ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಶ್ರೀ ಲಕ್ಷ್ಮಿ ಅದ್ಯಪಾಡಿ ನಿನ್ನ ಉಸಿರ ರಾಗಕ್ಕಾಗಿ ಹುಡುಕಾಡುತ್ತಿರುವೆನಿನ್ನ ಒಲವ ಪಿಸುನುಡಿಗಾಗಿ ಹುಡುಕಾಡುತ್ತಿರುವೆ.. ಕದ್ದು ನೋಡುವ ಸಾವಿರಾರು ಕಣ್ಣುಗಳ ನಡುವೆನಿನ್ನ ಪ್ರೇಮದ ನೋಟಕ್ಕಾಗಿ ಹುಡುಕಾಡುತ್ತಿರುವೆ.. ನನ್ನ ಕುಡಿ ನೋಟಕ್ಕೆ ಕಾದಿವೆ ನೂರು ಭ್ರಮರಗಳುಕೆನ್ನೆ ಸವರಿದ ಪುಟ್ಟ ಹೂವಿಗಾಗಿ ಹುಡುಕಾಡುತ್ತಿರುವೆ.. ಬಣ್ಣಗಳಲ್ಲಿ ಅದ್ದಿದ ಸಾವಿರ ಕುಂಚಗಳು ಕಾದಿವೆನಿನ್ನ ನೆನಪಿನ ಒಂದು ರೇಖೆಗಾಗಿ ಹುಡುಕಾಡುತ್ತಿರುವೆ ಜಗದ ಬನದೊಳು ಅರಳಿವೆ ವಿಧವಿಧವಾದ ಹೂಗಳುಒಡಲ ಕಂಪು ಸೂಸಿದ ಕಸ್ತೂರಿಗಾಗಿ ಹುಡುಕಾಡುತ್ತಿರುವೆ *****************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ದರಾಮ ಹೊನ್ಕಲ್ ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತುಕಳವಳಿಸದಿರು ಏಲೇ ಮನವೇ ಹತಾಶದಿ ನೀ ಸೋಲಬೇಡ ಮಧುರ ಪ್ರೇಮವಿಲ್ಲದೇ ಈ ಜೀವಕೆ ಜೀವನ ಬೇಕೆ ಸಾಕಿಹೊನ್ನು’ಲಕ್ಷ ಭಾವತುಂಬಿ ಪ್ರೀತಿ ದಕ್ಕದ ಫಕೀರ ಆಗಿಸಬೇಡ **********************************

ಗಜಲ್ Read Post »

ಇತರೆ, ಪ್ರಬಂಧ

ಪರಿವರ್ತನೆಗೆ ದಾರಿ ಯಾವುದಾದರೇನು?

ಲಲಿತ ಪ್ರಬಂಧ ಪರಿವರ್ತನೆಗೆ ದಾರಿ ಯಾವುದಾದರೇನು? ನಾಗರೇಖಾ ಗಾಂವಕರ್ ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ  ವಿದ್ಯಾರ್ಥಿಗಳು  ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು  ಮಾತ್ರ. ಉಳಿದೆಲ್ಲ ಮಕ್ಕಳು ಸಮಯಕ್ಕೆ ಸರಿಯಾಗಿ ಬಂದರೆ ಆ ಹುಡುಗ ಮಾತ್ರ ದಿನವೂ ತಡವಾಗಿಯೇ ಕಾಲೇಜಿಗೆ ಬರುತ್ತಿದ್ದ. ಕೈಯಲ್ಲಿ ಒಂದು ನೋಟ್ ಪುಸ್ತಕ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಹಾಕಿಕೊಂಡ ಯೂನಿಫಾರ್ಮ ಅಲ್ಲಲ್ಲಿ ಕೊಳೆ ಮೆತ್ತಿಕೊಂಡಂತೆ ಇದ್ದರೆ ಕೂದಲನ್ನು ವಿಕಾರ ಶೈಲಿಯಲ್ಲಿ ಕ್ರಾಪು ಹೊಡೆಸಿಕೊಂಡಿದ್ದ.ಆತ ಬರುವ ಗತ್ತು ಮಾತ್ರ ಥೇಟ್ ಹೀರೋ, ಬಹುಶಃ ಕನ್ನಡದ ದರ್ಶನ್ ಇಲ್ಲವೇ ಯಶ್ ಇವರ ನಡಿಗೆಯಿಂದ ಪ್ರಭಾವಿತನಾಗಿದ್ದಂತೆ ಇತ್ತು.                          ಪ್ರತಿದಿನ ಪ್ರಾರ್ಥನೆ ತಪ್ಪಿಸುವ, ತಡವಾಗಿ ಬರುವ ವಿದ್ಯಾರ್ಥಿಗಳನ್ನು ಹಿಡಿಯಲು ಕ್ಲಾಸರೂಮಿನ ಹೊರಗೆ ಉಪನ್ಯಾಸಕರ ದಂಡು ಕಾಯುತ್ತ ಕುಳಿತಿರುತ್ತಿದ್ದರು. ಆದರೂ ಈ ಹುಡುಗ ಮಾತ್ರ ನನಗಾರೂ ಸಮನಿಲ್ಲ, ಎಂಬ ಉಡಾಫೆಯಲ್ಲಿ ತಡವಾಗಿಯೇ  ಬರುತ್ತಿದ್ದ.. ಕನ್ನಡ ಉಪನ್ಯಾಸಕರಿಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೆಕಾಯಿ ಸಂಬಂಧ.ಎಂದಿನಂತೆ ಈತ ಕಂಡದ್ದೆ ತಡ, ಅವರು ಮಂಗಳೂರಿನ ಭಾಷಾ ಶೈಲಿಯಲಿ  “ ಏ ಹುಡುಗಾ, ಕಾಲೇಜು ಪ್ರಾರ್ಥನೆ ಎಷ್ಟಕ್ಕೋ? ಮತ್ತೀಗ ಎಷ್ಟು ಗಂಟೆ?  ನಿಂಗೆ ಮಂಡೆ ಗಿಂಡೆ ಉಂಟಾ? ನೀನೊಬ್ಬ ಸ್ಟೂಡೆಂಟಾ?” ಎಂದು ಗರಂ ಆಗಿ ಗುರಗುಟ್ಟಿದರು. “ಸರ್ ಸ್ನಾನ ಮಾಡಾಕ್ ಲೇಟ್ ಆಯ್ತ ರೀ, ನಮ್ಮವ್ವ ಬ್ಯಾಗ್ ಏಳಾಂಗಿಲ್ಲಾರೀ, ನೀರು ಕಾಯಿಸಿ ಒಲೆ ಹಚ್ಚಿ ನೀರು ಕಾಯುವರೆಗೂ ನಾನ್ ಎಳಾಂಗಿಲ್ಲಾರೀ,” ಎಂದ. ತೀರಾ ಸಲೀಸಾಗಿ ಸುಳ್ಳು ಹೇಳುತ್ತಿದ್ದಾನೆ ಎಂಬ ಗ್ರಹಿಕೆ ಬರುವಂತೆ  ನುಡಿಯುತ್ತಿದ್ದರೆ ಕನ್ನಡ ಶಿಕ್ಷಕರು ನಖಶಿಖಾಂತ ಉರಿಯತೊಡಗಿದರು.   ಇನ್ನು ಮುಂದೆ ಹೀಗೆ  ತಡಮಾಡುವುದಿಲ್ಲವೆಂದು ವಿನಂತಿಸಿ ಅಂತೂ ಆತ ತರಗತಿಗೆ ನಡೆದ.ಇಂಗ್ಲಿಷು ಅಷ್ಟಾಗಿ ಬರದ ಆತ ಸಂಸೃತ ಆಯ್ದುಕೊಂಡಿದ್ದ.ಮೊದಲ ತರಗತಿ ಸಂಸ್ಕೃತ. ಪಾಠ ಮಾಡಬಂದವರು ನಡುವಯಸ್ಸಿನ ಆದರೂ ನವ ಯುವಕನ ಪೋಸು ಕೊಡುತ್ತಿದ್ದ ಆರ್ ಕೆ. ಅವರ ಮುಂದಿನ ಹೆಸರನ್ನು ನಾನು ಹೇಳುವುದು ನೀವು ಕೇಳುವುದು ಬೇಡವೇ ಬೇಡ.ಆ ದಿನದ ಪಾಠದ ವಿಷಯ ಪಾಪ ಪುಣ್ಯ.   ಪಾಪ ಪುಣ್ಯಗಳ ಬಗ್ಗೆ ಉಪನ್ಯಾಸಕರು ದೀರ್ಘವಾಗಿ ಭಾಷಣ ಮಾಡತೊಡಗಿದರು.ವ್ಯಾಸರ  ಭಾರತವನ್ನು, ಹದಿನೆಂಟು ಪುರಾಣಗಳ ಆಧಾರಗಳನ್ನು ಉಲ್ಲೇಖಿಸಿ  “ಪರರಿಗೆ ಉಪಕಾರ ಮಾಡುವುದೇ ಪುಣ್ಯ,ಪರರ ಪೀಡನೆಯೇ ಪಾಪ” ಎನ್ನುತ್ತಿದ್ದರು. ತಟ್ಟನೆ  ಆ ವಿದ್ಯಾರ್ಥಿ ಎದ್ದು ಪ್ರಶ್ನಿಸಿದ “ಸರ್, ಸುಂದರವಾಗಿರುವ ಹುಡುಗಿಯರಿಗೆ ಹೆಚ್ಚು ಅಂಕ ನೀಡಿ, ಬುದ್ದಿವಂತ ಆದರೆ ತುಂಟ ಹುಡುಗರಿಗೆ ಕಡಿಮೆ ಅಂಕ ನೀಡುವುದು ಪಾಪವೋ? ಅಥವಾ ಪುಣ್ಯವೋ?” ಎಂದ.  ಉತ್ತರ ಕೊಡಲಾಗದ ಉಪನ್ಯಾಸಕರು ಬೆಸ್ತುಬಿದ್ದು ತಡಬಡಿಸತೊಡಗಿದರು. ಮತ್ತೆ ಉಪನ್ಯಾಸಕರು ಉಪನ್ಯಾಸ ನೀಡದೆ, “ಯಾಕೋ ಹನುಮ ಬೆಳ್ಳಂಬೆಳಿಗ್ಗೆ ಅಮಲೇರಿದಂಗೆ  ಬಡಬಡಿಸ್ತಿ.ಚಂದಾ ಗಿಂದ ತಗೊಂಡು ನನಗೇನಾಗಬೇಕು.ಪಾಠ ಸರ್ಯಾಗ ಕಲಿಯೂದ ಕಲಿ. ಬಡವ “ ಎಂದು ಗದರಿಸಿ“ಎಲ್ರೂ ಇಲ್ಲಿ ಕೇಳಿ, ಒಂದು ಸುಭಾಷಿತ ಕೊಡ್ತಿನಿ, ಬರ್ಕೋಳ್ಳಿ” ಎಂದು ಹೇಳಿ                            “ಮರ್ಕಟಸ್ಯ ಸುರಾಪಾನಂ                            ಮಧ್ಯೆ ವೃಶ್ಚಿಕ ದ್ವಂಶನಂ                            ತನ್ಮದ್ಯೆ ಭೂತಸಂಚಾರೋ                            ಯದ್ವಾತದ್ವಾ ಭವಿಷ್ಯತಿ”  ಎಂದು ಬರೆಸಿ ನಾಳೆ ಅದರ ಕನ್ನಡ ಅನುವಾದ ಉತ್ತರ  ಬರೆದು ತರುವಂತೆ ಹೇಳಿದರು.ಯಾರು ತರುವುದಿಲ್ಲವೋ ಅವರಿಗೆ ಇಂಟರ್ನಲ್  ಮಾರ್ಕ್ಸ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದು ಹೊರನಡೆದರು. ಅದು ಇಂಟರ್ವೆಲ್. ಹನುಮ ಮತ್ತವನ ಗೆಳೆಯರು  ತಲೆಕೆರೆದು ಕೊಳ್ಳುತ್ತ ಅನುವಾದ  ಮಾಡತೊಡಗಿದರು. ಅಲ್ಲೆ ಒಬ್ಬ ಗೆಳೆಯ ಅಂದ “ಹನಮ್ಯಾ ಅವ್ರ ನಿಂಗ್ ಇದನ್ನ ಟೊಂಟಾಗ್ ಕೊಟ್ಟಾಂಗೈತಲೇ!.ಮರ್ಕಟ ಅಂದ್ರ ಮಂಗಾ ಅಲ್ಲೇನ್ಲೇ? ಮತ್ತ ನಿನ್ನ ಹೆಸರು ಹನುಮ, ಸರಿಯಾಯ್ತ ಮಗನೇ, ಸೇರಿಗೆ ಸವ್ವಾಸೇರು. ನೀ ಸ್ಟುಡೆಂಟಲೇ, ಅವ್ರು ಲೆಕ್ಚ್ರು. ನಿನ್ನ ಕೈಯಾಗ ಅವರನ್ನ  ಯಾಮಾರ್ಸೋದಕ್ಕ ಆಗಾಂಗಿಲಲೇ” ಎಂದ. ಎಳೆ ಪ್ರಾಯದ ಬಿಸಿರಕ್ತದ ಹನುಮನ ಬಡಕಲು ಶರೀರವೂ ಕೊತಕೊತ ಕುದಿಯಿತು. ಅವನೆಂದ “ ಹೌದಾ! ಹಾಗಾಂದ್ರೆ ನೋಡೆ ಬೀಡುವಾ. ನಾನ ಅದರ ಉತ್ತರ ಬರಿದೆ ಬರಿತೀನಿ. ಸರ್ ಯಾವಾಗ್ಲೂ ನೆನಪಿಡೋ ಹಾಂಗ ಬರಿತೀನಿ. ಈಗ್ಲೆ ಅದನ್ ಹೇಳಾಂಗಿಲ್ಲ, ಮಾಡೇ ತೋರಸ್ತೀನಿ. ನೋಡ್ಲೇ ” ಅಂದ.  ಆದರೂ ಅವನ ಮುಖ ಜೋತು ಬಿದ್ದಿತ್ತು. ತಾನು ಮಾಡುವುದು ಸರಿಯೋ? ತಪ್ಪೋ? ಡೋಲಾಯಮಾನ ಮನಸ್ಥಿತಿ. ಆದರೂ ಹುಡುಗರೆದುರಿಗೆ ತಾನು ಹೀರೋ ಆಗಬೇಕೆನ್ನುವ ಛಲ. ಇಷ್ಟಾಗಿಯೂ ಶಿಕ್ಷಕರ  ಅಂತಃಕರಣದ ಉದಾರೀಕರಣ ಬಲ್ಲವನಾಗಿದ್ದ. ತಾನಾದರೋ ಹಾಗೆ ಮಾಡಿದರೆ ಉಪನ್ಯಾಸಕರು ಮಹಾ ಏನು ಮಾಡಿಯಾರು? ಒಂದೆರಡು ಬೈದು ಬುದ್ದಿ ಹೇಳತಾರು,ಅಷ್ಟೇ ತಾನೆ? ನೋಡೆ ಬಿಡುವ ನನ್ನ ಜಿದ್ದು ಹೆಚ್ಚೋ ಆರ್.ಕೆ ಜಿದ್ದು ಹೆಚ್ಚೋ? ಎಂದುಕೊಳ್ಳುತ್ತ ಮಾರನೆ ದಿನ ತರಗತಿಗೆ ಕೊಂಚ ಮೊದಲೆ ಬಂದ. ಮೊದಲನೆ ತರಗತಿಯೇ ಸಂಸ್ಕೃತ. ಮೊದಲೆ ಕಾಲೇಜಿಗೆ ಬಂದ ಆತ ಮಾಡಿದ ಕೆಲಸವೆಂದರೆ ಬ್ಲಾಕ್ ಬೋರ್ಡನ್ನು ಚೆನ್ನಾಗಿ ಒರೆಸಿ, ಒಂದು ಮೂಲೆಯಿಂದ ಮಂಗನ ಆಗಮನದ ಚಿತ್ರ ಬಿಡಿಸಿದ. ಆದರೆ ಅದರ ಮೂತಿ ಮಾತ್ರ ತನ್ನ ಮುಖದಂತೆ ಬರೆದ.ಕೈಯಲ್ಲಿ ಬಾಟಲ್ ಹಿಡಿಸಿದ, ಮಂಗನ ಕೆಳಭಾಗದಲ್ಲಿ ಎಡನಿತಂಬಕ್ಕೆ  ಕಚ್ಚುತ್ತಿರುವ ಚೇಳೊಂದನ್ನು ಬಿಡಿಸಿದ.ಈಗ ಮತ್ತೊಂದು ಎರಡನೆಯ ಚಿತ್ರ ಬರೆದ ಮಂಗನ ದಶಾವತಾರದ ಚಿತ್ರ.ಅಮಲೇರಿದ ಮಂಗನ ಮುಖದ ಹನುಮನ ಮಂಗಚೇಷ್ಟೆಯ ಚಿತ್ರ, ಕೊನೆಯಲ್ಲಿ  ಮಂಗನಿಂದ ಬಚಾವಾಗಲು ಮರವೇರಿದ  ಉಪನ್ಯಾಸಕರ ಚಿತ್ರ ಬರೆದು ನಿರುಮ್ಮಳನಾದ. ಅಷ್ಟೇ ಅಲ್ಲ ಯಾರಾದರೂ ಅದನ್ನು ಅಳಿಸಬಹುದೆಂದು ತರಗತಿ ಬಿಟ್ಟು ಹೊರಬರದೆ ಕಾಯುತ್ತ ಕುಳಿತ. ಸಮಯವಾಗುತ್ತಲೇ  ತರಗತಿ ಭರ್ತಿಯಾಗತೊಡಗಿತು. ಹೆಣ್ಣು ಹುಡುಗಿಯರು ಕಣ್ಣು ಕಣ್ಣು ಬಿಟ್ಟು ಈ ಅದ್ಭುತ ಚಿತ್ರ ನೋಡಿ ವಿವರಿಸತೊಡಗಿದರು. ಈಗ ಅದಕ್ಕೆ ರೆಕ್ಕೆ ಪುಕ್ಕ ಎಲ್ಲ ಹುಟ್ಟಿಕೊಂಡವು.ಎಲ್ಲರ ಮುಂದೆ ಕಾಲರ್ ಎತ್ತಿ ಎತ್ತಿ ಹನುಮ ಭುಜ ಕುಣಿಸಿದ.ಪ್ರಾರ್ಥನೆಗೂ ಹೋಗದೆ  ಉಪನ್ಯಾಸಕರು ಬರುವವರೆಗೂ ಚಿತ್ರ ಕಾಯುತ್ತ  ಕುಳಿತ. ಕೈಯಲ್ಲೊಂದು ಹಾಜರಿ ಪುಸ್ತಕ ಮತ್ತೊಂದು ಪಠ್ಯ ಪುಸ್ತಕ ಹಿಡಿದು ಠಾಕುಠೀಕಾಗಿ ಬರುತ್ತಿರುವ ಉಪನ್ಯಾಸಕರಾದ ಆರ್. ಕೆ. ನ ನೋಡಿ ಹುಡುಗಿಯರು ಮುಸಿಮುಸಿ ನಕ್ಕರೆ, ಹನಮ್ಯಾ ಮತ್ತವನ ಕೋತಿ ದಂಡು ತಣ್ಣಗೆ ಕುಳಿತಿತ್ತು. ಹಾಜರಿ ಗಿಜರಿ ಮುಗಿಸಿ ಈಗ ಗುರುಗಳು ಬೋರ್ಡಿನ ಕಡೆ ತಿರುಗುತ್ತಲೂ ಆಶ್ಚರ್ಯ!! . ನಿನ್ನೆ ತಾವು ವಿದ್ಯಾರ್ಥಿಗಳಿಗೆ  ನೀಡಿದ ಸಮಸ್ಯೆ ಅವರಿಗೆ ನೆನಪಿರಲಿಲ್ಲ. ‘ಎಂಥದ್ಭುತ ! ಭಲೇ, ಚಿತ್ತ ಚಾಂಚಲ್ಯಕ್ಕೆ  ಎಂಥೊಳ್ಳೆ ಚಿತ್ರ. ಯಾರು ಬರೆದವರು?’ ಎಂದು ಕೇಳುತ್ತಲೂ ಮಕ್ಕಳಲ್ಲಾ ಹನುಮನ ಕಡೆ  ನೋಡುತ್ತಲೂ ಗುರುಗಳಿಗೆ ಆಶ್ಚರ್ಯ . .’ ಭಲೇ’ ಎಂದರು ಮನದಲ್ಲೇ. “ ಎಂಥ ಅದ್ಭುತ ಕಲೆಗಾರ! ನಿನ್ನೊಳಗೊಂದು ಈ ವ್ಯಕ್ತಿ ಇರುವುದು ನನಗೆ ತಿಳಿದಿರಲಿಲ್ಲ,ಹನುಮಾ, ನೀನೊಬ್ಬ ಶ್ರೇಷ್ಠ ಚಿತ್ರಗಾರ. ನಿನ್ನ ಸಾಮರ್ಥ್ಯದ ಅರಿವು ನಿನಗೆ ಇಲ್ಲ. ಇರಲಿ ಬಿಡು. ನಿನಗೊಬ್ಬರನ್ನು ಪರಿಚಯಿಸಿ ಕೊಡುತ್ತೇನೆ. ಅವರ ಹತ್ತಿರ ಸರಿಯಾಗಿ ಪ್ರಾಕ್ಟೀಸು ಮಾಡು. ಹಣದ ಬಗ್ಗೆ ಚಿಂತಿಸಬೇಡ. ಹೇಗಾದರೂ ಹೊಂದಿಸೋಣ. ನೀನು ಮುಂದೆ ಬಂದರೆ ಸಾಕು” ಎನ್ನುತ್ತಲೂ, ಇವೆಲ್ಲವನ್ನು ನಿರೀಕ್ಷಿಸದೆ, ಉಪನ್ಯಾಸಕರು ತನಗೆ ಛೀಮಾರಿ  ಹಾಕಿ ಹೊರಗೆ ಕಳುಹಿಸಬಹುದೆಂದು ಗ್ರಹಿಸಿದ್ದ ಆತನ ಲೆಕ್ಕಾಚಾರ ತಿರುವು ಮುರುವಾಗಿತ್ತು.ಹನುಮ ನಿಜಕ್ಕೂ ಈಗ ಮಂಗನಂತಾದ.ಕನಕ ಮಣಕ  ಆದಂಗಾದ.ಅದರ ಕಾರಣ ಹೇಳ ಹೊರಟ. ಆಗಲಿಲ್ಲ. ಕಣ್ಣಾಲಿಗಳು ತುಂಬಿಕೊಂಡವು. ಗುರುವಿನ ಮುಂದೆ ಗುಲಾಮನಾಗಬೇಕೆನಿಸಿತು. ಇವರಿಗೆ ತಾನು ಎಷ್ಟು ಸತಾಯಿಸಿದೆ. ಅರ್ಥವಾಗಲಿಲ್ಲವೇ? ಅಂದುಕೊಂಡ. ತಪ್ಪಾಯಿತೆಂದು ಅಂಗಲಾಚಬೇಕೆಂದು ಕೊಂಡ. ಯಾವುದನ್ನು ಮಾಡಲಾಗದೆ ಈಗ ಮುಸಿ ಮುಸಿ ಅಳತೊಡಗಿದ.  ಅವನೊಳಗಿನ ಅಂತಃ ಪ್ರಜ್ಞೆ ಎಚ್ಚರಗೊಂಡಿತ್ತು. ಎಲ್ಲವನ್ನೂ ಸಲೀಸಾಗಿ ತೆಗೆದುಕೊಂಡು ಬದುಕುತ್ತಿದ್ದ ಹುಡುಗನ ಮನೆ ಸ್ಥಿತಿ ತೀರ ಹದಗೆಟ್ಟಿದ್ದಾಗಿತ್ತು. ಅದನ್ನು ತನ್ನ ವಿಚಿತ್ರ ಶೈಲಿಗಳಿಂದ ನಡೆ ನುಡಿಗಳಿಂದ ಮರೆಯಲು ಬಯಸುತ್ತಿದ್ದ.  ಕಾಯಿಲೆಯಿಂದ ಹಾಸಿಗೆ ಹಿಡಿದ ತಾಯಿ, ಸದಾ ಕುಡಿದು ಬರುತ್ತಿದ್ದ ತಂದೆ, ಈ ಮಧ್ಯೆ ಒಡಹುಟ್ಟಿದ ಮುದ್ದು ತಂಗಿ, ಆಕೆಯ ಜವಾಬ್ದಾರಿ ಎಲ್ಲವನ್ನೂ ಎಳೆಯ ಪ್ರಾಯದ ಹುಡುಗ ಹೊತ್ತಿಕೊಂಡಿದ್ದ. ಬೆಳಿಗ್ಗೆ ತಡವಾಗುತ್ತಿದ್ದ ಕಾರಣ, ಮನೆಗುಡಿಸಿ, ನೀರು ತುಂಬಿ, ತಿಂಡಿ ಮಾಡಿ,ತಾಯಿಗೆ ತಂಗಿಗೆ ತಿಂಡಿ ಕೊಟ್ಟು, ತಾನು ಅರ್ಧಂಬರ್ಧ ತಿಂದು, ಬರುತ್ತಿದ್ದ ಆತ ಸುಮ್ಮನೆ ಸುಳ್ಳು ಹೇಳುತ್ತಿದ್ದ. ಕಾಲೇಜು ಸಮಯದ ನಂತರ ಅಂಗಡಿಯೊಂದರಲ್ಲಿ ಲೆಕ್ಕ ಪತ್ರ ಬರೆಯುವ ಕೆಲಸಕ್ಕೆ ಹೋಗುತ್ತಿದ್ದ ಆತ ಮನೆಯ ಖರ್ಚು ವೆಚ್ಚವನ್ನೆಲ್ಲಾ ತಾನೆ ನಿಭಾಯಿಸುತ್ತಿದ್ದ.ಕಾಲೇಜಿಗೆ ತಡವಾಗಿ ಬರುವುದಕ್ಕೆ ನಿಜ ಕಾರಣ ನೀಡಲು ಪ್ರಾಯದ ಜಂಭ ಅಡ್ಡಬರುತ್ತಿತ್ತು. ‘ತಾನೇಕೆ ಇನ್ನೊಬ್ಬರ ಎದುರಿಗೆ ತಲೆ ಬಾಗಿಸಲಿ? ಎಂಬ ಒಣ ಪ್ರತಿಷ್ಠೆ ಎಲ್ಲವೂ ಆತನಲ್ಲಿತ್ತು. ಆದರೀಗ ಹಾಗಾಗಲಿಲ್ಲ.ಒಂದು ಮನಸ್ಸು ಬೇಡ ಬೇಡವೆಂದರೂ ಮತ್ತೊಂದು ಮನಸ್ಸು  ತನ್ನ ಮನೆಯ ರಹಸ್ಯವನ್ನೆಲ್ಲಾ ಬಿಚ್ಚಿಟ್ಟಿತು ಮತ್ತು ತನ್ನ ಮಂಗಚೇಷ್ಟೇಯ ಆಲೋಚನೆಯನ್ನು ಹೊರಗೆಡುವಿದ.ಆತ ಹೀಗೆಂದ “ಸರ್, ಸರ್, ನನ್ನ ನೀವು ಕ್ಷಮಿಸಬೇಕ್ರೀ. ನಾನು ನಿಮಗೆ ಬುದ್ಧಿ ಕಲಿಸ್ತೀನಿ ಅಂತ ಹುಡುಗರತ್ರ ಹೇಳಕೊಂಡಿದ್ದೇರಿ..ನಂದೆಲ್ಲಾ ತಪ್ಪಾಗೈತ್ರಿ ಸರ್ ಹೊಟ್ಯಾಗ ಹಾಕ್ಕೊಳ್ರೀ, ಸರ್. ನನ್ನ ಗೆಳೇರಲ್ಲಾ ಅಂದ್ರು ಅಂತ ನಿಮಗಿಂತ ನಾನೆ ಬುದ್ಧಿವಂತ ಅಂತಾ ತೋರ್ಸಾಕ ಹೊಂಟಿದ್ದರ್ರೀ. ಈಗ ಗುರುತಾತ್ರೀ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ಶರೀಫರು ಯಾಕ್ ಹಾಡಿದ್ರೂ ಅಂತ”. ಎನ್ನುತ್ತ ಅವರ ಕಾಲಿಗೆ ಬಿದ್ದ.ಅಷ್ಟೊತ್ತಿಗೆ ಕನ್ನಡ ತರಗತಿ ಪ್ರಾರಂಭವಾಗುತ್ತಲೇ ಅವರೂ ಕ್ಲಾಸಿಗೆ ಬರಲು ಈ ದೃಶ್ಯ ಮನಕಲುಕಿತು. ಆವರೆಗೆ ಆತನ ಮೇಲಿದ್ದ ಕೋಪ,ಅಸಹನೆ ಮಾಯವಾಗಿ  ಕರುಣೆ ತುಂಬಿಕೊಂಡಿತು.ಹೆಣ್ಣು ಹುಡುಗಿಯರಂತೂ ಆತನನ್ನು ಅಭಿಮಾನದಿಂದ ನೋಡತೊಡಗಿದರು. ಈಗ ನಿಜಕ್ಕೂ ಆತ ಹೀರೋ ಆಗಿದ್ದ ಬರಿಯ ಹುಡುಗಿಯರ ಕಣ್ಣಲ್ಲಿ ಮಾತ್ರವಲ್ಲ. ಶಿಕ್ಷಕರು, ಉಳಿದ ಸಹಪಾಠಿಗಳ ದೃಷ್ಠಿಯಲ್ಲೂ ಹನುಮನಿಗೆ ಹನುಮನೇ ಸಾಟಿ ಎನಿಸಿಕೊಂಡುಬಿಟ್ಟ. ಅದರಲ್ಲಿ ಬಹಳ ಆನಂದ ಪಟ್ಟವರೆಂದರೆ ಕನ್ನಡ ಮೇಷ್ಟ್ರು ಸದಾ ಕನ್ನಡ ತರಗತಿಗೆ ಗೈರುಹಾಜರಾಗಿ ಗುಂಪು ಕಟ್ಟಿಕೊಂಡು ಉಂಡಾಡಿ ಗುಂಡನ ಹಾಗೆ ಕಾಲೇಜು ಕ್ಯಾಂಪಸ್ ಸುತ್ತುತ್ತ ಆಗಾಗ ವಿಕಾರವಾಗಿ ಅವರನ್ನು ಅಣುಕಿಸುವ ಆತನ ಆಟಕ್ಕೆ ಅವರ ಮನ ರೋಸಿ ಹೋಗಿತ್ತು. ಪಾಠಕ್ಕೆ ಬಾ ಎಂದು ಕರೆದರೂ”ಸರ್ ನಾನು ಕ್ಲಾಸಿಗ್ ಕೂರದಿದ್ರೂ ಪಾಸಾಗ್ತೀನಿ ನೋಡಿ.” ಎಂದು ಸವಾಲೆಸೆದು ಅವರ ಮುಖಭಂಗ ಮಾಡಿದ್ದ. ಆದರೆ ಈಗ ಅವರು ಅದನ್ನೆಲ್ಲ ಮರೆತು ಆತನ ಹರಸತೊಡಗಿದರು. ತಮ್ಮ ಹಳೆಯ ಕಾಲೇಜು ದಿನಗಳನ್ನು ನೆನಪಿಸಿಕೊಂಡು “ಆ ವಯಸ್ಸು ಮಾರಾಯ, ಈಗ ನಿಂಗೆ ಬೈದ್ರು ಒಂದಕಾಲಕ್ಕೆ ನಾವು ಸಾಕಷ್ಟು ಸೌಖ್ಯ ಕೊಟ್ಟಿದ್ದೆವು ನಮ್ಮ ಮಾಷ್ಟುçಗಳಿಗೆ” ಎನ್ನುತ್ತ ಆತನ ಬೆನ್ನು ತಟ್ಟಿದರು.                                                ಸತತ ಪರಿಶ್ರಮ ಪಟ್ಟು ಚೆನ್ನಾಗಿ ಓದಿದ. ಆ ವರ್ಷದ ಆದರ್ಶ ವಿದ್ಯಾರ್ಥಿ ಸ್ಥಾನವನ್ನು ಮಾತ್ರವಲ್ಲದೇ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಹೆಚ್ಚು ಅಂಕ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ. “ಹುಡುಗಾಟದ ಹುಂಬತನದಲ್ಲೂ ಮುಗ್ಧ ಮನಸ್ಸಿರುವುದು” ಎಂಬುದಕ್ಕೆ ಸಾಕ್ಷಿಯೂ ಆದ.ತಪ್ಪು ನಡೆದಾಗ ಶಿಕ್ಷಿಸದೆ ಆ ತಪ್ಪಿನಲ್ಲೂ ಕೆಲವೊಮ್ಮೆ ಇರುವ ಒಪ್ಪನ್ನು ಒಡಮೂಡಿಸಿದ ಸಂಸ್ಕೃತ ಶಿಕ್ಷಕರ ಸುಸಂಸ್ಕೃತ ವರ್ತನೆ ಆತನ ಬದಲಾವಣೆಗೆ ದಾರಿಯಾಯಿತು.

ಪರಿವರ್ತನೆಗೆ ದಾರಿ ಯಾವುದಾದರೇನು? Read Post »

ಕಾವ್ಯಯಾನ

ಕದಳಿಯ ಅಕ್ಕ

ಕವಿತೆ ಕದಳಿಯ ಅಕ್ಕ ಜ್ಯೋತಿ ಬಳ್ಳಾರಿ ಶಿವಮೊಗ್ಗ ಜಿಲ್ಲೆಯಉಡುತಡಿಯಲಿ ಹುಟ್ಟಿತು,ಒಂದು ಕನ್ನಡದ ಕಂದಮ್ಮಅವಳಿಂದ ಜಗಕ್ಕೆಲ್ಲಆನಂದ ನೋಡಮ್ಮ. ನಿರ್ಮಲಶೆಟ್ಟಿ ಸುಮತಿದಂಪತಿಗಳ ಅಕ್ಕರೆಯ ಕಂದಮ್ಮ,ಸುರದೃಪಿ ಗುಣವಂತಹೆಮ್ಮೆಯ ಮಗಳಮ್ಮ. ಅಂದದ ಮೈಮಾಟಕ್ಕೆಕೌಶಿಕ ಮಹಾರಾಜನ ವಶವಾದಳು ಕೇಳಮ್ಮ,ಮಾತು ತಪ್ಪಿದ ರಾಜನ ದಿಕ್ಕರಿಸಿಬಿಟ್ಟಳಮ್ಮ. ಅರಮನೆಯ ಭೋಗವತೊರೆದು ಕೇಶಾಂಬರಿಯಾಗಿ ಹೋರಟು ಬಿಟ್ಟಳಮ್ಮ.ಭವ ಬಂಧನವ ತೊರೆದು ಮಲ್ಲಿಕಾರ್ಜುನನ್ನುಕಾಡು ಮೆಡುಗಳಲ್ಲಿ ಹುಡುಕಿದಳಮ್ಮ. ಹಾಡುವ ಕೋಗಿಲೆಗೆಹಕ್ಕಿ ಪಕ್ಷಿಗಳಿಗೆ ಕಂಡಿರಾನನ್ನ ಪತಿನೆಂದು ಕೇಳಿದಳಮ್ಮ. ಕಲ್ಯಾಣದ ಅನುಭವ ಮಂಟಪದಲಿಅಲ್ಲಮಪ್ರಭುವಿನ ಪರೀಕ್ಷೆ ಗೆದ್ದಳಮ್ಮಜ್ಞಾನದ ಗಣಿಯಾಗಿಮಹಾಮನೆಯ ಅಕ್ಕ ಆದಳು ನೋಡಮ್ಮ. ಬಸವಣ್ಣನವರ ಜೊತೆಗೂಡಿಕಟ್ಟಿದಳು ಸಮಾನತೆಯ ಕಲ್ಯಾಣ ನಾಡಮ್ಮ,ವಚನ ಚಳುವಳಿಯಲಿಭಾಗಿಯಾದ ಕನ್ನಡಮ್ಮನಸ್ವಾಭಿಮಾನಿ ಮಗಳಮ್ಮ. ಯೋಗಾಂಗ ತ್ರಿವಿಧಿ ,ನೂರಾರು ವಚನಗಳನ್ನುಚೆನ್ನಮಲ್ಲಿಕಾರ್ಜುನ ಎಂಬಅಂಕಿತನಾಮದಿ ಬರೆದಳಮ್ಮ ಕನ್ನಡದ ಮೊದಲ ಕವಯತ್ರಿಯಾದಳಮ್ಮಅವಳೆ ಅಕ್ಕಮಹಾದೇವಿಯಮ್ಮಜಗದಲಿ ಹುಟ್ಟಿದ ಬಳಿಕ‌ಸ್ತುತಿ ನಿಂದನೆ ಬಂದರೆ ಸಮಾಧಾನದಿಂದಿರಬೇಕೆಂದುಜಗಕೆ ಹೇಳಿದಳಮ್ಮ ಶ್ರೀಶೈಲದ ಕದಳಿಯಲಿ,ನಿಜ ಪತಿ ಮಲ್ಲಿಕಾರ್ಜುನನಲ್ಲಿಕೊನೆಗೆ ಐಕ್ಯಳಾದಳಮ್ಮ*****************************************

ಕದಳಿಯ ಅಕ್ಕ Read Post »

ಕಥಾಗುಚ್ಛ

ಉಡ್ಡಾಣ

ಕಥೆ ಉಡ್ಡಾಣ ಹೇಮಾ ಸದಾನಂದ್  ಅಮೀನ್   ಎಡೆಬಿಡದೆ ಅಳುವ ಆ ಮಗುವಿನ  ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ  ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “  ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು  ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ  ಸಮೀಕ್ಷಳ ಮನಸ್ಸು  ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ ಸವನೆ ನೋಡುತ್ತಾ ಇದ್ದಳು. ಮಗು ಅಳುತ್ತಿದ್ದರೆ ಅದನ್ನು ಪುಸಲಾಯಿಸಿ ಸಮಾಧಾನಪಡಿಸುವುದನ್ನು ಬಿಟ್ಟು ಯಾವುದೋ ಲೋಕದಲ್ಲಿ ಮಗ್ಮಳಾಗಿರುವ ಆಕೆಯ ನಿಸ್ತೇಜ ಕಣ್ಣುಗಳು ಒಂದು ಕಥೆಯನ್ನು ಹೇಳಿದರೆ ಆಕೆಯ ಸ್ಟ್ರೇಟ್ನಿಂಗ್ ಮಾಡಿ ಚದುರಿದ ಹೆರಳು, ಮ್ಯನಿಕೂರ್ ಪೆಡಿಕ್ಯೂರ್ ಮಾಡಿ ಬಣ್ಣ  ಮಾಸುತ್ತಾ ಬಂದಿರುವ ನೀಲ ಬೆರಳುಗಳು , ಕೆನ್ನೆಯ ಸುತ್ತ ಹೊಂಬಣ್ಣದ ರೋಮಗಳಿಂದ ಮಸುಕು ಮಸುಕಾಗಿ   ಹೊಳೆಯುತ್ತಿರುವ ಮುಖ.  ಸೀರೆಯೂ ಅಷ್ಟೇ, ಪ್ರಿಂಟೆಡ್ ರವಕೆಗೆ ತೆಳುವಾದ ಪ್ಲೇನ್ ಹಸಿರು ಬಣ್ಣದಾಗಿದ್ದು ಆಕೆ  ನೋಡಲು ಒಂಥರ ಅಪ್ಸರೆ ಅಲ್ಲವಾದರೂ ತೆಳುವಾಗಿ ಚೆಂದವಾಗಿದ್ದಳು.  ಅಳುತ್ತಿರುವ ಮಗುವನು ಮುದ್ದಾಡಿ ಮುಖ ಒರೆಸುವುದಾಗಲಿ, ನೀರು ಕುಡಿಸುವುದಾಗಲಿ ಏನೂ ಮಾಡದೇ ತನ್ನದೇ ಗುಂಗಿನಲ್ಲಿರುವಾಗ ಸಮೀಕ್ಷಾಳ ಅನುಮಾನದ ಗರಿ ಶಿಥಿಲಗೊಂಡಿತು .  “ ಈ ಮಗು ಅವಳದ್ದೇ ಆಗಿದ್ದರೆ ಆಕೆ ಇಷ್ಟು ಅಳುತ್ತಿರುವ ಮಗುವನ್ನು ನೋಡಿಯೂ ಸುಮ್ಮನಿರಲು ಸಾಧ್ಯವೇ ಇಲ್ಲ .  ಬಹುಶಃ ಯಾರದ್ದೋ ಮಗುವನ್ನು ಕದ್ದು ತಂದಿರಬಹುದೇ?  ಮತ್ತೊಮ್ಮೆ ಛೆ!   ಈಗೀಗ ತಲೆಯಲ್ಲಿ ವಾಟ್ಸ್ ಆಪ್ಗಳಲ್ಲಿ ಓಡಾಡುವ ಸಂದೇಶಗಳೇ ಇಂತಹ ಅನುಮಾನದ ಹುಳುಗಳು”  ಎಂದು ತನ್ನಲ್ಲಿಯೇ ನಕ್ಕು ಅಕ್ಕಪಕ್ಕ ನೋಡಿದಳು . ಎಲ್ಲರೂ ಕಿವಿಗೆ ಇಯರ್ ಫೋನ್ ವಾಯರ್ ಸಿಕ್ಕಿ  ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು. ಇಂತಹ  ಹೊಳೆಯುತ್ತಿರುವ ನಿರ್ಭಾವುಕ ಮುಖಗಳೊಂದಿಗೆ ಪಯಣಿಸುತ್ತಿರುವ ಸಮೀಕ್ಷಗೆ ಸಂತೋಷ, ಘನತೆಯ ವಿಷಯಕ್ಕಿಂತ  ಬೇಜಾರಾದದ್ದೇ ಜಾಸ್ತಿ.  ಕಳೆದ ಆರು ವಾರಗಳಿಂದ ಸಿ. ಎಸ್. ಟಿ.   ಲೋಕಲಿನ  ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟನಲ್ಲಿ ದಿನಾ ನೋಡುತ್ತಿರುವ ಪರಿಚಿತ ಮುಖಗಳೇ,  ಆದರೂ ಯಾರೂ ಒಬ್ಬರನೊಬ್ಬರು ಒಂದು ಕಿರುನಗೆ ಚೆಲ್ಲಿ ಮಾತಾನಾಡಿಸುವ ಸೌಜನ್ಯ ಬಿಡಿ ಪಕ್ಕದಲಿ ಸೀಟು ಖಾಲಿಯಿದ್ದರೂ , ಸರಿದು ಕೂರಲು ತುಟಿಬಿಚ್ಚದ ಮೂಕ ಜಗತ್ತೆಂದು ಸಮೀಕ್ಷಳ ಸಮೀಕ್ಷೆಯಾಗಿತ್ತು. ಇದೇ  ದ್ವಿತೀಯ  ದರ್ಜೆಯಲ್ಲಾಗಿದ್ದರೆ , ತನ್ನ ಪೂರ್ತಿ ಶಕ್ತಿಯ ಬಂಡವಾಳದಿಂದ ಒಳನುಗ್ಗಿ ಸೀಟಲ್ಲಿ ಕೂತವರು ತಮ್ಮ ಮನೆಯವರೇ ಎನ್ನುವಂತೆ “ ಎಲ್ಲಿ ಇಳಿಯಬೇಕೆಂದು ಕೇಳಿ ತನ್ನ ಆರಾಮಿನ ಸೌಕರ್ಯ ಮಾಡಿಕೊಳ್ಳುವುದಷ್ಟೇ ಅಲ್ಲದೇ ಇತರರಿಗೂ ಖಾಲಿ ಸೀಟುಗಳಿದ್ದರೆ ಕರೆದು ಕೂರಿಸುವ ಮನೋಭಾವ. ಯಾತ್ರಿಗಳೇ ಅಲ್ಲ , ಅಲ್ಲಿ ವ್ಯಾಪಾರ ಮಾಡುತ್ತಿರುವ ಹೆಣ್ಣು ಮಕ್ಕಳು ನಮ್ಮವರೇ ಆಗುತ್ತಾರೆ. ಒಬ್ಬರ ಮಡಿಲಲ್ಲಿಟ್ಟ ಕ್ಲಿಪ್ಪುಗಳ ಬಿಂದಿಗಳ ಟ್ರೇಗಳಿಗೆ ಒಂದೇ ಮನೆಯವರಂತೆ ಹತ್ತಾರು ಮಂದಿ ಮುಗಿಬಿದ್ದು ಚರ್ಚೆ ಮಾಡಿ ಖರೀದಿಸಿದ ಸಣ್ಣ ವಸ್ತುಗಳಲ್ಲಿಯೂ ದೊಡ್ಡ ಖುಷಿ ಪಡುತ್ತಾರೆ. ಇದೆಲ್ಲಾ ರಘುನಂದನನಿಂದಾಗಿಯೇ. “  ಮಗುವಿನ ಸುರಕ್ಷೆಯ ದೃಷ್ಟಿಯಿಂದ’   ಎಂದು ಫಸ್ಟ್ ಕ್ಲಾಸಿನ ಪಾಸ್ ತಂದು ಸಮೀಕ್ಷಳ ಕೈಯಲಿಟ್ಟಾಗ ಒಪ್ಪದೆ ಬೇರೆ ದಾರಿ ಇರಲಿಲ್ಲ. ಈಗ ಈ ಮಗುವಿನ ಅಳಲು ಹೃದಯಕ್ಕೆ ಅಪ್ಪಳಿಸಿ  ಚಿಗುರುತ್ತಿರುವ ಆಕೆಯ ತಾಯ್ತನವೇ ಇದ್ದಿದ್ದೂ ಅನುಮಾನದತ್ತ ಮುಖ ಮಾಡಿ,  ಆ ತಾಯಿ ಮಗುವಿನ ಪೋಟೋ ಕ್ಲಿಕಿಸಿ ರಘುನಂದನನಿಗೆ ಕಳುಹಿಸುವಂತೆ ಮಾಡಿತ್ತು. ಆ ಸಂದೇಶವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪರಿಗಣಿಸುವುದಕ್ಕಿಂತ ವಿಷಯವನ್ನು ನಿರ್ಲಕ್ಷಿಸಿ  ಸಮೀಕ್ಷಳ ಭಾವನೆಗಳನ್ನು ನೋಯಿಸಬಾರದೆಂದು,  ಅವಳಿಂದ ಪೂರ್ತಿ ಮಾಹಿತಿ ಪಡೆದು,  ರೇಲ್ವೆ ಪೋಲಿಸರಿಗೆ ದೂರು ಸಲ್ಲಿಸಿ, ಅವರು ವಿಕ್ರೋಲಿ ಸ್ಟೇಷನಿನಲ್ಲಿರೈಲು ಹತ್ತಿ ಮುಂದಿನ ಸ್ಟೇಷನಿನಲ್ಲಿ ಅವಳೊಂದಿಗೆ ಇಳಿಯುತ್ತಾರೆ.”  ಎಂದು ಸಂದೇಶ ಕಳುಹಿಸಿದ, ಪೊಲೀಸರಿಗೆ  ನಿನ್ನ ಹೆಸರು ಹೇಳದೆ ದೂರು ನೀಡಿರುವೆನು ಆದ್ದರಿಂದ  ಇವೆಲ್ಲಾ ಗೊಂದಲಗಳಲ್ಲಿ  ಬೀಳದೇ ನಿನ್ನ ಪಾಡಿಗೆ ನೀನು ಆಫೀಸಿಗೆ ಹೋಗು ಎಂದೂ ಒತ್ತೊತ್ತಿ ಹೇಳಿದ್ದ. ಸರಿ ಎಂದು ಒಪ್ಪಿದ್ದವಳನ್ನು ಆ ಅನುಮಾನಸ್ಥ ತಾಯಿ ಮಗುವಿನ ಹಿಂದೆ ಹೋಗಲು ಕಾದಿದ್ದು ಮನ ಮಾಡಿದ್ದು ಯಾರು ಎಂದಾಗ, ಅವಳ ಸೆಕೆಂಡ್ ಕ್ಲಾಸ್ ಮೆಂಟಾಲಿಟಿಯೋ, ಅವಳ ತಾಯ್ತನವೋ, ಅಲ್ಲ ಅವಳಲ್ಲಿರುವ ಹೆಣ್ತನವೋ ಗೊತ್ತಿಲ್ಲ?   ಆ ತಾಯಿ ಮಾತ್ರ ಎಷ್ಟೂ ಕಾಡಿ ಬೇಡಿದರೂ ಲೇಡಿ ಕ್ವಾನ್ಸ್ಟೇಬಲಿನ ಕರುಣೆ ಕರಗಲಿಲ್ಲ. ಅದು ಅವರ ವೃತ್ತಿಗೂ ಸರಿ ಬರುವುದಿಲ್ಲ ಅನ್ನಿ.      ಘಾಟ್ಕೊಪರ್ ಪ್ಲಾರ್ಟಫಾರ್ಮಿನ ಮಧ್ಯದಲ್ಲಿದ್ದ  ವಿಚಾರಣೆ, ಕೊಠಡಿಗೆ ಆಕೆಯ ಕೈ ಎಳೆದು ತರುತ್ತಿದ್ದಂತೆ ನಿಬಿಡ ಜನರ ಕಣ್ಣಿಗೆ ಕುತೂಹಲದ ತುತ್ತಾಗಿದ್ದಳು. ಮಗುವನ್ನು ಎದೆಗಾತು, “ ನಾನು ಮಗು ಕದ್ದಿಲ್ಲ ಸಾರ್ ” ಎಂದೇ ಗೋಗರೆಯುತ್ತಾ ಪೋಲಿಸ್ ಅಧಿಕಾರಿಯ ಮುಂದೆ ಕೂತವಳ ಬಾಯಿ ಒಣಗಿ ಕಣ್ಣು ತೇವವಾಗಿತ್ತು.  ಸಮೀಕ್ಷ ತಾನಾಗಿಯೇ ಮುಂದು ಬಂದು “ ನಾನೇ  ದೂರು ಕೊಟ್ಟರುವುದು. ಮಗು ಎಷ್ಟೊತ್ತಿನಿಂದ ಅಳುತ್ತಿದ್ದರೂ  ಪ್ರತಿಕ್ರಿಯೆಯೇ ಇಲ್ಲದೆ ತನ್ನಳೊಳಗೆ ಗುಂಗಿನಲ್ಲಿರುವುದು, ಅ ಮಗುವೂ ತಾಯಿಯ ಮಡಿಲಲ್ಲಿ ಅಪರಿಚಿತರ ಕೈಯಲ್ಲಿರುವಂತೆ ಚಡಪಡಿಸುತ್ತಿರುವುದನ್ನು  ನೋಡಿ ಅನುಮಾನ ಬಂತು ಸರ್ ಎಂದಳು. “ಡಾಟ್ಸ್  ಗುಡ್ ಯು ಡನ್ ಆ ಗುಡ್ ಜಾಬ್ “  ಎಂದು ಅವಳನ್ನೂ ಕೂರಿಸಿ  ಮಗುವಿಗೂ ನೀರು ಕುಡಿಸಲು ಹೇಳಿ ಆ ತಾಯಿಗೆ  ಕುಡಿಯಲು ನೀರು ಕೊಟ್ಟು,  ವಿಚಾರಣೆಗೆ  ಇಳಿದರು. ವಿಚಾರಣೆ ಗಡುಸಾದಂತೆ,  ಅವಳೊಳಗಿನ ಮೌನ ಈ ಅನಿರೀಕ್ಷಿತ  ಪ್ರಶ್ನೆಗಳನ್ನು  ಕೇಳಿ ಕೇಳಿ  ರೋಸಿ , “ ಇನ್ನೆಷ್ಟು ಬಾರಿ ಹೇಳಲಿ  ನನ್ನದೇ ಮಗು ಇದು.  ನಾನೇ  ಈ ಮಗುವಿನ ತಾಯಿ  “. ಅಲ್ಲಿಯೇ ಇದ್ದ ಹಿರಿಯ ಅಧಿಕಾರಿ ಪಟವರ್ಧನ್ ಸರ್,ಅವಳ  ಒಳಗುದಿತವನ್ನು ಅರ್ಥೈಸಿಕೊಂಡು,    ಒತ್ತಾಯವಾಗಿ ಕೇಳುವ ಪ್ರಶ್ನೆಗಳನ್ನೇ ಮೃದುವಾಗಿ,  “ ನೋಡಿ ನೀವು ನನ್ನ ಸಹೋದರಿಯಂತೆ, ನಿಮ್ಮ ಹೆಸರೇನು, ಯಾವ ಊರು ,  ಮಗುವಿಷ್ಟು ಅಳಲು ಕಾರಣವೇನು?  ಮಗುವ್ಯಾಕೆ ನಿಮ್ಮನ್ನು  ಅಪರಿಚಿತರಂತೆ ಕಾಣುತಿದೆ?  ಅನಿರೀಕ್ಷಿತ  ಪ್ರಶ್ನೆಗಳನ್ನು  ಭೇದಿಸಿ  ಆಕೆ ಗಂಟಲು  ಸಡಿಲು ಗೊಳಿಸುತ್ತಾ  ಉತ್ತರಕ್ಕೆ ತೆರೆದುಕೊಂಡಳು. …………………………   ಶಾಲೆಯಲ್ಲಿ  ಮಾತ್ರ ಶರೈಯೂ . ಖೇಡಿನಲ್ಲಿ ಎಲ್ಲರಿಗೂ  ಶರು . ನಮ್ಮೂರು ಇಲ್ಲೇ ಹತ್ತಿರ,  ಕರ್ಜತ್ದಿಂದ  ಐದು ಕಿಲೋಮೀಟರ್ ದೂರ. ಸಾಂಜಾ ಖೇಡ್ ಅಂತ. ರುಕುಮಾಯಿ ಮಂದಿರದ ಹಿಂಬದಿ ನಮ್ಮ ಮನೆ.  ಅಪ್ಪ ಸಣ್ಣ ಕಾರಖಾನೆಗೆ ಕೆಲ್ಸಕ್ಕೆ ಹೋಗ್ತಿದ್ರು .  ಅಮ್ಮ ಮನೆಯಲ್ಲೇ.  ನಾನು ಮತ್ತು ನನ್ನ ಜೊತೆಗೆ ಹುಟ್ಟಿದ ಅವಳಿ ತಮ್ಮ ಸಾರ್ಥಕ್.  ಸಾರ್ಥಕನಿಗೆ ಮಿರ್ಗಿ ಹುಟ್ಟು ಕಾಯಿಲೆಯಾಗಿ ಬಂದಿತ್ತು. ಆತನ   ಹದಗೊಂಡಿದ್ದ ಜೀವಕ್ಕೆ ನಮ್ಮ ಮನೆ    ಆಸ್ಪತ್ರೆಯಂತೆ . ಗುಳಿಗೆ, ಟಾನಿಕ್ , ಡ್ರಾಪ್ಸ್  ಕಿಟಕಿಯ ಪಕ್ಕದಲ್ಲಿ  ಮಗುಮ್ಮಾಗಿ  ಕೂತು ತನ್ನ ಉಪಸ್ಥಿತಿಯನ್ನು ವ್ಯಕ್ತಪಡಿಸುತ್ತಿತ್ತು.   ಆ ಎಳೆಯ ಜೀವ  ಈ ನೋವು, ಬೇಸರ , ದ್ವೇಷ, , ನಿರಾಶೆಯ ಒತ್ತಡಗಳನ್ನು  ಎಷ್ಟು ಸಹಿಸಿಕೊಳ್ಳಲು ಸಾಧ್ಯ? ,    ಅಷ್ಟಕ್ಕೂ ಕೆಲವು ಅನಿವಾರ್ಯಗಳು ಅವನ   ಸ್ವಾಸ್ಥ್ಯಕ್ಕಾಗಿಯೇ ಮಾಡಬೇಕಾಗಿತ್ತು.  ಅಪ್ಪ ಡಬಲ್ ಕೂಲಿ ಮಾಡುತ್ತಿದ್ದ. ಅಮ್ಮ ದೇವಸ್ಥಾನದ ಚಾಕರಿಗೆ ಹೋಗುತ್ತಿದ್ದಳು. ಮನೆಯಲ್ಲಿ ಕಿವಿ ಸರಿ ಕೇಳದ ಅಜ್ಜಿ ನಮ್ಮಿಬ್ಬರನ್ನು  ನೋಡಿಕೊಳ್ಳುತ್ತಿದ್ದಳು. ನೋಡಿಕೊಳ್ಳುವುದೇನು ? ಒಮ್ಮೊಮ್ಮೆ  ನಾವು ಆತ್ತು ಆತ್ತು ಕಂಗಾಲಾದರೂ ಅಜ್ಜಿ ಕೇಳದೆ ವಿಠಲಾ …….. ಪಾಂಡುರಂಗ….  ನಾಮಾವಳಿಯಲ್ಲಿ  ಮಗ್ನರಾಗಿದ್ದಾಗ  ಪಕ್ಕದ ಮನೆಯವರು ಬಂದು “  ಏ ಕಿವುಡೆ.. ಕಿವಿಯಂತು ಪೊಳ್ಳಾಗಿದೆ ಕಣ್ಣಿಗೂ ಕಾಣಿಸ್ತಿಲ್ವಾ ? ಎಂದು  ಅಣಕಿಸುತ್ತಿದ್ದರು.  ಕೊನೆಗೂ ಕಣ್ಣೆವೆಯಲ್ಲಿಟ್ಟು ಕಾದ ಮಗುವನ್ನು ಬೆಂಬಿಡದೆ ವಿಧಿ  ಕೊಂಡೊಯ್ಯಿತು.  ಹತ್ತು ವರುಷ ನಮ್ಮೊಂದಿಗಿದ್ದು   ತೀರಿಹೋದವನ ನೆನಪು ಮರೆಯಾಗಲು ಸಾಧ್ಯವೇ?   ಅಮ್ಮನಿಂದ ಈ ಆಘಾತ ಸಹಿಸಲಾರದೆ ಆಕೆಯೂ ದಿನೇ …ದಿನೇ  ಕುಸಿಯಲಾರಂಭಿಸಿದಳು. ಮನೆಯ ಎರಡು ಗೋಡೆಯ ಪಕ್ಕದಲ್ಲಿ  ಎರಡು ಜೀವಂತ ಶವಗಳಂತೆ ಅಜ್ಜಿ ಮತ್ತು  ಅಮ್ಮ . ಯಾರ್ ಮಾಡ್ತಾರೆ ಸಾಹೇಬ್?  , ಅಪ್ಪ ಮಾತ್ರ ಬಿರುಗಾಳಿಗೆ ಎದೆಕೊಟ್ಟು ನಿಂತಂತೆ ಸೆಟೆದು ನಿಂತಿದ್ದ. ಅಮ್ಮನಿಗೂ “ ಹೇ ಶ್ಯಾಮೆ, ಇನ್ನು ನಮ್ಮ ಮಗನನ್ನು   ಇವಳಲ್ಲೇ ಕಾಣಬೇಕೆಂದು  ಹೇಳಿದರೂ,   “ ತನ್ನ ಕಡೆ ಕಾಲದ ಆಸರೆ , ಅಪ್ಪನ ದೇಹಕ್ಕೆ ಕೊಳ್ಳಿ ಇಡುತ್ತಿದ್ದ”  ಎನ್ನುವ  ಖಾಲಿತನದ ಛಾಯೆ  ಅವನ ಚಹರೆಯಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬದುಕು ಒಳ್ಳೆಯದನ್ನೂ ಕೆಟ್ಟದನ್ನೂ ಒಂದೇ  ಗಿರಣಿಯಲ್ಲಿ ಪುಡಿ ಮಾಡುತ್ತೆ”  ಎನ್ನುವಂತೆ  ಜೀವನವಂತೂ ಸಾಗುತ್ತಿತ್ತು.   ಅಮ್ಮನ ಕಾಯಿಲೆ ಅಪ್ಪನ ಸಾಲದ ಇಳಿಸುವ ಒತ್ತಡದ ಮಧ್ಯೆ ನಾನು  ಹತ್ತನೇವರೆಗೆ ಮಾತ್ರ ಕಲಿತೆ.  ಮನೆಯೊಳಗಿನ ಎಲ್ಲಾ ಕೆಲಸ ಮಾಡಿ ಮುಂದೆ ಕಲಿಯುವುದು ಕಷ್ಟಕರವಾಗಿತ್ತು. ಹಾಗೆ ಹೆಚ್ಚು ಕಲಿಯುವ ಆಸೆಯಾಗಲಿ,  ದೊಡ್ಡ ದೊಡ್ಡ ಕನಸುಗಳನ್ನು ಹೃದಯದಲ್ಲಿಟ್ಟು ಅರಳಿಸುವ ಆಕಾಂಕ್ಷೆಯಾಗಲಿ ನನ್ನಲ್ಲಿ ಅಂದೂ ಇರಲಿಲ್ಲ.  ಇಂದೂ ಇಲ್ಲ. ಎನ್ನುವಾಗ ಅವಳ ನಿಸ್ತೇಜ ಕಣ್ಣುಗಳ ಭಾವ ಸಾಕ್ಷಿಯಾಗಿದ್ದವು.  ಅಜ್ಜಿ ಸಾಯುವ ಮೊದಲು ನಿನ್ನ ತಲೆಗೆ ಅಕ್ಷತೆಯ ಎರಡು ಕಾಳು ಹಾಕ್ಬೇಕೆಂಬ ಒತ್ತಾಯಕ್ಕೆ ಮಣಿದು ನಾನು ಮದುವೆಗೆ ಒಪ್ಪಿದೆ. ಕಿಶೋರ್ ಸಿಂಪಲ್ ಆಗಿಯೇ ನನ್ನನ್ನು ನೋಡಲು ಬಂದಿದ್ದ. ಆ ಕ್ಷಣದಲ್ಲಿ  ಅವಳ  ಕೆನ್ನೆಗಳು  ಅರಳಿ ಕಣ್ಣಲಿ  ಸಣ್ಣ ಬೆಳಕು ಮಿನುಗಿದಂತೆ, “ ಕಿಶೋರನಿಗೆ ಮಾತ್ರ ಹಾಗಲ್ಲ.  ಅವನ ಕಣ್ಣಲ್ಲಿ ಕನಸುಗಳು ನಕ್ಷತ್ರ ರಾಶಿಗಳಂತೆ    ಮಿನುಗುತ್ತಲೇ ಇತ್ತು.  ಅದ್ಯಾವ ಸುಖಕ್ಕಾಗಿ ನನ್ನನ್ನು  ಮದುವೆಯಾದನೋ ಗೊತ್ತಿಲ್ಲ.   ಮದುವೆ ತೀರ ಸರಳವಾಗಿ ಮಾಡಿ ಮುಗಿಸಿದ್ದಕ್ಕೂ ಅವನ ಸಹಮತವಿತ್ತು. ಮುಂಬಯಿಯಲ್ಲಿ  ಸ್ವಂತ ಮನೆಯಂತ ಇರಲಿಲ್ಲ.  ಸ್ವಂತ ಮನೆಯೇ ಆಗಬೇಕೆಂಬ ಬಯಕೆಯೂ ನನ್ನಲ್ಲಿ ಇರಲಿಲ್ಲ.  ಕುರ್ಲಾದ ಬೈಠಕ್ ಚಾಳಿಯಲ್ಲಿಯ ಮಾಳಿಗೆಯಲ್ಲಿ ಬಾಡಿಗೆದಾರನಾಗಿರುತ್ತಿದ್ದ.   ನಮ್ಮ ಮೊದಲ ರಾತ್ರಿಯೂ ಅದೇ  ಹತ್ತು ಬೈ ಹತ್ತರ ಆ ಸಣ್ಣ ಕೋಣೆಯಲ್ಲಿಯೇ ನಡೆದಿತ್ತು. ಔಷಧಿಗಳ  ಕಮಟು ವಾಸನೆಯಿಂದ ಹೊರಬಂದ ಈ ಸಣ್ಣ ಕೋಣೆಯೂ ಅಂದು ಸ್ವರ್ಗದಂತೆ ಕಂಡಿತ್ತು. ಟ್ರೇನುಗಳ ಅವಜಾಹಿಗಳ ಸಂತೆಯ ಮದ್ಯೆಯೂ ಶರೂನ ಕಥೆ ಕೇಳುವುದರಲ್ಲಿ ಎಲ್ಲರೂ ತಲ್ಲೀನರಾಗಿದ್ದ್ರರು.  ಗಡಿಯಾರದ ಮುಳ್ಳು ಮೌನವಾಗಿದ್ದರೂ , ಸಿಲಿಂಗ್ ಪ್ಯಾನಿನ  ಟರ್ ಟರ್ ಟರ್ ಸದ್ದಿನ  ಏಕತಾನತೆ ಹುಂ… ಗುಡುವಂತ್ತಿತ್ತು.  ಮಧ್ಯ ಒಂದೊಂದು ಕ್ಷಣದ ಅಂತರದಲ್ಲಿ ಸಮೀಕ್ಷಾ ಮೊಬೈಲ್ ಗುಂಡಿ ಒತ್ತಿ ಸಮಯ ನೋಡಿದಳು. ಆಗಲೇ ರಘುನಂದನನ ಜೊತೆಗೆ ಆಫೀಸಿನ ಕರೆಗಳು   ಮೆಸೇಜ್ಗಳು ಬಂದು ತೆಪ್ಪಗೆ ಬಿದ್ದಿದ್ದವು. ಅದನ್ನು  ಹಾಗೆಯೇ  ಸ್ಕ್ರೀನ್ ಆಫ್ ಮಾಡಿ, ಬ್ಯಾಗಿನೊಳಗಿಟ್ಟಳು.  ಕೈಗೆ ತಾಗಿದ ನೀರಿನ ಬಾಟಲಿಯಿಂದ ಒಂದು ಗುಟುಕು ನೀರು ಗಂಟಲೊಳಗೆ ಇಳಿಸಿ, ಶರೂಗೆ ನೀರು ಬೇಕಾ ಎಂದು ಸನ್ನೆ ಮಾಡಿದಳು. ತನ್ನ ನೆನಪಿನ ಲೋಕದಿಂದ ಹೊರಬರಲು ಮನಸ್ಸಿಲ್ಲದ ಆಕೆ  ಬೇಡವೆಂದು ತಲೆಯಾಡಿಸಿ ಮುಂದುವರಿದಳು. ಪಕ್ಕದ್ದಲ್ಲಿದ್ದ ಲೇಡಿ  ಕಾಂಸ್ಟೇಬಲ್ , “ನಿನ್ನ ಗಂಡ ಏನ್ ಮಾಡುತ್ತಿದ್ದ”  ಎಂದು ಗದರಿಸುತ್ತಾ  ಮಧ್ಯ ಬಾಯಿ ಹಾಕಿದಾಗಲೂ  .  ಪಟವರ್ಧನ್ ಸರ್, ” ಸ್ವಲ್ಪ ತಾಳ್ಮೆ ಇರಲಿ, ಆಕೆ ಹೇಳ್ತಿದ್ದಾಳಲ್ಲ ” ಎಂದು ಖಡಕ್ ಆಗಿಯೇ ಹೇಳಿದರು.  “ಇದು ಬೇಕಿತ್ತಾ ?’  ಎನ್ನುವಂತೆ   ಬೆಕ್ಕಿನಂತೆ ಮುಖ ಸಪ್ಪಗೆ ಮಾಡಿ ಕುಳಿತಳು. ಶರೂ,  “ಸಾಹೇಬ್, ನನ್ನ ಕಿಶೋರ್ “ಅಶ್ವಬಲ”  ಕೇಬಲಲ್ಲಿ ಕೆಲಸ ಮಾಡುತ್ತಿದ್ದ.  ಟಿ.ವಿ. ಕೇಬಲ್ ಜೋಡಿಸುವುದು  , ಹಣ ವಸೂಲಿ, ಮತ್ತೆ ಗಿರಾಕಿಗಳ ಏನಾದರೂ

ಉಡ್ಡಾಣ Read Post »

ಕಾವ್ಯಯಾನ

ನೀ ಬಂದ ಘಳಿಗೆ

ಕವಿತೆ ನೀ ಬಂದ ಘಳಿಗೆ ಅನ್ನಪೂರ್ಣಾ ಬೆಜಪ್ಪೆ ಮಲಗು ಮಲಗೆನ್ನ ಕಂದಮಲಗೆನ್ನ ಹೆಗಲಿನಲಿಕಾಯುವೆನು ಅನವರತ ಭಯಬೇಡ ಮಗುವೆಸವಿಯುತಿರು ಪ್ರತಿ ಕ್ಷಣವನಲುಗದೆಯೆ ಕೊರಗದೆಯೆಬಾಳ ಹಾದಿಯಲೆನಗೆ ಬಲವದುವು ನಿನ್ನ ನಗುವೆ ರವಿಯು ಉದಿಸುವ ವೇಳೆನಲಿವ ಇಳೆಯದೆ ಸುಖವುನೀ ನನ್ನ ಮಡಿಲ ತುಂಬುತಲಿ ಬಂದ ಘಳಿಗೆಎಳೆಯಬೆರಳಿನ ಸ್ಪರ್ಶದಲಿನೂರು ತಂತಿಯು ಮಿಡಿದುಎದೆಯ ನೋವೆಲ್ಲ ಮರೆಯಾದಂತೆ ಮರೆಗೆ ಮುಪ್ಪು ಕಾಡುವವರೆಗೆತಪ್ಪು ಒಪ್ಪುಗಳ ಅರುಹಿತೆಪ್ಪವಾಗುತ ಬರುವೆ ಬಾಳ ಯಾನದಲ್ಲಿಕಪ್ಪು ಮೋಡವು ಸರಿದುತುಪ್ಪದಂತೆಯೆ ಘಮಿಸಿಒಪ್ಪವಾಗಿರಲಿ ಬದುಕು ಸವಿ ನಗುವ ಚೆಲ್ಲಿ **********************

ನೀ ಬಂದ ಘಳಿಗೆ Read Post »

ಕಾವ್ಯಯಾನ

ತಲ ಷಟ್ಪದಿಯಲ್ಲೊಂದು ಶಿಶುಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು ಕನಸ ಕಂಡನು || ಊರಿನಲ್ಲಿಗೆಳೆಯರೊಡನೆಜೀವ ಭಾವ ಹುಡುಕಿದತಂದು ಎಲ್ಲಕೂಡಿ ಕಳೆದುಮನದ ಮನೆಯ ಕಟ್ಟಿದ || ಅಮ್ಮ ನೀನುಬಂದು ನೋಡುಎಂದು ಮುದದಿ ಓಡಿದನೋಡಿ ಅವಳುಶ್ರಮದ ಫಲವುದೊರೆವುದೆಂದು ನುಡಿದಳು || ಅಂದಿನಿಂದಪುಟ್ಟ ತಾನುಕೋಟಿ ಕನಸ ಕಂಡನುಬಿಡದೆ ಹಿಡಿದುತನ್ನ ಛಲವದೊಡ್ಡ ಜಾಣನಾದನು || *****************************

ತಲ ಷಟ್ಪದಿಯಲ್ಲೊಂದು ಶಿಶುಗೀತೆ Read Post »

ಕಾವ್ಯಯಾನ

ಗಜಲ್

ಗಜಲ್ ಕೆ.ಸುನಂದಾ ನಿನ್ನ ಕಂಡ ಕ್ಷಣದಿಂದ ಆನಂದದ ಭಾಷ್ಪಗಳು ಸುರಿಯುತಿದೆ ಗೆಳೆಯಆಡಿದ ಮಾತುಗಳೆಲ್ಲ ಮಧುರ ಸಂಗೀತದಂತೆ ಸೆಳೆಯುತಿದೆ ಗೆಳೆಯ ಅದೆಷ್ಟೋ ವರ್ಷಗಳಿಂದ ಕದಲದೆ ಕಾಯುತ್ತಿರುವೆ ನೀನು ಬರುವೆ ಎಂದುವಸಂತನ ಆಗಮನದ ಆನಂದವಿಂದು ನಮ್ಮಲಿ ಉಲಿಯುತಿದೆ ಗೆಳೆಯ ಮೌನವೆ ಎನ್ನ ಬದುಕೆಂದು ದೂಡುತ್ತಲಿದ್ದೆ ಕಹಿಯಾದ ಕ್ಷಣಗಳನ್ನುಬರಡಾದ ಭೂವಿಗೆ ವರ್ಷಧಾರೆ ಬಂದಂತೆ ಹರ್ಷ ಮೆರೆಯುತಿದೆ ಗೆಳೆಯ ಪವಿತ್ರ ಪ್ರೇಮಕೆ ಆತಂಕಗಳು ಹೆಚ್ಚು ಕೊನೆಗೆ ಜಯ ಸಿಕ್ಕೇಸಿಗುವುದುಅಂತರಂಗದ ಖುಷಿಗೆ ಅಂತರಾತ್ಮದ ನಂದಾದೀಪ ಉರಿಯುತಿದೆ ಗೆಳಯ ಸರ್ವಸ್ವವೂ ನೀನೆ ಎಂದು ನಂಬಿದ್ದ “ನಂದೆ”ಗೆ ಮೋಸ ಆಗದುವಿಶ್ವಾಸಕ್ಕೆ ಇನ್ನೊಂದು ಹೆಸರೇ ನೀನು ಸಂತಸ ಹರಿಯುತಿದೆ ಗೆಳೆಯ *************************************

ಗಜಲ್ Read Post »

ಕಾವ್ಯಯಾನ

ಬಂಡಾರ ಬಳೆದ ಹಣಿ

ಕವಿತೆ ಬಂಡಾರ ಬಳೆದ ಹಣಿ ಡಾ.ಸುಜಾತಾ ಸಿ. ಬಂಡಾರ ಬಳೆದ ಹಣಿಬಾಯಿತುಂಬ ಎಲೆ ಅಡಿಕೆಜೋತು ಬಿದ್ದ ಗುಳಿ ಕೆನ್ಯೆಜಿಡ್ಡು ಗಟ್ಟಿದ ಜಟಾಧರಿಕೈ ತುಂಬಾ ಹಸಿರ ಬಳಿಎದೆ ತುಂಬಾ ಕವಡೆ ಸರಮೈ ತುಂಬಾ ಹಸಿರುಟ್ಟುಪಡಲಗಿ ಹಿಡಿದುಓಣಿ ಓಣಿ ತಿರುಗುವಳುಜೋಗತಿ ಎಂದು ಹೆಸರಿಟ್ಟುಕೂಗುವರೆಲ್ಲರೂಕತ್ತಲೆಯ ಬದುಕಲ್ಲಿಸದಾ ಬುಡ್ಡಿ ಚಿಮಣದಬೆಳಕಾಗಿಸಿ ಹಂಬಲಿಸಿಸೂರ್ಯನ ಬೆಳಕಿಗೆಜೋಗಕ್ಕೆ ಜೊಗತಿಊಧೋ ಉಧೋ ಎಂದುಹೋರಟಳು ಮಕ್ಕಳ ಸಲುವಲೆಂದುಕಂಡ ಕಣ್ಣು ಉರಿ ಕೆಂಡವಾಗಿಗೈಯ್ಯಾಳಿ ಎಂದುಕೊಟ್ಟುಬಿಟ್ಟರು ಪಟ್ಟವಒಣ ರೊಟ್ಟಿ ಜೊಳಕೆಕೈ ಚಾಚಿ ಜೋಳಿಗೆ ಬಾಯಿತೆರೆದಾಗ ಮೂಗು ಮುರಿಯುತ್ತಲೇಒಳಹೋದ ಹೆಣ್ಣುವಟಗುಟ್ಟಿ ತಂದಾಕಿದಹಳಸಲು ಜೊಳಿಗೆ ಬಟ್ಟೆಅವಳ ಅಂಗಳದ ತುಂಬೆಲ್ಲಹನಿಯ ರಂಗವಲ್ಲಿ ಚೆಲ್ಲಿಮುಂದೆ ನಡೆದಾಗಬೊಗಸೆಯೊಡ್ಡಿ ನೀರುಕುಡಿದು ದಾಹ ತೀರದಿರಲುಮುಂದಿನ ಮನೆಯ ಪಯಣಒಂದು ಕಾಸು ಎಸೆದುಒಳ ಹೊದ ತಾಯಿದುರ್ಗುಟ್ಟಿ ನೊಡಿದರುಹರಸಿ ಮುಗುಳು ನಗೆ ನಕ್ಕುದಾರಿ ಸಾಗಿಸಿ ಜನಸಂದಣಿಕಡೆಗೆ ಕಾಲ ಎಳೆಯುತ್ತಾವಿಶ್ರಮಿಸಲು‌ ಬೇವಿನ ಮರದಆಶ್ರಯ ಪಡೆದು ಕುಳಿತಿರಲುಬಡಕಲು ದೇಹದಮುಖ ಬಾಡಿದ ನನ್ನಂತೆಇರುವ ಹಸಿದ ಹೊಟ್ಟೆಗೆಅನ್ನ ಕೇಳಿರಲುಜೊಳಿಗೆ ಒಳಗಡೆಒಣ ರೊಟ್ಟಿ ಕುಟುಕಲುಒಡಲ ಹಸಿವಿಗೆ ಆಸರೆಯಾ ಮಾಡಿಎದ್ದು ನಡೆದಳುಬೇವಿನ ಎಸಳುಬಿಸಿಲೊದ್ದು ತಣ್ಣಗಿರಲಿನಿನ್ನ ಕುಡಿ ಬಳ್ಳಿ ಎಂದುಹರಸಿದಂತಾಗಿಮನೆಯ ಕಡೆಗೆ ಹೆಜ್ಜೆ ಇಡಲುಗುಡಿಸಲ ತುಂಬೆಲ್ಲಾ ಕಣ್ಣಾಗಿಕಾವಲಾಗಿ ಕಾಯತಲಿರುವಚಿಕ್ಕಮಕ್ಕಳು ಬಂದುಎದೆಗವಚಿ ಕೊಂಡಾಗಬಿಸಿಲ ಝಳಕೊಒಳ ಬೆಗುದಿಗೊಒತ್ತರಿಸಿ ಬಂದ ಕಣ್ಣ ಹನಿಯಉಪ್ಪುಂಡು ಬಿಕ್ಕಿ ಬಿಕ್ಕಿಅತ್ತಾಗ ಸಂಜೆಯ ಕಿರಣಮುಸುಕ್ಕೊದ್ದು ಮಲಗಿದಾಗಗೋಧುಳಿ ಕೆಮ್ಮಣ್ಣುಮುಖ ಮೊತಿ ಮುಚ್ಚಿಅಳುವೆಲ್ಲ ನುಂಗಿಮತ್ತೇ ಹಣಿಗೆ ಸಿಂಗರಿಸಿದಳುಬಂಡಾರವ ಬಳಿದ ಬಂಗಾರದ ತಾಯಿ

ಬಂಡಾರ ಬಳೆದ ಹಣಿ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಆತ್ಮಕತೆ–03 ಅಕ್ಷರ ಬೀಜದ ಬೆಳಕಿನತ್ತ….. ಗುಂದಿ ಹಿತ್ತಲಿನ ಎರಡೂ ಕುಟುಂಬಗಳು ಗೇಯ್ದು ಉಣ್ಣುವ’ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದವು. ಅಕ್ಷರ ದಾರಿದ್ರö್ಯದ ದಟ್ಟ ಬಡತನವೊಂದು ಅವರಿಗೆ ಬಡತನವೇ ಅನ್ನಿಸಿರಲಿಲ್ಲ. ಅಂಥ ಕುಟುಂಬಗಳಲ್ಲಿ ಗಣಪು ಎಂಬ ಹುಡುಗನೊಬ್ಬ ಹೇಗೋ ಅಕ್ಷರ ಕಲಿಕೆಗೆ ಆಸೆಪಟ್ಟು ಅಕ್ಷರ ಬೀಜದ ಬೆಳಕಿನ ಬೆನ್ನು ಹತ್ತಿದ. ಸಮೀಪದ ಹೆಗ್ರೆ ಶಾಲೆಯಲ್ಲಿ ಅ, ಆ ಕಲಿಕೆಯ ಹಂತದಲ್ಲೆ ತಾಯಿ ತೀರಿಕೊಂಡಳು. ಶಾಲೆ ಕಲಿಯುವ ಹಂಬಲಕ್ಕೆ ಮತ್ತುಷ್ಟು ತೊಡಕುಗಳಾದವು. ಮತ್ತೆ ಕೆಲವು ದಿನಗಳ ಬಳಿಕ ಯಾರದೋ ಸಹಾಯದಿಂದ ಹನೇಹಳ್ಳಿಯ ಸರಕಾರಿ ಹಾಸ್ಟೆಲ್ಲು ಸೇರಿಕೊಂಡು ಓದಲಾರಂಭಿಸಿದ. ಆದರೆ ಮನೆಯಲ್ಲಿ ಯಾರಿಗೂ ಗಣಪು ಶಾಲೆಗೆ ಸೇರಿದ್ದು ಸರಿಬರಲಿಲ್ಲ. ಅಕ್ಕಂದಿರು ಅಣ್ಣಂದಿರೆಲ್ಲ ಸಾಣೆಕಟ್ಟೆಯ ಉಪ್ಪಿನಾಗರ ಕೆಲಸಕ್ಕೆ ಸೇರಿ ಅನ್ನದ ದಾರಿ ಕಂಡುಕೊಂಡಿದ್ದರು. ಗಣಪು ಅದೇ ಕೆಲಸಕ್ಕೆ ಅವರೆಲ್ಲರನ್ನು ಕೂಡಿಕೊಳ್ಳಬೇಕೆಂಬುದು ಅವರೆಲ್ಲ ಒತ್ತಾಸೆಯಾಗಿತ್ತು. ಒತ್ತಾಯದಿಂದ ಶಾಲೆ ಬಿಡಿಸಿ ಮನೆಗೆ ಕರೆತಂದರಾದರೂ ಗಣಪು ಆಗರದ ಕೆಲಸಕ್ಕೆ ಯಾವ ಬಗೆಯಿಂದಲೂ ಒಪ್ಪಿಕೊಳ್ಳಲಿಲ್ಲ. ನಾಡವರ ಮನೆಯ ದನಗಳನ್ನು ಮೇಯಿಸುವ ಕೆಲಸಕ್ಕೆ ನೇಮಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಲ್ಲಿ ಗಣಪು ಗೋವಳಿಗನಾದ. ‘ಹಣೆಯ ಬರಹವೊಂದು ಸರಿಯಾಗಿದ್ದರೆ ಅದನ್ನು ಯಾರೂ ಕೆಡಿಸಲಾರರು’ ಎಂಬ ಹಳೆಯ ನಂಬಿಕೆಯ ಮಾತೊಂದಿದೆ. ಗಣಪು ಮತ್ತೆ ಅಕ್ಷರದ ದಾರಿಯಲ್ಲಿ ನಡೆಯುವಂತೆ ಮಾಡಿದ ವಿಚಿತ್ರ ಘಟನೆಯೊಂದು ನಡೆದು ಹೋಯಿತು… ಅಗ್ಗರಗೋಣದ ಏಸುಮನೆ ನಾರಾಯಣ ನಾಯಕ ಎಂಬುವವರ ಮಗ ಯಶವಂತ ಹನೇಹಳ್ಳಿಯ ಶಾಲೆಯಲ್ಲಿ ಗಣಪುವಿನ ಸಹಪಾಠಿಯಾಗಿದ್ದವನು. ಅಗ್ರಗೋಣದಿಂದ ಹನೇಹಳ್ಳಿಗೆ ಗದ್ದೆ ಬಯಲಿನ ದಾರಿಯಲ್ಲಿ ಹೋಗುವಾಗ ನಡುವೆ ಗುಂದಿಹಿತ್ತಲಿನ ಬದಿಯಲ್ಲೇ ಕಾಲು ದಾರಿಯಿದೆ. ಯಶವಂತ ಅದೇ ದಾರಿಯಲ್ಲಿ ನಡೆಯುತ್ತಾ ಗಣಪುವಿನ ಜೊತೆಸೇರಿ ಮುಂದುವರಿಯುವುದು ರೂಢಿಯಾಗಿತ್ತು. ಇದೇ ಕಾರಣದಿಂದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆದು ಗಾಢ ಸ್ನೇಹ ಬೆಸೆದುಕೊಂಡಿತ್ತು. ಗಣಪು ಶಾಲೆ ಬಿಟ್ಟು ದನಕಾಯ ಹತ್ತಿದ ಬಳಿಕ ಯಶವಂತನಿಗೆ ಒಂಟಿತನ ಕಾಡಿತು. ಗುಂದಿಹಿತ್ತಲಿನಿಂದ ಮುಂದಿನ ಹನೇಹಳ್ಳಿಯ ದಾರಿ ಬೇಸರ ಹುಟ್ಟಿಸಿತು. ಒಂದು ದಿನ ಶಾಲೆಗೆ ಹೊರಟವನು ದಾರಿಯನ್ನು ಬದಲಿಸಿ ಹಳ್ಳದ ಈಚೆ ನಾಡುಮಾಸ್ಕೇರಿ ಭಾಗದ ಗದ್ದೆ ಬಯಲಲ್ಲಿ ಗಣಪು ದನ ಮೇಯಿಸುತ್ತಿರುವಲ್ಲಿಗೆ ಬಂದು, “ಗಣಪು ನೀನು ಶಾಲೆಗೆ ಬರದಿದ್ರೆ ನನಗೂ ಶಾಲೆ ಬೇಡವೇ ಅನಿಸ್ತಿದೆಯೋ” ಎಂದು ತನ್ನ ದುಃಖ ತೋಡಿಕೊಂಡ. ಅಂದು ಇಡಿಯ ದಿನ ಗಣಪುವಿನ ಜೊತೆ ಇದ್ದು ದನ ಮೇಯಿಸುವಲ್ಲಿ ಆಟವಾಡುತ್ತ ಸಂಜೆ ಶಾಲೆ ಬಿಡುವ ಸಮಯ ನೋಡಿ ಮನೆಗೆ ಮರಳಿದ. ಯಶವಂತ ಅಂದು ಶಾಲೆಗೆ ಹೋಗದಿರುವ ಸಂಗತಿ ಮನೆ ಮಂದಿಗೆನೂ ತಿಳಿಯಲಿಲ್ಲ. ಯಶವಂತ ಮರುದಿನವೂ ಗಣಪು ಇರುವಲ್ಲಿಗೆ ಬಂದ…. ಆಡುತ್ತ ದಿನ ಕಳೆದ. ಇದು ರೂಢಿಯಾಯಿತು. ಪಾಟೀಚೀಲದೊಂದಿಗೆ ಮನೆಯಿಂದ ಶಾಲೆಗೆ ಹೋಗುವ ಸಂಭಾವಿತನಂತೆ ಹೊರಡುವ ಯಶವಂತ ದಿನವೂ ಗಣಪು ಇದ್ದಲ್ಲಿಗೆ ಬಂದು ಸಮಯ ಕಳೆದು ಮರಳುತ್ತಿದ್ದ. ಅಂಥ ಒಂದು ದಿನ ಯಶವಂತ ಬಂದದ್ದೆ ಯಾವುದೋ ಆಟದಲ್ಲಿ ಇಬ್ಬರೂ ಮೈಮರೆತಿದ್ದರೆ ಗಣಪು ಬಯಲಿನಲ್ಲಿ ಬಿಟ್ಟ ದನಗಳೆಲ್ಲ ಜಮೀನ್ದಾರ್ ಗಾಂವಕರರೊಬ್ಬರ ಕಾರುಗದ್ದೆಗೆ ನುಗ್ಗಿ ಹಾಯಾಗಿ ಮೇಯ ತೊಡಗಿದವು. ಆಕಸ್ಮಿಕವಾಗಿ ಬಯಲಿಗೆ ಬಂದ ಗಾಂವಕರರು ಹಸನಾಗಿ ಮೊಳಕೆಯೊಡೆದಿದ್ದ ಕಾರುಗದ್ದೆ ದನಗಳ ಮೇವಿನ ಕಣವಾದುದನ್ನು ಕಂಡು ಕೆಂಡಾಮಂಡಲವಾದರು. ಗದ್ದೆ ಹಾಳೆಯ ಮೇಲಿನ ಲುಕ್ಕಿ ಗಿಡದ ಬರಲು ಕಿತ್ತುಕೊಂಡದ್ದೇ ಗಣಪುವನ್ನು ಹಿಡಿದು ಬಾರಿಸತೊಡಗಿದರು. ಕಾದ ಕಬ್ಬಿಣದ ಸಲಾಕೆಯಂತೆ ಲುಕ್ಕಿ ಬರಲಿನ ಬಾಸುಂಡೆಗಳೆದ್ದುದನ್ನು ಖಾತ್ರಿ ಪಡಿಸಿಕೊಂಡೇ ಗಾಂವಕರರು ಗಣಪುವಿನ ಕೈ ಬಿಟ್ಟಿದ್ದರು. ಯಶವಂತ ದಿಕ್ಕುಗೆಟ್ಟವನಂತೆ ಊರಿನತ್ತ ಓಡಿದ್ದ. ನೋವು ಅವಮಾನಗಳಿಂದ ಜರ್ಜರಿತನಾದ ಗಣಪು ಗದ್ದೆ ಹಾಳೆಯ ಮೇಲೆ ಕುಸಿದು ಕುಳಿತ. ತನ್ನ ಬೆನ್ನಿಗೆ ಬಾಸುಂಡೆಗಳು ಮೂಡುವಂತೆ ಬಾರಿಸಿದ ಗಾಂವಕರರಿಗಿಂತ ತನ್ನ ತಂದೆ ಅಕ್ಕಂದಿರು ಅಣ್ಣನ ಮೇಲೆ ಸಿಟ್ಟು ಉಕ್ಕಿ ಬಂತು. ತನ್ನನ್ನು ಶಾಲೆ ಬಿಡಿಸಿ ಕರೆತಂದು ದನ ಕಾಯಲು ಹಚ್ಚಿದ ಅವರೆಲ್ಲ ಅಪ್ಪಟ ವೈರಿಗಳಂತೆ ಭಾಸವಾದರು. ಮತ್ತೆ ಮನೆಗೆ ಹೋದರೂ ತನ್ನದೇ ತಪ್ಪೆಂದು ಆರೋಪಿಸಿ ಪೆಟ್ಟು ಕೊಡುತ್ತಾರೆ ಎಂಬ ಭಯವೂ ಆಯಿತು. ಮತ್ತೆಂದೂ ಮನೆಕಡೆ ಕಾಲಿಡಲೇಬಾರದು ಎಂದು ಗಣಪು ಆಕ್ಷಣದಲ್ಲಿ ನಿರ್ಧರಿಸಿದ. ತಾಯಿ ತೀರಿದ ಬಳಿಕ ಆಗಾಗ ಮನೆಗೆ ಬಂದು ಸಾಂತ್ವನ ಹೇಳಿ ತನ್ನನ್ನು ವಿಶೇಷವಾಗಿ ಮದ್ದು ಮಾಡುತ್ತಿದ್ದ ಸಾಣೆಕಟ್ಟೆಯ ದೊಡ್ಡಮ್ಮ ಹಮ್ಮಜ್ಜಿ’ ನೆನಪಾದಳು. ಗಣಪು ಅಳುತ್ತಲೇ ಸಾಣೆಕಟ್ಟೆಯತ್ತ ಹೆಜ್ಜೆ ಹಾಕಿದ. ರಾಮಕೃಷ್ಣ ಅವರ ತಂದೆ-ತಾಯಿ ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಮಡಿಲಲ್ಲಿ ತಲೆಯಿಟ್ಟು ಬಿಕ್ಕಳಿಸಿದ ಗಣಪು ತಾನು ಮತ್ತೆಂದೂ ಊರಿಗೆ ಹೋಗುವುದಿಲ್ಲವೆಂದೂ ತನ್ನನ್ನು ಮತ್ತೆ ಶಾಲೆಗೆ ಸೇರಿಸೆಂದೂ ಪರಿಪರಿಯಾಗಿ ಬೇಡಿಕೊಂಡ. ತಬ್ಬಲಿ ಕಂದನ ಆಕ್ರಂದನಕ್ಕೆ ಅಂತಃಕರಣ ಕಲುಕಿದಂತಾದ ಹಮ್ಮಜ್ಜಿ ಗಣಪುವನ್ನು ಗಟ್ಟಿಯಾಗಿ ಎದೆಗೆ ಅಪ್ಪಿಕೊಂಡು ತಾಯ್ತನದ ಪ್ರೀತಿಯೆರೆಯುತ್ತ ಬೆನ್ನ ಮೇಲಿನ ಬಾಸುಂಡೆಗಳಿಗೆ ಎಣ್ಣೆ ಲೇಪಿಸತೊಡಗಿದಳು. ************************************************************************ ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

You cannot copy content of this page

Scroll to Top