ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

” ಹಡೆದವ್ವ” ನಿರ್ಮಲಾ ಅಪ್ಪಿಕೋ ನನ್ನ ನೀ ಹಡೆದವ್ವ ಮಲಗಿಸಿಕೊ ಮಡಿಲಲಿ ನನ್ನವ್ವ ನಿನ್ನ ಮಡಿಲಲಿ ಮಲಗಿ ಜಗವ ಮರೆವೆನವ್ವ ನೀ ಮಮಕಾರದ ಗಣಿಯೇ ಕೇಳವ್ವ ಜಗದಲಿ ಸಾಟಿಯೇ ಇಲ್ಲ ನಿನ್ನೊಲವಿಗೆ ದಾರಿದೀಪವಾದೆ ನನ್ನೀ ಬದುಕಿಗೆ ಇನ್ನೊಂದು ಹೆಸರೇ ನೀನಾದೆ ಕರುಣೆಗೆ ಅಮ್ಮ ಎಂದರೆ ಎಂತ ಆನಂದ ಮನಸಿಗೆ ಭೂಮಿಯ ಮೇಲೆ ನೀ ತ್ಯಾಗದ ಪ್ರತೀಕ ನೀನಿಲ್ಲದೆ ಇಲ್ಲ ಈ ಲೋಕ ನಿನ್ನ ಮಮಕಾರವದು ಬೆಲ್ಲದ ಪಾಕ ನೀನೇ ಸರ್ವಸ್ವವೂ ನನಗೆ ಕೊನೆತನಕ ವರವಾಗಿ ನೀಡಿದೆ ನನಗೆ ಈ ಜನುಮವ ನಿನ್ನ ಋಣವ ನಾನೆಂದೂ ತೀರಿಸೆನವ್ವ ನನ್ನ ಅಳುವಿಗೆ ಸದಾ ನಗುವಾದೆ ನನ್ನವ್ವ ಏಳೇಳು ಜನ್ಮಕೂ ನೀನೇ ನನ್ನ ಹಡೆದವ್ವ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇವಳು_ಅವಳೇ ! ಹರ್ಷಿತಾ ಕೆ.ಟಿ. ಅಲಂಕಾರದ ಮೇಜಿಗೆ ಹಿಡಿದಿದ್ದ ಧೂಳು ಹೊಡೆಯುತ್ತಿದ್ದ ನನ್ನ ಶೂನ್ಯ ದೃಷ್ಟಿಗೆ ಅಚಾನಕ್ಕಾಗಿ ಕಂಡಳಿವಳು ನೀಳ್ಗನ್ನಡಿಯ ಚೌಕಟ್ಟಿನೊಳಗೆ ಒತ್ತಿ ತುಂಬಿಸಿದಂತೆ ಉಸಿರು ಕಟ್ಟಿಕೊಂಡು ನಿಂತಿದ್ದವಳು ಬೆಚ್ಚಿ ಹಿಂಜಗಿದು ಕ್ಷಣಗಳೆರೆಡು ಗುರುತು ಸಿಗದೆ ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ ಅವಳೂ ಚಿಕ್ಕದಾಗಿಸಿದಳು ಗುಳಿ ಬಿದ್ದ ಎರಡು ಗೋಲಿಗಳನು ಅರೇ.. ನಾನೇ ಅದು! ಎಷ್ಟು ಬದಲಾಗಿದ್ದೇನೆ? ನಂಬಲಾಗದಿದ್ದರೂ ಕನ್ನಡಿಯ ಮೇಲೆ ಬೆರಳಾಡಿಸಿ ಅವಲೋಕಿಸಿದೆ ಗುಳಿಬಿದ್ದ ಕೆನ್ನೆಗಳಲಿ ಈಗ ನಕ್ಷತ್ರಗಳಿಲ್ಲ ಬರೇ ಕಪ್ಪುಚುಕ್ಕೆಗಳು, ಮೊಡವೆಯ ತೂತುಗಳು ಅವರು ದೀಪಕ್ಕೆ ಹೋಲಿಸುತಿದ್ದ ಬೆರೆಗು ಕಂಗಳಲಿ ಈಗ ಎಣ್ಣೆ ಬತ್ತಿದಂತಿದೆ ಕಾಡಿಗೆ ಮೆತ್ತಿ ವರುಷಗಳೇ ಕಳೆದಿರಬೇಕು ಅಡಿಗೆ ಕೋಣೆಯ ಗೋಡೆಗಂಟಿದ ಮಸಿ ಒರೆಸುತ್ತಾ ಮರೆತೇ ಬಿಟ್ಟಿದ್ದೆ ನೋಟ ಕೆಳಗಿಳಿಯಿತು ಸಡಿಲ ಅಂಗಿಯ ಮರೆಯಲ್ಲಿ ತೆಳ್ಳಗಿನ ದೇಹ ಇಷ್ಟು ಬಾತುಕೊಂಡಿದ್ದಾದರೂ ಯಾವಾಗ?ಅರಿವಾಗಲೇ ಇಲ್ಲ ನಡುವೆಲ್ಲಿ? ತಡಕಾಡಿದೆ ಮಗಳು ನನ್ನನ್ನು ಅಪ್ಪಿ ಟೆಡ್ಡಿ ಎಂದುದರ ಅರ್ಥ ಈಗ ತಿಳಿಯಿತು ಉಡುಗೆ ತೊಡುಗೆ ನಡಿಗೆ ಎಲ್ಲವೂ ಬದಲು ಜೋತುಬಿದ್ದ ತನುವಿನಲಿ ಇನ್ನೆಲ್ಲಿ ನಾಜೂಕು ಬಿಂಕ ಬಿನ್ನಾಣಗಳನು ಯಾವ ಧಾನ್ಯದ ಡಬ್ಬಿಯಲ್ಲಿಟ್ಟು ಮರೆತೆನೋ ನೆನಪಿಲ್ಲ ಕಣ್ಣೆದುರಿನ ಇವಳು ಕಣ್ಣೊಳಗಿದ್ದ ಆ ಅವಳ ನುಂಗಲಾರಂಭಿಸಿದಳು ಕಣ್ಣಂಚು ಕರಗತೊಡಗಿತು ಆದರೂ ನನ್ನ ಮೂಗು ಬದಲಾಗಿಲ್ಲವೆನಿಸಿ ಸಂತೈಸಿಕೊಂಡು ಮುತ್ತಿಕ್ಕುವಷ್ಟರಲ್ಲಿ ನನಗಿದು ಬೇಡವೆಂದು ರಚ್ಚೆ ಹಿಡಿದ ಮಗಳ ದನಿಗೆ ಮೊದಲಿದ್ದ ಮೂಗಿನ ತುದಿಯ ಕೋಪ ಎಂದೋ ಕರಗಿ ಹರಳಾಗಿ ಮೂಗುತಿ ಸೇರಿದ್ದು ನೆನಪಾಯಿತು ಇವಳು ನಕ್ಕಂತಾಯಿತು =======

ಕಾವ್ಯಯಾನ Read Post »

ಇತರೆ

ರೈತ ದಿನಾಚರಣೆ

ನೇಗಿಲಯೋಗಿ ಎನ್.ಶಂಕರರಾವ್ ರೈತರ ದಿನಾಚರಣೆ ಅಂಗವಾಗಿ ವಿಷಯ. ನೇಗಿಲ ಯೋಗಿ ಸುಮಾರು ಶೇಕಡಾ ೬೦ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ , ಹಳ್ಳಿ ಹಳ್ಳಿಗಳಲ್ಲಿ ನಮ್ಮ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶದ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪರಿಶ್ರಮ ಪಡುತ್ತಿದ್ದಾರೆ. ಡಾ. ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಹರಿಕಾರ. ಆಹಾರ ಸಮಸ್ಯೆ ಎದುರಿಸುತ್ತಿರುವ ಕಾಲದಲ್ಲಿ, ಹಸಿರು ಕ್ರಾಂತಿಯಿಂದ ಸುಭಿಕ್ಷವಾಯಿತು. ಭತ್ತ, ಗೋಧಿ ಬೆಳೆಯುವ ಯೋಜನೆ ಜಾರಿಗೆ ಬಂದು, ನಂತರ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳಿಗೆ ಆಧ್ಯತೆ ನೀಡಲಾಗಿದೆ. ಈಗ ಒಣ ಬೇಸಾಯಕ್ಕೆ ಒತ್ತು ನೀಡಿ, ಜಲಾನಯನ ಅಭಿವೃದ್ಧಿ ಮೂಲಕ, ನಮ್ಮ ರೈತರು, ನೆಲ ಜಲ ಸಂರಕ್ಷಿಸಲು ಮುಂದೆ ಬಂದಿದ್ದಾರೆ. ನಮ್ಮ ನೇಗಿಲ ಯೋಗಿಯ ಜೀವನ ಹೇಗಿದೆ ಎಂದು ಪರಾಮರ್ಶೆ ನಡೆಸುವುದು ನಮ್ಮೆಲ್ಲರ ಹೊಣೆ. ಸ್ವಾವಲಂಬಿಯಾಗಿದ್ದ ರೈತರ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದೆ. ವಿವಿಧ ಸುಲಭ ಯೋಜನೆಯ ಮೂಲಕ ಅವರನ್ನು ದೇಹೀ ಎಂಬ ಪರಿಸ್ಥಿತಿಗೆ ತಳ್ಳಿದೆ. ಹಳ್ಳಿಗಳಲ್ಲಿ ಪಟ್ಟಣದ ಸೌಲಭ್ಯ ಒದಗಿಸಲು ಸರ್ಕಾರ ವಿಫಲವಾಗಿದ್ದು, ಯುವಜನರ ಒಲಸೆಗೆ ಕಾರಣವಾಗಿದೆ. ಕೂಲಿಕಾರರ ಅಲಭ್ಯತೆ, ಮಳೆಯ ವೈಪರೀತ್ಯ, ಬೆಳದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದಿರುವುದು, ಗೂಬ್ಬರ ದೊರೆಯದ ಹಿನ್ನೆಲೆಯಲ್ಲಿ, ನೇಗಿಲ ಯೋಗಿಯು, ಸಮಸ್ಯೆ ಎದುರಿಸುತ್ತಿದ್ದಾರೆ. ಬ್ಯಾಂಕ್ ಗಳು ನೀಡಿದ ಸಾಲಬಾಧೆ, ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ, ಋಣಭಾರದ ಚಕ್ರವ್ಯೂಹದಲ್ಲಿ ಸಿಲುಕಿ, ಆತ್ಮಹತ್ಯೆಗೆ ಶರಣಾದ ನೇಗಿಲ ಯೋಗಿಯ ವಿಶಾದ ಕಥೆ ಕೇಳಿದ್ದೇವೆ. ಇದಕ್ಕೆಲ್ಲಾ ಪರಿಹಾರ ವಿಲ್ಲವೆ.? ಇದೆ, ಆದರೆ ನಾವೆಲ್ಲರೂ ಮತ್ತು ಸರ್ಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ. ಕೆಲವು ದೀರ್ಘಾವಧಿ ಯೋಜನೆ ಜಾರಿಗೆ ತರುವ ಚಿಂತನೆ ಅಗತ್ಯ. ಮಣ್ಣು ಪರೀಕ್ಷೆ, ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ, ಉತ್ತಮ ತಳಿಯ ಬೀಜಗಳನ್ನು ಕಡ್ಡಾಯವಾಗಿ ನೀಡುವ ಗುರಿ, ಜೈವಿಕ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ, ವೈಜ್ಞಾನಿಕ ಕೃಷಿಯ ಅಳವಡಿಕೆ, ಸಾಲದ ಸದುಪಯೋಗ, ಸೂಕ್ತ ಬೆಲೆ, ಸುಲಭ ಮಾರುಕಟ್ಟೆ, ಇತ್ಯಾದಿ. ಜೈ ಜವಾನ್, ಜೈ ಕಿಸಾನ್ ಕೇವಲ ಶಬ್ದಗಳ ಮೂಲಕ ಇರದೆ, ಮನದಾಳದಿಂದ ಮೂಡಿಬಂದ ಭಾರತೀಯರ ಆಶ್ವಾಸನೆ ಆದರೆ, ನಮ್ಮ ನೇಗಿಲಯೋಗಿಯ ಬದುಕು ಹಸನಾಗುತ್ತದೆ ಮತ್ತು ಕುವೆಂಪು ಅವರು ಹೇಳಿರುವಂತೆ ಉಳುವ ನೇಗಿಲ ಯೋಗಿಯ ನೋಡಲ್ಲಿ ಸಾಕಾರ ವಾಗುತ್ತದೆ.

ರೈತ ದಿನಾಚರಣೆ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ಅರುಣ್ ಕೊಲ್ಜಾಟ್ಕರ್ ಮಹಾರಾಷ್ಟ್ರದ ದ್ವಿಭಾಷಾ ಕವಿ ಅನುವಾದ:ಕಮಲಾಕರ ಕಡವೆ ಮುದುಕಿ ಮುದುಕಿಅಂಗಿ ಅಂಚನು ಹಿಡಿದುಬೆನ್ನು ಬೀಳುತ್ತಾಳೆ. ಅವಳು ಬೇಡುತ್ತಾಳೆ ಎಂಟಾಣೆಕುದುರೆ ಲಾಳದ ಮಂದಿರ ನಿಮಗೆತೋರಿಸುವಳಂತೆ ನೀವದನ್ನು ಅದಾಗಲೇ ನೋಡಿದ್ದೀರಿಅಂದರೂ ಕುಂಟುತ್ತ ಬರ್ತಾಳೆ ಹಿಂದೆಬಿಗಿಯಾಗಿ ಹಿಡಿದು ಅಂಗಿ ಅಂಚನು ನಿಮಗೆ ಹೋಗಗೊಡುವುದಿಲ್ಲ ಅವಳುಗೊತ್ತಲ್ಲ, ಮುದುಕಿಯರ ಪರಿಹತ್ತಿ ಹೂವಂತೆ ಅಂಟಿಕೊಳ್ಳುವರು ತಿರುಗಿ ಎದುರಿಸುವಿರಿ ನೀವುಅವಳನ್ನು, ಈ ಆಟ ಮುಗಿಸುವಖಡಾಖಂಡಿತ ನಿಲುವಲ್ಲಿ ಅವಳಾಗ ಅನ್ನುತ್ತಾಳೆ: “ಇನ್ನೇನುಮಾಡಿಯಾಳು ಮುದುಕಿಯೊಂಟಿಇಂಥ ದರಿದ್ರ ಕಲ್ಲುಗುಡ್ಡಗಳಲ್ಲಿ?” ನೀವು ನೋಡುತ್ತೀರಿ. ನಿರಾಳ ಆಕಾಶಅವಳ ಗುಂಡು ಕೊರೆದ ತೂತಿನಂತಹಕಣ್ಣುಗಳ ಮೂಲಕ. ನೀವು ನೋಡುತ್ತಲಿರುವಂತೇಅವಳ ಕಣ್ಣುಗಳ ಸುತ್ತ ಸುರುವಾಗುವಸುಕ್ಕುಗಳು ಪಸರುತ್ತವೆ ಚರ್ಮದಾಚೆಗೂ ಗುಡ್ಡಗಳು ಬಿರುಕು ಬಿಟ್ಟುಮಂದಿರಗಳು ಬಿರುಕು ಬಿಟ್ಟುಆಕಾಶ ಕಳಚಿ ಬೀಳುತ್ತದೆ ಗ್ಲಾಸು ಬಿದ್ದು ಚೂರಾಗುವ ಗೌಜಲ್ಲಿಏಕಾಕಿ ನಿಂತಒಡೆಯಲಾಗದ ಮುದಿ ಜೀವ ಹಾಗೂ ನೀವಾಗಿರುತ್ತೀರಿಅವಳ ಕೈಯಲ್ಲಿನಚಿಲ್ಲರೆ ನಾಣ್ಯ. ======== ಆಂಗ್ಲಮೂಲ: An Old Woman An old woman grabshold of your sleeveand tags along. She wants a fifty paise coin.She says she will take youto the horseshoe shrine. You’ve seen it already.She hobbles along anywayand tightens her grip on your shirt. She won’t let you go.You know how old women are.They stick to you like a burr. You turn around and face herwith an air of finality.You want to end the farce. When you hear her say,‘What else can an old woman doon hills as wretched as these?’ You look right at the sky.Clear through the bullet holesshe has for her eyes. And as you look onthe cracks that begin around her eyesspread beyond her skin. And the hills crack.And the temples crack.And the sky falls with a plateglass clatteraround the shatter proof cronewho stands alone. And you are reducedto so much small changein her hand. =======

ಅನುವಾದ ಸಂಗಾತಿ Read Post »

ಇತರೆ

ಪ್ರಬಂಧ

ಒಂದು ವಿಳಾಸದ ಹಿಂದೆ ಸ್ಮಿತಾ ಅಮೃತರಾಜ್. ಸಂಪಾಜೆ. ವಿಳಾಸವಿಲ್ಲದವರು ಈ ಜಗತ್ತಿನಲ್ಲಿ ಯಾರಾದರೂ ಇರಬಹುದೇ?. ಖಂಡಿತಾ ಇರಲಾರರು ಅಂತನ್ನಿಸುತ್ತದೆ. ಇಂತಹವರ ಮಗ, ಇಂತಹ ಊರು,ಇಂತಹ ಕೇರಿ,ಇಂತಹ ಕೆಲಸ..ಹೀಗೆ ಇಂತಹವುಗಳ ಹಲವು ಪಟ್ಟಿ  ಹೆಸರಿನ ಹಿಂದೆ ತಾಕಿಕೊಳ್ಳುತ್ತಾ ಹೋಗುತ್ತದೆ.  ವಿಳಾಸವೊಂದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೆಂಬ ಮಾತನ್ನು ನಾವ್ಯಾರು ಅಲ್ಲಗಳೆಯುವ ಹಾಗಿಲ್ಲ. ಯಾವುದೇ ಆಮಂತ್ರಣ ಪತ್ರವಾಗಲಿ, ದಾಖಲೆಗಳಾಗಲಿ ವಿಳಾಸವಿಲ್ಲದಿದ್ದರೆ ಅಪೂರ್ಣವಾಗುತ್ತದೆ.  ಪರಿಪೂರ್ಣ ವಿಳಾಸವಂತೂ ಇವತ್ತಿನ ಆಧುನಿಕ ಯುಗದ ಜರೂರು ಕೂಡ.  ನಮಗೆಲ್ಲ ಗೊತ್ತಿರುವಂತೆ  ಅಕ್ಷರಾಭ್ಯಾಸ ಮಾಡಿ ಶಾಲೆ ಮೆಟ್ಟಿಲೇರಬೇಕಾದರೆ ನಮ್ಮ ಪೂರ್ಣ ವಿಳಾಸವೊಂದು ದಾಖಲಿಸಲ್ಪಡುವುದು. ತದನಂತರ ಮುಂದೆ ಎದುರಿಸುವ ಸಂದರ್ಶನಕ್ಕಾಗಲಿ, ಉದ್ಯೋಗಕ್ಕಾಗಲಿ ನಮ್ಮ ಪೂರ್ತಿ ವಿಳಾಸವನ್ನು ಸಂಬಂಧ ಪಟ್ಟವರಿಗೆ ನೀಡಲೇ ಬೇಕು. ನಮ್ಮ ವಿಳಾಸ ಕಟ್ಟಿಕೊಂಡು ಇವರಿಗೇನು?  ನಾವು, ನಮ್ಮ ಕೆಲಸ ಮುಖ್ಯ ತಾನೇ ಅಂತ ನಾವ್ಯಾರು ಉಢಾಪೆಯ ಮಾತುಗಳನ್ನಾಡುವಂತಿಲ್ಲ. ಅದೇನೇ ಇರಲಿ, ನಾವು ಎಲ್ಲೇ ಹೋಗಲಿ, ನೇರವಾಗಿ ನಮ್ಮ ಹೆಸರಿನ ಹಿಂದೆಯೋ, ಯಾರ ಕೇರಾಫಿನೊಳಗೋ ನಮ್ಮ ವಿಳಾಸವೊಂದು ಖುದ್ದು ಇದ್ದೇ ಇರುತ್ತದೆ. ವಿಳಾಸವಿಲ್ಲದಿದ್ದರೆ ಬರಿದೇ ವ್ಯಕ್ತಿತ್ವಕ್ಕೆ ಸಲ್ಲದ ಕಾಲವಿದು.  ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ವಿಳಾಸ ನೇರವಾಗಿ ಬರುವುದು ತೀರಾ ಅಪರೂಪ.  ಕೆಲವು ಅದಕ್ಕೆ ಅಪವಾದಗಳು ಕೂಡ ಇರಬಹುದು. ಎಳವೆಯಿಂದ ಮದುವೆಯಾಗುವ ತನಕ ಇ/ಮ ಅಂತ ನಮೂದಿಸಿ ವಿಳಾಸ ಬರೆಯುತ್ತಾರೆ. ಮದುವೆಯಾದ ಮೇಲಂತೂ ಇ/ಹೆ ಎಂದು ವಿಳಾಸ ಹೊದ್ದ ಟಪಾಲುಗಳು ಬರುತ್ತವೆ. ಮಹಿಳೆಯ ಹೆಸರಿನ ಜೊತೆಗೆ ಮನೆ ಹೆಸರು, ಊರಿನ ಹೆಸರು ಬರೆದು ಹಾಕಿದರೆ ಅದು ಯಾಕೆ ಪತ್ರಗಳು ಬಟಾವಡೆಯಾಗುವುದಿಲ್ಲವೋ ಗೊತ್ತಿಲ್ಲ. ಇದಕ್ಕೊಂದು ಸಂಶೋಧನೆಯ ಅಗತ್ಯವಿದೆ ಅಂತ ಹಲವು ಬಾರಿ ಅನ್ನಿಸಿದ್ದಿದೆ.  ಇತ್ತೀಚೆಗಂತೂ ಬಾಯಿ ಹೇಳಿಕೆಗಳು ನಿಂತು ಹೋಗಿ, ಸಾಕಷ್ಟು ನಮ್ಮ ಶ್ರಮ ಮತ್ತು ಸಮಯವನ್ನು ಉಳಿತಾಯ ಮಾಡೋ ನಿಟ್ಟಿನಲ್ಲಿ ಮದುವೆ, ಮುಂಜಿ, ನಾಮಕರಣ,ನೇಮ, ಜಾತ್ರೆ, ಗೋಷ್ಠಿಯ ಆಮಂತ್ರಣ ಪತ್ರಿಕೆಗಳು ಟಪಾಲು ಗುದ್ದಿಸಿಕೊಂಡು ಬಂದು ಪಡಸಾಲೆಯ ಮೇಜಿನ ಮೇಲೆ ಅಲಂಕರಿಸುತ್ತಲೇ ಇರುತ್ತವೆ. ಬಂದ ಎಲ್ಲ ಕರೆಯೋಲೆಗಳ ಕರೆಗೆ ನಿಯತ್ತಿನಿಂದ ಭಾಗವಹಿಸುವುದಾದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ, ವರ್ಷದ ಮುನ್ನೂರ ಅರವತ್ತೈದು ದಿನವೂ ಸಾಕಾಗಲಾರದೇನೋ.  ಕೆಲವರು ತುಂಬಾ ಬೇಕಾದವರ ಪಟ್ಟಿಯಲ್ಲಿ ಇರುವುದರಿಂದ ಕೆಲವೊಂದು ಸಮಾರಂಭಗಳಿಗೆ ಹೋಗದೆ ವಿಧಿಯಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಉಪಾಯದ ದಾರಿಯೆಂದರೆ ನಮಗೆ ಪತ್ರ ತಲುಪಲೇ ಇಲ್ಲವೆಂದು  ಅವರು ಸಿಕ್ಕಾಗ ಸುಖಾ ಸುಮ್ಮಗೊಂದು ಪಿಳ್ಳೆ ನೆವ ಹೇಳಿ ಜಾರಿಕೊಂಡು ಬಿಡುವುದು. ಆಗ ಅತ್ತ ಕಡೆಯವರಿಗೆ ಮಂಡೆ ಬಿಸಿ ಶುರುವಾಗಿ, ಛೆ! ನನ್ನ ಕೈಯಾರೆ ನಾನೇ ಸರಿಯಾದ ವಿಳಾಸ ಬರೆದಿರುವೆನಲ್ಲ? ಅಂತ ಅವರಿಗೆ ಅಂಚೆ ಇಲಾಖೆಯ ಮೇಲೆಯೇ ಗುಮಾನಿ ಶುರುವಾಗಿ ಬಿಡುತ್ತದೆ. ಅದು ಕೆಲವೊಮ್ಮೆ ಎಷ್ಟರ ಮಟ್ಟಿಗೆ ಹೋಗುತ್ತದೆಯೆಂದರೆ ಅಂಚೆಯಣ್ಣ ಸಿಕ್ಕಾಗ ಅವನನ್ನು ನಿಲ್ಲಿಸಿ ನೂರೆಂಟು ಪ್ರಶ್ನೆಗಳನ್ನು ಕೇಳುವಲ್ಲಿಯವರೆಗೆ. ಇಷ್ಟಾಗುವಾಗ ನಮ್ಮ ಉಪಸ್ಥಿತಿ ಅಷ್ಟೊಂದು ಪ್ರಾಮುಖ್ಯ ಇತ್ತಾ? ಅಂತ ಮನದೊಳಗೊಂದು ಸಣ್ಣಗೆ ಬಿಗುಮಾನ ಮೂಡಿ ,ಸುಮ್ಮಗೆ ತಪ್ಪಿಸಿಕೊಂಡದ್ದಕ್ಕೆ ನಮ್ಮನ್ನು ನಾವು ಶಪಿಸಿಕೊಳ್ಳುವಂತಾಗುತ್ತದೆ.   ಮೊನ್ನೆಯೊಂದು ಸಮಾರಂಭದಲ್ಲಿ ಪರಿಚಿತರೊಬ್ಬರು ಪಕ್ಕದಲ್ಲಿದ್ದ ಆಂಟಿಯನ್ನು ಮತ್ತೊಬ್ಬರಿಗೆ ಪರಿಚಯಿಸುತ್ತಾ, ಇವರು ಇಂತಹವರ ಅತ್ತೆ, ಇವರ ಅಳಿಯ ಗೊತ್ತುಂಟಲ್ವಾ..ಭಾರೀ  ಫೇಮಸ್ ಅಂತ ಮತ್ತಷ್ಟು ಒಗ್ಗರಣೆ ಹಾಕಿ ಹೊಗಳುತ್ತಿರುವುದನ್ನು ನಾನು ಕಡೆಗಣ್ಣಿನಿಂದ ನೋಡುತ್ತಾ ಇವರು ಈಗ ಗತ್ತಿನಿಂದ ಬೀಗುತ್ತಾರೇನೋ ಅಂತ ಗಮನಿಸಿದರೆ, ಆಂಟಿಯ ಮುಖದಲ್ಲಿ ಖುಷಿಯ ಇನಿತು ಅಲೆಯೂ ನುಗ್ಗಲಿಲ್ಲ. ಏಕ್ ದಂ ಅವರು ರಾಂಗ್ ಆಗಿ, ಮುಖ ಕೆಂಪಾಗಿ, ಮೂಗಿನ ತುದಿ ಖಾರ ಮೆಣಸಿನಕಾಯಿಯಾಗಿ ಯಾಕ್ರೀ..! ಅವರಿವರ ವಿಳಾಸ ಹೇಳಿಕೊಂಡು ನನ್ನನ್ನು ಪರಿಚಯಿಸ್ತೀರಲ್ಲಾ?, ನನಗೆ ನನ್ನದೇ ಆದ ಪೂರ್ಣ ವಿಳಾಸವಿಲ್ಲಾ? ಅಂತ ರಪ್ಪನೆ ಕೆನ್ನೆಗೆ ಬಾರಿಸಿದಂತೆ ಕೊಟ್ಟ ಖಾರ ಉತ್ತರದ ಘಾಟಿಗೆ ಆ ಮಹಾಶಯರು ಮುಖ ಹುಳ್ಳಗೆ ಮಾಡಿಕೊಂಡು ಅದಾಗಲೇ ಜಾಗ ಖಾಲಿ ಮಾಡಿದ್ದರು. ನೋಡಿದವರಿಗೆ ಇದೊಂದು ಅಧಿಕಪ್ರಸಂಗಿತನದ ಉತ್ತರ ಅಂತ ಅನ್ನಿಸಿದರೂ ನಿಜಕ್ಕೂ ಅವರ ಧೈರ್ಯಕ್ಕೆ ಮತ್ತು ಮನೋಭಾವಕ್ಕೆ ಭೇಷ್ ಅನ್ನಲೇ ಬೇಕು. ಅವರಿವರ ವಿಳಾಸ ಹೇಳಿಕೊಂಡು ನಮ್ಮನ್ನು ಪರಿಚಯಿಸುವ ಅಗತ್ಯವಿದೆಯಾ? ನಮಗೂ ಸ್ವತಂತ್ರ ಅಸ್ಥಿತ್ವ ಇರಬಾರದ? ಅನ್ನುವುದು ಅವರ ವಾದ. ಒಂದು ಸಹಜ ಪ್ರಶ್ನೆಗೆ ರೇಗುವಿಕೆಯ ಹಿಂದೆ ಅದೆಷ್ಟು ನೋವಿತ್ತೋ ಅದು ಅವರಿಗಷ್ಟೇ ಗೊತ್ತು. ಆಗಲೇ ಗೆಳತಿಯೊಬ್ಬಳು ಹೇಳಿದ ಮಾತು ನೆನಪಾದದ್ದು.  ಬಡ ಮನೆತನದ ಹುಡುಗಿಯೇ ಬೇಕೆಂದು ಹಠಕಟ್ಟಿ ಸೊಸೆಯನ್ನಾಗಿಸಿಕೊಂಡ ನಂತರ, ನಮ್ಮಿಂದಾಗಿ ನಿನಗೊಂದು ಪೂರ್ಣ ವಿಳಾಸ ದಕ್ಕಿದೆ ಅಂತ  ಅವಳತ್ತೆ ಮೂದಲಿಸುತ್ತಿದ್ದದ್ದು . ನಿಜಕ್ಕೂ ವಿಳಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದ ನಾನು, ಈ ವಿಳಾಸ ಇಷ್ಟೊಂದು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆಯಲ್ಲವಾ ? ಅಂತ ನನಗೆ ಆವತ್ತೇ ಅನ್ನಿಸಿದ್ದು, ಮತ್ತೆ ಹೀಗೇ ವಿಳಾಸದ ಅನೇಕ ಕತೆಗಳು ಬಿಚ್ಚಿಕೊಳ್ಳುತ್ತಾ ಹೋದದ್ದು.   ಈಗೀಗ ವಿಳಾಸದ ಸಂಗತಿಗಳು ಮೊದಲಿನಂತಿಲ್ಲ. ಪಾಸ್ ಪೋರ್ಟ್, ವೀಸಾ ಮುಂತಾದವುಗಳಿಗೆ ದಾಖಲೆ ತೋರಿಸುವಾಗ ಎಲ್ಲಾ ಕಡೆಯಿಂದಲೂ ವಿಳಾಸ ಸಮನಾಗಿ ಕಾಣಬೇಕು. ಒಂದು ಅಕ್ಷರವಾಗಲಿ, ಇನಿಷಿಯಲ್ ಆಗಲಿ , ಹೆಸರಿನ ಹಿಂದೆ ಅಂಟಿಕೊಂಡ ಮನೆತನದ ಹೆಸರುಗಳಾಗಲಿ ಯಾವುದೂ ಬದಲಾವಣೆ ಹೊಂದುವAತಿಲ್ಲ. ಒಂದು ಸಣ್ಣ ಅಕ್ಷರದ ಪ್ರಮಾದದಿಂದ ಅದೆಷ್ಟೋ ದೊಡ್ಡ ಅವಕಾಶಗಳು ಕೈ ತಪ್ಪಿ ಹೋದ ಸಂದರ್ಭಗಳಿವೆ. ಎರಡೇ ಎರಡು ಇನಿಷಿಯಲ್‌ಗಳಿಗೂ ಕೂಡ ಅಷ್ಟೊಂದು ಪ್ರಾಮುಖ್ಯತೆ ಉಂಟಾ ಅಂತ ಅಚ್ಚರಿಯಾಗುತ್ತದೆ. ಹಾಗಾಗಿ ನಮ್ಮ ಹೆಣ್ಮಕ್ಕಳೀಗ ಯಾವುದೇ ಸಬೂಬುಗಳನ್ನು ಕೊಡದೆ ಧೈರ್ಯದಿಂದ ಅಪ್ಪನ ಮನೆಯಿಂದ ಬಳುವಳಿಯಾಗಿ ಬಂದ ಹೆಸರನ್ನೇ ಇಟ್ಟುಕೊಂಡು ನಿಸೂರಾಗಿದ್ದಾರೆ.   ಒಮ್ಮೆ ಹೀಗಾಗಿತ್ತು, ಮದುವೆಗೆ ಮೊದಲೇ ನನಗೆ ಕವಿತೆ,ಲೇಖನ ಬರೆಯುವ ಹುಚ್ಚು. ಆಗೆಲ್ಲಾ ತವರು ಮನೆಯ ಹೆಸರನ್ನು ನನ್ನ ಹೆಸರಿನ ಹಿಂದೆ ಅಂಟಿಸಿಕೊಂಡಿದ್ದೆ. ಮದುವೆಯಾದ ಮೇಲೂ ಅದೇ ಹೆಸರು ಹಾಕಿ ಕವಿತೆ ವಾಚಿಸಲು ಕರೆಯುವುದು, ಆಮಂತ್ರಣ ಪತ್ರಿಕೆ ಬರುವುದು, ಅನೇಕ ಸಂದರ್ಭಗಳಲ್ಲಿ ಅದೇ ಹೆಸರಿನಿಂದ ಗುರುತಿಸುವಾಗ ಯಾಕೋ ಸಣ್ಣಗೆ ಕಸಿವಿಸಿಯಾಗುತ್ತಿತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನುವ ಮಾತನ್ನು ಕೆಲವರು ತಮಾಷೆಗೇನೋ ಎಂಬಂತೆ ಮೆಲ್ಲಗೆ ನನ್ನ ಕಿವಿಯಲ್ಲಿ ಉಸುರಿದ್ದರು ಕೂಡ . ಒಂದೊಮ್ಮೆ ಹಾಗೇ ನನ್ನ ಹೆಸರಿನ ಹಿಂದೆ ತವರು ಮನೆಯ ಹೆಸರು ಅಂಟಿಕೊಂಡು ಬಂದಾಗ, ನಾನು ಸಂಘಟಕರಿಗೊಂದು ಪತ್ರ ಬರೆದು ,ನನಗೆ ಮದುವೆಯಾದ ಕಾರಣ ನನ್ನ ಹೆಸರಿನ ಹಿಂದಿನ ಈಗಿನ ವಿಳಾಸ ಬದಲಾಗಿದೆ, ಇನ್ನು ಮುಂದೆ ಈ ಕೆಳಕಂಡ ವಿಳಾಸದಂತೆ ನಮೂದಿಸಬೇಕೆಂದು ಪತ್ರ ಬರೆದದ್ದು ನೆನೆದರೆ ನಾನು ಅವರಿವರು ಕೇಳುವ ಪ್ರಶ್ನೆಯಿಂದ ಬಚಾವಾಗಲು ಹೀಗೆ ಮಾಡಿದೇನಾ?!. ಅಥವಾ ಇದು ನನ್ನ ಖಾಯಂ ವಿಳಾಸ ಅನ್ನೋ ಮೋಹವಿತ್ತಾ? ನೆನಪಿಗೆ ಸರಿಯಾಗಿ ಒದಗಿ ಬರುತ್ತಿಲ್ಲ.  ಈ ಹೊತ್ತಿನಲ್ಲಿ ಎಳವೆಯ ಕತೆಯೊಂದು ನುಗ್ಗಿ ಬರುತ್ತಿದೆ. ಏಳನೇ ತರಗತಿಯಲ್ಲಿ ನಮ್ಮ ಕನ್ನಡ ಟೀಚರ್ ನಮಗೆ ಪತ್ರ ಲೇಖನ ಕಲಿಸುತ್ತಿದ್ದರು. ಪರೀಕ್ಷೆಗೆ ಇದನ್ನೇ ಕೊಡುವೆನೆಂದು ಕೂಡ ಹೇಳಿದ್ದರು. ಅದೇ ವರ್ಷ ನನ್ನ ತಂದೆ ತೀರಿ ಹೋಗಿ ನಾನು ಯಾವ ವಿಳಾಸಕ್ಕೆ ಪತ್ರ ಬರೆಯಲಿ ಎಂಬುದೇ ನನಗೆ ಬಹು ದೊಡ್ಡ ಚಿಂತೆಯಾಗಿತ್ತು. ಜೊತೆಗೆ ವಿಳಾಸವೇ ಕೊಡದೆ ಹೋದ ಅಪ್ಪನ ಬಗ್ಗೆಅಗಾಧ ದು:ಖವೂ ಸಣ್ಣಗೆ ಅಸಮಾಧಾನವೂ ಆಗಿತ್ತು.  ಯಾಕೆಂದರೆ ನನಗೆ ಮೊದಲು ಪತ್ರ ಬರೆಯುವ ಹುಚ್ಚು ಹಿಡಿಸಿದ್ದೇ ನನ್ನ ಅಪ್ಪ. ಒಳಗಡೆ ನೀಟಾಗಿ ಬರೆಯದಿದ್ದರೂ ತೊಂದರೆಯಿಲ್ಲ, ಆದರೆ  ವಿಳಾಸವೊಂದು ಚಿತ್ತಿಲ್ಲದೆ ಸರಿಯಾಗಿ ಬರೆಯ ಬೇಕೆಂದು ತಾಕೀತು ಮಾಡಿದ್ದರು. ಇಲ್ಲದಿದ್ದರೆ ಪತ್ರ ತಲುಪಬೇಕಾದಲ್ಲಿಗೆ ತಲುಪದೆ ಹಾಗೇ ಡಬ್ಬಿಯೊಳಗೆ ಉಳಿದು ಬಿಡುತ್ತದೆಯೆಂದು ಹೆದರಿಸುವುದರ ಮೂಲಕ ಜಾಗರೂಕತೆಯಿಂದ ವಿಳಾಸ ಬರೆಯುವ ವಿಧಾನವ ಕಲಿಸಿ ಕೊಟ್ಟಿದ್ದರು. ಯಾಕೋ ಇದನ್ನೆಲ್ಲಾ ಟೀಚರಮ್ಮನ ಬಳಿ ಕೇಳೋಕೆ  ಒಂಥರಾ ಭಯ . ಇದೇ ಗೊಂದಲದಲ್ಲಿರುವಾಗಲೇ ಪಕ್ಕದ ಮನೆಯ ಅಣ್ಣನೊಬ್ಬ ನನಗೆ ಪುಕ್ಕಟೆ ಸಲಹೆಯೊಂದನ್ನು ಬಹು ಗಂಭೀರವಾಗಿ ಕೊಟ್ಟಿದ್ದ. ಈ ಸಲದ ಪರೀಕ್ಷೆಗೆ ಅಪ್ಪನ ವಿಳಾಸ ಹಾಕಿ, ಅಪ್ಪನಿಗೊಂದು ಪತ್ರ ಬರೆ ಅಂತ ಕೊಟ್ಟರೆ, ನನಗೆ ಅಪ್ಪನಿಲ್ಲದ ಕಾರಣ ನಾನು ನನ್ನ ಅಮ್ಮನ ವಿಳಾಸಕ್ಕೆ ಅಮ್ಮನಿಗೆ ಪತ್ರ ಬರೆಯುತ್ತಿರುವೆ ಅಂತ ಒಕ್ಕಣೆಯನ್ನು ಲೆಕ್ಕಿಸಿ ಪತ್ರ ಬರಿ ಅಂತ ಹೇಳಿದ್ದ.  ಅವನು ಹೇಳಿದ ಮಾತನ್ನು ಶಿರಸಾವಹಿಸಿ ಪಾಲಿಸಿದ್ದೆ ಕೂಡ. ನನ್ನ ಪತ್ರ ಲೇಖನ ಓದಿದ ಟೀಚರಮ್ಮನ ಕಣ್ಣಲ್ಲಿ ಹನಿಯೊಡೆದು,ಕನಿಕರ ಹುಟ್ಟಿ, ಮುಂದೆ ಬರುವ ದೊಡ್ಡ ಪರೀಕ್ಷೆಯಲ್ಲಿ ಮಾತ್ರ ಹೀಗೆ ಬರಿಬೇಡ ಆಯ್ತಾ ಅಂತ  ಗಟ್ಟಿ ಸ್ವರದ ಮೇಡಂ ತೀರಾ ಮೆತ್ತಗೆ ದನಿಯಲ್ಲಿಯೇ ಅದರ ಉದ್ದೇಶವನ್ನು ಹೇಳಿಕೊಟ್ಟಿದ್ದರು.  ಒಂದಷ್ಟು ವರುಷದ ಹಿಂದೆ ಪತ್ರ ಬರೆಯುವುದು, ಮತ್ತು ಪತ್ರ ಬರುವುದಕ್ಕೂ ಒಂದು ಘನತೆ ಇರುತ್ತಿತ್ತು. ಕ್ಷೇಮವೇ? ಕುಶಲವೇ? ಅಂತ ಶುರುಗೊಳ್ಳುವ ಒಕ್ಕಣೆಯಿಂದ ಹೇಳ ಬೇಕಾದುದ್ದನ್ನೆಲ್ಲ ಅರುಹಿ, ಪತ್ರದ ನಾಲ್ಕು ಬದಿಗೂ ಚೆನ್ನಾಗಿ ಗೋಂದು ಅಂಟಿಸಿ , ವಿಳಾಸ ಸರಿಯಿದೆಯಾ ಅಂತ ಮತ್ತೊಮ್ಮೆ ಕಣ್ಣಾಡಿಸಿ  ಅಂಚೆ ಡಬ್ಬಿಗೆ ಹಾಕಿದ ಮೇಲೇ ಏನೋ ಹಗುರತನದ ಭಾವ. ಈಗ ಇಂಟರ್ನೆಟ್ ಯುಗದಲ್ಲಿ ವಿಳಾಸ  ಬರೆದು ಪತ್ರಿಸುವ ಕಾಯಕ ಕಣ್ಮರೆಯಾದರೂ, ವಿಳಾಸವಂತೂ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ಇದರಿಂದಾಗುವ ಗಲಿಬಿಲಿ, ಗೊಂದಲ, ಗಂಡಾಂತರಗಳು ಹಲವು. ಇತ್ತೀಚೆಗಂತೂ ದೊಡ್ಡ ದೊಡ್ಡ ಬಡಾವಣೆಗಳಲ್ಲಿ ವಿಳಾಸ ಹುಡುಕಿಕೊಂಡು ಗಲ್ಲಿ ಗಲ್ಲಿ ಅಲೆಯುವುದು ಅದೆಷ್ಟು ತ್ರಾಸದಾಯಕ ಕೆಲಸ ಅನ್ನುವಂತದ್ದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಆಟೋ ಚಾಲಕರೆಲ್ಲಾ ಒಂದೇ ರೀತಿ ಇರದಿದ್ದರೂ ಕೆಲವೊಮ್ಮೆ ನಮ್ಮ ಕಣ್ಕಟ್ಟು ಮಾಡಿ ನಿಂತ ಜಾಗದಲ್ಲೇ ಸುತ್ತು ತಿರುಗಿಸಿ ದುಪ್ಪಟ್ಟು ಹಣ ಮಸೂಲಿ ಮಾಡುವುದು ಸರ್ವೇ ಸಾಮಾನ್ಯ. ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ಅಷ್ಟಾಗಿ ಪ್ರವೇಶ ಮಾಡಿರದ ನಾನು, ಒಂದೊಮ್ಮೆ ಹೈದರಬಾದಿಗೆ ಹೋಗಿ ಬೆಂಗಳೂರಿಗೆ ಬಂದಿಳಿದಾಗ, ಸರಿಯಾದ ವಿಳಾಸಕ್ಕೆ ತಲುಪಿಸದೆ ಆಟೊ ಚಾಲಕ ಅಡ್ಡಾಡಿಸಿದ್ದು, ಜೊತೆಯಲ್ಲಿ ಇದ್ದ ಗೆಳತಿಯೊಬ್ಬಳು ಅವನ ಕಷ್ಟ ಸುಖ ವಿಚಾರಿಸುತ್ತಾ ಕುಳಿತ್ತದ್ದು,  ಅದನ್ನು ಕೇಳಿಕೊಂಡೇ ಅವ ನಮ್ಮನ್ನು ಸುಮ್ಮಗೆ ಮತ್ತೊಂದು ಸುತ್ತು ಸುತ್ತಿಸಿದ್ದು, ತದನಂತರ ತಲುಪಿಸಬೇಕಾದಲ್ಲಿಗೆ ನಮ್ಮ ತಲುಪಿಸದೆ ನಾವು ಬೆಪ್ಪು ತಕ್ಕಡಿಯಂತಾಗಿ ಮತ್ತೊಂದು ಆಟೋ ಹತ್ತಿ ಗೆಳತಿಗೆ ತುಟಿ ತೆರೆಯದಂತೆ ಆದೇಶ ಮಾಡಿ ತಲುಪಬೇಕಾದ ವಿಳಾಸ ತಲುಪಿದ್ದು ಎಲ್ಲಾ ಈಗ ಕತೆಯಂತೆ ಸುಳಿದು ಹೋಗುವ ವಿಚಾರ.  ಅದೇನೆ ಇರಲಿ, ಗುರುತು ಪರಿಚಯ ಇರದ ಊರಿಗೆ ಬಂದು  ಗೊತ್ತಿಲ್ಲದ ವಿಳಾಸವೊಂದನ್ನು  ಕೈಯಲ್ಲಿ ಹಿಡಿದು ಕೊಂಡು ಆಟೋ ಹತ್ತಿ ಅಂಡೆಲೆಯುವಾಗ ಪರ್ಸ್ನಲ್ಲಿದ್ದ ಹಣ ಪೂರ ಖಾಲಿಯಾಗುವುದು ಮಾತ್ರ ವಿಳಾಸದ ಮಹಿಮೆಯೇ ಸರಿ.  ಒಮ್ಮೆ ತೀರಾ ಎಳವೆಯಲ್ಲಿ ಸಂಬಂಧಿಕರ ಮನೆಗೆಂದು ಬೆಂಗಳೂರಿಗೆ ಹೋದ ನನ್ನ ಪುಟ್ಟ ತಮ್ಮನಿಗೆ  ನಾವು ಅದೆಷ್ಟು ಭಾರಿ ಜಾಗ್ರತೆ ಹೇಳಿ ಕೊಟ್ಟಿದ್ದರೂ ಝಗಮಗಿಸುವ ರಸ್ತೆ ಬದಿಯ ಗಿಜಿಗುಟ್ಟುವ ಅಂಗಡಿಯನ್ನು ನೋಡುತ್ತಾ ನೋಡುತ್ತಾ ಅದೆಲ್ಲೋ ಕಳೆದು ಹೋದದ್ದು ಗೊತ್ತಾಗಲೇ ಇಲ್ಲ. ತಾನೆಲ್ಲಿರುವೆನೆಂಬ ಅರಿವಾದಾಗ ಸರಿಯಾದ ವಿಳಾಸ ಹೇಳಲು ಗೊತ್ತಿಲ್ಲದೆ ಅಳುತ್ತಾ ನಿಂತವನನ್ನು  ಅದೇಗೋ ಹುಡುಕಿ ಪತ್ತೆ ಹಚ್ಚಿ ಬಿಟ್ಟಿದ್ದಾರೆ. ಈಗ ಅದೇ ಊರಿನಲ್ಲಿ ವಾಸವಾಗಿರುವ ತಮ್ಮ ಯಾವ ವಿಳಾಸ ಕೊಟ್ಟರೂ ಅಲ್ಲಿಗೆ ಹೋಗಿ ಬರುವ ಚಾಕಚಕ್ಯತೆಯನ್ನು ಬೆಳೆಸಿಕೊಂಡಿದ್ದಾನೆ ಅನ್ನುವುದು ಬೆಳವಣಿಗೆಗೆ ಒಡ್ಡಿಕೊಂಡ ಕಾಲದ ಬದಲಾವಣೆ ತಂದಿತ್ತ ಸೋಜಿಗವೇ ಸರಿ.  ಬೆಂಗಳೂರಿಗೆ ಆಗೊಮ್ಮೆ ಈಗೊಮ್ಮೆ ಬಂದಾಗಲೆಲ್ಲಾ ವಿಳಾಸ ಗೊತ್ತಿದ್ದೂ

ಪ್ರಬಂಧ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ರೈತ ದಿನಾಚರಣೆ ಕೆ.ಶಿವು ಲಕ್ಕಣ್ಣವರ್ ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶನೆತ್ತಿ ಕೊಡುತಿರುವ ರೈತನ ದಿನಾಚರಣೆ ಇಂದು..! ಇಂದು ಡಿಸೆಂಬರ್ 23. ಅಂದರೆ ರೈತ ದಿನಾಚರಣೆ. ಈ ದಿನಾಚರಣೆ ನಮ್ಮೆಲ್ಲರ ಊಟವನ್ನು ಮಾಡಿಸುತ್ತಿರುವ ರೈತನ ನೆನೆ, ನೆನೆದು ಉಣ್ಣುವ ದಿನ… ಆ ನಿಮಿತ್ಯ ರೈತನನ್ನು ನೆನೆವ ಲೇಖನವಿದು… ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು, ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ, ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶವನೆತ್ತಿ ಕೊಡುತ್ತಿರುವವ ರೈತ… ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ. ಇಂತಹ ರೈತನ ದಿನಾಚರಣೆ ಎಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಇದು ತುಂಬಾ ವಿಪರ್ಯಾಸ… ಅಂದರೆ, ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿಸಿದರೆ ಇನ್ನೇಲ್ಲಿದೆ ರೈತನಿಗೆ ಗೌರವ. ರೈತ ದಿನಾಚರಣೆ ಇತಿಹಾಸ ಮತ್ತು ಹಿನ್ನೇಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ವಂದಿಸಬೇಕಿದೆ. “ನೀನು ಇವತ್ತು ಊಟ ಮಾಡಿದ್ದರೆ ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೇ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದರ ಹಿಂದೆ ರೈತನ ಶ್ರಮ ಮತ್ತು ಬೆವರೇ ಮುಖ್ಯ ಕಾರಣ… ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕೆಂಬುದು ಮೇಲಿನ ಸಾಲಿನ ಅರ್ಥ. ನಮಗೆಲ್ಲರಿಗೂ ಡಾಕ್ಟರ್‍ಗಳು, ಲಾಯರ್‍ಗಳು, ಇಂಜನಿಯರ್‍ಗಳೂ ಮಾತ್ರ ಬೇಕಾಗುತ್ತಾರೆ. ಆದರೆ, ದಿನ ಒಂದಕ್ಕೆ ಮೂರು ಹೊತ್ತು ತುತ್ತು ಅನ್ನವನ್ನು ನೀಡಿದ ರೈತನ ನೆನಪು ಮಾತ್ರ ಬರುವುದಿಲ್ಲ. ಇಂತಹ ರೈತನನ್ನೇ ನಾವಿಂದು ಕಡೆಗಣಿಸಿದ್ದೇವೆ… ಭಾರತದ ಮೊದಲ ಪ್ರಧಾನ ಮಂತ್ರಿ ಆಗಿದ್ದ ಜವಾಹರಲಾಲ ನೆಹರೂರವರು ಹೇಳಿದಂತೆ “ಪ್ರಕೃತಿಯು ಕೃಷಿಯೊಂದಿಗೆ ಜೂಜಾಟ ಆಡುತ್ತಿದೆ”. ಹಲವಾರು ಪ್ರದೇಶಗಳಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿ, ಇಲ್ಲವೇ ರೋಗ-ಕೀಟಗಳ ಬಾಧೆ, ಹೀಗೆ ಅನೇಕ ಕಾರಣಗಳಿಂದ ರೈತರು ನಿರಂತರವಾಗಿ ನಷ್ಟಗಳನ್ನು ಅನುಭವಿಸುತ್ತಾ ಸಾಲಗಾರರಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಒಂದೊಮ್ಮೆ ಒಳ್ಳೆಯ ಫಸಲು ಬಂದಾಗಲೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟವಾಗಿ ಬೆಳೆಗಳನ್ನು ಬೆಳೆಯಲು ಸುರಿದ ಬಂಡವಾಳವು ಮರಳಿ ಬಾರದಂತಾಗಿದೆ. ಕೆಲವರಂತೂ ಸಾಲದ ಬಾಧೆ ತಾಳದೇ ನೇಣಿಗೇ ಕೊರಳೊಡ್ಡುತ್ತಿದ್ದಾರೆ. ಇದು ಅತ್ಯಂತ ಚಿಂತಾದಾಯಕ ಸ್ಥಿತಿ. ಹಲವಾರು ಸಂಕಷ್ಟಗಳ ನಡುವೆಯೂ ನಮ್ಮ ದೇಶದಲ್ಲಿ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮಣ್ಣಿನ ಮಗ… ರೈತನ ಶ್ರಮ, ಆತನ ಬೆವರ ಹನಿ, ಮಳೆ ಇರಲಿ-ಬಿಡಲಿ-ಹೆಚ್ಚಾಗಲಿ-ಕಡಿಮೆಯಾಗಲಿ ಒಂದು ಒಳ್ಳೆಯ ಬೆಳೆಯನ್ನು ಪಡೆಯುವ ಆಸೆಯ ನಿರೀಕ್ಷೆಯಿಂದ ಹೊಲವ ಬಿತ್ತುತ್ತಾನೆ. ಸಾಕಷ್ಟು ಪ್ರಯತ್ನ ಪಟ್ಟು ಮಳೆ ಚಳಿ ಬಿಸಿಲುಗಳೆನ್ನದೇ, ಹಗಲು-ರಾತ್ರಿ ಪರಿವೇ ಇಲ್ಲದೇ, ಶ್ರಮ ವಹಿಸಿ ವ್ಯವಸಾಯ ಮಾಡುತ್ತಾನೆ. ಈ ವ್ಯವಸಾಯವೇ ನಮ್ಮ ಅನ್ನದ ಬಟ್ಟಲನ್ನು ತುಂಬಿಸುತ್ತದೆ… ಇಂತಹ ರೈತರ ಶ್ರಮಕ್ಕೆ ನಾವಿಂದು ಬೆಲೆ ಕೊಡಬೇಕಾಗಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷಿಗೆ ಹೆಚ್ಚು ಒತ್ತು ಸಿಗಬೇಕಾದ ವ್ಯವಸ್ಥಿತವಾದ ಕೃಷಿ ಮಾಹಿತಿ ವಿನಿಮಯ ವ್ಯವಸ್ಥೆ, ವ್ಯವಸ್ಥಿತ ಮಾರುಕಟ್ಟೆಗಳ ಲಭ್ಯತೆ ಮತ್ತು ಸ್ಥಿರವಾದ ಬೆಲೆಯನ್ನು ದೊರಕಿಸಿಕೊಡುವ ಪ್ರಮಾಣಿಕ ಪ್ರಯತ್ನ ಸರ್ಕಾರ ಮತ್ತು ಉನ್ನತ ಮಟ್ಟದ ಆಡಳಿತ ವರ್ಗದಿಂದ ಆಗಬೇಕಾಗಿದೆ… ಒಕ್ಕಲನು ನಲುಗಿಸದೇ ಲೆಕ್ಕವನು ಸಿಕ್ಕಿಸದೇ, ಕಕ್ಕುಲತೆಯಿಂದ ನಡೆಸುವ ಅರಸು ತಾ ಚೆಕ್ಕಂದವಿರುವ – ಸರ್ವಜ್ಞ ರೈತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಮಾತ್ರ ರೈತ ಸಧೃಡವಾಗಿ ಬದುಕಲು ಸಾಧ್ಯ. ಇಲ್ಲದೇ ಹೊದಲ್ಲಿ ಆ ನಾಡಿನ ಆರ್ಥಿಕ ಬೆಳವಣಿಗೆ ಆರೋಗ್ಯಕರವಾಗಿರುವುದಿಲ್ಲ. ರೈತ ಸಮಸ್ಯೆಗಳ ಸುಳಿಗೆ ಸಿಕ್ಕು ಹಳ್ಳಿಗಳಿಗೆ ಬೆನ್ನು ಮಾಡಿ ಪಟ್ಟಣಗಳತ್ತ ಮುಖ ಮಾಡಿದರೆ, ಪ್ರತಿಯೊಬ್ಬರು ಅನ್ನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ದೇಶ ಹಳ್ಳಿಗಳ ದೇಶ. ರೈತ ಉದ್ಧಾರವಾದರೆ, ಹಳ್ಳಿಗಳು ಉದ್ಧಾರವಾದಂತೆ. ಹಳ್ಳಿಗಳು ಉದ್ಧಾರವಾದರೆ, ಇಡೀ ದೇಶವೇ ಉದ್ಧಾರವಾದಂತೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ… ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು… ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು… ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು. ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು. ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು… ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು… ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು. ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ. ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ… ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಉತ್ತರ ಪ್ರದೇಶದಲ್ಲಿ ಈ ದಿನದಂದು ಸಾರ್ವಜನಿಕ ರಜೆ ಇರುತ್ತದೆ. ಈ ದಿನದಂದು ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳಲ್ಲೆಡೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ… ಇಂದು ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತು ಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ… ಕೃಷಿ ಮತ್ತು ರೈತ ಎರಡೂ ಅತ್ಯಂತ ಪ್ರಮುಖವಾಗಿದ್ದರೂ ಅಭಿವೃದ್ಧಿ ಪಥದಲ್ಲಿ ಇವೆರಡೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಹೇಳಬಹುದು. ಕೃಷಿಯ ಬೆಳೆವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ನೀತಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇವು ಇತರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ತೀವ್ರ ಕಡಿಮೆ ಎನ್ನಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿನ ದೋಷಗಳಿಂದ ಅವು ರೈತರಿಗೆ ತಲುಪದೆ ಅಭಿವೃದ್ಧಿ ಪಥದಲ್ಲಿ ಕೃಷಿ ಇನ್ನೂ ಎಗುತ್ತಲೇ ಸಾಗಿದೆ ಎನ್ನಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳನ್ನು ಹೆಸರಿಸಬಹುದು… “ಹಸಿರು ಕ್ರಾಂತಿ” ಯಿಂದಾಗಿ ದೇಶದ ಆಹಾರೋತ್ಪಾದನೆ ಹೆಚ್ಚಾಗಿದ್ದಂತು ನಿಜ. ಆದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಸರಕಾರಗಳು ಮತ್ತು ಇಲಾಖೆಗಳು ಮುಂದಾಲೋಚಿಸಿರಲಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದ ಭೂಮಿಯ ಒಡಲು ವಿಷದಿಂದ ತುಂಬಿದೆ. ಭೂಮಿಯಲ್ಲಿ ಸಾವಯವದ ಅಂಶ ತೀವ್ರ ಕಡಿಮೆಯಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ವಾಸ್ತವವಾಗಿ ಭೂಮಿಯು ನಿರ್ಜೀವವಾಗುತ್ತಿದೆ. ಮಣ್ಣಿನ ತೇವಾಂಶವನ್ನು ಹಿಡಿದಿಡುವ ಶಕ್ತಿ ಕಡಿಮೆಯಾಗಿ ಬೆಳೆಗಳಿಗೆ ನೀರಿನ ಅಭಾವವುಂಟಾಗಿ ನಿರೀಕ್ಷಿತ ಇಳುವರಿಯನ್ನು ಪಡೆಯಲಾಗುತ್ತಿಲ್ಲ… ಎಷ್ಟೋ ಬಾರಿ ಖುರ್ಚು ಮಾಡಿದ ಬಂಡವಾಳವೂ ಸಹಿತ ಮರಳದಂತಾಗಿದೆ. ಇದರಿಂದಾಗಿ ನಮ್ಮ ರೈತರು ತೀವ್ರ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳು, ಕೈಗಾರಿಕೆಗಳು, ಶಹರಗಳು, ವಿಮಾನ ನಿಲ್ದಾಣಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಉಪಯೋಗಿಸಿಕೊಳ್ಳುವುದರಿಂದ ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಈ ನಾಗಾಲೋಟದ ಕಾರಣ, ಕಾಡುಗಳು ಸಹ ನಾಶವಾಗುತ್ತಿದ್ದು, ಪರಿಸರದಲ್ಲಿ ಅತಿ ಹೆಚ್ಚಿನ ಅಸಮತೋಲನ ಕಂಡು ಬರುತ್ತಿದೆ. ಇದರಿಂದ ಬರ, ಅಕಾಲಿಕ ಮಳೆ ಕೆಲವೆಡೆ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುತ್ತ್ತಿವೆ. ಇನ್ನು ತಾಪಮಾನವು ಸಹ ಹೆಚ್ಚುತ್ತಿದ್ದು, ತೇವಾಂಶದ ಕೊರತೆಯ ಜೊತೆಗೆ ಹೆಚ್ಚಿದ ಉಷ್ಣಾಂಶದಿಂದ ಕೆಲವೊಂದು ಬೆಳೆಗಳನ್ನು ಬೆಳೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಜಾಗತಿಕ ತಾಪಮಾನದ ಪರಿಣಾಮ ಎನ್ನಬಹುದು… ಒಟ್ಟಾರೆ ಕೃಷಿ ಮತ್ತು ರೈತ ಎಲ್ಲ ಕಡೆಯಿಂದಲೂ ಪರೀಕ್ಷೆಗೆ ಒಳಪಡಲಾಗುತ್ತಿದ್ದು, ಒಂದು ಬೆಳೆಯನ್ನು ಬೆಳೆಯಲು ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಭಾರತದ ಕೃಷಿ ಸ್ಥಿತಿಯು ಗೊಂದಲಮಯ ಸ್ಥಿತಿಯಲ್ಲಿದೆ. ಇಲ್ಲಿಂದ ಮುಂದಕ್ಕೆ ಇಡಬೇಕಾದ ಹೆಜ್ಜೆಯನ್ನು ನಾವಿನ್ನು ಮುಂದಾಲೋಚನೆಯಿಂದ, ವಿವೇಕತನದಿಂದ ಮತ್ತು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗಿದೆ. ನಮ್ಮ ದೇಶದ ಮಟ್ಟಿಗೆ ಕೃಷಿಯು ಕೇವಲ ಆಹಾರೋತ್ಪಾದನೆಯ ಕಾರ್ಖಾನೆಯಾಗಿರದೆ, ಅದೊಂದು ಬದುಕಿನ ಭಾಗ ಮತ್ತು ಜೀವ ವಿಧಾನವಾಗಬೇಕಿದೆ. ಸ್ವಾವಲಂಬಿ ಬದುಕಿನ ಮಾರ್ಗವಾಗಬೇಕಾಗಿದೆ. ಆದರೆ, ಆಧುನಿಕ ದಿನಗಳಲ್ಲಿ ಕೃಷಿಯು ಅಸ್ಥಿರವಾಗಿದೆ ಮತ್ತು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುವ ಕೃಷಿಯಾಗಿದೆ… ನಾವಿನ್ನು ಬದಲಾಗಬೇಕಿದೆ. ರೈತರು ವೈಜ್ಞಾನಿಕ ತಿಳುವಳಿಕೆಯಿಂದ ಹೊಸ ತಂತ್ರಜ್ಞಾನಗಳ ಜೊತೆಗೆ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ವಿಧಾನಗಳಾದ ಸಾವಯವ ಕೃಷಿಯನ್ನು ಸಾಧ್ಯವಾದಷ್ಟು ಒಳಸುರಿಗಳನ್ನು [ರಸಾಯನಿಕ ಗೊಬ್ಬರ ಮತ್ತು ಪೀಡೆ ನಾಶಕ] ಗಳನ್ನು ನಮ್ಮಲ್ಲಿಯೇ ಉತ್ಪಾದಿಸಿ ಬಳಸುವತ್ತ ಚಿತ್ತ ಹರಿಸಬೇಕಿದೆ… ಜೊತೆಗೆ

ಸ್ವಾತ್ಮಗತ Read Post »

You cannot copy content of this page

Scroll to Top