ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬಡವನಿಗೊಂದು ಮನೆ ಎಂದರು,
ಆಶ್ರಯ ಎಂದು ಹೆಸರಿಟ್ಟರು,
ಹೆಸರಿನಲ್ಲಿ ಮಾತ್ರ ಬಡವನ ಪಾಲು—
ಸೈಟ್  ಬಂದಾಗ ,ಸಿರಿವಂತನ ಕೈಗೆ ಕೊಟ್ಟರು.

ಅರ್ಜಿಯ ಮೇಲೆ ಅರ್ಜಿ ಹಾಕಿದ,
ಬಡವ ಕಚೇರಿ ಸುತ್ತಿದ,
ಸಾರ್, ನನ್ನ ಸೈಟ್ ಎಲ್ಲಿ ? ಎಂದಾಗ
ಫೈಲು ಮಾತ್ರ ಮೇಜಿನ ಕೆಳಗೆ ನಕ್ಕಿತು !

ಸರ್ಕಾರಿ ಜಾಗವಂತೆ—
ಬಡವನಿಗಾಗಿ ಮೀಸಲಂತೆ,
ರಾತ್ರಿ ಕತ್ತಲಲ್ಲಿ ಗಡಿ ಹಾಕಿ
ಬೆಳಗಾಗುವಷ್ಟರಲ್ಲಿ ಖಾಸಗಿ ಆಸ್ತಿಯಂತೆ !

ಸೈಟ್ ನಮ್ಮದು, ದಾಖಲೆ ನಿಮ್ಮದು,
ಕಾಗದ ನಮ್ಮದು, ಕಾನೂನು ನಿಮ್ಮದು.
ಹೀಗೆ ಹೇಳಿದ ಕುಳಗಳು
ಬ್ಯಾಂಕಿನ ಬಾಗಿಲಿಗೆ ಹೋದರು !

ಸರ್ಕಾರಿ ಆಸ್ತಿಗೆ ಸಾಲವಂತೆ,
ಸಾಲಕ್ಕೆ ಆಸ್ತಿಯೇ ಭದ್ರತೆಯಂತೆ,
ಬಡವನ ಕನಸಿನ ಜಾಗವನ್ನೇ
ಬ್ಯಾಂಕಿನ ಲಾಕರ್‌ಗೆ ಅಡವಿಟ್ಟರಂತೆ !

ಕಚೇರಿಯ ಗೋಡೆ ಕೇಳಿತು—
ಇದು ಹೇಗೆ ಸಾಧ್ಯ?
ಅಧಿಕಾರಿಯ ಕುರ್ಚಿ ಉತ್ತರಿಸಿತು—
ನನಗೇನೂ ಗೊತ್ತಿಲ್ಲ !

ಫೈಲು ಓಡಲಿಲ್ಲ,
ಸಹಿ ನಿಲ್ಲಲಿಲ್ಲ,
ನ್ಯಾಯ ಮಾತ್ರ ಬಾಗಿಲಲ್ಲೇ  ನಿಂತು
 ಸರದಿ ಯಾವಾಗ ? ಎಂದು ಕಾಯುತ್ತಿದೆ !

ಬಡವ ಕೇಳಿದ—
ನನ್ನ ಆಶ್ರಯ ಎಲ್ಲಿ ?
ಅಧಿಕಾರಿ ಹೇಳಿದ—
ತನಿಖೆ ನಡೆಯುತ್ತಿದೆ !!

ವರ್ಷಗಳು ಉರುಳಿದವು,
ಫೈಲುಗಳು ದಪ್ಪವಾದವು,
ಬಡವನ ತಲೆಮೇಲೆ ಮಾತ್ರ
ಆಕಾಶವೇ ಸೂರು ಆಯಿತು !

ಆಶ್ರಯ ಯೋಜನೆ ಹೆಸರಿನಲ್ಲಿ
ಆಶ್ರಯವಿಲ್ಲದವನಿಗೆ ಆಸೆ,
ಆಸೆಯ ಹಿಂದೆ ಸೈಟ್,
ಸೈಟ್ ಹಿಂದೆ ಸಿರಿವಂತನ ನೋಟು !

ಬಡವನ ಬೆವರಿನಿಂದ
ಸರ್ಕಾರದ ಯೋಜನೆ ಹುಟ್ಟಿತು,
ಸಿರಿವಂತನ ಬುದ್ಧಿಯಿಂದ
ಅದೇ ಯೋಜನೆ ಆಸ್ತಿಯಾಯಿತು !

ಕಾನೂನು ಪುಸ್ತಕದಲ್ಲಿ ಬಡವನ ಹಕ್ಕು,
ಕಚೇರಿ ಪುಸ್ತಕದಲ್ಲಿ ಅಧಿಕಾರಿಯ ಮೌನ,
ದಾಖಲೆ ಪುಸ್ತಕದಲ್ಲಿ ಸಿರಿವಂತನ ಹೆಸರು—
ಇದೇನಾ ಆಶ್ರಯದ ಹೊಸ ವ್ಯಾಖ್ಯಾನ ?

ಒಂದು ದಿನ ಬಡವ ಕೇಳುವನು—
ನನ್ನ ಸೈಟ್ ಎಲ್ಲಿ ಹೋಯಿತು ?
ಆಗ ಕಡತದೊಳಗಿಂದ ಧ್ವನಿ ಪಿಸುಗುಟ್ಟಿತು ;

ನಿನ್ನ ಹೆಸರೇ ಇತ್ತು…
ಆದರೆ ಸೈಟ್  ಮಾತ್ರ ಇನ್ನೊಬ್ಬರದಾಯಿತು !

ಆಶ್ರಯ ಯಾರಿಗೆ ?
ಬಡವನಿಗೋ…..
ಅಥವಾ ಬಡವನ ಹೆಸರಿನಲ್ಲಿ
ಸೈಟ್ ಕಳ್ಳರಿಗೋ ?
ಪ್ರಶ್ನೆ ಉಳಿದಿದೆ—
ಉತ್ತರ ಮಾತ್ರ ಕಾಣುತ್ತಿಲ್ಲ.
ಅಧಿಕಾರಿಗಳ ಮೌನದ ನಡುವೆ
ಬಡವನ ಆಶ್ರಯವೂ
ಆಸೆಯಂತೆಯೇ ದೂರವಾಗುತ್ತಿದೆ !


About The Author

Leave a Reply

You cannot copy content of this page

Scroll to Top