ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಇಂದೇಕೋ ಮನಸ್ಸು ಭಾರವಾಗಿದೆ…  
ಮೋಡ ಕವಿದ ಆಗಸದ ಹಾಗೆ.  
ಕಾರಣ ಕೇಳಿದರೆ ಉತ್ತರವಿಲ್ಲ,  
ಆದ್ರೂ ಎದೆಯೊಳಗೆ ಎದ್ದಿಹ
ಬಿರುಗಾಳಿಯ ಸಾವಿರ ಸುಳಿಯೊಳಗೆ ಸಿಲುಕಿದೆ…

ನಗುತ್ತಾ ಎಲ್ಲರೊಂದಿಗೂ ಮಾತಾಡ್ತೀನಿ,  
ಆದ್ರೆ ಒಳಗೆ ಎಲ್ಲೋ ಒಂದು ಮೂಲೆಯಲ್ಲಿ  
ಸಣ್ಣ ಮಗುವಿನ ಹಾಗೆ ಗೋಳಾಡ್ತಿದೆ ಮನಸ್ಸು.  
ಯಾರಿಗೂ ಹೇಳಿಕೊಳ್ಳದ ಸಂಕಟ ನೋವುಗಳು  
ಗುಂಡಿಗೆ ಗೂಡಲ್ಲಿ ಕಲ್ಲಿನಂತೆ ಕೂತಿವೆ.

ಸಮಯ ನಿಂತಂತಿದೆ,  
ಗಡಿಯಾರದ ಮುಳ್ಳುಗಳು
ಕೂಡ ನಿಧಾನಗತಿಯಲ್ಲಿ ಚಲಿಸುತ್ತಿವೆ
ಪ್ರಪಂಚ ಜೋರಾಗಿ ಓಡ್ತಿದೆ,  
ನಾನು ಮಾತ್ರ ನನ್ನ ಯೋಚನೆಗಳಲ್ಲೇ ಸಿಕ್ಕಿಹಾಕಿಕೊಂಡಿದ್ದೀನೇನೋ..

ಕಣ್ಣಲ್ಲಿ ನೀರಿದ್ದರೆ ಹರಿಯಲಿ.  
ಮಳೆ ಬಿದ್ದ ಬಳಿಕ ಭೂಮಿಯ
ಮಣ್ಣು ಪರಿಮಳ ಬೀರುತ್ತೋ,  
ಅತ್ತಮೇಲೆ ಮನಸ್ಸೂ ಹಾಗೆ
ಹಗುರಾಗುತ್ತದೆಂಬ ಭರವಸೆ.

ಈ ಕತ್ತಲು ಶಾಶ್ವತವಲ್ಲ.  
ದೀಪ ಆರಿಸಿದ ಕೂಡಲೇ ಬೆಳಕು ಬರುತ್ತೆ.  
ನೋವು ಇರುವ ಜಾಗದಲ್ಲೇ
ಗುಣವಾಗೋ ಶಕ್ತಿನೂ ಇರುತ್ತೆ.
ಆದರೂ ಇಂದೇಕೋ ಈ ಮನಸ್ಸು
ಭಾರವಾಗಿದೆ….


About The Author

Leave a Reply

You cannot copy content of this page

Scroll to Top