ಕಾವ್ಯ ಸಂಗಾತಿ
ಸರಸ್ವತಿ ಕೆ ನಾಗರಾಜ್
“ಖಾಲಿ ಹಾಳೆಯ ಮೇಲೊಂದು ಕನಸು”


ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,
ಪೆನ್ನಿಗಿಂತ ಮೊದಲು ಮೌನವೇ ಹರಿದುಬರುತ್ತದೆ.
ಹಾಳೆಯ ಮೇಲಿನ ಖಾಲಿ ಜಾಗದಲ್ಲಿ,
ಮನದ ಮಾತುಗಳು ನೆರಳಾಗಿ ನಿಂತುಕೊಳ್ಳುತ್ತವೆ.
ಹೇಳದೆ ಉಳಿದ ಕನಸುಗಳು,
ಹಾಳೆಯ ಮೇಲೆ ಉಸಿರಾಡುತ್ತವೆ.
ಕಳೆದುಹೋದ ಕ್ಷಣಗಳ ನೆರಳು,
ಮತ್ತೆ ನೆನಪಾಗಿ ಕುಳಿತುಕೊಳ್ಳುತ್ತದೆ.
ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,
ನಾನು ಕವಿತೆ ಬರೆಯುವುದಿಲ್ಲ…
ನನ್ನೊಳಗಿನ ಒಡೆದ ಮೌನವೇ,
ತನ್ನ ಕಥೆಯನ್ನು ತಾನೇ ಹೇಳುತ್ತದೆ.
ನಾ ಬರೆಯಲು ಕುಳಿತಾಗ,
ಹಾಳೆಯೇ ಕನ್ನಡಿ ಆಗಿ ನಿಲ್ಲುತ್ತದೆ.
ನನ್ನೊಳಗಿನ ನಿಜ ಮುಖವನ್ನು,
ನಿಶ್ಶಬ್ದವಾಗಿ ತೋರಿಸಿಬಿಡುತ್ತದೆ.
ಬರೆಯುತ್ತಾ ಬರೆಯುತ್ತಾ ಕೊನೆಯಲ್ಲಿ,
ನಾನು ಕವಿತೆ ಮುಗಿಸುವುದಿಲ್ಲ…
ನನ್ನೊಳಗಿನ ಬದುಕೇ ಮತ್ತೆ,
ಹೊಸ ನಾನಾಗಿ ಆರಂಭವಾಗುತ್ತದೆ.
ಬರೆಯುವ ಪ್ರತಿಯೊಂದು ಸಾಲಿನೊಳಗೆ,
ಮತ್ತೆ ಹುಟ್ಟುವ ನಾನೇ ಅಡಗಿದ್ದೇನೆ.
ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ.
ಸರಸ್ವತಿ ಕೆ ನಾಗರಾಜ್.



