ಕಥಾ ಸಂಗಾತಿ
“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು”
ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್,
ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು
ತೆಲುಗು ಮೂಲ : ಜಿ. ಉಮಾಮಹೇಶ್ವರ್
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು
“ಸಾರ್, ಈಬಾರಿ ಆಗಸ್ಟ್ ಹದಿನೈದರಂದು ನಾವು ಕೂಡಾ ಒಂದು ನಾಟಕ ಪ್ರದರ್ಶಿಸಲು ಬಯಸುತ್ತಿದೇವೆ ಸಾರ್”
ಸ್ಟಾಫ್ ರೂಮಿನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ವಿಜಯಕುಮಾರ್ ಸಾರ್ ಮುಂದೆ ನಮ್ಮ ಬಯಕೆಯನ್ನು ನಾನು-ಮಲ್ಲಿ ಹೇಳಿಕೊಂಡೆವು.
ವಿಜಯಕುಮಾರ್ ಸಾರ್ ತೆಲುಗು ಶಿಕ್ಷಕರಷ್ಟೇಅಲ್ಲ, ಸಾಹಿತ್ಯ ಮತ್ತು ನಾಟಕಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅಲ್ಲೆನ್ನ ಸಾರ್ ಜೊತೆ ಸೇರಿ ಹಲವುನಾಟಕಗಳು,ಮತ್ತು ಏಕಾಂಕಗಳನ್ನು ಪ್ರದರ್ಶಿಸಿದ ಅನುಭಅವ ಅವರಿಗಿದೆ.
“ಯಾವ ನಾಟಕವಪ್ಪಾ?” ಎಂದುಕೇಳಿದರು.
“ದೇಶದ್ರೋಹಿಗಳು” ನಾನು ಉತ್ತರಿಸಿದೆ.
“ದೇಶದ್ರೋಹಿಗಳಾ ? ಎಂದೂ ಕೇಳಿಲ್ಲವಲ್ಲಾ, ಬರೆದವರು ಯಾರು? ಸ್ಕ್ರಿಪ್ಟ್ಇದೆಯೇ?” ಎಂದು ಕೇಳಿದರು.
“ನಾನೇ ಬರೆಯುತ್ತಿದ್ದೇನೆ ಸಾರ್, ಇನ್ನೂ ಮುಗಿದಿಲ್ಲ, ಇನ್ನೆರಡು ದಿನಗಳಲ್ಲಿ ತೋರಿಸ್ತೇನೆ ಸಾರ್” ಅಂದೆ.
ಅದಕ್ಕೂ ಮುಂಚೆ ಏಳನೇ ಕ್ಲಾಸ್ ನಲ್ಲಿ ನಮ್ಮ ECA (Extra Curricular Activities)ಪಿರಿಯಡ್ ನಲ್ಲಿ ನಾನು ಬರೆದ ‘ಈ ಸಮಾಜ ಬದಲಾಗದೆ?’ ಎಂಬ ಏಕಾಂಕ ನಾಟಕವನ್ನು,ಅದಕ್ಕೂ ಮುಂಚೆ ನಮ್ಮ ಕ್ಲಾಸ್ ಪುಸ್ತಕದಲ್ಲಿ ಇರುವ ‘ಬುರ್ರಕಥೆ’ ಯನ್ನು ಅನುಸರಿಸುತ್ತಾ ಚಂದ್ರಶೇಖರ್, ನಾನು, ಕೂನ ಶ್ರೀನಿವಾಸ್ ಪ್ರದರ್ಶಿಸಿದ ವಿಷಯ ನೆನಪಿದ್ದರಿಂದ ಆಶ್ಚರ್ಯಪಡಲಿಲ್ಲ. ಆದರೆ ಎಷ್ಟು ಮಾತ್ರವೂ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ,
“ಏನೋ, ಸ್ಕ್ರಿಪ್ಟ್ ರೆಡೀ ಇರುವ ನಾಟಕಗಳಿಗೆ ರಿಹರ್ಸಲ್ಮಾಡಿಸಲು ಸಮಯ ಸಾಕಾಗುತ್ತದೋ, ಇಲ್ಲವೋ ಎಂದು ನಾವು ಯೋಚಿಸುತ್ತಿದ್ದರೆ, ನಿಮ್ಮ ಸ್ಕ್ರಿಪ್ಟ್ ಇನ್ನೂ ರೆಡೀನೇ ಇಲ್ಲ. ಯಾವಾಗ ಬರೆಯುತ್ತೀರಿ? ಯಾವಾಗ ಪ್ರಾಕ್ಟೀಸ್ ಮಾಡುತ್ತೀರಿ? ಇದು ಸಾಧ್ಯವಾಗುವ ಕೆಲಸ ಅಲ್ಲ” ಎಂದು ಹೇಳಿದರು.
ನಮಗೆ ನಿರಾಶೆಯಾಯಿತು. ಆದರೆ ಹಿಂದೆ ಸರಿಯಲಿಲ್ಲ. ಅಲ್ಲಿರುವಾಗಲೇ ನಾನು, ಮಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಅವರನ್ನು ಹೇಗೆ ಒಪ್ಪಿಸುವುದು ಎಂದು ಯೋಚಿಸುತ್ತಿರುವಾಗ, ಏನಂದುಕೊಂಡರೊ ಏನೋ ಅವರೇ-
“ಸರಿ ಅಪ್ಪಾ, ಒಂದು ಕೆಲಸ ಮಾಡಿರಿ. ಇವತ್ತು ಇಪ್ಪತ್ತಾರು ಅಲ್ಲವೇ? ಮುವ್ವತ್ತನೇ ತಾರೀಕಿನ ಒಳಗೆ ಸ್ಕ್ರಿಪ್ಟ್ ,ಟೀಮ್ ಎಲ್ಲಾ ರೆಡಿಯಾದರೆ ನಿಮ್ಮ ಡ್ರಾಮಾ ಇರುತ್ತದೆ, ಇಲ್ಲದಿದ್ದರೆ ಮುಂದಿನ ವರ್ಷ ಹಾಕಿರಿ” ಎಂದರು.
“ಸರಿ ಸಾರ್” ಎಂದು ನಾವು ಖುಷಿಯಿಂದ ಹೇಳಿ,ಇನ್ನೂ ಅಲ್ಲೇ ಇದ್ದರೆ, ಮತ್ತೆ ಎಲ್ಲಿ ಅವರ ಮನಸು ಬದಲಾಗುತ್ತದೋ ಎಂದು ಒಂದೇ ಹೆಜ್ಜೆಯಲ್ಲಿ ಹೊರ ಬಿದ್ದೆವು.
ನಾವು ಹೊರಗೆ ಬಂದು ಯೋಚಿಸ ತೊಡಗಿದೆವು.
ತಲೆಯಲ್ಲಿ ಹೀರೋ ಕೃಷ್ಣ ಅವರ ಸಿನಿಮಾಗಳು ಗಿರ್ರೆಂದು ಸುತ್ತುತ್ತಿದ್ದವು. ಗೂಢಚಾರಿ (ಗೂಢಚಾರ) 116, ಏಜೆಂಟ್ ಗೋಪಿ ಕಣ್ಣ ಮುಂದೆ ಕದಲುತ್ತಾ ಇರುತ್ತವೆ. ಅದಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದ ರಫ್ ಸ್ಕೆಚ್ ಇದೆ. ಅದರ ತುಂಬಾ ಈಗ ‘ವನ್ಸ್ ಮೋರ್ ‘ ಡೈಲಾಗ್ಗಳಿಂದ ತುಂಬಿಸಬೇಕು. ಇಡೀ ನಾಟಕ ತುಂಬಾ ಬಂದೂಕಿನ ವ್ಯವಹಾರವಾಗಿದ್ದರಿಂದ ಮಾತುಗಳು ಕೂಡಾ ಗುಂಡುಗಳಂತೆ ಸಿಡಿಯಬೇಕು. ಖಳನಾಯಕನ‘ಚಾಲೆಂಜ್ ಮಾತುಗಳು, ಹೀರೋ ಪಂಚ್ ಡೈಲಾಗ್ ಗಳು ಉತ್ಪ್ರೇಕ್ಷಿತ ಅಲಂಕಾರಗಳಿಂದ ನಡುಗಬೇಕು. ಫಿರದೌಸಿ ಷಾನಾಮಾ ಗ್ರಂಥಕ್ಕೆ ಪಟ್ಟಿರುವ ಕಷ್ಟವನ್ನು ಪಟ್ಟಿದ್ದೇನೆ. ತಿನ್ನುತಿದ್ದರೂ, ತರಗತಿಯಲ್ಲಿದ್ದರೂ, ಮನೆಗೆ,ಶಾಲೆಗೆ ಹೋಗುತ್ತಿದ್ದರೂ, ಅವೇ ಆಲೋಚನೆಗಳು. ಯಾವಾಗ ಯಾವ ಡೈಲಾಗ್ ಮನಸ್ಸಿಗೆ ಹೊಳೆಯುತ್ತದೋ ತಿಳಿಯದು, ಅದರಿಂದ, ನಾಟಕ ಬರೆಯುತ್ತಿದ್ದ ಲೇಪಾಕ್ಷಿ ನೋಟ್ ಬುಕ್ ಯಾವಾಗಲೂ ನನ್ನೊಂದಿಗೆ ಇರುತ್ತಿತ್ತು. ಎಷ್ಟೋ ಬರಹಗಳು, ಹೊಡೆದು ಹಾಕುವುದು, ತಿದ್ದುಪಡಿಗಳಾದ ಮೇಲೆ ಇಡೀ ಸ್ಕ್ರಿಪ್ಟ್ ಒಂದು ಸ್ತರಕ್ಕೆ ಬಂದಿತ್ತು. ಈಗ ನಮಗೆ ನಟೀ ನಟರು ಬೇಕು. ಹೀರೋ ಇನ್ ಸ್ಪೆಕ್ಟರ್ ಆದ್ದರಿಂದ ಇನ್ನೂ ಇಬ್ಬರು ಅಥವಾ ಮೂವರು ಪೋಲೀಸು ಪೇದೆಗಳು ಇರಬೇಕು. ವಿಲನ್ ದೊಡ್ಡ ಡಾನ್. ಅದ್ದರಿಂದ ಅವನಿಗೆ ಅನುಚರಗಣ ಇರಬೇಕು. ಅವರು ಇಬ್ಬರು ಅಥವಾ ಮೂವರು ಇರಬೇಕು. ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುವ ಡಾನ್ನ್ನ ಗುಪ್ತವೇಷದಲ್ಲಿ ಬಂದಿರುವ ಹೀರೋ ಹೇಗೆ ವಿಲನ್ ಕಥೆಯನ್ನು ಮುಗಿಸುತ್ತಾನೆ ಎಂಬುದು ಕಥಾಂಶ. ಆಗಲೂ ನಮ್ಮ ಮಿತ್ರರಾದವರು, ನಮ್ಮ ಮಾತು ಕೇಳುವವರು ಎಂಬ ಅಂಶಗಳ ಆಧಾರದಮೇಲೆ ನಟಿ ನಟರ ಆಯ್ಕೆ ಮುಗಿಸಿದ್ದೇನೆ. ಪಾತ್ರಗಳು- ಪಾತ್ರಧಾರಿಗಳು ಎಂಬ ಪೇಪರ್ ಮುಂದೆ ಇಟ್ಟುಕೊಂಡು, ಬಾಕಿ ಸ್ಕ್ರಿಪ್ಟ್ ಎಲ್ಲ ಬರೆದಿರುವ ನೋಟ್ ಬುಕ್ ಹಿಡಿದುಕೊಂಡು ವಿಜಯಕುಮಾರ್ ಸಾರ್ ರೂಮಿಗೆ ಹೋದೆ.
ಅಷ್ಟುಹೊತ್ತಿಗೆ ಸಾರ್ ಬೇರೆ ತರಗತಿಗೆ ಹೋಗುವ ಆತುರದಲ್ಲಿದ್ದರು. ಒಮ್ಮೆ ಇಡೀ ಸ್ಕ್ರಿಪ್ಟ್ ಇದೆಯೋ ಇಲ್ಲೋ ಎಂದು ನೋಡಿಕೊಂಡು ಸಮಾಧಾನಪಟ್ಟೆ.
“ಸರಿ ಕಣಯ್ಯ, ಎಷ್ಟು ಸಮಯತೆಗೆದು ಕೊಳ್ಳುತ್ತದೆ?” ಎಂದು ಕೆಳಿದರು,ಡಸ್ಟರ್, ಚಾಕ್ ಪೀಸ್ ತೆಗೆದುಕೊಳ್ಳುತ್ತ-
“ಇನ್ನೂ ನೋಡಿಲ್ಲ ಸಾರ್, ಇವತ್ತು ಸಾಯಂಕಾಲ ಎಲ್ಲರನ್ನು ಬರುವಂತೆ ಹೇಳಿದ್ದೀನಿ. ಒಮ್ಮೆ ರಿಹರ್ಸಲ್ಸ್ ಮಾಡಿದ್ರೆ ಗೊತ್ತಾಗುತ್ತೆ” ಎಂದೆ.
“ಅದು ಬೇಕಾಗಿಲ್ಲ, ನಿನಗೆ ಎಲ್ಲರೂ ಸಿಕ್ಕಿ, ಎಲ್ಲರಿಗೂ ಡೈಲಾಗ್ಗಳು ಬಾಯಿಗೆ ಬಂದು ಅವರು ಅಭ್ಯಾಸ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀನೆ ಎಲ್ಲ ಡೈಲಾಗ್ ಗಳನ್ನು ಹೇಗೆ ಬರೆದಿದ್ದೀಯೋ ಹಾಗೆ ಓದುತ್ತಾ, ನಡುವೆ ನಡುವೆ ಗ್ಯಾಪ್ ಕೊಡುತ್ತಾ ಹೋದರೆ ನಿನಗೆ ಗೊತ್ತಾಗುತ್ತೆ. ಎಷ್ಟು ಸಮಯ ತೆಗೆದುಕೊಳ್ಳುತ್ತದೋ ನನಗೆ ಸಂಜೆಗೆ ಹೇಳು” ಅಂದರು.
ನಾನು ಕೂಡಲೇ ನನ್ನ ತರಗತಿಗೆ ಹೋದೆ. ಮಧ್ಯಾಹ್ನ ಲಂಚ್ ಸಮಯದಲ್ಲಿ ಬೇಗಬೇಗನೆ ಮುಗಿಸಿ, ಎಲ್ಲ ಪಾತ್ರಧಾರಿಗಳ ಡೈಲಾಗ್ ಗಳನ್ನು ಅಭಿನಯಿಸುತ್ತಾ ಹೋದರೆ ಹದಿನೈದು ನಿಮೊಷಗಳು ತೆಗೆದುಕೊಳ್ಳಿತ್ತು. ಸಂಜೆ ನಾನು ಹೋಗಿ ಸಾರ್ ಗೆ ಹೇಳಿದೆ. ಅವರು ಸ್ಟೇಜ್ ಬದಲಾವಣೆಗಳು ಮತ್ತು ವಿರಾಮಗಳನ್ನು ಒಳಗೊಂಡಂತೆ ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಿದರು.
“ಸರಿ, ನೀವು ಹೋಗಿ ರಿಹರ್ಸಲ್ಸ್ ಮಾಡಿಕೊಳ್ಳಿ.ಹನ್ನೆರಡನೇ ತಾರೀಖಿಗೆ ನಾನು, ಅಲ್ಲೆನ್ನ ಸಾರೂ ಬಂದು ನೋಡ್ತೀವಿ” ಎಂದು ಹೇಳಿದಾಗ ಹೃದಯ ಸಂತೋಷದಿಂದ ಕುಣಿಯಿತು. ನಾನು ತಕ್ಷಣ ಮಲ್ಲಿ ಕಡೆಗೆ ಹೋದೆ. . ಅವನು ಕೂಡಾ ತನ್ನ ಪಾತ್ರಕ್ಕೆ ತಕ್ಕ ಕೆಲವು ಡೈಲಾಗ್ ಗಳನ್ನು ಬರೆದುಕೊಂಡು ಸಿದ್ದವಾಗಿದ್ದ.
ನಾವಿಬ್ಬರೂ ಕುಳಿತು ಫೈನಲ್ ಸ್ಕ್ರಿಪ್ಟ್ ಸಿದ್ಧಪಡಿಸಿದೆವು. ಮರುದಿನದಿಂದ ರಿಹಾ
ರ್ಸಲ್ಸ್ ಎಂದು ಹೇಳಿ ಎಲ್ಲರನ್ನು ಸಂಜೆ ಶಾಲೆ ಮುಗಿದಮೇಲೆ ತರಗತಿ ಕೋಣೆಯಲ್ಲೇ ಇರಲು ಹೇಳಿದೆ. ಹಾಗೆ ಮರುದಿನ ನಾವು ಎಲ್ಲರೂ ಸೇರಿದವು. ಆಗಲೇ ನಾನು ಎಲ್ಲರಿಗೂ ಅವರವರ ಡೈಲಾಗ್ ಗಳು ಪ್ರತ್ಯೇಕವಾಗಿ ಬರೆದು ಹಂಚಿದೆ. ಕಡಿಮೆ ಡೈಲಾಗ್ ಗಳು ಬಂದವರುಸ್ವಲ್ಪ ಮುಖ ಸಪ್ಪಗೆ ಮಾಡಿಕೊಂಡರು. ಅವನು ಎಸ್.ಐ.ಆದರೆ ನಾನು ಕಾನಸ್ಟೇಬಲ್ ಆಗುವುದಿಲ್ಲ ಎಂದು ಕೆಲವರು ಹಠ ಹಿಡಿದರು. ಡಾನ್ ಆಗಿ ನಾನಿರುತ್ತೇನೆ ಎಂದು ಕೆಲವರು ಡಿಮಾಂಡ್ ಮಾಡಿದರು. ಎಲ್ಲರನ್ನು ಸಮಾಧಾನಮಾಡಿ, ಬೇಡಿಕೊಂಡು, ದಾರಿಗೆ ತರಲು ಆ ದಿನ ಕಳೆದುಹೋಯಿತು.
ಮರುದಿನ ತರಗತಿಯಲ್ಲಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿದ್ದಾಗ,ಹಿಂದಿನದಿನ ಒಪ್ಪಿಕೊಂಡವರು ತಮ್ಮ ಹಿತೈಷಿಗಳ ಮಾತು ಕೇಳಿ ರಿಹರ್ಸಲ್ಸ್ ಗೆ ಬರಲು ನಿರಾಕರಿಸಿದರು. ಯಾರು ಅನಿವಾರ್ಯವಾಗಿ/ ಅವಶ್ಯಕವಾಗಿ ಬೇಕೋ ನಿರ್ಧರಿಸಿ, ಉಳಿದ ಪಾತ್ರಗಳಿಗೆ ಇಬ್ಬರು ಮೂವರನ್ನು ಸ್ಪೇರ್ ಆಗಿ ಇಟ್ಟುಕೊಂಡು, ಅವರಿಗೆ ಅಸಿಸ್ಟೆಂಟ್ ಡೈರೆಕ್ಟರ್ ಸ್ಥಾನಮಾನ ಕೊಟ್ಟು, ನಾಟಕದಲ್ಲಿ ಸಾಧ್ಯವಾದರೆ ಒಂದು ಪಾರ್ಟ್ ಕೊಡುತ್ತೇನೆ ಎಂದು ಆಶೆ ತೋರಿಸಿ ಒಪ್ಪಿಸಲು ಸಾಕುಸಾಕಾಯಿತು.ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಫುಲ್ ರಿಹರ್ಸಲ್ಸ್ ಶುರುವಾಗಲಿಕ್ಕೆ ಮೂರುದಿನ ಬೇಕಾಯಿತು.
ವೇದಿಕೆಯ ಅಲಂಕಾರ, ನಡುವೆ ನಡುವೆ ಅಂಕಗಳು ಬದಲಾಗುವುದು ಅವೆಲ್ಲಾ ಲೆಕ್ಕಿಸಲಾಗಲಿಲ್ಲ. ನಿಜಕ್ಕೆ ನಾವು ಬಣ್ಣಗಳು ಬಳೆದುಕೊಂಡು,ಒಳ್ಳೆಯ ಸ್ಟೇಜ್ ಮೇಲೆ ವೇಷ ಧರಿಸುತ್ತೇವೆ ಎಂದು ಭಾವಿಸಿರಲಿಲ್ಲ.ನಮಗೆ ಸ್ವಲ್ಪ ಸಮಯ ಕೊಡುತ್ತಾರೆ . ನಾವು ಮಾಡಬೇಕಾದ್ದು ಮಾಡುತ್ತೇವೆ ಎಂದು ಭಾವಿಸುತ್ತಿದ್ದೆವು. ರಿಹಾ ರ್ಸಲ್ಸ್ ನಡೆಯುತ್ತಿದ್ದವು. ಪಾತ್ರಗಳು ಸಿಗದವರು, ನಮ್ಮನ್ನು ತಮಾಷೆ ಮಾಡುತ್ತಿದ್ದರು. ಗೇಲಿಮಾಡುತ್ತಿದ್ದರು. ಹಿಂದೆ ಸೇರಿಕೊಂಡು ಕಾಮೆಂಟ್ ಮಾಡುತ್ತಿದ್ದರು.ಅವರ ಕಾಮೆಂಟ್ಗಳಿಗೆ,ನೊಂದುಕೊಂಡವರು ನಾಟಕದಿಂದ ಹೊರಟುಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮರುದಿನದಿಂದ ಸಾರ್ ಗೆ ಹೇಳಿ ನಮ್ಮ ಟೀಮನ್ನು ರೂಮಿನೊಳಗೆ ಬರಮಾಡಿಕೊಂಡು ಬಾಗಿಲುಗಳು ಮುಚ್ಚಿಕೊಂಡು ಪ್ರಾಕ್ಟೀಸ್ ಮಾಡಿದೆವು. ಆದರೂ ಕೆಲವರು ಕಿಟಕಿಯ ಬಳಿ ನಿಂತು,ಬಾಗಿಲಿನ ಸಂದುಗಳಿಂದ ಕಾಮೆಂಟ್ ಗಳು ಮಾಡುತ್ತಲೇ ಇದ್ದರು.
ಹತ್ತು ದಿನಗಳ ನಂತರ ಇಡೀ ವಿಷಯ ಒಂದು ಹಂತಕ್ಕೆಬಂದಿತು. ಅಷ್ಟರೊಳಗೆ ಹನ್ನೆರಡನೆ ತಾರೀಕು ಬಂದಿತ್ತು. ವಿಜಯಕುಮಾರ್ ಸಾರ್ , ಮತ್ತು ಅಲ್ಲೆನ್ನ ಸಾರ್ ಬಂದರು. ನಾವು ಅವರಿಗಾಗಿ ನಮ್ಮ ನಾಟಕವನ್ನು ಪ್ರದರ್ಶಿಸಿದೆವು. ಸಣ್ಣಸಣ್ಣ ಬದಲಾವಣೆಗಳನ್ನುಸೂಚಿಸಿದರು. ಒಟ್ಟಾರೆ ಲಾಜಿಕಲ್ ಆಗಿ ನೋಡಿದರೆ ಚನ್ನಾಗಿದೆ ಎಂದರು ಅಲ್ಲೆನ್ನ ಸಾರ್. ವಿಜಯಕುಮಾರ್ ಸಾರ್ ಏನನ್ನೂ ಮಾತಾಡಲಿಲ್ಲ. ಅವರು ನನ್ನನ್ನು ಕರೆದು ಯಾವ ದೃಶ್ಯಕ್ಕೆ ಯಾವ ಹಿನ್ನೆಲೆ ಇರಬೇಕು, ಸ್ಟೇಜ್ ಮೇಲೆ ಯಾವ ಯಾವವಸ್ತುಗಳು ಅಗತ್ಯವೋ ವಿವರವಾಗಿ ಬರೆಯಬೇಕೆಂದು, ಅದರ ಪ್ರಕಾರವೇ ಅಲಂಕಾರಮಾಡುತ್ತಾರೆಂದು ಹೇಳಿದರೇ ಆಶ್ಚರ್ಯ ಪಟ್ಟೆ. ಇಷ್ಟೆಲ್ಲಾ ವ್ಯವಸ್ಥೆ ಇರುತ್ತದೆಂದು, ಇಷ್ಟು ಆಡಂಬರವಾಗಿ ಇರುತ್ತದೆಂದು ನನಗೆ ಗೊತ್ತಿರಲಿಲ್ಲ. ಊಹಿಸಿರಲಿಲ್ಲ. ಆಶಿಸಿರಲೂ ಇಲ್ಲ. ನನ್ನ ಜೀವನದಲ್ಲಿ ನಾನು ಆಶಿಸಿದ್ದು ಬಹಳ ಕಡಿಮೆ. ಹಾಗಾಗಿ ನಿರೀಕ್ಷೆಗಿಂತಲೂ ಹೆಚ್ಚಾಗಿ ಸಿಕ್ಕಿದೆ. ಮೊದಲನೆಯ ನಾಟಕ–ಅಷ್ಟು ಜನರ ಮುಂದೆ!
ನನ್ನ ಉತ್ಸಾಹ ದುಪ್ಪಟ್ಟಾಯಿತು. ಮಲ್ಲಿ, ಜೈನುಲ್ಲಾ, ಚೆನ್ನಯ್ಯ, ರಮಣ, ಜಾಕೀರ್, ಅಚ್ಚಯ್ಯ, ನಾವೆಲ್ಲರೂ ತಯಾರಾಗಿದ್ದೇವೆ. ಆಗಾಗ ಡೈಲಾಗ್ ಗಳನ್ನು ಮನನಮಾಡಿಕೊಂಡು,ಎಲ್ಲಾ ದೃಶ್ಯಗಳನ್ನು ರಿವೈಂಡ್ ಮಾಡಿಕೊಳ್ಳುತ್ತಿದ್ದೆ. ತರಗತಿಯಲ್ಲಿ ನಾಟಕದ ಬಗ್ಗೆ ಸಾಕಷ್ಟು ಗಲಾಟೆ ನಡೆಯುತ್ತಿತ್ತು. ಗೆಳೆಯರನ್ನು ನಾಟಕದ ಹೆಸರಿನಿಂದ ಕರೆಯುವುದು, ನಾವು ಪ್ರಾಕ್ಟೀಸ್ ಮಾಡುವಾಗ ನೋಡಿದ, ಕೇಳಿದ ಡೈಲಾಗ್ ಗಳು ತರಗತಿಯಲ್ಲಿ ಬೇರೆಯವರಮೇಲೆ ಪ್ರಯೋಗಿಸುವುದು,
‘ಅರೆ!,ಗಬ್ಬರ್ ಬರುತ್ತಿದ್ದಾನೋ’ ಎಂದು ತಮಾಷೆ ಮಾಡುವುದು ಮಾಮೂಲು ವಿಷಯವಾಯಿತು. ಈಗ ಅದು ನೆನೆದರೆ ನಗು ಬರುತ್ತದೆ, ಆದರೆ ವಿಪರೀತವಾದ ಕೊಪವೂ ಬಂದು, ನಾಟಕದಲ್ಲಿ ಬಳಸಿದ ಡಮ್ಮೀ ಗನ್ನು ನಿಂದ ಷೂಟ್ ಮಾಡಬೇಕೆಂದು ಅನ್ನಿಸುತ್ತಿತ್ತು. ಅಷ್ಟು ಗಲಭೆ ಮತ್ತು ಅಪಹಾಸ್ಯನಡೆಯುತ್ತಿತ್ತು.
ಆಗಸ್ಟ್ ಹದಿನೈದು ಬಂತು. ಎಲ್ಲಾ ತೊಡಕುಗಳನ್ನು ದಾಟಿ,ನಾವು ಗ್ರೀನ್ ರೂಮಿನಲ್ಲಿ
ಮುಖಕ್ಕೆ ಬಣ್ಣ ಬಳಿದು ಕೊಳ್ಳುತ್ತಿದ್ದರೆ ಅದೊಂದು ಅನಿರ್ವಚನೀಯ ಅನುಭವ.
ಮೊದಲು ನಮ್ಮ ನಾಟಕ ಮುಗಿಸಿದನಂತರ ವಿಜಯಕುಮಾರ್ ಸಾರ್ ಅವರ ನಾಟಕ ಪ್ರದರ್ಶಿಸಬೇಕು. ನಾಟಕದ ಡೈಲಾಗ್ಗಳು ನೆನಪಿಲ್ಲದಿದ್ದರೇ, ಪ್ರಾಂಪ್ಟರ್ ಇರುತ್ತಾನೆಂದು ಕೂಡಾ ತಿಳಿಯದು. ಅದರಿಂದ ಯಾರನ್ನು ಆ ಕೆಲಸಕ್ಕೆ ನೇಮಿಸಲಿಲ್ಲ. ವಿಜಯಕುಮಾರ್ ಸಾರ್ ಅವರೇ ನಮ್ಮಸ್ಕ್ರಿಪ್ಟ್ ತೆಗೆದುಕೊಂಡು ಎರಡು ಮೂರು ಬಾರಿ ಹಿಂದೆ ಮುಂದೆ ತಿರುಗಿಸಿ ಸ್ಟೇಜ್ ಹಿಂದೆ ನಿಂತು ಆ ಪಾತ್ರವನ್ನುನಿರ್ವಹಿಸಿದರು. ಮಲ್ಲಿ ಸರಿಯಾಗಿ ಸ್ಟೇಜ್ ಬರುವ ಮುಂಚೆ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ. ಅದರಿಂದ ಕುಂಟುತ್ತಾ ನಡೆಯಬೇಕಾಯಿತು. ಅವನು ತುಂಬಾ –ಸಮಯಸ್ಪೂರ್ತಿಯಿಂದ ಕುಂಟುತ್ತಾ ನಡೆಯುವುದು ವಿಲನ್ ಮ್ಯಾನೇರಿಜಮ್ ಅಂತೆ ಬದಲಿಸಿ ನಟಿಸಿದ. ಒಳ್ಳೆಯ ಮೆಚ್ಚುಗೆಯನ್ನು ಪಡೆದ. ನಾನು ಮಾಡಿದ ಹೀರೋ ಇನ್ ಸ್ಪೆಕ್ಟರ್ ಪಾತ್ರಕ್ಕಿಂತ ವಿಲನ್ ಪಾತ್ರದಲ್ಲಿ ಮಲ್ಲಿ ಅದ್ಭುತವಾಗಿ ನಟಿಸಿದ್ದ. ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದರು. ಅಲ್ಲೊಂದು ಇಲ್ಲೊಂದು ಕೆಲವು ದೋಷಗಳೊಂದಿಗೆ (ಮಿಷ್ಟರ್ ಗೋಪಿ, ವಾಟ್ ಈಜ್ ಯುವರ್ ನೇಮ್… ಇತ್ಯಾದಿ)ಒಟ್ಟಾರೆ ನಾಟಕ ತುಂಬಾ ಚೆನ್ನಾಗಿತ್ತು. ಅದಾವುದೂ ಸಿನಿಮಾ ಷೂಟಿಂಗ್ ನಡೆದಂತೆ ಮೂರು ನಾಲ್ಕು ಡೈಲಾಗ್ ಗಳಿಗೆ ಒಂದು ಸೀನ್ ಚೇಂಜ್ ಮಾಡುತ್ತಾ ಹೋದರೆ,ಪ್ರತಿಬಾರಿಯೂ ಸ್ಟೇಜ್ ಅಲಂಕರಿಸಲು ಅಲ್ಲಿಯ ಸಹಾಯಕರು ತುಂಬಾನೇ ಕಷ್ಟಪಟ್ಟರು. ಸಿನಿಮಾವನ್ನು ಕಲ್ಪಿಸಿಕೊಂಡು ನಾಟಕ ಬರೆದರೆ ಎಷ್ಟು ತೊಂದರೆ ಯಾಗುತ್ತದೆ ಎಂದು ಅರ್ಥವಾದಾಗ ನಮ್ಮ ನಾಟಕ ಮುಗಿಯಿತು.
ವಿಜಯಕುಮಾರ್ ಸಾರ್, ಪಾತ್ರಗಳು- ಪಾತ್ರಧಾರಿಗಳು ಎಂದು ಎಲ್ಲರನ್ನು ಪರಿಚಯಿಸಿದರು. ಅಂದುನಾನು ‘ಮೇಘ ಸಂದೇಶಂ’ ಪೋಸ್ಟರ್ ಗಳ ಮೇಲೆ ಬರೆದಿರುವ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ –ದಾಸರಿ ನಾರಾಯಣರಾವ್ ಎಂಬ ನೆನಪಿನ ಆಧಾರದ ಮೇಲೆ ಹಾಗೆ ಬರೆದು ಇಟ್ಟಿದ್ದೆ.
ಆದರೆ ಕೊನೆಯಲ್ಲಿ ನಮ್ಮ ವಿಜಯಕುಮಾರ್ ಸಾರ್ ನನ್ನನ್ನು ವೇದಿಕೆಗೆ ಕರೆದು,
“ಈ ನಾಟಕಕ್ಕೆ ಕಥೆ, ಸಂಭಾಷಣೆ, ಚಿತ್ರಕಥೆ, ನಿರ್ದೇಶನ, ಮಣ್ಣುಮಶಾನ, ಎಲ್ಲವೂ ಇವನೆ’’ ಎಂದು ನನ್ನನ್ನು ಪರಿಚಯಿಸುವುದು ಈಗಲೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ.
ಅದರ ನಂತರ, ನಾನು ಮತ್ತೆ ಜೆ.ಎನ್.ಟಿ.ಯು. ಅನಂತಪುರದಲ್ಲಿ ನನ್ನ ಇಂಜನೀರಿಂಗ್ ಓದುವ ದಿನಗಳಲ್ಲಿ ಯಾವುದೋ ಒಂದೋ ಎರಡೋ ಸ್ಕಿಟ್ ಗಳು ಹಾಕಿದರೂ, ನಮ್ಮ‘ದೇಶದ್ರೋಹಿಗಳು’ ಅಂತಹ ಅನುಭವ ಮಾತ್ರ ಮರೆಯಲಾಗದು. ನಾನು ನಾಟಕಗಳಲ್ಲಿ ಮುಂದುವರೆಯಲಿಲ್ಲ ಆದರೆ, ಆ ಸಮಯದಿಂದ ನಮ್ಮ ಎ.ಮಲ್ಲಿಎಂಬ ಆಲೇಟಿ ಮಲ್ಲಿಕಾರ್ಜುನ ಆನಂತರ ಹಲವು ಏಕಾಂಕಗಳನ್ನು, ನಾಟಕಗಳನ್ನುಪ್ರದರ್ಶಿಸಿ, ಹಲವು ಪಾತ್ರಗಳನ್ನು ನಿರ್ವಹಿಸಿ, ಮೆಚ್ಚಿಸಿ ನಂದಿಪುರಸ್ಕೃತ ಸ್ಥಾಯಿಗೆ ಬೆಳದಿದ್ದ.
ಹಲವು ವರ್ಷಗಳನಂತರ ಅವನನ್ನು ಭೇಟಿಯಾದಾಗ ಅಭಿನಂದಿಸಿದರೆ ನನ್ನ ಹೃದಯ ಸಂತೋಷದಿಂದ ರೋಮಾಂಚನಗೊಳ್ಳುವ ಮಾತನ್ನು ಹೇಳಿದ್ದ ಮಲ್ಲಿ.
“ಎಷ್ಟೇನಾಟಕಗಳು ನಂತರ ಮಾಡಿದರೂ ನೀನೇ ನನ್ನ ಮೊದಲ ನಿರ್ದೇಶಕ ಉಮಾ” ಅಂತ.
ತೆಲುಗು ಮೂಲ : ಜಿ. ಉಮಾಮಹೇಶ್ವರ್
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು





