ಕಾವ್ಯ ಸಂಗಾತಿ
ಡಾ. ಶ್ರೀಶೈಲ ಮಾದಣ್ಣವರ
ಗಜಲ್


ಎತ್ತ ನೋಡಿದತ್ತ ಕತ್ತಲು ಬೀಗುತಿದೆ ಸಾಕಿ
ಸೂರ್ಯೋದಯ ಯಾವಾಗ
ಮತಿ ಭ್ರಮಣೆಗೆ ಚಿತ್ತ ವಿಕಾರವಾಗುತಿದೆ ಸಾಕಿ
ನವೋದಯ ಯಾವಾಗ
ಕದ್ದೂ ಕಾಣದಿರುವ ಮುದ್ದು ಮುಖಗಳನು
ಒದ್ದು ಹೊರ ತರುತಿಹರು
ಸಜ್ಜನರ ಮುಖವಾಡ ಬಯಲಾಗುತಿದೆ ಸಾಕಿ,
ಶುದ್ಧೋದಯ ಯಾವಾಗ
ಅತಂತ್ರ ಜೀವನದಲಿ ಯಾಂತ್ರಿಕ ಬದುಕಿನತ್ತ
ನಡೆದಿದೆ ಜಗತ್ತು
ಮನದಿ ಬೆಳದಿಂಗಳು ಮರೆಯಾಗುತಿದೆ ಸಾಕಿ
ಚಂದ್ರೋದಯ ಯಾವಾಗ
ದುಶ್ಚಟಕೆ ದಾಸರಾಗಿ ದುರ್ಜನರ ಸಂಗಕೆ
ಸಾಯುತಿವೆ ಎಳೆ ಮನಗಳು
ಹೂವಿನಂತ ಬದುಕು ಹಾಳಾಗುತಿದೆ ಸಾಕಿ
ಶುಭೋದಯ ಯಾವಾಗ
ಕನಸು ಹುಗಿದರು, ಮನಸು ಹುಗಿದರು, ಈಗ
ಮನುಜತೆಯನೂ ಹುಗಿದರು
ಪ್ರೀತಿ ಸಿಗದೆ ಹೃದಯ ಘಾಸಿಯಾಗುತಿದೆ ಸಾಕಿ
ಭಾಗ್ಯೋದಯ ಯಾವಾಗ
ಡಾ. ಶ್ರೀಶೈಲ ಮಾದಣ್ಣವರ




ಧನ್ಯವಾದಗಳು ಸರ್ ❤️