ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ, ಇತರೆ, ಜೀವನ

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್ 

ವಿಶೇಷ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್  “ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ಘಟನೆ ಒಂದು…ಅಪಘಾತದಲ್ಲಿ ತನ್ನ ಒಬ್ಬನೇ ಮಗ ನನ್ನು ಕಳೆದುಕೊಂಡ ಆ ಹೆಣ್ಣುಮಗಳು ಮಗನ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗದೆ ಮಾನಸಿಕ ಆಘಾತಕ್ಕೆ ಒಳಗಾದಳು.ಘಟನೆ ಎರಡು.. ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಬಹಳ ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದ… ಆತನ ಸಾವಿನ ಸಮಯದಲ್ಲಿ ಆತನ ಹೆಂಡತಿ ಮಕ್ಕಳು ಅತ್ಯಂತ ಸಂಯಮದಿಂದ ವರ್ತಿಸಿದರು.ಕಾರಣ ಇದು ಹೀಗೆ ಆಗುತ್ತದೆ ಎಂಬ ವಾಸ್ತವದ ಅರಿವು ಅವರಿಗೆ ಇತ್ತು.ಘಟನೆ ಮೂರು… ದೂರದ ಶಹರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಮಗ/ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲಾಗದೆ ಒದ್ದಾಡುವ, ಅತ್ತು ಕರೆಯುವ ಜನರನ್ನು ನಾವು ನೋಡುತ್ತೇವೆ.ಘಟನೆ ನಾಲ್ಕು…ತುಂಬು ಬದುಕನ್ನು ನಡೆಸಿದ ವ್ಯಕ್ತಿಯ ಸಾವಿನ ಸಮಯದಲ್ಲಿ ಅದನ್ನು ಒಂದು ಸರಳ ಘಟನೆ ಎಂಬಂತೆ ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ, ಅವರ ಬದುಕನ್ನು ಸಂಭ್ರಮಿಸುವ ಮೂಲಕ ಅವರ ಸಾವನ್ನು ಸಹಜವಾಗಿ ಸ್ವೀಕರಿಸುವುದನ್ನು ಕೂಡ ನಾವು ಕಾಣುತ್ತೇವೆ.ಮತ್ತೊಂದು ಘಟನೆಯಲ್ಲಿ ಖ್ಯಾತ ಚಲನಚಿತ್ರ ನಟರೊಬ್ಬರು ತೀರಿಕೊಂಡಾಗ ಅವರ ಪತ್ನಿ ಅತ್ಯಂತ ಸ್ಥಿತಪ್ರಜ್ಞತೆಯಿಂದ ಪತಿಯ ಪಾರ್ಥಿವ ಶರೀರದ ಹಣೆಗೆ ಮುತ್ತಿಕ್ಕಿದರು. ಮನೆಗೆ ಬಂದ ಸ್ನೇಹಿತ ವಲಯದವರೊಂದಿಗೆ ಸಹಜವಾಗಿ ಇದ್ದ ಅವರ ನಡೆ-ನುಡಿಯನ್ನು ಮಾಧ್ಯಮಗಳಲ್ಲಿ ನೋಡಿದ ಜನರು ಆಕೆಯ ಕುರಿತು ಇಲ್ಲ ಸಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು… ಅಂತೆಯೇ ಆಕೆಯ ಹಿನ್ನೆಲೆಯನ್ನು ಕೆಟ್ಟದಾಗಿ ಬಿಂಬಿಸಿದರು…. ಕೆಲವೊಮ್ಮೆ ನಿರ್ಲಿಪ್ತತೆಗೆ ತೆರಬೇಕಾದ ಬೆಲೆ ಇಷ್ಟು ದುಬಾರಿಯಾಗಿರುತ್ತದೆಯೇ? ಎಂದು ಕೂಡ ಅನ್ನಿಸಬಹುದು ಅಲ್ವೇ ?ಹೌದಲ್ವೇ ಸ್ನೇಹಿತರೇ, ಮೇಲಿನ ಎಲ್ಲ ಘಟನೆಗಳಲ್ಲಿ ಸಾವು ಎಂಬ ಸಹಜ ಪ್ರಕ್ರಿಯೆಯು ಅದೆಷ್ಟು ವಿಭಿನ್ನವಾಗಿ ಎದುರಿಸಲ್ಪಡುತ್ತದೆ ಎಂಬುದನ್ನು ನೋಡಿದಾಗ ವಿಚಿತ್ರ ಎನಿಸಿದರೂ ಶಾಶ್ವತ ಸತ್ಯದ ಅರಿವು ನಮಗೆ ಮೂಡುತ್ತದೆ. ಸಾವು ಎಂಬುದು ಒಬ್ಬ ವ್ಯಕ್ತಿಯನ್ನು ಭೌತಿಕವಾಗಿ ನಮ್ಮಿಂದ ಶಾಶ್ವತವಾಗಿ ದೂರ ಮಾಡುವ ಪ್ರಕ್ರಿಯೆ… ಉಳಿಯುವುದು ಕೇವಲ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಗಳ ನೆನಪುಗಳು ಮಾತ್ರ.ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಶಾಶ್ವತವಾಗಿ ಒಬ್ಬರನ್ನು ಕಳೆದುಕೊಂಡಾಗ ನೋವು, ಸಂಕಟ ಹಾಗೂ ಅಭದ್ರತೆಯಿಂದ ಬಳಲುತ್ತಾನೆಕಳೆದುಕೊಂಡ ತಕ್ಷಣ ಉಂಟಾಗುವ ದಿಗ್ಭ್ರಮೆ ಕೆಲವರಲ್ಲಿ ಇನ್ನಿಲ್ಲದ ದುಃಖವನ್ನು ಸೃಷ್ಟಿಸಿದರೆ, ಮತ್ತೆ ಕೆಲವರು ಹಲವಾರು ದಿನಗಳ ಕಾಲ ಮೌನಕ್ಕೆ ಜಾರುತ್ತಾರೆ. ಇನ್ನು ಕೆಲವರು ಒಬ್ಬಂಟಿಯಾಗಿ ಕುಳಿತು ಅವರನ್ನು ನೆನೆಯುತ್ತಾರೆ. ಮತ್ತೆ ಕೆಲವರು ತಮ್ಮ ಮಾತುಗಳಲ್ಲಿ ಅವರ ಕುರಿತು ನೆನೆಯುತ್ತಾ ಇತರರ ಮುಂದೆ ಹೇಳುತ್ತಾ ಹಗುರವಾಗುತ್ತಾರೆ.ಆದರೆ ನಿಜವಾಗಿಯೂ ಒಬ್ಬರನ್ನು ಕಳೆದುಕೊಂಡಾಗ ಆಗುವ ದುಃಖ, ನೋವು ಐದು ಹಂತಗಳಲ್ಲಿ ನಮ್ಮನ್ನು ಕಾಡುತ್ತದೆ ಎಂದರೆ ನೀವು ನಂಬಲೇಬೇಕು.ಮೊದಲ ಹಂತ ಬದುಕು ಅತ್ಯಂತ ಸರಳವಾಗಿ ನಡೆಯುತ್ತಿರುವ ಅಥವಾ ಹಾಗೆ ಭಾವಿಸಿರುವಾಗ ಕುಟುಂಬದ ಓರ್ವ ಸದಸ್ಯ ಒಮ್ಮಿಂದೊಮ್ಮೆಲೆ ತೀರಿ ಹೋದಾಗ ವ್ಯಕ್ತಿ ಆ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಇದು ಮೊದಲನೆಯ ಹಂತ. ಈ ಸಮಯದಲ್ಲಿ ಆತ ನಡೆದ ಘಟನೆಯನ್ನು ನಂಬಲು ಸಿದ್ದನಾಗುವುದಿಲ್ಲ…. ಸಂಪೂರ್ಣವಾಗಿ ನಿಶ್ಚಲನಾಗುವ ವ್ಯಕ್ತಿ ಕೆಲ ಗಳಿಗೆಗಳ ಮಟ್ಟಿಗಾದರೂ ತನ್ನ ಮಾನಸಿಕ ಅರಿವನ್ನು ಕಳೆದುಕೊಳ್ಳುತ್ತಾನೆ..ವೈಜ್ಞಾನಿಕವಾಗಿ ಆ ರೀತಿ ಆಗಲು ಕಾರಣ ಅವರು ಇನುಳ ನಮ್ಮ ಜೊತೆಗೆ ಇರುವುದಿಲ್ಲ, ಅವರ ಪಾತ್ರ ನಮ್ಮ ಬದುಕಿನಲ್ಲಿ ಮುಗಿಯಿತು ಎಂಬ ಬಹುದೊಡ್ಡ ಭಾರದ ಒತ್ತಡವನ್ನು ತಡೆದುಕೊಳ್ಳಲು ಅವರ ಮೆದುಳು ಸಿದ್ಧವಿರುವುದಿಲ್ಲ, ಕಾರಣ ಅದು ವ್ಯಕ್ತಿಯ ಮಾನಸಿಕ ಭಾರವನ್ನು ಕಡಿಮೆ ಮಾಡಲು ನಿರಾಕರಣೆ ಮಾಡುವ ಮೂಲಕ ಮೆದುಳನ್ನು ರಕ್ಷಿಸುವ ರಕ್ಷಣಾತ್ಮಕ ತಂತ್ರಕ್ಕೆ ಕೈ ಹಾಕುತ್ತದೆ.ಎಷ್ಟೋ ಬಾರಿ ಉಳಿದೆಲ್ಲ ವಿಷಯಗಳಲ್ಲಿ ಸರಿಯಾಗಿ ವರ್ತಿಸುವ ಜನರು ತಮಗೆ ಅತ್ಯಂತ ಆಪ್ತರಾದವರ ಸಾವಿನ ಕುರಿತು ಮಾತನಾಡುವಾಗ ಆ ವಿಷಯ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ಬೇರೆಡೆ ನಮ್ಮ ಚಿತ್ತವನ್ನು ಸೆಳೆಯುತ್ತಾರೆ.ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅದು ಕೆಲವೊಮ್ಮೆ ಸಿಟ್ಟು, ಕೋಪದ ರೂಪದಲ್ಲಿ ಅನಾವರಣವಾಗುತ್ತದೆ. ಹೀಗೆ ಕಳೆದುಕೊಳ್ಳಲು ಕಾರಣವಾದ ದೇವರನ್ನು ಹಳಿಯುವ ಅವರು ಆತ ಇದ್ದಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲವಾದ್ದರಿಂದ ದೇವರೇ ಇಲ್ಲ ಎಂದೂ,ಇದ್ದರೂ ಆತನಿಗೆ ಕಣ್ಣಿಲ್ಲ ಎಂದು ದೈವವನ್ನು ಹಳಿಯುತ್ತಾರೆ. ಮತ್ತೆ ಕೆಲವರು ತೀರಿ ಹೋದವರು ಅಪಘಾತ ಮತ್ತು ಅವಘಡ ಗಳಿಗೆ ಉಂಟಾಗಿ ತೀರಿಹೋಗಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಸಾಪಳಿಸುತ್ತಾರೆ. ಇಲ್ಲವೇ ತೀರಿ ಹೋದವರು ನೋವು ಸಂಕಟಗಳಿಗೆ ಈಡಾಗಿದ್ದರೆ ಅದಕ್ಕೆ ಕಾರಣರಾದವರನ್ನು ದೂಷಿಸುತ್ತಾರೆ. ಇಲ್ಲವೇ ತಮ್ಮ ಹಣೆಬರಹವನ್ನು ಅಳೆಯುತ್ತಾರೆ ಮತ್ತು ಕೆಲವರು ಸತ್ತುಹೋದವರನ್ನೇ ಉದ್ದೇಶಿಸಿ ನೀವು ಹೀಗೆ ಕೈ ಬಿಟ್ಟು ಹೋದರೆ ನಮ್ಮ ಗತಿ ಏನು ಎಂದು ಅತ್ತು ಕರೆದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅವರ ಕೋಪಕ್ಕೆ ಸತ್ತ ವ್ಯಕ್ತಿ ಆತನಿಗೆ ಸಂಬಂಧಿಸಿದವರು, ಘಟನೆ, ಸನ್ನಿವೇಶಗಳು ತುತ್ತಾಗುತ್ತವೆ.ಮೂರನೆಯ ಹಂತದಲ್ಲಿ ವ್ಯಕ್ತಿಯು ಚೌಕಾಶಿ ಮಾಡಲು ಆರಂಭಿಸುತ್ತಾರೆ… ಇಲ್ಲಿ ಯಾವುದೇ ವ್ಯಾಪಾರ ವ್ಯವಹಾರದ ಚೌಕಾಶಿ ಯನ್ನು ನಾವು ಯೋಚಿಸುವುದು ಬೇಡ…. ಅಯ್ಯೋ ಇನ್ನೂ ಒಳ್ಳೆಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕುತ್ತಿದ್ದರೋ ಏನೋ ಎಂಬಲ್ಲಿಂದ ಹಿಡಿದು ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಇದ್ದವು, ಆ ಸಾಧ್ಯತೆಗಳನ್ನು ನಾವು ತಳ್ಳಿ ಹಾಕಿದೆವು ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ. ಆತ್ಮಹತ್ಯೆಯಂತಹ ಸಾವುಗಳಲ್ಲಿ ಅವರು ಹಿಂದಿನ ದಿನ ತಮಗೆ ಕರೆ ಮಾಡಿದಾಗ ತಾವು ಸ್ವೀಕರಿಸದೆ ಇದ್ದ ಕಾರಣವನ್ನು ಮುಂದೊಡ್ಡಿ ತಮಗೆ ತಾವೇ ದೂಷಿಸಿಕೊಳ್ಳುತ್ತಾರೆ. ಒಂದೊಮ್ಮೆ ಹೀಗೆ ಮಾಡಿದ್ದರೆ !ಎಂಬ ಹಲವಾರು ರೇ ಗಳ ಭಾವ ಅವರನ್ನು ಕಾಡುತ್ತದೆ.ಮತ್ತೆ ಕೆಲವರು ನಾಲ್ಕನೆಯ ಹಂತವಾದ ಖಿನ್ನತೆಗೆ ಜಾರುತ್ತಾರೆ. ಖಿನ್ನತೆಯು ಅತ್ಯಂತ ಆಳವಾದ ನೋವಿನಿಂದ ಕೂಡಿದ್ದು ವಾಸ್ತವತೆಯ ಅರಿವು ಮೂಡಿಸುತ್ತದೆ ಎಂಬುದು ನಿಜವಾದರೂ ತಮ್ಮ ನೋವನ್ನು ಇತರರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ತೊಳಲಾಡುತ್ತಾರೆ. ನಂತರ ಸಮಯ ಸರಿದಂತೆ ನಿಧಾನವಾಗಿ ಅವರಿಲ್ಲದ ಬದುಕನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಬದುಕಿಗೆ ಒಗ್ಗಿಕೊಳ್ಳುತ್ತಾರೆ.ಕೊನೆಯ ಹಂತದಲ್ಲಿ ಪರಿಸ್ಥಿತಿಯನ್ನು ಅದು ಇರುವಂತೆಯೇ ಒಪ್ಪಿಕೊಳ್ಳುವುದು…. ಸಾಮಾನ್ಯವಾಗಿ ವಾಸ್ತವ ವಾದಿಗಳು, ಬದುಕಿನ ಆಳವನ್ನು ಅರಿತವರು, ಬುದ್ಧಿಜೀವಿಗಳು ತಮ್ಮವರ ಸಾವನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಾರೆ. ನಿರ್ಲಿಪ್ತತೆಯನ್ನು ಹೊಂದಿರುತ್ತಾರೆ. ಮತ್ತೆ ಕೆಲಬಾರಿ ಅವರ ಸ್ಥಿತಪ್ರಜ್ಞತೆಯನ್ನು ಕಂಡು ಲೌಕಿಕ ಜಗತ್ತಿನ ಜನರು ಅಯ್ಯೋ ಅವರಿಗೇನು! ಹಡೆದ ತಂದೆ ತಾಯಿ ಸತ್ತರೂ ಸಂಗಾತಿಯನ್ನು ಕಳೆದುಕೊಂಡರೂ ಹನಿ ಕಣ್ಣೀರು ಹಾಕಲಿಲ್ಲ ಎಂದು ದೂಷಿಸುತ್ತಾರೆ.ಮತ್ತೆ ಕೆಲ ಬಾರಿ ಹೀಗೆ ತೀರಿಕೊಂಡವರು ದೀರ್ಘಾಯುಷ್ಯವನ್ನು ಹೊಂದಿ ಬದುಕಿನ ಎಲ್ಲಾ ಮೊದಲುಗಳನ್ನು ಕಂಡಿದ್ದರೆ ಇನ್ನೂ ಕೆಲವರು ದೀರ್ಘಕಾಲದ ಅನಾರೋಗ್ಯ, ತೊಂದರೆಗಳಿಂದ ಹಾಸಿಗೆ ಹಿಡಿದು ಮಲಗಿರುತ್ತಾರೆ ಅಲ್ಲವೇ? ಅಲ್ಲಿಯೂ ಕೂಡ ಈ ರೀತಿಯ ನಿರ್ಲಿಪ್ತತೆ ಕಾಣುತ್ತದೆ. ಏಕೆಂದರೆ ಅವರಿಗೆ ಮುಂದೆ ಏನಾಗಬಹುದು ಎಂಬ ಪರಿಕಲ್ಪನೆಯನ್ನು ಸತ್ತ ವ್ಯಕ್ತಿಯ ಜೀವಿತದ ಕೊನೆಯ ದಿನಗಳು ತೋರಿಸಿರುತ್ತವೆ.ಮಾನಸಿಕವಾಗಿ ಅತ್ಯಂತ ಪಕ್ವವಾಗಿರುವವರು ಲೌಕಿಕ ಜಂಜಡಗಳಿಂದ ದೂರವಾಗಿರುವವರು ಕೂಡ ಸಾವುಗಳನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ.ನಾವೆಲ್ಲರೂ ನಮ್ಮ ಬದುಕಿನ ಹಂತದಲ್ಲಿ ಒಂದಲ್ಲ ಒಂದು ಆತ್ಮೀಯರ, ಪರಿಚಿತರ ಸಾವುಗಳನ್ನು ಎದುರಿಸಿಯೇ ಇರುತ್ತೇವೆ. ಸತ್ತವರ ಮನೆಯಿಂದ ಸ್ಮಶಾನದವರೆಗೆ ಭೌತಿಕ ಶರೀರದ ಅಂತಿಮ ಯಾತ್ರೆಗೆ ಹೋಗುವ ನಮ್ಮ ಬಾಯಲ್ಲಿ ಬರುವುದು ವೇದಾಂತದ ಮಾತುಗಳು. ಅಯ್ಯೋ ಬದುಕೇ ಇಷ್ಟು ? ಅವರವರು ಪಡೆದುಕೊಂಡು ಬಂದದ್ದು, ಹುಟ್ಟಿನ ಜೊತೆಗೆ ಸಾವನ್ನು ಕಟ್ಟಿಕೊಂಡೇ ಬಂದಿರುತ್ತೇವೆ, ಇಂದು ಅವರು ನಾಳೆ ಇನ್ನಾರೋ? ನಮ್ಮದು ಒಂದು ದಿನ ಆಪಾಳಿ ಬಂದೇ ಬರುತ್ತದೆ ಎಂದೆಲ್ಲ ಮಾತನಾಡುವ ಜನರು ಅಂತಿಮ ನಮನ ಸಲ್ಲಿಸಿ ಮನೆಗೆ ಬಂದು ತಲೆಯ ಮೇಲೆ ನೀರು ಹಾಕಿಕೊಂಡು ಹೊರಗೆ ಬರುವಷ್ಟರಲ್ಲಿ ಹೊಟ್ಟೆ ತನ್ನ ಇರವನ್ನು ತೋರಿಸುತ್ತದೆ.. ಇದೇ ಬದುಕು ಅಲ್ವೇ ಸ್ನೇಹಿತರೆ ?ಆದರೆ ನಮಗೆ ಸಾಧ್ಯವಾಗದ ಯಾವುದೋ ಒಂದು ನಿರ್ಲಿಪ್ತತೆಯನ್ನು, ಸ್ಥಿತಪ್ರಜ್ಞತೆಯನ್ನು ಇತರರು ಸಾಧಿಸಿದ್ದು ಸಾವಿನಲ್ಲೂ ಹಾಗೆ ಮುಂದುವರೆದಿದ್ದರೆ ಅವರನ್ನು ದೂಷಿಸಬೇಡಿ. ಅದು ಅವರು ಸಾವನ್ನು ಕಂಡುಕೊಂಡ ರೀತಿ.ಸಾವನ್ನು ಎದುರಿಸುವ ಈ ಹಂತಗಳನ್ನು ನೀವು ಅರಿತುಕೊಂಡಿದ್ದರೆ ಮತ್ತೊಬ್ಬರ ಭಾವನೆಗಳನ್ನು ಗುರುತಿಸಿ, ಗೌರವಿಸಿ ಸುಮ್ಮನಿರಲು ಸಹಕಾರಿಯಾಗುತ್ತದೆ.ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸಿಂಹ ನರಗುಂದ ಶ್ರೀ ಬಾಬಾಸಾಹೇಬ ಸಂಸ್ಥಾನ ಸಿಂಹ ಕ್ರಾಂತಿಕಾರಿ ಹೋರಾಟಗಾರ ಶ್ರೀ  ಬಾಬಾಸಾಹೇಬ ಭಾವೆ ನರಗುಂದ ಸಂಸ್ಥಾನದ ಪ್ರಭು (1842-58) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ಅಪ್ರತಿಮ  ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ. ನರಗುಂದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಅಪ್ರತಿಮ ವೀರ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ. ಇವರು ಬ್ರಿಟಿಷರ “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ತೀವ್ರವಾಗಿ ವಿರೋಧಿಸಿ, ದೇಶಪ್ರೇಮದ ಕಹಳೆ ಮೊಳಗಿಸಿದರು ಅಧಿಕಾರಕ್ಕೆ ಇವರ ತಂದೆ ದಾದಾಜಿ ತಾಯಿ ಯಮುನಾಬಾಯಿ. ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ.  ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ. ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. ಬಂಡಾಯ ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857).  ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರೂ ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ಜಿದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಕೂಟ ರಚನೆ:  ಬಾಬಾಸಾಹೇಬರು ಬ್ರಿಟಿಷರನ್ನು ಮಟ್ಟಹಾಕಲು ಮುಂಡರಗಿ ಭೀಮರಾವ್, ಸುರ್ಪುರ ವೆಂಕಟಪ್ಪ ನಾಯಕ, ರಾಮದುರ್ಗ, ಕೊಪ್ಪಳ ಮತ್ತು ನಿಪ್ಪಾಣಿಯ ಪ್ರಮುಖ ನಾಯಕರನ್ನು ಒಗ್ಗೂಡಿಸಿ ಬೃಹತ್ ಒಕ್ಕೂಟ ರಚಿಸಿಕೊಂಡರು. ಆರಂಭಿಕ ಗೆಲುವು ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ.  ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ.  ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ.ಹತ್ತಿರದ ಮಲ್ಲಿಕಾರ್ಜುನ ಗುಡ್ಡದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಮ್ಯಾನ್ಸನ್ ಮೇಲೆ ಬಾಬಾಸಾಹೇಬರ ಸೈನಿಕರು ಅನಿರೀಕ್ಷಿತ ದಾಳಿ ಮಾಡಿದರು.  ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ಅಗಸಿ ದ್ವಾರವೊಂದಕ್ಕೆ ನೇತುಹಾಕಲಾಯಿತು. ಮ್ಯಾನ್ಸನನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮತ್ತು ಮಾನ್ಯಾ ಬಾಪು ಮೊದಲಾದ ಬಾಬಾಸಾಹೇಬರ ಆಪ್ತರು ತಮ್ಮ ಕುಟಿಲುತನದಿಂದ  ದ್ರೋಹ ಎಸಗಿ  ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ  ತಿಳಿಸಿರುವ  ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ. ಸೋಲು ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು.  ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು.  ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ರಾಮದುರ್ಗ ತೊರೆದು ಹೋದ. ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದು ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರ ಬಾಬಾಸಾಹೇಬನನ್ನು ನೇಣುಹಾಕಲಾಯಿತು.  ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು.  ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು.  1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಹೀಗೊಂದು ಕ್ರಾಂತಿ ತನ್ನ ಜನರಿಂದಲೇ ನೆಲೆ ಕಚ್ಚಿತು.

Read Post »

You cannot copy content of this page

Scroll to Top