ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
“ಯಾನ ಹೊರಟಾಗ…..”


ಮುಸ್ಸಂಜೆಗೊಂದು
ಬೆಳಗಿನ ಅವಸರಕ್ಕೊಂದು
ಹೊರಡುವ ಹಕ್ಕಿಗಳ
ಸಾಲೊಂದು ಎಲ್ಲೋ
ಹೊರಟಂತಿದೆ
ಕಾಲದ ಅಳತೆಯೊಳಗೆ
ಕಳೆದ ಸಮಯವ
ಹುಡುಕಿ ಉಸಿರಿನ
ಸಂಭ್ರಮಕ್ಕೆ ಚಿತ್ರ ಬರೆಯಲು
ದಾರಿಯಿರದ ದಾರಿ
ಕಾಣದ ಹೆಜ್ಜೆಯ ಪಯಣ
ನಭಕೆ ನಂಬಿಕೆ ಅಂಟಿಸಿ
ಇಳೆಗೆ ಇಳಿವ ಕಾತರ
ಮತ್ತೆ ಬದುಕಿನ ಸುತ್ತ
ಅವಸರದ ಇಡುಗಂಟು
ಹಸಿವಿಗೆ ಅನ್ನದ ನಗು
ಮಣ್ಣೊಳಗೆ ಬೇರು ಬಿಟ್ಟಿದೆ
ಭತ್ತವಾಗಲು
ಉಸಿರು ಉಳಿಸಲು
ನೆಲದ ಮಾತು
ಹಕ್ಕಿಗೆ ಗೊತ್ತು
ಗೂಡಿನ ಒಳಗೆ
ಸಾಲು ಕಟ್ಟಿದ ಕನಸಿನ
ಮೆರವಣಿಗೆಯ ಯಾನ
ತಲುಪಿದ ಮೇಲೆ
ತಿರುಗುವ ಗಡುವು
ಒಂದು ಪಯಣದ ಬದುಕು
ಸುಪ್ತ ನದಿಯಂತೆ
ಹರಿದಷ್ಟು ಪರಿಶುದ್ಧತೆ
ಮನದ ಬಿಂಬದ ಚಿತ್ರ
ದಾರಿಯ ಹುಡುಕಬೇಕು
ಯಾನ ಹೊರಡಬೇಕು
ನಾಗರಾಜ ಬಿ. ನಾಯ್ಕ
ಹುಬ್ಬಣಗೇರಿ.
ಕುಮಟಾ.



