ಸ್ವಾತ್ಮಗತ

ಕರ್ನಾಟಕ ಗಾಂಧಿ” ಹಾಗೂ ವಿಭೂತಿ ಪುರುಷ

ಹರ್ಡೇಕರ ಮಂಜಪ್ಪ ..!

ಕೆ.ಶಿವು ಲಕ್ಕಣ್ಣವರ್

ದೇಶದ ಸ್ವಾತಂತ್ರಕ್ಕಾಗಿನ ಹೋರಾಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕಲೆಗಳಲ್ಲಿ ನುರಿತವರಾದ ಹಲವಾರು ಮಂದಿ ಹೆಸರಾಗಿದ್ದಾರೆ…

ಮಹಾತ್ಮ ಗಾಂಧೀಜಿಯವರ ನೇರ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಹಲವಾರು ಮಹಾಪುರುಷರು ಮತ್ತು ಮಹಿಳೆಯರು ಕೂಡಾ ಇಂತಹ ಮಹನೀಯರ ಸಾಲಿನಲ್ಲಿ ಪ್ರಮುಖರಾಗಿದ್ದು ಈ ನಿಟ್ಟಿನಲ್ಲಿ, ಉಮಾಬಾಯಿ ಕುಂದಾಪುರ್, ಕಮಲಾದೇವಿ ಚಟ್ಟೋಪಾದ್ಯಾಯ, ಎನ್. ಎಸ್. ಹರ್ಡೇಕರ್ ಅವರುಗಳು ಸಮಾಜ ಸೇವೆಯಲ್ಲಿ ಮಹತ್ವವಾದ ಸೇವೆ ಸಲ್ಲಿಸಿದವರಾಗಿದ್ದಾರೆ…

ಹರ್ಡೇಕರ್ ಮಂಜಪ್ಪನವರು ಈ ಪೈಕಿ ಒಂದು ಹೆಜ್ಜೆ ಮುಂದು. ಅವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದವರು. ತಮ್ಮ ಜೀವನದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ ಬಹಳಷ್ಟು ಮಂದಿ ಇದ್ದಾಗ್ಯೂ ಹರ್ಡೇಕರ್ ಮಂಜಪ್ಪನವರಂತೆ ಅತ್ಯಂತ ಕಟ್ಟುನಿಟ್ಟಿನ ಸ್ವಯಂ ನಿಯಂತ್ರಣದಲ್ಲಿ ಬದುಕನ್ನು ಸಾಧಿಸಿದವರು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಬಡತನದ ಬವಣೆ ಅನುಭವಿಸುತ್ತಿರುವವರಿಗಾಗಿ ಬದುಕಿದವರು ಅತ್ಯಂತ ವಿರಳವೆನ್ನಬೇಕು….

ಹರ್ಡೇಕರ್ ಮಂಜಪ್ಪನವರು ಪಂಪನ ಕಾವ್ಯಬಣ್ಣಿತವಾದ ಬನವಾಸಿಯಲ್ಲಿನ ಬಡ ಕುಟುಂಬವೊಂದರಲ್ಲಿ ಫೆಬ್ರವರಿ 18, 1889ರಲ್ಲಿ ಜನಿಸಿದರು. ಅವರು 1903ರ ವರ್ಷದಲ್ಲಿ ಹತ್ತಿರದ ಸಿರಸಿಯಲ್ಲಿ ಮುಲ್ಕಿ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಿರಸಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಸಿದವರು. ಸಂಬಳ ೭ ರೂಪಾಯಿ ಮಾತ್ರ ಪ್ರತಿ ತಿಂಗಳಿಗೆ…

ಬರಹ ಪ್ರವೀಣರಾದ ಹರ್ಡೇಕರ್ ಮಂಜಪ್ಪನವರು ಮಕ್ಕಳಿಗೆ ಅರ್ಥವಾಗುವ ಹಾಗೆ ಪದ್ಯಗಳ ರಚನೆ ಮಾಡಿದ್ದಲ್ಲದೆ ಅವನ್ನು ಮಕ್ಕಳ ಮನೋಧರ್ಮಕ್ಕೆ ರುಚಿಸುವ ಹಾಗೆ ಹಾವಭಾವ ಪೂರಕವಾಗಿ ಬೋಧಿಸಿದರು. ಅವರಿಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕೆಂಬ ಆಸೆ ಇದ್ದಿತಾದರೂ, ಆ ನಿಟ್ಟಿನಲ್ಲಿ ಗುರುಗಳನ್ನು ಪಡೆಯುವ ಸೌಲಭ್ಯ ಇಲ್ಲದಿದ್ದ ಕಾರಣಗಳಿಂದ ತಾವೇ ಸ್ವಯಂ ಆಚಾರ್ಯರಾಗಿ ಕಲಿಯಲಾರಂಭಿಸಿದರು…

ಸ್ವದೇಶೀ ಆಂದೋಲನ ಪ್ರಬಲವಾಗಿ ಮುಂಚೂಣಿಯಲ್ಲಿದ್ದ ದಿನಗಳವು. ೧೯೦೬ರಲ್ಲಿ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿ ಬಿಟ್ಟು ದಾವಣಗೆರೆಗೆ ಬಂದು ೧೯೦೬ರ ಸೆಪ್ಟೆಂಬರ್ ೨ರಂದು ’ಧನುರ್ಧಾರಿ’ ವಾರ ಪತ್ರಿಕೆ ಪ್ರಕಟನೆಯ ಆರಂಭಿಸಿದರು. ಹರ್ಡೇಕರ್ ಮಂಜಪ್ಪ ಮತ್ತು ಅವರ ಹಿರಿಯ ಸಹೋದರರು ತಿಲಕರ ಕೇಸರಿ ಪತ್ರಿಕೆಯಿಂದ ತೀವ್ರ ಪ್ರಭಾವಿತರಾಗಿ, ಅದರಲ್ಲಿನ ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸಲು ಅನುಮತಿ ಪಡೆದುಕೊಂಡರು. ಮರಾಠಿ ಭಾಷೆಯನ್ನು ಚೆನ್ನಾಗಿ ಅರಿತಿದ್ದ ಹರ್ಡೇಕರ್ ಸಹೋದರರು ತಮ್ಮ ಸಾಪ್ತಾಹಿಕದಲ್ಲಿ ಪ್ರಕಟಿಸಿದಾಗ ಅದು ಕೆಲವೇ ದಿನಗಳಲ್ಲಿಯೇ ಹತ್ತು ಸಾವಿರ ಗ್ರಾಹಕರನ್ನು ಪಡೆದುಕೊಂಡಿತು. ’ಧನುರ್ಧಾರಿ’ಯ ಕೆಲವೊಂದು ಪ್ರತಿಗಳು ಹಳೆಯ ಮೈಸೂರು ರಾಜ್ಯದಲ್ಲೂ ಅಲ್ಲಲ್ಲಿ ಭಿತ್ತರಗೊಂಡಾಗ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ಮಾಧವರಾಯರು ಈ ಪತ್ರಿಕೆಯಲ್ಲಿನ ಪ್ರಕಟಣೆಗಳು ಪ್ರಚೋದನಕಾರಿಯಾಗಿದ್ದೆಂಬ ಕಾರಣದಿಂದ ಪತ್ರಿಕೆಗೆ ನಿಷೇಧ ಹಾಕಿ ಭೀಕರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಹೀಗಾಗಿ ’ಧನುರ್ಧಾರಿ’ ಪತ್ರಿಕಾಲಯ ತನ್ನ ಬಾಗಿಲನ್ನು ಮುಚ್ಚಬೇಕಾಯಿತು…

ಮಂಜಪ್ಪನವರು ಮದುವೆಯಾದರೆ ಸಮಾಜ ಸೇವೆಗೆ ತೊಡಕಾಗುವುದೆಂದು ೧೯೧೦ರಲ್ಲಿ ಮದುವೆ ಆಗಬಾರದೆಂಬ (೨೨ನೆ ವಯಸ್ಸಿನಲ್ಲಿ) ನಿರ್ಧಾರಿಸಿದರು. ಬ್ರಹ್ಮಚರ್ಯೆಯಿಂದ ಕೂಡಿದ ಸಾತ್ವಿಕ ತಪಶ್ಚರ್ಯೆಯ ಜೀವನವನ್ನು ಅಳವಡಿಸಿಕೊಂಡು ಅದಕ್ಕಾಗಿ ತಮ್ಮ ಬಡ ಅಕ್ಕಿ – ಬೇಳೆಯ ಆಹಾರದಲ್ಲಿಯು ಸಹಾ ಉಪ್ಪು ಸಕ್ಕರೆಯಂತಹ ರುಚಿಗಳನ್ನು ನಿಷೆಧಿಸಿಕೊಂಡು ಬಿಟ್ಟರು ಹಾಗೂ ಬ್ರಹ್ಮ ಚರ್ಯಕ್ಕೆ ಪೋಷಕವಾಗುವ ರೀತಿಯ ಆಹಾರ ಸೇವನೆಯ ಆರಂಭಿಸಿ, ಉಪ್ಪು, ಹುಳಿ, ಖಾರ ಹಾಗು ಸಿಹಿ ಪದಾರ್ಥಗಳ ಸೇವನೆ ನಿಲ್ಲಿಸಿದರು. ಆಹಾರದಲ್ಲಿನ ಸ್ವಯಂ ನಿರ್ಬಂಧಗಳು ಶುದ್ಧ ಮತ್ತು ಶಿಸ್ತಿನ ಜೀವನವನ್ನು ಸಾಗಿಸಲು ಸಹಾಯಕ ಎಂದು ಮಂಜಪ್ಪನವರ ನಂಬಿಕೆಯಾಗಿತ್ತು…

“ಕರ್ನಾಟಕ ಗಾಂಧಿ” ಹರ್ಡೇಕರ ಮಂಜಪ್ಪ
ಬಹುಷಃ ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ‘ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು. ‘ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ಸಹಾ ಮಂಜಪ್ಪನವರು ರಚಿಸಿದರು. ಆದ್ದರಿಂದಲೇ ಜನ ಇವರನ್ನು “ಕರ್ನಾಟಕ ಗಾಂಧಿ” ಎಂದು ಕರೆದರು…

ಕಾಲಕ್ರಮೇಣದಲ್ಲಿ ಹರ್ಡೇಕರ್ ಅವರು ಬಸವೇಶ್ವರರ ತತ್ವಗಳಲ್ಲಿ ಆಕರ್ಷಿತರಾದರು. ತಮ್ಮ ಪರಿಸರದಲ್ಲಿದ್ದ ಲಿಂಗಾಯತದಲ್ಲಿ ಅಷ್ಟೊಂದು ಪಂಗಡಗಳಿರುವುದು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. ಲಿಂಗಾಯತ ಚಿಂತನೆಗಳು ಮತಧರ್ಮಗಳ ಗೋಡೆಗಳನ್ನು ಉರುಳಿಸಿ ಆ ಮೂಲಕ ಆಚರಣೆಗಳಲ್ಲಿದ್ದ ದುಷ್ಟಪದ್ಧತಿಗಳನ್ನು ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಮೂಲೋದ್ದೇಶವನ್ನು ಹೊಂದಿದ್ದ ಹಿನ್ನಲೆಯಲ್ಲಿ ಆ ಜನಾಂಗದಲ್ಲೂ ಪಂಗಡ, ಉಪಪಂಗಡಗಳು ಹುಟ್ಟಿಕೊಂಡಿದ್ದುದು ಅವರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಬಸವೇಶ್ವರರ ತತ್ವಗಳನ್ನು ಪ್ರಸ್ತುತ ಪಡಿಸುವ ಹಲವಾರು ಪುಸ್ತಿಕೆಗಳನ್ನು ಹೊರತಂದು ಅವನ್ನು ಉಚಿತವಾಗಿ ಹಂಚಿ ಆ ಜನಾಂಗವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಈ ಕಾರ್ಯದಲ್ಲಿ ಲಿಂಗಾಯತ ಧರ್ಮ ಸಹೃದಯಿಗಳಾದ ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮೀಜಿಯವರು ಹರ್ಡೇಕರ್ ಮಂಜಪ್ಪನವರಿಗೆ ಅಪಾರ ಬೆಂಬಲವಿತ್ತರು. ಹರ್ಡೇಕರ್ ಮಂಜಪ್ಪನವರ ಈ ಚಿಂತನೆಗಳಿಗೆ ಅನೇಕರು ಅನುಯಾಯಿಗಳಾಗಿ ಹೊರಹೊಮ್ಮಿದರು…

೧೯೧೧ ರಲ್ಲಿ ದಾವಣಗೆರೆಯಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳವರ ಸಹಕಾರದೋಂದಿಗೆ ಶ್ರಾವಣ ಉಪನ್ಯಾಸಮಾಲೆ (ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮ) ಪ್ರಾರಂಭ. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಮಂಜಪ್ಪನವರು ನೈಷ್ಠಿಕ ಬ್ರಹ್ಮಚಾರಿಯಾಗಿಯೇ ಉಳಿದರು…

ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ
೧೯೧೩ರಲ್ಲಿ ಆಧುನಿಕ ರೀತಿಯಲ್ಲಿ ಸಾರ್ವಜನಿಕ ’ಬಸವ ಜಯಂತಿ’ ಆಚರಣೆಯನ್ನು ಪ್ರಾರಂಭಿಸಿ ಜನರೆಲೆರಿಗೆ ಬಸವ ತತ್ವ ತಿಳಿಪಡಿಸಿದರು. ೧೯೧೫ರಲ್ಲಿ ’ಸ್ವಕರ್ತವ್ಯ ಸಿದ್ಧಾಂತ’ ಪ್ರಥಮ ಗ್ರಂಥ ಪ್ರಕಟನೆ ಮಾಡಿದರು. ೧೯೧೯ರಲ್ಲಿ ಗಾಂಧೀಜಿಯವರ ಕಾರ್ಯ ಚಟುವಟಿಕೆಯಿಂದ ಪ್ರಭಾವಿತರಾದರು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ’ಮಹಾತ್ಮಾ ಗಾಂಧೀಜೀ ಚರಿತ್ರೆ’ ಪ್ರಕಟಣೆಯನ್ನು ಮಾಡಿದರು…

೧೯೨೨ರಲ್ಲಿ ’ಸತ್ಯಾಗ್ರಹ ಧರ್ಮ’ ಗ್ರಂಥ ಪ್ರಕಟನೆ ಹಾಗೂ ಹುಬ್ಬಳ್ಳಿಯಲ್ಲಿ ’ಸತ್ಯಾಗ್ರಹ ಸಮಾಜ’ ಸ್ಥಾಪನೆ ನೆರವೇರಿಸಿದರು. ೧೯೨೩ ಹರಿಹರದ ಬಳಿ ತುಂಗಭದ್ರಾ ನದಿ ತೀರದಲ್ಲಿ ’ಸತ್ಯಾಗ್ರಹ ಆಶ್ರಮ’ ಸ್ಥಾಪನೆ ಮಾಡಿದರು…

೧೯೨೪ ’ಬಸವ ಚರಿತ್ರೆ’ ಸಂಶೋಧನಾತ್ಮಕ ಗ್ರಂಥ ಪ್ರಕಟನೆ. ಮಾರ್ಚ ತಿಂಗಳಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ವಾಸ್ತವ್ಯ. ಗಾಂಧೀಜಿಯವರ ನೇತೃತ್ವದಲ್ಲಿ ೧೯೨೪ರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸಿದ್ದರು. ಗಾಂಧೀಜಿಯವರಿಗೆ ಬಸವೇಶ್ವರರ ಬಗ್ಗೆ ಅವರ ವಚನಗಳ ಬಗ್ಗೆ ತಿಳಿಸಿಕೊಟ್ಟರು. ’ಬಸವೇಶ್ವರ ಸೇವಾದಳ’ದೊಂದಿಗೆ ಪ್ರಯಾಣ ಹಾಗೂ ’ಸತ್ಯಾಗ್ರಹಿ ಬಸವೇಶ್ವರ’ ಗ್ರಂಥವನ್ನು ಗಾಂಧೀಜಿಯವರಿಗೆ ಕೊಟ್ಟರು…

೧೯೨೫ ಬಂಥನಾಳ ಮಹಾಸ್ವಾಮಿಗಳೊಂದಿಗೆ ವಿಜಾಪುರ ಜಿಲ್ಲೆಯ ಹಳ್ಳಿಗಳ ಸಂಚಾರ ಹಾಗೂ ಜನರಲ್ಲಿ ಬೇರು ಬಿಟ್ಟ ದುಶ್ಚಟಗಳ ನಿರ್ಮೂಲನಕ್ಕಾಗಿ ದೇಶೀ ಚಳವಳಿಯ ಆರಂಭಿಸಿದರು. ೧೯೨೬ ’ಬಸವ ಭೋಧಾಮೃತ’ ಗ್ರಂಥ ಪ್ರಕಟನೆ ಕೈಗೊಂಡರು…

ಹರ್ಡೇಕರ್ ಮಂಜಪ್ಪನವರು, ೧೯೨೭ ಮಾರ್ಚ್ ೨೭ರಂದು ಕಲಬುರ್ಗಿಯಲ್ಲಿ ಗಾಂಧೀಜಿಯವರನ್ನು ಕಂಡು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮಾರ್ಗ ದರ್ಶನ ಕೋರಿದರು. ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಸಿ ಆಶ್ರಮ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ಮೊದಲು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿದ ಹರ್ಡೇಕರ್ ಅವರು ಗಾಂಧೀಜಿಯವರ ಕಾರ್ಯಕ್ರಮಗಳು ಮತ್ತು ಚಿಂತನೆಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಮಹತ್ತರವಾದ ಕಾರ್ಯ ನಡೆಸಿದರು. ಬಸವೇಶ್ವರರು ಮತ್ತು ಗಾಂಧೀಜಿಯವರ ಬೋಧನೆಗಳಲ್ಲಿ ತಾದ್ಯಾತ್ಮವನ್ನು ಕಂಡ ಮಂಜಪ್ಪನವರಿಗೆ, ಬಸವೇಶ್ವರರ ಬಗ್ಗೆ ಅರಿವಿದ್ದ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಗಾಂಧೀಜಿಯವರ ತತ್ವಗಳನ್ನು ತಲುಪಿಸುವ ಸಾಮರ್ಥ್ಯ ರೂಢಿಗೊಂಡಿತ್ತು. ಸತ್ಯಾಗ್ರಹ, ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ, ಸ್ತ್ರೀಪುರುಷರಲ್ಲಿ ಸಮಾನತೆ ಮುಂತಾದ ಮಹತ್ವದ ವಿಚಾರಗಳಲ್ಲಿ ಮಂಜಪ್ಪನವರು ಸಹಸ್ರಾರು ಉಪನ್ಯಾಸಗಳನ್ನು ನೀಡಿದರು. ಸಬರಮತಿ ಆಶ್ರಮದಲ್ಲಿ ಮೂರು ವಾರಗಳ ಕಾಲ ತಂಗಿದ್ದು ಸತ್ಯಾಗ್ರಹಿಗಿರಬೇಕಾದ ಮೂಲಭೂತಗುಣಗಳ ಅನುಭವವನ್ನು ನೇರವಾಗಿ ಪಡೆದುಕೊಂಡರು. ಸ್ವತಃ ಕಾಂಗ್ರೆಸ್ ಪಕ್ಷದ ಭಾಗವಾಗದಿದ್ದರೂ ಸಹಾ ಮಂಜಪ್ಪನವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ಸಮಾಜ ಸೇವಾ ಶಿಬಿರಗಳನ್ನು ಆಯೋಜಿಸಿಕೊಟ್ಟರು…

ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ೧೯೩೧ ’ಶರಣ ಸಂದೇಶ’ ವಾರಪತ್ರಿಕೆ ಪ್ರಕಟನೆಯ ಆರಂಭವಾಯಿತು…

೧೯೩೫ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿಯ ಜಯಂತಿ ಆಚರಣೆ ಆರಂಭಸಿದರು…

೧೯೩೮ ’ಶುದ್ಧಿ ಮತ್ತು ಸಂಘಟನೆ’ ಹಾಗೂ ’ವಚನಕಾರರ ಸಮಾಜ ರಚನೆ’ ಗ್ರಂಥಗಳ ಪ್ರಕಟನೆ ಕೈಗೊಂಡರು…

೧೯೪೨ ಯುದ್ಧ ಸಮಯದಲ್ಲಿ ಕಾಗದದ ಅಭಾವ, ಕೈ ಕಾಗದ ತಯಾರಿಸಿ ’ಶರಣ ಸಂದೇಶ’ ಪ್ರಕಟನೆಯ ಮುಂದುವರಿಸಕದರು…

ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 3ನೆ ಜನವರಿ 1947ರಂದು ಲಿಂಗೈಕ್ಯರಾದರು…

ಹೀಗೆ ಪೂಜ್ಯ ಹರ್ಡೇಕರ ಮಂಜಪ್ಪನವರು ಒಬ್ಬ ಹಿರಿಯ ವಿಭೂತಿ ಪುರುಷರಾಗಿದ್ದರು…
‌‌ ‌‌‌‌=============

Leave a Reply

Back To Top