗೊತ್ತಿಲ್ಲ.. ಅಷ್ಟೂ ದೂರದಿಂದ ನಕ್ಷತ್ರವೊಂದು ಮಿಣಮಿಣ ಅಂತ ಮಿಣುಕ್ತದ. ಕಣ್ಣುಪಿಳುಕಿಸಿ, ಕಣ್ಣಾಗ ನಗ್ತದ. ನನ್ನ ಮನಿ ಮುಂದಿನ ಬೇವಿನ ಮರದ ಎಲೆಗಳು ತಣ್ಣಗ ಗಾಳಿ ಸೂಸ್ತದ. ಅದರೊಳಗೊಂದು ಕಹಿಯ ಕಂಪೂ ಇರ್ತದ. ಇರುಳಿನ ತಂಪೂ ಇರ್ತದ. ಅಪಾರ್ಟ್‌ಮೆಂಟಿನಾಗ ಸಾಕಿದ್ದ ನಾಯಿ ಚೂರಿ ಬಂದು ಬೊಗಳ್ತದ. ‘ಚೂರಿ ಮಲಗೂದು ಬ್ಯಾಡೇನು.. ಅಂದ್ರ ಸಾಕು..’ ಪಾಪ ತನಗೆ ಅನ್ಕೊಂಡು ಸುಮ್ನಾಗಿ ಒಳಗ ಹೋಗ್ತದ. ಮತ್ತದೆ ರಾತ್ರಿ, ಮತ್ತದೆ ಒಂಟಿತನ. ಹಾಸಿಗೆಗೆ ಬೆನ್ನು ಆನಿಸಿ, ಅಂಗಾತ ಮಲಗಿದಾಗ, ಫ್ಯಾನಿನ ರೆಕ್ಕಿಗಳು ಮಾತಿಗಿಳೀತಾವ. ಈ ಫ್ಯಾನಿನ ರೆಕ್ಕಿಗಳ ಜೊತಿಗೆ ನನ್ನವು ಹಲವಾರು ಗುಟ್ಟುಗಳದಾವ.  ರಾತ್ರಿಗಳಿಂದ ಯಾವ ಗುಟ್ಟುಗಳನ್ನೂ ಮುಚ್ಚಿಡಾಕ ಆಗೂದಿಲ್ಲ. ಗುಟ್ಟೇನು ಬಂತು.. ಏನೇನೂ ಮುಚ್ಚಿಡಾಕ ಆಗೂದಿಲ್ಲ. ಅಗ್ದಿ ನೀರವ ರಾತ್ರಿ ಇವು. ತೀರ ನಮ್ಮ ಹೃದಯದ ಲಯ, ನಮಗೇ ಕೇಳಿಸುವಷ್ಟು ನೀರವ ರಾತ್ರಿಗಳಿವು. ಇದ್ದಕ್ಕಿದ್ದಂತೆ ಫೋನಿನಲ್ಲಿ ಮಿನುಗು ದೀಪ. ಕತ್ತಲೆಗೆ ಹೊಂದಿಕೆಯಾಗಲಿ ಅಂತ ಬೆಳಕು ಕಡಿಮೆ ಮಾಡಿದಷ್ಟೂ ಮಾದಕ ಮಂದ ದೀಪ. ಯಾವುದೋ ಮೂಲೆಯಲ್ಲಿರುವವರಿಗೆ ಇದೀಗ ಎಚ್ಚರಿಕೆ. ಹೇಗಿದ್ದೀರಿ ಅಂತ ಕೇಳುವ ಕಾಳಜಿ. ಆದರೆ ಮನಸಿಗೆ ಅದ್ಯಾವುದೂ ಬೇಡ. ಯಾರೂ ಬೇಡ. ಮತ್ತದೇ ಏಕಾಂತದೊಳು, ನಾಭಿಯಾಳದಿಂದ ಒಮ್ಮೊಮ್ಮೆ ಅಳು, ನರನಾಡಿಯಲ್ಲಿ ವ್ಯಾಪಿಸುವಂತೆ ಆವರಿಸುತ್ತದೆ. ಕಂಗಳಿಗೂ ಹಟ. ಇನ್ನು ಕಂಬನಿ ಸುರಿಸಲಾರೆವು ಎಂಬಂತೆ. ಜೊತೆಗೆ ಕೆನ್ನೆಗಾನಲಾರೆವು ಎಂಬಂತೆ. ಮತ್ತೆ ಫೋನಿನ ಮಿಂಚು. ಅಲೆಮಾರಿಯೊಬ್ಬ, ಕಸ ಕೆದುಕುತ್ತ, ಹೂ ಗಿಡಗಳ ದಿಟ್ಟಿಸುತ್ತ, ಕಾಲಿನಿಂದ ಕಲ್ಲನ್ನೊಂದು ಒದೆಯುತ್ತ ಹೋದಂತೆ… ಎಫ್‌.ಬಿಯಲ್ಲಿ ಕಣ್ಣಾಡಿಸುತ್ತ, ಕೈ ಆಡಿಸುತ್ತ ಅಲೆಮಾರಿಯಾಗುವುದು. ಯಾವುದೇ ಉದ್ದೇಶವಿಲ್ಲದೆ, ಯಾವುದೇ ಅಜೆಂಡಾಗಳಿಲ್ಲದೆ, ಯಾರಿಗೂ ಕಿರಿಕಿರಿ ಮಾಡದೇ, ಯಾರನ್ನೂ ಮೆಚ್ಚಿಸಲೆಂದೋ, ದೂರಲೆಂದೋ… ಏನೇನೂ ಬರೆಯದೆ, ಖುಷಿಯೆನಿಸಿದ ಹಾಡು, ಸಂಕಟವನ್ನೇ ಪದಗಳಲ್ಲಿ ಹಿಡಿದಿಡುವ ಶಾಯರಿಗಳನ್ನು ಹಂಚುತ್ತ ಹೋಗುವುದು. ಅದು ಯಾರಾದರೂ ಓದಲಿ ಅಂತಲ್ಲ. ನಮ್ಮ ಪುಟದಲ್ಲಿ ಉಳಿಯಲಿ ಅಂತ. ಅಂಥವನ್ನು ಓದಿ, ಒಂದಷ್ಟು ಮೆಸೆಂಜರ್‌ನಲ್ಲಿ ವಿಚಾರಿಸಿಕೊಳ್ಳುವುದು. ಆಪ್ತರೆನಿಸಿದರೆ ಉತ್ತರಿಸುವದು, ಇಲ್ಲದಿರೆ ನೋಡಿ, ಮುಗುಳೊಂದನ್ನು ಚೆಲ್ಲಿ, ಮುಂದಕ್ಕೆ ಹೋಗುವುದು. ಇದಿಷ್ಟೂ ಆಗುವಾಗ, ಬದುಕಿಡೀ ಕಪ್ಪುಬಿಳುಪಿನ ಚಿತ್ರದಂತೆ ಕಾಣತೊಡಗುತ್ತದೆ. ಕಾಡತೊಡಗುತ್ತದೆ. ಕತ್ತಲೆಯೊಳಗೆ ಬಣ್ಣಗಳಿಲ್ಲ. ಬಣ್ಣಗಳಿರುವುದಿಲ್ಲ. ಒಂದೋ ಕಡುಕಪ್ಪು. ಇಲ್ಲವೇ ಶ್ವೇತಶುಭ್ರ ಬಿಳುಪು. ಈ ಎರಡರ ನಡುವಿನ ಬೂದು ಬಣ್ಣಕ್ಕೆ ಯಾವ ಅರ್ಥವೂ ಇಲ್ಲ. ಕಡುಕಪ್ಪು ರಾತ್ರಿ, ಹೀಗೆ ಬೆಳಗಿನ ಸೆರಗಿನಂಚಿಗೆ ಸರಿಯುವಾಗ ನಿದ್ದೆ ಸುಳಿಯುತ್ತದೆ. ಕಣ್ರೆಪ್ಪೆ ಕೆನ್ನೆಗಾನುತ್ತವೆ… ಈ ರಾತ್ರಿಗಳಲ್ಲಿ ಅದೆಷ್ಟು ಗುಟ್ಟುಗಳಡಗಿವೆಯೋ… ಅದೆಷ್ಟು ಚುಕ್ಕೆಯಂಥ ಮಿಣಮಿಣ ನಗು ಮಿಂಚಿದೆಯೋ… ಮತ್ತ ಮರುದಿನ ಎಚ್ಚರ ಆದಾಗ, ಸಣ್ಣದೊಂದು ನಗು.. ಇನ್ನೊಂದು ರಾತ್ರಿ ಸಿಕ್ತು.. ಮೋಹಿಸಲು… ಏಕಾಂತವನ್ನು ಅನುಭವಿಸಲು, ಯಾವ ಮುಖವಾಡಗಳಿಲ್ಲದೆ ನನ್ನತನವನ್ನು ಇಡಿಯಾಗಿ ಅನುಭವಿಸಲು. ಈ ಚಳಿಗಾಲದ ನೀರವ ರಾತ್ರಿಯ ಮೌನದೊಳಗಿನ ಮಾತುಗಳಿಗೆ, ಮಾತುಗಳ ನಡುವಿನ ಮೌನಕ್ಕೆ ಮರುಳಾಗುತ್ತಲೇ ಇರ್ತೀನಿ. ರಾತ್ರಿಗಳನ್ನು ಮೋಹಿಸುವುದು ಈ ಕಾರಣಕ್ಕೆ. ಮೋಹಕ ರಾತ್ರಿಗಳನ್ನು ಪ್ರೀತಿಸುವುದೂ ಇದೇ ಕಾರಣಕ್ಕೆ. **********************************

ಚಂದಿರನ ಬೆಳದಿಂಗಳಲ್ಲಿ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ ಅದು ಖಚಿತವಾದಾಗ ನೀನಿದ್ದೆ *******************************************

ಗಝಲ್ Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗರಂಗೋಲಿ-5 ಪಾತ್ರೆ ತುಂಬಿದ ಇನ್ನೆರಡು ಪಾತ್ರಗಳು ಪೂರ್ಣ… ಪೂ..ರ್ಣ.. ಅವರು ಕರೆಯುತ್ತಿದ್ದಾರೆ!. ತೆಳ್ಳಗಿನ ಸ್ವರವದು. ಉದ್ದ ಜಗಲಿಯನ್ನು ಹಂಚಿಕೊಂಡ ಮೂರನೆಯ ಹೊಸ್ತಿಲಿನ ಕೊನೆಯ ಕೋಣೆಯದು. ಮುಸ್ಸಂಜೆ ಸಮಯ,  ಒಬ್ಬರೇ ಆ‌ ಮರದ ಕಿಟಕಿಯ ಬಳಿ ಕೂತು  ತಿನ್ನುತ್ತಿದ್ದದ್ದು ಒಂದು ಆಮ್ಲೇಟ್. ಅದೂ ಚಿಕ್ಕದು. ಅದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿದ್ದರು.  ಆ ಸಮಯ ಮಾತ್ರ ಅವರು ನನ್ನ ಹೆಸರು ಕೂಗುತ್ತಿದ್ದರು. ಮನೆಯ ಹಿಂಬದಿಗೆ ಆ ಕಿಟಕಿಯ ಅರೆ ಕತ್ತಲಿಗೆ ನಾನು ಓಡುತ್ತಿದ್ದೆ. ಕಡ್ಡಿಯಂತಹ ಬಿಳೀ ಬೆರಳುಗಳು. ಪುಟ್ಟ ಆಮ್ಲೇಟಿನ ತುಂಡು ಆ ಕಿಟಕಿಯ ಸಂದಿನಿಂದ ಹೊರಬರುತ್ತಿತ್ತು. ತಾನು ಬಾಯಿ ತೆರೆದು ನನಗೆ “ಆಂ..” ಎನ್ನುತ್ತಿದ್ದರು. ನನ್ನ ಬಾಯಿಗೆ ಅವರ ಪಾಲಿನ ಆಹಾರ. ನಿನ್ನ ಅಜ್ಜಿಗೆ ಹೇಳಬೇಡ. ಇದೆಲ್ಲ ತಿಂದರೆ ಅವಳು ಬಯ್ಯಬಹುದು. ನಾನು ಬಾಯಿ ಒರೆಸಿ ಆ ಹೊಸ ರುಚಿಗೆ ತವಕಿಸುತ್ತಿದ್ದೆ. ಒಂದು- ಎರಡು ತುಂಡು ನನಗೆ. ಉಳಿದದ್ದು ಅವರಿಗೆ. ಜೊತೆಗೆ ಅವರ ಬಳಿ ಒಂದು ಪಾರದರ್ಶಕ ಗ್ಲಾಸ್. ಅದರಲ್ಲಿ ಎಂತದೋ ಪಾನೀಯ. ತುಸು ಘಾಟು ವಾಸನೆ. ಸಂಜೆಗೆ ಅವರ ಆಹಾರ ಅಷ್ಟೆ ಇದ್ದ ಹಾಗೆ ನೆನಪು. ಮತ್ತೆ ಮೌನಿಯಾಗಿ ತನ್ನ ಕೊಠಡಿ ಸೇರುತ್ತಿದ್ದರು. ಅಜ್ಜಮ್ಮನ ವಠಾರದ ಮತ್ತೊರ್ವ ಅಜ್ಜಿಯೇ ಅವರು. ನನ್ನ ಪ್ರೀತಿಯ ಸಣ್ಣಜ್ಜಿ. ಬಾಲ್ಯದಲ್ಲಿ ಸಿಹಿ ಅನುಬಂಧಗಳನ್ನು ಜೋಡಿಸಿದ ಹಿರಿ ಮನಸ್ಸುಗಳು ಅದೆಷ್ಟೋ ಇದ್ದವು. ಅವರಲ್ಲಿ ಈ ಸಣ್ಣಜ್ಜಿಯೂ ಒಬ್ಬರು. ಆ ವಠಾರ ನನ್ನ ನಾಟಕದ ಅವ್ಯಕ್ತ ಪಾಠಶಾಲೆಯಾಗಿತ್ತು. ಅಜ್ಜಮ್ಮ ಅನ್ನುತ್ತಿದ್ದರು: ನನ್ನ ಖಾಸ ತಂಗಿಯಲ್ಲ,ಆದರೆ ಅವಳು ತಂಗಿ. ಅವಳ ಜವಾಬ್ದಾರಿ ನನ್ನದು”  ಈ ಸಣ್ಣಜ್ಜಿ ಅಜ್ಜಮ್ಮನಷ್ಟು ಮಾತನಾಡುವವರಲ್ಲ. ಮೌನಿ. ಆ ಉದ್ದದ ಮನೆಯ ಮುಕ್ತಾಯ ಹಂತದಲ್ಲಿ ಇರುವ ಕೋಣೆಯಲ್ಲಿ ವಾಸ. ಎದುರು ಭಾಗಕ್ಕೆ ಬರುವುದೇ ಕಮ್ಮಿ. ಹಿತ್ತಲ ಬದಿ ಇರುವ ಬಾಗಿಲಿನ ಸಮೀಪ ಮನೆಯ ಒಳಗಡೆ ಒಂದು ಸಿಮೆಂಟಿನ ಕುರ್ಚಿಯ ತರಹ ಇತ್ತು ಅದಕ್ಕೆ ಹೊಂದಿಕೊಂಡಂತೆ ಮರಗಳ ದಳಿ ಇರುವ ಉದ್ದನೆಯ ಕಿಟಕಿ. ಅಲ್ಲಿ ಬೆಳಗ್ಗೆ, ಮಧ್ಯಾಹ್ನ, ಮತ್ತು ಸಂಜೆ ಹೊತ್ತಿಗೆ  ಬಂದು ಕೂರುತ್ತಿದ್ದರು. ಕೈಯಲ್ಲಿ ಒಂದು ಪುಸ್ತಕ. ಯಾವ ಪುಸ್ತಕ, ಯಾವ ವಿಷಯಗಳ ಬಗ್ಗೆ ಅವರ ಆಸಕ್ತಿ ನನಗೆ ತಿಳಿಯುತ್ತಿರಲಿಲ್ಲ. ಬಹುಶಃ ಯಾರಿಗೂ ತಿಳಿದಿರಲಿಲ್ಲ. ಆ ಪುಸ್ತಕಗಳು ಅವರ ಕೋಣೆಯೊಳಗೆ ಇರುತ್ತಿದ್ದವು. ಆ ಕೋಣೆ ಆ ದೊಡ್ಡ ಮನೆಯೊಳಗಿನ ಅವರ ಮನೆ. ಅಜ್ಜಮ್ಮನ ಪ್ರತಿಯೊಂದು ಚರ್ಯೆ ಅನಾವರಣಗೊಂಡು ಕಣ್ಣೆದುರು ಕಾಣುತ್ತಿದ್ದರೆ ಇವರು ಎಲ್ಲ ವಿಷಯಗಳಲ್ಲೂ ಅಂತರ್ಮುಖಿ. ಸಣ್ಣಜ್ಜಿಯ ಕೋಣೆಯೊಳಗೆ ಹಗಲಲ್ಲೂ ಮಂದ ಬೆಳಕು. ನಾನು ಅಂಜಿಕೊಂಡು ಒಳಗೆ ಇಣುಕುತ್ತಿದ್ದೆ.  ಅವರು ಆ ಅರೆಕತ್ತಲಿನ ಕೋಣೆಗೆ ಇರುವ ಒಂದು ಕಿಟಕಿಯ ಬಳಿ ಕೂತಿರುತ್ತಿದ್ದರು. ತಿಂಡಿ,ಊಟ ಅಲ್ಲೇ. ತಟ್ಟೆಯಲ್ಲಿ ನೀರು ಕೊಡಬೇಕು. ಅಲ್ಲೇ ಕೈ ತೊಳೆಯುವುದು. ನಾನು ಅಡಗಿಕೊಂಡು ಅವರ ಚರ್ಯೆಗಳನ್ನು ಗಮನಿಸುತ್ತಿದ್ದೆ.  ಏನೋ ಯೋಚನೆ ಮಾಡುವ ರೀತಿ ಕೂತಿರುತ್ತಿದ್ದರು. ನಂತರ ಅಲ್ಲೇ ಓದು. ಪುಟ್ಟದೊಂದು ಗೋಡೆಗೆ ಹೊಂದಿಕೊಂಡ ಕಪಾಟು. ಅದರಲ್ಲೇ ಅವರ ಪುಸ್ತಕ,ಪೌಡರ್ ಡಬ್ಬ, ಬಿಳೀ ಪುಟ್ಟ ಡಬ್ಬದಲ್ಲಿ ಪೊಂಡ್ಸ ಕ್ರೀಂ.  ಯಾವುದೂ ಹೊರ ಬಾರದು. ಅವರ ಊಟವೂ ಅಷ್ಟೆ ಮಾತಿಗಿಂತಲೂ ಮಿತ. ಬರೀ ಒಂದು ಮುಷ್ಠಿ ಅನ್ನ,ಒಂದು ಲೋಟ ಹಾಲು,ಒಂದಿಷ್ಟು ಪಲ್ಯ. ಯಾವುದರ ಬಗ್ಗೆಯೂ ಚರ್ಚೆ ಇಲ್ಲ. ಅವರಾಗಿ ಊಟದ ಬಗ್ಗೆ ವಿಚಾರಿಸಿದ್ದು ಕಂಡಿಲ್ಲ. ಬೆಳಗ್ಗೆ ಬೇಗನೆ ಸ್ನಾನ. ಅವರ ದೇವರ ಪೂಜೆಯೂ ಬಹಿರಂಗವಾಗಿ ಕಾಣುತ್ತಿರಲಿಲ್ಲ. ಭಜನೆ,ಹಾಡು ಹಾಡಿದವರಲ್ಲ. ಅವರ ಮನೆಗೆ ಬಹಳಷ್ಟು ಜನ ಬರುತ್ತಿದ್ದರು. ಅಜ್ಜಮ್ಮ ಅವರೊಡನೆ, ಮಾತು ಚರ್ಚೆ ನಡೆಸುತ್ತಿದ್ದರು. ಸಣ್ಣಜ್ಜಿ ಯಾವುದರಲ್ಲೂ ಪಾಲ್ಗೊಂಡ ನೆನಪಿಲ್ಲ. ಭೇಟಿಗೆ ಬಂದವರೇ ಅವರ ಬಳಿ ಹೋಗಿ ಮಾತನಾಡುತ್ತಿದ್ದರು. ಅಜ್ಜಮ್ಮ ನನಗೆ ಮಾತು ಕಲಿಸಿದರೆ ಸಣ್ಣಜ್ಜಿ ಕಲಿಸಿದ್ದು ಮೌನ. ನಾಟಕದಲ್ಲಿ ಹಲವು ಬಾರಿ ಮಾತುಗಳಿಗಿಂತ ಹೆಚ್ಚು ಮೌನ ಮಾತಾಡುತ್ತೆ ಅಂತ ಅರ್ಥವಾದಾಗಲೆಲ್ಲಾ, ನೆನಪಾಗುವುದು ಸಣ್ಣಜ್ಜಿ ಕಲಿಸಿದ ಮೌನ. ಅಜ್ಜಮ್ಮನ ಜೊತೆ ಮಾತು ಮೀರಿ ನಾನು ಸಣ್ಣಜ್ಜಿ ಬಳಿ ಹೋಗಲು ಎದ್ದರೆ ಗದರುತ್ತಿದ್ದರು. ಅವಳು ಯಾಕೆ? ಅವಳಿಗೆ ಗಂಡೂ ಬೇಡ,ಹೆಣ್ಣೂ ಬೇಡ.  ಸಣ್ಣಜ್ಜಿಯ ಪುಸ್ತಕಗಳು, ಅವರ ಕಣ್ಣಲ್ಲಿ ಒಸರುವ ವಾತ್ಸಲ್ಯ ಅದೊಂದು ಅಮೂರ್ತ ಭಾವ ನಿಧಿಯನ್ನು ದೇಣಿಗೆ ನೀಡಿತ್ತು. ಮುಂದೆ ನಾಟಕಗಳಲ್ಲಿ ರಾಮಾಯಣದ ಶಬರಿ, ರಾಮಾಶ್ವಮೇಧದ ಊರ್ಮಿಳಾ, ಮಂದಾರ ರಾಮಾಯಣದ ಅಹಲ್ಯೆ ಪಾತ್ರಗಳು ಮನಸ್ಸಿನಲ್ಲಿ ಚಿತ್ರಿತಗೊಂಡಾಗ ಆ ಪಾತ್ರದ ಮೂರ್ತ ರೂಪದಂತೆ ಅಯಾಚಿತವಾಗಿ ಸಣ್ಣಜ್ಜಿಯ ಕಾಯ ನಿಲ್ಲುತ್ತಿತ್ತು. ಅವರೂ ಯಾರದ್ದೋ ನಿರೀಕ್ಷೆಯಲ್ಲಿದ್ದರೇ ಎಂಬ ಪ್ರಶ್ನೆಯಿಂದ ಈಗಲೂ ಮನಸ್ಸು ತಳಮಳಿಸುತ್ತದೆ. ಈಗ ಅನಿಸುತ್ತದೆ. ಅವರ ಭಾವಕೋಶದೊಳಗೆ ಏನಿತ್ತು? ಕೋಶ ಹರಿದು ಚಿಟ್ಟೆ ಬಣ್ಣದ ರೆಕ್ಕೆ ತೆರೆದಿರಲೇ ಇಲ್ಲವೇ? ಆ ಮೌನವನ್ನು ಯಾರೂ ಮುಟ್ಟುವ ಮನಸ್ಸು ಮಾಡಿಲ್ಲವೇ. ತಪಸ್ವಿನಿಯಂತೆ ಬದುಕಿದರು. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ. ನನ್ನ ಬಾಳ ರಂಗಸ್ಥಳದಲ್ಲಿ ಕಂಡ ಅಪರೂಪದ ಪಾತ್ರ. ಅದೊಂದು ದಿನ ಮಲಗಿದ್ದಲ್ಲಿಯೇ ಕಾಯ ತೊರೆದಿದ್ದರು. ನಂತರದ ದಿನಗಳಲ್ಲಿ ನನ್ನೊಳಗೊಂದು ಭಯ ಹುಟ್ಟಿಕೊಂಡಿತ್ತು. ಅಡುಗೆ ಮನೆ ಹೋಗಬೇಕಾದರೆ ಅವರ ಕೊಠಡಿ ದಾಟಿ ಹೋಗಬೇಕಿತ್ತು. ಬೇಡವೆಂದರೂ ದೃಷ್ಟಿ ತೆರೆದ ಆ ಕೊಠಡಿಯತ್ತ ಓಡುತ್ತಿತ್ತು. ಆ ಪುಟ್ಟ ದೇಹ ಅಲ್ಲಿ ಇದ್ದ ಹಾಗೆ ಅನಿಸಿ ಗಾಬರಿಗೊಳ್ಳುತ್ತಿದ್ದೆ. ಅಜ್ಜಮ್ಮ ಏನಾದರೂ ತರಲು ಹೇಳಿದರೆ ಅಲ್ಲಿಯವರೆಗೆ ಸಹಜವಾಗಿ ಬಂದರೆ ನಡಿಗೆ ನಿಲ್ಲುತ್ತಿತ್ತು. ಮನಸ್ಸಿನಲ್ಲಿ ದೇವರ ನಾಮಸ್ಮರಣೆಯೊಂದಿಗೆ ಕಣ್ಣುಮುಚ್ಚಿ ಓಟದ ನಡಿಗೆಯಲ್ಲಿ  ಆ ಕೊಠಡಿ ದಾಟುತ್ತಿದ್ದೆ.  ಆ ಮನೆಯಲ್ಲಿದ್ದ ಮೂರನೆಯವರೇ ಹೆಣ್ಣು ರೂಪದ ಗಂಡು ಪಾತ್ರದ ವತ್ಸಲ ಚಿಕ್ಕಿ. ಅವರು ನಡೆದಾಡುವ ಶೈಲಿಯೂ ಹಾಗೆ. ಉದ್ದಕ್ಕಿದ್ದರು. ಎದೆಸೆಟೆಸಿ ನಡೆದಂತೆ ನಡೆಯುತ್ತಿದ್ದರು. ದಪ್ಪ ಸ್ವರ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಮ್ಮ ಬಳಿ ಇದ್ದ ಕೆಜಿಗಟ್ಟಲೆ ಬಂಗಾರ, ನಗದು ಎಲ್ಲ ಗಂಟು ಕಟ್ಟಿ ಗಾಂಧೀಜಿಯವರನ್ನು ಭೇಟಿ ಮಾಡಿ ಅವರಿಗೆ ಒಪ್ಪಿಸಿದ್ದರಂತೆ. ತನಗಿಷ್ಟವಾದಾಗ ತಿಂಡಿ, ಇಷ್ಟವಾದರೆ ಊಟ. ಯಾರನ್ನೂ ಕೇಳಿ ಉಪಚರಿಸಿಕೊಂಡವರಲ್ಲ. ಬೇಕಾದಾಗ ಅಡುಗೆ ಮನೆಗೆ ನುಗ್ಗಿ ಪಟಪಟ ಸದ್ದು ಮಾಡಿ ತನಗಿಷ್ಟವಾದುದ್ದನ್ನು ತಯಾರಿಸಿ ಉಣ್ಣುತ್ತಿದ್ದರು. ಮನೆಯೊಳಗೂ ಸ್ಲಿಪ್ಪರ್ ಚಪ್ಪಲು ಹಾಕಿ ಓಡಾಟ. ದಿನದಲ್ಲಿ ಮೂರು ನಾಲ್ಕು ಸಲ ಉಡುಪು ಬದಲಿಸುತ್ತಿದ್ದರು. ಎಲ್ಲವೂ ಶಿಸ್ತುಬದ್ಧ. ಬೆಳಗ್ಗೆದ್ದು ಎಲ್ಲಿಗೋ ಹೋಗುತ್ತಿದ್ದರು. ಥಟ್ಟೆಂದು ಪ್ರತ್ಯಕ್ಷವಾಗುತ್ತಿದ್ದರು. ಏನನ್ನೋ ಹೇಳಲಿರುವಂತೆ ಸದಾ ತುಟಿಗಳ ಚಲನೆ. ಖಾದಿ ಉಡುತ್ತಿದ್ದರು. ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದರು. ಮನಸ್ಸಾದರೆ  ದೇವಾಲಯಕ್ಕೆ ಹೊರಡುತ್ತಿದ್ದರು. ಅಗೆಲ್ಲ ನನ್ನ ಕರೆದುಕೊಂಡು ಹೋಗುವುದು. ಎದುರಾದ ಗಿಡ, ಮರ, ಕಲ್ಲು ಎಲ್ಲದಕ್ಕೂ ನಮಸ್ಕರಿಸುತ್ತಿದ್ದರು. ಕಾಲಿಗೆ ಕಲ್ಲು ಎಡವಿದರೆ ಆ ಕಲ್ಲಿಗೆ ಎರಡೂ ಕೈಗಳನ್ನು ಬಾಗಿಸಿ ನಮಸ್ಕರಿಸುತ್ತಿದ್ದರು.  “ಎಲ್ಲದರೊಳಗೂ ದೇವರಿದ್ದಾನೆ” ಸ್ವಗತದಂತೆ ಮಾತನಾಡುತ್ತಿದ್ದರು. ನನ್ನ ಕೈ ಹಿಡಿದೇ ಇರುತ್ತಿದ್ದರು. ಪ್ರಹ್ಲಾದ ಕಥೆ ಇವರೊಳಗಿಂದಲೇ ಚಿಗುರಿದಂತೆ.  ನಾನು ಬಹಳ ಕಾಲ ಅವರ ಈ ಅಭ್ಯಾಸ, ಹವ್ಯಾಸ ನನ್ನೊಳಗೆ ಇಳಿಸಿಕೊಂಡು ಅನುಸರಿಸುತ್ತಿದ್ದೆ. ವ್ಯಕ್ತಿಯ ಹಾವ ಭಾವದ ಅನುಕರಣೆ, ಸ್ವಭಾವದ ಅನುಕರಣೆ ಅಭಿನಯ ಮಂಟಪದ ಕಂಭಗಳು ತಾನೇ. ರಂಗದ ರಂಗೋಲಿಯೇ ಪ್ರೀತಿ,ತನ್ನಯತೆಯಿಂದ ನಮ್ಮನ್ನು ಸಮೀಕರಿಸಿ ಸಮರ್ಪಿಸಿಕೊಳ್ಳುವ ದೈವೀಕತೆ. ಪ್ರತೀ ಒಂದರ ಸೂಕ್ಷ್ಮತೆ, ಆಗುಹೋಗುಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ಎದೆಗಿಳಿಸಿಕೊಳ್ಳುವ ಜಾದೂ. ಅದರ ಮೊದಲ ಅಕ್ಷರಾಭ್ಯಾಸ ಬಾಲ್ಯ.  ನೆನಪಿಗೆ ತಾಲೀಮು, ಉಸಿರಿಗೆ ರಾಗ, ಮಾತಿಗೆ ಕೌಶಲ್ಯ, ದೇಹದ ಚಲನೆ, ಚೈತನ್ಯ ಎಲ್ಲವನ್ನೂ ನಿರಾಳತೆಯಿಂದ ಸ್ವೀಕರಿಸಲು ವೇದಿಕೆ ಕಟ್ಟಿದ್ದರು ಆ ಮೂವರು ದೇವಕನ್ನಿಕೆಯರು. ಅಜ್ಜಮ್ಮ ಹಾಡಿಸಿದ ಹಾಡುಗಳು, ಪ್ರಶ್ನೋತ್ತರಗಳು, ನೃತ್ಯ, ವ್ಯಕ್ತಿಗಳ ಮಾತು, ನಡೆಯ ಅನುಕರಣೆ ಎಲ್ಲವೂ ನನ್ನೊಳಗೆ ಒಬ್ಬ ಕಲಾವಿದೆ ಅಂಕುರಿಸಲು,ರಂಗದಲ್ಲಿ ಕಾಣಿಸಲು ದೀವಿಗೆಯಾಗಿ ಕಂಡಿದೆ.  ಬದುಕಿನ ಹಲವು ಅವಸ್ಥೆಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಕ್ರಿಯೆ ಮತ್ತು ಪ್ರತಿಯೊಂದು ಪಾತ್ರಗಳಲ್ಲಿ ಅನುಭವಿಸುವ ತಾದಾತ್ಮ್ಯ ಭಾವ ಮನಸ್ಸಿನೊಳಗೆ ಸದಾ ಹಸಿರಾಗಿದೆ. *********************************************************************** ಪೂರ್ಣಿಮಾಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

You cannot copy content of this page

Scroll to Top