ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ

ಛಾಯಾಚಿತ್ರ ಸಂಗಾತಿ “ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು (ಪ್ರಪಂಚದಾದ್ಯಂತ ದಿ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ಯ ಈ ಲೇಖನ )  ***                    ಕಣ್ಣಿಗೆ ಕಾಣುವ ಒಂದು ಕ್ಷಣವನ್ನು ಕ್ಯಾಮೆರಾದ ಕಣ್ಣಿನ ಮೂಲಕ ಸೆರೆಹಿಡಿದು, ಅದನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವ ಛಾಯಾಗ್ರಾಹಕರ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗೌರವಿಸುವ ದಿನವಿದು. ಛಾಯಾಗ್ರಹಣವೆಂದರೆ ಕೇವಲ ಒಂದು ಚಿತ್ರ ತೆಗೆಯುವ ತಂತ್ರವಲ್ಲ; ಅದು ಕಾಲವನ್ನು ದಾಖಲಿಸುವ ಕಲೆ. ಒಂದು ಛಾಯಾಚಿತ್ರದಲ್ಲಿ ವ್ಯಕ್ತಿಯ ಭಾವನೆ, ಸಮಾಜದ ಸ್ಥಿತಿ, ಪ್ರಕೃತಿಯ ಸೌಂದರ್ಯ, ಇತಿಹಾಸದ ಹೆಜ್ಜೆಗುರುತು ಹಾಗೂ ಬದುಕಿನ ಅನೇಕ ನೆನಪುಗಳು ಅಡಗಿರುತ್ತವೆ. ಮಾತುಗಳಿಂದ ಹೇಳಲಾಗದ ಭಾವವನ್ನೂ ಒಂದು ಉತ್ತಮ ಛಾಯಾಚಿತ್ರ ಹೇಳಬಲ್ಲದು. ಒಬ್ಬ ಛಾಯಾಗ್ರಾಹಕ ಸಾಮಾನ್ಯ ದೃಶ್ಯದಲ್ಲಿಯೂ ಅಸಾಮಾನ್ಯ ಸೌಂದರ್ಯವನ್ನು ಕಂಡುಕೊಳ್ಳುತ್ತಾನೆ. ಬೆಳಕು–ನೆರಳು, ಬಣ್ಣ–ಭಾವ, ಕ್ಷಣ–ಕಾಲ ಇವೆಲ್ಲವನ್ನೂ ಸಮನ್ವಯಗೊಳಿಸಿ ಒಂದು ಚಿತ್ರಕ್ಕೆ ಜೀವ ತುಂಬುತ್ತಾನೆ. ಕೆಲವೊಮ್ಮೆ ಒಂದು ಛಾಯಾಚಿತ್ರವೇ ಸಾವಿರಾರು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲಿಯೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗಿವೆ. ಪ್ರತಿಯೊಬ್ಬರೂ ಛಾಯಾಚಿತ್ರ ತೆಗೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿತ್ರ ತೆಗೆಯುವುದು ಬೇರೆ, ಚಿತ್ರವನ್ನು ಸೃಷ್ಟಿಸುವುದು ಬೇರೆ. ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ, ಬೆಳಕಿನ ಅರಿವು, ಸಂಯೋಜನೆಯ ಪ್ರಜ್ಞೆ ಮತ್ತು ವಿಷಯದ ಮೇಲಿನ ಸೂಕ್ಷ್ಮ ಸಂವೇದನೆ ಒಬ್ಬ ಉತ್ತಮ ಛಾಯಾಗ್ರಾಹಕನನ್ನು ರೂಪಿಸುತ್ತವೆ. ರೂಪ ದರ್ಶಿ ಫೋಟೋ ಗ್ರಫಿ, ನಿಸರ್ಗ, ವ್ಯಾಪಾರಿ, ಪತ್ರಿಕೋದ್ಯಮ,  ಫಿಲಂ ಫೋಟೋ ಗ್ರಫಿ ಹೀಗೆ ಅನೇಕ ಬಗೆಯ ಫೋಟೋ ಗ್ರಾಫರ್ಗಳ ಜೊತೆಗೆ ಹವ್ಯಾಸಿ ಫೋಟೋ ಗ್ರಾಫರ್ ನಮ್ಮ ನಡುವೆ ಇದ್ದಾರೆ.ಸುದ್ದಿ ಛಾಯಾಗ್ರಾಹಕರು ಸಮಾಜದ ಘಟನೆಗಳನ್ನು ದಾಖಲಿಸುತ್ತಾರೆ. ಪ್ರಕೃತಿ ಛಾಯಾಗ್ರಾಹಕರು ಪರಿಸರದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ಅಪರೂಪದ ಜೀವಿಗಳ ಬದುಕನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಕಲಾತ್ಮಕ ಛಾಯಾಗ್ರಾಹಕರು ಕಲ್ಪನೆ ಮತ್ತು ಸೌಂದರ್ಯದ ಹೊಸ ಲೋಕವನ್ನು ನಿರ್ಮಿಸುತ್ತಾರೆ. ಹೀಗೆ ಛಾಯಾಗ್ರಹಣದ ಪ್ರತಿಯೊಂದು ಕ್ಷೇತ್ರವೂ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಒಂದು ಹಳೆಯ ಛಾಯಾಚಿತ್ರವನ್ನು ನೋಡಿದಾಗ ನಾವು ಕೇವಲ ಮುಖಗಳನ್ನು ನೋಡುವುದಿಲ್ಲ; ಅದರೊಂದಿಗೆ ಒಂದು ಕಾಲಘಟ್ಟವನ್ನೇ ಮರುಕಾಣುತ್ತೇವೆ. ಕುಟುಂಬದ ನೆನಪುಗಳಿಂದ ಹಿಡಿದು ಐತಿಹಾಸಿಕ ಘಟನೆಗಳವರೆಗೆ, ಛಾಯಾಚಿತ್ರಗಳು ನಮ್ಮ ಸ್ಮೃತಿಯ ಅಮೂಲ್ಯ ದಾಖಲೆಗಳಾಗಿವೆ. ಆದ್ದರಿಂದ ವಿಶ್ವ ಛಾಯಾಗ್ರಾಹಕರ ದಿನವು ಕೇವಲ ಛಾಯಾಗ್ರಾಹಕರಿಗೆ ಶುಭಾಶಯ ಕೋರುವ ದಿನವಲ್ಲ. ಕಾಲವನ್ನು ಸೆರೆಹಿಡಿದು ನೆನಪುಗಳಿಗೆ ಜೀವ ನೀಡುವ ಪ್ರತಿಯೊಬ್ಬ ಛಾಯಾಗ್ರಾಹಕನ ಕಲೆಯನ್ನು ಗೌರವಿಸುವ ದಿನ. ಅವರ ಕ್ಯಾಮೆರಾದ ಕಣ್ಣು ಸಮಾಜವನ್ನು ನೋಡುವ ಮತ್ತೊಂದು ಸೂಕ್ಷ್ಮ ಕಣ್ಣಾಗಿದೆ. ಕ್ಷಣ ಕಳೆದುಹೋಗಬಹುದು; ಕಾಲ ಮುಂದೆ ಸಾಗಬಹುದು; ಆದರೆ ಅದನ್ನು ಪ್ರೀತಿಯಿಂದ ಸೆರೆಹಿಡಿದ ಒಂದು ಛಾಯಾಚಿತ್ರ ಮಾತ್ರ ನೆನಪಾಗಿ ನಮ್ಮೊಂದಿಗೆ ಉಳಿಯುತ್ತದೆ.ಗದಗ ಜಿಲ್ಲೆಯ ಪತ್ರಿಕಾ ಫೋಟೋ ಗ್ರಾಫರ್ ಗಳಿಗೆ ಒಂದು ವಿಶೇಷ ಸ್ಥಾನ ಮಾನ ವಿದೆ ಜೊತೆಗೆ ಇತಿಹಾಸ ಕೂಡ.   ನಾಗಪ್ಪ ಮಹೇಂದ್ರ ಕರ್ ಅವರು 1922ರಲ್ಲಿ ಸ್ಟುಡಿಯೋ ಆರಂಭಸಿದರು. ಮಹಾತ್ಮಾ ಗಾಂಧೀಜಿ ಯವರು ಜಕ್ಕಲಿ ಗೆ ಆಗಮಿಸಿದ ಸಂದರ್ಭವನ್ನು ಸೆರೆ ಹಿಡಿದಿದ್ದು ಈ ನಾಗಪ್ಪ ಅವರೇ. ಅವರ 5ಜನ ಮಕ್ಕಳು ಕೂಡ ಫೋಟೋಗ್ರಫಿಯಲ್ಲಿ ತೊಡಗಿ ಕೊಂಡಿದ್ದಾರೆ. ಅವರಲ್ಲಿ ಭೀಮರಾವ, ದತ್ತಾತ್ರೇಯ, ಶ್ರೀಧರ್, ವಸಂತ, ಮಧುಕರ್ ಅವರು ತಮ್ಮ ಉಸಿರನ್ನು ಫೋಟೋ ಗ್ರಫಿ ಗಾಗಿ ಮೀಲಿಟ್ಟಿದ್ದಾರೆ.73 ವಸಂತ ದಲ್ಲಿರುವ ವಸಂತ ಮಹೇಂದ್ರಕರ ಅವರು ಗದಗ ಕಾಟನ್ ಸೇಲ್ಸ್ ಸೊಸೈಟಿ ಗೆ ಆಗಮಿಸಿದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರ ಫೋಟೋ ನಾನೇ ತೆಗಿದಿದ್ದು ಅಂತಾ ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ ಅವರ ಕಂಗಳಲ್ಲಿ ಮೂರನೇ ಕಣ್ಣು ಕೂಡ ಗತ ಕಾಲದ ಘಟನೆಯ ರೀಲು ಚಕ್ ಚಕ್ ಹೊರಳುತ್ತದೆ. ಇವರ ಮಕ್ಕಳು ಗುತ್ತಿಗೆ ಆಧಾರದ ಮೇಲೆ ವಿಶ್ವ ವಿದ್ಯಾಲಯದ ಫೋಟೋ ಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನವೋದಯ. ವಾರ್ತಾ ಇಲಾಖೆಯ ಫೋಟೋ ಗ್ರಾಫರ್ ಕೂಡ ಹೌದು ಇವರ ಸಹೋದರ ಪೊಲೀಸ್ ಇಲಾಖೆಯ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹೋದರರ ಮಗ ಚೋಟು  ಕಿತ್ತೂರು ಕರ್ನಾಟಕ ಪತ್ರಿಕೆಯ ಫೋಟೋ ಗ್ರಾಫರ್. ಪ್ರಜಾವಾಣಿ ಪತ್ರಿಕೆ ಫೋಟೋ ಗ್ರಾಫರ್ ಬನೇಶ್ ಕುಲಕರ್ಣಿ ಕೆಳೆದ 37 ವರುಷಗಳಿಂದ ಕ್ಯಾಮರಾ ಕೊರಳಿಗೆ ಹಾಕಿ ಕೊಂಡಿದ್ದಾರೆ. ಈ ಟಿವಿ, ಉದಯ ಟಿವಿ ಕ್ಯಾಮರಾ ಮ್ಯಾನ್. ಫೋಟೋ ಗ್ರಾಫರ್ ಆಗಿ ಸಧ್ಯ ಪ್ರಜಾವಾಣಿ ಪತ್ರಿಕೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯ ಕರ್ನಾಟಕ ಜಿಲ್ಲಾ ವರದಿ ಗಾರ ಸಲೀಂ ಬಳಬಟ್ಟಿ ಯವರದು ವಿಶೇಷ ಫೋಟೋ ಗ್ರಫಿ ಅವರ ತಂದೆಯವರಾದ ಬಂಡಾಯ ಸಾಹಿತಿ, ಕವಿ, ರಂಗಭೂಮಿ ಕಲಾವಿದ, ಫೋಟೋ ಗ್ರಾಫರ್ ಬಿ. ಬಾಬು ಅವರಿಂದ ಬಂದ ಬಳುವಳಿಯಾಗಿದೆ.  ಸಮೋಹ ಸಂವಹನ ಮತ್ತು ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸನ್ 2008ರಲ್ಲಿ ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ಯ ಫೋಟೋ ಜರ್ನಲಿಸ್ಟ ಆಗಿ ಸೇವೆ ಆರಂಭ ಮಾಡಿದರು. ಉದಯ ವಾಣಿ. ಕನ್ನಡ ಪ್ರಭಾ ಪತ್ರಿಕೆ ವರದಿ ಗಾರರಾಗಿ ವಿಶ್ವ ವಾಣಿ ಉಪ ಸಂಪಾದಕರಾಗಿ ಸೇವೆ ಕೂಡ ಸಲ್ಲಿಸಿದ್ದಾರೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಛಾಯಾ ಚಿತ್ರ ಪ್ರದರ್ಶನ ದಲ್ಲಿ ಭಾಗ ವಹಿಸಿ ಪ್ರಶಸ್ತಿ ಕೂಡ ಪಡೆದಿದ್ದಾರೆ.    ಕಳೆದ 34ವರ್ಷ ಗಳಿಂದ ಕೊರಳಿಗೆ ಕ್ಯಾಮರಾ ಹಾಕಿಕೊಂಡ  ಜಂಗಮ ಮುತ್ತು ಹಾಳಕೇರಿ. ಫೋಟೋ ಗ್ರಾಫರ್ ಚಿತ್ರ ಮಾತ್ರ ತೆಗೆಯುವದಲ್ಲ  ತನ್ನನ್ನು ತಾನೇ ಪ್ರಶ್ನಿಸಿ ಕೊಳ್ಳಬೇಕು, ಕ್ಯಾಮರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು . ಪ್ರಚಲಿತ ಸಮಸ್ಯೆ ಗಳ ಬಗ್ಗೆ, ಗ್ರಾಮೀಣ ಬದುಕಿನ ಜೀವನ ಬಗ್ಗೆ ಚಿಂತಿಸಬೇಕೆಂಬುದು ಅವರ ಆಶಯ. ಅಲೆಮಾರಿ ಕುರಿಗಾಯಿ ಗಳು ನೀರಿಗಾಗಿ ಅಲೆಯುವ ಮುತ್ತು ಅವರು ತೆಗೆದ ಫೋಟೋ 25 ಸಾವಿರ ರೂ ಬಹುಮಾನ ಪಡೆಯಿತು ಆ ಬಹುಮಾನ ದ ಮೊತ್ತ ಕುರಿಗಾಯಿಗಳಿಗೆ ಕಾಣಿಕೆ ಯಾಗಿ ಕೊಟ್ಟ ಸಹೃದಯಿ ಯಾಗಿದ್ದಾರೆ. ನಾಡಿನ ತುಂಬೆಲ್ಲ ಇವರ ಛಾಯಾಚಿತ್ರ ಪ್ರದರ್ಶನ ಗೊಂಡಿವೆ. ಮದುವೆ ಕ್ಷಣ ಗಳು ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುವರ್ಣ ನ್ಯೂಸ್ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಮುತ್ತು ಅವರದು. ಪ್ರತಿ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮ ದಲ್ಲಿ ಮುತ್ತು ಅವರ ಹಾಜರಾತಿ ಇದ್ದೆ ಇರುತ್ತದೆ. ಸಾರ್ವಜನಿಕ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮ ಗಳಲ್ಲಿ ರಾಮು ವಗ್ಗಿ ವಿಜಯ ಕರ್ನಾಟಕ ಪತ್ರಿಕೆ, ಲಕ್ಷ್ಮಣ ವಗ್ಗಿ ಉದಯ ವಾಣಿ ಪತ್ರಿಕೆ ಫೋಟೋ ಗಳಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಗದಗ ಉತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಪ್ರಶಸ್ತಿ ಪುರಸ್ಕಾರ ಗಳನ್ನು ಸಹೋದರರು ತಮ್ಮ ಮೂಡಿಗೇರಿಸಿ ಕೊಂಡಿದ್ದಾರೆ.ಸಂಜೆವಾಣಿ ಪತ್ರಿಕೆಯ ಬಸವ ರಾಜ ದಂಡಿನ ಹಿರಿಯ ಪತ್ರ ಕರ್ತ್ ರು ಫೋಟೋ ಗ್ರಾಫರ್ ಕೂಡ.ಸಮಾಜ ಮುಖಿ ಚಿಂತನೆಗಳ ಬರವಣಿಗೆ ಯಲ್ಲಿ ತೊಡಗಿ ಕೊಂಡವರು ನಾಡಿನ ಅನೇಕ ಪತ್ರಿಕೆಗಳಲ್ಲಿ ಸಂಘಟನೆಗಳಲ್ಲಿ ಗುರುತಿಸಿ ಕೊಂಡವರು. ಶಂಕರ್ ಗುರಿಕಾರ. ಉಮೇಶ್ ಸಜ್ಜನ ಮಾತ್ರವಲ್ಲ ಜಿಲ್ಲೆಯ ತುಂಬಾ ಅನೇಕ ಪತ್ರಿಕೆ ಛಾಯಾಚಿತ್ರ ಕಲಾವಿದರು ಇದ್ದಾರೆ.ai ಮೊಬೈಲ್ ಹಾವಳಿಗಳ ನಡುವೆ ತಮ್ಮ ತನ ಉಳಿಸಿಕೊಂಡು ಪತ್ರಿಕಾ ಛಾಯಾ ಚಿತ್ರಕಾರರಾಗಿ ಪರೋಕ್ಷ ಅಪರೋಕ್ಷ ವಾಗಿ ಪತ್ರಿಕೋದ್ಯಮದ ಘನತೆ ಗೌರವ ಎತ್ತಿ ಹಿಡಿಯುತ್ತಿದ್ದಾರೆ ಇದೊಂದು ಅಭಿಮಾನ ದ ಸಂಗತಿ ವಿಶ್ವ ಛಾಯಾಗ್ರಾಹಕರ ದಿನದಂದು ಕ್ಷಣಗಳಿಗೆ ಚಿರಂತನತೆ ನೀಡುವ ಎಲ್ಲ ಛಾಯಾಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳು.. ಎ. ಎಸ್. ಮಕಾನದಾರಕವಿ, ಪ್ರಕಾಶಕ, ಸಂಪಾದಕನಿರಂತರ ಪ್ರಕಾಶನ, ಗದಗ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ Read Post »

ಇತರೆ

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ

ವಿಮರ್ಶಾ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ”           ಇಂದು ಸಾಹಿತ್ಯ ಲೋಕದಲ್ಲಿ ‘ವಿಮರ್ಶೆ’ ಎಂಬ ಪದವು ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆದರೆ ವಿಪರ್ಯಾಸವೆಂದರೆ, ತನ್ನ ಮೂಲ ಅರ್ಥವನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದು! ಪುಸ್ತಕ ಪರಿಚಯ, ಕೃತಿಯ ಸಂಕ್ಷಿಪ್ತ ಸಾರಾಂಶ, ಲೇಖಕರ ಪರಿಚಯ, ಪ್ರಶಂಸಾತ್ಮಕ ಲೇಖನ, ಪ್ರಚಾರಾತ್ಮಕ ಬರಹ, ಮುನ್ನುಡಿ-ಬೆನ್ನುಡಿಯ ವಿವರಣೆ, ಬಿಡುಗಡೆ ಸಮಾರಂಭದ ಭಾಷಣ, ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ, ವೈಯಕ್ತಿಕ ಅಭಿಪ್ರಾಯ ….. ಇವೆಲ್ಲವನ್ನೂ ‘ವಿಮರ್ಶೆ’ಯೆಂದು ಕರೆಯುವ ಪ್ರವೃತ್ತಿ ವ್ಯಾಪಕವಾಗುತ್ತಿದೆ. ಈ ಗೊಂದಲವು ‘ವಿಮರ್ಶೆ’ಯ ಸ್ವರೂಪವನ್ನೇ ವಿಕೃತಗೊಳಿಸುತ್ತಿದೆ. ಪುಸ್ತಕವನ್ನು ಓದಿದ ನಂತರ ಅದನ್ನು ಪರಿಚಯಿಸುವುದು ಪುಸ್ತಕ ಪರಿಚಯ; ಅದರ ವಿಷಯವಸ್ತುವನ್ನು ವಿವರಿಸುವುದು ವಿವರಣೆ; ಕೃತಿಯ ಪ್ರಸಾರ ಮತ್ತು ಓದುಗರ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಬರೆಯುವುದು ಪ್ರಚಾರಾತ್ಮಕ ಬರಹ; ಓದುಗರ ವೈಯಕ್ತಿಕ ಅನುಭವವನ್ನು ದಾಖಲಿಸುವುದು ಓದುಗರ ಪ್ರತಿಕ್ರಿಯೆ. ಹಾಗಾಗಿ ಪುಸ್ತಕ ಪರಿಚಯವನ್ನು ಪರಿಚಯವೆಂದೇ, ಪ್ರಚಾರ ಬರಹವನ್ನು ಪ್ರಚಾರವೆಂದೇ, ಓದುಗರ ಪ್ರತಿಕ್ರಿಯೆಯನ್ನು ಪ್ರತಿಕ್ರಿಯೆಯೆಂದೇ ಗುರುತಿಸಬೇಕಾಗಿದೆ. ಇವೆಲ್ಲವೂ ತಮ್ಮದೇ ಆದ ಸಾಹಿತ್ಯಿಕ ಮಹತ್ವವನ್ನು ಹೊಂದಿವೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯೂ ತನ್ನದೇ ಆದ ಉದ್ದೇಶ ಮತ್ತು ಮಿತಿಯನ್ನು ಹೊಂದಿವೆ. ಅವುಗಳ ನಡುವಿನ ಭೇದವನ್ನು ಉಳಿಸಿಕೊಳ್ಳುವುದೇ ಸಾಹಿತ್ಯದ ಆರೋಗ್ಯವನ್ನು ಕಾಪಾಡುವ ಮೊದಲ ಹೆಜ್ಜೆಯಾಗಿದೆ.        ಇಂದು ಸಾಹಿತ್ಯ ಲೋಕದಲ್ಲಿ ಪುಸ್ತಕ ಪರಿಚಯ, ಓದುಗರ ಪ್ರತಿಕ್ರಿಯೆ, ಪ್ರಚಾರಾತ್ಮಕ ಬರಹ ಮತ್ತು ವಿಮರ್ಶೆ ಇವುಗಳ ನಡುವಿನ ಗಡಿರೇಖೆಗಳು ಮಸುಕಾಗುತ್ತಿರುವ ಸಂದರ್ಭದಲ್ಲಿ, ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಮರುನಿರ್ವಚಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯನ್ನೂ ಅದರ ಉದ್ದೇಶಕ್ಕೆ ಅನುಗುಣವಾಗಿ ಗುರುತಿಸಿದಾಗ ಮಾತ್ರ ವಿಮರ್ಶೆಯ ಗೌರವ ಮತ್ತು ಸಾಹಿತ್ಯದ ಆರೋಗ್ಯ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯ. ‘ವಿಮರ್ಶೆ’ಯ ಉದ್ದೇಶವು ಕೇವಲ ಮಾಹಿತಿ ನೀಡುವುದಾಗಲಿ ಅಥವಾ ಆಸಕ್ತಿ ಹುಟ್ಟಿಸುವುದಾಗಲಿ ಅಲ್ಲ; ಕೃತಿಯ ಅಂತರಂಗವನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವುದಾಗಿದೆ. ಅಂದರೆ, ಕೃತಿಯ ರೂಪ, ಆಶಯ, ಭಾಷೆ, ಶೈಲಿ, ಸಾಂಸ್ಕೃತಿಕ ಹಿನ್ನೆಲೆ, ಸೌಂದರ್ಯಪ್ರಜ್ಞೆ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಸಮಗ್ರವಾಗಿ ಪರಿಶೀಲಿಸುವ ಬೌದ್ಧಿಕ ಹಾಗೂ ಸೃಜನಾತ್ಮಕ ಕ್ರಿಯೆ. ಅದರ ಗುರಿ ಲೇಖಕರನ್ನು ಸಂತೋಷಪಡಿಸುವುದೂ ಅಲ್ಲ, ನೋಯಿಸುವುದೂ ಅಲ್ಲ; ಕೃತಿಯ ಸಾಹಿತ್ಯಸತ್ಯವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ದಾಖಲಿಸುವುದಾಗಿದೆ.        ಸಮಕಾಲೀನ ಸಾಹಿತ್ಯದಲ್ಲಿ ಇನ್ನೊಂದು ಪ್ರವೃತ್ತಿಯೂ ಕಂಡುಬರುತ್ತಿದೆ. ಕೆಲವರು ಪ್ರಶಂಸೆಯನ್ನೇ ‘ವಿಮರ್ಶೆ’ ಎಂದು ಭಾವಿಸುತ್ತಿರುವುದು; ಇನ್ನೂ ಕೆಲವರು ದೋಷಗಳನ್ನು ಹುಡುಕುವುದನ್ನೇ ‘ವಿಮರ್ಶೆ’ಯ ಮುಖ್ಯ ಗುರಿಯೆಂದು ಪರಿಗಣಿಸುತ್ತಿರುವುದು. ಈ ಎರಡೂ ಅತಿರೇಕಗಳು ‘ವಿಮರ್ಶೆ’ಯ ನಿಜವಾದ ಧರ್ಮಕ್ಕೆ ವಿರುದ್ಧವಾಗಿವೆ. ಹಾಗಂತ ಹೊಗಳಿಕೆಯಾಗಲಿ, ತೆಗಳಿಕೆಯಾಗಲಿ ವಿಮರ್ಶೆಯಾಗುವುದಿಲ್ಲ. ಅದು ಪ್ರಶಂಸೆ ಮತ್ತು ಟೀಕೆ ಎಂಬ ಎರಡೂ ಅಂಶಗಳನ್ನು ಮೀರಿದ, ನ್ಯಾಯಸಮ್ಮತ ವಿವೇಚನೆಯಾಗಿದೆ. ಕೃತಿಯಲ್ಲಿ ಗುಣಗಳಿದ್ದರೆ ಅವುಗಳನ್ನು ಸೂಕ್ತವಾಗಿ ಗುರುತಿಸುವ, ಮಿತಿಗಳಿದ್ದರೆ ಅವುಗಳನ್ನು ವಸ್ತುನಿಷ್ಠವಾಗಿ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಆದರೆ ಈ ಎರಡನ್ನೂ ಮಾಡುವಾಗ ವಿಮರ್ಶಕರ ವೈಯಕ್ತಿಕ ರುಚಿ, ಸ್ನೇಹ, ದ್ವೇಷ, ಪೂರ್ವಾಗ್ರಹ ಅಥವಾ ಸಿದ್ಧಾಂತಗಳ ಒತ್ತಡ ನಿರ್ಣಾಯಕವಾಗಬಾರದು. ನಿರ್ಣಾಯಕವಾಗಬೇಕಾದುದು ಕೃತಿಯ ಸ್ವರೂಪ ಮತ್ತು ಅದರ ಸಾಹಿತ್ಯಿಕ ಮೌಲ್ಯ ಮಾತ್ರ! ನಿಜವಾದ ವಿಮರ್ಶೆಯು ಕೃತಿಯ ಕಥೆಯನ್ನು ಪುನಃ ಹೇಳುವುದಿಲ್ಲ; ಕೃತಿಯೊಳಗೆ ಅಡಗಿರುವ ಅರ್ಥವನ್ನು ಅನಾವರಣಗೊಳಿಸುತ್ತದೆ. ಅದು ಲೇಖಕರನ್ನು ಕೇಂದ್ರವಾಗಿಸಿಕೊಳ್ಳುವುದಿಲ್ಲ; ಕೃತಿಯನ್ನು ಕೇಂದ್ರವಾಗಿಸಿಕೊಳ್ಳುತ್ತದೆ. ಅದು ಓದುಗರ ಮೇಲೆ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುವುದಿಲ್ಲ; ಅವರ ಗ್ರಹಿಕೆಯನ್ನು ವಿಸ್ತರಿಸುತ್ತದೆ. ವಿಮರ್ಶಕರು ನ್ಯಾಯಾಧೀಶರಂತೆ ಶಿಕ್ಷೆ ವಿಧಿಸುವವರೂ ಅಲ್ಲ; ಪ್ರಚಾರಕರಂತೆ ಹೊಗಳುವವರೂ ಅಲ್ಲ. ಅವರು ಕೃತಿಯ ಅಂತರಂಗವನ್ನು ಸೂಕ್ಷ್ಮವಾಗಿ ಅರಿತು, ಅದರ ಸಾಹಿತ್ಯಿಕ ಸತ್ಯವನ್ನು ಸಹೃದಯ ಓದುಗರ ಮುಂದಿಡುವ ಮಧ್ಯವರ್ತಿ!        ಭಾರತೀಯ ಕಾವ್ಯಮೀಮಾಂಸೆಯು ವಿಮರ್ಶಕರಲ್ಲಿ ಸಹೃದಯತೆಯನ್ನು ಅತ್ಯುನ್ನತ ಗುಣವೆಂದು ಪರಿಗಣಿಸುತ್ತದೆ. ಸಹೃದಯತೆ ಎಂದರೆ ಕೇವಲ ಮೆಚ್ಚುಗೆಯಲ್ಲ; ಕೃತಿಯ ಅಂತರಂಗದೊಂದಿಗೆ ತಾದಾತ್ಮ್ಯ ಸಾಧಿಸುವ ಸಾಮರ್ಥ್ಯ. ಪಾಶ್ಚಾತ್ಯ ವಿಮರ್ಶೆಯು ವಸ್ತುನಿಷ್ಠತೆ, ತಾರ್ಕಿಕತೆ ಮತ್ತು ಸಾಹಿತ್ಯಿಕ ಮಾನದಂಡಗಳನ್ನು ಒತ್ತಿ ಹೇಳುತ್ತದೆ. ಈ ಎರಡೂ ಪರಂಪರೆಗಳ ಸಾರ ಒಂದೇ, ಅದೆಂದರೆ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ಜ್ಞಾನ ಮತ್ತು ಸಂವೇದನೆಯ ಸಮನ್ವಯದ ವಿವೇಚನಾತ್ಮಕ ಕ್ರಿಯೆಯಾಗಿರಬೇಕು ಎಂಬುದು! ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಪುಸ್ತಕ ಪರಿಚಯವನ್ನು ವಿಮರ್ಶೆ ಎಂದು ಕರೆಯುವುದು, ಪ್ರಚಾರಾತ್ಮಕ ಬರಹವನ್ನು ವಿಮರ್ಶೆ ಎಂದು ಭಾವಿಸುವುದು ಅಥವಾ ವೈಯಕ್ತಿಕ ಅಭಿಪ್ರಾಯವನ್ನು ವಿಮರ್ಶೆಯೆಂದು ಪ್ರತಿಪಾದಿಸುವುದು ವಿಮರ್ಶೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತದೆ. ಇವು ಸಾಹಿತ್ಯ ಸಂವಹನದ ಅಗತ್ಯ ರೂಪಗಳಾದರೂ, ಅವುಗಳನ್ನು ವಿಮರ್ಶೆಯೊಂದಿಗೆ ಸಮೀಕರಿಸುವುದು ಶಾಸ್ತ್ರೀಯ ದೃಷ್ಟಿಯಿಂದ ಸಮಂಜಸವಲ್ಲ. ವಿಮರ್ಶೆಯು ವಿಶ್ಲೇಷಣೆ, ವ್ಯಾಖ್ಯಾನ, ಮೌಲ್ಯಮಾಪನ, ಸೌಂದರ್ಯಾಸ್ವಾದನೆ ಮತ್ತು ವಸ್ತುನಿಷ್ಠ ವಿವೇಚನೆಯ ಎಲ್ಲ ಆಯಾಮಗಳ ಸಮನ್ವಯದಿಂದ ರೂಪುಗೊಳ್ಳುವ ಸ್ವತಂತ್ರ ಸಾಹಿತ್ಯ ಪ್ರಕಾರವಾಗಿದೆ. ಹೀಗಾಗಿ ವಿಮರ್ಶೆಯು ಕೃತಿಯನ್ನು ಹೊಗಳುವ ಸಾಧನವಾಗಲಿ, ಅವಮಾನಿಸುವ ಆಯುಧವಾಗಲಿ, ಲೇಖಕರನ್ನು ಪ್ರತಿಷ್ಠಾಪಿಸುವ ವೇದಿಕೆಯಾಗಲಿ, ಅವರನ್ನು ನಿರಾಕರಿಸುವ ನ್ಯಾಯಪೀಠವಾಗಲಿ ಅಲ್ಲ. ಅದು ಕೃತಿಯ ಸಾಹಿತ್ಯಿಕ ಸತ್ಯವನ್ನು ಅನಾವರಣಗೊಳಿಸಿ, ಅದರ ಮೌಲ್ಯವನ್ನು ಸಮರ್ಥವಾಗಿ ನಿರ್ಣಯಿಸಿ, ಲೇಖಕ ಮತ್ತು ಸಹೃದಯ ಓದುಗರ ನಡುವೆ ಅರ್ಥಪೂರ್ಣ ಸಂವಾದವನ್ನು ನಿರ್ಮಿಸುವ ಸೃಜನಾತ್ಮಕ ಬೌದ್ಧಿಕ ಪ್ರಕ್ರಿಯೆಯಾಗಿದೆ.        ಸಾಹಿತ್ಯಕ್ಕೆ ಶ್ರೇಷ್ಠ ಸೃಜನಶೀಲರು ಎಷ್ಟು ಅಗತ್ಯವೋ, ಅಷ್ಟೇ ಪ್ರಾಮಾಣಿಕ ವಿಮರ್ಶಕರೂ ಅಗತ್ಯ. ಸೃಜನಶೀಲರು ಸಾಹಿತ್ಯವನ್ನು ನಿರ್ಮಿಸಿದರೆ, ವಿಮರ್ಶಕರು ಅದರ ಮೌಲ್ಯವನ್ನು ಗುರುತಿಸುತ್ತಾರೆ, ಸಾಹಿತ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಹಾಗೂ ಓದುಗರ ಅಭಿರುಚಿಯನ್ನು ಪರಿಷ್ಕರಿಸುತ್ತಾರೆ. ಸೃಷ್ಟಿ ಸಾಹಿತ್ಯವನ್ನು ವಿಸ್ತರಿಸಿದರೆ, ವಿಮರ್ಶೆ ಅದನ್ನು ಆಳಗೊಳಿಸುತ್ತದೆ. ಈ ನೆಲೆಯಲ್ಲಿ ವಿವೇಚಿಸಿದಾಗ ವಿಮರ್ಶೆಯು ಸಾಹಿತ್ಯದ ಪರಾವಲಂಬಿಯಲ್ಲ; ಅದು ಸಾಹಿತ್ಯದ ಸಹಸೃಷ್ಟಿ. ಒಂದು ಉತ್ತಮ ಕೃತಿ ಹೇಗೆ ಓದುಗರಲ್ಲಿ ಹೊಸ ಅನುಭವವನ್ನು ಮೂಡಿಸುತ್ತದೆಯೋ, ಅದೇ ರೀತಿ ಉತ್ತಮ ವಿಮರ್ಶೆಯು ಆ ಅನುಭವಕ್ಕೆ ಅರ್ಥ, ಆಳ ಮತ್ತು ದೃಷ್ಟಿಯನ್ನು ನೀಡುತ್ತದೆ ಎಂಬುದು ಮನವರಿಕೆಯಾಗುತ್ತದೆ. ನಿಜವಾದ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ತರ್ಕದಿಂದ ನಿಯಂತ್ರಿತವಾದ, ಸೌಂದರ್ಯಪ್ರಜ್ಞೆಯಿಂದ ಸಮೃದ್ಧವಾದ ಮತ್ತು ಸಾಹಿತ್ಯಸತ್ಯಕ್ಕೆ ಬದ್ಧವಾದ ಚಿಂತನಾ ಪ್ರಕ್ರಿಯೆಯಾಗಿದೆ. ಅದು ಲೇಖಕರ ಪರವೂ ಅಲ್ಲ, ವಿರುದ್ಧವೂ ಅಲ್ಲ; ಸಾಹಿತ್ಯದ ಪರವಾಗಿದೆ. ಆದ್ದರಿಂದ ವಿಮರ್ಶಕರ ಮೊದಲ ನಿಷ್ಠೆ ವ್ಯಕ್ತಿಯ ಮೇಲಲ್ಲ, ಕೃತಿಯ ಮೇಲೆ; ಕೃತಿಯ ಮೇಲಲ್ಲ, ಸಾಹಿತ್ಯಸತ್ಯದ ಮೇಲೆ ಇರಬೇಕು. ಈ ನಿಷ್ಠೆಯೇ ವಿಮರ್ಶೆಯನ್ನು ಸಾಮಾನ್ಯ ಅಭಿಪ್ರಾಯದಿಂದ ಪ್ರತ್ಯೇಕಿಸಿ, ಅದನ್ನು ಶಾಸ್ತ್ರೀಯ, ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯಾಗಿ ರೂಪಿಸುತ್ತದೆ. ವಿಮರ್ಶೆಯ ಈ ಮೂಲ ಸ್ವರೂಪವನ್ನು ಪುನಃ ಸ್ಥಾಪಿಸುವುದು ಇಂದಿನ ಸಾಹಿತ್ಯ ಲೋಕದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ವಿಮರ್ಶೆಯನ್ನು ಅದರ ನಿಜವಾದ ಅರ್ಥದಲ್ಲಿ ಮರುಸ್ಥಾಪಿಸುವುದು ಕೇವಲ ವಿಮರ್ಶಕರ ಹೊಣೆಗಾರಿಕೆಯಲ್ಲ; ಲೇಖಕರು, ಓದುಗರು, ಸಂಶೋಧಕರು ಮತ್ತು ಸಾಹಿತ್ಯ ಸಂಸ್ಥೆಗಳು ಸೇರಿದಂತೆ ಸಮಸ್ತ ಸಾಹಿತ್ಯ ಸಮುದಾಯದ ಜವಾಬ್ದಾರಿಯಾಗಿದೆ. ಏಕೆಂದರೆ ಉತ್ತಮ ಸಾಹಿತ್ಯವು ಶ್ರೇಷ್ಠ ಸೃಷ್ಟಿಯಿಂದ ಮಾತ್ರವಲ್ಲ, ಪ್ರಾಮಾಣಿಕ ಮತ್ತು ಪ್ರಬುದ್ಧ ವಿಮರ್ಶೆಯಿಂದಲೂ ರೂಪುಗೊಳ್ಳುತ್ತದೆ.        ಸಾಹಿತ್ಯವು ಸೃಷ್ಟಿಯ ಕಲೆ; ವಿಮರ್ಶೆಯು ಆ ಸೃಷ್ಟಿಯ ಸತ್ಯವನ್ನು ಅನಾವರಣಗೊಳಿಸುವ ಪುನರ್ ಕಲೆ. ಆದ್ದರಿಂದ ವಿಮರ್ಶೆಯು ಯಾವುದೇ ವ್ಯಕ್ತಿಯ ಪರವಾಗಲೀ ವಿರುದ್ಧವಾಗಲೀ ನಿಲ್ಲದೆ; ಸಾಹಿತ್ಯದ ಪರವಾಗಿ ಇರುವಂಥದ್ದು. ಈ ಉದ್ದೇಶವನ್ನು ಸಾಧಿಸಲು ಪ್ರತಿಯೊಬ್ಬ ವಿಮರ್ಶಕರು ಪಾಲಿಸಬೇಕಾದ ಹತ್ತು ಮೂಲ ತತ್ತ್ವಗಳನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು!√೦೧. ಕೃತಿಯೇ ಕೇಂದ್ರ; ಲೇಖಕರಲ್ಲ : ವಿಮರ್ಶೆಯ ವಿಷಯ ಲೇಖಕರ ವ್ಯಕ್ತಿತ್ವವಲ್ಲ, ಕೃತಿ. ಲೇಖಕರ ಖ್ಯಾತಿ, ಸ್ನೇಹ, ವೈಯಕ್ತಿಕ ಬದುಕು ಅಥವಾ ಸಾಮಾಜಿಕ ಸ್ಥಾನಮಾನವು ವಿಮರ್ಶೆಯ ಮಾನದಂಡವಾಗಬಾರದು. ಕೃತಿಯೇ ವಿಮರ್ಶೆಯ ಕೇಂದ್ರಬಿಂದುವಾಗಬೇಕು.√೦೨. ಸಂಪೂರ್ಣವಾಗಿ ಓದದೆ ಕೃತಿಯ ವಿಮರ್ಶೆ ಸಲ್ಲದು : ಅಪೂರ್ಣ ಓದು ಅಪೂರ್ಣ ತೀರ್ಪಿಗೆ ಕಾರಣವಾಗುತ್ತದೆ. ಕೃತಿಯ ಆಶಯ, ರಚನೆ, ಭಾಷೆ, ಸಂದರ್ಭ ಮತ್ತು ಅಂತರಾರ್ಥವನ್ನು ಗ್ರಹಿಸದೆ ನೀಡುವ ಯಾವುದೇ ಅಭಿಪ್ರಾಯ ವಿಮರ್ಶೆ ಎಂದು ಅನಿಸಿಕೊಳ್ಳುವುದಿಲ್ಲ.√೦೩. ಹೊಗಳಿಕೆ-ತೆಗಳಿಕೆ ಎರಡನ್ನೂ ಸಮಾನವಾಗಿ ಕಾಣಬೇಕು : ಕಾರಣವಿಲ್ಲದ ಪ್ರಶಂಸೆ ಹೇಗೆ ಅಪಾಯಕಾರಿಯೋ, ಕಾರಣವಿಲ್ಲದ ಟೀಕೆಯೂ ಅಷ್ಟೇ ಅಪಾಯಕಾರಿ. ಗುಣವನ್ನು ಗುಣವೆಂದೂ, ಮಿತಿಯನ್ನು ಮಿತಿಯೆಂದೂ ಹೇಳುವ ಪ್ರಾಮಾಣಿಕತೆಯೇ ವಿಮರ್ಶೆಯ ಧರ್ಮ.√೦೪. ವೈಯಕ್ತಿಕ ಅಭಿರುಚಿಯನ್ನು ಸಾಹಿತ್ಯಿಕ ಮಾನದಂಡವೆಂದು ಭಾವಿಸಲಾಗದು : ‘ನನಗೆ ಇಷ್ಟ’ ಅಥವಾ ‘ನನಗೆ ಇಷ್ಟವಿಲ್ಲ’ ಎಂಬುದು ಓದುಗರ ಪ್ರತಿಕ್ರಿಯೆಯಾಗಬಹುದು; ಆದರೆ ವಿಮರ್ಶೆಯ ನಿರ್ಣಯ ಸಾಹಿತ್ಯಿಕ ಆಧಾರಗಳ ಮೇಲೆ ನಿಲ್ಲಬೇಕು.√೦೫. ಮೊದಲು ಮನನ; ನಂತರ ನಿರ್ಣಯ : ಅರ್ಥೈಸದೆ ನಿರ್ಣಯಿಸುವುದು ಪೂರ್ವಾಗ್ರಹವಾಗುತ್ತದೆ. ಕೃತಿಯು ಏನು ಹೇಳುತ್ತದೆ ಎಂಬುದನ್ನು ಮೊದಲು ಗ್ರಹಿಸಬೇಕು; ಅದು ಎಷ್ಟರ ಮಟ್ಟಿಗೆ ಸಾಧಿಸಿದೆ ಎಂಬುದನ್ನು ನಂತರ ಪರಿಶೀಲಿಸಬೇಕು.√೦೬. ಕೃತಿಯ ಕಾಲ, ಸಮಾಜ ಮತ್ತು ಸಾಹಿತ್ಯಿಕ ಹಿನ್ನೆಲೆಯನ್ನು ಗೌರವಿಸಬೇಕು : ಯಾವುದೇ ಕೃತಿಯನ್ನು ಅದರ ಸಂದರ್ಭದಿಂದ ಬೇರ್ಪಡಿಸಿ ಅಳೆಯಲಾಗದು. ಪ್ರತಿಯೊಂದು ಕೃತಿಯೂ ತನ್ನ ಕಾಲದ, ಸಂಸ್ಕೃತಿಯ ಮತ್ತು ಸಾಹಿತ್ಯ ಪರಂಪರೆಯೊಂದಿಗೆ ಸಂವಾದ ನಡೆಸುತ್ತದೆ.√೦೭. ದೋಷಗಳನ್ನು ಮಾತ್ರವಲ್ಲ, ಗುಣಗಳನ್ನೂ ಗುರುತಿಸಬೇಕು : ವಿಮರ್ಶೆಯ ಗುರಿ ಕೇವಲ ತಪ್ಪುಗಳನ್ನು ಪತ್ತೆ ಹಚ್ಚುವುದಲ್ಲ; ಕೃತಿಯ ನಿಜವಾದ ಸಾಹಿತ್ಯಿಕ ಮೌಲ್ಯವನ್ನು ಕಂಡುಹಿಡಿಯುವುದು. ಮಿತಿಗಳನ್ನು ಸೂಚಿಸುವಷ್ಟೇ ಪ್ರಾಮಾಣಿಕವಾಗಿ ಸಾಧನೆಗಳನ್ನೂ ಗುರುತಿಸಬೇಕು.√೦೮. ಓದುಗರ ಗ್ರಹಿಕೆಯನ್ನು ವಿಸ್ತರಿಸಬೇಕು; ನಮ್ಮ ಅಭಿಪ್ರಾಯಗಳನ್ನು ಹೇರಬಾರದು : ಉತ್ತಮ ವಿಮರ್ಶೆಯು ಓದುಗರಿಗೆ ಯೋಚಿಸಲು ಕಲಿಸುತ್ತದೆ. ಅದು ಅಂತಿಮ ತೀರ್ಪನ್ನು ಹೇರದೆ, ಹೊಸ ಅರ್ಥಗಳ ಕಡೆಗೆ ದಾರಿ ತೋರಿಸುತ್ತದೆ.√೦೯. ಸತ್ಯಕ್ಕೆ ನಿಷ್ಠವಾಗಿರಬೇಕು; ವ್ಯಕ್ತಿಗೆ ಅಲ್ಲ : ಸ್ನೇಹ, ದ್ವೇಷ, ಗುಂಪುಗಾರಿಕೆ, ಸಿದ್ಧಾಂತ ಅಥವಾ ವೈಯಕ್ತಿಕ ಹಿತಾಸಕ್ತಿಗಳು ವಿಮರ್ಶೆಯನ್ನು ನಿಯಂತ್ರಿಸಬಾರದು. ವಿಮರ್ಶಕರ ಮೊದಲ ನಿಷ್ಠೆ ಸಾಹಿತ್ಯಸತ್ಯಕ್ಕೆ ಇರಬೇಕು.√೧೦. ವಿಮರ್ಶೆ ಸಾಹಿತ್ಯಸೇವೆ; ಅಧಿಕಾರವಲ್ಲ : ವಿಮರ್ಶಕರು ನ್ಯಾಯಾಧೀಶರಲ್ಲ; ಸಾಹಿತ್ಯದ ಸಹಯಾತ್ರಿ. ಹಾಗಾಗಿ ವಿಮರ್ಶಕರ ಕೆಲಸ ಲೇಖಕರನ್ನು ಭಯಪಡಿಸುವುದಲ್ಲ, ಸಾಹಿತ್ಯವನ್ನು ಸಮೃದ್ಧಗೊಳಿಸುವುದು. ಆದ್ದರಿಂದ ವಿನಯ, ಸಹೃದಯತೆ, ತಾರ್ಕಿಕತೆ ಮತ್ತು ವಸ್ತುನಿಷ್ಠತೆ ವಿಮರ್ಶಕರ ಶಾಶ್ವತ ಗುಣಗಳಾಗಿರಬೇಕು.      ಈ ದಶಸೂತ್ರಗಳು ವಿಮರ್ಶಕರನ್ನು ಬಂಧಿಸುವ ನಿಯಮಗಳಲ್ಲ; ಅವರನ್ನು ಪ್ರಬುದ್ಧರನ್ನಾಗಿ ಮಾಡುವ ಮಾರ್ಗಸೂಚಿಗಳಾಗಿವೆ. ಇವುಗಳನ್ನು ಅನುಸರಿಸಿದಾಗ ಮಾತ್ರ ವಿಮರ್ಶೆಯು ಪುಸ್ತಕ ಪರಿಚಯದಿಂದ ಭಿನ್ನವಾಗಲು; ಪ್ರಶಂಸೆ ಮತ್ತು ಟೀಕೆಯ ಮಿತಿಗಳನ್ನು ಮೀರಲು ಹಾಗೂ ವೈಯಕ್ತಿಕ ಅಭಿಪ್ರಾಯದಿಂದ ಸಾಹಿತ್ಯಿಕ ಮೌಲ್ಯಮಾಪನದ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಆಗ ವಿಮರ್ಶೆಯು ಕೇವಲ ಒಂದು ಬರವಣಿಗೆಯ ವಿಧಾನವಾಗಿ ಉಳಿಯುವುದಿಲ್ಲ; ಬದಲಿಗೆ ಸಾಹಿತ್ಯದ ಗುಣಮಟ್ಟವನ್ನು ಕಾಪಾಡುವ ಸಾಂಸ್ಕೃತಿಕ ಹೊಣೆಗಾರಿಕೆಯಾಗುತ್ತದೆ. ಅಂದಾಗ ಮಾತ್ರ ‘ಸೃಷ್ಟಿಯು ಸಾಹಿತ್ಯಕ್ಕೆ ಜೀವ ನೀಡಿದರೆ, ವಿಮರ್ಶೆಯು ಆ ಜೀವಕ್ಕೆ ದಿಕ್ಕು ನೀಡುತ್ತದೆ’ ಎಂಬ ಸೂಕ್ತಿ ನಿಜವೆನಿಸುತ್ತದೆ. ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ Read Post »

You cannot copy content of this page

Scroll to Top