ಧಾರಾವಾಹಿಸಂಗಾತಿ-26 ಅರಜುನ ಉವಾಚ ಡಾ.ವಿಶ್ವನಾಥ ಎನ್ ನೇರಳಕಟ್ಟೆ ಹಯಯಾಗಕ್ಕೆ ಹಾರೈಸುವವನಾದ ಹಂಸಧ್ವಜ ಗರುಡನ ಬಳಿಬಂದ ನಂದಿ ಸುರಥ ಶಿರವನ್ನು ತನಗೆ ಕೊಡುವಂತೆ ವಿನಮ್ರತೆಯಿಂದ ಕೇಳಿದ. ಗರುಡ ಒಪ್ಪಲಿಲ್ಲ. ತನ್ನ ಒಡೆಯನೆನಿಸಿಕೊಂಡ ಆ ಶ್ರೀಹರಿ ವಹಿಸಿದ ಕಾರ್ಯವನ್ನು ಇದುವರೆಗೂ ನಡೆಸದೇ ಇದ್ದವನಲ್ಲ. ಈಗ ಈ ಶಿರವನ್ನು ಪ್ರಯಾಗದಲ್ಲಿ ಬಿಟ್ಟುಬರುವಂತೆ ಹೇಳಿದ್ದಾನೆ. ಹಾಗೆಯೇ ಮಾಡದೆ ಶಿರವನ್ನು ಬಿಟ್ಟುಕೊಡುವವನು ತಾನಲ್ಲ ಎಂಬ ಮಾತನ್ನು ಹೇಳಿದ.ಗರುಡರಾಜನ ಮಾತನ್ನು ಕೇಳಿದ ವೃಷಭರಾಜ ವಿಚಾರವನ್ನು ಒಡನೆಯೇ ಬಂದುತಲುಪಿಸಿದ್ದು ತನ್ನೊಡೆಯನಾದ ಈಶ್ವರನಿಗೆ. ನಂದಿಯ ಮಾತದು ಪಾರ್ವತಿಯ ಕಿವಿಗೆ ಬಿತ್ತು. ಗರುಡರಾಜನನ್ನು ಮನಸಾರೆ ಹೊಗಳಿದಳು ಗಿರಿಜೆ. ಶಿವ ವಹಿಸಿದ ಕಾರ್ಯವನ್ನು ನೆರವೇರಿಸದ ನಂದಿಯನ್ನು ಬೈದಳು.ಅವಮಾನವಾಯಿತು ಶಿವನ ವಾಹನನಿಗೆ. ಲಜ್ಜೆ ಮೂಡಿತು. ಮೊಗ ಬಾಡಿತು. ಸಂತಸ ಇಲ್ಲದವನಾದ ನಂದಿಯನ್ನು ಸಂತೈಸಿದ್ದು ಆ ಪರಶಿವನೇ. “ಶಿರವನ್ನು ತರುವ ಕಾರ್ಯವದು ನಿನ್ನಿಂದ ಸಾಧ್ಯವಿದೆ. ಹೋಗು. ಪ್ರಯತ್ನಪಡು” ಎಂದು ಪ್ರೇರಣೆಯಿತ್ತು ಮತ್ತೆ ಕಳುಹಿಸಿಕೊಟ್ಟ.ಅತಿವೇಗದಿಂದ ಗಗನಮಾರ್ಗದಲ್ಲಿ ಸಾಗುತ್ತಿದ್ದ ಗರುಡನನ್ನು ಅಷ್ಟೇ ರಭಸದಿಂದ ಹಿಂಬಾಲಿಸಿದ ನಂದಿ. “ನಿನ್ನ ಕರದಲ್ಲಿರುವ ಶಿರವದು ಹರನಿಗೆ ಸಲ್ಲಬೇಕು. ಅವನ ಕೊರಳ ಮಾಲೆಯನ್ನದು ಅಲಂಕರಿಸಬೇಕು. ಅದನ್ನು ನನಗೆ ಕೊಡು. ಕೊಡದೇ ಹೋದರೆ ತೀವ್ರತರವಾದ ತೊಂದರೆ ನಿನಗೆದುರಾಗುತ್ತದೆ” ಎಂದು ಎಚ್ಚರಿಕೆಯ ಮಾತನ್ನು ಹೇಳಿದ ನಂದಿ, ಪಕ್ಷಿರಾಜನಿಗೆ.“ಕೃಷ್ಣನಿತ್ತ ಆದೇಶದಂತೆ ಈ ಶಿರವನ್ನು ಹೊತ್ತು ಸಾಗುತ್ತಿರುವೆ ನಾನು ಆ ಪ್ರಯಾಗದೆಡೆಗೆ. ಪ್ರಯಾಸ ನೀಡುವವನು ನೀನಾಗದಿರು” ಎಂದು ಪ್ರತಿಕ್ರಿಯೆಯಿತ್ತ ಗರುಡ.ಮೂರೂ ಲೋಕಗಳವು ಅಲ್ಲಾಡುವಂತೆ ಅತಿಭರದಿಂದ ರೆಕ್ಕೆಗಳನ್ನು ಬಡಿಯುತ್ತಾ ಸಾಗುತ್ತಿದ್ದ ಪಕ್ಷಿರಾಜ. ಅಟ್ಟಿಸಿಕೊಂಡು ಬರುತ್ತಿದ್ದ ನಂದಿಯ ಮೂಗಿನ ಉಚ್ಛ್ವಾಸ ನಿಶ್ವಾಸಗಳಿಂದ ಬಿರುಸು ಪಡೆದ ಗಾಳಿಯದು ಗರುಡರಾಜನನ್ನು ಅತ್ತಿತ್ತ ಸೆಳೆಯತೊಡಗಿತ್ತು. ಆಯಾಸವಾದರೂ ಅದನ್ನು ತಡೆದುಕೊಂಡ ಗರುಡ. ಪ್ರಯಾಗವನ್ನು ತಲುಪಿ ಸುರಥ ಶಿರವನ್ನು ಅಲ್ಲಿ ಎಸೆದು ತಕ್ಷಣವೇ ಕೃಷ್ಣನಿರುವ ಚಂಪಕಾನಗರದೆಡೆಗೆ ಮತ್ತೆ ಮುಖಮಾಡಿದ. ಆಗ ನಂದಿ ಗರುಡ ಎಸೆದಿದ್ದ ಆ ಶಿರವನ್ನು ತ್ವರಿತಗತಿಯಲ್ಲಿ ಅಲ್ಲಿಂದ ಎತ್ತಿಕೊಂಡು ಕೈಲಾಸಕ್ಕೆ ಬಂದ. ಶಿವನಿಗದನ್ನು ನೀಡಿದ.ಸಂತಸಗೊAಡ ಶಿವ. ಪಾರ್ವತಿಯ ಮುಖದಲ್ಲಿ ನಗು ಮೂಡಿತು. ತನ್ನ ರುಂಡಮಾಲೆಯಲ್ಲಿ ಸುರಥ ಶಿರವನ್ನು ಧರಿಸಿದ ಶಂಕರ.ಕೃಷ್ಣ ಯುಕ್ತಿಯದು ಅರ್ಜುನ ಶಕ್ತಿಯೊಡಗೂಡಿ ತನ್ನ ತನುಜ ಸುರಥ ಇನ್ನಿಲ್ಲವಾಗಿದ್ದಾನೆ ಎಂಬ ಸುದ್ದಿ ಹಂಸಧ್ವಜನನ್ನು ತಲುಪಿಯಾಗಿತ್ತು. ಶರೀರದ ಮೇಲಿದ್ದ ಗಾಯಕ್ಕೆ ಕಬ್ಬಿಣವನ್ನು ಕಾಯಿಸಿ ಇಟ್ಟಂತಾಯಿತು ಅವನ ಸ್ಥಿತಿ. ಸುತ ಸುಧನ್ವನ ಸಾವಿನಿಂದ ನೊಂದಿದ್ದ ಆತ ಈಗ ಸುರಥನ ಮರಣದಿಂದಾಗಿ ಅತಿಯಾಗಿ ನೊಂದ. ಇನ್ನು ತಾನು ಮರಣ ಹೊಂದುವುದೇ ಲೇಸು ಎಂಬ ಭಾವ ಅವನಲ್ಲಿ ಮೂಡಿತು. ಯುದ್ಧದಲ್ಲಿ ಆ ಕೃಷ್ಣನನ್ನು ಮೆಚ್ಚಿಸುವಂತೆ ಹೋರಾಡಿದರೆ ತನಗೆ ಮೋಕ್ಷ ಪ್ರಾಪ್ತವಾಗುವುದೆಂಬ ಯೋಚನೆ ಅವನಲ್ಲಿ ಮೂಡಿಬಂತು. ರಣದ ಮೂಲಕ ಮರಣದ ನಿಶ್ಚಯ ಮಾಡಿಕೊಂಡು ರಣರಂಗಕ್ಕೆ ಬಂದ.ಈ ಬಗೆಯಲ್ಲಿ ಹಂಸಧ್ವಜ ನನ್ನೆದುರು ನಿಂತಾಗ ಅಳುಕಿದವನು ಶ್ರೀಕೃಷ್ಣ. ಅವನಿಗೆ ಹಂಸಧ್ವಜನ ಜೊತೆಗಿನ ಕದನವದು ಸರಿಗಾಣಲಿಲ್ಲ. ಸುತರಿಬ್ಬರನ್ನು ಕಳೆದುಕೊಂಡ ಅವನನ್ನು ಇನ್ನೂ ನೋಯಿಸುವುದು ಉಚಿತವಲ್ಲವೆಂಬ ಭಾವ ಇದ್ದಿರಬಹುದು ದೇವ ಕೃಷ್ಣನ ಹೃದಯದೊಳಗೆ!“ಯುದ್ಧ ಆರಂಭಿಸಬೇಡ. ಇರು” ಎಂದು ನನ್ನನ್ನು ತಡೆದ ಕೃಷ್ಣ ಕುದುರೆಗಳ ಲಗಾಮನ್ನು ಬಿಗಿದ. ಹೆಗಲಿನಿಂದ ಜಾರುತ್ತಿತ್ತು ಅವನ ಪೀತಾಂಬರ. ಅದನ್ನು ಮತ್ತೆ ಹೆಗಲಿನ ಮೇಲೆಯೇ ಹಾಕಿಕೊಂಡ. ರಥದಿಂದ ಕೆಳಗಿಳಿದ. ಸಿಂಹವನ್ನು ಸೋಲಿಸುವ ಘನಗತಿಯಲ್ಲಿ ನಡೆಯತೊಡಗಿದ, ಹಂಸಧ್ವಜನೆಡೆಗೆ. ಭಕ್ತನ ಕಡೆಗೆ ನಡೆದುಹೋಗುತ್ತಿದ್ದ ಕೃಷ್ಣನ ಹೆಜ್ಜೆಗಳು ಭಕ್ತರ ಭಕ್ತ ಶ್ರೀಕೃಷ್ಣ ಎಂಬ ಪರಮಸಂದೇಶವನ್ನು ಸಾರಿಹೇಳುವ ಪರಮಾತ್ಮ ಹೆಜ್ಜೆಗಳಾಗಿ ಕಂಡವು ನನ್ನ ದೃಷ್ಟಿಗೆ.ಹೊಳೆಯುತ್ತಿತ್ತು ಕೃಷ್ಣ ಕಿರೀಟ ಶಿರದಲ್ಲಿ. ತಿಲಕವದು ಶೋಭಿಸುತ್ತಿತ್ತು ಹಣೆಯಲ್ಲಿ. ಕುಸುಮ ಕಣ್ಣದು ಕೃಷ್ಣನದ್ದು. ಕಾಂತಿ ಕೆನ್ನೆಯದು ಅವನದ್ದು. ಸೊಗಸನ್ನು ಸಾರುತ್ತಿದೆ ನಸುನಗೆಯಿಂದರಳಿದ ದೇವವದನ. ದಾನವಾಂತಕನ ದಂತಗಳವು ಮನಮೋಹಕ. ಮೂರು ಆಕರ್ಷಕವಾದ ಸರಗಳು ಅಲಂಕರಿಸಿವೆ ಹರಿ ಕೊರಳನ್ನು. ಕನಕವರ್ಣದ ಉಡುಗೆಯದು ಮೆರುಗು ನೀಡಿ ಮೆರೆಸಿದೆ ಹರಿ ಕಾಯವನ್ನು.ದೇವನಡೆಯದು ಪಡೆಯಿತು ನಿಲುಗಡೆ ಚಂಪಕಾಪುರದೊಡೆಯನ ಮುಂದುಗಡೆ. ಸುತರನ್ನು ಕಳೆದುಕೊಂಡ ದುಃಖವನ್ನು ಮರೆಸಿತು ಕೃಷ್ಣ ನಿಲುವು. ದೇವಮೊಗವನ್ನು ಕಾಣುತ್ತಿದ್ದ ಅರಸನ ಮುಖದಲ್ಲಿ ಪೂರ್ಣ ನಲಿವು. ಸಾಷ್ಟಾಂಗ ನಮಸ್ಕರಿಸಿದ ಹಂಸಧ್ವಜ. “ನಿನ್ನ ರಥದಿಂದಿಳಿದು ಇಲ್ಲಿ ಬಂದೆಯೇಕೆ ಪರಮ ದೇವ?!” ಎಂದು ಕೇಳಿದ ಕರವನ್ನು ಮುಗಿಯುತ್ತ.“ಯುದ್ಧದಲ್ಲಿ ಅರ್ಜುನನನ್ನು ಗೆಲ್ಲುತ್ತೇನೆಂಬ ಕ್ಷಾತ್ರಭಾವವದು ನಿನ್ನಲ್ಲಿ ಏತಕ್ಕೆ! ಈ ಬಗೆಯ ಛಲದಿಂದಲೇ ಮಕ್ಕಳನ್ನು ಕಳೆದುಕೊಂಡೆ. ಪಾರ್ಥ ವಿಜಯಕ್ಕೆ ನಾನು ಮಾಡುತ್ತಿರುವ ಸಹಾಯವನ್ನು ಕಂಡವ ನೀನು. ಮಿತ್ರಭಾವವನ್ನು ಹೊಂದು ನಮ್ಮಲ್ಲಿ. ವೈರಭಾವವದು ಬೇಡ. ಕುದುರೆಯನ್ನು ಬಿಡು. ಯಾಗಕ್ಕೆ ಅನುಕೂಲನೆನಿಸು” ಎಂದು ಹಂಸಧ್ವಜನಿಗೆ ಹರಿ ಅರುಹಿದ.“ಗಂಗೆಯಲ್ಲಿ ಮುಳುಗಿದವನಿಗೆ ಬಾಯಾರಿಕೆ ಇರುವುದೇ! ನಿನ್ನ ಸ್ನೇಹ ಸಂಪಾದಿಸಿದ ಎನಗೆ ಇನ್ನು ದುಃಖವೆಲ್ಲಿಯದು!” ಎಂದು ಹೇಳಿದ ಹಂಸಧ್ವಜ ಹರಿಯನ್ನು ಅಪ್ಪಿದ, ಒಪ್ಪಿದ. ಕಟ್ಟಿದ್ದ ಕುದುರೆಯನ್ನು ಬಿಡಿಸಿ ಇತ್ತ. ಸಕಲ ಸಂಪದವನ್ನಿತ್ತ. ನಮ್ಮ ಯಾಗಕ್ಕೆ ತಾನೂ ನೆರವು ನೀಡುವ ಬಗೆಯಲ್ಲಿ ನಮ್ಮ ಜೊತೆಗೇ ಬಂದ. ನಮ್ಮನ್ನು ಬೀಳ್ಕೊಟ್ಟ ಶ್ರೀಕೃಷ್ಣ, ಧರ್ಮಜನನ್ನು ಕಾಣುವುದಕ್ಕಾಗಿ ಹಸ್ತಿನಾವತಿಗೆ ಹೊರಟ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು”
ಕಾವ್ಯಸಂಗಾತಿ ತಾತಪ್ಪ ಕೆ ಉತ್ತಂಗಿ “ಪ್ರೇಮದಮೊಹರು” ಸದಾ ಸಣ್ಣೂರಗಲ್ಲಿಯಾಚಿನಹಸಿರೂರ ಪಥದಲಿಅದೇ ಹೊಳಪಿನ ಅವಳು,ಕಣ್ಣೋಟಕ್ಕೆಸಿಕ್ಕ ಅಪರೂಪದಕೆಂಪು ಸೌಂದರ್ಯದ ಸುಂದರಿ,ಜಗಕ್ಕೆ ನಾಚಿದ ನಿತ್ಯಾಂಬರಿಜಗವನ್ನೇ ನಾಚಿಸಿದ ಕೆಂಪುರಂಗಿನಪ್ರೇಮಸುಂದರಿ. ಅಣಕಿಸುವ,ತವಕಿಸುವ,ಕರುಣಿಸುವ, ಹಿಗ್ಗಿಸುವಕುಗ್ಗಿಸುವ,ಪ್ರೇಮಿಸುವ ಕುಕ್ಕುಕಣ್ಣಿನ ವಾರೇನೋಟದ ಒಲವಿಗೆಸಿಕ್ಕ ಅವನುಸದಾ ಪ್ರೇಮಬಂಧಿ..ಸವಿಮಾತಿನ ಸಖನೇಸಂಬಂಧ ಬೆಸೆಯುವ ಭಾವಸಂಬಂಧಿ..ಅವಳೊರಗಿನ ಅವಳಿಗೆ ಪ್ರೀತಿಯ ಕೊಟ್ಟರೆಪ್ರೇಮದ ಮಳೆ ಸುರಿಸುವಋತುಬಂಧಿ..ಅವಳು.. ಮಳೆ ಮೋಡಗಳುಕಂಗೆಟ್ಟು ದಿಕ್ಕೆಟ್ಟು ಓಡಾಡುವಾಗ,ಗುಡುಗು, ಸಿಡಿಲ್ ಆರ್ಭಟಿಸಿ, ಬೆಳಕಿನ ಮಿಂಚಿನಸಮಯದಲ್ಲಿ, ಕೋಲ್ಮಿಂಚಿನಕೆಂಡಕುಂಡದ ಗುಲಾಬಿಯ ಗುಂಗಿನ ವಿರಾಗಿಣಿಯಾಗಿಸ್ತಬ್ಧ ವಿಹಾರದ ನಡುನಡುವೆ, ದಿವ್ಯವೇದನೆಯ,ನವ್ಯ ನಿವೇದನೆಯೊಂದಿಗೆಕೈ ಬೀಸಿ, ಕೈ ಚಾಚಿಮಧುರ ವರ್ಣವ ರಾಚಿಕರೆಯೋಲೆ ಕಳಿಸುವಆದರದ ಅಂಬರಿಯಿವಳು.ಕೆಂಪುಮೊಗದ ಗಿಳಿನಾಸಿಕದಗರಿಗರಿ ನಗೆಯ,ಫಳಫಳ ಕಣ್ಬೆಳಕಿನಬೀಸುವ ಗಾಳಿಗೆಜೋ ಜೋ ಲಾಲಿಯಾಡುವ ಶುಭ್ರಜ್ಯೋತ್ಸ್ನೆಯಿವಳು.ಅಮರ ಮಧುರದಪ್ರೇಮಗೀತೆಯಾಡುವಸ್ವಪ್ನ ಸುಂದರಿ ಇವಳು.ಸಂಭ್ರಮದ ಎಲ್ಲೆ ಮೀರಿದಾಗಸಂತಸದ ಸರಸತೆಯ ಸೋಬಾನೆಯಾಡುವವೈಶಾಖದ ಪ್ರೇಮದಮೊಹರಿನಇವಳೇ ಸುಗ್ಗಿಯ ಸಗ್ಗದಪ್ರೇಮಾಂಬರಿಯಾದಕೆಂಪು ಸೊಂಪಿನಮುಂಗಾರಿಗೆ ಮುತ್ತಿನಮುದ್ರೆಯನ್ನೊತ್ತಿದ *ಗುಲ್ ಮೊಹರ್* ಇವಳು. ತಾತಪ್ಪ. ಕೆ.ಉತ್ತಂಗಿ
ತಾತಪ್ಪ ಕೆ ಉತ್ತಂಗಿ ಅವರಕವಿತೆ “ಪ್ರೇಮದಮೊಹರು” Read Post »
ವನಜಾ ಮಹಾಲಿಂಗಯ್ಯ “ಪ್ರೀತಿ ವಿವಾಹದ ನೆರಳು”
ಪ್ರೀತಿ ಸಂಗಾತಿ ವನಜಾ ಮಹಾಲಿಂಗಯ್ಯ “ಪ್ರೀತಿ ವಿವಾಹದ ನೆರಳು” ಪ್ರೀತಿ ಅಂದ್ರೆ ಕನಸು. ಮದುವೆ ಅಂದ್ರೆ ವಾಸ್ತವ. ಕನಸು ಕಾಣೋದು ತುಂಬಾ ಸುಂದರ. ಆದ್ರೆ ಆ ಕನಸನ್ನೇ ಮನೆ ಮಾಡ್ಕೊಂಡು ವಾಸ್ತವದ ನೆಲದ ಮೇಲೆ ಕಾಲೂರದೆ ಬದುಕೋಕೆ ಹೊರಟಾಗ, ಬದುಕು ಕಚ್ಚೋಕೆ ಶುರು ಮಾಡುತ್ತೆ. ಅದೇ ಪ್ರೀತಿ ವಿವಾಹದ ನೋವು.ಪ್ರೀತಿ ಮಾಡುವ ದಿನಗಳಲ್ಲಿ ಜಗತ್ತೇ ಬೇರೆ. ಫೋನ್ ಕರೆ, ಮೆಸೇಜ್, ಸಣ್ಣ ನಗು, ಸಣ್ಣ ಕೋಪ, ಎಲ್ಲವೂ ಸಿಹಿ. ಆಗ ನಾವು ಇಬ್ಬರೇ ಜಗತ್ತು. ಬೇರೆ ಯಾರೂ ಬೇಕಿಲ್ಲ ಅನಿಸುತ್ತೆ. ಕುಟುಂಬ, ಸಮಾಜ, ಜಾತಿ, ಹಣ, ಭವಿಷ್ಯ – ಯಾವುದೂ ಕಣ್ಣಿಗೆ ಕಾಣಲ್ಲ. ಕಾಣೋದು ಕೇವಲ ಅವನು ಅಥವಾ ಅವಳು. ಆ ಭಾವನೆಯ ಜೋಶಲ್ಲಿ ಕೈ ಹಿಡಿದು ಮದುವೆ ಮಂಟಪದ ಕಡೆ ನಡೆಯುತ್ತೇವೆ.ಆದ್ರೆ ಮಂಟಪದಿಂದ ಹೊರಗೆ ಬಂದ ಕೂಡಲೇ ಹೊಸ ಜಗತ್ತು ಶುರುವಾಗುತ್ತೆ. ಇಲ್ಲಿಯವರೆಗೆ ಇಬ್ಬರ ಜಗತ್ತಾಗಿದ್ದ ಬದುಕು, ಈಗ ಮನೆ, ಕುಟುಂಬ, ಜವಾಬ್ದಾರಿ, ಬಿಲ್, ಕೆಲಸದ ಒತ್ತಡಗಳಿಂದ ತುಂಬಿರುತ್ತೆ. ಪ್ರೀತಿ ಮಾತಾಡುವಾಗ ಟೈಮೇ ಸಿಗದಷ್ಟು ಕೆಲಸ ಇರುತ್ತೆ. ಮೊನ್ನೆ ಮೊನ್ನೆ “ನೀನೇ ನನ್ನ ಉಸಿರು” ಅಂದವನು, ಇವತ್ತು “Office ಕೆಲಸ ಇದೆ, ಮಾತಾಡೋಕೆ ಆಗಲ್ಲ” ಅಂತಾನೆ. ನಿನ್ನೆ “ನಿನ್ನ ನಗು ಸಾಕು” ಅಂದವಳು, ಇವತ್ತು “ಮನೆ ಬಾಡಿಗೆ ಕಟ್ಟಿದ್ದೀಯಾ?” ಅಂತ ಕೇಳ್ತಾಳೆ. ಆಗ ಮನಸ್ಸು ಮೊದಲೇ ಹೀಗಿರಲಿಲ್ಲವಲ್ಲ ಅಂತ ಕೊರಗುತ್ತೆ. ಪ್ರೀತಿ ಕಡಿಮೆ ಆಗಿಲ್ಲ, ಜವಾಬ್ದಾರಿ ಜಾಸ್ತಿ ಆಗಿದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋ ತಾಳ್ಮೆ ನಮ್ಮಲ್ಲಿ ಇರಲ್ಲ.ಪ್ರೀತಿ ವಿವಾಹದ ದೊಡ್ಡ ನೆರಳು ಕುಟುಂಬ. ಅಜ್ಜ-ಅಜ್ಜಿ ನೋಡಿ ಮಾಡೋ ಮದುವೆಯಲ್ಲಿ ಎರಡು ಮನೆ ಒಂದಾಗುತ್ತೆ. ಪ್ರೀತಿ ವಿವಾಹದಲ್ಲಿ ಕೆಲವೊಮ್ಮೆ ಎರಡು ಮನೆ ಎದುರಿಗೆ ನಿಲ್ಲುತ್ತೆ. “ನಮ್ಮ ಮನೆತನಕ್ಕೆ ತಕ್ಕವಳಲ್ಲ”, “ನಮ್ಮ ಹುಡುಗನಿಗೆ ಯೋಗ್ಯನಲ್ಲ” ಅನ್ನೋ ಮಾತುಗಳು ಚೂರಿ ತರ ಇರುತ್ತೆ. ತಾಯಿ-ತಂದೆಯ ಆಶೀರ್ವಾದ ಇಲ್ಲದ ಮದುವೆ, ಎಷ್ಟು ಸಂತೋಷವಾಗಿದ್ದರೂ ಮನಸ್ಸಿನ ಒಂದು ಮೂಲೆಯಲ್ಲಿ ಸದಾ ಕೊರೆಯುತ್ತಿರುತ್ತೆ. ಹಬ್ಬ, ಹರಿದಿನ, ಮನೆ ಕಾರ್ಯ – ಎಲ್ಲಾ ಕಡೆ “ಅವರ ಮನೆಯವರು ಬರಲಿಲ್ಲ” ಅನ್ನೋ ಕೊರತೆ ಕಾಡುತ್ತೆ. ಆ ನೋವನ್ನ ಹುಡುಗ-ಹುಡುಗಿ ಒಬ್ಬರ ಮೇಲೆ ಒಬ್ಬರು ತೀರಿಸ್ಕೊಳ್ಳೋದು ಶುರು.ಮತ್ತೊಂದು ವಿಷಯ ಹಣ. ಪ್ರೀತಿ ಮಾಡುವಾಗ “ನೀನು ಇದ್ರೆ ಸಾಕು, ಕಾಡಲ್ಲಿ ಆದ್ರೂ ಇರ್ತೀನಿ” ಅಂತೀವಿ. ಆದ್ರೆ ಮದುವೆ ಆದ ಮೇಲೆ ಕಾಡು ಬೇಡ, ಒಂದು ಚಿಕ್ಕ ಮನೆ ಬಾಡಿಗೆ ಕಟ್ಟೋಕೂ ಆಗಲ್ಲ. ಸಾಲ, EMI, ಮೆಡಿಕಲ್ ಖರ್ಚು, ಮಕ್ಕಳ ಶಾಲೆ – ಲೆಕ್ಕಗಳು ಬರೋಕೆ ಶುರುವಾಗುತ್ತವೆ. ದಾರಿದ್ರ್ಯ ಬಾಗಿಲು ತಟ್ಟಿದಾಗ ಪ್ರೀತಿ ಕಿಟಕಿಯಿಂದ ಜಾರಿ ಹೋಗುತ್ತೆ ಅಂತ ಹಿರಿಯರು ಸುಮ್ನೆ ಹೇಳಿಲ್ಲ. ಹಣಕಾಸಿನ ಜಗಳ, ಪ್ರೀತಿಯ ಬುನಾದಿಯನ್ನೇ ಅಲುಗಾಡಿಸಿಬಿಡುತ್ತೆ.ಇದಕ್ಕೆಲ್ಲಾ ಕಾರಣ ನಾವು ಪ್ರೀತಿನೇ ದೇವರು ಅಂತ ಪೂಜೆ ಮಾಡೋದು. ಪ್ರೀತಿ ದೇವರು ಅಲ್ಲ , ಪ್ರೀತಿ ಒಂದು ಭಾವನೆ. ಮದುವೆ ಅಂದ್ರೆ ಆ ಭಾವನೆಯ ಜೊತೆಗೆ ಹೊಂದಾಣಿಕೆ, ತ್ಯಾಗ, ಕ್ಷಮೆ, ಸಂಭಾಷಣೆ ಇವೆಲ್ಲಾ ಬೆರೆಸಿ ಮಾಡೋ ಅಡುಗೆ. ಉಪ್ಪು ಕಡಿಮೆ ಆದ್ರೆ ಊಟ ರುಚಿ ಇರಲ್ಲ. ಹೊಂದಾಣಿಕೆ ಕಡಿಮೆ ಆದ್ರೆ ಸಂಸಾರ ರುಚಿ ಇರಲ್ಲ.ಪ್ರೀತಿ ವಿವಾಹದವರು ಒಂದು ತಪ್ಪು ಮಾಡ್ತಾರೆ. “ನಾನೇ ಆಯ್ಕೆ ಮಾಡಿಕೊಂಡಿದ್ದು, ನನಗೆ ಗೊತ್ತು” ಅನ್ನೋ ಗರ್ವ. ಹಾಗಾಗಿ ಸಣ್ಣ ಜಗಳ ಆದ ಕೂಡಲೇ “ಬೇಡ ಬಿಡು” ಅಂತ ಮಾತು ಬರುತ್ತೆ. ಹೊಂದಾಣಿಕೆ ಮಾಡಿಕೊಳ್ಳೋ ಬದಲು ಬೇರ್ಪಡೋದು ಸುಲಭ ಅನಿಸುತ್ತೆ. Arranged Marriage ನಲ್ಲಿ “ಮಾಡಿದ್ದೇ ಆಯ್ತು, ನಿಭಾಯಿಸೋಣ” ಅನ್ನೋ ಭಾವ ಇರುತ್ತೆ. ಇಲ್ಲಿ ಆ ಭಾವ ಇರಲ್ಲ.ಪ್ರೀತಿ ವಿವಾಹ ತಪ್ಪು ಅಲ್ಲ. ಆದ್ರೆ ಅದು ಮಕ್ಕಳಾಟ ಅಲ್ಲ. ಕಣ್ಣು ಮುಚ್ಚಿ ಆಡೋ ಜೂಜು ಅಲ್ಲ. ಕಣ್ಣು ತೆರೆದು, ಕುಟುಂಬವನ್ನ ಒಪ್ಪಿಸಿ, ಆರ್ಥಿಕವಾಗಿ ಸದೃಢರಾಗಿ, “ನಾನು ಬದಲಾಗ್ತೀನಿ, ನೀನೂ ಬದಲಾಗು” ಅಂತ ಪ್ರಾಮಿಸ್ ಮಾಡ್ಕೊಂಡು ಮಾಡೋ ಒಪ್ಪಂದ. ಇಲ್ಲ ಅಂದ್ರೆ ಆ ಪ್ರೀತಿ ಮದುವೆ ಮಂಟಪದವರೆಗೆ ಮಾತ್ರ. ಆಚೆ ಬದುಕಿನ ಬಿಸಿಲಿಗೆ ಬಾಡಿ ಹೋಗುತ್ತೆ. ಪ್ರೀತಿ ಮಾಡಿ. ಮನಸಾರೆ ಮಾಡಿ. ಆದ್ರೆ ಮದುವೆ ಅಂದ್ರೆ ಕೇವಲ ಪ್ರೀತಿ ಅಲ್ಲ, ಅದು ಬದುಕು ಅನ್ನೋದನ್ನ ಮರೆಯಬೇಡಿ. ಬದುಕನ್ನ ನಿಭಾಯಿಸೋ ಶಕ್ತಿ ಇದ್ರೆ ಮಾತ್ರ ಪ್ರೀತಿಮಾಡಿ ಮದುವೆ ಮಾಡಿಕೊಳ್ಳಿ. ಇಲ್ಲದೆ ಹೋದರೆ ಹಿರಿಯರಿಗೆ ಬಿಡಿ ಅವರು ನಿಮಗೆ ಅನ್ಯಾಯ ಮಾಡಲ್ಲ. ವನಜಾ ಮಹಾಲಿಂಗಯ್ಯ
ವನಜಾ ಮಹಾಲಿಂಗಯ್ಯ “ಪ್ರೀತಿ ವಿವಾಹದ ನೆರಳು” Read Post »


