ಕಾವ್ಯ ಸಂಗಾತಿ
ನಿರಂಜನ ನಾಯಕ
“ನಗರ ಜಾಗರಣೆ”


ನಗರ ಬೆಳೆಯುತಲಿದೆ
ಉಕ್ಕಿ ಹರಿದ ಮೋರಿಯಂತೆ,
ಸಿಕ್ಕ ಸಂದುಗಳಲಿ ಜಾರುತಾ
ದುರ್ನಾತದೊಂದಿಗೆ
ಜಾಗರಣೆ ಖಾತ್ರಿಯಾಗಿ!
ಮುಚ್ಚದ ಕಣ್ಣುಗಳೆದುರು
ಮೆಚ್ಚುಗೆಯಾಗದ ಮುಖಗಳು;
ಮನದ ಖಗ-ಮಿಗಗಳು
ಮಾಯಾಮೃಗಗಳಂತೆ
ಮರೆಯಾಗುತಿವೆ.
ಕಾಲು ಚಾಚಿ
ಬಿದ್ದಿಹ ರಸ್ತೆಗಳಿಗೆ
ತಡೆಒಡ್ಡುವ ಗೋಡೆಗಳು,
ಬಣ್ಣ ಮಾಸುತ್ತಾ
ಅಪರಿಚಿತವಾಗುತಿವೆ.
ಇಕ್ಕೆಲದ ಅಂಗಡಿಗಳ
ಎಗ್ಗಿಲ್ಲದ ವ್ಯಾಪಾರ,
ಕುರುಡನ ತಟ್ಟೆಯ
ಮೂರು ಕಾಸುಗಳನು
ಅಣಕಿಸುತಿದೆ!
ನಿರಂಜನ ನಾಯಕ



