ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಒಮ್ಮೆಬರುವೆಯಾ?”


ನನ್ನ ಪ್ರಾಣದ ಇನಿಯ
ಎಲ್ಲಿರುವೆ ಬರುವೆಯಾ
ಬಿಳಿ ಗೋಡೆಯ ನಡುವೆ ನಾನು
ನೆರಳಾಗಿ ಕರಗುತ್ತಿರುವೆ
ಒಮ್ಮೆ ನನ್ನ ಕಣ್ಣೊಳಗೆ
ಚಂದ್ರ ಬೆಳಕು ಹುಡುಕಿದವನು ನೀನು
ಇಂದು ಒಣಗಿದ ಹೂವಿನಂತೆ
ನನ್ನನ್ನು ದಾರಿಯಂಚೆ ಬಿಟ್ಟೆ
ಕೂದಲು ಉದುರಿದ ರಾತ್ರಿ
ಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲ
ಬೆಂಕಿಗೆ ಬಿದ್ದ ಕನಸೊಂದು
ನಿಧಾನವಾಗಿ ಬೂದಿಯಾಗುತ್ತಿತ್ತು
ಔಷಧದ ವಾಸನೆಯ ನಡುವೆ
ನನ್ನ ಉಸಿರು ಮುಳ್ಳಿನ ಹಾಸಿಗೆ
ಸಾವಿಗಿಂತ ಹೆಚ್ಚು ಕಾಡಿದ್ದು
ನೀ ಮೌನವಾಗಿ ದೂರಾದ ಹೆಜ್ಜೆ
ನನ್ನ ಎದೆಯೊಳಗೆ ಈಗ
ರಕ್ತವಲ್ಲ ವಿರಹ ಹರಿಯುತ್ತಿದೆ
ಕಣ್ಣೀರಲ್ಲ ಇದು
ಒಡೆದ ಹೃದಯ ಕರಗಿದ ಶಬ್ದ
ಒಮ್ಮೆ ಅಪ್ಸರೆ ಎಂದ ತುಟಿಗಳು
ಇಂದು ನನ್ನ ಹೆಸರನ್ನೇ ಮರೆತಿವೆ
ನಾನು ಒಣ ಮರದ ನೆರಳು
ನೀ ಬೇಸತ್ತ ಹಕ್ಕಿಯ ಹಾರಾಟ
ಕಿಟಕಿಯಾಚೆ ಚಂದ್ರ ಸುಡುತ್ತಾನೆ
ಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆ
ನೀ ಬಾರದ ಪ್ರತಿರಾತ್ರಿ
ನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ
ನನ್ನ ಪ್ರಾಣದ ಇನಿಯ
ಒಮ್ಮೆ ಬರುವೆಯಾ
ಕೊನೆಯ ಉಸಿರ ತುದಿಯಲ್ಲಿ
ನಿನ್ನ ಹೆಸರೇ ಇನ್ನೂ ತೂಗುತ್ತಿದೆ
ಡಾ. ಹೆಚ್. ನಟರಾಜ್ ಆರ್ಯ.



