ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್


ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇ
ಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ
ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆ
ಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ
ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿ
ಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ
ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದು
ಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ
ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆ
ಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ
ಎಮ್ಮಾರ್ಕೆ



