ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರಾತ್ರಿಯ ಮೌನದ ಮಡಿಲಿನಲ್ಲಿ
ಒಂದು ಕನಸು ಕಣ್ಣು ತೆರೆದಿತು,
ಬಡ ಹೃದಯದ ಚಿಕ್ಕ ಗುಡಿಸಲಲ್ಲಿ
ಅರಮನೆಯೊಂದು ಅರಳಿತು.

ಕಲ್ಪನೆಯ ಕಲ್ಲು ಕಲ್ಲಿನಿಂದ
ಕಟ್ಟಿದ ಮನದ ಮಂದಿರವು,
ಆಶೆಗಳ ಹೊನ್ನಿನ ಕಿಟಕಿಯಿಂದ
ಬೆಳಗಿತು ಬದುಕಿನ ಅಂತರವು.

ಕಣ್ಣೀರ ಹನಿಯ ನೀರಿನಿಂದಲೇ
ಬೇರು ಬಿಟ್ಟಿತು ಬಯಕೆಯ ಗಿಡ,
ನೋವಿನ ಬೆಂಕಿ ದಾಟಿಬಂದಾಗ
ಹೂವಾಯಿತು ಬದುಕಿನ ಹಾದಿ ಬಿಡ.

ಬೆವರ ಹನಿಗಳ ಮುತ್ತುಗಳಿಂದ
ಗೋಡೆಯ ಮೇಲೆ ಚಿತ್ರ ಬರೆದೆ,
ಸಹನೆಯ ದೀಪ ಹಚ್ಚಿಕೊಂಡು
ಸಾವಿರ ಕತ್ತಲ ದಾರಿ ನಡೆದೆ.

ಬಿರುಗಾಳಿಗಳು ಬಂದಾಗಲೂ
ಮನದ ಬಾಗಿಲು ಮುಚ್ಚಲಿಲ್ಲ,
ಸೋಲಿನ ನೆರಳು ಸುತ್ತಿದಾಗ
ನಂಬಿಕೆಯ ಸೂರ್ಯ ಅಸ್ತವಾಗಲಿಲ್ಲ.

ಅರಮನೆ ಎಂದರೆ ಚಿನ್ನವಲ್ಲ,
ಅದು ಮನದ ಮಹತ್ವದ ಗೃಹ,
ಪ್ರೀತಿಯೇ ಅದರ ಸಿಂಹಾಸನ,
ಮನುಜತ್ವವೇ ಅದರ ಸುಗಂಧ ಸುಭ್ರ.

ಕನಸು ಎಂದರೆ ಕೇವಲ ನಿದ್ರೆ ಅಲ್ಲ,
ಕನಸು ಎಂದರೆ ಜೀವದ ಜ್ಯೋತಿ,
ಬಿದ್ದರೂ ಮತ್ತೆ ಎದ್ದು ನಿಲ್ಲುವ
ಧೈರ್ಯದ ಅಮರ ಪ್ರೀತಿ.

ಇಂದು ನಿಂತಿದೆ ಆ ಅರಮನೆ
ಕಾಲದ ಮುಂದೆ ಗರ್ವವಾಗಿ,
ನಿನ್ನೆ ಕಣ್ಣೀರಲಿ ತೇಲಿದ ಮನಸು
ಇಂದು ನಗುತ್ತಿದೆ ಹೂವಾಗಿ.

ಜೀವನವೆಂಬ ವಿಶಾಲ ಭುವಿಯಲ್ಲಿ
ಕನಸೇ ಮಾನವನ ರೆಕ್ಕೆ,
ಕನಸಿನ ಅರಮನೆ ಕಟ್ಟಿದವನಿಗೆ
ಆಕಾಶವೂ ಚಿಕ್ಕದಾದ ತೆಕ್ಕೆ.


About The Author

2 thoughts on “ದಾನಮ್ಮ ಝಳಕಿ ಅವರ ಕವಿತೆ “ಕನಸಿನ ಅರಮನೆ””

  1. “ಕನಸಿನ ಅರಮನೆ” ಎಂಬ ಕವನ ತಮ್ಮ ಮನದಾಳದಿಂದ ಮೂಡಿದ ಕವನ, ಜೀವನವೆಂಬ ವಿಶಾಲ ಭೂಮಿಯಲ್ಲಿ ಕನಸೇ ಮಾನವನ ರೆಕ್ಕೆ ಎಂಬುದನ್ನು ಅರ್ಥಗರ್ಭಿತವಾಗಿ ಬರೆದಿರುವಿರಿ. ಅದ್ಭುತ ಕವನ ಮೇಡಂ ತಮಗೆ ಅನಂತ ಧನ್ಯವಾದಗಳು.

    ವಿಜಯಲಕ್ಷ್ಮಿ ಹಂಗರಗಿ

Leave a Reply

You cannot copy content of this page

Scroll to Top