Month: December 2019

ಬನ್ನಿ ಭಾಗವಹಿಸಿ

ಬಂಡಾಯ ಸಾಹಿತ್ಯ ಸಂಘಟನೆ-ತುಮಕೂರು ಯುವ ಬರಹಗಾರರ ಕಾರ್ಯಾಗಾರ ದಿನಾಂಕ:4/01/2020 ಮತ್ತು 5/01/2020

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ಅವನು ನನ್ನೊಡನೆ ಇದ್ದಿದ್ದು ಅದೊಂದೇ ಸಂಜೆ ನಾನು ನನ್ನನ್ನೇ ಮರೆತಿದ್ದು ಅದೊಂದೇ ಸಂಜೆ ಹಕ್ಕಿಗಳು ಗೂಡಿಗೆ ಮರಳಿ ಬರುವ ಹೊತ್ತು ಮನಸು ಗರಿಬಿಚ್ಚಿ ಹಾರಿದ್ದು ಅದೊಂದೇ ಸಂಜೆ ಪಡುವಣದ ಕೆನ್ನೆಗೆ ರಂಗು ಬಳಿದಿದ್ದ ಸೂರ್ಯ ಕನಸುಗಳಿಗೆ ಬಣ್ಣ ಏರಿದ್ದು ಅದೊಂದೇ ಸಂಜೆ ಎಷ್ಟೊಂದು ಅಲೆಗಳು ದಡವ ಮುದ್ದಿಟ್ಟವಾಗ ಕಡಲು ಉಕ್ಕುಕ್ಕಿ ಹರಿದಿದ್ದು ಅದೊಂದೇ ಸಂಜೆ ನಮ್ಮ ಬಡಕೋಣೆಯಲಿ ಚಂದ್ರೋದಯವಾಯ್ತು ಮಧುಪ ಮಧುವೆರೆದಿದ್ದು ಅದೊಂದೇ ಸಂಜೆ ಸಂಜೆ ಇರುಳಾಗಿ ಅಯ್ಯೋ ದಿನ ಉರುಳಿತಲ್ಲ ಕಾಡುವ ನೆನಪಾಗಿ ಉಳಿದಿದ್ದು ಅದೊಂದೇ ಸಂಜೆ ಮುಂಗುರುಳ ಚುಂಬಿಸಿ ವಿದಾಯ ನುಡಿದ ಸಖ ಬದುಕಿಗೆ ಬದುಕ ತುಂಬಿದ್ದು ಅದೊಂದೇ ಸಂಜೆ

ಅನುವಾದ ಸಂಗಾತಿ

ನನ್ನ ಕುದುರೆಗೆ ಅನಿಸಿದೆ ಇದೆಂಥ ಸೋಜುಗ
ಮನೆಮಾರು ಇರದ ಕಡೆ ನಿಲ್ಲುವುದು ಹೀಗೆ

ಕವಿತೆ ಕಾರ್ನರ್

ಮುಂದಾಗಲಿಲ್ಲ ಇಷ್ಟು ವರುಷ ಎದೆಯೊಳಗಡಗಿಸಿಟ್ಟ ಮಾತುಗಳ ಮೂಟೆಗಳ ಬಾರವನ್ನಿಳಿಸಿ ಹಗುರಾಗಲೆಂದೇ ಆ ಬೇಟಿಯನ್ನು ನಿಕ್ಕಿ ಮಾಡಿದ್ದರು ಅಪರಿಚಿತ ಊರಿನ ಜನಸಂದಣಿಯಿರದ ಜಾಗ ಹುಡುಕಿ ಕೂತರು. ಮಾತು ಶುರು ಮಾಡುವುದಾದರೂ ಯಾರೆಂಬುದು ಅರ್ಥವಾಗದೆ ಕುಳಿತೇ ಇದ್ದರೂ ದ್ಯಾನಸ್ಥ ಪ್ರತಿಮೆಗಳಂತೆ ಬೆಳಿಗ್ಗೆ ಬಂದು ಕೂತವರು ಮೊದಲ ಮಾತಾಡುವ ಹೊತ್ತಿಗೆಮದ್ಯಾಹ್ನವಾಗಿತ್ತು ‘ಹೇಳು’ ಕೇಳಿದವನಿಗೇನೆ ಅನುಮಾನವಿತ್ತು ತನ್ನ ದ್ವನಿಯವಳ ಕಿವಿ ತಲುಪಿದ್ದರ ಬಗ್ಗೆ ಅಷ್ಟುಮೆಲುವಾಗಿ ಮಾತಾಡಿದ್ದ ಏನಿದೆ ಹೇಳಲು ಎಲ್ಲ ಮಾಮೂಲು ಇವತ್ತು ಒಂದು ದಿನ ಬಿಡುವು ಮಾಡಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯ್ತು ಎಲ್ಲಿಗೆ ಹೋಗುತ್ತಿದ್ದೀ ಏನು ಕೆಲಸ ಎಷ್ಟು ಹೊತ್ತಿಗೆ ತಿರುಗಿ ಬರುತ್ತೀ ಪ್ರಶ್ನೆಗಳ ರಾಶಿಯನೆದುರಿಸಿ ಉತ್ತರಿಸಿ ಬರುವುದಿದೆಯಲ್ಲ ಇದರಷ್ಟು ಯಾತನಾದಾಯಕ ಮತ್ತೊಂದಿಲ್ಲ ನಿನ್ನಂತೆ ಗಂಡಸಾಗಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ ಒಂದು ಕ್ಷಣ ನಕ್ಕ! ಬಾಯಿಬಿಟ್ಟು ಕೇಳುವ ಪ್ರಶ್ನೆಗಳಿಗುತ್ತರ ಹುಡುಕಿ ಹೇಳುವುದು ಸುಲಭ ಮೌನದೊಳಗೆ ಎಕ್ಸರೆ ಕಣ್ಣುಗಳ ಮೂಲಕ ಅನುಮಾನದ ಹಲವು ಹುತ್ತ ಕಟ್ಟುವವರಿಗೇನು ಮಾಡುವುದು. ನನಗೀಗ ಥಯರಾಯ್ಡ್ ಶುರುವಾಗಿದೆಯಂತೆ ಅದಕ್ಕೆ ಹೀಗೆ ದಪ್ಪವಾಗುತ್ತಿದ್ದೇನಂತೆ ಸಾಯೋತನಕ ಮಾತ್ರೆನುಂಗುವ ರ‍್ಮ ನಲವತ್ತಕ್ಕೇ ಹೀಗಾದರೆ ಎಪ್ಪತ್ತಕ್ಕೇನು ಕಾದಿದೆಯೊ ಅದೇನು ಮಹಾ ಬಿಡು ನನಗೂ ಈಗ ಶುಗರ್ ಶುರುವಾಗಿದೆ ಅನ್ನ ತಿನ್ನುವಂತಿಲ್ಲ ಡಯೆಟ್ ಹೇಳಿದ್ದಾರೆ ನಿತ್ಯ ಮಾತ್ರೆ ಸೇವನೆ ಅನಿವಾರ್ಯ ನಿನಗಿಂತ ಮೂರು ವರ್ಷ ದೊಡ್ಡವನು ಇದಕ್ಕಿಂತ ಹೆಚ್ಚೇನು ಆಗದಿದ್ದರೆ ಸಾಕೆಂದು ದೇವರನ್ನು ಪ್ರಾರ್ಥಿಸೋಣ ಅವಳ ಥೈರಾಯಿಡಿಗೆ ಇವನು ಇವನ ಶುಗರಿಗೆ ಅವಳೂ ಸಲಹೆ ಸೂಚನೆ ಸಾಂತ್ವಾನ ಹೇಳುವಷ್ಟರಲ್ಲಿ ಸಂಜೆಯಾಗಿತ್ತು ಹೊರಡೋಣವಾ ಲೇಟಾಯ್ತು ಕೇಳಿದವಳಿಗೆ ಗೋಣು ಆಡಿಸಿ ಬಸ್ಸು ಹತ್ತಿಸಿ ತಾನೂ ತನ್ನ ಬಸ್ಸು ಹತ್ತಿ ಕೂತ ಹೇಳಬೇಕಾದ್ದೆಲ್ಲ ಎದೆಯೊಳಗುಳಿದು ಹೊತ್ತು ತಂದಿದ್ದ ಮೂಟೆಗಳೊಂದಿಗೆ ಮನೆಗೆ ಮರಳಿದರು. ಮತ್ತೆ ಬೇಟಿ ಮಾಡಲು ಇಬ್ಬರೂ ಮುಂದಾಗಲಿಲ್ಲ.

ಕಾವ್ಯಯಾನ

ಮಂತ್ಲಿಪಿರಿಯಡ್ಸ್ ಮತ್ತು…. ವಿಜಯಶ್ರೀ ಹಾಲಾಡಿ ಮಂತ್ಲಿಪಿರಿಯಡ್ಸ್ ಮತ್ತು…. ರಕ್ತ ಕಂಡರೆ ಹೆದರುವಕೋಮಲೆಗೆ ಅನಿವಾರ್ಯ ಮಂತ್ಲಿ ಪಿರಿಯಡ್ಸ್ ! ಬ್ರೆಡ್ – ಜಾಮ್ ಹೋಲಿಕೆಗೆ ಲಘುವಾಗಿ ನಕ್ಕವಳೇ ಇನ್ನೀಗ ಅಳಬೇಕು ಹೆರಿಗೆ ಬೇನೆಯಾದರೂ ಮುಗಿಯುತ್ತದೆ ಒಮ್ಮೆಗೇ ಇಪ್ಪತ್ತೆಂಟರ ಸೈಕಲ್ ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ ಹಾಗಾದರೆ ವರ್ಷಕ್ಕೆಷ್ಟು ! ಟೆನ್ಷನ್ ಜಾಸ್ತಿಯಾದರೆ ಬ್ಲೀಡಿಂಗೂ ಜಾಸ್ತಿ ಪ್ಯಾಡುಗಳೂ ಇರಿಸುಮುರುಸುಗಳೂ ನೋವು ಅಪಮಾನಗಳೂ… ಐವತ್ತೋ ಐವತ್ಮೂರಕ್ಕೋ ನಿಲ್ಲುತ್ತದಂತೆ … ಅಂತೆಕಂತೆಗಳಿಗೂ ಆಚೆ ಬದುಕಿದೆ ಮೆನೋಪಾಸ್ ತೀಕ್ಷ್ಣತೆಗೆ ಡಿಪ್ರೆಶನ್ ಸುಸೈಡ್ ಉದಾಹರಣೆಗಳೂ ಉಂಟು! ಈ ನಡುವೆ ಯುಟಿರಸ್ ಒಂದಿಷ್ಟು ಗಲಾಟೆ ಮಾಡಿದರೆ ವಿಶ್ರಾಂತಿ ಬಯಸಿದರೆ ಹಿಸ್ಟರೆಕ್ಟಮಿ- ಸರ್ಜರಿ ….. ಹಾರ್ಮೋನ್ ಏರುಪೇರು ಉಫ್ ಮುಗಿವ ಕತೆಯಲ್ಲ ! ಸರ್ವಶಕ್ತನಾದ ದೇವನೇತಮಾಷೆಗೂ ಹೆಣ್ಣಾಗದಿರು !=====================

ನಿಮ್ಮೊಂದಿಗೆ

ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು ಮಾಡಿರುವ ಬರಹಗಾರರಿಗೆಹೊಸ ಪತ್ರಿಕೆಯೊಂದಕ್ಕೆ ಬರೆಯುವ ಮನಸಿದ್ದಂತಿಲ್ಲ, ಅವರದೇನಿದ್ದರೂ ಈಗಾಗಲೇ ಎಸ್ಟಾಬ್ಲಿಶ್ ಆಗಿರುವ ಜನಪ್ರಿಯ ಪತ್ರಿಕೆಗಳಿಗೆ ಮಾತ್ರ ಬರೆಯುವ ಉದ್ದೇಶವಿದ್ದಂತಿದೆ. ಹಿರಿಯ ಬರಹಗಾರರ ಶ್ರೇಷ್ಠತೆಯ ವ್ಯಸನಕ್ಕೆಮದ್ದಿಲ್ಲ. ಆದರೆ ತಾವು ಬರೆಯದೇ ದೂರ ಉಳಿದು,ಸಂಗಾತಿಯ ಗುಣಮಟ್ಟದ ಬಗ್ಗೆ ಟೀಕಿಸುವುದನ್ನು ನಾನು ಒಪ್ಪುವುದಿಲ್ಲ.ಸೋ ನಿಮ್ಮ ಗುಣಮಟ್ಟವಿಲ್ಲ ಎನ್ನುವ ಟೀಕೆಗಳಿಗೆ ಉತ್ತರ ಕೊಡುತ್ತ ಕೂರಲು ನಾನು ಸಿದ್ದನಿಲ್ಲ…. ಕೋಳಿ ಕೂಗದೆಯೂ ಬೆಳಗಾಗುವುದು ಎನ್ನುವುದನ್ನು ಯಾರೂ ಮರೆಯಬಾರದು… ಇದುವರೆಗು ಸಂಗಾತಿಗೆ ಬರೆದವರಿಗು ಓದಿದವರಿಗು ನಾನು ಋಣಿ ಬರಲಿರುವ ಹೊಸ ವರ್ಷದಲ್ಲಿ ಮತ್ತಷ್ಟು ಬದಲಾವಣೆಗಳೊಂದಿಗೆ ಸಂಗಾತಿ ಹೊರಬರಲಿದೆ

ಸ್ವಾತ್ಮಗತ

ಹೈದರಾಬಾದ್ ಕರ್ನಾಟಕ 371ನೆ ಕಲಂ ತಿದ್ದುಪಡಿಯ ಬಗ್ಗೆ ಕೆ.ವು ಲಕ್ಕಣ್ಣವರ ಸಮಗ್ರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು..! ದಕ್ಷಿಣ ಕರ್ನಾಟಕಕ್ಕೆ ಉತ್ತರ ಕರ್ನಾಟಕವೆಂದರೆ ಮುಂಬೈ ಕರ್ನಾಟಕ ಹಿಂದುಳಿದ ಪ್ರದೇಶ. ಇನ್ನೂ ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಹೈದರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಜಾರಿ ಮಾಡಿರುವುದು. ಆದರೆ ಈ ೩೭೧ನೇ ಕಲಂ ಜಾರಿಯಾದರೂ ಈ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಗಗನಕುಸುಮವಾಗಿದೆ. ಈ ಕಾರಣಕ್ಕಾಗಿಯೇ ಅಲ್ಲಿಯ ಹೈದರಾಬಾದ್ ಕರ್ನಾಟಕ ಕೆಲ ನನ್ನ ಸ್ನೇಹಿತ ಹೋರಾಟಗಾರರು ಮತ್ತು ರೇಣುಕಾ ಹೆಳವರ ಮತ್ತು ಸ್ನೇಹಿತರು ನಾನು ಸಮಗ್ರ ಉತ್ತರ ಕರ್ನಾಟಕದ ಸಮಸ್ಯೆಯ ಬಗೆಗೆ ಬರೆಯುತ್ತಿದಂತೆ ಹೈದರಾಬಾದ್ ಕರ್ನಾಟಕದ ೩೭೧ನೇ ಕಲಂ ಕೆಲ‌ ವಿಷಯಗಳಲ್ಲಿ ಅನುಷ್ಠಾನವಾದರೂ ಸಮಗ್ರವಾಗಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸಾಕಾರವಾಗಿಲ್ಲ. ಇದು ಕೆಲ ರಾಜಕಾರಣಿಗಳ ಸಯಂ ಅಭಿವೃದ್ಧಿಗೆ ಮಾತ್ರ ಉಪಯೋಗವಾಗಿದೆ. ವೀರೇಂದ್ರ ಪಾಟೀಲರಾದಿಯಾಗಿ ಎಲ್ಲಾ ರಾಜಕಾರಣಿಗಳು ಈ ಬಗೆಗೆ ರಾಜಕೀಯ ಇಚ್ಛಾಶಕ್ತಿ ಪ್ರರ್ಧಶನ ಮಾಡಲಿಲ್ಲ. ಹೀಗಾಗಿ ಹೈದರಾಬಾದ್ ಕರ್ನಾಟಕ ಇನ್ನೂ ಹಿಂದುಳಿದೇ ಇದೆ. ಸಮಗ್ರ ಅಭಿವೃದ್ಧಿ ಗಗನಕುಸುಮವಾಗಿಯೇ ಇದೆ. ಹಾಗಾಗಿ ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಬಗೆಗೆ ಬರೆಯಿರಿ ಎಂದು ಹೇಳಿದರು. ಆ ಕಾರಣಕ್ಕಾಗಿ ಈ ಹೈದರಾಬಾದ್ ಕರ್ನಾಟಕದ ಬಗೆಗೆ ಬರೆಯಬೇಕಾಯಿತು. ಈ ಲೇಖನ ಬರೆಯಬೇಕಾಯಿತು. ಅದು ಹೀಗಿದೆ…– ಸಮಗ್ರ ಹೈದರಾಬಾದ್ ಕರ್ನಾಟಕ ಅಭಿವೃದ್ದಿಗಾಗಿಯೇ ೩೭೧ನೇ ಕಲಂ ಜಾರಿ ಯಾಗಿದ್ದು. ಇಷ್ಟಾದರೂ ಸಮಗ್ರವಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿಲ್ಲವಿನ್ನೂ… -ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ– ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಪೂರಕವಾಗಿ ಈ ಹಿಂದೆ ಸರಕಾರ ನೇಮಿಸಿದ ಹಲವಾರು ಸಮಿತಿಗಳು ವರದಿ ನೀಡಿವೆ. ೧೯೮೦ರಲ್ಲಿ ಮಾನ್ಯ ಶ್ರೀ ಗುಂಡುರಾವ್ ಅವರ ಸರಕಾರ ನೇಮಿಸಿದ ಶ್ರೀ ಎನ್.ಧರ್ಮಸಿಂಗ್ ಸಮಿತಿಯು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿನ ಅಸಮತೋಲನವನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಿ, ಈ ಭಾಗದ ಅಭಿವೃದ್ಧಿಗಾಗಿ ಒಂದು ವಿಷೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನಂತೆ ೧೯೯೨ ರಲ್ಲಿ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ವರ್ಷಕ್ಕೆ ೧೦ ರಿಂದ ೫೦ ಕೋಟಿ ರೂಪಾಯಿವರೆಗೆ ಅನುದಾನವನ್ನು ನೀಡಿ ಕೈ ತೊಳೆದು ಕೊಂಡಿತ್ತೇ ವಿನಃ ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವಂತಹ ಕೆಲಸ ಆಗಿರುವುದಿಲ್ಲ ಎನ್ನಬಹುದು… ತದ ನಂತರ ೨೦೦೨ರಲ್ಲಿ ಮಾನ್ಯ ಶ್ರೀ ಎಸ್.ಎಮ್.ಕೃಷ್ಣರವರ ನೇತೃತ್ವದ ಸರಕಾರವು ನೇಮಿಸಿದ ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಪ್ರಾದೇಶಿಕ ಅಸಮತೋಲನ ಕುರಿತು ಆಳವಾಗಿ ಅಧ್ಯಯನ ಮಾಡಿ ಸಲ್ಲಿಸಿರುವ ವರದಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶವು ಅಭಿವೃದ್ದಿಯಲ್ಲಿ ಮೈಸೂರು ಕರ್ನಾಟಕ ಮತ್ತು ಮುಂಬಯಿ ಕರ್ನಾಟಕಕ್ಕೆ ಹೋಲಿಸಿದಾಗ ನೂರು ವರ್ಷದಷ್ಟು ಹಿಂದುಳಿದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ… ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯು ರಾಜಕೀಯ ಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನರಿಗೆ ವಂಚಿಸುವ ಒಂದು ಚುನಾವಣಾ ವಿಷಯವಾಯಿತೇ ವಿನಃ ಆ ವರದಿಯನ್ನು ಸಂಪೂರ್ಣವಾಗಿ ಜಾರಿ ತರುವ ಮನಸ್ಸು ಸುಮಾರು ೨೦೦೨ ರಿಂದ ಇಲ್ಲಿಯವರೆಗೆ ಬಂದ ಯಾವ ಸರಕಾರಗಳು ಮಾಡಲಿಲ್ಲ… ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿರುವ ೧೭೫ ತಾಲ್ಲೂಕುಗಳನ್ನು ಅಭಿವೃದ್ಧಿ ದೃಷಿಯಿಂದ ನಾಲ್ಕೂ ವಿಧಗಳಾಗಿ ವಿಂಗಡಿಸಲಾಗಿದೆ. ೧. ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು, ೨. ಹಿಂದುಳಿದ ತಾಲ್ಲೂಕುಗಳು, ೩. ಅತೀ ಹಿಂದುಳಿದ ತಾಲ್ಲೂಕುಗಳು ಮತ್ತು ೪. ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ೬೧ ತಾಲ್ಲೂಕುಗಳು ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ೧೧೪ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಎಂದೂ ಅವುಗಳಲ್ಲಿ ೩೫ ಹಿಂದುಳಿದ ತಾಲ್ಲೂಕುಗಳು, ೪೦ ಅತೀ ಹಿಂದುಳಿದ ತಾಲ್ಲೂಕುಗಳು ಹಾಗೂ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ವಿಶ್ಲೇಶಣೆ ನೀಡಲಾಗಿದೆ. ಇದೇ ರೀತಿಯಲ್ಲಿ ನಮ್ಮ (ರಾಯಚೂರು) ಜಿಲ್ಲೆಯನ್ನು ಪರಿಗಣಿಸಿದರೆ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಂದು ಅತೀ ಹಿಂದುಳಿದ ತಾಲ್ಲೂಕು ರಾಯಚೂರು ತಾಲ್ಲೂಕಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ನಾಲ್ಕು ತಾಲ್ಲೂಕುಗಳೆಂದರೆ ಸಿಂಧನೂರು, ಲಿಂಗಸಗೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳು ಇರುತ್ತವೆ… ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ೩೪ ತಾಲ್ಲೂಕುಗಳಲ್ಲಿ ಕೇವಲ ಮೂರು ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ಉಳಿದ ೩೧ ತಾಲ್ಲೂಕುಗಳು ಹಿಂದುಳಿದವು ಎಂದಿದೆ. ಹೈದ್ರಾಬಾದ ಕರ್ನಾಟಕದ ಶೇಕಡ ೯೧.೧೭ ರಷ್ಟು ತಾಲ್ಲೂಕುಗಳು ಹಿಂದುಳಿದಿವೆ ಎಂದು ಸ್ಪಷ್ಟವಾಗುತ್ತದೆ. ರಾಜ್ಯದ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ೨೧ ತಾಲ್ಲೂಕುಗಳು ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿವೆ ಎನ್ನುವದೇ ಅತೀ ಸೋಜಿಗದ ವಿಷಯವಾಗಿದೆ. ಡಾ: ಡಿ.ಎಮ್.ನಂಜುಂಡಪ್ಪನವರ ವರದಿಯು ರಾಜ್ಯದಲ್ಲಿ ವಿಭಾಗವಾರು ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿದ (ಯಾವುದೇ ಹಿಂದುಳಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು ಮೈಸೂರು ಭಾಗದಲ್ಲಿವೆ. ಅದೇ ರೀತಿ ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿರದ (ಯಾವುದೇ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು (ಅವಿಭಜಿತ ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ) ಹೈದ್ರಾಬಾದ-ಕರ್ನಾಟಕದಲ್ಲಿವೆ ಎಂಬುದು ಈ ಭಾಗದ ಜನರಿಗೆ ಚಿಂತೆಗೀಡು ಮಾಡಿದೆ… ಐತಿಹಾಸಿಕ ಹಿನ್ನಲೆ:- ಹೈದ್ರಾಬಾದ-ಕರ್ನಾಟಕ ಪ್ರದೇಶವು ಅಭಿವೃದ್ದಿ ಕಾಣದೇ ಹಿಂದುಳಿಯಲು ಈ ಕೆಳಗಿನ ಕಾರಣಗಳನ್ನು ಕೊಡಬಹುದು. ಹೈದ್ರಾಬಾದ-ಕರ್ನಾಟಕವು ಅತ್ಯಂತ ಸಂಪದ್ಭರಿತ ನಾಡಾಗಿದ್ದು, ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿರುವ ಪ್ರದೇಶವಾಗಿದೆ. ಇಂತಹ ಸಂಪದ್ಭರಿತ ನಾಡಿನ ಮೇಲೆ ತಮ್ಮ ಹಿಡಿತ ಸಾದಿಸಲು ಇಲ್ಲ ಯಾವಾಗಲೂ ಯುದ್ದ ನಡಿತಾ ಇದ್ದದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಈ ಪ್ರದೇಶವನ್ನು ತೆಲುಗು ಭಾಷಿಗನಾದ ಶ್ರೀ ಕೃಷ್ಣದೇವರಾಯನ ವಂಷಸ್ಥರಿಂದ, ಉರ್ದು/ಪಾರ್ಸಿ ಭಾಷೆಯನ್ನು ಮಾತನಾಡುವ ಬಿಜಾಪುರದ ಸುಲ್ತಾನರು ಮತ್ತು ಹೈದ್ರಾಬಾದ ಸಂಸ್ಥಾನದ ನಿಜಾಮನ ವಂಶಸ್ಥರು ಸುಮಾರು ೭೦೦ ವರ್ಷಗಳ ಕಾಲ ಆಳ್ವಿಕೆ ನಡೆಸಿರುತ್ತಾರೆ. ಹೀಗಾಗಿ ಈ ಭಾಗದ ಜನರು ಬೇರೆಯವರ ಆಳ್ವ್ವಿಕೆಯ ದಾಸ್ಯಕ್ಕೊಳಗಾಗಿ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು. ಇಲ್ಲಿ ಲಬ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಜೀವನ ಉತ್ತಮಗೊಳಿಸುವ ಕೆಲಸ ನಮ್ಮನ್ನಾಳಿದ ಯಾವ ರಾಜ ಮಹಾರಾಜರು ಮತ್ತು ಪ್ರಜಾಪ್ರಭುತ್ವ ಸರಕಾರಗಳು ಮಾಡಲಿಲ್ಲ… ಶೈಕ್ಷಣಿಕ ಸಮಸ್ಯೆಗಳು:- ಸ್ವಾತಂತ್ರ್ಯಪೂರ್ವದಲ್ಲಿ ಆಳುವ ವರ್ಗದ ಆಡಳಿತ ಭಾಷೆ ಒಂದಾದರೆ, ಇಲ್ಲಿಯ ಜನರ ಆಡುವ ಭಾಷೆ ಮತ್ತೊಂದು ಆಗಿತ್ತು. ಹೀಗಾಗಿ ನೂರಾರು ವರ್ಷಗಳ ಕಾಲ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ೧೯೪೮ ರವರೆಗೂ ಇಡೀ ಹೈದ್ರಾಬಾದ-ಕರ್ನಾಟಕದಲ್ಲಿ ಕೇವಲ ಮೂರೇ ಮೂರು ಹೈಸ್ಕೂಲಗಳಿದ್ದವು ಮತ್ತು ಶಿಕ್ಷಣವು ಖಡ್ಡಾಯವಾಗಿ ಉರ್ದು ಮಾದ್ಯಮದಲ್ಲೇ ಪಡೆಯಬೇಕಾಗಿತ್ತು ಎಂದರೆ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. ತೀರ ಇತ್ತೀಚಿನವರೆಗೆ ಅಂದರೆ ೧೯೯೦ ರ ವರೆಗೆ ತಾಲ್ಲೂಕಿಗೆ ಎರಡು-ಮೂರು ಪ್ರೌಡಶಾಲೆಗಳಿದ್ದವು ಮತ್ತು ಇಂದಿನವರೆಗೂ ಕೂಡ ಎಷ್ಟೋ ಶಾಲೆಗಳು ಏಕೋಪಾದ್ಯಯ ಶಾಲೆಗಳಾಗಿವೆ. ಇಂದಿಗೂ ನಮ್ಮ ಭಾಗದ ಬಹಳಷ್ಟು ಶಾಲಾ/ಕಾಲೇಜುಗಳು, ಶಿಕ್ಷಕರ/ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿರುವ ೩೯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಸುಮಾರು ೪೦೦ ಉಪನ್ಯಾಸಕರ ಹುದ್ದೆಗಳಲ್ಲಿ ೧೯೨ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿ ರಾಜ್ಯದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ೪೦೦೦ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ತುಂಬಲಾಗಿದ್ದು ಅವುಗಳಲ್ಲಿ ೨೫೦೦ ಹುದ್ದೆಗಳು ಹೈದ್ರಾಬಾದ-ಕರ್ನಾಟಕ ವಿಭಾಗದಲ್ಲಿ ಖಾಲಿ ಇದ್ದವು. ಇಡೀ ಕೊಪ್ಪಳ ಜಿಲ್ಲೆಗೆ ಇವತ್ತು ಕೂಡ ಒಂದೇ ಒಂದು ವೃತ್ತಿಪರ ಕಾಲೇಜುಗಳಿಲ್ಲದಿರುವದು ವಿಪರ್ಯಾಸವೇ ಸರಿ. ಈ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿ ಅನಕ್ಷರತೆ ಮಡುಗಟ್ಟಿದೆ… ನೀರಾವರಿ ಸಮಸ್ಯೆ:- ಹೈದ್ರಾಬಾದ-ಕರ್ನಾಟಕವು ನದಿಗಳ ಬೀಡು ಎಂದರೆ ಅತೀಶಯೋಕ್ತಿಯಾಗಲಾರದು. ಈ ಭಾಗದಲ್ಲಿ ತುಂಗೆ-ಭದ್ರೆ, ಕೃಷ್ಣೆ, ಭೀಮಾ, ಕಾರಂಜಾ ಇವೆಲ್ಲ ನದಿಗಳು ಹರಿಯುತ್ತವೆ. ಇಲ್ಲಿನ ಜನರ ದುರ್ದೈವವೆಂದರೆ, ಈ ನದಿಗಳಲ್ಲಿ ಹರಿಯುವ ನೀರು ರೈತರ ಹೊಲಗಳಿಗೆ ತಲುಪದೇ ಇರುವದು ನಮ್ಮ ಸರಕಾರಗಳ ನಿರ್ಲಕ್ಷ್ಯ ಎನ್ನಬಹುದು. ನೀರಾವರಿ ಯೋಜನೆಯಡಿಯಲ್ಲಿ ತುಂಗಾ-ಭದ್ರಾ ಎಡದಂಡೆ ಕಾಲುವೇ ನಿರ್ಮಿಸಿದ್ದು, ಅದು ರೈತರ ಹೊಲಗಳಿಗೆ ಉಪಯೋಗವಾದದ್ದಕ್ಕಿಂತ ಬೇಳೆಗಳನ್ನು ಹಾಳು ಮಾಡಿದ್ದೆ ಹೆಚ್ಚು, ಯಾಕೆಂದರೆ ವರ್ಷದಲ್ಲಿ ಎರಡು-ಮೂರು ಸಲ ಅದು ಖಂಡಿತವಾಗಿ ಒಡೆದು ಹೋಗುತ್ತದೆ. ಅದೇ ಪರಸ್ಥಿತಿ ನಾರಾಯಣಪುರ ಕೃಷ್ಣ ಬಲದಂಡೆ ಕಾಲುವೆಯದ್ದು ಆಗಿದೆ. ಇನ್ನೂ ಬಾಕಿ ಉಳಿದಿರುವ ನೀರಾವರಿ ಯೋಜನೆಗಳು ಹಲವಾರು, ಅವುಗಳಲ್ಲಿ ಮುಖ್ಯವಾದವುಗಳೆಂದರೆ ಭೀಮಾ ಬ್ಯಾರೇಜ ನಿರ್ಮಾಣ, ಕಾರಂಜಾ ಏತ ನೀರಾವರಿ ಯೋಜನೆ, ರಾಂಪುರ ಏತನೀರಾವರಿ ಯೋಜನೆ, ನಂದವಾಡಗಿ ಏತ ನೀರಾವರಿ ಯೋಜನೆ, ಹೀರೆ ಹಳ್ಳ ಯೋಜನೆ ಮುಂತಾದವು ಹಾಗೆ ನೆನೆಗುದಿಗೆ ಬಿದ್ದಿವೆ. ರಾಜ್ಯ ಸರಕಾರಗಳು ಮನಸ್ಸು ಮಾಡಿದರೆ ಈ ಭಾಗದ ಇಂಚಿಂಚು ಭೂಮಿಯನ್ನು ನೀರಾವರಿಗೊಳಪಡಿಸಬಹುದಾದಷ್ಟು ನೀರು ಇಲ್ಲಿ ಲಬ್ಯವಿದೆ… ನಿರುದ್ಯೋಗ ಸಮಸ್ಯೆ:- ಈ ಭಾಗದ ರೈತರು, ಕೂಲಿಕಾರ್ಮಿಕರು ಹೊಟ್ಟೆಪಾಡಿಗಾಗಿ ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸಹಕುಟುಂಬ ಪರಿವಾರ ಸಮೇತ ಮಹಾನಗರಗಳಿಗೆ ಉದ್ಯೋಗವನ್ನರಸಿ ಗೂಳೆ ಹೋಗುವದು ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾದ್ಯವಾಗದೇ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಂಚಿತರಾಗಿ ಸೋತಿರುವದು ಸ್ಪಷ್ಟ. ಇದರಿಂದಾಗಿ ಈ ಭಾಗದ ಸರಕಾರಿ ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಛೇರಿಗಳಲ್ಲಿ ಜವಾನರಿಂದ ಹಿಡಿದು ಅಧಿಕಾರಿಗಳವರೆಗೂ ಸರಕಾರಿ ನೌಕರರೆಲ್ಲರೂ ರಾಜ್ಯದ ಬೇರೆ ಭಾಗದವರೇ ಆಗಿರುತ್ತಾರೆ. ರಾಜ್ಯ ಸರಕಾರ ಜಿಲ್ಲಾವಾರು ನೇಮಕಾತಿ ಮಾಡಿಕೊಳ್ಳುವ ಸರಕಾರಿ ಹುದ್ದೆಗಳ ಅಂಕಿ ಅಂಶಗಳನ್ನು ನೋಡಿದಾಗ ಆಶ್ಚರ್ಯವಾಗುವ ಸಂಗತಿ ಗೋಚರಿಸುತ್ತದೆ. ಉದಾಹರಣೆಗೆ ಇತ್ತೀಚಿನ ವರ್ಷಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರ ವಿವರಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ವರ್ಷ ಖಾಲಿ ಹುದ್ದೆಗಳ ವಿವರ ನೇಮಕಾತಿ ಮಾಡಿದ ಹುದ್ದೆಗಳ ವಿವರ ರಾಯಚೂರು ಜಿಲ್ಲೆಯವರೇ ನೇಮಕವಾದವರ ಸಂಖ್ಯೆ ಶೇಕಡಾವಾರು (%) ೨೦೦೬-೦೭ ೬೯೬ ೬೯೬ ೧೫೧ ೨೧.೬ ೨೦೦೭-೦೮ ೧೪೬೩ ೧೪೬೩ ೧೦೪ ೭.೧ ೨೦೦೮-೦೯ ೧೧೫೪ ೧೧೫೪ ೭೫ ೬.೨ ಇದರಿಂದ ಈ ಭಾಗದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವದು ಕಳವಳಕಾರಿ ವಿಷಯವಾಗಿದೆ… ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲು ಒಂದೇ ಒಂದು ಪರಿಹಾರ ಎಂದರೆ ಸಂವಿಧಾನದ ೩೭೧ ನೇ ಕಲಂ ತದ್ದುಪಡಿ ಮಾಡುವ ಮೂಲಕ ಮುಲ್ಕಿ ಕಾನೂನು ಜಾರಿಮಾಡಿ ಸ್ಥಳೀಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ನೀಡುವ ಅವಶ್ಯಕತೆ ಇರುತ್ತದೆ. ಮುಲ್ಕಿ ಕಾನೂನು:- ಇಲ್ಲಿ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಅಂದು ಹೈದ್ರಾಬಾದ ರಾಜ್ಯದ ಆಡಳಿತ ಭಾಷೆ ಉರ್ದುವಾಗಿತ್ತು ಮತ್ತು ಬಹು ಸಂಖ್ಯಾತ ಜನರ ಭಾಷೆ ತೆಲುಗು, ಮರಾಠಿ ಮತ್ತು ಕನ್ನಡವಾಗಿತ್ತು, ಇದರಿಂದಾಗಿ ಎಲ್ಲರಿಗೂ ಶಿಕ್ಷಣ ದಕ್ಕುವದು ಕಷ್ಟವಾಗುತಿತ್ತು. ಆ ಸಂದರ್ಭದಲ್ಲಿ ಸರಕಾರಿ ಹುದ್ದೆಗಳಿಗೆ ನೇಮಕವಾಗುತ್ತಿದ್ದವರು ಹೆಚ್ಚಿನ ಸಂಖ್ಯೆಯಲಿ ಉತ್ತರ ಭಾರತದ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಅಭ್ಯರ್ಥಿಗಳಾಗಿದ್ದರು. ಇದನ್ನು ಮನಗೊಂಡು ಹೈದ್ರಾಬಾದ

ಪುಸ್ತಕ ವಿಮರ್ಶೆ

ಕೃತಿ:ಮೆಟ್ಟಿಲಿಳಿದು ಹೋದ ಪಾರ್ವತಿ’..! ಲೇಖಕಿ: ಡಾ.ಕಮಲಾ ಹೆಮ್ಮಿಗೆ ಕೆ.ಶಿವು ಲಕ್ಕಣ್ಣವರ ‘ಅಗ್ನಿದಿವ್ಯ’ದಿಂದೆದ್ದು ಬಂದ ಹೆಣ್ಣುಗಳ ಕಥೆಗಳಿವು ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’..! ಕಥೆ ಕಟ್ಟುವುದು ಧ್ಯಾನದ ಪ್ರತೀಕ. ತಾಳ್ಮೆ, ಸಾಮಾಜಿಕ ಕಳಕಳಿ, ಪಾತ್ರದ ವೈವಿಧ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳ ನಿಪುಣತೆಯನ್ನು ಬೇಡುತ್ತದೆ ಕಥೆ ಕಟ್ಟುವ ಕಲೆ. ಆ ಕಲೆ ಮತ್ತು ವೈವಿಧ್ಯ ಮತ್ತು ಕಥೆ ಕಟ್ಟುವ ತಾಳ್ಮೆಯ ನಿಪುಣತೆಯನ್ನು ಕಮಲಾ ಹೆಮ್ಮಿಗೆಯವರು ಉಳ್ಳವರುವರಾಗಿದ್ದಾರೆ… ಸೂಕ್ಷ್ಮ ಕೆನ್ವಾಸಿನಲ್ಲಿ ಒಡಮೂಡುವ ಚಿತ್ರ ಮತ್ತು ಅತೀ ಸೂಕ್ಷ್ಮ ಸಂಗತಿಗಳ ಅತಿ ಅಗತ್ಯತೆಗಳನ್ನು ಕಥೆ ಕೇಳುತ್ತದೆ. ಕಥೆಯ ಸೂಕ್ಷ್ಮತೆಯನ್ನು ಕಮಲಾ ಹೆಮ್ಮಿಗೆ ಬಲ್ಲವರಾಗಿದ್ದಾರೆ. ಮತ್ತು ಆ ಸೂಕ್ಷ್ಮ ಸಂಗತಿಗಳನ್ನು ಪೂರೈಸಿದ್ದಾರೆ ಇಲ್ಲಿ… ಕಮಲಾ ಹೆಮ್ಮಿಗೆಯವರು ತಮ್ಮ ಜೀವನದುದ್ದಕ್ಕೂ ಇಟ್ಟುಕೊಂಡೇ ಜೀವಿಸಿದ್ದವರಾಗಿರೆ. ಅದಕ್ಕಾಗಿ ಆ ಎಲ್ಲಾ ಸೂಕ್ಷ್ಮಗಳನ್ನೂ ಉಳ್ಳವರಾಗಿದ್ದಾರೆ… ಡಾ.ಕಮಲಾ ಹಮ್ಮಿಗೆಯವರು ಸಾಹಿತ್ಯ ಪ್ರಕಾರಗಳ ಎಲ್ಲಾ ವಿಧದ ಸಾಹಿತ್ಯ ರಚನೆ ಮಾಡಿದರೂ ಅವರು ಜಾನಪದ ಸಾಹಿತ್ಯಕ್ಕೆ ಬಹು ಒಲವು ಕೊಟ್ಟವರು… ಡಾ.ಕಮಲಾ ಹಮ್ಮಿಗೆಯವರ ಪ್ರತಿಯೊಂದು ಬರಹಗಳಲ್ಲೂ ಮುಖ್ಯವಾಗಿ ‘ಹೆಣ್ಣು’ ಪ್ರಧಾನವಾಗಿ ಇದ್ದೇ ಇರುತ್ತಾಳೆ. ಆ ಹೆಣ್ಣು ಗಟ್ಟಿಗಿತ್ತಿಯಾಗಿರುತ್ತಾಳೆ ಕೂಡ… ಈಗ ಮಲಯಾಳಂನ ಗ್ರೇಸಿಯವರ ಈ ಪುಸ್ತಕವನ್ನು ಡಾ.ಕಮಲಾ ಹಮ್ಮಿಗೆಯವರು ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ… ಇಲ್ಲಿ ಬರುವ ಗಟ್ಟಗಿತ್ತಿ ‘ಹೆಣ್ಣು’ ‘ಪಾತ್ರ’ ಮಾತ್ರವಾಗಿಲ್ಲ. ಅವಳು ಸ್ವತಃ ಡಾ.ಕಮಲಾ ಹಮ್ಮಿಗೆಯವರೇ ಆಗಿದ್ದಾರೆ… ಈ ಕಥೆ ಸಂಕಲನದಲ್ಲಿ ಎಲ್ಲೂ ಸಂಕೀರ್ಣವಾದ ವಾಕ್ಯಗಳಿಲ್ಲ. ಗೋಜು ಗೋಜಲುಗಳಾದ ಸಂವೇದನೆಗಳಿಲ್ಲ. ಮೂಲ ಕೃತಿಯಾದ ಗ್ರೇಸಿಯವರ ‘ಪದಿಯೆರಂಗಿ ಪೋಯಾ ಪಾರ್ವತಿ’ ಕೃತಿಯ ನೆರಳಿನಂತಿಯೂ ಇಲ್ಲ. ಅದು ಕಮಲಾ ಹಮ್ಮಿಗೆಯವರ ಸ್ವಂತ ಅಭಿವ್ಯಕ್ತಿಯೂ ಅಗಿದೆ. ಈ ಕಮಲಾ ಹಮ್ಮಿಗೆಯವರ ಅನುವಾದಿತ ಕೃತಿ ಸರಳ ಭಾಷೆಯಲ್ಲಿದೆ… ಕಥೆಗಾರರಾಗಿ, ಜಾನಪದ ವಿದುಷಿಯಾಗಿ, ಕವಿಯಿತ್ರಿಯಾಗಿ, ಅನುವಾದಕ ಲೇಖಕಿಯಾಗಿ, ತಮ್ಮ ಹೆಜ್ಜೆ ಗುರುತು ಮೂಡಿಸಿರುವ ಡಾ.ಕಮಲಾ ಹಮ್ಮಿಗೆಯವರು ಈ ಅನುವಾದಿತ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆಯವರು… ಸವಾಲುಗಳಿಗೆಲ್ಲ ಎದೆಯೊಡ್ಡಿ, ಅವುಗಳನ್ನೆಲ್ಲಾ ಹಿಂದಿಕ್ಕಿ ಈ ಅಕ್ಷರ ಜಗತ್ತಿನಲ್ಲಿ ಸಂಚರಿಸಿದ್ದು ಅವರ ವೈಶಿಷ್ಟ್ಯವೂ ಹೌದು… ಖ್ಯಾತ ಲೇಖಕಿ ಶಶಿ ದೇಶಪಾಂಡೆಯವರ ‘ಭಯದ ಮೂಲ ಕತ್ತಲಲ್ಲ’ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಸೀತಾಕಾಂತ ಮಹಾಪಾತ್ರರ ‘ಶಬ್ದಭರಿತ ಆಕಾಶ’ ಕೃತಿಗಳ ಅನುವಾದದಿಂದ ಸಾಹಿತ್ಯ ಜಗತ್ತಿನಲ್ಲಿ ಹೆಸರು ಡಾ.ಕಮಲಾ ಹಮ್ಮಿಗೆಯವರು ‘ಅಗ್ನಿಶಾಕ್ಷಿ’ಯ ಮೂಲ ಮಲಯಾಳಂನ ಲಲಿತಾಂಬಿಕಾ ಅಂತರ್ಜನಂ ಮತ್ತು ಇದೇ ಮಲಯಾಳಂನ ಕಥೆಗಳು ಕಮಲಾದಾಸರ ‘ಗಂಧದ ಗಿಡಗಳು’ ಕೃತಿಗಳನ್ನು ಸುಲಭವಾಗಿ ಮತ್ತು ಸರಳವಾಗಿ ಕನ್ನಡಕ್ಕೆ ತಂದವರು ಕಮಲಾ ಹಮ್ಮಿಗೆಯವರು… ಶ್ರೀಮತಿ ಕಮಲಾದಾಸರ ಉತ್ತರಾಧಿಕಾರಿಯಾಗಿರುವ ಶ್ರೀಮತಿ ಗ್ರೇಸಿಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯನ್ನು ಕನ್ನಡ ಓದುಗರಿಗೆ ಉಣಬಡಿಸಾದ್ದಾರೆ ಕಮಲಾ ಹಮ್ಮಿಗೆಯವರು… ತಮ್ಮನ್ನು ಓರ್ವ ಸ್ತ್ರೀವಾದಿ ಎಂದು ಹೇಳಿಕೊಳ್ಳದಿದ್ದರೂ ಲಿಂಗ ತಾರತಮ್ಯ ಸಮಾಜದ ಅಘೋಷಿತ ನೀತಿ ಸಂಹಿತೆಗಳ ಉಲ್ಲಂಘನೆ, ಪುರಾಣ ಭಂಜನ, ಇವುಗಳಿಂದ ‘ಗೇಸಿ’ಯವರು ವಿಶಿಷ್ಟ ಛಾಪನ್ನು ಒತ್ತಿರುವುದು ಇಲ್ಲಿಯ ಕಥೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿವೆ ಇಲ್ಲಿಯ ‘ಒಂದು ಸತ್ಯಸಂಧ ಪುಟದ ನೆರಳು’ ಮತ್ತು ‘ಪಾಂಚಾಲಿ’ ಕಥೆಗಳು… ‘ಪಾಂಚಾಲಿ ಕಥೆಯ ನಾಯಕನಲ್ಲಿ ಪಾಂಡವರ‌ ಗುಣ ಲಕ್ಷಣಗಳು ಇವೆ! ಆದುನಿಕ ಭೂಮಿಕೆಯ ಇಲ್ಲಿಯ ನಾಯಕಿ ಐದು ಮಂದಿಯಲ್ಲಿ ಆಸಕ್ತಿ ತೋರಿ, ಕಡೆಗೆ ‘ಫಲ್ಗುಣ’ನನ್ನು ವರಿಸುತ್ತಾಳೆ! ಆದರೆ ಕಡೆಗೂ ಆಕೆ ಬಯಸುವುದು ಕಷ್ಟಗಳಿಗೆ ಕಿವಿಯಾಗುವ ಸಖ ‘ಕೃಷ್ಣನನ್ನು! ಮುಗ್ಧ ಬದುಕುಗಳು ನಗರದಲ್ಲಿ ಮೋಸಗಾರರಿಂದ ಹೇಗೆ ನಾಶವಾಗುತ್ತವೆ ಎಂಬುದನ್ನು ‘ದೂರದಿಂದ ಬಂದ ಜಾದೂಗಾರ’ ಹೇಳುತ್ತದೆ. ಇಲ್ಲಿ ಬರುವ ‘ಇಂದ್ರಜಾಲ’ ಅಕ್ಷರಶಃ ನಿಜವಲ್ಲದಿರಬಹುದು, ಆದರೆ ‘ಕಾಪಟ್ಯ’ ಕಣ್ಣಿಗೆ ಹೊಡೆಯುವ ಅಂಶ. ಪಿಂಗಾಣಿ ಬಟ್ಟಲು, ಬಿದ್ದು ಛಿದ್ರವಾದಂತೆ ಭಾಸವಾಗಿ ಮನ ಮರುಕ ಪಡುತ್ತದೆ… ‘ಗ್ರೇಸಿ’ಯವರಿಗೆ ಕಮಲಾದಾಸರಂತೆ ಕಾಮವೊಂದು ವ್ಯಸನವಲ್ಲ..ಬದುಕಿನ ವಿವಿಧ ಮಗಲಗಳೂ ಮುಖ್ಯವಾಗುತ್ತವೆ. ಓದುಗರಿಗೆ’ ಶಾಕ್’ ನೀಡುವ ಗೋಜಿಗವರು ಹೋಗರು. ‘ಅಳಿದ ಮೇಲೆ’ ಎಂಬ ಕಥೆಯನ್ನೇ ನೋಡಿದರೂ ಇದು ಸ್ಪಷ್ಟವಾಗುವುದು. ಗಂಡ, ತಾಯಿ, ತಂದೆ ಎಲ್ಲರೂ ಪ್ರತಿಕ್ರಿಯಿಸುವ ರೀತಿಯನ್ನು ತೀರಾ ವಾಸ್ತವವಾಗಿ, ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಇಲ್ಲೂ ತಾಯಿ ಕೂಡ ತನ್ನ ಹೆತ್ತ ಮಗಳ ದುಃಖವನ್ನು ಅರಿಯಲು ಯತ್ನಸುಲೆಸುದಿಲ್ಲವಲ್ಲ ಶವದ ‘ಸ್ವಗತ’ ಕಥೆ ಸಶಕ್ತವಾಗಿದೆ… ನನ್ನನ್ನು ತೀರಾ ಸೆಳೆದಿದ್ದೆಂರೆ ‘ಹೀಗೊಂದು ಜಾಗ’! ಆ ತಂದೆಯಿಲ್ಲದ ಪುಟ್ಟ ಹುಡುಗಿ, ಭ್ರಮಿಷ್ಠ ತಾಯಿ ನೋಡಿಕೊಳ್ಳುವ ಅನಿಯಮ್ಮನೆಂಬ ಹೆಂಗಸು, ಇದಿಷ್ಟೇ ಸೀಮಿತ ಜಗತ್ತು! ಒಮ್ಮೆ ಇದುರಿಗಿದ್ದ ಮನೆಯಲ್ಲಿ ಪತ್ನಿ ಮನೆಯಲ್ಲಿರದಾಗ ನಡೆದ ಕೆಲಸದಾಕೆಯೊಂದಗಿನ ಪತಿಯ ಭಾನಗಡಿ, ಹುಡುಗಿಯ ಮನ ಕದಕಿ, ಗವಾಕ್ಷಿ ಮುಚ್ಚಿಡುವುದು, ಆಕೆ ಪುಸ್ತಕಗಳಲ್ಲಿ ಮುಳುಗುವುದು, ತಾಯಿಯ ಸಾವು ಕೂಡ ಏನೂ ಅನ್ನಿಸದೆ, ಬೃಹದ್ಗಂಥದೊಳಗೊಂದು ಪುಟವಾಗಿ ಸೇರಿಹೋಗುವುದು… ಅಬ್ಬ! ದೀಡು ಪುಟದ ಕಥೆಯಲ್ಲಿ ಅದ್ಭುತ ‘ಫ್ಯಾಂಟಸಿ’ ಬದುಕಿನ ‘ಒಜ್ಜೆ’ ಇವನ್ನೆಲ್ಲಾ ಗ್ರೇಸಿಯವರು ಸುಲಲಿತವಾಗಿ ಮತ್ತು ಸರಳವಾಗಿ ಧ್ವನಿಪೂರ್ಣವಾಗಿ ಹೇಗೆ ಚಿತ್ರಿಸಿದ್ದಾರೆ! ಇನ್ನು ‘ಅರುಂಧತಿ’ಯಂಥ ಎಷ್ಟೋ ಹೆಣ್ಣುಗಳಿಗೆ ಗ್ರೇಸಿಯವರು ಧ್ವನಿಯಾಗಿದ್ದಾರೆ. ಆ ಧ್ವನಿಯನ್ನೇ ನಮ್ಮ ಡಾ.ಕಮಲಾ ಹಮ್ಮಿಗೆ ಕನ್ನಡಕ್ಕೆ ತಂದಿದ್ದು ಸ್ತುತಾರ್ಹ. ಇಲ್ಲಿ ಆಕ್ರೋಶವಿರದೇ ತೀವ್ರ ಅನುಕಂಪವಿದೆ. ಮನೋವಿಶ್ಲೇಷಣೆಯ ನಿರೂಪಣೆ ಇದೆ… ‘ಪರದೇಶಿಯ ಪ್ರಸಂಗ’, ‘ಬೆಕ್ಕು’ ಇವುಗಳೂ ಕೂಡ. ಅರೆ ವಾಸ್ತವವಾಗಿ ಹಾಗೂ ಕಾಲ್ಪನಿಕತೆಗಳ ನಡುವೆ ಸುಳಿವ ಕಥೆಗಳಿವು. ತೃತೀಯ ಲಿಂಗಿಯ ಅಳಲನ್ನು ಬಹುಶಃ ಮೊದಲು ಹೇಳಿದ ಕಥೆಗಳಿವು… ‘ಬೆಕ್ಕು’ ಮೂರನೇ ‘ಅವನ’ ಕುರಿತದ್ದು. ಗಂಡನಿಗೆ ಪತ್ನಿ, ಬೆಕ್ಕಿನಂತೆ ಕಾಣುವುದು, ಬಹು ದೊಡ್ಡ ‘ಐರನಿ’ಯಾಗಿದೆ. ಇಲ್ಲಿಯ ‘ಅಗ್ನಿಚಾಮುಂಡಿ’ ಒಂದು ದೀರ್ಘ ಮತ್ತು ಸಂಕೀರ್ಣ ಕಥೆ. ಧರ್ಮದಾಂತರ, ನಂತರದ ಘಟಕಗಳು, ಸರ್ಪಾರಾಧನೆ (ಲೈಂಗಿಕತೆಯ ಸಂಕೇತವೂ ಆಗುವುದು) ಅಜ್ಜನ ವಾಸ್ತವಿಕ ದೃಷ್ಟಿಕೋನ, ಹುಡುಗಿಯ ದುರಂತ, ಇವೆಲ್ಲವನ್ನೂ ಚಿತ್ರಮಯ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ ಗ್ರೇಸಿ. ಈ ಗ್ರೇಸಿಯವರ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆ. ಇದು ಅತ್ಯಂತ ಕುತೂಹಲಕಾರಿ ನಿರೂಪಣೆಯಿಂದ ಮಹತ್ವದ್ದಾಗಿದೆ… ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಅಲ್ಲಲ್ಲ ಮನದ ಮೆಟ್ಟಿಲಿಂದ ಇಳಿದು ಹೋದ ‘ಸಖಿ’ಯ ವೃತ್ತಾಂತವಿದು! ಇನ್ನು ‘ನಕ್ಷತ್ರ ಜಾರುವ ಸಮಯ’ದ ಬಗೆಗೆ ರಹಸ್ಯವೊಡೆಯಲಾರೆನಾದರೂ, ಗಂಡನ ಬಗೆಗೆ ಅಸಹನೆ ತಾಳಿದ ಹೆಣ್ಣೋರ್ವಳ ಉರಿಯಿದು ಎಂದಷ್ಟೇ ಹೇಳಿ ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಬಗೆಗಿನ ವಿಮರ್ಶೆಯನ್ನು ನಿಲ್ಲಿಸುವೆ! ಗದ್ಯವಲ್ಲ ಇದು ಪದ್ಯವೂ ಕೂಡ ಹೌದು… ಕೊನೆಯದಾಗಿ ಡಾ.ಕಮಲಾ ಹಮ್ಮಿಗೆಯವರ ಪ್ರತಿ ‘ಬರಹ’ಗಳಲ್ಲೂ ‘ಹೆಣ್ಣು’ವೊಬ್ಬಳು ಇರುತ್ತಾಳೆ. ಈ ಕಥಾ ಸಂಕಲನದಲ್ಲೂ ಕೂಡ ಆ ‘ಹೆಣ್ಣಿ’ನ ಮೆಲಕು ಇದೆ. ಹೀಗೆ ಹೇಳುತ್ತಾ ಡಾ.ಕಮಲಾ ಹಮ್ಮಿಗೆ ಕೇರಳದಿಂದ ಹಿಂತಿರುಗಿ ಬರುವಾಗ ಇಂತಹ ಮತ್ತಷ್ಟು ‘ಕೃತಿ’ಗಳನ್ನು ಹೊತ್ತು ತರಲಿ ಎಂದು ಆಸಿಸುತ್ತಾ ಇಲ್ಲಿಗೆ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯ ನೆನಕೆಗಳನ್ನು ಮುಗಿಸುವೆ… -======

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಸಿಟ್ಟು ಸಿಟ್ಟು ಒಬ್ಬ ಮನುಷ್ಯ ಅಂದಮೇಲೆ ಅವನಿಗೆ ಎಲ್ಲಾತರದ ಭಾವನೆಗಳು ಇರುವುದು ಸಹಜ. ಭಾವನೆಗಳ ಸರಮಾಲೆಯಲ್ಲಿ ಅವನು ತನ್ನನ್ನು ತಾನು ವೈಯಕ್ತಿಕವಾಗಿ, ಮಾನಸಿಕವಾಗಿ ಬೆಳೆಸುತ್ತಾನೆ.ಶಾಲೆಗಳಲ್ಲಿ ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಪ್ರಭಾವಗಳು ಕಡಿಮೆಯೇ. ಸಮಯದ ಅಭಾವವೊ, ಹೊಸ ಹೊಸ ಕಾನೂನುಗಳ ಮಧ್ಯಸ್ತಿಕೆಯೊ, ಅಂಕಪಟ್ಟಿ ಹಾಗೂ ಅಂಕಗಳ ನಡುವಿನ ಹೋರಾಟವೋ, ತಿಳಿಯದು. ಹೀಗೆ ಒಬ್ಬ ಭಾವನಾ ಲೋಕದ ತಿರುವುಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಾನೆ.  ಇವನೊಬ್ಬ ಅತಿ ತೆಳು ಮೈಕಟ್ಟಿನ ಸರಳ ಜೀವಿ. ‘ಮಿಸ್’ ‘ಮಿಸ್’ ಎಂದು ಹೇಳಿಕೊಂಡು ಇರುವುದೇ ಒಂದು ಕಾಯಕ. ಸಿಟ್ಟು ಬಂದರೆ ಮಾತ್ರ ಅವನ ಹುಚ್ಚಾಟ ತಡೆಯಲಾಗದು…. ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದರಲ್ಲಿ ಅತಿ ಶೂನ್ಯ. ಸಿಟ್ಟು ಏನಕ್ಕೆ ಬೇಕಾದರೂ ಬರಬಹುದು! ಯಾಕೆ ಬಂತು? ಎಲ್ಲಿಗೆ ಹೋಯ್ತು? ಏನು ಮಾಡಿದ? ಯಾವುದಕ್ಕೂ ಲೆಕ್ಕ ಚುಕ್ತಾ ಇಲ್ಲ.. ಒಂದಿಷ್ಟು ಕಾರಣಗಳ ಕಂತೆಯಷ್ಟೇ.. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನ ಜೊತೆ ಇನ್ನಷ್ಟು ಮಕ್ಕಳು…ನನ್ನ ವಿಚಾರಧಾರೆಗಳು, ರೀತಿ-ನೀತಿಗಳು, ಇವರಿಗೆ ತಿಳಿದಿರಲಿಲ್ಲ.. ಓದುತ್ತಿದ್ದ ಶಾಲೆಯಲ್ಲಿ ಅವನದೇ ದರ್ಬಾರು.. ಬರಿಯ ಆಟ ಆಟ ಆ…ಟ. ಯಾವುದೊಂದರ ಜವಾಬ್ದಾರಿಯೂ ಇದೆ ಎನಿಸುತ್ತಿರಲಿಲ್ಲ…ಈ ಹುಡುಗನಲ್ಲಿ ಮೊದಲಿನಿಂದಲೂ ಸಭ್ಯವಾದ ಅಸಭ್ಯತೆ…ತಾಳ್ಮೆ-ಸಿಟ್ಟು ಎರಡರ ವಿಚಿತ್ರ ಮಿಶ್ರಣ. ಇವನದೊಂದು ಹೊಸ ತತ್ವ-ಸಿಟ್ಟು ಬಂದರೆ ಹೊಡ್ದು ಬಿಡೋದು.. ಯಾರು? ಏನು? ಎತ್ತ? ಎಷ್ಟು ಪೆಟ್ಟು? ಯಾವುದರ ಲೆಕ್ಕ  ಗೊತ್ತಿಲ್ಲದವ. ವಿಚಿತ್ರ ಏನು ಅಂದ್ರೆ ತಾಯಿಗೆ ಬೇಜಾರ್ ಮಾಡುವುದಿಲ್ಲ. ತಾಯಿಗೆ ಬೇಜಾರಾದರೆ, ಅವಳನ್ನು ಖುಷಿಪಡಿಸಲು ಏನು ಬೇಕಾದ್ರೂ  ಮಾಡುತ್ತಾನೆ. ತಾಯಿ “ಹೊಡಿಬೇಡ!” ಅಂದ್ರೆ ಮಾತ್ರ ಕೇಳಕ್ಕಾಗಲ್ಲ..ಇದು ಇವನ ನಿತ್ಯದ ಕಾರ್ಯ…ಒಂದಿನ ಕ್ಲಾಸಿನೊಳಗೆ ಬಂದ… “ಮಿಸ್, ಇವತ್ತು ಅವನಿಗೆ ಹೊಡೆದು ಬಂದೆ, ಬಹಳ ದಿಮಾಕ್ ತೋರಿಸುತ್ತಿದ್ದ!”  ನಾನು“ಯಾಕೋ? ನಿನಗದೇ ಕೆಲಸನಾ?  ಎಷ್ಟು ಸಂಬಳ ಕೊಡುತ್ತಾರೆ ಎಲ್ಲರಿಗೆ ಹೊಡೆಯೋಕೆ? ಹೊಡೆಯೋದು ಗಂಡಸ್ತನ ಅಲ್ಲಾ ,ನಿಜವಾದ ಗಂಡಸು ಸುಮ್ ಸುಮ್ನೆ ಕೈ ಎತ್ತಲ್ವೋ..” ಸಮಾಧಾನವಾಗಿ ಹೇಳೋದು-ಪ್ರತೀ ಸಲ…ಸುಮ್ಮನೆ ಇವನಿಗೊಂದು ಕಾರಣ ಬೇಕು ಹೊಡೆಯಕ್ಕೆ ಕೈ ಕಾಲು ತುರಿಸ್ತಾ ಇರುತ್ತೇನೋ?..ಇವನ ಹೊಡೆತಕ್ಕೆ ಇವನ ತಾಯಿ ಸ್ಕೂಲಿಗೆ ಹೋಗಿ ತಲೆ ತಗ್ಗಿಸಬೇಕು…ಮನೆಗೆ ಬಂದು ಬೊಬ್ಬೆ. ಹೀಗಾದರೆ ಸಮಸ್ಯೆ ಬಗೆಹರಿಯುತ್ತಾ….ತಾಯಿ- ಗುರುಗಳ ಬಗ್ಗೆ ಗೌರವ ಇರುವವನು, ಮಾತು ಕೇಳದೆ ಇರ್ತಾನಾ? ಅವನ ಹಳೆಯ ಅನುಭವಗಳು, ಹೊಸ  ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನೋಡಲು ಬಿಡುತ್ತಿರಲಿಲ್ಲ…. ಇದು ತಿಳಿದು ಬಂತು ನನಗೆ.ಈಸಾರಿ ಮನಸ್ಸು ಮಾಡಿ ಹೇಳಿಬಿಟ್ಟೆ… “ನೀನು ಹೊಡೆದಾಡಿಕೊಂಡು ಬಂದರೆ ನನ್ನ ಹತ್ತಿರ ಪಾಠ ಕಲಿಯಲು ಬರಲೇಬೇಡ…”ಗುಂಪನ್ನು ಸೇರಿ ಹೊಡೆದಾಡೋದು, ಕೀಟಲೆ ಮಾಡೋದು, ಎಲ್ಲ ಬಿಡಲು ಪ್ರಯತ್ನ ಮಾಡಲು ಪ್ರಾರಂಭಿಸಿದ. “ಯಾವತ್ತಾದರೂ ನಿನ್ನೆದುರಿಗೆ ನಿನಗಿಷ್ಟವಾಗದವರು ಬಂದರೆ ಅವರನ್ನ ಬಿಟ್ಟುಬಿಡು……. ಸಿಟ್ಟು ಬಂದರೆ ಸುಮ್ಮನೆ ಜಾಗ ಖಾಲಿ ಮಾಡು. ನಾಯಿ ಎದುರು ಹೋಗಿ ಸುಮ್ಮನೆ ಅಲ್ಲಾಡಿದರೆ ಸಾಕು, ಅದು  ಬೊಗಳಲು ಶುರು ಮಾಡುತ್ತೆ. ಅದೇ ಹುಲಿ ಎದುರು ಹೋಗಿ ನೀನೇನೇ ಮಾಡಿದರೂ, ಅದಕ್ಕೆ ಹಸಿವಿದ್ದಾಗ ಮಾತ್ರ ನಿನ್ನ ತಿನ್ನುತ್ತೆ! ಇಲ್ಲ, ಅದರ ಪಾಡಿಗೆ ಅದು ಇರುತ್ತೆ…ಅರ್ಥ ಮಾಡ್ಕೊಳೋ….” ಅಂದೆ.. ಹುಟ್ಟಿದಾಗಿನಿಂದ ಬಂದ ಸಿಟ್ಟನ್ನು ಸುಲಭವಾಗಿ ತೆಗೆಯಲಾಗದು.. ಅವನಿಗೆ ಸಿಟ್ಟು ಬಂದಾಗಲೆಲ್ಲಾ, ಬೆವರು ಇಳಿಯುವ ಹಾಗೆ ಎಕ್ಸಸೈಜ್ ಮಾಡಿಸ್ತಿದ್ದೆ.“ಸಾರಿ ಮಿಸ್, ನಾ ಇನ್ಮೇಲೆ ಸಿಟ್ಟು ಮಾಡಿಕೊಳ್ಳಲ್ಲ” ಅಂತ ಹೇಳಿ ಎರಡು ದಿನಕ್ಕೆ ಮತ್ತೊಬ್ಬರಿಗೆ ಹೊಡೆದು ಬಂದಿದ್ದ…ಇವನ ಸಿಟ್ಟನ್ನು   ಹೇಗಾದರೂ ಸರಿ ಮಾಡಬೇಕು, ಇವನ ಸಿಟ್ಟನ್ನು ನಿಯಂತ್ರಿಸೋದು ಅಥವಾ ಸರಿ ಹಾದಿಯಲ್ಲಿ ಹೊರ ಹಾಕುವುದು ಅತ್ಯಗತ್ಯ. ಕಲಿಸಲೇಬೇಕು ಅಂತ ನಾನು ಪಣತೊಟ್ಟು….. ದಿನವೂ ಒಂದು ಹತ್ತು ನಿಮಿಷನಾದ್ರೂ ಅವನನ್ನು ಉರ್ಸೋದು, ಸಿಟ್ಟು ಬರೋಹಾಗೆ ಮಾಡೋದು, ಆಮೇಲೆ, “ಊಟ ಮಾಡು, ನೀರು ಕುಡಿ, ಹೊಡಿತೀಯಾ ಹೊಡಿ ಬಾ” ಅಂತ ರೇಗ್ಸೋದು… ಸಿಟ್ಟಾಗುವುದಕ್ಕೆ , ಆಗದೆ ಇರುವುದಕ್ಕೆ, ಇರುವ ಹಲವು ಕಾರಣಗಳನ್ನು ತಿಳಿಸಿ, ಅದನ್ನು ನಿಯಂತ್ರಿಸುವ ಬಗ್ಗೆ ಎಲ್ಲ ವಿಷಯ ಪ್ರಾಕ್ಟಿಕಲ್ ಆಗಿ ಮಾಡಿಸಿಲಿಕ್ಕೆ ಶುರುಮಾಡಿದೆ…. ಅವನ ಸಿಟ್ಟಿನಿಂದ ಆಗುವ ತೊಂದರೆಗಳನ್ನು ಅವನೇ ಅನುಭವಿಸುವ ಹಾಗೆ ಮಾಡಿದೆ.. ಅವನ ತಾಯಿ ನನ್ನ ಮಾತಿಗೆ ಬೆಲೆ ಕೊಟ್ಟು, ನಾನು ಹೇಳೋ ಹಾಗೆ ಮಾಡುತ್ತಿದ್ದರು…ದಿನ ಕಳೆದಂತೆ ಅವನ ಸಿಟ್ಟು ಸ್ವಲ್ಪ ಸ್ವಲ್ಪ ಹತೋಟಿಗೆ ಬರತೊಡಗಿತ್ತು…ಹತ್ತನೇ ಕ್ಲಾಸಿನ ಪರೀಕ್ಷೆಗೆ ಒಂದು ವಾರ ಇದೆ ಎನ್ನುವಾಗ,  ಮತ್ತೊಬ್ಬ ಹುಡುಗನಿಗೆ ಹೊಡೆದು ಬಂದ…. ನಾನು ‘ಯಾಕೆ? ಏನು?’ ಎಂದು ಕೇಳಲಿಲ್ಲ. “ಪೆಟ್ಟು ತಿಂದವನಿಗೆ ಆದ ಗಾಯ ಮಾಸುವರೆಗೂ ನಿನ್ನಲ್ಲಿ ಸಲಿಗೆಯಿಂದ ಇರುವುದಿಲ್ಲ” ಎಂದು ಹೇಳಿಬಿಟ್ಟೆ.. ತಾಯಿಯ ಅನುರಾಗದ ಮಾತು, ನನ್ನ ತಿಳುವಳಿಕೆಯ ಚಾಟಿ ಮಾತುಗಳು, ಆಪ್ತ ಸ್ನೇಹಿತರ ಬುದ್ಧಿವಾದ, ಎಲ್ಲಾ ಸೇರಿ ಮೋಡಿಯಂತು ಮಾಡಿತು.. ಇದಾದ ನಂತರ ಬಹಳ ಬದಲಾವಣೆ ಕಾಣತೊಡಗಿತ್ತು…ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಮಾಡೋದು, ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುವುದು, ಎಲ್ಲಾ ಕಡಿಮೆಯಾಯಿತು…ಆದರೆ ಈ ಪಯಣದಲ್ಲಿ ಅವನು ಕಲಿತದ್ದು ಬಹಳ.. “ಜರ್ನಿ ಫ್ರಮ್ ಮ್ಯಾನ್ ಟು ಜಂಟಲ್ಮ್ಯಾನ್”  ಅಂದರೂ ತಪ್ಪೇನಿಲ್ಲ…. ಜೊತೆಜೊತೆಗೆ ಓದುವುದರಲ್ಲೂ ಗಮನ ಹೆಚ್ಚಿತು ಜವಾಬ್ದಾರಿ ಹೆಚ್ಚಿತು, ತರಗತಿಯಲ್ಲಿ ಒಳ್ಳೆ ಅಂಕಗಳನ್ನು ತೆಗೆದ.ಪ್ರತಿ ಸಾರಿ ಅವನನ್ನು ಒಂದೇ ಮಾತಲ್ಲಿ ರೇಗಿಸೋದು …”ಸಿಟ್ಟು ಕಾಲಲ್ಲಿ ಇದೆಯೋ ತಲೆಯಲ್ಲಿ ಇದೆಯೋ ಹೇಳು, ನಾನು ಸರಿ ಮಾಡ್ತೀನಿ. ಮರದ್ ಬನ್ರೇ ಮರದ್…!ಜನ್ ತೊ ಬಹುತ್ ಮಿಲೇಂಗೆ! ಸಜ್ಜನ್ ಬನ್ ಮೇರೆ ಬಚ್ಚೆ! “ಹೇಗೆ ಕಾಲಚಕ್ರ ಉರುಳಿತೊ ಗೊತ್ತಾಗದು.. ಈಗಲೂ ಅದೇ ಹುಡುಗ ನನ್ನೊಂದಿಗೆ ತಿಳಿಸಾರು ತಿನ್ನಲು ಆಶಿಸುತ್ತಾ ಬರುತ್ತಾನೆ.ನಾನು ಮಾಡುವ ಕೆಲಸಗಳಿಗೆ ಕರೆದಾಗಲೆಲ್ಲಾ ಬಲಗೈ ಬಂಟನಾಗಿ ನಿಲ್ಲುತ್ತಾನೆ.ಆದರೆ ತಾಳ್ಮೆ ಇದೆ ಈಗ. ಬೇರೆ ಬೇರೆಯವರೊಂದಿಗೆ ಹೇಗೆ ಸಂಭಾಷಣೆ ಮಾಡೋದು ಎನ್ನುವುದು ಗೊತ್ತಿದೆ.. ಸ್ವಲ್ಪ ಸ್ನೇಹಿತರ ಪ್ರಭಾವವಿದ್ದರೂ ತನ್ನನ್ನು ತಾನಾಗಿಯೇ ಉಳಿಸಿಕೊಂಡಿದ್ದಾನೆ.. ಅದೇ ಸಂತೋಷ ತರುವುದು. ಸಿಟ್ಟು ಸಹಜ. ಅಭ್ಯಾಸದಿಂದ ನಿಯಂತ್ರಿಸು.ಇಲ್ಲ ಸರಿದಿಕ್ಕಿನಲ್ಲಿ ಹಾರಿಬಿಡು. ಆಗ ಮಾತ್ರ ಗೆಲುವು ನಿನ್ನದು. ========= ReplyForward

ಸ್ವಾತ್ಮಗತ

“ಕರ್ನಾಟಕ ಗಾಂಧಿ” ಹಾಗೂ ವಿಭೂತಿ ಪುರುಷ ಹರ್ಡೇಕರ ಮಂಜಪ್ಪ ..! ಕೆ.ಶಿವು ಲಕ್ಕಣ್ಣವರ್ ದೇಶದ ಸ್ವಾತಂತ್ರಕ್ಕಾಗಿನ ಹೋರಾಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕಲೆಗಳಲ್ಲಿ ನುರಿತವರಾದ ಹಲವಾರು ಮಂದಿ ಹೆಸರಾಗಿದ್ದಾರೆ… ಮಹಾತ್ಮ ಗಾಂಧೀಜಿಯವರ ನೇರ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಹಲವಾರು ಮಹಾಪುರುಷರು ಮತ್ತು ಮಹಿಳೆಯರು ಕೂಡಾ ಇಂತಹ ಮಹನೀಯರ ಸಾಲಿನಲ್ಲಿ ಪ್ರಮುಖರಾಗಿದ್ದು ಈ ನಿಟ್ಟಿನಲ್ಲಿ, ಉಮಾಬಾಯಿ ಕುಂದಾಪುರ್, ಕಮಲಾದೇವಿ ಚಟ್ಟೋಪಾದ್ಯಾಯ, ಎನ್. ಎಸ್. ಹರ್ಡೇಕರ್ ಅವರುಗಳು ಸಮಾಜ ಸೇವೆಯಲ್ಲಿ ಮಹತ್ವವಾದ ಸೇವೆ ಸಲ್ಲಿಸಿದವರಾಗಿದ್ದಾರೆ… ಹರ್ಡೇಕರ್ ಮಂಜಪ್ಪನವರು ಈ ಪೈಕಿ ಒಂದು ಹೆಜ್ಜೆ ಮುಂದು. ಅವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದವರು. ತಮ್ಮ ಜೀವನದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ ಬಹಳಷ್ಟು ಮಂದಿ ಇದ್ದಾಗ್ಯೂ ಹರ್ಡೇಕರ್ ಮಂಜಪ್ಪನವರಂತೆ ಅತ್ಯಂತ ಕಟ್ಟುನಿಟ್ಟಿನ ಸ್ವಯಂ ನಿಯಂತ್ರಣದಲ್ಲಿ ಬದುಕನ್ನು ಸಾಧಿಸಿದವರು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಬಡತನದ ಬವಣೆ ಅನುಭವಿಸುತ್ತಿರುವವರಿಗಾಗಿ ಬದುಕಿದವರು ಅತ್ಯಂತ ವಿರಳವೆನ್ನಬೇಕು…. ಹರ್ಡೇಕರ್ ಮಂಜಪ್ಪನವರು ಪಂಪನ ಕಾವ್ಯಬಣ್ಣಿತವಾದ ಬನವಾಸಿಯಲ್ಲಿನ ಬಡ ಕುಟುಂಬವೊಂದರಲ್ಲಿ ಫೆಬ್ರವರಿ 18, 1889ರಲ್ಲಿ ಜನಿಸಿದರು. ಅವರು 1903ರ ವರ್ಷದಲ್ಲಿ ಹತ್ತಿರದ ಸಿರಸಿಯಲ್ಲಿ ಮುಲ್ಕಿ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಿರಸಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಸಿದವರು. ಸಂಬಳ ೭ ರೂಪಾಯಿ ಮಾತ್ರ ಪ್ರತಿ ತಿಂಗಳಿಗೆ… ಬರಹ ಪ್ರವೀಣರಾದ ಹರ್ಡೇಕರ್ ಮಂಜಪ್ಪನವರು ಮಕ್ಕಳಿಗೆ ಅರ್ಥವಾಗುವ ಹಾಗೆ ಪದ್ಯಗಳ ರಚನೆ ಮಾಡಿದ್ದಲ್ಲದೆ ಅವನ್ನು ಮಕ್ಕಳ ಮನೋಧರ್ಮಕ್ಕೆ ರುಚಿಸುವ ಹಾಗೆ ಹಾವಭಾವ ಪೂರಕವಾಗಿ ಬೋಧಿಸಿದರು. ಅವರಿಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕೆಂಬ ಆಸೆ ಇದ್ದಿತಾದರೂ, ಆ ನಿಟ್ಟಿನಲ್ಲಿ ಗುರುಗಳನ್ನು ಪಡೆಯುವ ಸೌಲಭ್ಯ ಇಲ್ಲದಿದ್ದ ಕಾರಣಗಳಿಂದ ತಾವೇ ಸ್ವಯಂ ಆಚಾರ್ಯರಾಗಿ ಕಲಿಯಲಾರಂಭಿಸಿದರು… ಸ್ವದೇಶೀ ಆಂದೋಲನ ಪ್ರಬಲವಾಗಿ ಮುಂಚೂಣಿಯಲ್ಲಿದ್ದ ದಿನಗಳವು. ೧೯೦೬ರಲ್ಲಿ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿ ಬಿಟ್ಟು ದಾವಣಗೆರೆಗೆ ಬಂದು ೧೯೦೬ರ ಸೆಪ್ಟೆಂಬರ್ ೨ರಂದು ’ಧನುರ್ಧಾರಿ’ ವಾರ ಪತ್ರಿಕೆ ಪ್ರಕಟನೆಯ ಆರಂಭಿಸಿದರು. ಹರ್ಡೇಕರ್ ಮಂಜಪ್ಪ ಮತ್ತು ಅವರ ಹಿರಿಯ ಸಹೋದರರು ತಿಲಕರ ಕೇಸರಿ ಪತ್ರಿಕೆಯಿಂದ ತೀವ್ರ ಪ್ರಭಾವಿತರಾಗಿ, ಅದರಲ್ಲಿನ ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸಲು ಅನುಮತಿ ಪಡೆದುಕೊಂಡರು. ಮರಾಠಿ ಭಾಷೆಯನ್ನು ಚೆನ್ನಾಗಿ ಅರಿತಿದ್ದ ಹರ್ಡೇಕರ್ ಸಹೋದರರು ತಮ್ಮ ಸಾಪ್ತಾಹಿಕದಲ್ಲಿ ಪ್ರಕಟಿಸಿದಾಗ ಅದು ಕೆಲವೇ ದಿನಗಳಲ್ಲಿಯೇ ಹತ್ತು ಸಾವಿರ ಗ್ರಾಹಕರನ್ನು ಪಡೆದುಕೊಂಡಿತು. ’ಧನುರ್ಧಾರಿ’ಯ ಕೆಲವೊಂದು ಪ್ರತಿಗಳು ಹಳೆಯ ಮೈಸೂರು ರಾಜ್ಯದಲ್ಲೂ ಅಲ್ಲಲ್ಲಿ ಭಿತ್ತರಗೊಂಡಾಗ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ಮಾಧವರಾಯರು ಈ ಪತ್ರಿಕೆಯಲ್ಲಿನ ಪ್ರಕಟಣೆಗಳು ಪ್ರಚೋದನಕಾರಿಯಾಗಿದ್ದೆಂಬ ಕಾರಣದಿಂದ ಪತ್ರಿಕೆಗೆ ನಿಷೇಧ ಹಾಕಿ ಭೀಕರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಹೀಗಾಗಿ ’ಧನುರ್ಧಾರಿ’ ಪತ್ರಿಕಾಲಯ ತನ್ನ ಬಾಗಿಲನ್ನು ಮುಚ್ಚಬೇಕಾಯಿತು… ಮಂಜಪ್ಪನವರು ಮದುವೆಯಾದರೆ ಸಮಾಜ ಸೇವೆಗೆ ತೊಡಕಾಗುವುದೆಂದು ೧೯೧೦ರಲ್ಲಿ ಮದುವೆ ಆಗಬಾರದೆಂಬ (೨೨ನೆ ವಯಸ್ಸಿನಲ್ಲಿ) ನಿರ್ಧಾರಿಸಿದರು. ಬ್ರಹ್ಮಚರ್ಯೆಯಿಂದ ಕೂಡಿದ ಸಾತ್ವಿಕ ತಪಶ್ಚರ್ಯೆಯ ಜೀವನವನ್ನು ಅಳವಡಿಸಿಕೊಂಡು ಅದಕ್ಕಾಗಿ ತಮ್ಮ ಬಡ ಅಕ್ಕಿ – ಬೇಳೆಯ ಆಹಾರದಲ್ಲಿಯು ಸಹಾ ಉಪ್ಪು ಸಕ್ಕರೆಯಂತಹ ರುಚಿಗಳನ್ನು ನಿಷೆಧಿಸಿಕೊಂಡು ಬಿಟ್ಟರು ಹಾಗೂ ಬ್ರಹ್ಮ ಚರ್ಯಕ್ಕೆ ಪೋಷಕವಾಗುವ ರೀತಿಯ ಆಹಾರ ಸೇವನೆಯ ಆರಂಭಿಸಿ, ಉಪ್ಪು, ಹುಳಿ, ಖಾರ ಹಾಗು ಸಿಹಿ ಪದಾರ್ಥಗಳ ಸೇವನೆ ನಿಲ್ಲಿಸಿದರು. ಆಹಾರದಲ್ಲಿನ ಸ್ವಯಂ ನಿರ್ಬಂಧಗಳು ಶುದ್ಧ ಮತ್ತು ಶಿಸ್ತಿನ ಜೀವನವನ್ನು ಸಾಗಿಸಲು ಸಹಾಯಕ ಎಂದು ಮಂಜಪ್ಪನವರ ನಂಬಿಕೆಯಾಗಿತ್ತು… “ಕರ್ನಾಟಕ ಗಾಂಧಿ” ಹರ್ಡೇಕರ ಮಂಜಪ್ಪ ಬಹುಷಃ ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ‘ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು. ‘ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ಸಹಾ ಮಂಜಪ್ಪನವರು ರಚಿಸಿದರು. ಆದ್ದರಿಂದಲೇ ಜನ ಇವರನ್ನು “ಕರ್ನಾಟಕ ಗಾಂಧಿ” ಎಂದು ಕರೆದರು… ಕಾಲಕ್ರಮೇಣದಲ್ಲಿ ಹರ್ಡೇಕರ್ ಅವರು ಬಸವೇಶ್ವರರ ತತ್ವಗಳಲ್ಲಿ ಆಕರ್ಷಿತರಾದರು. ತಮ್ಮ ಪರಿಸರದಲ್ಲಿದ್ದ ಲಿಂಗಾಯತದಲ್ಲಿ ಅಷ್ಟೊಂದು ಪಂಗಡಗಳಿರುವುದು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. ಲಿಂಗಾಯತ ಚಿಂತನೆಗಳು ಮತಧರ್ಮಗಳ ಗೋಡೆಗಳನ್ನು ಉರುಳಿಸಿ ಆ ಮೂಲಕ ಆಚರಣೆಗಳಲ್ಲಿದ್ದ ದುಷ್ಟಪದ್ಧತಿಗಳನ್ನು ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಮೂಲೋದ್ದೇಶವನ್ನು ಹೊಂದಿದ್ದ ಹಿನ್ನಲೆಯಲ್ಲಿ ಆ ಜನಾಂಗದಲ್ಲೂ ಪಂಗಡ, ಉಪಪಂಗಡಗಳು ಹುಟ್ಟಿಕೊಂಡಿದ್ದುದು ಅವರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಬಸವೇಶ್ವರರ ತತ್ವಗಳನ್ನು ಪ್ರಸ್ತುತ ಪಡಿಸುವ ಹಲವಾರು ಪುಸ್ತಿಕೆಗಳನ್ನು ಹೊರತಂದು ಅವನ್ನು ಉಚಿತವಾಗಿ ಹಂಚಿ ಆ ಜನಾಂಗವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಈ ಕಾರ್ಯದಲ್ಲಿ ಲಿಂಗಾಯತ ಧರ್ಮ ಸಹೃದಯಿಗಳಾದ ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮೀಜಿಯವರು ಹರ್ಡೇಕರ್ ಮಂಜಪ್ಪನವರಿಗೆ ಅಪಾರ ಬೆಂಬಲವಿತ್ತರು. ಹರ್ಡೇಕರ್ ಮಂಜಪ್ಪನವರ ಈ ಚಿಂತನೆಗಳಿಗೆ ಅನೇಕರು ಅನುಯಾಯಿಗಳಾಗಿ ಹೊರಹೊಮ್ಮಿದರು… ೧೯೧೧ ರಲ್ಲಿ ದಾವಣಗೆರೆಯಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳವರ ಸಹಕಾರದೋಂದಿಗೆ ಶ್ರಾವಣ ಉಪನ್ಯಾಸಮಾಲೆ (ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮ) ಪ್ರಾರಂಭ. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಮಂಜಪ್ಪನವರು ನೈಷ್ಠಿಕ ಬ್ರಹ್ಮಚಾರಿಯಾಗಿಯೇ ಉಳಿದರು… ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ ೧೯೧೩ರಲ್ಲಿ ಆಧುನಿಕ ರೀತಿಯಲ್ಲಿ ಸಾರ್ವಜನಿಕ ’ಬಸವ ಜಯಂತಿ’ ಆಚರಣೆಯನ್ನು ಪ್ರಾರಂಭಿಸಿ ಜನರೆಲೆರಿಗೆ ಬಸವ ತತ್ವ ತಿಳಿಪಡಿಸಿದರು. ೧೯೧೫ರಲ್ಲಿ ’ಸ್ವಕರ್ತವ್ಯ ಸಿದ್ಧಾಂತ’ ಪ್ರಥಮ ಗ್ರಂಥ ಪ್ರಕಟನೆ ಮಾಡಿದರು. ೧೯೧೯ರಲ್ಲಿ ಗಾಂಧೀಜಿಯವರ ಕಾರ್ಯ ಚಟುವಟಿಕೆಯಿಂದ ಪ್ರಭಾವಿತರಾದರು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ’ಮಹಾತ್ಮಾ ಗಾಂಧೀಜೀ ಚರಿತ್ರೆ’ ಪ್ರಕಟಣೆಯನ್ನು ಮಾಡಿದರು… ೧೯೨೨ರಲ್ಲಿ ’ಸತ್ಯಾಗ್ರಹ ಧರ್ಮ’ ಗ್ರಂಥ ಪ್ರಕಟನೆ ಹಾಗೂ ಹುಬ್ಬಳ್ಳಿಯಲ್ಲಿ ’ಸತ್ಯಾಗ್ರಹ ಸಮಾಜ’ ಸ್ಥಾಪನೆ ನೆರವೇರಿಸಿದರು. ೧೯೨೩ ಹರಿಹರದ ಬಳಿ ತುಂಗಭದ್ರಾ ನದಿ ತೀರದಲ್ಲಿ ’ಸತ್ಯಾಗ್ರಹ ಆಶ್ರಮ’ ಸ್ಥಾಪನೆ ಮಾಡಿದರು… ೧೯೨೪ ’ಬಸವ ಚರಿತ್ರೆ’ ಸಂಶೋಧನಾತ್ಮಕ ಗ್ರಂಥ ಪ್ರಕಟನೆ. ಮಾರ್ಚ ತಿಂಗಳಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ವಾಸ್ತವ್ಯ. ಗಾಂಧೀಜಿಯವರ ನೇತೃತ್ವದಲ್ಲಿ ೧೯೨೪ರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸಿದ್ದರು. ಗಾಂಧೀಜಿಯವರಿಗೆ ಬಸವೇಶ್ವರರ ಬಗ್ಗೆ ಅವರ ವಚನಗಳ ಬಗ್ಗೆ ತಿಳಿಸಿಕೊಟ್ಟರು. ’ಬಸವೇಶ್ವರ ಸೇವಾದಳ’ದೊಂದಿಗೆ ಪ್ರಯಾಣ ಹಾಗೂ ’ಸತ್ಯಾಗ್ರಹಿ ಬಸವೇಶ್ವರ’ ಗ್ರಂಥವನ್ನು ಗಾಂಧೀಜಿಯವರಿಗೆ ಕೊಟ್ಟರು… ೧೯೨೫ ಬಂಥನಾಳ ಮಹಾಸ್ವಾಮಿಗಳೊಂದಿಗೆ ವಿಜಾಪುರ ಜಿಲ್ಲೆಯ ಹಳ್ಳಿಗಳ ಸಂಚಾರ ಹಾಗೂ ಜನರಲ್ಲಿ ಬೇರು ಬಿಟ್ಟ ದುಶ್ಚಟಗಳ ನಿರ್ಮೂಲನಕ್ಕಾಗಿ ದೇಶೀ ಚಳವಳಿಯ ಆರಂಭಿಸಿದರು. ೧೯೨೬ ’ಬಸವ ಭೋಧಾಮೃತ’ ಗ್ರಂಥ ಪ್ರಕಟನೆ ಕೈಗೊಂಡರು… ಹರ್ಡೇಕರ್ ಮಂಜಪ್ಪನವರು, ೧೯೨೭ ಮಾರ್ಚ್ ೨೭ರಂದು ಕಲಬುರ್ಗಿಯಲ್ಲಿ ಗಾಂಧೀಜಿಯವರನ್ನು ಕಂಡು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮಾರ್ಗ ದರ್ಶನ ಕೋರಿದರು. ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಸಿ ಆಶ್ರಮ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ಮೊದಲು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿದ ಹರ್ಡೇಕರ್ ಅವರು ಗಾಂಧೀಜಿಯವರ ಕಾರ್ಯಕ್ರಮಗಳು ಮತ್ತು ಚಿಂತನೆಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಮಹತ್ತರವಾದ ಕಾರ್ಯ ನಡೆಸಿದರು. ಬಸವೇಶ್ವರರು ಮತ್ತು ಗಾಂಧೀಜಿಯವರ ಬೋಧನೆಗಳಲ್ಲಿ ತಾದ್ಯಾತ್ಮವನ್ನು ಕಂಡ ಮಂಜಪ್ಪನವರಿಗೆ, ಬಸವೇಶ್ವರರ ಬಗ್ಗೆ ಅರಿವಿದ್ದ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಗಾಂಧೀಜಿಯವರ ತತ್ವಗಳನ್ನು ತಲುಪಿಸುವ ಸಾಮರ್ಥ್ಯ ರೂಢಿಗೊಂಡಿತ್ತು. ಸತ್ಯಾಗ್ರಹ, ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ, ಸ್ತ್ರೀಪುರುಷರಲ್ಲಿ ಸಮಾನತೆ ಮುಂತಾದ ಮಹತ್ವದ ವಿಚಾರಗಳಲ್ಲಿ ಮಂಜಪ್ಪನವರು ಸಹಸ್ರಾರು ಉಪನ್ಯಾಸಗಳನ್ನು ನೀಡಿದರು. ಸಬರಮತಿ ಆಶ್ರಮದಲ್ಲಿ ಮೂರು ವಾರಗಳ ಕಾಲ ತಂಗಿದ್ದು ಸತ್ಯಾಗ್ರಹಿಗಿರಬೇಕಾದ ಮೂಲಭೂತಗುಣಗಳ ಅನುಭವವನ್ನು ನೇರವಾಗಿ ಪಡೆದುಕೊಂಡರು. ಸ್ವತಃ ಕಾಂಗ್ರೆಸ್ ಪಕ್ಷದ ಭಾಗವಾಗದಿದ್ದರೂ ಸಹಾ ಮಂಜಪ್ಪನವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ಸಮಾಜ ಸೇವಾ ಶಿಬಿರಗಳನ್ನು ಆಯೋಜಿಸಿಕೊಟ್ಟರು… ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ೧೯೩೧ ’ಶರಣ ಸಂದೇಶ’ ವಾರಪತ್ರಿಕೆ ಪ್ರಕಟನೆಯ ಆರಂಭವಾಯಿತು… ೧೯೩೫ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿಯ ಜಯಂತಿ ಆಚರಣೆ ಆರಂಭಸಿದರು… ೧೯೩೮ ’ಶುದ್ಧಿ ಮತ್ತು ಸಂಘಟನೆ’ ಹಾಗೂ ’ವಚನಕಾರರ ಸಮಾಜ ರಚನೆ’ ಗ್ರಂಥಗಳ ಪ್ರಕಟನೆ ಕೈಗೊಂಡರು… ೧೯೪೨ ಯುದ್ಧ ಸಮಯದಲ್ಲಿ ಕಾಗದದ ಅಭಾವ, ಕೈ ಕಾಗದ ತಯಾರಿಸಿ ’ಶರಣ ಸಂದೇಶ’ ಪ್ರಕಟನೆಯ ಮುಂದುವರಿಸಕದರು… ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 3ನೆ ಜನವರಿ 1947ರಂದು ಲಿಂಗೈಕ್ಯರಾದರು… ಹೀಗೆ ಪೂಜ್ಯ ಹರ್ಡೇಕರ ಮಂಜಪ್ಪನವರು ಒಬ್ಬ ಹಿರಿಯ ವಿಭೂತಿ ಪುರುಷರಾಗಿದ್ದರು… ‌‌ ‌‌‌‌=============

Back To Top