ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
“ಹಸಿರು ಮಂದಿರ”


ಹಸಿರಿನ ಹೊದಿಕೆ ಹೊದ್ದ ಪವಿತ್ರ ಮಂದಿರ,
ಜ್ಞಾನದ ಜ್ಯೋತಿ ಬೆಳಗುವ ಸರಕಾರಿ ಶಾಲೆ;
ಸುಣ್ಣದ ಬಿಳಿಯ ಗೋಡೆಗಳ ನಗು,
ನೋಡುವ ಮನದಲಿ ಅರಳಿಸುವ ಹೂವಿನ ಮಾಲೆ//
ಶಾಲೆಯ ಆವರಣ ಹಚ್ಚಹಸಿರಾಗಿ,
ಗಿಡಮರಗಳು ಕೈಬೀಸಿ ಸ್ವಾಗತಿಸುತಿವೆ;
ತಂಗಾಳಿಯ ತಂಪಿನಲಿ ಹಕ್ಕಿಗಳ ಗಾಯನ,
ಕಲಿಕೆಯ ದಾರಿಯಲಿ ಕನಸು ಬಿತ್ತುತ್ತಿವೆ//
ಎಡಬಲ ಹಸಿರಿನ ಸಾಲುಗಳ ನಡುವೆ,
ಪ್ರಕೃತಿಯೇ ಪಾಠ ಹೇಳುವ ಗುರುವಾಗುತಿದೆ;
ಸ್ವಚ್ಛತೆ, ಶಿಸ್ತು, ಸಮಯದ ಮೌಲ್ಯ,
ಪ್ರತಿ ಹೆಜ್ಜೆಯಲಿ ಬದುಕಿನ ಬೆಳಕಾಗುತಿದೆ//
ಮಕ್ಕಳ ದಾಹ ತಣಿಸುವ ಶುದ್ಧ ನೀರಿನ ತೊರೆ,
ಆರೋಗ್ಯದ ಅರಿವು ಬೆಳೆಸುವ ಅಕ್ಕರೆಯ ಸ್ಪರ್ಶ;
ಹಸಿ–ಒಣ ಕಸದ ವಿಂಗಡಣೆಯ ಪಾಠ,
ಪರಿಸರ ಪ್ರೀತಿಯ ಬದುಕಿನ ಆದರ್ಶ//
ಸಾವಿತ್ರಿಬಾಯಿ ಫುಲೆ ವೇದಿಕೆಯ ಸೊಬಗು,
ಜ್ಞಾನದ ದೀಪವನು ಹೊತ್ತ ಮಹಿಮೆಯ ಸಂಕೇತ;
ಅದನು ನೋಡುವ ಎರಡು ಕಣ್ಣು ಸಾಲದೆ,
ಮನದಲಿ ಮೂಡುತ್ತದೆ ಭವಿಷ್ಯದ ಸುಂದರ ಚಿತ್ರ//
ಶಿಕ್ಷಕಿಯ ಉದಾತ್ತ ಚಿಂತನೆ, ದೂರದೃಷ್ಟಿ,
ಮಕ್ಕಳ ಏಳಿಗೆಗೆ ಅಕ್ಷಯ ತಪಸ್ಸಾಗಿದೆ;
ತಾಯಿಯ ಮಮತೆಯಲಿ ಜ್ಞಾನವನುಣಿಸುವ,
ಸೇವೆಯ ಬದುಕು ಸಾರ್ಥಕತೆಯಾಗಿದೆ//
ಇದು ಶಾಲೆಯಲ್ಲ ಹಸಿರು ದೇವಾಲಯ,
ಇದು ಕೋಣೆಗಳು ಕನಸುಗಳ ನೆಲೆ;
ಇಲ್ಲಿಂದ ಹೊರಡುವ ಪ್ರತಿಯೊಂದು ಮಗು,
ನಾಡಿನ ಭವಿಷ್ಯವ ಬೆಳಗಿಸುವ ದಿವ್ಯ ಕಿರಣ//
ಹಸಿರು ಉಳಿಯಲಿ, ಶಿಕ್ಷಣ ಅರಳಲಿ,
ಸಾವಿತ್ರಿಯ ಕನಸು ಸದಾ ಚಿಗುರಲಿ;
ಇಂತಹ ಹಸಿರು ಮಂದಿರಗಳು ಎಲ್ಲೆಡೆ ಬೆಳೆಯಲಿ,
ಜ್ಞಾನ ಭಾರತವು ಹಸಿರಾಗಿ ನಗುತಿರಲಿ
ವಿಜಯಲಕ್ಷ್ಮಿ ಹಂಗರಗಿ



