ಕಾವ್ಯ ಸಂಗಾತಿ
ಡಾ.ಭಾರತಿ ಅಶೋಕ್
“ನಾವೀಗ ಅನಂತ”


ಇನ್ನೂ
ಏನೆಂದರೆ ಏನನ್ನೂ ಧಕ್ಕಿಸಿಕೊಂಡಿರಲಿಲ್ಲ
ಆಗಲೇ ತೊರೆದು ನಡದೆ
ಈಗಷ್ಟೇ ಸಿಕ್ಕ ಹಾಗಿತ್ತು, ಇಲ್ಲ , ಸಿಗುತ್ತಿದ್ದೆ .
ಆಗಲೇ ದಾರಿ ಬದಲಿಸಿದೆ
ಮುಂದಿನ
ನಿಲ್ದಾಣದಲ್ಲಿ ಮತ್ತೆ ಸಿಗುತ್ತೇವೆಯೊ ಅದು
ಬೇಡದ ಸಂಗತಿ
ಇಲ್ಲಿ
ಈಗಲೇ ಸಿಕ್ಕವರು ಒಬ್ಬರಿಗೊಬ್ಬರು ಏನೂ
ದೊರಕಿಸಿಕೊಳ್ಳದೇ ಹೋದಮೇಲೆ
ಮುಂದೆ ಕೊಡುಕೊಳ್ಳುತ್ತೇವೆ ಎನ್ನುವ
ಹಂಬಲ ಭರವಸೆ ನನಗಿಲ್ಲ
ನಿರಿಕ್ಷೆಯೋ ..
ಒಮ್ಮೆ ನಿರೀಕ್ಷೆ ಸತ್ತರೆ ಸಿಗುವ ಸಿಗದಿರುವುದರ
ಗೊಡವೆಯೇ ಇರದು
ನೀವೆನ್ನಬಹುದು
ಇಲ್ಲಿ ಕೊಡುಕೊಳ್ಳುವುದಾದರು ಏನಿತ್ತು?
ಏನೆಲ್ಲವೂ…. ಬದುಕು ಬವಣೆ,ಕೊನೆಗು ಉಸಿರನ್ನೂ…..
ಅವನು
ಕೊಟ್ಟಿದ್ದರೆ ಬವಣೆಯನ್ನೂ ಉಸಿರಾಗಿಸಿಕೊಳ್ಳುವ
ಛಾತಿ ಇತ್ತು. ಅವನದನ್ನೂ ಕೊಡದೇ ತೆರಳಿದ
ನೀವನ್ನುವಿರು
ಅವನು ಎನೂ ಕೊಡದೇ ಹೋದುದೇ
ಬವಣೆಯಲ್ಲವೇ ಎಂದು!
ಅದು ಹಾಗಲ್ಲ ಎನೋ ಕೊಡದೇ ಇರುವುದೇ ಅಮೃತ ಪ್ರೀತಿ
ಅದೆ ಎಲ್ಲ, ಎಲ್ಲವೂ… ಅದನ್ನೇ ಬದುಕುತ್ತಿರುವೆ ನಾನೀಗ
ಅವನು ಏನನ್ನಾದರೂ ಕೊಟ್ಟಿದ್ದರೆ ಸೀಮಿತವಾಗುತ್ತಿದ್ದ
ಈಗ
ಏನನ್ನೂ ಕೊಡದ ಅವನು
ಪಡೆಯದ ನಾನು ಇಬ್ಬರೂ ಅನಂತ
ಡಾ.ಭಾರತಿ ಅಶೋಕ್.



