ಕಾವ್ಯ ಸಂಗಾತಿ
ಮಹಾಂತೇಶ್ ಬಿ ನಿಟ್ಟೂರು
“ನೆಲದ ಎದೆ ಅಗ್ನಿಕುಂಡ”


ಹಾಗೂ ಹೀಗೂ ಹೇಗೋ ಮರ ಬೆಳೆದು
ದೊಡ್ಡದಾಗಿ ಮೈ ಕೈ ತುಂಬಿಕೊಳ್ಳಲು;
ಫಲಕ್ಕಾಗಿ ಸರತಿಯ ಸಾಲು
ಕೆಲವೊಮ್ಮೆ ನೂಕುನುಗ್ಗಲು
ಒಂದು ಗುಂಪು ಚೀಲ ಹಿಡಿದು ನಿಂತಿದೆ
ಹಣ್ಣು ಹಂಪಲು ತುಂಬಿಕೊಳ್ಳಲು
ಇನ್ನೊಂದು ಗುಂಪು ಪಾತ್ರೆ ಹಿಡಿದು ಕೂತಿದೆ
ಕೊಂಬೆ ರೆಂಬೆಗಳ ಮೇಲಿಟ್ಟಿಹ
ಜೇನುರಸ ಹಿಂಡಿ ತೆಗೆಯಲು
ಮತ್ತೊಂದು ಗುಂಪು ಬುಟ್ಟಿ
ಹಿಡಿದು ಕಾಯುತ್ತಿದೆ
ಹಕ್ಕಿ-ಪಕ್ಷಿಗಳಿಟ್ಟ ಮೊಟ್ಟೆ ಹೊತ್ತು ಸಾಗಲು
ಕೊನೆಗೆ ಬೇಟೆಯಾಡಿ ಬೇಯಿಸಿ ತಿನ್ನಲು
ಅಲ್ಲೊಂದು ತಂಡ ಮಚ್ಚು, ಕೊಡಲಿ
ಗರಗಸ ತಂದು ಸುತ್ತುವರೆದಿದೆ
ಆದಷ್ಟು ಬೇಗ ಕಡಿದು ಬುಡಮೇಲು ಮಾಡಿ
ಮನೆ ಮಾರಿಗೆ ನಾಟಾ ಮಾಡಿಸಲು
ಓಲೈಕೆಯ ಒಲೆ ಉರಿಸಲು
ಇಲ್ಲೊಂದು ಸಮೂಹ ಹೊಂಚಿ ಕೂತಿದೆ
ಗಾಳಿಗೋ, ಮಳೆಗೋ ಬಿದ್ದ ಕೂಡಲೇ ಮರ
ಆ ಜಾಗ ಕಬ್ಜಾ ಮಾಡುವ ಹುನ್ನಾರ…..
ಪ್ರಕೃತಿಯ ಸುಕೃತಿಗಳಾದ
ಮರ ಗಿಡ ಬಳ್ಳಿಯ ಪರಿವಾರವನ್ನು
ನೆಟ್ಟು ಬೆಳೆಸದೇ ಅಟ್ಟು ಉಣ್ಣುವ
ಪರಮ ಸ್ವಾರ್ಥಿಗಳೀ ನೀಚ ನಡೆಗೆ
ಕಲ್ಪವೃಕ್ಷಗಳ ಕಲ್ಪನಾತೀತ ವೇದನೆಗೆ
ಮುಗಿಲು ಕೆಂಡ, ನೆಲದ ಎದೆ ಅಗ್ನಿಕುಂಡ !
ಮಹಾಂತೇಶ್ ಬಿ ನಿಟ್ಟೂರು



