ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ರೇಖಾ ಗಜಾನನ ಮೌನವ ಮುರಿದು ಮಾತಿನ ಮನೆಯ ಕಟ್ಟೋಣ ಬಾ ಗೆಳೆಯಾ ನಿನ್ನೆ ಉತ್ತ ಬಯಲಿನಲಿ ಹೊಸ ಬೀಜ ಬಿತ್ತೋಣ ಬಾ ಗೆಳೆಯಾ ಕಾಪಿಟ್ಟ ಮನೋಬಲವು ಬರಿದೇ ಧ್ಯಾನಸ್ಥವಾದರೇನು ಚೆನ್ನ ಕೈಗೆ ಕೈಜೋಡಿಸಿ ಯಶದ ಧನುಸ್ಸನ್ನು ಎತ್ತೋಣ ಬಾ ಗೆಳೆಯ ಒಲವು ಹುಟ್ಟಿತೆಂದರೆ ಅಲ್ಲೊಂದು ಹೊಸಜಗದ ಉಗಮ ತಾನೇ ಹಸಿರ ಹಾಸಿ ಕರೆದಿದೆ ನಮ್ಮಿಬ್ಬರ ಲೋಕ ಸುತ್ತೋಣ ಬಾ ಗೆಳೆಯಾ ಸುತ್ತಮುತ್ತ ಬಂಡೆಗಲ್ಲುಗಳ ಸಾಲು ಬೆಳೆಯುತ್ತಲೇ ಇದೆ ನೋಡು ಕುಶಲದಿಂದ ಕುಂದಿಲ್ಲದ ಮೂರ್ತಿಯನು ಕೆತ್ತೋಣ ಬಾ ಗೆಳೆಯಾ ಜೋಡಿ ‘ರೇಖೆ’ಯ ಪಯಣವಿದು ಜೊತೆಜೊತೆಯಿದ್ದರೆ ಮಾತ್ರ ಗುರಿ ಅದೋ ನೆಮ್ಮದಿಯೆಂಬ ಗಮ್ಯವಿದೆಯಂತೆ ಮುಟ್ಟೋಣ ಬಾ ಗೆಳೆಯಾ ಕಿರು ಪರಿಚಯ: ರೇಖಾ ಗಜಾನನ ಭಟ್ಟ ಹುಟ್ಟೂರು: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆ ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರವೃತ್ತಿ : ಸಾಹಿತ್ಯದ ಓದು ಹಾಗೂ ಬರೆವಣಿಗೆ ಹಾಗೂ ಗಾಯನ ಪ್ರಥಮ ಕೃತಿಯಾದ ‘ಮಡಿಲ ನಕ್ಷತ್ರ’ ಗಜಲ್ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯಡಿಯಲ್ಲಿ ಆಯ್ಕೆ ಆಗಿ ,ಪುರಸ್ಕಾರ ಪಡೆದಿದ್ದು, ಈ ವರ್ಷ ಬಿಡುಗಡೆಗೊಂಡಿದೆ. ಗಜಲ್, ಕವನ , ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿ

ಗಝಲ್ ಸಂಗಾತಿ Read Post »

ಇತರೆ

ಫಲಕುಗಳು-ಝಲಕುಗಳು

*ಫಲುಕುಗಳು ಮತ್ತು ಅದರ ಝಲಕ್ಕುಳು* ಬಸವರಾಜ ಕಾಸೆ ಸಾಹಿತ್ಯದ ಪ್ರಕಾರ ಅದೆಷ್ಟೋ ಇದ್ದರೂ ಅಪರೂಪಕ್ಕೊಮ್ಮೆ ಹೊಸ ಹೊಸ ಪ್ರಕಾರಗಳು ಸೃಷ್ಟಿಯಾಗುತ್ತಲೇ ಸಾಗುತ್ತವೆ. ಅದೆಲ್ಲವನ್ನೂ ತನ್ನೊಳಗೆ ಹುದುಗಿಸಿಕೊಳ್ಳುತ್ತಲೇ ಕುತೂಹಲವನ್ನು ಹೆಚ್ಚಿಸಿ ಹೊಸ ಹೊಸ ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮೂಲಕ ನಿರಂತರವಾಗಿ ಬೆಳವಣಿಗೆ ಹೊಂದುವುದು ಸಾಹಿತ್ಯಕ್ಕೆ ಇರುವ ಹಿರಿಮೆ ಮತ್ತು ಗರಿಮೆ. ಫಲುಕುಗಳು ಎನ್ನುವುದು ಅಂತದ್ದೇ ಒಂದು ಸಾಹಿತ್ಯದ ನೂತನ ಪ್ರಕಾರ. ಹೆಸರು ಮತ್ತು ಶೀರ್ಷಿಕೆಗಳು ವಿಭಿನ್ನವಾಗಿ ಇರುವುದರಿಂದ ಮೊದಲ ನೋಟದಲ್ಲಿಯೇ ಆಕರ್ಷಿಸಿ ಬಿಡುತ್ತೆ ಈ ಬರಹ. ಇನ್ನೂ ಫಲುಕುಗಳ ಓದು ಒಂದು ಓದಿನಲ್ಲಿಯೇ ಓದುಗರನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಮರ್ಥ್ಯ ಇರುವ ಬರಹ. ಹಾಗಾದರೆ ಫಲುಕುಗಳು ಅಂದರೆ ಏನು, ಅದರ ಗುಣ ಲಕ್ಷಣಗಳು ಮತ್ತು ನಿಯಮಗಳು ಹಾಗೂ ಅದರ ಬರಹ ಹೇಗೆ ಬನ್ನಿ ತಿಳಿದುಕೊಳ್ಳೋಣ. ಯಾವುದಾದರೂ ಒಂದು ನಿರ್ದಿಷ್ಟ ಸನ್ನಿವೇಶವನ್ನು ಆರಿಸಿಕೊಂಡು ಅದನ್ನು ಗಾಢವಾಗಿ ಪರಿಣಾಮ ಬೀರುವಂತೆ ನಮ್ಮದೇ ಪದಗಳಲ್ಲಿ ೨ ರಿಂದ ೪ ೫ ಸಾಲುಗಳಲ್ಲಿ ಚಿತ್ರಿಸುವ ಸಣ್ಣ ಸಣ್ಣ ಬರಹಗಳೇ ಫಲುಕುಗಳು. ವಿಶೇಷವೆಂದರೆ ಇಲ್ಲಿ ಶೀರ್ಷಿಕೆಯ ಹೆಸರು ಸನ್ನಿವೇಶವೇ ಆಗಿರುತ್ತದೆ. ಯಾವ ಸಂದರ್ಭದ ಕುರಿತು ಆ ಫಲುಕುಗಳನ್ನು ಬರೆದಿರಲಾಗಿರುತ್ತದೆಯೋ ಆ ಸಂದರ್ಭವನ್ನು ಸ್ಪಷ್ಟವಾಗಿ ಶೀರ್ಷಿಕೆಯಲ್ಲಿ ಸೂಚಿಸಿರಬೇಕಾಗುತ್ತದೆ. ಒಂದು ಸನ್ನಿವೇಶದ ಮೇಲಿನ ಇಂತಹ ಪ್ರತಿ ಫಲುಕುಗಳು ಕನಿಷ್ಠ ೧೦ ಝಲಕ್ಕುಗಳನ್ನು ಸ್ವಾತಂತ್ರ್ಯವಾಗಿ ಮತ್ತು ಕಡ್ಡಾಯವಾಗಿ ಹೊಂದಿರಬೇಕು, ಇಲ್ಲಿಯೇ ಒಬ್ಬ ಬರಹಗಾರನ ಶಕ್ತಿ ಅನಾವರಣಗೊಳ್ಳುವುದು. ಇಲ್ಲಿ ಝಲಕ್ಕುಗಳು ಎಂದರೆ ಒಂದು ಸ್ವಾತಂತ್ರ್ಯವಾದ ಚರಣ. ಅದಕ್ಕೆ ಇನ್ನೊಂದು ಚರಣದ ಜೊತೆಗೆ ಯಾವುದೇ ಸಂಬಂಧ ಇರುವುದಿಲ್ಲ ಮತ್ತು ಪ್ರತಿ ಝಲಕ್ಕುಗಳು ಸಂದರ್ಭದ ತೀವ್ರತೆಯನ್ನು ಹೆಚ್ಚಿಸುತ್ತಾ ಸಾಗಬೇಕು. ಆದ್ದರಿಂದ ಆ ಎಲ್ಲಾ ಹತ್ತು ಝಲಕ್ಕುಗಳನ್ನು ಒಂದಾದ ನಂತರ ಒಂದು ಕ್ರಮ ಸಂಖ್ಯೆಯ ಮೂಲಕ ಸೂಚಿಸುತ್ತಾ ಹೋಗಬೇಕು. ಪ್ರತಿಯೊಂದು ಝಲಕ್ಕುಗಳು ಸಹ ಆ ಕುರಿತು ವಿಭಿನ್ನ ಭಾವವನ್ನು, ತರಹೇವಾರಿ ದೃಷ್ಟಿಕೋನವನ್ನು ಹೊಂದಿರಬೇಕು. ಇನ್ನೂ ಸಾಲುಗಳ ಮಿತಿ ಕನಿಷ್ಠ ಎರಡು ಮತ್ತು ಗರಿಷ್ಠ ಐದನ್ನು ಮೀರುವಂತಿಲ್ಲ. ಆದಷ್ಟು ಕಡಿಮೆ ಸಾಲುಗಳಲ್ಲಿ ಹೆಚ್ಚಿನ ಭಾವವನ್ನು ಹೊರ ಹೊಮ್ಮಿಸಬೇಕು. ಅನವಶ್ಯಕ ಪದಗಳ ತಾಕಲಾಟ ಇಲ್ಲಿ ಸಲ್ಲದು. ಹಾಗೆಂದು ಬರಹವೇನು ಕಷ್ಟವೇನಲ್ಲ. ಸಂದರ್ಭಗಳ ಕುರಿತ ಜ್ಞಾನ, ವಿಭಿನ್ನ ಬಗೆಯ ಚಿಂತನೆ ಇದ್ದರೆ ಒಮ್ಮೆ ಪ್ರಯತ್ನಿಸಬಹುದು. ಒಂದೇ ಬರಹಕ್ಕೆ ಪರಿಪೂರ್ಣವಾಗದ ಇದನ್ನು ಮತ್ತೆ ಮತ್ತೆ ಓದಿ ತಿದ್ದಿ ತೀಡಿ ಪೂರ್ಣಗೊಳಿಸಬಹುದು. ವಿಷಯದ ನಿರೂಪಣೆಯ ಕುರಿತು ಹೆಚ್ಚಿನ ಜಾಗೃತಿ, ಸ್ಪಷ್ಟ ಕಲ್ಪನೆ, ವಾಸ್ತವಿಕ ಆಗು ಹೋಗುಗಳ ಬಗ್ಗೆ ಈ ಬರಹ ಹೆಚ್ಚಿನ ಜ್ಞಾನವನ್ನು ಅಪೇಕ್ಷಿಸುತ್ತದೆ. ಹಾಗಿದ್ದರೆ ಕನ್ನಡದಲ್ಲಿ ಫಲುಕುಗಳ ಬಗ್ಗೆ ಕೃತಿಗಳು ಬಂದಿದ್ದಾವಾ? ಇದಕ್ಕೆ ಇಲ್ಲ ಎಂದೇ ಹೇಳಬೇಕು. ಇದುವರೆಗೂ ಈ ಪ್ರಕಾರದಲ್ಲಿ ಯಾವುದೇ ಕೃತಿಗಳು ಹೊರ ಬಂದಿಲ್ಲ, ಇನ್ನಷ್ಟೇ ಹೊರ ಬರಬೇಕು. ಆದರೆ ಈ ಪ್ರಕಾರದಲ್ಲಿ ಬೆರಳಣಿಕೆಯಷ್ಟು ಕವಿಗಳು ಮಾತ್ರ ಬರೆಯುತ್ತಿರುವುದರಿಂದ ಇನ್ನೂ ತಡವಾಗಬಹುದು ಅನಿಸುತ್ತೆ.ಈ ಮಾದರಿ ಇನ್ನೂ ಹೆಚ್ಚು ಪ್ರಚಾರದಲ್ಲಿ ಇರದ ಕಾರಣ, ಇದ್ದರೂ ಕೂಡ ಈ ಬಗ್ಗೆ ಮಾಹಿತಿ ಲಭ್ಯವಿರದ ಕಾರಣ ಮತ್ತು ಹೊಚ್ಚ ಹೊಸ ಬಗೆಯ ಪ್ರಕಾರವಾದರಿಂದ ಕೃತಿಗಳು ಹೊರ ಬಂದಿಲ್ಲ. ಅತಿ ಶೀಘ್ರದಲ್ಲೇ ಹೊರ ಬರಲಿ ಎಂದು ಆಶಿಸುತ್ತಾ ನನ್ನದೇ ಫಲುಕುಗಳನ್ನು ಉದಾಹರಣೆಗೆ ನೀಡುತ್ತಿರುವೆ. ಫಲುಕುಗಳು ಸನ್ನಿವೇಶ- ಕೊಟ್ಟು ತೆಗೆದುಕೊಳ್ಳಲಾಗದ ಸಂದರ್ಭ ೧ ಬಪ್ಪರೇ ಮಗನೇ ಚಾಲಾಕಿ ಅಂದರೆ ನೀನೇ ತೆಗೆದುಕೊಂಡಿರುವುದಾ ಮರೆತು ನಾ ಮರೆಯುವಂತೆ ಮರೆಸುವ ನಿನಗೆ ಎಷ್ಟೆಂದು ಉಘೇ ಉಘೇ ಎನ್ನಲಿ ೨ ಕೊಟ್ಟಿರುವದಾ ಕೊಟ್ಟು ಕೂಡಬೇಕು ತೇಲುತ್ತಾ ನಂಬಿಕೆ ವಿಶ್ವಾಸಗಳ ಅಲೆಯಲ್ಲಿ ಇಲ್ಲದಿದ್ದರೆ ಮತ್ತೆ ಮುಖ ತೋರಿಸುವುದು ಹೇಗೆ ಹೇಳಿ ಕೊಡು ನಾಚಿಕೆ ಬಿಟ್ಟು ೩ ಕೊಡುವುದನ್ನು ಕೊಟ್ಟು ಬಿಟ್ಟರೆ ಮುಗಿಯುವುದು ಹೇಗೆ ಎಲ್ಲಾ ಅಲ್ಲಿಗೆ ಬಂಧಗಳು ಗಟ್ಟಿಯಾದಗಲೇ ಚಿಗುರು ಬೆಸೆದು ಹೆಚ್ಚೆಚ್ಚು ಆತ್ಮೀಯತೆ ಅಂಟಂಟು ೪ ಸಂಬಂಧಗಳಲ್ಲಿ ವ್ಯವಹಾರ ಬೇಡ ಎನ್ನುವ ಮನಸ್ಥಿತಿವನಲ್ಲ ನಾನು ಆದರೆ ಸಂಬಂಧಗಳು ವ್ಯವಹಾರ ಅಲ್ಲ ಗೆಳೆಯ ವ್ಯವಹರಿಸುವುದೇ ಸಂಬಂಧವಾದರೆ ಅದು ಕೇವಲ ಲಾಭ ನಷ್ಟಗಳ ವ್ಯಾಪಾರ ೫ ಕೊಡು ತಗೊಳ್ಳುವುದು ಎಲ್ಲಾ ಕಡೆ ಇದ್ದದ್ದೆ ಕೊಟ್ಟು ತಗೋಬೇಕು ಎನ್ನುವರು ಅದಕ್ಕೆ ಮೋಡ ಮಳೆ ನೀಡಿದರೆ ಇಳೆಗೆ ಹಸಿರಾಗಿ ಹರಿದು ಮುಂದೆ ಆವಿಯಾಗಿ ನೀಡುವುದು ತಾ ಪಡೆದುಕೊಂಡಿರುವುದನ್ನು ೬ ಮನುಷ್ಯ ಎಂದ ಮೇಲೆ ಕಷ್ಟ ನೋವುಗಳು ಸಹಜವೇ ಅಲ್ಲವೇ ಗೆಳೆಯ ಒಬ್ಬರಿಗೊಬ್ಬರು ಸಮಯಕ್ಕಾದರೆ ತಾನೇ ಉಳಿಯುವುದು ಅನುರಾಗ ಬಿತ್ತಿ ಉತ್ತಿದಂತೆ ಬೀಜದ ಫಲ ೭ ಚಿಂತಿಸದಿರು ಹೆಚ್ಚಿಗೆ, ನಾನಂತೂ ಚಿಂತಿಸಲಾರೆ ನೀ ಎಲ್ಲಿಯೂ ಹೋಗಲಾರೆ, ನಾನು ಸಹ ಮತ್ತೆ ಆಗುವುದಿದೆ ಮುಖಾಮುಖಿ ನಿನಗಾಗಿ ಆಗ ಕಾದಿರಲಿದೆ ಸರಿಯಾದ ಉತ್ತರ ೮ ಅಯ್ಯೋ ಪಾಪ ಎನಿಸುವ ಯೋಗ್ಯತೆ ಅನುಕಂಪ ಗಿಟ್ಟಿಸಿಕೊಳ್ಳುವಾಗ ಥೂ ಪಾಪಿ ಎನ್ನುವುದಕ್ಕೂ ನಾಲಾಯಕ್ಕು ಅತಿರೇಕಕ್ಕೆ ಏರಿದಾಗ ಪರ್ಯಾಯ ದುರ್ವ್ಯಸನ ೯ ನನ್ನಲ್ಲಿಯೂ ಇದ್ದವು ನಿರೀಕ್ಷೆಗಳು ಅನುಭವ ಬದಲಿಸಿದೆ ಮನೋಭಾವ ನನಗೀಗ ನನಗಾಗುವವರಿಗೆ ಮಾತ್ರ ನಾನಾಗಬೇಕು ಎಂದೆನಿಸಿದೆ ನಿನ್ನಿಂದ ೧೦ ತಲೆ ತಪ್ಪಿಸಿ ತಿರುಗುವವರ ತಲೆ ಕೆಡಿಸುವ ಚುಕ್ತಾಗಳಿಗೆ ತಲೆ ಹಾಕಲಾರೆ ತಲೆಯಿಂದಲೇ ತೆಗೆದ ಮೇಲೆ ನೀನು ಯಾರೋ, ಅದು ಯಾವುದೋ ಈಗೆಲ್ಲವೂ ಬರೀ ಗಾಂಧಿ ಲೆಕ್ಕ

ಫಲಕುಗಳು-ಝಲಕುಗಳು Read Post »

ನಮ್ಮ ಕವಿ

ನಮ್ಮ ಕವಿ

ಬಿದಲೋಟಿ ರಂಗನಾಥ್ ಕವಿ -ವಿಮರ್ಶಕ ಬಿದಲೋಟಿ ರಂಗನಾಥ್ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೋಕಿನ ಒಂದು ಪುಟ್ಟ ಹಳ್ಳಿಯವರು.ತಂದೆ ಮರಿರಂಗಯ್ಯ ತಾಯಿ ಸಿದ್ದಗಂಗಮ್ಮ ಅವರ ಮೊದಲನೇ ಮಗನಾಗಿ ೧೫-೭-೧೯೮೦ ರಂದು ಸ್ವಗ್ರಾಮದಲ್ಲಿ ಜನಿಸಿದ ಅವರಿಗೆ ಬೆಳೆಯುತ್ತಾ ಬೆಳೆಯುತ್ತಾ ಬದುಕು ಕಡಿದಾಗುತ್ತಲೇ ಹೋಯಿತು.ಅವರ ಕಿತ್ತು ತಿನ್ನುವ ಬಡತನ, ಸೋರುವ ಸೂರು ,ಜಾತಿಗೆ ನಲುಗಿದ ಮನಸು,ಅಮ್ಮಳನ್ನು ಆವರಿಸಿದ ಅಸ್ತಮ ಬಿ ರಂ ಅವರನ್ನು ಇನ್ನಿಲ್ಲದಂತೆ ನಲುಗುವಂತೆ ಮಾಡಿ ,ಕೆಂಡ ಹಾಸಿದ ಹಾದಿಯ ಮೇಲೆ ನಡೆಯುವಂತೆ ಮಾಡಿತ್ತು. ಬೆಳಗಿ ಜಾವಕ್ಕೆ ಎದ್ದು ಕಸಮುಸರೆ ಮಾಡಿ ದನದ ಕೊಠಕಿಗೆ ಸೊಪ್ಪು ತಂದಾಕಿ ಇರುವ ಸೊಪ್ಪೊ ಸೆದೆಯೋ ಕಾಳು ಕಡ್ಡಿಯೋ ತಿಂದು ,ಸುಮಾರು ಎರಡು ಮೈಲಿ ಇರುವ ಹೊಳವನಹಳ್ಳಿಗೆ ನಡೆದು ಹೋಗಿ ಶಿಕ್ಷಣ ಪಡೆವ ಅನಿವಾರ್ಯತೆ ಇತ್ತು.ಅಂತಹ ದಿನಗಳನ್ನು ಶಿಕ್ಷಣ ಪಡೆದರು. ಯಾವುದಕ್ಕೂ ಎದೆಗುಂದದೆ ನಡೆದರೂ ಕೂಡ.ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅಪ್ಪನಿಗೆ ಮಗನನ್ನು ಓದಿಸಿ ಸಮಾಜಕ್ಕೆ ಒಬ್ಬ ಚಿಕಿತ್ಸಕನನ್ನಾಗಿ ಮಾಡಬೇಕೆಂಬ ಹಂಬಲೂ ಹೆಚ್ಚಿತ್ತು. ಜೊತೆಗೆ ಕವಿಯ ಛಲವೂ ಸೇರಿ ಒಂದು ಸ್ಥಾನಕ್ಕೆ ಬಂದು ನಿಂತರು. .ಬಹುಶಃ ಇವರು ನಲುಗಿದ ಬದುಕು ಕತ್ತಲೆಯ ಕಡಿದಾದ ದಾರಿಯೇ ಇವರು ಕವಿತೆ ಬರೆಯಲು ಪ್ರೇರೆಪಿಸಿರಬೇಕು.ಅವರೊಗೆ ಅಧಮ್ಯ ಕವಿಯೊಬ್ಬ ಜನ್ಮತಾಳಿ, ಯುವ ತಲೆಮಾರಿನ ಸೃಜನಶೀಲ ಕವಿಯೆಂದೇ ಗುರುತಿಸಿಕೊಳ್ಳಲು ಅವರ ಕಾವ್ಯ ಶೈಲಿ ಕಾರಣವಾಗಿರಬಹುದು.ಅವರು ಕಟ್ಟುವ ಕವಿತೆಗಳಲ್ಲಿ ಪ್ರತಿಮೆ, ರೂಪಕ ಶಶಕ್ತವಾಗಿ ಕವಿತೆಯನ್ನು ಆವರಿಸಿರುತ್ತವೆ .ಅವರ ಕವಿತೆಗಳ ಪ್ರವೇಶ ಕಠಿಣವಾದರು ಓದುಗನನ್ನು ಆವರಿಸುವಲ್ಲಿ ಸೋತಿಲ್ಲ ಎಂಬುದು ವಿಶೇಷ. ಅವರು ಇದುವರಿಗೆ “ಮಣ್ಣಿಗೆ ಬಿದ್ದ ಹೂಗಳು ” ಬದುಕು ಸೂಜಿ ಮತ್ತು ನೂಲು ” ಎಂಬ ಎರಡು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.ತಾಲ್ಲೋಕು ಕನ್ನಡ ರಾಜ್ಯೋತ್ಸವ,ಸಂಕ್ರಮಣ ಪುರಸ್ಕಾರ,೨೦೧೫ ರಲ್ಲಿ ತುಮಕೂರು ಜಿಲ್ಲಾ ಕವಿಗೋಷ್ಠಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ನಾಡಿ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ,ಕನ್ನಡ ಪ್ರಭ,ಸಂವಾದ ,ಹೊಸತು,ಓ ಮನಸ್ಸೆ ,ಹಾಯ್ ಬೆಂಗಳೂರು ,ಕರ್ಮವೀರ,ಸಂಯುಕ್ತ ಕರ್ನಾಟ ಅಂತರ್ಜಾಲ ಪತ್ರಿಕೆಗಳಾದ,ಅವಧಿ ,ಸಂಗಾತಿ,ಪಂಜು ,ಪಂಜು ಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಶ್ರೀಯುತರು ಮಧುಗಿರಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತ,ಇಬ್ಬರು ಮಕ್ಕಳು ಮಡದಿಯೊಂದಿಗೆ ಮಧುಗಿರಿಯಲ್ಲಿ ವಾಸವಾಗಿದ್ದಾರೆ. ಇವರ ಕೆಲ ಕವಿತೆಗಳು ನಿಮ್ಮ ಓದಿಗಾಗಿ ನನ್ನೊಳಗಿನ ಬೆಳಕು ದೀಪದ ಬೆಳಕಲ್ಲಿ ನೆಂದ ಸೌದೆಗಳನ್ನು ಒಲೆಗೆ ತುರುಕಿ ಹೊಗೆಯಲ್ಲಿ ಕೆಂಪಾದ ಕಣ್ಣುಗಳ ಉಜ್ಜಿಕೊಳ್ಳುತ ಅವ್ವ ಸುಡುತ್ತಿದ್ದ ರಾಗಿ ರೊಟ್ಟಿ ನನ್ನೊಳಗಿನ ಬೆಳಕು ಗರಿ ತೂತುಗಳಲ್ಲಿ ತೊಟ ತೊಟ ತೊಟ್ಟಿಕ್ಕುವ ಮಳೆ ಹನಿಗಳಿಗೆ ತಪ್ಪಿಸಿಕೊಳ್ಳುತ್ತ ಗೂಡರಿಸಿ ಕೂತು ಒಲೆಯ ಬಾಯಿ ಕೈಯೊಡ್ಡಿ ಬಿಸಿಯಾಗುತ್ತಿದ್ದ ನೆನಪು. ಹೊಲದಲಿ ಕುಪ್ಪೆಮಾಡಿದ ರಾಗಿಕಡ್ಡಿಗಳಲಿ ಅಪ್ಪನಿಟ್ಟ ಜೀವ ಮಂಕರಿಯಲಿ ಹೊತ್ತ ಗೊಬ್ಬರಕೆ ಮೊಳೆತ ಬದುಕಿನ ಪೈರು ಕಣದಲಿ ಅರಳಿದ ಜೀವಂತ ಬದುಕು ಜೇಡಕಟ್ಟಿದ ಬಲೆಯ ಸ್ಪೂರ್ತಿಯಲಿ ಅವ್ವಳ ಎಚ್ಚರದ ನಡಿಗೆ.. ಅಪ್ಪನುಡಿದ ಹಗ್ಗ ಮಿಣಿಗಳೇ ಕಲಿತ ಎರಡಕ್ಷರಕೆ ದಾರಿ ಅಮ್ಮನ ಗೂರಲಲ್ಲೇ ಕರಗಿದ ರಾತ್ರಿಗಳು ಇಂಕಿಲ್ಲದ ಲೇಖನಿಯ ಹಿಡಿದು ಹಾಳೆ ಮೇಲೆ ಬೀಳದ ಅಕ್ಷರಗಳು ಬಡತನದ ಬಡಬಾಗ್ನಿಯು ಬಾಯಾರಿ ಮರಗಟ್ಟಿದ ಜೋಡಿ ಮುರುಕು ಬಟ್ಟೆಗಳು ಬಣ್ಣವಿಲ್ಲದ ಬದುಕಲ್ಲಿ ಒಂಟಿನಿಂತ ಕವೆಗೆ ಜೋಳಿಗೆ ನೇತಾಕುವ ಕೈಗಳು ಎರಗಿದ ತೂಕವ ಹೆಗಲ ಮೇಲೆ ಹೊತ್ತೇ ನಡೆದಳು ನನ್ನೊಳಗಿನ ತೂಕದ ನೋವಿಗೆ ಮರುಗಿದಳು ಬೆವರಲ್ಲೇ ಬೆಂದು ಜೋಪಡಿಗೆ ನೇತಾಕಿದ ಲಾಟೀನು ಬೆಳಕಲ್ಲಿ ನನ್ನವ್ವಳ ನಾಡಿ ಮಿಡಿತ ಅಪ್ಪನ ಕನಸುಗಳಿಗೆ ಬಣ್ಣದ ಲೇಪನ ಗವಾಕ್ಷಿಯ ಬೆಳಕಲ್ಲೇ ಕೋಣೆಯ ಕಣ್ಣುಗಳು ಬೆತ್ತಲಾಗಿ ಹಸಿವಿನ ಮೊಗದ ಕನ್ನಡಿ ಬಯಲಾಗಿದ್ದು ನೋವಿನ ನೆತ್ತರು ಬಿಸಿಯಾಗಿದ್ದು ಸೀಳುಕ್ಕೆಯಲಿ ನೆಂದು ಗಿಡಗೆಂಟೆಗಳ ನಡುವೆ ಉಸಿರಾಡಿ ಜೋಪಡಿ ಕಿಂಡಿಗಳ ಬೆಳಕಿನ ಜೊತೆ ಆಡಿ ಬಯಲ ಬದುಕಲಿ ಬರಿದಾಗಿ ನೆಲದ ನಿಟ್ಟುಸಿರಿಗೆ ದನಿಯಾದವಳು ಕಗ್ಗತ್ತಲ ರಾತ್ರಿಯ ನಡಿಗೆಗೆ ಲೆಕ್ಕವಿಲ್ಲ ಗದ್ದೆಬಯಲಗುಂಟ ಹರಿವ ನೋಟ ಪೆಡೆಗೆ ಹರಿವ ನೀರಿನ ಶಬ್ಧ ಸಂಗೀತ ಅಪ್ಪನ ನಿತ್ಯದ ಕರ್ಣಫಲಾಮೃತ. ಸಾಲು ಸಾಲಿನಲು ನಡೆದು ಹೊತಾರೆ ಬೈಗು ನಡು ಮಧ್ಯಾಹ್ನ ಕನಸುಗಳನು ಹೂ ಕಟ್ಟುವಂತೆ ಕಟ್ಟುತ್ತಲೇ ಅಂಗೈಯೊಳಗೆ ನಕ್ಷತ್ರ ಪುಂಜ ಕಂಡ ಅಪ್ಪನು ನಡೆವ ದಾರಿಯುದ್ದಕ್ಕೂ ಅವ್ವಳ ಹೆಗಲು ಮಾಗಿಯು ಬಾಗಿ ಹುಲುಸು ಸಾಗಿ ಅವ್ವ ನಿಂತ ನಿಲುವಿನಲೇ ನಿಂತು ರೋಣು ಹೊಡೆವಾಗಿನ ಚೈತನ್ಯ ಚಿಲುಮೆಯಲಿ ವರ್ಷದ ಸಂತಸವ ಕಣದಲಿ ಗುಡ್ಡೆ ಮಾಡಿ ಚೀಲ ತುಂಬಿ ಉಗಾದಿಗೆ ಅವ್ವಳ ಹೊಸ ಸೀರೆಯ ನೆರಿಗೆಗಳಲ್ಲಿ ಕನಸುಗಳು ಆಡಿ ಅಪ್ಪನ ಮನದಂಗಳದಲ್ಲಿ ಶುಕ್ರ ಗ್ರಹ ಮಣ್ಣ ಒಸಲಿಗೆ ಅರಿಶಿನ ಕುಂಕುಮ ಅಂಕು ಡೊಂಕಿನ ಸಗಣಿ ಕದರಿನ ಹಟ್ಟಿಯ ಮೇಲೆ ಅವ್ವ ಕಟ್ಟಿ ಹಾಕಿದ ನಗುವ ಪುಡಿ ರಂಗೋಲಿಯ ಗೆರೆಗಳು ಉರಿವ ಒಲೆಯಲಿ ಹಸಿವಿನ ಸಂಕಟವ ಸುಟ್ಟು ಉರಿಯುತ್ತಿದ್ದಳು ಅವ್ವ ಒಳಗೂ ಹೊಲಮಾಳದೊಳಗು ಅವ್ವಳಿಗೆ ಬದುಕೆಂದರೆ ಬೆವರಿ ಬಾಯಾರಿದ ಕಡಲ ಕಿನಾರಿಯ ನೆಲ ತುಂತುರು ಹನಿಯೊಡನೆ ಮಿಲನಗೊಂಡು ತ್ಯಾವಿಸಿ ಮೊಳಕೆ ಇಣುಕಲು ಬಿರಿವ ತಾವು ಬಿರಿದ ನೆಲದ ಬಿಕ್ಕಳಿಕೆ. ಇಟ್ಟ ದಾರಿಯ ಮೇಲಿನ ಹೆಜ್ಜೆಯ ಗುರುತು ತೆವಳುತ ಶಿಖರ ಸೇರುವ ಬಯಕೆ ಗುಡಿಸಲಲಿ ತೂಗುಹಾಕಿದ ತಂತಿಕೊಂಕಿಗೆ ಸಿಕ್ಕಿಸಿದ ವಿದ್ಯುತ್ ಬಿಲ್ಲಿನ ಹಸಿದ ಹೊಟ್ಟೆಯಲಿ ಬಿಚ್ಚಿಕೊಂಡ ಬದುಕಿನ ಸೀಳು ಹಾದಿ ಬೆಣಚಿ ಕಲ್ಲನ್ನು ಒಂದಕ್ಕೊಂದು ತಾಕಿಸಿ ಪೆಕರನಂತೆ ಕಣ್ಣಗಲಿಸುವ ಕದರು ನೆಲಕ್ಕೆ ಕೈ ಊರಿದ ಕಣ್ಣ ಕನಸು ಗಂಟಿನ ಬಟ್ಟೆ ಬಿಚ್ಚಿ ಒಂದೊಂದಾಗಿ ನುಸುಳುವ ಕನಸುಗಳನು ಕೊಡವಿ ಕುಶಲೋಪರಿ ವಿಚಾರಿಸಿ ಮತ್ತೆ ಬಂಧಿಸಿ ಮೌನದ ದಾರಿಯಲಿ ನಿಂತ ಕವಿತೆಯೆಂದರೆ ಅದು ನನ್ನವ್ವ.! ಎದೆಯೊಳಗಿನ ಚಿತ್ರ ನೀನು ನನ್ನ ಎದೆಯನು ಆವರಿಸಿದ ದಿನದಿಂದಲು ನೆಲದಲಿ ಹುದುಗಿದ ಚೂಪು ಕಲ್ಲು- ಮುಳ್ಳುಗಳನು ತುಳಿಯದೆ ಹೆಜ್ಜೆವೂರಿದೆ ದಿನದ ಬೆಳಗು ಕಣ್ಣು ತೆರೆದು ಎದೆಯಿಂದ ಹೊರ ತೆಗೆದು ಮುದ್ದಾಡಿ ಮುತ್ತಿಟ್ಟು ಮೂಗು ಮುಖ ಕಣ್ಣು ಸುಳಿ ಸುದ್ದಗಳು ತೀಡಿ ಮತ್ತೆ ಎದೆಯೊಳಗೇ ಅವಿತಿಟ್ಟು ಧ್ಯಾನಿಸುವ ಖುಷಿಯಲಿ ನನ್ನಾತ್ಮದ ಬೆಳಕಿನ ಚಲನೆ ಕಣ್ಣಬೆಳಕಿನ ಹಾದಿಯುದ್ದಕ್ಕೂ ಶಿಲ್ಪವಾಗೆ ಉಳಿದ ನೀನು ಮಾಸದ ನೆರಳ ಚಿತ್ರ ಅದೊಂದು ಧೂಳು ಧೂಳು ಸಂಜೆ ಸುತ್ತುತಲಿದ್ದೆ ಆ ನೆರಳನು ಬಳಸಿ ಒಳಗೆ ಸಣ್ಣ ನೋವು ನೀರು ಗುಟುಕಿಸಿದೆ ಹೋಗಲಿಲ್ಲ ನೋವು ಎದೆಯೊಳಗಿನ ನಿನ್ನ ಚಿತ್ರ ಹೊರ ತೆಗೆದು ಮುಟ್ಟಿ ನೋಡಿದೆ ಯಾರೋ ಅದರ ಎದೆಗೂಡಿಗೆ ಗುಂಡು ತಾಕಿಸಿದ್ದರು ಅಲ್ಲಿದ್ದಷ್ಟೂ ನನಗೂ ನೋವೆ ಧ್ಯಾನಿಸಿದೆ.. ಎದೆಗೂಡಿನ ಕಣಿವೆ ಮುಚ್ಚಿತು ನೀನು ಚಿಟ್ಟೆಯಾಗಿ ಹೊಡೆದವನ ಗುಂಡಿಗೆಯ ಮೇಲೆ ಕೂತು ಜೀಕಿದೆ ನಾನು ನಡೆದೆ… ಹೃದಯ ಭಾರವೆನಿಸಲಿಲ್ಲ ನನ್ನ ನೆರಳ ಮೇಲೆ ನಡೆದಷ್ಟೂ ಹಾದಿ ತೆರೆದುಕೊಳ್ಳುತ್ತಲೇ ಇತ್ತು.

ನಮ್ಮ ಕವಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಮುಚ್ಚು ಮರೆಯಿಲ್ಲದೆ ಎದೆಕದವ ತೆರೆಯೋಣ ಅಚ್ಚು ಮೆಚ್ಚಿನಲಿ ಒಲವ ಬಂಡಿಯ ತಳ್ಳೋಣ ಅರ್ಥವಾಗದ ಮಾತು ಅದೆಷ್ಟು ಆಡಿದರೇನು ಅಕ್ಕಪಕ್ಕದಲಿ ಕೂತು ಒಳಧ್ವನಿಯ ಕೇಳೋಣ ಬಾಳ ದಾರಿಯಲೆಲ್ಲ ಹೂವಿರಲಿ, ಮುಳ್ಳೇಯಿರಲಿ ನೋವು ನಲಿವಿನ ಮಧ್ಯೆ ಮನ ಬಿಚ್ಚಿ ನಗೋಣ ತೆರೆಮರೆಯಲಿ ಕುಣಿವ ಮುಖವಾಡ ಕಂಡೆಯಾ ಒಳ ಹೊರಗುಗಳನೂ ವಂಚಿಸದೇ ಬಾಳೋಣ ನಮ್ಮ ಭರಪೂರ ಕನಸುಗಳಿಗೆ ಕಡಿವಾಣವಿರಲಿ ಸೋಲು ಗೆಲುವುಗಳಲಿ ಕೈ ಹಿಡಿದು ಸಾಗೋಣ ಎನ್ನ ಕಣ್ಣಾಳದಲಿ ನೀ ಒಮ್ಮೆ ಧುಮುಕಬಾರದೇ ಪರಿಪರಿಯ ಸುಖಕೆ ಮೈ ಮರೆತು ಸೋಲೋಣ ಸಾಗಿ ತೇಲುವ ಮುಗಿಲು ಮಡುಗಟ್ಟಿ ನಿಂತೀತೆ ಮೋಡಾಮೋಡಿಯಲಿ ದಿನ ನೂಕಿ ಬಿಡೋಣ ಎಳೆದ ರಂಗೋಲಿ ಕೆಳಗೆ ಪವಾಡವೇ ನಡೆಯಲಿ ಏರಿಳಿತದ ಬದುಕಲ್ಲಿ ಕೂಡಿ ನಾವು ಹಾಡೋಣ ಅಂತರಾಳದ ಅಳಲಿಗೆಲ್ಲ ದನಿಯಾಗೋಣ ಬಾರೆ “ಸುಜೂ” ನಾವು ಮುದ್ದಾಡಿ ಮೋಹದುಯ್ಯಾಲೆ ಜೀಕೋಣ ಕಿರುಪರಿಚಯ: ಸುಜಾತಾ ಲಕ್ಮನೆ, ಸ್ವಂತ ಊರು ಸಾಗರ. ವಾಸ ಬೆಂಗಳೂರು. ನನ್ನ ಹಲ-ಕೆಲವು ಕವನಗಳು ತುಷಾರ, ಕಸ್ತೂರಿ, ಮಯೂರ, ಕರ್ಮವೀರ , ಮಾಣಿಕ್ಯ, ಸಂಪದ ಸಾಲು, ಪಂಜು ಮುಂತಾದ ಮಾಸ/ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶೇಷಾಂಕಗಳಲ್ಲೂ ಪ್ರಕಟವಾಗಿವೆ. ಹಲವು ಪತ್ರಿಕೆಗಳಲ್ಲಿ ಗಜಲ್ ಗಳೂ ಪ್ರಕಟವಾಗಿವೆ. ಹವ್ಯಾಸಿ ಕವಯಿತ್ರಿ. ಹಲವು ಕವನಗಳು ತೊಂಬತ್ತರ ದಶಕದಲ್ಲಿ ತುಷಾರದಲ್ಲಿ ಹಿರಿಯರ ಆಯ್ಕೆ ಕವನಗಳಾಗಿ ಸಹ ಪ್ರಕಟವಾಗಿವೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಓ, ಅವನೇ.. ಪೂರ್ಣಿಮಾ ಸುರೇಶ್ ಅವನನ್ನು ಇಷ್ಟ ಪಟ್ಟಿದ್ದು ಹೇಗೆ,ಯಾವಾಗ? ಪ್ರಶ್ನೆಯಾಗದಿರು ಒಳಗಿನವಳೇ.. ಅದೆಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ ಕಿರಿಕಿರಿ ಮಾಡದಿರು ಹೀಗೆಲ್ಲ ಏನು-ಯಾಕೆಗಳನ್ನು ಎದುರಿಟ್ಟು ! ನಾನು ಬದುಕುತ್ತಿದ್ದೇನೆ ಎಂಬುದಷ್ಟೇ ಸತ್ಯ. ಆದರೆ ಅವಳಿಗದು ರುಚಿಸದು. ಮನಸ್ಸಿಗೆ ಪಾತಿ ಮಾಡಿದ್ದು, ನೆಟ್ಟ ಗಿಡ ಕುಡಿಯೊಡೆದದ್ದು.. ಮೊಗ್ಗು ಕಟ್ಟಿದ್ದು ನೆನಪಿಸುತ್ತಾಳೆ. ನನ್ನ ಅವಳ ಹಾದಿಗೆಳೆಯುತ್ತಾಳೆ ಬಲವಂತವಾಗಿ. “ಗೊತ್ತಿಲ್ಲ”- ಹಾರಿಕೆ ಉತ್ತರನೀಡಲಾರೆ. ನಾನು ನನ್ನ ದಾರಿಯಲ್ಲಿ ಅವನು ತನ್ನ ಗುರಿಯತ್ತ ನಡೆವಾಗ ಒಂದೊಂದು ತಿರುವಿನಲ್ಲೂ ಕಾಡಕುಸುಮ… -ಕೆಂಪಿನ ಕೇಪಳ, ಕಂಪಿನ ರೆಂಜೆ, ಬೇಲಿಯ ನೀಲಿಯ ಪುಟ್ಟಪುಟ್ಟ ಹೂಗಳನಿಟ್ಟವನ ತುಟಿಗಳಲಿ ದುಂಡುಮಲ್ಲಿಗೆ ! ಹೀಗೆ ಅಚಾನಕ ಎದುರಾದ ಹೂಗಳು ನನ್ನೊಳಗೆ ತಂತಾನೇ ಮಾಲೆಯಾದ ಸೋಜಿಗ ಇಂದಿಗೂ ಬಿಡಿಸಲಾಗಿಲ್ಲ! ಬೇಡ. ದೂರದಿರಿ.. ಅವನನ್ನು ಅವನಿಗೇನುಗೊತ್ತು.. ಪ್ರೀತಿ ಬೆಳೆಯುವ ಕಲೆ? ಗೊತ್ತಿದ್ದರೆ… ಬಿಡಿಸುತ್ತಿರಲಿಲ್ಲವೇ ಮಲ್ಲಿಗೆಯಚೆಂಡನ್ನೇ!? ನನ್ನುದ್ದಕ್ಕೂ ನಾ ಬಾಲ್ಯದಿಂದಲೂ ಆಸೆ ಪಟ್ಟ ಮಲ್ಲಿಗೆ. ನಿನ್ನ ಮಲ್ಲಿಗೆಯವನು ಘಮ ತರಲಿ ಎಂದು ಅವನು ನಿನ್ನ ರೆಂಜೆ, ಕೇಪಳಕೆ ದೇವಿ ಪ್ರಸನ್ನಳಾಗಲಿ ಎಂದು ನಾನು ಹಾರೈಸಿಕೊಂಡಿದ್ದೆವು ಪರಸ್ಪರ! ಅದೆಷ್ಟು ಕಾಲ ಬರಿನೆಲದಲ್ಲಿ ಯೋಗಿಯಂತೆ ಸಾಹಿತ್ಯ, ಸಮಾಜ, ಗಂಡು ಹೆಣ್ಣು ಎಂದು ಕಣ್ಣು ಕೂಡಿಸದೇ ನಿರ್ವಿಕಾರನಾಗಿ ಮಾತಿನೆಳೆಗಳನ್ನು ಆತ ಬಿಡಿಸುತ್ತಿದ್ದರೆ… ಅಲ್ಲಲ್ಲಿ ಅಲ್ಪವಿರಾಮ, ಪ್ರಶ್ನಾರ್ಥಕ, ಆಶ್ಚರ್ಯ ಚಿಹ್ನೆ ನಾನು. ಅವನ ಸಂಭ್ರಮಕ್ಕೆ ನನ್ನ ಭಾವ, ನನ್ನ ಪುಳಕಕ್ಕೆ ಅವನ ನಡೆ ತಗಲಿಕೊಂಡಿದ್ದು ಗಮನಕ್ಕೆ ಬಂದಾಗ ವಟವೃಕ್ಷ ಒಳಗೊಳಗೆ ಬೇರಿಳಿಸಿ ಅದರ ಬಿಳಲು ಹಿಡಿದು ನಾನು ಜೋಕಾಲಿ ಆಡುತ್ತಿದ್ಧೆ. ಬೆನ್ನ ಹಿಂದಿನ ಹಸ್ತ ಅವನದೇ ಇರಬೇಕು. ಜೀಕುವ, ತೂಗುವ ಸಂಭ್ರಮ.. ಅವನ ಕಣ್ಣಿನೊಳಗೆ ನನ್ನ ಆತ್ಮದ ಪ್ರತಿಫಲನ. ಓ ಇವನೇ.. ಜೋರಾಗಿ ಜೀಕಿ ಬಿಡು ಹೊರಗೆ ಆಕಾಶಕ್ಕೆ. ಸ್ವರ್ಗದ ಬಾಗಿಲಿಗೆ. ನಿನ್ನ ಸೆಳೆದು ನಾನು ಒಳಸೇರಿಬಿಡುವೆ. ಕಿರು ಪರಿಚಯ: ಪೂರ್ಣಿಮಾ ಸುರೇಶ್. ಉಡುಪಿ. ಕವಯತ್ರಿ ಹಾಗೂ ರಂಗನಟಿ. 3 ಕವನಸಂಕಲನಗಳು ಪ್ರಕಟಗೊಂಡಿವೆ. gss ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ದೊರಕಿವೆ. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ- ಕೊಂಕಣಿ ಪದಕೋಶ ಸಂಗ್ರಹವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿವೆ . ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ,ಆಕಾಶವಾಣಿ ಕಲಾವಿದೆ. ವೃತ್ತಿ ಬಸ್ ಉದ್ಯಮ. ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವಾತಿ ಮುತ್ತು ಮಧು ವಸ್ತ್ರದ್ ಬಾಲ್ಯದಾ ದಿನಗಳಲ್ಲಿ ತಾಯ್ತಂದೆ,ಅಣ್ಣಂದಿರ ಬೆಚ್ಚಗಿನಾ ಗೂಡಿನಲ್ಲಿ ನಲಿದಿದ್ದ ಮುಗ್ಧತೆಗೆ ಸಿಕ್ಕಿದ್ದು ವಾತ್ಸಲ್ಯದಮುತ್ತು ಶಾಲೆಯಾ ದಿನಗಳಲ್ಲಿ ವಿದ್ಯೆಯಾ ಕಲಿಯುವಲ್ಲಿ ಗುರುಗಳಿಂದ ಸಿಕ್ಕಿದ್ದು ಮಾರ್ಗದರ್ಶನದ ನುಡಿ ಮುತ್ತು.. ಹರಯದಾ ಬನದಲ್ಲಿ ಮುಂಜಾನೆಯ ಮಂಜಿನಲಿ ಚಿಗುರೆಲೆಯ ಅಂಚಿನಲಿ ನನ್ನ ನೋಡಿ ನಕ್ಕಿದ್ದು ಇಬ್ಬನಿಯಮುತ್ತು ಸಪ್ತಪದಿಯ ತುಳಿದಲ್ಲಿ ನವಜೀವನದ ಹೊಸಿಲಲ್ಲಿ ಮೊದಲರಾತ್ರಿಯ ಗುಂಗಿನಲ್ಲಿ ನಲ್ಲ ನನಗಿತ್ತಿದ್ದು ಒಲವಿನ ಮುತ್ತು ನವಮಾಸ ಮುಗಿಯುತಲಿ ತಾಯ್ತನದ ಮೋಡಿಯಲಿ ನನ್ನ ಮುದ್ದಿನ ಕರುಳಕುಡಿಗೆ ಕಣ್ಮುಚ್ಚಿ ನಾನಿತ್ತಿದ್ದು ಮಮತೆಯ ಮುತ್ತು ತುಂಬುಪ್ರೀತಿಯ ಬಾಳಿನಲ್ಲಿ ದಿವ್ಯಸಾರ್ಥಕತೆಯಲ್ಲಿ ಕಷ್ಟಸುಖಗಳ ಮೂಸೆಯಲ್ಲಿ ನಾನು ಗಳಿಸಿದ್ದು ಅನುಭವದ ಮುತ್ತು ಜೀವನದ ಹಾದಿಯಲ್ಲಿ ಕರ್ತವ್ಯಗಳ ಭರದಲ್ಲಿ ಅಡೆತಡೆಗಳು ಬಂದಾಗ ನಲ್ಲನಿಂದ ಸಿಕ್ಕಿದ್ದು ಭರವಸೆಯ ಮುತ್ತು ಈ ಬಾಳಿನ ಹಾದಿಯಲ್ಲಿ ನಲ್ಲನ ಒಲುಮೆಯಿದ್ದಲ್ಲಿ ಸ್ವಾತಿಮಳೆ ಇಲ್ಲದೆಯೂ ನಾನಾಗಬಲ್ಲೆನು ಸ್ವಾತಿ ಮುತ್ತು

ಕಾವ್ಯಯಾನ Read Post »

You cannot copy content of this page

Scroll to Top