ನಾಗರಾಜ ಹರಪನಹಳ್ಳಿ

ನಾಗರಾಜಹರಪನಹಳ್ಳಿ

ಕಾವ್ಯಗುಚ್ಛ

Smoke, Background, Artwork, Swirl

ಬೆರಳ ತುದಿಗೆ ಕರುಣೆ ಪಿಸುಗುಡುವತನಕ

photos of atrocities on low caste के लिए इमेज परिणाम


ಕಟ್ಟೆಯ ಮೇಲೆ ಕುಳಿತದ್ದಕ್ಕ
ಕೊಲೆಯಾಯಿತು
ಉಗ್ಗಿದ ಖಾರದ ಪುಡಿಗೆ
ಇರಿದ ಚೂರಿಗೆ
ಕಣ್ಣು ಕರುಣೆ ಇರಲಿಲ್ಲ

ಅಂತಿಂತಹ ಕಟ್ಟೆಯಲ್ಲ
ಮಲ್ಲಿಕಾರ್ಜುನನ ಕಟ್ಟೆ
ಇರಿದವ ಅಹಂಕಾರಿ
ಇರಿಸಿಕೊಂಡದ್ದು ಸಮಾನತೆ
ಒಂದು ಸವರ್ಣಧೀರ್ಘ ಸಂದಿ
ಮತ್ತೊಂದು ಲೋಪಸಂದಿ

ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು

ಸ್ವತಃ ದೊರೆ ದೀರ್ಘಾಸನದಲ್ಲಿ
ಶವಾಸನದಲ್ಲಿರುವಾಗ
ಅಹಂಕಾರ ಊರ ಸುತ್ತಿದರೆ
ಅಚ್ಚರಿಯೇನಿಲ್ಲ

ಇಲ್ಲಿ ಎಲ್ಲರೂ ಬಾಯಿಗೆ ಬೀಗ
ಜಡಿದು ಕೊಂಡಿರುವಾಗ
ನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆ
ಮತ್ತೊಮ್ಮೆ ಕರುಣೆ
ಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕ
ನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕ
ಇರಿದ ಚೂರಿಯ ತುದಿಗೆ
ಹಿಡಿದ ಬೆರಳ ತುದಿಗೆ ಕರುಣೆ
ಪಿಸುಗುಡುವತನಕ
………..

ನಾವಿಬ್ಬರೂ ಮರವಾಗಿದ್ದೇವೆ

Twin banyan trees in the south square, alun-alun selatan yogyakarta. Yogyakarta, Indonesia - april 2, 2019 stock images

ನಾವಿಬ್ಬರೂ ಮರವಾಗಿದ್ದೇವೆ

ಇದು ನನ್ನ ಮೊದಲ ಹಾಗೂ
ಕೊನೆಯ ಪದ್ಯವೆಂದು ಬರೆಯುವೆ
ಪ್ರತಿ ಅಕ್ಷರಗಳಲ್ಲಿ ಪ್ರೀತಿಯ ಬೆರಸಿ

ನಡೆವ ದಾರಿಯಲ್ಲಿ ನಿನ್ನಲ್ಲಿ ನಾ ತುಂಬಿ ಕೊಂಡರೆ ಅದಕ್ಕೆ ಏನೆನ್ನಲಿ?
ಅಥವಾ ನನ್ನ ಜೀವನದ ಪ್ರತಿ ಉಸಿರಾಟದಿ ನೀ ತುಂಬಿ ಕೊಂಡಿರುವುದ ಹೇಗೆ ಮನದಟ್ಟು ಮಾಡಲಿ?

ಹೀಗೆ ಹೇಳಬಹುದು:
ನಿನಗೆ ಕಾಣುವ ಪ್ರತಿ ಗಿಡ ಮರ ಹೂ ಬಿಟ್ಟು ನಗುತ್ತಿದ್ದರೆ ಅದು ನಮ್ಮಿಬ್ಬಿರ ಪ್ರೇಮ

ಅತೀ ಕಟ್ಟಕಡೆಯ ಮನುಷ್ಯನ ಮನೆ ಅಂಗಳದಿ ಮಗು ನಗು ಅರಳಿಸಿ ಅದರ ಕಣ್ಣಲ್ಲಿ ಕಾಂತಿ ಕಂಡರೆ ಅದು ನಮ್ಮಿಬ್ಬರ ಪ್ರೇಮ

ವಾಸ್ತವವಾಗಿ ನಾವಿಬ್ಬರೂ ವಾಸಿಸುವುದು ಅಂತ್ಯಜರಲ್ಲಿ

ಭ್ರಮಾತ್ಮಕ ಅಕ್ಷರ ಲೋಕದ‌
ಖೂಳರ ನಾವಿಬ್ಬರೂ ಸೇರಿ
ಒಂದನಿ ರಕ್ತ ಹರಿಸದೆ
ಒಂದಕ್ಷರ ಬರೆಯದೇ
ಮದ್ದು ಗುಂಡು ಸಿಡಿಸದೆ
ಗೊತ್ತೇ ಆಗದಂತೆ ಕೊಲೆ ಮಾಡಿ ಬಂದೆವು

ಈಗ ನಾವಿಬ್ಬರೂ ಅಕ್ಕಪಕ್ಕದ ಮರವಾಗಿದ್ದೇವೆ
ನಮ್ಮ ಟೊಂಗೆಗಳಲ್ಲಿ ಹದವಾಗಿ ಬೆಳೆದ ಹಸಿರು ಹೂ ಕಾಯಿ ಕಣ್ಣಲ್ಲಿ ಹಕ್ಕಿಗಳು ಸಂಸಾರ ನಡೆಸಿವೆ

ಹು, ಈಗ ; ಕೊನೆಯ ಮಾತು
ಹಠಾತ್ ನಾ ಇಲ್ಲವಾದರೆ
ಇದ್ದಲ್ಲೇ ಕಣ್ಣೀರಾಗು
………

ಗೌರಿ ಮಾತಾಡಲಿಲ್ಲ

Idol of Goddess Gauri | Idol of Goddess Gauri at Kumbharwada… | Flickr

ಗೌರಿಯನು ತಂದರು
ಮನೆಯ ಪಡಸಾಲೆಯಲ್ಲಿ ಅದ್ಭುತವಾಗಿ ಅಲಂಕರಿಸಿದರು
ಗೌರಿ ಮಾತಾಡಲಿಲ್ಲ
ಆಕೆ ಮೌನವಾಗಿದ್ದಳು
ಆಕೆಗೆ ಮಾತಾಡದಂತೆ ಕಲಿಸಿಲಾಗಿತ್ತು

ಆಕೆ ಜೀವಂತ ಮಣ್ಣಿನಮೂರ್ತಿಯಾಗಿದ್ದಳು
ಅದನ್ನೇ ಸಂಸ್ಕೃತಿ ಅಂದರು
ಭವ್ಯ ಪರಂಪರೆ ಎಂದರು

ಗೌರಿಯ ಭಕ್ತಿ ಭಾವದಿಂದ
ಪೂಜಿಸಿದರು
ದೀಪ ಹಚ್ಚಿದರು
ಸಿಹಿ ನೈವೇದ್ಯ ಮಾಡಿದರು
ನಮಸ್ಕರಿಸಿದರು
ಪಟಾಕಿ ಹೊಡೆದರು
ಭಜನೆ ಮಾಡಿದರು
ಗೌರಿ ಮಾತಾಡಲಿಲ್ಲ
ಮೌನವಾಗಿದ್ದಳು
ಅದನ್ನು ಸಂಸ್ಕೃತಿ ಅಂದರು

ಸಿಹಿ ಹಂಚಿ ತಿಂದರು
ಕೊನೆಗೆ ಅದೇ ಗೌರಿಯ ನೀರಲ್ಲಿ ಮುಳುಗಿಸಿದರು
ಗೌರಿ ಆಗಲೂ ಮಾತಾಡಲಿಲ್ಲ
ಅದನ್ನೇ ಸಂಸ್ಕೃತಿ ಎಂದರು

ಮಣ್ಣು ಮಣ್ಣ‌ ಸೇರಿತ್ತು
…********************************

4 thoughts on “ನಾಗರಾಜ ಹರಪನಹಳ್ಳಿ

  1. ಮೊದಲ ಕವನ ಬಹಳ ಚೆನ್ನಾಗಿದೆ. ಬರಿಯ ಶಬ್ದಾಡಂಬರಗಳಿಲ್ಲದ, ತಣ್ಣನೆಯ ಕ್ರೋಧದ ಭುಗಿಲು ಸುಡಲು ಶಕ್ತವಾಗಿದೆ.
    ಗೌರಿ ಮೌನ… ನಿಮ್ಮ ಹೊಸ ಚಿಂತನೆಯ ಅಭಿವ್ಯಕ್ತಿ ಸೊಗಸಾಗಿದೆ.
    ಗೌರಿ ಹೆಣ್ಣು ಮಕ್ಕಳಿಗೆ ಪೂರ್ಣ ಸ್ವಾತಂತ್ರ್ಯವನ್ನೂ, ಗೌರವವನ್ನೂ ಕೊಡುವ ಹಬ್ಬ. ಬಹುಶಃ ಇದೊಂದೇ ಪೂರ್ಣ ಮಹಿಳಾ ತೊಡಗುವಿಕೆಯ ಹಬ್ಬ ಕೂಡ.
    ಅಭಿನಂದನೆಗಳು.

  2. ಹೌದು. ಗೌರಿಗೆ ಮೌನವಾಗಿರುವಯದನ್ನು ಕಲಿಸಿ ಸಂಸ್ಕೃತಿ ಎನ್ನಲಾಗಿದೆ

Leave a Reply

Back To Top