ಇತಿಹಾಸ ಸಂಗಾತಿ ಲೇಖಕಿ:ಗೊರೂರು ವಸಂತಿ ಮೂರ್ತಿ ಭಾರತ ಸ್ವಾತಂತ್ರ್ಯ ದಿನ ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ 1947 ನೆಯ ಇಸವಿ ಆಗಸ್ಟ್ 15 ನೆಯ ತಾರೀಕು ಭಾರತವನ್ನು ಒಂದು ಸ್ವತಂತ್ರದೇಶ ಎಂದು ಘೋಷಿಸಲಾಯಿತು. ಆದಿನ ಇಂಡಿಯಾ ಪಶ್ಚಾತ್ಯರ ದಬ್ಬಾಳಿಕೆಯಿಂದ ಮುಕ್ತವಾಯಿತು. ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಪ್ರಭಾವಿತರಾಗಿ ದೇಶದಾದ್ಯಂತ ಲಕ್ಷಾಂತರ ದೇಶಪ್ರೇಮಿಗಳು ಆ ದಿನಕ್ಕಾಗಿ ದುಡಿದಿದ್ದರು, ಸೆರೆವಾಸ ಅನುಭವಿಸಿದ್ದರು, ಅಪಾರ ತ್ಯಾಗಗಳನ್ನು ಮಾಡಿದ್ದರು. 1947ನೆಯ ಇಸವಿ ಆಗಸ್ಟ್ 15 ಕ್ಕೆ ಅವರುಗಳೆಲ್ಲ ಮಾಡಿದ ತ್ಯಾಗ ಮತ್ತು ಸಹಿಸಿದ ಕಷ್ಟಗಳಿಗೆ ಫಲ ಲಭಿಸಿತು. 1947ನೆಯ ಆಗಸ್ಟ್ 14, ಸರಿಯಾಗಿ ಮಧ್ಯರಾತ್ರಿ 12 ಘಂಟೆಯಲ್ಲಿ ಭಾರತ ಸ್ವತಂತ್ರ ದೇಶವೆಂದು (sovereign nation) ಘೋಷಿಸಲಾಯಿತು. ಮಧ್ಯರಾತ್ರಿಯಲ್ಲಿ All India Radio, ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ನ್ಯೂಸ್ ದೇಶದಾದ್ಯಂತ ಕೆಲವೇ ನಿಮಿಷಗಳಲ್ಲಿ ಹರಡಿತು. ಜನ ಖುಷಿಯಿಂದ ಹುಚ್ಚೆದ್ದು ಬೀದಿ ಬೀದಿಗಳಲ್ಲಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಮೆರವಣಿಗೆ ಹೊರಟು ತಮ್ಮ ಆತ್ಮ ಸಂತೋಷವನ್ನು ತೋರ್ಪಡಿಸಿದರು ಮತ್ತು ಹಂಚಿಕೊಂಡರು. ಭಾರತ್ ಮಾತಾಕಿ ಜೈ, ಮಹಾತ್ಮ ಗಾಂಧೀಕಿ ಜೈ, ಜವಾಹರಲಾಲ್ ನೆಹರೂಕಿ ಜೈ, ಸರ್ದಾರ್ ವಲ್ಲಬಾಯಿ ಪಟೇಲ್ ಕಿ ಜೈ, ಇತ್ಯಾದಿ ಜಯಘೋಷಗಳ ಕೂಗು ಮುಗಿಲನ್ನೇ ಮುಟ್ಟಿತ್ತು. ಹಳ್ಳಿಹಳ್ಳಿಗಳಲ್ಲಿಯೂ, ದೊಡ್ಡ ಮೈಸೂರು, ಬೆಂಗಳೂರು, ದೆಹಲಿ, ಕಲ್ಕತ್ತಾ ಮುಂತಾದ ನಗರಗಳಲ್ಲಿಯೂ ಈ ಜಯಘೋಷದ ಪ್ರತಿಧ್ವನಿ ವಾತಾವರಣವನ್ನು ಸಂಪೂರ್ಣವಾಗಿ ಮುಳುಗಿಸಿತ್ತು. ಇಂತಹ ಪವಿತ್ರ ಘಳಿಗೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸಮಸ್ತವನ್ನೂ ಮುಡುಪಿಟ್ಟು ಹೊಡೆದಾಡಿದ ಮಹಾತ್ಮಗಾಂಧಿ ಮತ್ತು ಇತರ ಮುಖಂಡರು ಎಲ್ಲಿದ್ದರು? ಅವರು ಖುಷಿಯಿಂದ ಬೀದಿಯಲ್ಲಿ ಮೆರವಣಿಗೆ ಹೊರಟಿರಲಿಲ್ಲ. ಮಿಠಾಯಿ ಹಂಚಿ ತಾವೂ ತಿನ್ನುತ್ತಿರಲಿಲ್ಲ. ಗಾಂಧೀಜಿ ಮತ್ತು ಅವರ ಕೆಲವು ನಿಕಟ ಅನುಯಾಯಿಗಳು (ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್) ಮುಂತಾದವರು ಕಲ್ಕತ್ತಾದಲ್ಲಿ ಇದ್ದರು. ಗಾಂಧೀಜಿ ಅವರು ದೇಶದಲ್ಲಿ ಶಾಂತಿ, ಅಹಿಂಸೆ ಮತ್ತು ಹಿಂದೂ ಮುಸ್ಲಿಂ ಸೌಹಾರ್ದಕ್ಕಾಗಿ ಉಪವಾಸದಲ್ಲಿ ತೊಡಗಿದ್ದರು. ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದರು!! ಭಾರತದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ಕೋಟ್ಯಾಂತರ ಪ್ರಜೆಗಳು, ಯುವಕರು, ಮಧ್ಯವಯಸ್ಕರು, ಮುದುಕರು, ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕೆಚ್ಚೆದೆಯಿಂದ ತಮ್ಮ ದೇಹವನ್ನು ಬ್ರಿಟಿಷರ ಲಾಠಿ,ಬಂದೂಕಗಳಿಗೆ ಸ್ವಂತ ಇಚ್ಛೆಯಿಂದ ಒಡ್ಡಿದರು. ಗಾಂಧೀ ಅವರ ತತ್ವದ ಪ್ರಕಾರ ವಾಪಸ್ಸು ಹೊಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿದೂ ಭಾರತದ ಸ್ವಾತಂತ್ರ್ಯದ ಭವ್ಯ ಕನಸಿನಲ್ಲಿ ಪ್ರಜೆಗಳು ತಮ್ಮ ಸಮಸ್ತವನ್ನೂ ತ್ಯಾಗಮಾಡಲು ಮುಂದಾದರು. ಈ ದೇಶಭಕ್ತರು ಕಾರಾಗ್ರಹವಾಸಕ್ಕೂ ಹೆದರಲಿಲ್ಲ; ಬ್ರಿಟಿಷರ ಗುಂಡಿಗೂ ಹೆದರಲಿಲ್ಲ; ಇದು ಗಾಂಧೀಜಿ ಅವರ ತಪಸ್ಸಿನ ಆತ್ಮಶಕ್ತಿ. ಗಾಂಧೀಜಿ ಅವರನ್ನು ಹಿಂಬಾಲಿಸಿ ಸತ್ಯಾಗ್ರಹಕ್ಕೆ ಧುಮುಕಿದರೆ ವಾಪಸ್ಸು ಜೀವಂತವಾಗಿ ಬರುವುದು ಸಂದೇಹ ಎಂದು ತಿಳಿದೂ ಕೂಡ ಕೋಟಿ ಕೋಟಿ ಜನಗಳು ಸತ್ಯಾಗ್ರಹದಲ್ಲಿ ಭಾಗವಹಿಸಲು ಮುಂದಾದರು. ಜಗತ್ತಿನ ಚರಿತ್ರೆಯಲ್ಲಿಯೇ ಇಂತಹ ಅದ್ಭುತ ಎಲ್ಲಿಯೂ ನಡೆದಿಲ್ಲ. ಹಾಗಾದರೆ ಎಲ್ಲ ಆರಾಮವಾಗಿ ಸುಭಿಕ್ಷವಾಗಿ, ಶಾಂತಿ ಸೌಹಾರ್ದ, ಪ್ರೀತಿಯಿಂದ ಮುಗಿಯಿತೆಂದು ಹೇಳುವಹಾಗಿಲ್ಲ. ದೇಶ ವಿಭಾಗ ಮಾಡುವ ಪ್ರಶ್ನೆ ಎದ್ದಿತ್ತು. ಪಂಜಾಬ್, ಬಂಗಾಳಾಗಳಲ್ಲಿ ಹಿಂದೂ ಮುಸ್ಲಿಂ ಕೋಮುವಾದ ಮತ್ತು ಜಾತೀಯ ಘರ್ಷಣೆಗಳಿಂದ ಹಿಂಸೆ ಕೊಲೆಗಳು ನಡೆದು ಗಾಂಧೀಜಿ ಅವರ ಮನಸ್ಸಿಗೆ ತೀವ್ರ ದುಃಖವುಂಟು ಮಾಡಿದ್ದವು. ಅವರು ಮತ್ತೆ ಉಪವಾಸ ಪ್ರಾರಭಿಸಿದ್ದರು. ಈ ಬಾರಿ ಬ್ರಿಟಿಶರನ್ನು ಎದುರಿಸುವುದಕ್ಕಲ್ಲ. ತಮ್ಮ ಪ್ರೀತಿಯ ಭಾರತೀಯರ ಮನಸ್ಸಿನ ಆತ್ಮ ಸಂಧಾನಕ್ಕಾಗಿ. ಹೀಗೆ ದೇಶದಲ್ಲಿ ಅಶಾಂತಿ ಉಂಟಾದಾಗ ಪ್ರತಿ ಮನೆಯಲ್ಲೂ ಅವರವರದೇ ಆದ ಪರಿಸ್ಥಿತಿ/ಪ್ರಶ್ನೆಗಳು ಹುಟ್ಟಿದುವು ವಿದ್ಯಾರ್ಥಿಗಳು ಅನೇಕರು ಶಾಲೆ ಕಾಲೇಜುಗಳನ್ನು ಬಿಟ್ಟು ಚಳುವಳಿ ಸೇರಿದ್ದರು. ಅವರ ವಿದ್ಯಾಭ್ಯಾಸ ಕಡೆಗಣಿತವಾಗಿ ಅವರು ಯಾವ ತರಗತಿಗೆ ಸೇರಿ ಮುಂದುವರಿಸಬೇಕು ಎಂಬುದನ್ನು ತೀರ್ಮಾನಿಸಬೇಕಾಗಿತ್ತು. ಇನ್ನು ಕೆಲವು ಯುವಕರು ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಜೀವವನ್ನೇ ಕಳೆದುಕೊಂಡು ಅವರ ಹೆಂಡತಿಯರು ಮತ್ತು ಮಕ್ಕಳ ಗತಿಯೇನು ಎಂದು ತಿಳಿಯದೇ ಆತಂಕದಲ್ಲಿದ್ದರು. ಮತ್ತು ಕೆಲವರು ತಾವು ಸತ್ಯಾಗ್ರಹದಲ್ಲೂ ಭಾಗವಹಿಸಲಿಲ್ಲ, ಕಾರಾಗ್ರಹಕ್ಕೂ ಹೋಗಲಿಲ್ಲ, ಮನೆಯಲ್ಲಿಯೇ ಕುಳಿತು “ನಾನೂ ಸತ್ಯಾಗ್ರಹಿ ಆಗಿದ್ದೇ; ಲಾಠಿ ಏಟು ತಿಂದಿದ್ದೇ” ಎಂದು ಸುಳ್ಳು ಹೇಳತೊಡಗಿದರು. ಮನೆಗೊಂದು ಕಥೆಯಾಯಿತು. ನಮ್ಮ ಗೊರೂರು ಮನೆಯಲ್ಲೂ ಒಂದು ಕಥೆ ಆಯಿತು. ಸ್ವಾತಂತ್ರ್ಯ ಬಂದಾಗ ನಮ್ಮ ತಂದೆ ಡಾ. ಗೊರೂರರು ಇನ್ನೂ ಸೆರೆಮನೆಯಲ್ಲಿಯೇ ಇದ್ದರು. “ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅವರಿಗೆ ಸ್ವಾತಂತ್ರ್ಯ ಬಂದಿರಲಿಲ್ಲ.” ಎಂಬ ಮಾತು ಬಳಕೆಯಲ್ಲಿದೆ. 1947 ಆಗುಸ್ಟ್ ತಿಂಗಳಿನಲ್ಲಿ ನನ್ನ ದೊಡ್ಡ ಅಣ್ಣ ರಾಮಚಂದ್ರ ತುಮಕೂರಿನಲ್ಲಿ ಇಂಟರ್ಮೀಡಿಯಟ್ ಓದುತ್ತಿದ್ದ. ಅವನಿಗೆ ಆಗ 17 ವಯಸ್ಸು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಗಬೇಕಾಗಿತ್ತು. ಅದಕ್ಕೆ ಎಲ್ಲರೂ ಕಾತುರರಾಗಿದ್ದರು. ಆದರೆ ಅದಕ್ಕೆ ಒಂದು ಅಡಚಣೆ ಬಂದಿತ್ತು. ಅದೇನೆಂದರೆ ಅನೇಕ ಮಹಾರಾಜರುಗಳು ತಮ್ಮ ಆಳ್ವಿಕೆಯನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಸೇರಲು ಇಷ್ಟಪಡಲಿಲ್ಲ. ಆಗ ಮತ್ತೊಂದು ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಗೆ “ಚಲೋ ಪ್ಯಾಲೆಸ್” ಎಂದು ಹೆಸರು. ಈ ಚಳುವಳಿ ರಾಜರುಗಳ ಮನಸ್ಸನ್ನು ಬದಲಾಯಿಸುವುದಕ್ಕಾಗಿ ಮಾಡಿದ ಚಳುವಳಿ. ಇದರಲ್ಲಿ ಡಾ ಗೊರೂರರ ಮಗ ರಾಮಚಂದ್ರ ಭಾಗವಹಿಸುತ್ತಿದ್ದ. 1947 ಸೆಪ್ಟೆಂಬರ್ 14 ನೆಯ ತಾರೀಕು ಪೊಲೀಸರು ತುಮಕೂರಿನಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲೀಬಾರ್ ಚಲಾಯಿಸಿದರು. ಆ ದಿನ ರಾಮಚಂದ್ರನೂ ಸೇರಿದಂತೆ ನಿರಾಯುಧರಾದ ಅಹಿಂಸಾ ಚಳುವಳಿಯಲ್ಲಿ ಶಾಂತರಾಗಿ ತೊಡಗಿದ್ದ ಮೂರು ಜನ ಕನ್ನಡಿಗರನ್ನು ಬ್ರಿಟಿಷ್ ಪೋಲೀಸ ರು ವಿನಾಕಾರಣ ಗುಂಡು ಹಾರಿಸಿ ಕೊಂದರು. ಇಂದಿಗೂ ಆ ಸ್ಥಳದಲ್ಲಿ ಈ ಮೂವರ ಹೆಸರನ್ನು ಹೊತ್ತ ಒಂದು ಶಾಸನ ಇದೆ. ಈ ಪುಣ್ಯ ಸ್ಥಳಕ್ಕೆ “ಸ್ವತಂತ್ರ ಚೌಕ” ಅಥವಾ “Freedom Circle” ಎಂದು ಹೆಸರಿಸಲಾಗಿದೆ. ಇದಾದಮೇಲೆ 1947 ಅಕ್ಟೋಬರ್ 14 ನೆಯ ತಾರೀಕು ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತಮ್ಮ ಒಪ್ಪಿಗೆಯನ್ನು ಘೋಷಿಸಿದರು. ಅದಾದಮೇಲೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಕರ್ನಾಟಕದ ಮೊಟ್ಟಮೊದಲನೆಯ ಮುಖ್ಯಮಂತ್ರಿ ಎಂಬ ಗೌರವ ಶ್ರೀ ಕೆ ಸಿ ರೆಡ್ಡಿ ಅವರಿಗೆ ಸಲ್ಲುತ್ತದೆ. ಭಾರತ ದೇಶದ ಸ್ವಾತಂತ್ರಕ್ಕಾಗಿ ಕಷ್ಟ ನಷ್ಟಗಳನ್ನು ಅನುಭವಿಸಿದ ಮತ್ತು ಪ್ರಾಣ ಕೊಟ್ಟ ಅನೇಕ ದೇಶಭಕ್ತರಿಗೆ ಅವರ ನಿಸ್ಸ್ವಾರ್ಥ ಸೇವೆಗೆ ಈ ದಿನ ನಮ್ಮ ನಮನಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಗೊರೂರು ವಸಂತಿ ಮೂರ್ತಿ