ಶರಣರ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ ಸಾವಿಲ್ಲದ ಶರಣರು ಲಿಂಗತತ್ವ ನಿಷ್ಠ. ಹಡಪದ ಅಪ್ಪಣ್ಣ ಸಂಗಮೇಶ್ವರ ಅಪ್ಪಣ್ಣ ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಕಾಲ – ಹನ್ನೆರಡನೆಯ ಶತಮಾನ ಬಸವ ಸಮಕಾಲೀನ ಶರಣಒಟ್ಟು ವಚನಗಳು – 102 +250=352ಅಂಕಿತ: ಬಸವಪ್ರಿಯ ಕೂಡಲ ಚೆನ್ನಸಂಗಮದೇವ ,/ ಬಸವ ಪ್ರಿಯ ಚೆನ್ನಬಸವಣ್ಣ ಊರು- ಕೂಡಲ ಸಂಗಮ ,ಮುಸುಬಿನಾಳ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನಕಾರರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿ. ಇವರು ಬಸವಣ್ಣನವರ ಬಲಗೈ ಬಂಟರೆಂದು ಪ್ರಸಿದ್ಧರು. ‘ಅನುಭವ ಮಂಟಪದಲ್ಲಿ’ ಪ್ರಮುಖ ಪಾತ್ರ ವಹಿಸಿದ್ದರು. ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರ ಪತ್ನಿ ಲಿಂಗಮ್ಮನವರು ಕೂಡ ವಚನಗಾರ್ತಿಯಾಗಿದ್ದರು ಅಪ್ಪಣ್ಣನ ಹೆಸರಿನ ಹಿಂದೆ ಸೇರಿದ ‘ಸಂಗಮೇಶ್ವರ’ (ಕೂಡಲಸಂಗಮ) ಈತನ ಸ್ಥಳವಾಗಿರಬೇಕು. ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ಬೋಧೆ ಕಾಯಕ ದಾಸೋಹದ ಮಹತ್ವ ಮುಂತಾದ ಅನೇಕ ವಿಷಯಗಳ ಮೇಲೆ ಭಿನ್ನ ಚಿಂತನೆ ನಡೆಸಿದವರು. ಎಲ್ಲವೂ ತಾತ್ವಿಕವಾಗಿವೆ. ಅನ್ಯಮತ ಖಂಡನೆ, ಶಿವಪಾರಮ್ಯ ಸ್ಥಾಪನೆಗೆ ವಿಶೇಷ ಸ್ಥಾನ ಸಂದಿದೆ. ಶರಣಸ್ತುತಿ, ಶೂನ್ಯಸಿಂಹಾಸನ, ಅನುಭವ ಮಂಟಪಗಳ ಉಲ್ಲೇಖ, ಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಮತ್ತು ಆರೋಗಣೆ ನಡೆಸಿದ ಸಂದರ್ಭಗಳನ್ನು ಪ್ರಸ್ತಾಪಿಸುವುದು ಮಹತ್ವದ ಅಂಶಗಳೆನಿಸಿವೆ. ತುಂಬ ದೀರ್ಘವಾಗಿದ್ದು ಗದ್ಯಲಕ್ಷಣವನ್ನು ಹೊಂದಿದ ರಚನೆಗಳ ಜೊತೆಗೆ ಮುಕ್ತಕ ರೂಪದ ವಚನಗಳೂ ಸಮಾವೇಶಗೊಂಡಿವೆ. ಲಿಂಗತತ್ವ ಸಂಗಮೇಶ್ವರ ಅಪ್ಪಣ್ಣನಿಗೆ ಅಪಾರವಾಗಿದೆ. ತರ್ಕ ಶಕ್ತಿ ಅಗಾಧವಾಗಿದೆ. ಲಿಂಗಾಯತ ತತ್ತ್ವ ಪ್ರತಿಪಾದನೆ ವಿಶೇಷವಾಗಿ ಕಂಡು ಬರುತ್ತದೆ. ಶಿವಪಾರಮ್ಯ, ಅನ್ಯಮತ ಖಂಡನೆ, ಬ್ರಾಹ್ಮಣರ ಕರ್ಮಠತನದ ಖಂಡನೆ, ಅಷ್ಟಾವರಣ, ಪಂಚಾಚಾರಗಳ ವಿವರಣೆ ಇವನ ವಚನಗಳಲ್ಲಿ ಬಂದಿದೆ. ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಇತ್ತೀಚಿನ ನನ್ನ ಅಧ್ಯಯನ ಮತ್ತು ಸಂಶೋಧನೆಯಿಂದ ನಾನು ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಎಂದು ಖಚಿತ ಪಡಿಸಲು ಇಚ್ಛಿಸುತ್ತೇನೆ . ಇದಕ್ಕೆ ಕೆಲ ಪುರಾವೆಗಳನ್ನೂ ಇಲ್ಲಿ ನೀಡುತ್ತಿದ್ದೇನೆ. 1 ವಚನಾಂಕಿತ – ಬಸವಪ್ರಿಯ ಕೂಡಲ ಚೆನ್ನಸಂಗಮದೇವ -ಈ ವಚನಾಂಕಿತ ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣನವರ ವಚನಾಂಕಿತವಾಗಿದ್ದು ಇಬ್ಬರೂ ಒಬ್ಬರೇ ಎನ್ನುವ ನಿರ್ಧಾರ ಬಲವಾಗುತ್ತದೆ. 2 ಇಬ್ಬರ ವಚನಗಳಲ್ಲಿ -ಲಿಂಗ ತತ್ವ ಷಟಸ್ಥಲ, ಸಿದ್ಧಾಂತ ಅಪಾರವಾಗಿ ಕಂಡು ಬರುತ್ತದೆ. ವಚನ ರಚನಾ ಕೌಶಲ್ಯ,ಭಾವ,ಚಿಂತನೆಗಳು ಒಂದೇ ರೀತಿಯಾಗಿ ಕಂಡು ಬರುತ್ತವೆ.3 ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪಣನವರ ವಚನಗಳಲ್ಲಿ ತಮ್ಮ ಬಸವಣ್ಣನವರ ಸಂಬಂಧವು ಎದ್ದು ಕಾಣುತ್ತದೆ,ಹೀಗಾಗಿ ಇಬ್ಬರೂ ಬೇರೆ ಬೇರೆ ಅಲ್ಲ ಒಬ್ಬರೇ ಎಂದು ನಿರ್ಧರಿಸಬಹುದು. 3 ಹಡಪದ ಅಪ್ಪಣ್ಣ ಬಾಗೇವಾಡಿಯ ಹತ್ತಿರದ ಮುಸುಬಿನಾಳ ಗ್ರಾಮದವನು, ಅವನ ಹೆಂಡತಿ ಲಿಂಗಮ್ಮ ಅದೇ ಊರಿನ ಹೂಗಾರ ನಾಗಪ್ಪನ ಮಗಳು ಎಂದು ಇತ್ತೀಚಿನ ಅಧ್ಯಯನ ಮತ್ತು ಸಂಶೋಧನೆಯಿಂದ ತಿಳಿದು ಬರುತ್ತದೆ. ಬಾಲಕ ಬಸವಣ್ಣ ಬಾಗೇವಾಡಿ ಅಗ್ರಹಾರದ ವಿರುದ್ಧ ಬಂಡೆದ್ದು ಮನೆ ಬಿಟ್ಟು ಹೋಗುವಾಗ ಅಕ್ಕ ಅಕ್ಕನಾಗಮ್ಮ ಪತಿ ಶಿವಸ್ವಾಮಿ ಜೊತೆಗೆ ಹಿರಿಯ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರ ಜೊತೆಗೆ ಕೂಡಲ ಸಂಗಮಕ್ಕೆ ಹೋಗಿರಬಹುದು , ಹನ್ನೆರಡು ವರುಷ ಕೂಡಲ ಸಂಗಮ್ಮದಲ್ಲಿ ಇದ್ದು ತನ್ನ ಕಾಯಕ ಮಾಡುತ್ತಾ ಬಸವಣ್ಣನವರ ಅಧ್ಯಯನಕ್ಕೆ ಸಹಾಯ ಮಾಡುತ್ತ ಮುಂದೆ ಮಂಗಳವೆಡೆಗೆ ಹೋಗಿ ಬಸವಣ್ಣನವರ ನೆರಳಂತೆ ನಿಂತದ್ದು ಸ್ಪಷ್ಟವಾಗಿ ಕಂಡು ಬರುತ್ತದೆ. 4 ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲಸಂಗಮವಾಗಿದ್ದು ಬಾಗೇವಾಡಿ ಅಗ್ರಹಾರ ತೊರೆದ ಬಸವಣ್ಣನಿಗೆ ಆಶ್ರಯಕ್ಕೆ ಬಂದಿದ್ದು ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲ ಸಂಗಮ, ಸಹೋದರ ಮಾವ ಬಲದೇವನು ಸಹಾಯ ಮಾಡಿದ್ದೂ ಗಮನಾರ್ಹ, ಇದನ್ನು ಜಾನಪದ ಕವಿಗಳು ಹೇಳುತ್ತಾರೆ. 5 ಬಹಳ ವರ್ಷಗಳವರೆಗೆ ಹಡಪದ ಅಪ್ಪಣ್ಣ ಕೂಡಲ ಸಂಗಮದಲ್ಲಿ ಇದ್ದ ಕಾರಣ ಅವನನ್ನು ಕಲ್ಯಾಣದ ಶರಣರು ಆರಂಭದಲ್ಲಿ ಸಂಗಮೇಶ್ವರ ಅಪ್ಪಣ್ಣ ಎಂದು ಕರೆದಿರಬಹುದು, ಮುಂದೆ ಅಪ್ಪಣ್ಣ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಗೊಂಡ ಮೇಲೆ ಆಡಳಿತದ ಆಸ್ಥಾನದ ಕಡತಗಳನ್ನು,ಕಚೇರಿ ಪತ್ರಗಳನ್ನು,ಮಂತ್ರಿಯ ಆದೇಶಗಳನ್ನು ಇಡಲು ಅಡಪ ( ಕಟ್ಟಿಗೆಯ ಡಬ್ಬಿ) ತನ್ನೊಂದಿಗೆ ಇಡುತ್ತಿದ್ದನು. ಕಲ್ಯಾಣಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಬಲು ದೊಡ್ಡದು, ಬಸವಣ್ಣನವರ ಯೋಜನೆ ಚಿಂತನಾಕ್ರಮದಲ್ಲಿ ಪಾಲ್ಗೊಂಡ ವೈಚಾರಿಕ ಶರಣ, ಬಸವಣ್ಣನವರ ಆಸೆಯಂತೆ ಹಡಪದ ಅಪ್ಪಣ್ಣನವರು ನೀಲಾಂಬಿಕೆಯನ್ನು ಕೂಡಲ ಸಂಗಮಕ್ಕೆ ಕರೆ ತರಲು ಹೇಳಿದಾಗ, ಅವರ ಆದೇಶದಂತೆ ಅಪ್ಪಣ್ಣನವರು ನೀಲಮ್ಮನನ್ನು ಕರೆದುಕೊಂಡು ಬರುವಾಗ ತಂಗಡಗಿಗೆ ಬಂದಾಗ ಬಸವಣ್ಣನವರ ಸಾವಿನ ಸುದ್ಧಿ ಕೇಳಿ ಬರುತ್ತದೆ, ಆಗ ನೀಲಮ್ಮ ಮತ್ತು ಅಪ್ಪಣ್ಣನವರು ಅಲ್ಲಿಯೇ ಐಕ್ಯವಾಗಿದ್ದು ನದಿಯ ದಡದಲ್ಲಿ ಇಬ್ಬರ ಸಮಾಧಿಯ ಕುರುಹು ಸ್ಮಾರಕಗಳು ಕಂಡು ಬರುತ್ತವೆ. ಸಂಗಮೇಶ ಅಪ್ಪಣ್ಣನವರ ಕೆಲ ವಚನಗಳಅಂಗ ಲಿಂಗವೆಂದರಿದಾತಂಗೆ, ಅಂಗದಲೆ ಐಕ್ಯ.ಕಂಗಳು ಲಿಂಗವೆಂದರಿದಾತಂಗೆ, ಕಂಗಳಲೆ ಐಕ್ಯ.ಕರವೆ ಲಿಂಗವೆಂದರಿದಾತಂಗೆ, ಕರದಲೆ ಐಕ್ಯ.ಈ ತ್ರಿವಿಧದ ನೆಲೆಯ, ಶ್ರುತಿ ಸ್ಮೃತಿಗಳರಿಯವು.ಎಮ್ಮ ಬಸವಪ್ರಿಯ ಕೂಡಲಚನ್ನಸಂಗಮದೇವನಲ್ಲಿಈ ಇರವ ಶರಣರೆ ಬಲ್ಲರು./1 ಅಂಗದ ಕಳೆ ಲಿಂಗದಲ್ಲಿ ಲೀಯವಾಗದು.ಲಿಂಗದ ಕಳೆ ಅಂಗದಲ್ಲಿ ಲೀಯವಾಗದು.ಮಾತಿನಮಾಲೆಯ ಬೊಮ್ಮವೇತರದೊ ?ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು.ಪ್ರಾಣ ಜಂಗಮವಾದಡೆ ಅರಿದಿರಬೇಕು.ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ.ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು,ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ,ಸಂಗನಬಸವಣ್ಣಾ./2 ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು.ಸಂದ ಪುರಾತನರ ನೆನೆಯುತ್ತಿರಬೇಕು.ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು.ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ./4 ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ,ಅವನು ಚಾಂಡಾಲನು. ಅವನ ಮುಖವ ನೋಡಲಾಗದು.ಅದೆಂತೆಂದಡೆ: ಯೋ ಮಹಾದೇವಮನ್ಯೇನ ಹೀನದೇವೇನ ದುರ್ಮತಿಃ |ಸಕೃತ್ಸಾಧಾರಣಂ ಬ್ರೂಯಾದಂತ್ಯಜಾನಾಂತ್ಯಜೋಂತಜಃ ||ಇಂತೆಂದುದಾಗಿ, ನಿಮಗೆ ಕಿರುಕುಳದೈವಂಗಳ ಸಮವೆಂದುಬಗಳುವನ ಬಾಯಿ ಪಾಕುಳತಪ್ಪದು,ಬಸವಪ್ರಿಯ ಕೂಡಲಚನ್ನಸಂಗಮದೇವಾ./5 ಅಜಹರಿಸುರರೆಲ್ಲರು ಅಳಿದವರಲ್ಲದೆ, ಉಳಿದವರಿಲ್ಲ.ಶಿವನೆ ನಿತ್ಯನೆಂದು ಹೊಡೆವಡುತ್ತಿವೆ ವೇದ.ಉತೈನಂ ವಿಶ್ವಾಭೂತಾನಿ ಸದೃಷ್ಟೋ ಮೃಡಯಾತಿನಃ |ನಮೋಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಡುಷೇ ||ಎಂಬ ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಯ್ಯನೊರ್ವನೆನಿತ್ಯನೆಂದು ಹೊಗಳುತ್ತಲಿದೆ./7 ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು, ಭಾವ ನಿರ್ಭಾವವನೆಯ್ದಿ,ಜ್ಞಾನವೆ ಪರಮಾಶ್ರಯವಾಗಿಪ್ಪ ಲಿಂಗೈಕ್ಯನು,ಮಹವನೊಳಕೊಂಡ ಮಹಿಮ ಲಿಂಗೈಕ್ಯನು,ಬಸವಪ್ರಿಯ ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣ ಪ್ರಭುದೇವರು./9 ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು,ಮನೆಮನೆದಪ್ಪದೆ ತಿರುಗುವೆನು.ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು.ಅವರ ಮನಧರ್ಮವನರಿಯದೆ ನುಡಿದೆನಾದಡೆ,ಅನೇಕ ಪರಿಯಲ್ಲಿ ಭಂಗಬಡುವೆನು.ದಿಟದ ಭಕುತನಂತೆ,ಪುರಾತರ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು.[ಕಡು] ಪಾಪಿಗಿನ್ನೇನು ಹದನಯ್ಯ,ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ ?/10 ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು, ಎಲ್ಲರೂ ಮೆಲಬಂದರು.ಬೆಲ್ಲಗಳಿದ್ದಡೆ ನಿಲಲೀಸದೆ ಎನ್ನ ಕಾಡುತ್ತಿದಾರೆಯೆಂದು,ಆ ಬೆಲ್ಲವನಲ್ಲಿಯೆ ನುಂಗಿದಡೆ, ಹಲ್ಲು ಮುರಿದವು.ಮೆಲಬಂದವರೆಲ್ಲ ಅಲ್ಲಿಯೆ ಬಯಲಾದರು.ನಾ ನಿಮ್ಮಲ್ಲಿ ಕೂಡಿ ಸುಖಿಯಾದೆನಯ್ಯಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ./11 ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ.ಮರ ಬೆಂದು ನಿಂದುರಿಯಿತ್ತು , ಮಣ್ಣು ಜರಿದು ಬಿದ್ದಿತ್ತು.ಉರಿ ಹೊಗೆ ನಂದಿತ್ತು , ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು.ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು .ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ,ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ./12 ಅಲ್ಲಿಂದತ್ತ ಪಶ್ಚಿಮಚಕ್ರಕ್ಕೆ ಏಕದಳ ಪದ್ಮ,ಹವಣಿಸಬಾರದ ತೇಜ, ಏಕಾಕ್ಷರ,ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ,ನಿಭರ್ಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ.ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು.ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ,ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿಸಂಗನಬಸವಣ್ಣನಯ್ಯಾ, ಪ್ರಭುವೆ./16 ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು,ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು,ಎನ್ನರಿವು ನಿಮ್ಮ ಘನದೊಳಗೆ ಸವೆದು, ನಿಶ್ಚಲ ನಿಜೈಕ್ಯವಾಗಿ,ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,ನೀ ನಾನೆಂಬುದೇನಾಯಿತ್ತೆಂದರಿಯೆನು./24 ಹಡಪದ ಅಪ್ಪಣ್ಣನವರ ಕೆಲ ವಚನಗಳು ಅಂಗ ಲಿಂಗವಾಯಿತ್ತೆಂಬಿರಿ, ಲಿಂಗ ಅಂಗವಾಯಿತ್ತೆಂಬಿರಿ.ಅಂಗ ಲಿಂಗ ಸಂಬಂಧ ಎಲ್ಲರಿಗೆ ಎಂತಾಯಿತ್ತು ಹೇಳಿರಣ್ಣಾ.ಅಂಗ ಲಿಂಗ ಸಂಬಂಧವಾದರೆ, ಗುರುವಿನಲ್ಲಿ ಗುಡ್ಡನಾಗಿರಬೇಕು,ಲಿಂಗದಲ್ಲಿ ನಿಷ್ಠನಾಗಿರಬೇಕು, ಜಂಗಮದಲ್ಲಿ ಅವಧಾನಿಯಾಗಿರಬೇಕು.ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ ಕರವನರಿದಂಗೆ ಕಮಲದ ಹಂಗೇಕೊ?ಇರವನರಿದಂಗೆ ಪರದ ಹಂಗೇಕೊ ?ಪರವನರಿದಂಗೆ ಇರವದ ಹಂಗೇಕೊ?ಇಹ ಪರವೆಂಬ ಉಭಯವಳಿದ ಶರಣಂಗೆಮರ್ತ್ಯದ ನರರ ಹಂಗೇಕೊ ಹೇಳಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ? ಮನವನರಿದಂಗೆ ಮತದ ಹಂಗೇಕೊ ?ನಿತ್ಯವನರಿದಂಗೆ ತೀರ್ಥದ ಹಂಗೇಕೊ ?ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೊ ?ಜ್ಯೋತಿಯನರಿದಂಗೆ ಕತ್ತಲೆಯ ಹಂಗೇಕೊ?ಲೋಕವನರಿದಂಗೆ ವ್ಯಾಕುಲದ ಹಂಗೇಕೊ?ಈ ತೆರನನರಿದಂಗೆ ಮುಂದಾವ ಭೀತಿಯುಂಟು ಹೇಳಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ ? ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪನವರ ವಚನಗಳಲ್ಲಿ ಸಾಮ್ಯತೆಯಿದೆ . ಬಹುತೇಕ ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ತಾತ್ವಿಕ ಚಿಂತೆಗಳಲ್ಲಿ ಸಾಮ್ಯತೆ ಎದ್ದು ಕಾಣುತ್ತದೆ. ಹೀಗಾಗಿ ಇವರಿಬ್ಬರೂ ಒಬ್ಬರೇ ಎನ್ನುವ ತೀರ್ಮಾನಕ್ಕೆ ಬರಲಾಗುವುದು. ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯವನೇ ? ಹೀಗಾಗಿ ಅಡಪ ಜನಬಳಕೆಯಲ್ಲಿ ಹಡಪ ಆಗಿದೆ ಅಡಪವನ್ನು ಇಟ್ಟುಕೊಂಡವ ಅಡಪದವ ಅಥವಾ ಹಡಪದ ಎಂದು ಬಂದಿದೆ.ಕಲ್ಯಾಣದ ಚಾಲುಕ್ಯರ ಕಳಚೂರ್ಯರ ರಾಜ್ಯದ ವಿಸ್ತಾರ ಎಷ್ಟಿತ್ತಂದರೆ ಛಪ್ಪನ್ನೈವತ್ತಾರು ರಾಜ್ಯಗಳಿದ್ದವು ಎಂದು ಬಸವಣ್ಣನವರ ವಚನವೊಂದರಲ್ಲಿ ಕಾಣಬಹುದು. ಮಹಾರಾಷ್ಟ್ರದ ಮಂಗಳವೆಡೆ, ಉದ್ಗೀರ, ಲಾತೂರ, ಸೋಲಾಪುರ, ತುಳಜಾಪುರ, ಪಂಡರಾಪುರ ಜತ್ತ ಅಕ್ಕಲಕೋಟ ಮುಂತಾದ ಪ್ರದೇಶಗಳ ಭೂ ಪ್ರದೇಶವು ಆಂಧ್ರ ವೆಂಗಿಪಳು ಕರ್ನಾಟಕ ಮುಂತಾದ ಪ್ರದೇಶಗಳನ್ನು ಮುಂತಾದ ಕಡೆಗಳಲ್ಲಿ ಚಾಲುಕ್ಯ ರಾಜ್ಯರ ಆಡಳಿತದ ಶಿಲ್ಪ ಕಲೆ ಶಾಸನಗಳು ಮತ್ತು ಗುಡಿ ಗೋಪುರಗಳ ಶೈಲಿ ಚಾಲುಕ್ಯರದ್ದಾಗಿತ್ತು. ಬಿಜ್ಜಳನೂ ಕ್ಷೌರಿಕ ಕುಲದ ಶೈವನೆಂದು ಕೆಲ ಸಂಶೋಧಕರು ತಮ್ಮ ಅಭಿಮತ ವ್ಯಕ್ತ ಪಡಿಸಿದ್ದಾರೆ. ಹಡಪದ ಅಪ್ಪಣ್ಣ ಅವನ ಹೆಂಡತಿ ಮುಸುಬಿನಾಳ ಹೂಗಾರ ನಾಗಪ್ಪನ ಮಗಳು ಲಿಂಗಮ್ಮ ಎಂದು ತಿಳಿದು ಬರುತ್ತದೆ. ಬಸವಣ್ಣ ಬಿಜ್ಜಳನ ಪ್ರಧಾನಿ ಅರ್ಥ ಸಚಿವ ದಂಡನಾಯಕನಾಗಿದ್ದನು ಇವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ ಕಲ್ಯಾಣದಲ್ಲಿ ಕ್ಷೌರಿಕ ವೃತ್ತಿಯನ್ನು ಕೈಗೊಂಡಿದ್ದನು ಎಂದೆನ್ನುವುದು ನನ್ನ ದೃಷ್ಟಿಯಲ್ಲಿ ಸರಿ ಅನಿಸುವುದಿಲ್ಲ. ರಾಜ್ಯಾಡಳಿತ ದಾಖಲೆಗಳು ಕಾಗದ ಪಾತ್ರಗಳು ಬೇರೆ ಬೇರೆ ರಾಜರ ಸಾಮಂತರ ಒಲೆಗಳು ಮುಂತಾದ ಅನೇಕ ಮಹತ್ತರ ದಾಖಲೆಗಳನ್ನು ಸಂಗ್ರಹಿಸಿ ಇಡಲು ಕಟ್ಟಿಗೆಯಿಂದ ಮಾಡಿದೆ ಒಂದು ಡಬ್ಬಿ ಅದಕ್ಕೆ ಈಗಲೂ ಅಡಪ ಎಂದು ಉತ್ತರ ಕರ್ನಾಟಕದಲ್ಲಿ ಕರೆಯುತ್ತಾರೆ. ಮಹಾ ಮನೆಯಲ್ಲಿ ಪ್ರಸಾದವಾದ ಮೇಲೆ ತಾಂಬೂಲ ವಿತರಿಸುವ ರೇಚಣ್ಣನೂ ಅಡಪವನ್ನು ಹೊಂದಿದ್ದನ್ನು . ಅಡಪವನ್ನು ಹೊಂದಿದವ ಅಡಪದವ ಅಥವಾ ಹಡಪದ ಎಂಬ ತಪ್ಪು ಉಚ್ಚಾರಣೆಯಿಂದಾಗಿ ಹಡಪದ ಎಂದು ಹೆಸರು ಬಂತು. ಕ್ಷೌರಿಕ ಕಾರ್ಯವನ್ನು ಮಾಡುವವರು ಈಗಲೂ ಕೂಡ ಹಳ್ಳಿಯಲ್ಲಿ ಅಡಪವನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ಕ್ಷೌರಿಕ ಸೇವೆ ಮಾಡುತ್ತಾರೆ. ಹಡಪದ ಅಪ್ಪಣ್ಣನವರು ಕ್ಷೌರಿಕ ಕುಲದಲ್ಲಿ ಹುಟ್ಟಿದರೂ ಸಹಿತ ಅವರು ಪ್ರಧಾನಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದರು ಎಂದು ತಿಳಿದು ಬರುತ್ತದೆ. ಚೆನ್ನಬಸವಣ್ಣನವರ ಮೇಲೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಪ್ರಭಾವ ಬಸವಣ್ಣನವರು ಬಾಗೇವಾಡಿ ಅಗ್ರಹಾರವನ್ನು ಬಿಟ್ಟು ಕೂಡಲ ಸಂಗಮಕ್ಕೆ ಹೋಗುವಾಗ ಅಕ್ಕನಾಗಮ್ಮ ಮತ್ತು ಅವಳ ಪತಿ ಶಿವಸ್ವಾಮಿಗಳ ಜೊತೆಗೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರೂ ಹೋಗಿದ್ದರು. ಹಡಪದ ಅಪ್ಪಣ್ಣ ಕೂದಲ ಸಂಗಮ್ಮದಲ್ಲಿ ಮಾದಲಾಂಬಿಕೆಯ ತವರು ಮನೆಯಲ್ಲಿ ಕೃಷಿ ಮಾಡುತ್ತಿರಬಹುದು ಅಥವಾ ಬಸವಣ್ಣನವರು ತಮ್ಮ ಶಿಕ್ಷಣವನ್ನು 12 ವರುಷ ಕೂಡಲ ಸಂಗಮದಲ್ಲಿ ಮಾಡುತ್ತಿರುವಾಗ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರಬಹುದು. ಬಲದೇವರ ಆಮಂತ್ರಣದ ಮೇರೆಗೆ ಬಸವಣ್ಣ ಅಕ್ಕನಾಗಮ್ಮ ಬಾಲಕ ಚೆನ್ನಬಸವಣ್ಣ ಮತ್ತು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಮಂಗಳವೇಡೆಗೆ ಹೋದರು. ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ
ಶರಣ ಸಂಗಾತಿ ಸಾವಿಲ್ಲದ ಶರಣರು ಶಶಿಕಾಂತ್ ಪಟ್ಟಣ ರಾಮದುರ್ಗ ಷಟ್ಪದಿಯ ಕವಿ ರಾಘವಾಂಕ ರಾಘವಾಂಕನು ಹರಿಹರನ ಸೋದರಳಿಯ ಮತ್ತು ಶಿಷ್ಯ ತನ್ನ ಸಾಹಿತ್ಯ ರಚನೆಯ ಆರಂಭದಲ್ಲಿ ರಾಘವಾಂಕನು ಕೇವಲ ವೈಷ್ಣವ ಪರಂಪರೆಯ ಕಾವ್ಯಗಳನ್ನು ರಚಿಸಿದನೆಂದು ಮತ್ತು ತನ್ನ ಗುರು ಮತ್ತು ಸೋದರ ಮಾವನಿಗೆ ಆ ಪುರಾಣಗಳನ್ನು ತೋರಿಸಿದಾಗ ಸಿಟ್ಟಿಗೆದ್ದ ಹರಿಹರ ತನ್ನ ಶಿಷ್ಯ ಮತ್ತು ಸೋದರಳಿಯನಿಗೆ ಬಾಯಿಯ ಮೇಲೆ ಬಡಿದನೆಂದು ಆಗ ಐದು ಹಲ್ಲುಗಳು ಉದರಿದವೆಂದು ಮುಂದೆ ನೀನು ಶರಣರ ಜೀವನಾಧಾರಿತ ಕೃತಿಗಳನ್ನು ಬರೆಯಬೇಕು ಅಂದರೆ ಮಾತ್ರ ನಿನಗೆ ಉದುರಿ ಹೋದ ಹಲ್ಲುಗಳು ಮರಳಿ ಬರುತ್ತವೆ ಎಂದು ಆಜ್ಞಾಪಿಸಿದನಂತೆ. ಆಗ ರಾಘವಾಂಕ 1ಸಿದ್ಧರಾಮ ಪುರಾಣ2.ಸೋಮನಾಥ ಚರಿತೆ3. ವೀರೇಶ ಚರಿತೆ4.ಶರಭ ಚಾರಿತ್ರ5.ಹರಿಹರ ಮಹತ್ವ ಎಂಬ ಶರಣರ ಲಿಂಗಾಯತ ತತ್ವಗಳ ಚರಿತೆಯನ್ನು ಬರೆದನಂತೆ ಮತ್ತೆ ಹಲ್ಲುಗಳು ಕಾಣಿಸಿಕೊಂಡವು ಎಂಬ ಪ್ರತೀತಿ ಇದೆ. ಇದು ಹರಿಹರನ ಸಾತ್ವಿಕ ಕೋಪ ಮತ್ತು ರಾಘವಾಂಕನ ಗುರು ಭಕ್ತಿಯನ್ನು ತೋರುತ್ತದೆ. ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ಈತನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿಗಳಿಗೆ ಕುತೂಹಲದ, ಗೌರವದ ವಿಷಯಗಳಾಗಿದ್ದವು.ಇವನ ಜೀವನ ಸಂಗತಿಗಳು ತಕ್ಕಮಟ್ಟಿಗೆ ಚೆನ್ನಬಸವಪುರಾಣದಲ್ಲಿ, ಗುರುರಾಜ ಚಾರಿತ್ರದಲ್ಲಿ, ಭೈರವೇಶ್ವರಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ, ಪದ್ಮರಾಜ ಪುರಾಣದಲ್ಲಿ , ಹರಡಿಕೊಂಡಿವೆ.ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ಕವಿಕಾವ್ಯ ಜೀವನವನ್ನೇ ವಸ್ತುವಾಗಿ ಮಾಡಿಕೊಂಡ ಸಿದ್ದನಂಜೇಶನ ರಾಘವಾಂಕ ಚಾರಿತ್ರ ಒಂದು ವಿಶೇಷ ರೀತಿಯ ಕೃತಿಯಾಗಿದೆ. ಜನನ ಮತ್ತು ಜೀವನ ರಾಘವಾಂಕ ಹಂಪೆಯಲ್ಲಿ ಹುಟ್ಟಿ ಬೆಳೆದವ. ಇವನ ತಂದೆ ಮಹಾದೇವಭಟ್ಟ ,ತಾಯಿ ರುದ್ರಾಣಿ. ಹರಿಹರ ಇವನ ಸೋದರ ಮಾವ ಮತ್ತು ಗುರು. ಆತ ದೀಕ್ಷಾಗುರು, ಕಾವ್ಯಗುರುವೂ ಹೌದು. ಹರಿಹರನಂತೆ ರಾಘವಾಂಕನೂ ಪಂಪಾ ವಿರೂಪಾಕ್ಷನ ಪರಮಭಕ್ತ. ಹಂಪೆಯ ಶಂಕರಪ್ರಭು , ಹಂಪೆಯ ಮಾದಿರಾಜ, ಹಂಪೆಯ ಹರೀಶ್ವರ ಇದು ರಾಘವಾಂಕನ ಗುರುಪರಂಪರೆ.ತಾನು ಹರಿಹರನ ವರಸುತ ಎಂದು ಈತ ಹೇಳಿಕೊಂಡಿದ್ದಾನೆ.ಈತ ಸಂಸ್ಕೃತ ಭಾಷೆಗಳಲ್ಲಿಯೂ ಸಮಸ್ತ ಲೌಕಿಕ ವೈದಿಕ ವಿದ್ಯೆಗಳಲ್ಲಿಯೂ ಪರಿಣಿತನಾಗಿದ್ದ . ‘ಉಭಯಕವಿ ಕಮಲರವಿ’ಯಾದ ಈತ ಹರಿಶ್ಚಂದ್ರಕಾವ್ಯವನ್ನು ರಚಿಸಿ ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ವಿದ್ವಾಂಸರನ್ನೊ ರಾಜನನ್ನೂ ಮೆಚ್ಚಿಸಿದ್ದ್ದ.. ರಾಜ ಇವನಿಗೆ ‘ಕವಿಶರಭಭೇರುಂಡ’ ಎಂಬ ವಾದದ ಪೆಂಡೆಯವನ್ನು ಕೊಟ್ಟು ಸನ್ಮಾನಿಸಿದ. ರಾಜಸಭೆಯಲ್ಲಿ ಹೀಗೆ ಮೆಚ್ಚುಗೊಂಡ ಹರಿಶ್ಚಂದ್ರಕಾವ್ಯವನ್ನು ರಾಘವಾಂಕ ಹೊನ್ನ ಹರಿವಾಣದಲ್ಲಿರಿಸಿ ತಂದು ತನ್ನ ಗುರುವು ಮಾವನೂ ಆದ ಹರಿಹರನ ಮುಂದಿರಿಸಿ ಅವನ ಆಶೀರ್ವಾದಗಳನ್ನು ಬೇಡಿದಾಗ , ಆತ ಮೆಚ್ಚಲೊಲ್ಲದೆ , ನರಸ್ತುತಿ ಮಾಡಿದ ತಪ್ಪಿಗಾಗಿ ರಾಘವಾಂಕನ ಹಲ್ಲುಗಳನ್ನು ಮುರಿದ. ಅನಂತರ ಶೈವಕೃತಿಪಂಚಕಗಳನ್ನು ರಚಿಸಿ ಮರಳಿ ತನ್ನ ಹಲ್ಲುಗಳನ್ನು ಪಡೆದ. ಒಮ್ಮೆ ಓರಂಗಲ್ಲಿನ ಪ್ರತಾಪರುದ್ರದೇವನ ಸಭೆಯಲ್ಲಿ ಏಕದ್ವಿತ್ರಿಸಂಧಿಗ್ರಾಹಿಗಳೆಂಬ ಕುಕವಿಗಳನ್ನು ತನ್ನ ಮೀಸಲು ಕವಿತೆಯಾದ ವೀರೇಶ ಚರಿತ್ರೆಯನ್ನು ಓದುವುದರ ಮೂಲಕ ಭಂಗಿಸಿ ಪ್ರತಾಪರುದ್ರನಿಂದ ಉಭಯಕವಿ ಶರಭಭೇರುಂಡ ಎಂಬ ಹೆಸರು ಪಡೆದ.ಅನಂತರ ಹಂಪೆಗೆ ಬಂದು ಹರಿಹರನ ಆಜ್ಞಾನುಸಾರವಾಗಿ ಬೇಲೂರಿಗೆ ಹೋಗಿ ಅಲ್ಲಿ ಬಯಲಾದ.ಇದರಲ್ಲಿ ಐತಿಹಾಸಿಕತೆ ಹಾಗು ಸಾಂಕೇತಿಕತೆಗಳೆರಡೂ ಬೆರೆತಿವೆ. ರಾಘವಾಂಕ ಹರಿಹರನ ವರಸುತನೆಂಬ ಹೆಮ್ಮೆಯ ಶಿಷ್ಯ . ಉಭಯ ಭಾಷಾಪಂಡಿತ ತನ್ನ ಪ್ರತಿವಾದಿಗಳೊಂದಿಗೆ ಸೆಣಸಿ ಬದುಕುವ ಛಲ ಉಳ್ಳವ ಎನ್ನುವ ಅಂಶಗಳು ಹೆಚ್ಚು ವಾಸ್ತವಸಮೀಪವಾದವು. ರಾಘವಾಂಕನ ಹಲ್ಲುಗಳನ್ನು ಹರಿಹರ ಮುರಿದದ್ದು ಅನಂತರ ರಾಘವಾಂಕನು ಶೈವಕೃತಿ ಪಂಚಕಗಳನ್ನು ಬರೆದು ಹಲ್ಲುಗಳನ್ನು ಪಡೆದದ್ದು ಈ ದಂತಕತೆ ವಸ್ತು ರೀತಿಗಳೆರಡರಲ್ಲೂ ಹರಿಹರನ ಪರಂಪರೆಗೆ ವಿರೋಧವಾಗಿ ನಡೆದುಕೊಂಡ ರಾಘವಾಂಕನ ಬಗೆಗೆ ಹರಿಹರ ಪರಂಪರೆ ತೋರಿಸಿದ ಪ್ರತಿಕ್ರಿಯೆಯನ್ನೂ ಅನಂತರ ರಾಘವಾಂಕ ಹರಿಹರ ಪರಂಪರೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸಾಂಕೇತಿಸುತ್ತದೆ ಎನ್ನಬಹುದು. ಕೃತಿಗಳುರಾಘವಾಂಕನ ಕಾವ್ಯಗಳು ಆರು ಕೃತಿಗಳು೧.ಹರಿಶ್ಚಂದ್ರ ಕಾವ್ಯ.೨.ಸಿದ್ಧರಾಮ ಪುರಾಣ೩.ಸೋಮನಾಥ ಚರಿತೆ೪. ವೀರೇಶ ಚರಿತೆ೫.ಶರಭ ಚಾರಿತ್ರ೬.ಹರಿಹರ ಮಹತ್ವ – ಈ ಕೃತಿ ಇನ್ನೂ ಸಿಕ್ಕಿಲ್ಲ. ಇವಗಳಲ್ಲಿ ಮೊದಲ ನಾಲ್ಕು ದೊರೆತು ಪ್ರಕಟವಾಗಿದೆ.ಶರಭ ಚಾರಿತ್ರ ಹಾಗೂ ಹರಿಹರ ಮಹತ್ವ ಇನ್ನೂ ದೊರೆತಿಲ್ಲ.ಇದೂ ಅಲ್ಲದೆ “ದೇವಾಂಗ ದಾರಿಮಯ್ಯನ ಪುರಾಣ”ಎಂಬ ಸಾಂಗತ್ಯ ಗ್ರಂಥವೊಂದು ದೊರಕಿದ್ದು , ರಾಘವಾಂಕನ ಅಂಕಿತದಲ್ಲಿದೆ. ಇದನ್ನು ರಾಘವಾಂಕ ಬರೆದನೇ ಇಲ್ಲವೆ ಎನ್ನುವ ಬಗ್ಗೆ ಖಚಿತವಾಗಿ ತಿಳಿಯಬೇಕಾಗಿದೆ. ವಿಮರ್ಶೆ:ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ.’ ಜನ ಬದುಕಬೇಕೆಂದು ಕಾವ್ಯಮುಖದಿಂಪೇಳ್ದನನಪೇಕ್ಶೆಯಿಂದ’ ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ , ವರಸುತನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು ತನ್ನದೇ ಆದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ.ತನಗೆ ಹಿನ್ನೆಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ವದ ಸಾಧನೆ.ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತೊಬ್ಬ ಕವಿ ರಾಘವಾಂಕ.ಹರಿಶ್ಚಂದ್ರಕಾವ್ಯಹರಿಶ್ಚಂದ್ರಕಾವ್ಯ ರಾಘವಾಂಕನ ಕೃತಿಗಳಲ್ಲಿಯೇ ಶ್ರೇಷ್ಥವಾದುದು ಮಾತ್ರವಲ್ಲ . ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ಕೃತಿ.ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕಾರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿಯೇ ಕಾಣದೊರೆಯುವ ನೂತನ ಸನ್ನಿವೇಶಸೃಷ್ಟಿ , ಕೃತಿಬಂಧೆ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದು ವಿದ್ವಾಂಸರು ಈ ಕಾವ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ ಎನ್ನುವ ತತ್ವವನ್ನು ಜೀವನಕ್ಕೆ ಅಳವಡಿಸಿ ಬದುಕಿದ ಸತ್ಯಸಾಧಕ ಹರಿಶ್ಚಂದ್ರನ ಕರುಣಾದ್ಭುತವಾದ ಕಥೆಯೇ ಹರಿಶ್ಚಂದ್ರಕಾವ್ಯ.. ಇದರಲ್ಲಿ ಹದಿನಾಲ್ಕು ಸ್ಥಳಗಳಿದ್ದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ.ಹರಿಶ್ಚಂದ್ರನ ಪಾತ್ರ ಸತ್ಯ ಸಾಕ್ಷಾತ್ಕಾರಕ್ಕಾಗಿ ನಿರಂತರವೂ ಹೂರಾಡುವ ಆದರ್ಶಾಭೀಪ್ಸೆಯ ಪ್ರತಿಮೆಯಾಗಿದೆ. ಈ ಕೃತಿಯಲ್ಲಿ ಕಂಡುಬರುವ ಶೈಲಿಹದ , ನಾಟ್ಯಮಯವಾದ ಸನ್ನಿವೇಶಗಳು , ಪಾತ್ರಗಳಲ್ಲಿ ಕಂಡುಬರುವ ವೈವಿಧ್ಯ , ಇವೆಲ್ಲವನ್ನೂ ವ್ಯಾಪಿಸಿರುವ ದರ್ಶನ ಇವುಗಳಿಂದ ಈ ಕೃತಿಯನ್ನು ರಾಘವಾಂಕನ ಮಹಾಕಾವ್ಯವೆಂದು ಹೇಳಬಹುದು. ಸಿದ್ಧರಾಮ ಪುರಾಣ‘ಕಾಯಕವೇ ಕೈಲಾಸ’ ಎಂಬ ಶರಣರ ವಚನಕ್ಕೆ ಜೀವಂತ ವ್ಯಾಖ್ಯಾನದಂತೆ ಬಾಳಿದ ಸಿದ್ಧರಾಮನ ಜೀವನವನ್ನು ಕುರಿತ ಕೃತಿ . ‘ ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ’ ಎಂಬ ಸೂತ್ರವೆ ಸಿದ್ಧರಾಮ ಚರಿತ್ರೆಯಲ್ಲಿ ಅಡಕವಾಗಿರುವ ತತ್ವ. ಇದು ರಾಘವಾಂಕನ ಧರ್ಮ ಶ್ರದ್ಧೆಯ ಸಾತ್ವಿಕ ಪ್ರತಿನಿಧಿಯಾಗಿದೆ.ಸೋಮನಾಥ ಚರಿತೆಸೌರಾಶ್ಟ್ರದ ಶಿವಭಕ್ತನಾದ ಆದಯ್ಯ ಪುಲಿಗೆರೆಗೆ ಬಂದು ಸೌರಾಶ್ಟ್ರದ ಸೋಮನಾಥನನ್ನು ಅಲ್ಲಿಯ ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿದ ವೀರಮಾಹೆಶ್ವರ ಮನೋಧರ್ಮವನ್ನು ವ್ಯಗ್ರವಾಗಿ ನಿರೂಪಿಸುವ ಕೃತಿ.ವೀರೇಶ ಚರಿತೆ ಹಾಗೂ ಶರಭ ಚಾರಿತ್ರ ಶಿವಪುರಾಣದ ಕಥೆಗಳು. ವೀರೇಶ ಚರಿತೆಯನ್ನು ಕವಿ ಮೀಸಲುಗವಿತೆ ಎಂದು ಕರೆದಿದ್ದಾನೆ.ಈ ಕೃತಿಯಲ್ಲಿ ರಾಘವಾಂಕ ಪ್ರಯೋಗಿಸಿ ನೋಡಿರುವ ಉದ್ದಂಡ ಷಟ್ಪದಿ ರೌದ್ರರಸವನ್ನು ಅಲೆಅಲೆಯಾಗಿ ಅಭಿವ್ಯಕ್ತಪಡಿಸುವ ಪ್ರಯತ್ನವನ್ನು ತೋರಿಸುತ್ತದೆ.ಶಿವನ ಅವತಾರದ ವೀರಭದ್ರನಿಂದ ದಕ್ಷಯಜ್ಞ ದ್ವಂಸವಾದ ಕಥೆಯೇ ಇದರ ವಸ್ತು. ಇತರೆ ದೇವತೆಗಳಿಗಿಂತ ಶಿವನೇ ಶ್ರೇಶ್ಠ ಎಂಬುದನ್ನು ಸಾರುವ ಉದ್ದೇಶ ಇಲ್ಲಿದೆ.ಶರಭ ಚಾರಿತ್ರ ಹೆಸರೇ ಸೂಚಿಸುವಂತೆ ಮಹಾವಿಷ್ಣುವಿನ ಅವತಾರವನ್ನು ಇಕ್ಕಿಮೆಟ್ಟಿದ ಶಿವನ ಶರಭಾವತಾರದ ಮಹಿಮೆಯನ್ನು ಕುರಿತದ್ದೆಂದು ತೋರುತ್ತದೆ. ವಚನ ರಗಳೆಯ ನಂತರದ ನಡುಗನ್ನಡದ ಸಾಹಿತ್ಯದ ಯುಗ ಪ್ರವರ್ತಕನೆಂದು ಪ್ರತೀತಿ ಪಡೆದ ಹೊಸ ಪ್ರತಿಮೆಗಳನ್ನು ಬಳಸಿದ ಜ್ಞಾನವುಳ್ಳ ಕವಿಯಾಗಿದ್ದಾನೆ.ಸಿದ್ಧರಾಮನ ಚರಿತೆಯಲ್ಲಿ ಕಂಡು ಬೆರಗಾದರಾ ಪುಣ್ಯ ದಂಪತಿಗಳು ಎನ್ನುವ ಕಾವ್ಯದಲ್ಲಿಬಾಲಕನು ಮಲ್ಲಯ್ಯನನ್ನು ಕಾಣುವ ಹಂತದಲ್ಲಿ ಅಳುತ್ತ ಗುಹೆ ಗವ್ವರಗಳ ಮುಂದೆ ಮರಳಿನ ಹುಡಿಯಲ್ಲಿ ಬಿಕ್ಕುತ್ತಿರುವಾಗ ತರು ಗುಲ್ಮ ಲತೆಗಳೆದ್ದು ಅಳುತಿರ್ದವು, ಗುಹೆ ಗವ್ವರಗಳು ಬಾಲಕ ಸಿದ್ಧರ್ಮಯ್ಯನ ಅಳುವಿನ ಆಕ್ರಂದನವನ್ನು ಮಾರ್ದನಿಸುತ್ತಿದ್ದವು ಎಂದು ಸೊಗಸಾಗಿ ವರ್ಣಿಸಿದ್ದಾನೆ. ಶರಣರ ಆಶಯಗಳನ್ನು ಅರ್ಥೈಸಿಕೊಂಡು ನ್ಯಾಯ ಒದಗಿಸಲು ಶ್ರಮಿಸಿದ ದಿಟ್ಟ ಕವಿ ರಾಘವಾಂಕ. ರಾಘವಾಂಕರ ಹೆಸರಿನಲ್ಲಿ ಕೆಲ ಪ್ರಕ್ಷಿಪ್ತ ಚರಿತ್ರೆಗಳು ಸೊಲ್ಲಾಪೂರ ಭಾಗದಲ್ಲಿ ಹುಟ್ಟಿಕೊಂಡು ಸಾಹಿತ್ಯ ಮತ್ತು ಶರಣರ ಚರಿತ್ರೆಗೆದ್ರೋಹ ಮಾಡಿವೆ.————————————————————————– ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮೌನ ಯೋಗಿ ಶ್ರೀ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಕರ್ನಾಟಕದ ಶರಣ ಪರಂಪರೆಯ ಅತ್ಯಂತ ಶ್ರೇಷ್ಠ ಹಾಗೂ ಅವಿಸ್ಮರಣೀಯ ಮೌನಯೋಗಿಗಳಾಗಿದ್ದಾರೆ. ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕ್ಕೇನಕೊಪ್ಪ ಮಠದಲ್ಲಿ ನೆಲೆಸಿ, ತಮ್ಮ ತಪಃಶಕ್ತಿಯಿಂದ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಪುರುಷರಾಗಿದ್ದಾರೆ. ವ್ಯಕ್ತಿತ್ವ ಮತ್ತು ಜೀವನ ಶೈಲಿಅವಧೂತ ಜೀವನ: ಚನ್ನವೀರ ಶರಣರು ತನುವಿನಲ್ಲಿ ನಿರ್ಮೋಹತ್ವ, ಮನದಲ್ಲಿ ನಿರಹಂಕಾರ ಮತ್ತು ಜ್ಞಾನದಲ್ಲಿ ಪರಮಾನಂದವನ್ನು ರೂಢಿಸಿಕೊಂಡು ಸರಳವಾಗಿ ಬದುಕಿದವರು. ಮೌನಯೋಗಿ: ಅವರು ಒಬ್ಬ ಅವಧೂತ ಫಕೀರನಂತೆ ಜೀವಿಸುತ್ತಾ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸಿದ ಮಹಾನ್ ತಪಸ್ವಿ. ಸಾಹಿತ್ಯ ಮತ್ತು ಇತಿಹಾಸಶರಣರ ಪುರಾಣ: ಗದಗದ ವೀರೇಶ್ವರ ಪುಣ್ಯಾಶ್ರಮದ ಖ್ಯಾತ ಸಂಗೀತಜ್ಞರಾದ ಪಂ. ಪುಟ್ಟರಾಜ ಗವಾಯಿಗಳು ಇವರ ಜೀವನ ಚರಿತ್ರೆಯನ್ನು ಆಧರಿಸಿ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಎಂಬ ಕೃತಿಯನ್ನು ರಚಿಸಿದ್ದಾರೆ. ಜಾತ್ರೆ ಮತ್ತು ಪುಣ್ಯಸ್ಮರಣೋತ್ಸವ ವಾರ್ಷಿಕ ಉತ್ಸವ: ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರ ಪುಣ್ಯಸ್ಮರಣೋತ್ಸವ ಮತ್ತು ಮಹಾ ರಥೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ಶರಣರ ಬುತ್ತಿ: ಈ ಜಾತ್ರೆಯ ಒಂದು ವಿಶಿಷ್ಟ ಸಂಪ್ರದಾಯವೆಂದರೆ, ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಭಕ್ತರಿಗಾಗಿ ಸಾವಿರಾರು ರೊಟ್ಟಿ, ಶೇಂಗಾ ಹೋಳಿಗೆ ಮತ್ತು ಕರ್ಜಿಕಾಯಿಗಳನ್ನು ತಯಾರಿಸಿ, ಬುತ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ತರುತ್ತಾರೆ. ಸಾಮಾಜಿಕ ಸೇವೆಗಳು: ಜಾತ್ರೆಯ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು, ನೇತ್ರ ಚಿಕಿತ್ಸಾ ಶಿಬಿರಗಳು, ರಕ್ತದಾನ ಮತ್ತು ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಮಠವು ಜನಪರ ಕಾರ್ಯಗಳನ್ನು ಮಾಡುತ್ತದೆ. ಶ್ರೀಮಠದ ಸಮಾಜ ಸೇವೆ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶಿಕ್ಷಣ ಸಂಸ್ಥೆಗಳು, ಉಚಿತ ಪ್ರಸಾದ ನಿಲಯ (ದಾಸೋಹ) ಮತ್ತು ಸಾವಯವ ಕೃಷಿ ಹಾಗೂ ಗೋಶಾಲೆಯನ್ನು ನಡೆಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಚಿಕ್ಕೇನಕೊಪ್ಪದ ಮೌನಯೋಗಿ, ಪೂಜ್ಯ ಶ್ರೀ ಚನ್ನವೀರ ಶರಣರ ವೈಯಕ್ತಿಕ ಲೌಕಿಕ ಜೀವನ ಮತ್ತು ಅವರ ತಂದೆ-ತಾಯಿಗಳ ನಿಖರವಾದ ಹೆಸರುಗಳ ಕುರಿತು ಇತಿಹಾಸದ ದಾಖಲೆಗಳಲ್ಲಾಗಲಿ ಅಥವಾ ಸಾರ್ವಜನಿಕ ಮೂಲಗಳಲ್ಲಾಗಲಿ ಯಾವುದೇ ಸ್ಪಷ್ಟ ಮಾಹಿತಿಯು ಲಭ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಮತ್ತು ಅವರ ಹಿನ್ನೆಲೆಯ ಕುರಿತಾದ ಕೆಲವು ಮುಖ್ಯ ಸಂಗತಿಗಳು ಅವಧೂತ ಹಾಗೂ ಮೌನ ಪರಂಪರೆ: ಶ್ರೀ ಚನ್ನವೀರ ಶರಣರು ಒಬ್ಬ ಪರಮ ಅವಧೂತರಾಗಿ ಮತ್ತು ಮೌನಯೋಗಿಯಾಗಿ ಜೀವಿಸಿದರು. ಅವರು ತಮ್ಮ ಪೂರ್ವಾಶ್ರಮದ (ಸಂಸಾರದ ಅಥವಾ ಹುಟ್ಟಿನ) ವಿವರಗಳನ್ನು ಸಂಪೂರ್ಣವಾಗಿ ತೊರೆದು, ಕೇವಲ ಲೌಕಿಕ ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬೆಳಕಿಗೆ ಬಾರದ ಹಿನ್ನೆಲೆ: ಇತಿಹಾಸದ ಪ್ರಕಾರ, ಅವರು ಬಳಗಾನೂರಿನ ಚಿಕ್ಕೇನಕೊಪ್ಪ ಮಠಕ್ಕೆ ಬಂದು ನೆಲೆಸಿದ ನಂತರವೇ ಅವರ ದಿವ್ಯ ತಪಃಶಕ್ತಿ ಮತ್ತು ಪವಾಡಗಳು ಜನಸಾಮಾನ್ಯರಿಗೆ ತಿಳಿಯತೊಡಗಿದವು. ಹೀಗಾಗಿ ಅವರ ತಂದೆ, ತಾಯಿ ಅಥವಾ ಬಾಲ್ಯದ ಲೌಕಿಕ ವಿವರಗಳು ಮರೆಯಾಗಿ, ಅವರು ಕೇವಲ “ಚಿಕ್ಕೇನಕೊಪ್ಪದ ಶರಣರು” ಎಂದೇ ಪ್ರಸಿದ್ಧರಾದರು. ಸಾಹಿತ್ಯದಲ್ಲಿ ಉಲ್ಲೇಖ: ಪಂ. ಪುಟ್ಟರಾಜ ಗವಾಯಿಗಳು ಬರೆದಿರುವ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಗ್ರಂಥದಲ್ಲಿಯೂ ಇವರ ಅಧ್ಯಾತ್ಮಿಕ ಸಾಧನೆ, ಪವಾಡಗಳು ಮತ್ತು ಸಮಾಜ ಮುಖಿ ಸೇವೆ ಬಗ್ಗೆ ಹೇಳಿದ್ದಾರೆಯೇ ಹೊರತು ಅವರ ಪೂರ್ವಾಶ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಚಿಕ್ಕೇನಕೊಪ್ಪದ ಮಹಾನ್ ತಪಸ್ವಿ ಶ್ರೀ ಚನ್ನವೀರ ಶರಣರ ನಿಖರವಾದ ಹುಟ್ಟಿದ ದಿನಾಂಕ ಮತ್ತು ವರ್ಷ ಇತಿಹಾಸದ ದಾಖಲೆಗಳಲ್ಲಿ ಎಲ್ಲೂ ಲಭ್ಯವಿಲ್ಲ. ಅವರು ಒಬ್ಬ ಸಿದ್ಧ ಪುರುಷರಾಗಿದ್ದು, ಸಂಸಾರ ಹಾಗೂ ಕಾಲದ ಗಡಿಯಿಂದ ದೂರವಿದ್ದ ಕಾರಣ ಅವರ ಬಾಲ್ಯ ಮತ್ತು ಜನನದ ವಿವರಗಳು ಬೆಳಕಿಗೆ ಬಂದಿಲ್ಲ. ಅವರ ಮಹಾಸಮಾಧಿ (ಮರಣ) ಹಾಗೂ ಪುಣ್ಯಸ್ಮರಣೆಯ 1. ಮರಣ / ಲಿಂಗೈಕ್ಯರಾದ ವಿವರ ಲಿಂಗೈಕ್ಯರಾದ ತಿಂಗಳು: ಶ್ರೀ ಚನ್ನವೀರ ಶರಣರು 1995 ಜನೆವರಿ ತಿಂಗಳ ಅವಧಿಯಲ್ಲಿ ಲಿಂಗೈಕ್ಯರಾದರು (ಮಹಾಸಮಾಧಿ ಹೊಂದಿದರು).: ಘನಮೌನಿಗಳು: ಶರಣರನ್ನು ಇತಿಹಾಸದಲ್ಲಿ “ಘನಮೌನಿ ಚಿಕ್ಕೇನಕೊಪ್ಪದ ಚನ್ನವೀರ ಶರಣರು” ಎಂದು ಕರೆಯಲಾಗುತ್ತದೆ. ಅವರು ಮೌನವ್ರತವನ್ನು ಆಚರಿಸುತ್ತಿದ್ದರಿಂದ ತಮ್ಮ ಜನ್ಮ ವೃತ್ತಾಂತವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ದೈವೀಪುರುಷ: ಭಕ್ತರ ನಂಬಿಕೆಯ ಪ್ರಕಾರ, ಅವರು ಯಾವುದೇ ಸಾಮಾನ್ಯ ಮನುಷ್ಯನಂತೆ ಹುಟ್ಟು-ಸಾವಿನ ಬಂಧನಕ್ಕೆ ಒಳಗಾಗದೆ, ಕೇವಲ ಲೋಕ ಕಲ್ಯಾಣಕ್ಕಾಗಿ ಬಂದು ಮಠದಲ್ಲಿ ನೆಲೆಸಿದ ದೈವೀ ಸ್ವರೂಪಿಯಾಗಿದ್ದರು.ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ನಡೆಯುವ ಅವರ ಪುಣ್ಯಸ್ಮರಣೆಯ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಶರಣರ ಗದ್ದುಗೆಯ ದರ್ಶನ ಪಡೆಯುತ್ತಾರೆ. ಸಮಾಜಮುಖಿ ಕಾರ್ಯಕ್ರಮಗಳನ್ನು ನಿಯೋಜಿಸುವ ಮೂಲಕ ಬಸವ ತತ್ವ ಪ್ರಸಾರ ಮಾಡಿದರು. ಮೌನವೇ ತಪಸ್ಸು ಮಾತು ಬೆಳ್ಳಿ ಮೌನ ಬಂಗಾರ ಎಂದು ತಿಳಿದು ಭಕ್ತರಿಗೆ ಸಂದೇಶ ನೀಡುತ್ತಿದ್ದರು. ಒಬ್ಬ ಶ್ರೇಷ್ಠ ಶಿವಯೋಗ ಸಾಧಕರು. ಸಾವಿಲ್ಲದ ಶರಣರು. ಬಸವ ಮಾರ್ಗದ ರೂವಾರಿಗಳು ಚಿಕ್ಕೇನಕೊಪ್ಪದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ ಕ್ರಾಂತಿಕಾರಿ ಕವಿ ಸರ್ವಜ್ಞ ಸರ್ವಜ್ಞ ಕವಿ 16ನೇ ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಅತ್ಯಂತ ಜನಪ್ರಿಯ ಕ್ರಾಂತಿಕಾರಿ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸರ್ವಜ್ಞ ಅಪ್ಪಟ ಬಸವ ಭಕ್ತ ಕ್ರಾಂತಿಕಾರಿ ಕವಿ. ತನ್ನ ಮೊನಚಾದ ಟೀಕೆ ಟಿಪ್ಪಣಿಗಳು ವಿಡಂಬನೆಯಿಂದ ಸುತ್ತಲಿನ ಅಂಕು ಡೊಂಕುಗಳನ್ನು ತಿದ್ದಿದ್ದಾನೆ. ಸಮಾಜದ ಆಷಾಢಭೂತಿತನಕ್ಕೆ ನೇರ ಚಾಟಿ ಏಟು ಬೀಸಿದ್ದಾನೆ. ಮೂರು ಸಾಲುಗಳ ಸರಳ ‘ತ್ರಿಪದಿ’ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಾರ್ವಕಾಲಿಕ ನೀತಿ ಮತ್ತು ಮೌಲ್ಯಗಳನ್ನು ಬೋಧಿಸಿದ ದಾರ್ಶನಿಕರಾಗಿದ್ದಾರೆ. ಜನನ ಮತ್ತು ಬಾಲ್ಯ ಹುಟ್ಟೂರು: ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು. ನಿಜನಾಮ: ಸಂಶೋಧನೆಗಳ ಪ್ರಕಾರ ಈತನ ನಿಜವಾದ ಹೆಸರು ಪುಷ್ಪದತ್ತ, ‘ಸರ್ವಜ್ಞ’ ಎಂಬುದು ಕಾವ್ಯನಾಮ. ತಂದೆ ತಾಯಿ : ತಂದೆ ಕುಂಬಾರ ಮಲ್ಲ ಮತ್ತು ತಾಯಿ ಮಾಳೆ (ಮಾಳಲಾದೇವಿ). ತಂದೆ ಕುಂಬಾರ ಮಲ್ಲ ತಾಯಿ ಮಾಳಲಾದೇವಿ ಇಂದು ಧರೆಗೆ ಬಂದ ಚಂದ್ರಶೇಖರ ನಾನು ಸರ್ವಜ್ಞ ಎಂದು ತನ್ನ ಹುಟ್ಟಿನ ಬಗ್ಗೆಯೇ ಹೇಳಿಕೊಂಡಿದ್ದಾನೆ. ಸಾಹಿತ್ಯ ಮತ್ತು ತ್ರಿಪದಿಗಳ ವೈಶಿಷ್ಟ್ಯ ತ್ರಿಪದಿ ಚಂದಸ್ಸು: ಮೂರು ಸಾಲುಗಳ ಪದ್ಯ ಪ್ರಕಾರವಾದ ತ್ರಿಪದಿಗೆ ಸರ್ವಜ್ಞ ಅತ್ಯಂತ ಪ್ರಸಿದ್ಧರಾಗಿದ್ದಾರೆ. ಜಾತಿ ಪದ್ಧತಿಯ ವಿರೋಧ, ಮೂಢನಂಬಿಕೆಗಳ ಖಂಡನೆ, ನೀತಿ, ಕಾಯಕದ ಮಹತ್ವ, ಸ್ನೇಹ ಮತ್ತು ಲೌಕಿಕ ಜ್ಞಾನ ಇವರ ವಚನಗಳ ಮುಖ್ಯ ವಸ್ತುಗಳಾಗಿದ್ದವು. ಸರಳ ಭಾಷೆ: ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಉಪಮೆ ಹಾಗೂ ಉದಾಹರಣೆಗಳನ್ನು ಬಳಸಿ ಕಾವ್ಯ ರಚಿಸಿದ್ದಾರೆ. ಪ್ರಸಿದ್ಧ ವಚನ (ತ್ರಿಪದಿ) ತಮ್ಮ ಜ್ಞಾನದ ಕುರಿತು ಸರ್ವಜ್ಞ ಅತ್ಯಂತ ವಿನಮ್ರವಾಗಿ ಹೀಗೆ ಹೇಳಿಕೊಂಡಿದ್ದಾರೆ: “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ” ( ನಾನು ಹುಟ್ಟುತ್ತಲೇ ಎಲ್ಲವನ್ನೂ ತಿಳಿದ ಮಹಾಜ್ಞಾನಿಯಾಗಿರಲಿಲ್ಲ ಅಥವಾ ಅಹಂಕಾರದಿಂದ ಸರ್ವಜ್ಞನಾಗಲಿಲ್ಲ. ಸಮಾಜದಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಒಂದೊಂದು ಒಳ್ಳೆಯ ವಿಷಯಗಳನ್ನು ಕಲಿತು ಜ್ಞಾನದ ಪರ್ವತವಾಗಿದ್ದೇನೆ) ಎಂದು ಹೇಳಿಕೊಂಡಿದ್ದಾನೆ. ಸರ್ವಜ್ಞನು ಕಂಡ ಬಸವಣ್ಣ ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬಸವಣ್ಣ ಮತ್ತು ಶರಣರ ಕಾರ್ಯವನ್ನು ನೆನೆಸಿದ್ದಾನೆ. ಕನ್ನಡದ ಪ್ರಸಿದ್ಧ ತ್ರಿಪದಿ ಕವಿ ಸರ್ವಜ್ಞರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಮಹಿಮೆ, ಭಕ್ತಿ ಮತ್ತು ಆದರ್ಶಗಳನ್ನು ತಮ್ಮ ಕೆಲವು ಪ್ರಮುಖ ತ್ರಿಪದಿಗಳಲ್ಲಿ ಅತ್ಯಂತ ಗೌರವದಿಂದ ಕೊಂಡಾಡಿದ್ದಾರೆ. ಲಿಂಗಾಯತ ಧರ್ಮ ಮತ್ತು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸರ್ವಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ವಜ್ಞ ಒಬ್ಬ ನೇರ ದಿಟ್ಟ ನಿರಂತರ ಕ್ರಾಂತಿಕಾರಿ ಕವಿ. ಒಂದು ಅರ್ಥದಲ್ಲಿ ಬಸವಣ್ಣನವರ ಶರಣರ ಕ್ರಾಂತಿಯ ವಾರಸುದಾರ. ಬಸವಣ್ಣನವರ ಕುರಿತಾದ ಸರ್ವಜ್ಞನ ಪ್ರಮುಖ ತ್ರಿಪದಿಗಳು ಮತ್ತು ಅವುಗಳ ಸರಳ ಭಾವಾರ್ಥಗಳು ೧. ಲಿಂಗಾಯತ ಧರ್ಮದ ಕರ್ತೃ ಬಸವಣ್ಣ ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ | ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ | ಬಸವಣ್ಣನೆ ಕರ್ತೃ ಸರ್ವಜ್ಞ || ಬಸವ ಗುರುವಿನ ಮಹಿಮೆ ಮತ್ತು ಹೆಸರಿನ ಶಕ್ತಿ ಎಲ್ಲರಿಗೂ ತಿಳಿಯದು. ಸುಳ್ಳು ಮಾತುಗಳನ್ನಾಡಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಲಿಂಗಾಯತ ಧರ್ಮಕ್ಕೆ ಮತ್ತು ವೈಚಾರಿಕ ಸಮಾಜಕ್ಕೆ ಬಸವಣ್ಣನವರೇ ನಿಜವಾದ ಮೂಲಪುರುಷ ಅಥವಾ ಕರ್ತೃವಾಗಿದ್ದಾರೆ. ೨. ಬಸವ ನಾಮಸ್ಮರಣೆಯ ಮಹಿಮೆ ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು | ಬಸವನ ಪಾದವ ನಂಬಿದ ಭಕ್ತರು | ಹಸನಾದರಯ್ಯ ಸರ್ವಜ್ಞ || ಬಸವ’ ಎಂಬ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ಮನುಷ್ಯನ ಪಾಪಗಳೆಲ್ಲವೂ ದಿಕ್ಕೆಟ್ಟು ಓಡಿಹೋಗುತ್ತವೆ. ಬಸವಣ್ಣನವರ ತತ್ತ್ವಗಳನ್ನು ಮತ್ತು ಅವರ ಪಾದಗಳನ್ನು ನಂಬಿ ನಡೆದ ಭಕ್ತರ ಜೀವನವು ಅತ್ಯಂತ ಸುಂದರವಾಗಿ ಹಾಗೂ ಪಾವನವಾಗಿ ರೂಪಿತಗೊಂಡಿದೆ. ೩. ಬಸವಣ್ಣನೇ ಜಗದ ಗುರು ಬಸವನೆ ಜಗದಾದಿ ಬಸವನೆ ಜಗದೀಶ | ಬಸವನೇ ಜಗದ ಗುರುಪ್ರಣವವೆಂದರಿದು | ಬಸವನನು ಜಪಿಸು ಸರ್ವಜ್ಞ || ಬಸವಣ್ಣನೇ ಈ ಜಗತ್ತಿನ ಕಲ್ಯಾಣದ ಆದಿಯಾಗಿದ್ದಾನೆ, ಅವನೇ ದೈವಸ್ವರೂಪಿಯಾಗಿದ್ದಾನೆ. ಬಸವಣ್ಣನೇ ಇಡೀ ಜಗತ್ತಿಗೆ ಓಂಕಾರದಂತಹ (ಪ್ರಣವ) ಜ್ಞಾನವನ್ನು ನೀಡಿದ ಜಗದ್ಗುರು ಎಂಬುದನ್ನು ಅರಿತು, ಸದಾ ಆತನ ನಾಮವನ್ನು ಜಪಿಸು. ೪. ಮಂತ್ರಸಿದ್ಧ ಬಸವಣ್ಣ ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ | ಮಂತ್ರಸಿದ್ದನು ಬಸವಣ್ಣನ ಪಾದಕ್ಕ | ಶರಣೆನ್ನಿರೆಲ್ಲ ಸರ್ವಜ್ಞ ಕಾಮವನ್ನು ಗೆದ್ದವನು ಬಸವಣ್ಣ. ಭಕ್ತರ ಚಿಂತೆಗಳನ್ನು ಪರಿಹರಿಸುವವನು ಬಸವಣ್ಣ. ಆಧ್ಯಾತ್ಮಿಕ ಮಂತ್ರಸಿದ್ಧಿಯನ್ನು ಹೊಂದಿರುವ ಆ ಬಸವಣ್ಣನ ಪಾದಗಳಿಗೆ ನಾವೆಲ್ಲರೂ ಭಕ್ತಿಯಿಂದ ಶರಣಾಗಬೇಕು. ೫. ಶಂಭುವಿನ ಕರುಣೆ ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ | ಶಂಭುವಿನ ಕರುಣ ನಿನಗುಂಟ ನಾನಿಮ್ಮ | ನಂಬಿ ಹೇಳಿದೆನು ಸರ್ವಜ್ಞ ಬಸವಣ್ಣನೇ, ನಿನ್ನ ಅಪಾರವಾದ ಮಹಿಮೆಯನ್ನು ನಾನು ಪೂರ್ಣವಾಗಿ ನಂಬಿ ಹೇಳುತ್ತಿದ್ದೇನೆ. ಸಾಕ್ಷಾತ್ ಶಿವನ (ಶಂಭುವಿನ) ಸಂಪೂರ್ಣ ಕೃಪೆ ನಿನ್ನ ಮೇಲಿದೆ ಎಂಬುದನ್ನು ನಾನು ದೃಢವಾಗಿ ನಂಬಿ ಜಗತ್ತಿಗೆ ಸಾರುತ್ತಿದ್ದೇನೆ ಎಂದು ಹೇಳಿದ್ದಾರೆ. ೬ ಲೋಕಕ್ಕೆ ಬಸವಣ್ಣನೇ ಮುದ್ದು ಹಸಿದೊಡಂಬಲಿ ಮುದ್ದು ಬಿಸಿಲಿಗೆ ಕೊಡೆ ಮುದ್ದು ಬಸುರಿಗೆ ಶಿಶು ಮುದ್ದು ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ. ಬೇಸಿಗೆಯ ಬಳಲಿಕೆಗೆ ಅಂಬಲಿ ಕೊಟ್ಟಾಗ ಹೊಟ್ಟೆಗೆ ಹಿತವಾಗಿರುತ್ತದೆ. ಹಸಿದ ಹೊಟ್ಟೆ ತಣ್ಣಗೆ ಮಾಡುವ ಅಂಬಲಿ ಆರೋಗ್ಯಕ್ಕೂ ಒಳ್ಳೆಯದು. ಬಿಸಿಲಿಗೆ ಒಂದು ಕೊಡೆ ಇದ್ದರೆ ಅದಕ್ಕಿಂತ ಹೆಚ್ಚಿನ ಆನಂದ ಇನ್ನೊಂದಿಲ್ಲ. ಬಸುರಿ ಹೆಣ್ಣು ಮಗಳು ಓಣಿಯಲ್ಲಿ ಆಡುವ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡುತ್ತಾಳೆ ಬಸುರಿ. ೭ ಬಸವ ಪೀಠವು ಎದ್ದು ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು,ಧರೆಯವಗೆ ವಶವಾಗದಿಹುದೆ ಸರ್ವಜ್ಞ ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪವು ಒಂದು ಪ್ರಬಲ ಪ್ರಜಾಪ್ರಭುತ್ವದ ಅಂಗವಾಗಿ ಹೊರ ಹೊಮ್ಮಿತು.ಅದನ್ನೇ ಸರ್ವಜ್ಞ ಬಸವ ಪೀಠವು ಎದ್ದು ಜಾಗೃತಗೊಂಡು ಹೊಸ ನಾಣ್ಯಗಳು ಚಲಾವಣೆಗಾಗಿ ಹುಟ್ಟಿ ಕೊಂಡು ಆ ಚಲಾವಣೆಗೊಳ್ಳುವ ನಾಣ್ಯಗಳ ಮೇಲೆ ಬಸವನ. ಮುದ್ರೆ ನಾಡಲ್ಲಿ ಮೆರೆಯುವಾಗ ಬೆಳಕಿಗೆ ಬರುವಾಗ. ಇಡೀ ಜಗತ್ತು ಅವನಿಗೆ ವಶವಾಗಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾನೆ. ಸರ್ವಜ್ಞರು ತಮ್ಮ ಈ ತ್ರಿಪದಿಗಳ ಮೂಲಕ ಬಸವಣ್ಣನವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಸಮಾಜವನ್ನು ಉದ್ಧಾರ ಮಾಡಲು ಬಂದ ಸಾಕ್ಷಾತ್ ಶಿವ ಕಲ್ಯಾಣದ ಜ್ಯೋತಿಯಾಗಿ ಆರಾಧಿಸಿದ್ದಾರೆ. ಸರ್ವಜ್ಞ ಒಬ್ಬ ದಿಟ್ಟ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ವ್ಯಕ್ತಿ. ತನ್ನ ಅನಿಸಿಕೆ ಭಾವನೆಗಳನ್ನು ನೇರವಾಗಿ ಹೇಳುವ ಗಟ್ಟಿತನ ಹೊಂದಿರುವ ಅಪರೂಪದ ಕವಿ. ಆಡು ಮುಟ್ಟದ ಸೊಪ್ಪಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವ ಜಾನಪದ ನಾಣ್ಣುಡಿಯಂತೆ ಸರ್ವಜ್ಞ ಎಲ್ಲಾ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯ ಕುಟುಂಬ ಗಂಡ ಹೆಂಡತಿ ಸಂಬಂಧ ಆಹಾರ ವೈದಿಕ ವ್ಯವಸ್ಥೆಯ ವಿರುದ್ಧ ಟೀಕೆ ಹೀಗೆ ಎಲ್ಲಾ ವಿಷಯಗಳನ್ನು ತನ್ನ ತ್ರಿಪದಿಗಳಲ್ಲಿ ದಾಖಲಿಸಿದ್ದಾನೆ. ಜಯಂತಿ: ಪ್ರತಿ ವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸಲಾಗುತ್ತದೆ. ಯಾವುದಾದರೂ ಒಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿ ಅವರ ಉಜ್ವಲ ಚಿಂತನೆ ಮಾನವ ಪ್ರೇಮ ಸಾಮಾಜಿಕ ಚಿಂತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣರ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಶಿವಶರಣ ಮಾದಾರ ಚೆನ್ನಯ್ಯನವರು ಹನ್ನೆರಡನೆಯ ಶತಮಾನದಲ್ಲಿ ನಡೆದ ಅಭೂತಪೂರ್ವ ಕ್ರಾಂತಿ ವರ್ಗ ವರ್ಣ ಲಿಂಗ ಬೇಧ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಜಗತ್ತಿನ ಸರ್ವ ಶ್ರೇಷ್ಠ ಕ್ರಾಂತಿಯಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ಸಮಾಜದ ಅತ್ಯಂತ ಕಟ್ಟ ಕಡೆಯ ಮಾದಿಗ ಸಮುದಾಯದ ಚೆನ್ನಯ್ಯನು ಪಾಲ್ಗೊಂಡಿದ್ದನು. ಶಿವಶರಣ ಮಾದಾರ ಚೆನ್ನಯ್ಯನವರು 12ನೆಯ ಶತಮಾನದ ಅತ್ಯಂತ ಪ್ರಮುಖ ಶಿವಶರಣ, ಕಾಯಕಯೋಗಿ ಹಾಗೂ ಕನ್ನಡ ಸಾಹಿತ್ಯದ ಆದ್ಯ ವಚನಕಾರರಾಗಿದ್ದಾರೆ. ಭಕ್ತಿ ಮತ್ತು ಕಾಯಕ ನಿಷ್ಠೆಗೆ ಮೇರು ಶಿಖರವಾಗಿದ್ದ ಇವರನ್ನು ಜಗದ್ಗುರು ಬಸವಣ್ಣನವರೇ ತಮ್ಮ ವಚನಗಳಲ್ಲಿ ಅತ್ಯಂತ ಪೂಜ್ಯಭಾವದಿಂದ ಕೊಂಡಾಡಿದ್ದಾರೆ. ಮಾದಾರ ಚೆನ್ನಯ್ಯನವರ ಜೀವನ ಚರಿತ್ರೆಯ ಸಮಗ್ರ ವಿವರ ಇಲ್ಲಿದೆ: ಪರಿಚಯ ಮತ್ತು ಹಿನ್ನೆಲೆ ಕಲ್ಯಾಣಕ್ಕೆ ಬಂದ ಮೇಲೆ ಮಾದಾರ ಚೆನ್ನಯ್ಯ ಎಲ್ಲಾ ಶರಣರಿಗೂ ಅಂಬಲಿ ಮಾಡಿ ಕೊಡುತ್ತಿದ್ದರು. ಭಕ್ತಿ ಮತ್ತು ಶಿವನಿಗೆ ಅಂಬಲಿ ಉಣಿಸಿದ ಪ್ರಸಂಗ ಕಾಲ್ಪನಿಕ ಕಥೆ ಚೆನ್ನಯ್ಯನವರು ಕಾಡಿಗೆ ಹೋಗಿ ಹುಲ್ಲು ಕೊಯ್ಯುವ ಕಾಯಕದಲ್ಲಿ ತೊಡಗಿದ್ದಾಗಲೂ ಇಷ್ಟಲಿಂಗ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ಅವರ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ, ಚೆನ್ನಯ್ಯನ ಪತ್ನಿ ತಯಾರಿಸಿದ ಅಂಬಲಿ (ರಾಗಿ ಕೂಳು) ಯನ್ನು ಪ್ರತಿದಿನ ಬಂದು ಸ್ವೀಕರಿಸುತ್ತಿದ್ದನು ಎನ್ನುವ ಪುರಾಣ ಕಾವ್ಯಗಳು ವರ್ಣಿಸುತ್ತವೆ. ಆದರೆ ಇವುಗಳನ್ನು ತಾತ್ವಿಕ ಚಿಂತನೆಗೆ ಚೆನ್ನಯ್ಯನ ಬದ್ಧತೆ ಸೈದ್ಧಾಂತಿಕ ಸ್ಪಷ್ಟತೆ ನಿಲುವುಗಳ ಬಗ್ಗೆ ಆಶಯ ಎಂದು ಪರಿಗಣಿಸ ಬೇಕು. ಒಮ್ಮೆ ಚೋಳರಾಜನು ತಾನು ಸಿದ್ಧಪಡಿಸಿದ ಮೃಷ್ಟಾನ್ನ ಭೋಜನವನ್ನು ಶಿವನು ಸ್ವೀಕರಿಸದಿದ್ದಾಗ, ಶಿವನಿಗೆ ಕಾರಣ ಕೇಳಿದನು. ಆಗ ಶಿವನು, “ನಾನು ಪ್ರತಿದಿನ ನನ್ನ ಭಕ್ತ ಚೆನ್ನಯ್ಯನ ಅಂಬಲಿಯನ್ನು ಸವಿಯುತ್ತಿದ್ದೇನೆ, ನಿನ್ನ ರಾಜ ವೈಭವದ ಊಟಕ್ಕಿಂತ ಅವನ ಪ್ರೀತಿಯ ಕೂಳೇ ನನಗೆ ಶ್ರೇಷ್ಠ” ಎಂದು ಹೇಳಿದನು. ಈ ಮೂಲಕ ಶಿವನು ಜಗತ್ತಿಗೆ ಚೆನ್ನಯ್ಯನ ಗುಪ್ತ ಭಕ್ತಿಯನ್ನು ಪ್ರಕಟಪಡಿಸಿದನು ಎಂಬ ಪವಾಡ ಕಥೆಗಳಿವೆ. ಕಲ್ಯಾಣ ಕ್ರಾಂತಿ ಮತ್ತು ಬಸವಣ್ಣನವರ ಒಡನಾಟ ಬಸವಣ್ಣನವರ ಸಾಮಾಜಿಕ ಕ್ರಾಂತಿ ಮತ್ತು ಶರಣರ ಅನುಭವ ಮಂಟಪದ ಚಿಂತನೆಗಳಿಂದ ಆಕರ್ಷಿತರಾದ ಮಾದಾರ ಚೆನ್ನಯ್ಯನವರು ಕಲ್ಯಾಣಕ್ಕೆ (ಇಂದಿನ ಬಸವಕಲ್ಯಾಣ) ಬಂದರು. ಅಲ್ಲಿ ತಮ್ಮ ಮೂಲ ಕಾಯಕವಾದ ಪಾದರಕ್ಷೆ (ಚರ್ಮಗಾರಿಕೆ) ತಯಾರಿಕೆಯನ್ನು ಮುಂದುವರಿಸಿದರು. ಬಸವಣ್ಣನವರು ತಮ್ಮ ವಚನಗಳಲ್ಲಿ “ಎನ್ನ ದೆಸೆಯಿಂದ ಮಾದಾರ ಚೆನ್ನಯ್ಯನ ಮನೆಯು …” ಎಂದು ಹೇಳಿಕೊಳ್ಳುತ್ತಾ, ಚೆನ್ನಯ್ಯನವರನ್ನು ತಮಗಿಂತ ಶ್ರೇಷ್ಠ ಭಕ್ತರೆಂದು ಗೌರವಿಸುತ್ತಿದ್ದರು. ಮಾದಾರ ಚೆನ್ನಯ್ಯನ ಮನೆಯಲ್ಲಿ ಉಂಡ ಕಾರಣ ವೇದ ನಡುನಡುಗಿತ್ತು ಎಂದು ಹೇಳಿದ್ದಾರೆ ಬಸವಣ್ಣನವರು. ವಚನ ಸಾಹಿತ್ಯ ಮತ್ತು ವೈಚಾರಿಕತೆ ಸಮಾಜದ ಅಸಮಾನತೆ ಹಾಗೂ ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿದ ಮಾದಾರ ಚೆನ್ನಯ್ಯನವರ ಪ್ರಮುಖ ವಚನಗಳು ಮತ್ತು ಅವುಗಳ ಭಾವಾರ್ಥಗಳು ಇಲ್ಲಿವೆ: 1. ನಡೆ ಮತ್ತು ನುಡಿಯ ಪ್ರಾಮುಖ್ಯತೆ (ಆಚಾರವೇ ಕುಲ) “ಆಚಾರವೆ ಕುಲ, ಅನಾಚಾರವೆ ಹೊಲೆ” ಎಂಬ ವಚನದಲ್ಲಿ, ಕೇವಲ ಒಳ್ಳೆಯ ಮಾತುಗಳನ್ನಾಡಿ ಕೆಟ್ಟ ನಡವಳಿಕೆ ಹೊಂದಿದ್ದರೆ ಅದುವೇ ‘ಹೊಲೆ’ (ಮೈಲಿಗೆ) ಎಂದು ಚೆನ್ನಯ್ಯನವರು ಸ್ಪಷ್ಟಪಡಿಸುತ್ತಾರೆ. ಕಾಯಕನಿಷ್ಠೆಯು ನಡೆ-ನುಡಿಯ ಸಮಾನತೆಯಲ್ಲಿದೆ ಎಂದು ಪ್ರತಿಪಾದಿಸಿ, ಆಚಾರವೇ ನಿಜವಾದ ಶ್ರೇಷ್ಠ ಕುಲ ಎಂದು ಒತ್ತಿ ಹೇಳುತ್ತಾರೆ. 2. ಸಾಮಾಜಿಕ ಸಮಾನತೆ ಮತ್ತು ಜಾತಿ ಪದ್ಧತಿಯ ಖಂಡನೆ ಸಮಾಜದಲ್ಲಿನ ಹದಿನೆಂಟು ಜಾತಿಗಳ ಭೇದವನ್ನು ತಳ್ಳಿಹಾಕುವ ಅವರು, ಮನುಷ್ಯರ ನಡುವಿನ ಅಸಮಾನತೆಯನ್ನು ಖಂಡಿಸುತ್ತಾರೆ. ಹುಟ್ಟಿನಿಂದ ಯಾರೂ ಕೀಳು ಅಥವಾ ಮೇಲಲ್ಲ, ಕಾಯಕದ ಆಧಾರದ ಮೇಲೆ ಕೇವಲ ಕೆಲಸದ ವಿಂಗಡಣೆಯಷ್ಟೇ ನಡೆದಿದೆ. ಸತ್ಯ ಮತ್ತು ಬ್ರಹ್ಮವನ್ನು ಅರಿತವನೇ ನಿಜವಾದ ಬ್ರಾಹ್ಮಣ ಎಂಬ ವಿಚಾರವನ್ನು ಇವರು ವಚನಗಳಲ್ಲಿ ಮಂಡಿಸಿದ್ದಾರೆ. 3. ಬಾಹ್ಯ ಪೂಜೆ ಮತ್ತು ಆತ್ಮಜ್ಞಾನ ದೇಹವಿರುವ ತನಕ ಕರ್ಮ-ಪೂಜೆಗಳು ಮುಖ್ಯವಾದರೂ, ನಿಜವಾದ ಮುಕ್ತಿ ಸಿಗುವುದು ಬಾಹ್ಯ ಕ್ರಿಯೆಗಳಿಂದಲೋ ಅಥವಾ ಆತ್ಮಜ್ಞಾನದಿಂದಲೋ ಎಂಬ ಜಿಜ್ಞಾಸೆಯನ್ನು ವಚನಗಳಲ್ಲಿ ವ್ಯಕ್ತಪಡಿಸುತ್ತಾರೆ. ಕಾಯದ ಕರ್ಮಕ್ಕಿಂತ ಆತ್ಮಜ್ಞಾನವೇ ಮುಖ್ಯ ಎಂಬುದನ್ನು ಒತ್ತಿಹೇಳಿ, ಭಕ್ತಿಯ ಮಾರ್ಗವನ್ನು ಪ್ರಾರ್ಥಿಸುತ್ತಾರೆ. ವಚನಗಳ ವೈಶಿಷ್ಟ್ಯ: ಇವರ ಸಮಾಧಿ ಚಾಮರಾಜನಗರ ಜಿಲ್ಲೆಯ ತಮಿಳುನಾಡಿಗೆ ಅಂಟಿಕೊಂಡ ಕುರುಬಗಟ್ಟಿಯಲ್ಲಿ ಕಾಣ ಬಹುದು ಕರ್ನಾಟಕ ಸರ್ಕಾರವು ಇವರ ಕಾಯಕ ನಿಷ್ಠೆ ಮತ್ತು ಸಮಾಜ ಸುಧಾರಣೆಯ ನೆನಪಿಗಾಗಿ ಪ್ರತಿ ವರ್ಷ ಮಾದಾರ ಚೆನ್ನಯ್ಯ ಜಯಂತಿಯನ್ನು ಆಚರಿಸುತ್ತದೆ. ______________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಸಾವಿಲ್ಲದ ಶರಣರು ಮಾಲಿಕೆ- “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಕದಿರ ರೆಮ್ಮವ್ವೆ -ಅವಿರಳ ವಚನಕಾರ್ತೆ. ಅವಳು ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ ಪಾಲ್ಗೊಂಡು ರಾಟಿಯಿಂದ ಕದಿರು ತೆಗೆದು ನೂಲುವ ಕಾಯಕದವಳಾಗಿದ್ದವಳು.ತೆಗೆದ ನೂಲನ್ನು ಮಾರಿ ಬಂದ ಹಣದಲ್ಲಿ ಗುರು ಲಿಂಗ ಜಂಗಮ ದಾಸೋಹ ಮಾಡಿ ಬದುಕಿದಳು..ಬಹುತೇಕರು ಈಕೆಯ ಕಾಲವನ್ನು ಬಸವಾದಿ ಪ್ರಮಥರ ಕಾಲವೆಂದು ನಿರ್ಣಯಿಸುತ್ತಾರೆ . ಡಾ ಎಲ್ ಬಸವರಾಜು ಅವರು ಇವಳ ವಚನದಲ್ಲಿ ಬರುವ “ಪರದಳ ವಿಭಾಡ” “ಗಜವೇಂಟೆಕಾರ ” ಎಂಬ ಪದಗಳನ್ನು ಗಮನಿಸಿ ಇವಳು ವಿಜಯನಗರದ 1430 ಕಾಲದ ವಚನಕಾರ್ತೆ ಎಂದು ತೀರ್ಮಾನಿಸುತ್ತಾರೆ. ಆದರೆ ಹರಿಹರ ತನ್ನ ರಗಳೆಯಲ್ಲಿ ಕದಿರ ರೆಮ್ಮವ್ವೆಯನ್ನು ಸ್ಮರಿಸಿದ್ದಾನೆ. ಪಾಲ್ಗುರಿಕೆ ಸೋಮನಾಥನು ತನ್ನ ಪಂಡಿತಾರಾಧ್ಯ ಚರಿತ್ರೆಯಲ್ಲಿ ಕದಿರ ರೆಮ್ಮವ್ವೆ ಶರಣೆಯ ಉಲ್ಲೇಖವಿದೆ. ಅಲ್ಲದೆ ಕದಿರು ಕಾಯಕದ ಕದಿರ ರೆಮ್ಮವ್ವೆಯ ಒಂದು ವಚನದಲ್ಲಿ ಬಸವಣ್ಣ ,ಚೆನ್ನ ಬಸವಣ್ಣ ಪ್ರಭುದೇವರನ್ನು ಸ್ಮರಿಸಿದ್ದಾಳೆ.ಶರಣರ ವಚನಗಳ ಜೊತೆ ಈಕೆಯ ವಚನಗಳು ಮತ್ತು ಸಕಲ ಪುರಾತನರ ವಚನಗಳು ಹಾಗು ಇತರ ಸ್ಥಲ ಕಟ್ಟಿನ ವಚನಗಳಲ್ಲಿ ಸಮಾವೇಶಗೊಂಡಿರುವುದು ಕದಿರು ರೆಮವ್ವೆ ಬಸವ ಕಾಲಿನ ಶರಣೆ ಎನ್ನಲು ಹೆಚ್ಚು ಪುಷ್ಟಿ ಸಿಗುತ್ತವೆ. 1620 ರ ಶಂಕರ ದೇವನ “ಇಷ್ಟಲಿಂಗ ಚಾರಿತ್ರ್ಯ ” ಅಜ್ಞಾತ ಕವಿಯ “ನೂರೆಂಟು ಶರಣೆಯರ ಅಷ್ಟಕ “ದಲ್ಲಿ ಕದಿರ ರೆಮ್ಮವ್ವೆ ಯ ಉಲ್ಲೇಖ ಕಂಡು ಬಂದಿದೆ. ಹೀಗಾಗಿ ಕದಿರ ರೆಮ್ಮವ್ವೆ ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಸಂಕುಲಕೆ ಸೇರಿದ ಶರಣೆ ಎಂದು ಗಟ್ಟಿಯಾಗಿ ನಿರ್ಧರಿಸಬಹುದು.. ಕದಿರ ರೆಮ್ಮವ್ವೆ ಒಬ್ಬ ನಿಷ್ಠಾವಂತ ನೇಕಾರ ಕುಟುಂಬದ ಕಾಯಕಜೀವಿ. ರಾಟಿಯಿಂದ ನೂಲು ತೆಗೆಯುವುದು ,ನೂಲನ್ನು ಮಾರಿ ಬಂದ ಆದಾಯದಿಂದ ಜಂಗಮ ಸೇವೆ ಕೈಗೊಳ್ಳುವ ಸತ್ಯ ಶುದ್ಧ ಶರಣೆ.ಇವಳ ಗಂಡನ ಬಗ್ಗೆ ಯಾವುದೇ ದಾಖಲೆಗಳಿಲ್ಲ . ಅವಳು ತನ್ನ ಕಾಯಕದ ಜೊತೆಗೆ ನಿತ್ಯ ಅನುಭಾವದ ಗೋಷ್ಠಿಯಲ್ಲಿ ಪಾಲ್ಗೊಂಡು ಲೌಕಿಕ ಪಾರಮಾರ್ಥಿಕ ಚಿಂತನೆಗಳಲ್ಲಿ ಭಾಗವಹಿಸುತ್ತಿದ್ದಳು.ಅವಳ ಎರಡು ವಚನದಲ್ಲಿ ನಿರಾಕಾರದ ಗಂಡನ ಬಗ್ಗೆ ಒಲವು ತೋರಿಸಿದನ್ನು ನೋಡಿದರೆ ಅವಳು ಅವಿವಾಹಿತೆಯಾಗಿರಬಹುದು ಎಂದು ನನ್ನ ಗ್ರಹಿಕೆಯಾಗಿದೆ. ಕದಿರ ರೆಮ್ಮವ್ವೆ ನಾಲ್ಕು ವಚನಗಳು ಮಾತ್ರ ದೊರೆತಿವೆ.” ಕದಿರ ರೆಮ್ಮಿವೊಡೆಯ ಗುಮ್ಮೆಶ್ವರ ” ನಾಲ್ಕು ವಚನಗಳಲ್ಲಿ ಎರಡುವಚನಗಳು ಸತಿ ಪತಿ ದಾಂಪತ್ಯ ಧರ್ಮಕ್ಕೆ ಸಂಬಂಧ ಪಟ್ಟ ಅಲೌಕಿಕ ವಿಚಾರಗಳು ,ಒಂದು ವಚನದಲ್ಲಿ ಶರಣರ ಸ್ತುತಿ ಕಂಡು ಬಂದಿದೆ. ಇನ್ನೊಂದರಲ್ಲಿ ಕಾಯಕದ ಮಹತ್ವ ಅಡಕವಾಗಿದೆ. ಎನ್ನ ಸ್ಥೂಲ ತನುವೆ ಬಸವಣ್ಣನಯ್ಯಾ ಎನ್ನ ಸೂಕ್ಷ್ಮ ತನುವೆ ಚೆನ್ನ ಬಸವಣ್ಣನಯ್ಯ ಎನ್ನ ಕಾರಣ ತನುವೆ ಪ್ರಭುದೇವರಯ್ಯಾ ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ- ಎನ್ನುವಲ್ಲಿ ಕದಿರ ರೆಮ್ಮವ್ವೆ -ತನ್ನ ವಚನದಲ್ಲಿ ಬಸವಣ್ಣ ತನ್ನ ಸ್ಥೂಲ ಶರೀರದ ಗುರುತು. ತನ್ನ ಆಕಾರ ಅನುಭಾವದ ತನುವು. ತನಗೆ ಶರಣೆಯ ಮುದ್ರೆಯನ್ನೊತ್ತಿದ ಬಸವಣ್ಣನು ತನ್ನ ಸ್ಥೂಲ ಶರೀರಕ್ಕೆ ತನುವಾಗುತ್ತಾನೆ ಎಂದು ಹೇಳುತ್ತಾ ಬಸವಣ್ಣನವರ ಕಲ್ಯಾಣ ಸಮತೆಯ ಕ್ರಾಂತಿಯಲ್ಲಿ ಕದಿರ ರೆಮ್ಮವ್ವೆಗೆ ಸ್ಥಾನ ದೊರಕಿಸಿ ತನ್ನ ಕಾಯ ಶರೀರದ ಸ್ಥೂಲ ತನುವಾದವರು ಬಸವಣ್ಣ ಎಂದು ಅಭಿಮಾನದಿಂದ ಹೇಳುತ್ತಾಳೆ. ಇನ್ನು ತನ್ನ ಸೂಕ್ಶ್ಮ ಶರೀರದ ಕಣ್ಣಿಗೆ ಕಾಣದ ಭಾವ ಸೂಕ್ಷ್ಮತೆಯ ತನುವು ಚೆನ್ನ ಬಸವಣ್ಣ, ಚೆನ್ನಬಸವಣ್ಣನವರ ಷಟಸ್ಥಲ ಅರಿವಿನ ಜ್ಞಾನ ಸ್ಥೂಲ ಶರೀರದ ಮನೋ ವಿಕಸನಕೆ ಕಾರಣವು. ಇಂತಹ ಸೂಕ್ಷ್ಮ ಶರೀರದ ತನುವು ಚೆನ್ನ ಬಸವಣ್ಣ . ಅದೇ ರೀತಿ ಶರೀರ ಪ್ರಾಣ ಆತ್ಮವು ಕ್ರಮವಾಗಿ ಸ್ಥೂಲ ,ಸೂಕ್ಷ್ಮ ಕಾರಣವಾಗಿ ತನ್ನ ಆತ್ಮದ ಕಾರಣ ತನುವಿಗೆ ಅಲ್ಲಮರು ಕಾರಣ ಎಂದು ಹೇಳುತ್ತಾ ತನ್ನನ್ನು ಅಲ್ಲಮರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುತ್ತಾಳೆ. ಕದಿರ ರೆಮ್ಮವ್ವೆ ತನ್ನ ಕಾಯಕದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾಳೆ. ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ : ಅಡಿಯ ಹಲಗೆ ಬ್ರಹ್ಮ ,ತೋರಣ ವಿಷ್ಣು ನಿಂದ ಬೋಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ . ಅರಿವೆಂಬ ಕದಿರು ,ಭಕ್ತಿಯೇನೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು ಕದಿರು ತುಂಬಿತ್ತು. ರಾಟೆಯ ತಿರುಹಲಾರೆ -ಎನ್ನ ಗಂಡ ಕುಟ್ಟಿಹ ಇನ್ನೇವೆ ” ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ “? ಇದು ತನ್ನ ಬದುಕಿಗೆ ಸಂಬಂಧ ಪಟ್ಟ ಕಾಯಕದ ವಚನವಾಗಿದೆ. ಮೇಲ್ನೋಟಕ್ಕೆ ಇದು ಕಾಯಕದ ವಚನವಾದರೂ ಈ ವಚನದಲ್ಲಿ ಅತ್ಯಂತ ಪಾರಮಾರ್ಥಿಕ ಅರ್ಥವನ್ನು ಕದಿರು ರೆಮ್ಮವ್ವೆ ವ್ಯಕ್ತ ಪಡಿಸಿದ್ದಾಳೆ .ಕದಿರ ರೆಮ್ಮವ್ವೆ ತನ್ನ ಕುಲ ಕಸುಬು ಹಾಗು ಕೀಳು ಜಾತಿಯ ಉಲ್ಲೇಖ ಮಾಡಿದ್ದಾಳೆ. ಜೊತೆಗೆ ತಿರುಹುವ ರಾಟಿಗೆ ಅದರ ಅಡಿಯ ಹಲಗೆ ಬ್ರಹ್ಮ ಅದಕ್ಕೆ ಕಟ್ಟಿದ ತೋರಣವೇ ವಿಷ್ಣು ,ರಾಟೆಗೆ ಕಟ್ಟಿದ ಬೋಂಬೆ ಮಹಾರುದ್ರ ರುದ್ರನ ಬೆಂಬಲಕೆ ಎರಡು ಸೂತ್ರ ಕರ್ಣಗಳು .ಇಂತಹ ರಾಟೆಯಿಂದ ನೂತಾಗ ಹೊರಡುವ ಅರಿವೇ ಕದಿರು..ಭಕ್ತಿಯಿಂದ ತಿರುಹಲಾಗಿ ನೂಲು ಸುತ್ತಿಕೊಂಡಿತ್ತು,ಮತ್ತು ಕದಿರು ತುಂಬಿತ್ತು . ಕದಿರ ತುಂಬಿದ ಮೇಲೆ ಮತ್ತೆ ರಾಟೆಯ ತಿರುಹಲಾರೆ.ಇಲ್ಲಿ ಬ್ರಹ್ಮ ವಿಷ್ಣು ರುದ್ರ ಮಹಾರುದ್ರ ಎಂಬ ದೈವೀ ಕಲ್ಪನೆಯನ್ನೇ ತಾನು ನೂಲುವ ಕದಿರಿನ ಹಲಗೆಯನ್ನು ಬ್ರಹ್ಮವೆಂತಲೂ ,ಕಾರಣ ಹಲಗೆ ಗಟ್ಟಿಯಾಗಿದ್ದರೆ ತಾನಷ್ಟೇ ಕದಿರು ತೆಗೆಯುವವರು ಅದರ ಮೇಲೆ ಕುಳಿತು ನೂಲಬಹುದು ಅದು ಕದಿರಿನ ಉತ್ಪತ್ತಿಯ ಆರಂಭ (ಸೃಷ್ಟಿ ).ಅದೇ ರೀತಿ ಕದಿರಿಗೆ ಕಟ್ಟುವ ತೋರಣವು ವಿಷ್ಣು -ಇದು ಸ್ಥಿತಿ ಪ್ರಜ್ಞೆಯಾಗಿದೆ. ಲಯದ ಸಂಕೇತವಾದ ರುದ್ರನು ಕದಿರಿನ ಹೆಮ್ಮೊಳೆ-ಲೋಹದ ತುಂಡು ಕದಿರು ತೆಗೆಯುವ ಸಾಧನ. (spikes ) .ಇಲ್ಲಿಂದ ಉತ್ಪತ್ತಿಯಾಗುವ ಅರಿವೇ ಕದಿರು .ಭಕ್ತಿಯ ಕೈಯಲ್ಲಿ ರಾಟಿ ತಿರುಹಲಾಗಿ ನೂಲು ಸುತ್ತಿಕೊಳ್ಳಹತ್ತಿತು ಮತ್ತು ಕದಿರು ತುಂಬಿ ಬಿಟ್ಟಿತು. ಪ್ರಾಪಂಚಿಕ ಪಾರಮಾರ್ಥಿಕ ನಿಲುವುಗಳನ್ನು ಸಮನ್ವಯಿಸುವ ಪ್ರಯತ್ನ ಇದಾಗಿದೆ..ಅಗತ್ಯಕ್ಕಿಂತ ಹೆಚ್ಚಿನ ಆದಾಯ ತಿರಸ್ಕರಿಸಿದ ಶರಣೆ ರೆಮ್ಮವ್ವೆ ಹಾಗೇನಾದರೂ ಹೆಚ್ಚಿಗೆ ಕದಿರ ತೆಗೆದು ಆದಾಯಮಾಡಿಕೊಂಡರೆ ತನ್ನ ಲಿಂಗವೆಂಬ ಗಂಡ ತನ್ನನ್ನು ಕುಟ್ಟಿಹ ಶಿಕ್ಷಿಸುವ ಎಂದು ತನ್ನನ್ನು ತಾನೇ ಎಚ್ಚರಿಸಿಕೊಳ್ಳುತ್ತಾಳೆ.ತನ್ನ ಸಾಂಸಾರಿಕ ಬದುಕಿನಲ್ಲಿ ಪಾರಮಾರ್ಥಿಕ ಚಿಂತನೆ ಮಾಡುತ್ತಾ ಜೀವನ ಸಾಗಿಸಿದ ದಿಟ್ಟ ಶರಣೆ ಕದಿರ ರೆಮ್ಮವ್ವೆ. “ ಕದಿರು ರೆಮ್ಮವ್ವೆ – ಎರಡು ವಚನಗಳು ತನ್ನ ಪ್ರಾಪಂಚಿಕ ಬದುಕಿನ ಕುರಿತಾಗಿ ಎಂದು ಮೇಲು ನೋಟಕ್ಕೆ ಕಂಡರೂ ಅದರ ಹಿಂದಿನ ಆಧ್ಯಾತ್ಮಿಕ ಬೆಡಗನ್ನು ರೆಮ್ಮವ್ವೆ ಸೊಗಸಾಗಿ ವರ್ಣಿಸಿದ್ದಾಳೆ. ನಿರಾಕಾರ ಚೈತನ್ಯವೇ ತನ್ನ ಗಂಡವೆಂದು ಅಕ್ಕ ಮಹಾದೇವಿಯ ಹಾಗೆ ನಿರೂಪಿಸಿದ ವಚನಗಳ ಕಾಣಬಹುದು. ಎಲ್ಲರ ಹೆಂಡಿರು ತೊಳಸಿಕ್ಕುವರು; ಎನ್ನ ಗಂಡಂಗೆ ತೊಳಸುವುದಿಲ್ಲ. ಎಲ್ಲರ ಗಂಡಂದಿರಿಗೆ ಬಸಿವರು; ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು; ಎನ್ನ ಗಂಡಂಗೆ ಅಂಡದ ಬೀಜವಿಲ್ಲ. ಎಲ್ಲರ ಗಂಡಂದಿರು ಮೇಲೆ; ಎನ್ನ ಗಂಡ ಕೆಳಗೆ, ನಾ ಮೇಲೆ. ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. ಪ್ರತಿಯೊಬ್ಬ ಹೆಂಡತಿ ತಾನು ಪತಿಯ ದಾಸಿಯಾಗುವಳು .ಆದರೆ ಕದಿರ ರೆಮ್ಮವ್ವೆ ತಾನು ದಾಸಿಯಾಗುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾಳೆ.ಎಲ್ಲ ಗಂಡಂದಿರರಿಂದ ಹೆಂಡತಿ ಬಸಿರಾಗುವಳು.ಆದರೆ ತಾನು ತನ್ನ ಗಂಡನಿಗೆ ಕೇವಲ ಬಸಿರಾಗುವುದಕ್ಕೆ ಬದುಕಿಲ್ಲ ಎಂದಿದ್ದಾಳೆ. ತನ್ನ ಗಂಡ ಕೇವಲ ವಿಷಯಾದಿಗಳ ಹುಟ್ಟು ಸಾವಿಗೆ ಕಾರಣವಾಗುವ ವ್ಯಕ್ತಿಯಲ್ಲ ಎಂದು ನಿರೂಪಿಸಿದ್ದಾಳೆ.ಎಲ್ಲ ಗಂಡರಿಗೆ ಉತ್ಪತ್ತಿಯ ಬೀಜವಿದೆ ಆದರೆ ತನ್ನ ಗಂಡನಿಗೆ ಅಂಡದ ಅಂದರೆ ಕೇವಲ ಉತ್ಪತಿಗೆ ಬೇಕಾದ ಬೀಜ (fertile ) ಇಲ್ಲವೆನ್ನುತ್ತಾಳೆ.ಎಲ್ಲರ ಗಂಡ ಮೇಲೆ ಎಂದು ಸಾರುವ ಭಾರತೀಯ ಮಹಿಳೆಯರಿಗೆ ಕದಿರ ರೆಮ್ಮವ್ವೆ ಸವಾಲಾಗುತ್ತಾಳೆ.ತನ್ನ ಗಂಡ ಕೆಳಗೆ ತಾನು ಮೇಲೆ ಎಂದು ಹೆಮ್ಮೆಯಿಂದ ಹೇಳುವ ಕದಿರ ರೆಮ್ಮವ್ವೆ ತಾನು ಲಿಂಗ ಭೇದ ನಿರಾಕರಿಸಿ ನಿರಾಕಾರ ಸ್ವರೂಪದ ಸಾಕಾರದ ಲಿಂಗವೇ ತನ್ನ ಗಂಡ ಎಂದು ಹೇಳಿಕೊಳ್ಳುತ್ತಾಳೆ. ಎಲ್ಲರ ಗಂಡಂದಿರು ಪರದಳವಿಭಾಡರು; ಎನ್ನ ಗಂಡ ಮನದಳವಿಭಾಡ. ಎಲ್ಲರ ಗಂಡಂದಿರು ಗಜವೇಂಟೆಕಾರರು; ಎನ್ನ ಗಂಡ ಮನವೇಂಟೆಕಾರ. ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು; ಎನ್ನ ಗಂಡ ತಾರದೆ ಇಕ್ಕಿಸಿಕೊಂಬ. ಎಲ್ಲರ ಗಂಡಂದಿರಿಗೆ ಮೂರು, ಎನ್ನ ಗಂಡಂಗೆ ಅದೊಂದೆ; ಅದೊಂದೂ ಸಂದೇಹ,ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. ಕದಿರ ರೆಮ್ಮವ್ವೆ ತನ್ನ ಮತ್ತು ಇತರ ಭವಿಗಳ ಗಂಡಂದಿರ ಗುಣ ಸ್ವಭಾವಗಳನ್ನು ವಿವರಿಸುತ್ತಾ,ತನ್ನ ಗಂಡನಿಗೂ ಮತ್ತು ಇತರ ಮಹಿಳೆಯರ ಗಂಡಂದಿರರಿಗೂ ಇರುವ ವ್ಯತ್ಯಾಸವನ್ನು ಮತ್ತೆ ಮತ್ತೆ ಕೆಣಕಿದ್ದಾಳೆ . ಎಲ್ಲರ ಗಂಡಂದಿರರು ಪರರ ಅಳಲನ್ನು ವಿನಾಶ ಮಾಡಿದರೆ ,ತನ್ನ ಗಂಡ ತನ್ನ ಮನದ ಅಳಲನ್ನು ನಾಶ ಮಾಡುತ್ತಾನೆ .ಎಲ್ಲರ ಗಂಡರು ಆನೆಯನ್ನು ಭೇಟೆಯಾಡಿದರೆ. ತನ್ನ ಗಂಡ ವಿಷಯಾದಿಗಳನ್ನು ತುಂಬಿದ ಮನದ ಭೇಟೆಯಾಡುವವನು.ಉಳಿದ ಗಂಡಂದಿರರು ತಂದದ್ದನ್ನು ತಿನ್ನುವವರು .ತನ್ನ ಗಂಡ ತಾರದೆ ತಿನ್ನುವವನು.ಎಲ್ಲರ ಗಂಡಂದಿರರು ಸೃಷ್ಟಿ ಸ್ಥಿತಿ ಲಯ -ಸ್ಥೂಲ ಸೂಕ್ಷ್ಮ ಹಾಗು ಕಾರಣ ಶರೀರಕ್ಕೆ ಅಂಟಿಕೊಂಡವ್ರು. ತನ್ನ ಗಂಡ ಮಾತ್ರ ಕಾರಣ ಶರೀರಕ್ಕೆ ನಿಂತ ಚೈತನ್ಯ ಚೇತನವೆನ್ನುತ್ತಾಳೆ ಕದಿರ ರೆಮ್ಮವ್ವೆ.. ತುಂಬಾ ಗಹನವಾದ ವಿಷಯವನ್ನು ಸಲೀಲಾಗಿ ಹೇಳುವ ಶರಣೆಯ ವಚನದಲ್ಲಿ ಅಕ್ಕ ಮಹಾದೇವಿಯ ಚೆನ್ನ ಮಲ್ಲಿಕಾರ್ಜುನನ್ನು ನೆನಯುವ ಧ್ವನಿ ಧೋರಣೆ ಎದ್ದು ಕಾಣುತ್ತದೆ.ಕದಿರ ರೆಮ್ಮವ್ವೆಯ ವಚನಗಳಲ್ಲಿ ತಾನು ಪ್ರಾಪಂಚಿಕ ಬದುಕಿಗೆ ಮಾತ್ರ ಸೀಮಿತವಲ್ಲ ತಾನು ಆಧ್ಯಾತ್ಮಿಕ ಪಾರಮಾರ್ಥಿಕ ಸುಖವನ್ನು ಉಣ್ಣಲು ಬಂದವಳು ಎಂದಿದ್ದಾಳೆ. ಹೀಗೆ ಲಿಂಗ ಭೇದವಳಿದು ತಾನೇ ಲಿಂಗವಾದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿದ ಅತ್ಯಂತ ಜ್ಞಾನಿ ಅವಿರಳ ವಚನಕಾರ್ತೆ ಕದಿರ ರೆಮ್ಮವ್ವೆ . ಕದಿರ ರೆಮ್ಮವ್ವೆಯ ಸಿಕ್ಕ ನಾಲ್ಕು ವಚನಗಳು ಅತ್ಯಂತ ಉತ್ಕೃಷ್ಟ ಚಿಂತನೆಯಿಂದ ಕೂಡಿವೆ.ಅವಳ ವಚನದ ಅಂಕಿತವು ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ”. ಗುಮ್ಮೆಶ್ವರ-ಇದು ಗುಹೇಶ್ವರ ಅಂಕಿತದ ಸಾಮ್ಯತೆ ಇದ್ದು ಪಾಠಾಂತರ ಸಮಯದಲ್ಲಿ ಇದು ಗುಮ್ಮೆಶ್ವರ ಆದ ಎಲ್ಲಾ ಸಾಧ್ಯತೆಗಳಿವೆ. ಕದಿರ ರೆಮ್ಮವ್ವೆ ಅಲ್ಲಮ ಪ್ರಭುವಿನ ಗರಡಿಯಲ್ಲಿ ಬೆಳೆದಳವಳು . ತನ್ನ ಒಂದು ವಚನದಲ್ಲಿ ತಾನು ಗುರು ಅಲ್ಲಮರ ಕಾರುಣ್ಯವೆಂದು ಹೇಳಿಕೊಂಡಿದ್ದಾಳೆ. —– ಎನ್ನ ಕಾರಣ ತನುವೆ ಪ್ರಭುದೇವರಯ್ಯಾ ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ . ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ ಎಂದು ಹೇಳಿ ತನ್ನ ಗುರುವಿನ ಮೇಲಿನ ಅಭಿಮಾನ ಗೌರವ ಮತ್ತು ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾಳೆ. ಈ ಕಾರಣದಿಂದ ಅವಳು ಅಲ್ಲಮ ಪ್ರಭುಗಳ ಆಪ್ತ ವಲಯದ ಸಹಾಯಕಿ, ಶಿಷ್ಯೆ ಎಂದು ಪರಿಗಣಿಸಬಹುದು. ನನ್ನ ಈ ತರ್ಕಕ್ಕೆ ಗ್ರಹಿಕೆಗೆ ಇನ್ನೊಂದು ಕೆಲವು ಕಾರಣಗಳಿವೆ . ಅವುಗಳಲ್ಲಿ ಕಲ್ಯಾಣ ಕ್ರಾಂತಿಯ ಮೊದಲು ಮತ್ತು ನಂತರ ಕೆಲ ಶರಣರು ಕಲ್ಯಾಣವನ್ನು ತೊರೆದರು ಎಂದು ನಮಗೆ ತಿಳಿದು ಬರುತ್ತದೆ. ಹೀಗೆ ಕಲ್ಯಾಣ ರಕ್ತ ಕ್ರಾಂತಿಯ ಮೊದಲೆ ಕಲ್ಯಾಣ ತೊರೆದವರಲ್ಲಿ ಅಕ್ಕ ಮಹಾದೇವಿ ಮತ್ತು ಅಲ್ಲಮರು . ಚರಿತ್ರೆ ಇತಿಹಾಸದಲ್ಲಿ ಲಭ್ಯವಿರುವ ಘಟನಗಳನ್ನಾಧರಿಸಿ ಶರಣರ ಮಾರ್ಗದ ಸಂಭಾವ್ಯತೆಯನ್ನು ನಿರ್ಧರಿಸಲಾಯಿತು. ಕಳೆದ ಮೂವತ್ತು ವರ್ಷದಿಂದ ನಾನು ಶರಣರ ಸಮಾಧಿಗಳನ್ನು ಅತ್ಯಂತ ಕೂತಹಲದಿಂದ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅಲ್ಲಮ ಪ್ರಭುಗಳು ತೇರದಾಳದಲ್ಲಿ ಐಕ್ಯರಾಗಿದ್ದಾರೆ ಅಲ್ಲಿ ಪ್ರಭುದೇವರ ಗದ್ದುಗೆ ಇದೆಯೆಂದು ಚಿಕ್ಕ ಬಾಲಕನಿಂದಲೂ ಕೇಳಿಸಿಕೊಂಡು ಬಂದಿದ್ದೆ.ಆದರೆ ತೇರದಾಳದಲ್ಲಿ ಅಲ್ಲಮರು ಕಲ್ಯಾಣ ತೊರೆದನಂತರ ಕೆಲಕಾಲ ತಂಗಿದ್ದರು ಎಂದು ಮುಂದೆ ಶ್ರೀಶೈಲಕ್ಕೆ ಹೋಗುತ್ತಾರೆ ಎಂದುತಿಳಿದು ಬರುತ್ತದೆ. ಅಲ್ಲಮ ಪ್ರಭುಗಳು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ
ಸಾವಿಲ್ಲದ ಶರಣರು ಮಾಲಿಕೆ- “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಶ್ರೇಷ್ಠ ಶಿವಯೋಗ ಸಾಧಕರು ಮಲೆ ಮಹದೇಶ್ವರ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ. ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ. ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರ ತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ). ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು: ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ ‘ಮಹದೇಶ್ವರ’ರಾಗಿ ಪ್ರಸಿದ್ಧಿ ಪಡೆದರು ಎಂಬ ಪ್ರತೀತಿ ಇದೆ. *ಅವತಾರ ಪುರುಷ: ಮಹದೇಶ್ವರರು ಯಾವುದೇ ಸಾಮಾನ್ಯ ಮಾನವನಂತೆ ಜನಿಸದೆ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಶ್ರೇಷ್ಠ ಚಿಂತಕ ಅನುಭವಿ. ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸಾರ ಮತ್ತು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿದರು.ಮಹದೇಶ್ವರ ಸ್ವಾಮಿಯ ಬಾಲ್ಯದ ಪವಾಡಗಳು ಅಥವಾ ಅವರು ಶ್ರೀಶೈಲದಿಂದ ಕರ್ನಾಟಕಕ್ಕೆ ಬಂದ ಇತಿಹಾಸದ ಬಗ್ಗೆ ಪುರಾಣ ಕಥನಗಳ ದಾಖಲೆಗಳಿವೆ. *ಹಿನ್ನೆಲೆ ಮತ್ತು ಸ್ಥಳ* ಪುರಾಣಮಹದೇಶ್ವರ ಸ್ವಾಮಿ: 14-15ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಹಾಗೂ ಶರಣ ಸಂಸ್ಕೃತಿಯ ಸಂತ ಶ್ರೀ ಮಹದೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಅಲ್ಲಿನ ಜನಪದಿಗರು ನಂಬಿದ್ದಾರೆ. *ತಪೋಭೂಮಿ ಮತ್ತು ಮುಕ್ತಿ:* ಮಹದೇಶ್ವರರು ಈ ಬೆಟ್ಟಗಳಲ್ಲಿ ತಪಸ್ಸು ಆಚರಿಸಿ, ಭಕ್ತರ ಕಷ್ಟಗಳನ್ನು ನಿವಾರಿಸಿ, ಕೊನೆಗೆ ಇಲ್ಲೇ ಲಿಂಗ ರೂಪದಲ್ಲಿ ಐಕ್ಯರಾದರು (ಸಮಾಧಿ ಹೊಂದಿದರು). ಹುಲಿ ವಾಹನ: ಜನಪದ ಕಾವ್ಯಗಳ ಪ್ರಕಾರ, ಬಾಲಯೋಗಿ ಮಹದೇಶ್ವರರು ಕಾಡಿನ ಹುಲಿಯನ್ನೇ ತಮ್ಮ ವಾಹನವಾಗಿಸಿಕೊಂಡು ಬೆಟ್ಟಗಳಲ್ಲಿ ಸಂಚರಿಸುತ್ತಿದ್ದರು.ಶ್ರವಣ ಸಂಹಾರ: ಈ ಭಾಗದಲ್ಲಿ ಜನರಿಗೆ ಹಿಂಸೆ ನೀಡುತ್ತಿದ್ದ ಕ್ರೂರ ರಾಜ ‘ಶ್ರವಣ’ನನ್ನು ಮಹದೇಶ್ವರರು ಸಂಹರಿಸಿ ಜನರನ್ನು ಮುಕ್ತಗೊಳಿಸಿದರು ಎಂಬ ಇತಿಹಾಸವಿದೆ. ಏಳು ಮಲೆಗಳು (ಬೆಟ್ಟಗಳು)ಮಲೆ ಮಹದೇಶ್ವರ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದಿಂದ ಆವೃತವಾದ ಏಳು ಬೆಟ್ಟಗಳ ಸಾಲನ್ನು ಒಳಗೊಂಡಿದೆ: ಆನೆಮಲೆ ಜೇನುಮಲೆ ಕಾಡುಮಲೆ ಕಾನುಮಲೆ ಪೊನ್ನಾಚಿಮಲೆ ಪಾವಲಮಲೆ (ಪವಲಮಲೆ) ಪಚ್ಚೆಮಲೆ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳುಲಿಂಗ ರೂಪದ ದರ್ಶನ: ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರರು ಸ್ವಯಂಭೂ ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಅಂತರಗಂಗೆ: ಬೆಟ್ಟದ ಸಮೀಪವಿರುವ ಒಂದು ಪವಿತ್ರ ನೀರಿನ ಸೆಲೆ. ಇಲ್ಲಿ ವರ್ಷದ ಯಾವುದೇ ಋತುವಿನಲ್ಲೂ ನೀರು ಬತ್ತುವುದಿಲ್ಲ. ಭಕ್ತರು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ದೊಡ್ಡ ನಂದಿ ವಿಗ್ರಹ: ದೇವಾಲಯದ ಆವರಣದಲ್ಲಿ ಶಿವನ ವಾಹನವಾದ ನಂದಿಯ ಬೃಹತ್ ಮೂರ್ತಿಯಿದೆ. ಜಾನಪದ ಕಾವ್ಯ: ಮಲೆ ಮಹದೇಶ್ವರ ಕಾವ್ಯ ಅಥವಾ ತಂಬೂರಿ ಶೈಲಿಯ ಗಾಯನವು ಕರ್ನಾಟಕದ ಪ್ರಸಿದ್ಧ ಜಾನಪದ ಪರಂಪರೆಯಾಗಿದೆ. ಭಕ್ತರು ಇಂದಿಗೂ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುತ್ತಾ ಮಾದಪ್ಪನ ಕಥೆಗಳನ್ನು ಹಾಡುತ್ತಾರೆ. ಕಾಡಿನ ಸೋಲಿಗರು ಮತ್ತು ಇತರೆ ಬುಡಕಟ್ಟಿನ ಜನರಿಗೆ ಲಿಂಗ ಸಂಸ್ಕಾರ ನೀಡಿ ಕಾಯಕ ದಾಸೋಹ ಗುರು ಲಿಂಗ ಜಂಗಮ ತತ್ವಗಳನ್ನು ಪರಿಚಯಿಸಿದ ಸಾವಿಲ್ಲದ ಶ್ರೇಷ್ಠ ಶಿವಯೋಗ ಸಾಧಕರು ಮತ್ತು ಶರಣರು. ಬಸವ ಪರಂಪರೆಯ ಶ್ರೇಷ್ಠ ಚಿಂತಕರ ಬದುಕಿನ ತಿರುಳನ್ನು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ತಿರುಗಾಡಿ ಬಸವ ತತ್ವ ಅಧ್ಯಯನ ಶಿವಯೋಗ ಸಾಧನೆಯನ್ನು ಅಲ್ಲಿನ ಬುಡಕಟ್ಟು ಮುಂತಾದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು. ________________________’ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣರ ಸಂಗಾತಿ ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕರ್ನಾಟಕದ ಏಕೀಕರಣದ ರೂವಾರಿ ಅನಕೃ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕಾದಂಬರಿ ಸಾರ್ವಭೌಮ ಏಕೀಕರಣದ ರೂವಾರಿ ಅನಕೃ. ಕನ್ನಡ ಸಾಹಿತ್ಯ ಲೋಕದಲ್ಲಿ ‘ಕಾದಂಬರಿ ಸಾರ್ವಭೌಮ’ ಎಂದೇ ಪ್ರಖ್ಯಾತರಾದ ಅ.ನ. ಕೃಷ್ಣರಾಯ (ಅನಕೃ) ಅವರು ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರು ಮತ್ತು ಅಪ್ಪಟ ಕನ್ನಡಾಭಿಮಾನಿ ಹೋರಾಟಗಾರರು. ಅವರ ಜೀವನ ಚರಿತ್ರೆಯ ಪ್ರಮುಖ ಅಂಶಗಳು ಇಲ್ಲಿವೆ: ಜನನ ಮತ್ತು ಬಾಲ್ಯಪೂರ್ಣ ಹೆಸರು: ಅರಕಲಗೂಡು ನರಸಿಂಗರಾವ್ ಕೃಷ್ಣರಾವ್. ಜನನ: ಮೇ 9, 1908 ರಂದು ಕೋಲಾರದಲ್ಲಿ ಜನಿಸಿದರು. ಪೋಷಕರು: ತಂದೆ ನರಸಿಂಗರಾಯರು,ತಾಯಿ ಅನ್ನಪೂರ್ಣಮ್ಮನವರು. ಇವರ ಮೂಲ ಹಾಸನ ಜಿಲ್ಲೆಯ ಅರಕಲಗೂಡು. ಶಿಕ್ಷಣ: ಪ್ರಾಥಮಿಕ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿ, ನಂತರ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಸಾಹಿತ್ಯಿಕ ಕೊಡುಗೆಗಳುಅನಕೃ ಅವರು ಕನ್ನಡ ಸಾಹಿತ್ಯಕ್ಕೆ ಸುಮಾರು 200ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ: ಪ್ರಗತಿಶೀಲ ಸಾಹಿತ್ಯ: ಕನ್ನಡದಲ್ಲಿ ‘ಪ್ರಗತಿಶೀಲ ಸಾಹಿತ್ಯ’ ಚಳವಳಿಯನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಮುಖ ಕಾದಂಬರಿಗಳು: ಸಂಧ್ಯಾ ರಾಗ (ಅವರ ಅತ್ಯಂತ ಜನಪ್ರಿಯ ಕೃತಿ), ಮಂಗಲಸೂತ್ರ, ನಟಸಾರ್ವಭೌಮ ಇತ್ಯಾದಿ.ಇತರ ಪ್ರಕಾರಗಳು: ಕಾದಂಬರಿಗಳಲ್ಲದೆ ನಾಟಕಗಳು (ಬಣ್ಣದ ಬೀಸಣಿಗೆ),ಜೀವನ ಚರಿತ್ರೆಗಳು (ಕನ್ನಡ ಕುಲರಸಿಕರು), ಮತ್ತು ಆತ್ಮಕಥೆ (ಬರಹಗಾರನ ಬದುಕು, ನನ್ನನ್ನು ನಾನೇ ಕಂಡೆ) ಬರೆದಿದ್ದಾರೆ.ಕನ್ನಡ ಪರ ಹೋರಾಟಅನಕೃ ಅವರು ಕೇವಲ ಸಾಹಿತಿಯಾಗಿರದೆ, ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ಹೋರಾಡಿದ ಧೀಮಂತ ನಾಯಕ: ಕನ್ನಡ ಅಸ್ಮಿತೆ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಸಿಗಬೇಕು ಎಂದು ಪ್ರತಿಪಾದಿಸಿದರು.ಸಂಗೀತ ಮತ್ತು ಚಿತ್ರರಂಗ: ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳಿಗಾಗಿ ಮತ್ತು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಬಲವಾದ ಚಳವಳಿ ನಡೆಸಿದರು. ಶುದ್ಧ ಕನ್ನಡಿಗ: ಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅನಕೃ ಅವರನ್ನು “ಶುದ್ಧ ಕನ್ನಡಿಗ” ಎಂದು ಬಣ್ಣಿಸಿದ್ದಾರೆ. ಗೌರವ ಮತ್ತು ಪ್ರಶಸ್ತಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ: 1960ರಲ್ಲಿ ಮಣಿಪಾಲದಲ್ಲಿ ನಡೆದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.ಬಿರುದು: ಇವರ ಅದ್ಭುತ ಕಾದಂಬರಿ ರಚನಾ ಶಕ್ತಿಯಿಂದಾಗಿ ‘ಕಾದಂಬರಿ ಸಾರ್ವಭೌಮ’ ಎಂಬ ಬಿರುದು ಲಭಿಸಿದೆ. ಅನಕೃ ಅವರು ಜುಲೈ 8, 1971 ರಂದು ನಿಧನರಾದರು. ಅವರ ಸಾಹಿತ್ಯ ಮತ್ತು ಹೋರಾಟ ಇಂದಿಗೂ ಕನ್ನಡಿಗರಿಗೆ ಸ್ಫೂರ್ತಿಯಾಗಿದೆ. *ಕರ್ನಾಟಕ ಏಕೀಕರಣಕ್ಕೆ ಕೊಡುಗೆ* ಅನಕೃ (ಅ.ನ. ಕೃಷ್ಣರಾಯರು) ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ರೂವಾರಿಗಳಲ್ಲಿ ಒಬ್ಬರು. ಹರಿದು ಹಂಚಿಹೋಗಿದ್ದ ಕನ್ನಡದ ಭಾಗಗಳನ್ನು ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸುವಲ್ಲಿ ಅವರು ಸಾಹಿತ್ಯ ಮತ್ತು ಹೋರಾಟ ಎರಡರ ಮೂಲಕವೂ ದೊಡ್ಡ ಕೊಡುಗೆ ನೀಡಿದ್ದಾರೆ: ಜನಜಾಗೃತಿ ಮತ್ತು ಭಾಷಣಗಳು:ಕರ್ನಾಟಕದ ಏಕೀಕರಣಕ್ಕೆ ಹಳೆಯ ಮೈಸೂರು ಭಾಗದಲ್ಲಿ ಆರಂಭದಲ್ಲಿ ಹೆಚ್ಚಿನ ಬೆಂಬಲವಿರಲಿಲ್ಲ. ಇಂತಹ ಸಂದರ್ಭದಲ್ಲಿ ಅನಕೃ ಅವರು ಉತ್ತರ ಕರ್ನಾಟಕದ ಪ್ರತಿಯೊಂದು ಊರಿಗೂ ಪ್ರವಾಸ ಮಾಡಿ, ತಮ್ಮ ವಾಗ್ಝರಿಯಿಂದ ಜನರಲ್ಲಿ ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿದರು. ಸಾಹಿತ್ಯಿಕ ಪ್ರಭಾವ: ತಮ್ಮ ಬರಹಗಳ ಮೂಲಕ ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ಸಾಹಿತಿಗಳು ರಾಜಕೀಯ ನಾಟಕಗಳಿಂದ ಹೊರಬಂದು ಜನರ ಭಾವನೆಗಳನ್ನು ಪ್ರತಿನಿಧಿಸಬೇಕು ಎಂದು ನಂಬಿದ್ದ ಅವರು, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದರು. ಸಂಘಟನೆಗಳ ನೇತೃತ್ವ: ಅವರು ‘ಕರ್ನಾಟಕ ಸಂಯುಕ್ತ ರಂಗ’ ದಂತಹ ಸಂಘಟನೆಗಳ ಅಧ್ಯಕ್ಷರಾಗಿ ಹೋರಾಟವನ್ನು ಮುನ್ನಡೆಸಿದರು. 1945ರಲ್ಲಿ ಮುಧೋಳದಲ್ಲಿ ನಡೆದ ಕರ್ನಾಟಕ ಏಕೀಕರಣ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಕನ್ನಡದ ಪ್ರಾಬಲ್ಯಕ್ಕಾಗಿ ಹೋರಾಟ: ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು ಎಂದು ಅವರು ಸತತವಾಗಿ ಹೋರಾಡಿದರು. ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನ ಮತ್ತು ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳ ಅಳವಡಿಕೆಗಾಗಿ ಅವರು ನಡೆಸಿದ ಚಳವಳಿಗಳು ಏಕೀಕರಣದ ಆಶಯಕ್ಕೆ ಸಾಂಸ್ಕೃತಿಕ ಬಲ ನೀಡಿದವು. ಧೀಮಂತ ನಿಲುವು:ಕನ್ನಡದ ಹಿತಾಸಕ್ತಿಗೆ ಧಕ್ಕೆಯಾದಾಗ ಅವರು ಎಂದಿಗೂ ರಾಜಿಯಾಗುತ್ತಿರಲಿಲ್ಲ. ಕನ್ನಡ-ಹಿಂದಿ ವಾಗ್ವಾದದ ಸಂದರ್ಭದಲ್ಲಿ ಕನ್ನಡದ ಪರವಾದ ನಿಲುವು ತಳೆದು ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕತ್ವವನ್ನೇ ತ್ಯಜಿಸಿದರು.ಅನಕೃ ಅವರು ಕೇವಲ ಸಾಹಿತಿಯಾಗಿ ಉಳಿಯದೆ, ‘ಕರ್ನಾಟಕತ್ವ’ ದ ದರ್ಶನವನ್ನು ಜನರಿಗೆ ಮಾಡಿಸಿದ ಕ್ರಾಂತಿಕಾರಿ ಹೋರಾಟಗಾರರಾಗಿ ಇಂದಿಗೂ ಸ್ಮರಣೀಯರಾಗಿದ್ದಾರೆ. ಮನ್ಸೂರು ಅವರಿಗೆ ವಚನ ಹಾಡಲು ಪ್ರೇರಣೆ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ವಚನಗಳನ್ನು ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ಹಾಡಲು ಪ್ರೇರಣೆ ನೀಡಿದವರಲ್ಲಿ ಅ.ನ. ಕೃಷ್ಣರಾಯರು (ಅನಕೃ) ಅತ್ಯಂತ ಪ್ರಮುಖರು.ಅನಕೃ ಅವರು ಮನ್ಸೂರರಿಗೆ ವಚನ ಗಾಯನದತ್ತ ಪ್ರೇರೇಪಿಸಿದ ಸಂದರ್ಭದ ಪ್ರಮುಖ ಅಂಶಗಳು ಇಲ್ಲಿವೆ: ವಚನಗಳ ಮಹತ್ವದ ಪರಿಚಯ: ಮನ್ಸೂರರು ಜೈಪುರ ಅತ್ರೌಲಿ ಘರಾಣೆಯ ಕಟ್ಟುನಿಟ್ಟಾದ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದರು. ಆ ಕಾಲದಲ್ಲಿ ವಚನಗಳನ್ನು ಶಾಸ್ತ್ರೀಯ ಸಂಗೀತದ ವೇದಿಕೆಗಳಲ್ಲಿ ಹೆಚ್ಚು ಬಳಸುತ್ತಿರಲಿಲ್ಲ. ಅನಕೃ ಅವರು ವಚನಗಳಲ್ಲಿನ ಆಳವಾದ ತತ್ವಜ್ಞಾನ ಮತ್ತು ಸಾಹಿತ್ಯದ ಸೌಂದರ್ಯವನ್ನು ಮನ್ಸೂರರಿಗೆ ಮನವರಿಕೆ ಮಾಡಿಕೊಟ್ಟರು. ಕರ್ನಾಟಕತ್ವದ ಜಾಗೃತಿ: ಕನ್ನಡದ ಅಸ್ಮಿತೆಗಾಗಿ ಹೋರಾಡುತ್ತಿದ್ದ ಅನಕೃ, ಕನ್ನಡದ ವಚನಗಳನ್ನು ಶಾಸ್ತ್ರೀಯವಾಗಿ ಹಾಡುವುದರಿಂದ ಅವುಗಳಿಗೆ ವಿಶ್ವವ್ಯಾಪಿ ಗೌರವ ಸಿಗುತ್ತದೆ ಎಂದು ಮನ್ಸೂರರನ್ನು ಪ್ರೋತ್ಸಾಹಿಸಿದರು. ರಾಗಗಳ ಅನ್ವಯ: ವಚನಗಳ ಭಾವಕ್ಕೆ ತಕ್ಕಂತೆ ಸೂಕ್ತವಾದ ರಾಗಗಳನ್ನು (ಉದಾಹರಣೆಗೆ ‘ಬಹಾದೂರಿ ತೋಡಿ’ ಅಥವಾ ‘ಖಟ್’ ರಾಗಗಳಲ್ಲಿ ವಚನಗಳನ್ನು ಹಾಡುವುದು) ಆಯ್ಕೆ ಮಾಡಿಕೊಳ್ಳುವಲ್ಲಿ ಅನಕೃ ಅವರ ಒಡನಾಟ ಮನ್ಸೂರರಿಗೆ ಸಹಕಾರಿಯಾಯಿತು. ಜನಪ್ರಿಯತೆ: ಅನಕೃ ಅವರ ಪ್ರೇರಣೆಯಿಂದ ಮನ್ಸೂರರು ವಚನಗಳನ್ನು ಹಾಡಲು ಪ್ರಾರಂಭಿಸಿದ ಮೇಲೆ, ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ನಂತಹ ವಚನಗಳು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾದವು.ಹೀಗೆ, ಮಲ್ಲಿಕಾರ್ಜುನ ಮನ್ಸೂರರ ಗಾಯನದಲ್ಲಿ ವಚನ ಸಾಹಿತ್ಯವು ಶಾಸ್ತ್ರೀಯ ಘನತೆಯನ್ನು ಪಡೆಯಲು ಅನಕೃ ಅವರ ಸ್ನೇಹ ಮತ್ತು ಪ್ರೋತ್ಸಾಹವೇ ತಳಹದಿಯಾಯಿತು. 1967 ರಲ್ಲಿ ಶ್ರೀ ಬಸವೇಶ್ವರ ಅವರ ಅಷ್ಟ ಶತಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರ ವರ್ಷವಿಡಿ ಈ ಕಾರ್ಯಕ್ರಮವನ್ನು ಮಾಡ ಬೇಕೆಂದು ನಿರ್ಧರಿಸಿ ಶ್ರೀ ಬಸವೇಶ್ವರ ಎಂಬ ಆಂಗ್ಲ ಭಾಷೆಯಲ್ಲಿ ಬಸವಣ್ಣನವರ ಬಗ್ಗೆ ಎಲ್ಲಾ ಸಾಹಿತಿಗಳಿಗೆ ಬರೆಯಲು ಹೇಳಿ ಬಸವಣ್ಣನವರ ಜೊತೆಗೆ ಇತರ ದಾರ್ಶನಿಕರನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಸುಂದರ ಲೇಖನ ಬರೆಯಲು ಸ್ವತಃ ಕರ್ನಾಟಕದ ಅಂದಿನ ಮುಖ್ಯ ಮಂತ್ರಿ ಶ್ರೀ ಎಸ್ ನಿಜಲಿಂಗಪ್ಪನವರು ಎಲ್ಲಾ ಸಾಹಿತಿಗಳಿಗೆ ಪತ್ರ ಬರೆದರು.ಅದರಂತೆ ಶ್ರೀ ಎಸ್ ನಿಜಲಿಂಗಪ್ಪನವರು ಶ್ರೀ ಅನಕೃ ಅವರಿಗೆ ಪತ್ರ ಬರೆದು ನೀವು ಬಸವಣ್ಣ ಮತ್ತು ಚತುರಾಚಾರ್ಯರ ಬಗ್ಗೆ ಲೇಖನ ಬರೆಯಲು ಹೇಳಿದರು.ಆಗ ಶ್ರೀ ಅನಕೃ ಅವರುಜಗತ್ತಿನಲ್ಲಿ ಬಸವಣ್ಣನವರಿಗೆ ಯಾರನ್ನೂ ಹೋಲಿಸಲಾಗದು. ಒಂದು ವೇಳೆ ಹೋಲಿಸುವುದಿದ್ದರೆ ಅದು ಇನ್ನೊಬ್ಬ ಬಸವಣ್ಣನವರಿಗೆ ಮಾತ್ರ ಎಂದು ಹೇಳಿದರು. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಿಟ್ಟ ಧೀಮಂತ ಸಾಹಿತಿ ಅನಕೃ ನಿತ್ಯ ಸ್ಮರಣೀಯರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರುಮಾಲಿಕೆ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರುಮಾಲಿಕೆ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ದೇಶವು ಕಂಡ ಅಪ್ರತಿಮ ರಾಜಕಾರಣಿ ಸ್ವಾತಂತ್ರ್ಯ ಹೋರಾಟಗಾರ ಬಡವರ ಬಂಧು ಧೀಮಂತ ನಾಯಕ ಮಹಾತ್ಮ ಗಾಂಧಿಯವರ ಆಪ್ತ ಶ್ರೀ ಕುಮಾರ ಸ್ವಾಮಿ ಕಾಮರಾಜ ಭಾರತದ ರಾಜಕಾರಣದಲ್ಲಿ ‘ಕಿಂಗ್ ಮೇಕರ್’ ಎಂದೇ ಖ್ಯಾತರಾದ ಕುಮಾರಸ್ವಾಮಿ ಕಾಮರಾಜ್ (ಕೆ. ಕಾಮರಾಜ್) ಜನನ: ಜುಲೈ ೧೫, ೧೯೦೩ ರಂದು ತಮಿಳುನಾಡಿನ ವಿರುಧುನಗರದಲ್ಲಿ (ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ) ಜನಿಸಿದರು. ತಂದೆ-ತಾಯಿ: ಇವರ ತಂದೆ ಕುಮಾರಸ್ವಾಮಿ ನಾಡಾರ್ ಮತ್ತು ತಾಯಿ ಶಿವಕಾಮಿ ಅಮ್ಮಾಳ್. ವೃತ್ತಿ: ಇವರ ತಂದೆ ತೆಂಗಿನಕಾಯಿ ವ್ಯಾಪಾರಿಯಾಗಿದ್ದರು. ಕಾಮರಾಜ್ ಅವರಿಗೆ ಕೇವಲ ೬ ವರ್ಷ ವಯಸ್ಸಿದ್ದಾಗ ತಂದೆ ನಿಧನರಾದರು. ಬಾಲ್ಯ ಮತ್ತು ಶಿಕ್ಷಣ: ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿ ತಾಯಿಯ ಮೇಲೆ ಬಿತ್ತು. ಬಡತನದ ಕಾರಣದಿಂದಾಗಿ ಕಾಮರಾಜ್ ಅವರು ಕೇವಲ ೧೨ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟು, ಸೋದರಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಮುಖ್ಯಮಂತ್ರಿಯಾಗಿ: ತಮಿಳುನಾಡಿನ ೩ನೇ ಮುಖ್ಯಮಂತ್ರಿಯಾಗಿ (೧೯೫೪–೧೯೬೩) ಸೇವೆ ಸಲ್ಲಿಸಿದರು. ಇವರ ಅವಧಿಯಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದ್ದು ಅತ್ಯಂತ ಪ್ರಮುಖ ಸಾಧನೆಯಾಗಿದೆ. ಎಸ್. ನಿಜಲಿಂಗಪ್ಪನವರ ಜೊತೆಗಿನ ಒಡನಾಟ ಕೆ. ಕಾಮರಾಜ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಆಪ್ತ ಒಡನಾಟ ಹೊಂದಿದ್ದರು: ಉತ್ತಮ ಸ್ನೇಹಿತರಾಗಿದ್ದರು. ಸಿಂಡಿಕೇಟ್ ನಾಯಕರು: 1960ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಒಳಗೆ ಪ್ರಭಾವಿ ನಾಯಕರ ಗುಂಪಾಗಿದ್ದ ಸಿಂಡಿಕೇಟ್’ನಲ್ಲಿ ಕಾಮರಾಜ್ ಮತ್ತು ನಿಜಲಿಂಗಪ್ಪ ಪ್ರಮುಖ ಸದಸ್ಯರಾಗಿದ್ದರು. ಇವರಿಬ್ಬರೂ ಪಕ್ಷದ ಆಡಳಿತ ಮತ್ತು ಪ್ರಧಾನ ಮಂತ್ರಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಪ್ರಧಾನಿಗಳ ಆಯ್ಕೆ: ನೆಹರೂ ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನಂತರ ಇಂದಿರಾ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ತರುವಲ್ಲಿ ಈ ಇಬ್ಬರು ನಾಯಕರು ಒಟ್ಟಾಗಿ ಶ್ರಮಿಸಿದ್ದರು. ಕಾಂಗ್ರೆಸ್ ವಿಭಜನೆ (೧೯೬೯): ಇಂದಿರಾ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯ ಉಂಟಾದಾಗ, ಕಾಂಗ್ರೆಸ್ ಪಕ್ಷವು ಎರಡು ಹೋಳಾಯಿತು. ಆಗ ಕಾಮರಾಜ್ ಮತ್ತು ನಿಜಲಿಂಗಪ್ಪ ಅವರು ಹಳೆಯ ಕಾಂಗ್ರೆಸ್ ನಾಯಕರ ಗುಂಪಾದ ಕಾಂಗ್ರೆಸ್ (O) ಅಡಿಯಲ್ಲಿ ಒಟ್ಟಾಗಿ ನಿಂತರು. ಆದರ್ಶಗಳು: ಇಬ್ಬರೂ ನಾಯಕರು ತಮ್ಮ ಪ್ರಾಮಾಣಿಕತೆ, ಸರಳತೆ ಮತ್ತು ಸಾಮಾನ್ಯ ಜನರ ಬದುಕನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದರಿಂದ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು.ಕಾಮರಾಜ್ ಅವರನ್ನು ಇಂದಿಗೂ ತಮಿಳುನಾಡಿನ ಶಿಕ್ಷಣ ಕ್ರಾಂತಿಯ ಹರಿಕಾರ ಎಂದು ಸ್ಮರಿಸಲಾಗುತ್ತದೆ. ಇವರಿಗೆ ೧೯೭೬ರಲ್ಲಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು. ಕೆ. ಕಾಮರಾಜ್ ಅವರ ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯ ಜೀವನದ ಪ್ರಮುಖ ಘಟ್ಟಗಳು :ಸ್ವಾತಂತ್ರ್ಯ ಹೋರಾಟ (೧೯೨೦–೧೯೪೭) ಕಾಮರಾಜ್ ಅವರು ಕೇವಲ ೧೬ನೇ ವಯಸ್ಸಿನಲ್ಲಿ ಕಾಂಗ್ರೆಸ್ ಸೇರುವ ಮೂಲಕ ದೇಶದ ಸೇವೆಗೆ ಧುಮುಕಿದರು. ಪ್ರೇರಣೆ: ೧೯೧೯ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಅವರನ್ನು ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿಸಿತು. ಚಳುವಳಿಗಳಲ್ಲಿ ಭಾಗವಹಿಸುವಿಕೆ: ಅವರು ಅಸಹಕಾರ ಚಳುವಳಿ (೧೯೨೧), ನಾಗಪುರ ಧ್ವಜ ಸತ್ಯಾಗ್ರಹ (೧೯೨೩), ಮತ್ತು ಸತ್ಯಮೂರ್ತಿಯವರ ನಾಯಕತ್ವದಲ್ಲಿ ನಡೆದ ಅನೇಕ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದರು. ಉಪ್ಪಿನ ಸತ್ಯಾಗ್ರಹ: ೧೯೩೦ರಲ್ಲಿ ರಾಜಗೋಪಾಲಾಚಾರಿ ಅವರ ನೇತೃತ್ವದಲ್ಲಿ ನಡೆದ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಮೊದಲ ಬಾರಿಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಕ್ವಿಟ್ ಇಂಡಿಯಾ ಚಳುವಳಿ: ೧೯೪೨ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಿ ಮೂರು ವರ್ಷಗಳ ಕಾಲ ಅಮರಾವತಿ ಜೈಲಿನಲ್ಲಿ ಇರಿಸಲಾಯಿತು. ತಮ್ಮ ಜೀವಿತಾವಧಿಯಲ್ಲಿ ಅವರು ಒಟ್ಟು ಆರು ಬಾರಿ ಸುಮಾರು ಎಂಟು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ರಾಜಕೀಯ ಜೀವನ ಮತ್ತು ಸಾಧನೆಗಳು (೧೯೪೭–೧೯೭೫)ಸ್ವಾತಂತ್ರ್ಯದ ನಂತರ ಕಾಮರಾಜ್ ಅವರು ತಮಿಳುನಾಡು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಪ್ರತಿಮ ನಾಯಕರಾಗಿ ಬೆಳೆದರು. ತಮಿಳುನಾಡು ಮುಖ್ಯಮಂತ್ರಿಯಾಗಿ (೧೯೫೪–೧೯೬೭): ಒಂಬತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಇವರ ಅವಧಿಯನ್ನು ತಮಿಳುನಾಡಿನ ‘ಸುವರ್ಣ ಯುಗ’ ಎನ್ನಲಾಗುತ್ತದೆ.ಶಿಕ್ಷಣ ಕ್ರಾಂತಿ: ಬಡ ಮಕ್ಕಳು ಶಾಲೆಗೆ ಬರುವಂತೆ ಮಾಡಲು ವಿಶ್ವದಲ್ಲೇ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಉಚಿತ ಶಿಕ್ಷಣವನ್ನು ಜಾರಿಗೆ ತಂದರು. ಕೈಗಾರಿಕೆ ಮತ್ತು ನೀರಾವರಿ: ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ಕೃಷಿಗೆ ನೆರವಾದರು ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಬಲವಾದ ಅಡಿಪಾಯ ಹಾಕಿದರು. ಕಾಮರಾಜ್ ಯೋಜನೆ (K-Plan): ೧೯೬೪ರಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಅಧಿಕಾರ ಬಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಪ್ರಸ್ತಾಪಿಸಿದರು. ಸ್ವತಃ ತಾವೇ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾದರು.ಕಿಂಗ್ ಮೇಕರ್: ಕಾಂಗ್ರೆಸ್ ಅಧ್ಯಕ್ಷರಾಗಿ (೧೯೬೪–೧೯೬೬), ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಅವರನ್ನ ಪ್ರಧಾನ ಮಂತ್ರಿಗಳನ್ನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸರಳತೆ: ಅಧಿಕಾರದಲ್ಲಿದ್ದರೂ ಅತ್ಯಂತ ಸಾಮಾನ್ಯ ಜೀವನ ನಡೆಸುತ್ತಿದ್ದ ಇವರು, ನಿಧನರಾದಾಗ ಅವರ ಬಳಿ ಕೇವಲ ಕೆಲವು ಜೊತೆ ಬಟ್ಟೆಗಳು ಮತ್ತು ಅಲ್ಪ ಹಣ ಮಾತ್ರ ಇತ್ತು.ಇವರ ಅಗಾಧ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು ೧೯೭೬ ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕೆ. ಕಾಮರಾಜರ ಸರಳತೆ ಇಡೀ ದೇಶಕ್ಕೆ ಮಾದರಿಯಾದದ್ದು. ಅಧಿಕಾರದ ಉತ್ತುಂಗದಲ್ಲಿದ್ದರೂ ಅವರು ಸಾಮಾನ್ಯ ಮನುಷ್ಯನಂತೆ ಬದುಕಿದ ರೀತಿ ಅನನ್ಯ. ಅವರ ಸರಳ ಬದುಕಿನ ಕೆಲವು ಆಸಕ್ತಿದಾಯಕ ಅಂಶಗಳು ೧. ವಸ್ತ್ರವಿನ್ಯಾಸ ಮತ್ತು ವಾಸಸ್ಥಳ:ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೇವಲ ಒಂದು ಬಿಳಿ ಶರ್ಟ್ ಮತ್ತು ವೇಷ್ಟಿ (ಧೋತಿ) ಧರಿಸುತ್ತಿದ್ದರು. ಇಡೀ ಜೀವನದಲ್ಲಿ ಅವರು ಎಂದಿಗೂ ಆಡಂಬರದ ಬಟ್ಟೆಗಳನ್ನು ಬಳಸಲಿಲ್ಲ.ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಒಂಬತ್ತು ವರ್ಷಗಳ ಕಾಲವೂ ಅವರು ಸರಕಾರಿ ಬಂಗಲೆಯಲ್ಲಿ ವಾಸಿಸದೆ, ತಮ್ಮ ಹಳೆಯ ಪುಟ್ಟ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದರು. ೨. ಆಸ್ತಿ-ಪಾಸ್ತಿ ಇಲ್ಲದ ನಾಯಕ:ರಾಷ್ಟ್ರ ರಾಜಕಾರಣದಲ್ಲಿ ‘ಕಿಂಗ್ ಮೇಕರ್’ ಎಂದು ಕರೆಸಿಕೊಂಡರೂ, ಅವರು ನಿಧನರಾದಾಗ ಅವರ ಬಳಿ ಇದ್ದದ್ದು ಕೇವಲ ಎರಡು ಜೊತೆ ಬಟ್ಟೆಗಳು, ಕೆಲವು ಪುಸ್ತಕಗಳು ಮತ್ತು ಕೇವಲ ೧೩೦ ರೂಪಾಯಿಗಳು ಮಾತ್ರ.ಅವರಿಗೆ ಸ್ವಂತ ಮನೆ ಅಥವಾ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಇರಲಿಲ್ಲ. ೩. ಕುಟುಂಬ ಮತ್ತು ಅಧಿಕಾರ:ಅವರು ತಮ್ಮ ಅಧಿಕಾರವನ್ನು ಎಂದಿಗೂ ಕುಟುಂಬದವರಿಗಾಗಿ ಬಳಸಲಿಲ್ಲ. ಅವರ ತಾಯಿ ಶಿವಕಾಮಿ ಅಮ್ಮಾಳ್ ಅವರು ಕೊನೆಯವರೆಗೂ ತಮ್ಮ ಹಳ್ಳಿಯ ಮನೆಯಲ್ಲಿಯೇ ಸರಳವಾಗಿ ಬದುಕಿದರು.ಒಮ್ಮೆ ಅವರ ತಾಯಿ ಮಗನ ಬಳಿ ಒಂದು ಫ್ಯಾನ್ ಕೇಳಿದಾಗ, “ಇದು ಸರಕಾರಿ ಹಣದಲ್ಲಿ ನಡೆಯುತ್ತಿರುವ ಮನೆ, ಜನರ ತೆರಿಗೆ ಹಣದಲ್ಲಿ ನಾನು ಕುಟುಂಬಕ್ಕೆ ಸೌಲಭ್ಯ ಒದಗಿಸುವುದಿಲ್ಲ” ಎಂದು ನಿರಾಕರಿಸಿದ್ದರು. ೪. ಪ್ರಯಾಣ ಮತ್ತು ಶಿಷ್ಟಾಚಾರ:ಅವರು ಎಲ್ಲಿಗೆ ಹೋದರೂ ತಮಗೆ ವಿಐಪಿ ಶಿಷ್ಟಾಚಾರ (VIP Protocol) ಬೇಕೆಂದು ಬಯಸುತ್ತಿರಲಿಲ್ಲ. ಎಷ್ಟೋ ಬಾರಿ ಸಾಮಾನ್ಯರಂತೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. . ಕಾರಿನಲ್ಲಿ ಹೋಗುವಾಗ ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಾಮಾನ್ಯರಂತೆ ಕಾಯುತ್ತಿದ್ದರು; ತನಗಾಗಿ ಜನರಿಗೆ ತೊಂದರೆಯಾಗಬಾರದು ಎಂಬುದು ಅವರ ಆಶಯವಾಗಿತ್ತು. ೫. ಹಸಿವಿನ ಅರಿವು: ತಮ್ಮ ಬಡತನದ ಬಾಲ್ಯವೇ ಅವರ ಸರಳತೆಗೆ ಕಾರಣವಾಗಿತ್ತು. ತಾನು ಉಣ್ಣದಿದ್ದರೂ ಪರವಾಗಿಲ್ಲ, ದೇಶದ ಮಕ್ಕಳು ಹಸಿವಿನಿಂದ ಇರಬಾರದು ಎಂದು ಭಾವಿಸಿದ್ದರಿಂದಲೇ ‘ಬಿಸಿಯೂಟ ಯೋಜನೆ’ ಜನ್ಮತಾಳಿತು. ಕಾಮರಾಜರು ರಾಜಕೀಯ ಎಂದರೆ ಅಧಿಕಾರವಲ್ಲ, ಅದೊಂದು ಸಮಾಜ ಸೇವೆ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು.ಕಾಮರಾಜರ ಅವರು ಮದುವೆಯಾಗಿರಲಿಲ್ಲ . ಕೆ. ಕಾಮರಾಜ್ ಅವರು ತಮ್ಮ ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿದರು. ಅವರು ಮದುವೆಯಾಗದಿರಲು ಕೆಲವು ಮುಖ್ಯ ಕಾರಣಗಳು ಮತ್ತು ಅವರ ಬದ್ಧತೆ ಹೀಗಿತ್ತು: ದೇಶಸೇವೆಯೇ ಮೊದಲ ಆದ್ಯತೆ: ಕಾಮರಾಜ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ದೇಶದ ಬಿಡುಗಡೆ ಮತ್ತು ಜನರ ಸೇವೆಯೇ ಅವರ ಜೀವನದ ಏಕೈಕ ಗುರಿಯಾಗಿತ್ತು. ಸಂಸಾರ ಎಂಬ ಬಂಧನಕ್ಕೆ ಸಿಲುಕಿದರೆ ಸಾರ್ವಜನಿಕ ಸೇವೆಗೆ ಅಡ್ಡಿಯಾಗಬಹುದು ಎಂಬುದು ಅವರ ಭಾವನೆಯಾಗಿತ್ತು. ತಾಯಿಯ ಆಸೆ: ಅವರ ತಾಯಿ ಶಿವಕಾಮಿ ಅಮ್ಮಾಳ್ ಅವರು ಮಗ ಮದುವೆಯಾಗಬೇಕೆಂದು ಬಹಳ ಆಸೆಪಟ್ಟಿದ್ದರು. ಆದರೆ, ಕಾಮರಾಜ್ ಅವರು “ನನಗೆ ಇಡೀ ದೇಶದ ಮಕ್ಕಳೇ ನನ್ನ ಮಕ್ಕಳಿದ್ದಂತೆ, ತಮಿಳುನಾಡಿನ ಜನತೆಯೇ ನನ್ನ ಕುಟುಂಬ” ಎಂದು ಹೇಳಿ ಮದುವೆಯನ್ನು ನಿರಾಕರಿಸುತ್ತಾ ಬಂದರು.ಸರಳ ಮತ್ತು ಸಂನ್ಯಾಸಿ ಜೀವನ: ಒಬ್ಬ ರಾಜಕಾರಣಿಯಾಗಿ ಅವರು ಬದುಕಿದ ರೀತಿ ಒಬ್ಬ ಸಂನ್ಯಾಸಿಗಿಂತ ಕಡಿಮೆ ಇರಲಿಲ್ಲ. ಸ್ವಾರ್ಥವಿಲ್ಲದ, ಆಸ್ತಿ ಮಾಡದ ಅವರ ಜೀವನಶೈಲಿಗೆ ಅವರ ಅವಿವಾಹಿತ ಜೀವನವೂ ಒಂದು ಕಾರಣವಾಗಿತ್ತು.ಕಾಮರಾಜ್ ಅವರಂತೆ ಜೀವನಪೂರ್ತಿ ಬ್ರಹ್ಮಚಾರಿಯಾಗಿದ್ದರು. ದೇಶಕ್ಕಾಗಿ ಶ್ರಮಿಸಿದ ಮಹಾನ್ ನಾಯಕರು . ಕಾಮರಾಜರು ತಮ್ಮ ತಾಯಿ ಶಿವಕಾಮಿ ಅಮ್ಮಾಳ್ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ, ವೈಯಕ್ತಿಕ ಪ್ರೀತಿ ಮತ್ತು ಸಾರ್ವಜನಿಕ ಧರ್ಮದ ನಡುವೆ ಅವರು ಎಂದಿಗೂ ತಾರತಮ್ಯ ಮಾಡಲಿಲ್ಲ. ಅವರ ಮತ್ತು ತಾಯಿಯ ನಡುವಿನ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇಲ್ಲಿವೆ: ೧. ಫ್ಯಾನ್ ಮತ್ತು ನಲ್ಲಿಯ ಘಟನೆ:ಕಾಮರಾಜರು ಮುಖ್ಯಮಂತ್ರಿಯಾದಾಗ ಅವರ ತಾಯಿ ಹಳ್ಳಿಯಲ್ಲೇ ವಾಸವಿದ್ದರು. ಮಗ ಮುಖ್ಯಮಂತ್ರಿಯಾದ ಮೇಲೆ ಅವರಿಗೆ ಅನುಕೂಲ ಮಾಡಿಕೊಡುತ್ತಾನೆ ಎಂದು ಹಳ್ಳಿಯವರು ಅಂದುಕೊಂಡಿದ್ದರು. ಒಮ್ಮೆ ತಾಯಿ ಮಗನ ಬಳಿ ಮನೆಗೆ ಒಂದು ಫ್ಯಾನ್ ಮತ್ತು ನಲ್ಲಿಯ (Tap) ವ್ಯವಸ್ಥೆ ಮಾಡಿಸಿಕೊಡು ಎಂದು ಕೇಳಿದರು. ಆಗ ಕಾಮರಾಜರು, “ಅಮ್ಮಾ, ನಾನು ಜನರ ಹಣದಲ್ಲಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ನಿನಗೆ ಈ ಸೌಲಭ್ಯ ಮಾಡಿಕೊಟ್ಟರೆ, ನಾಳೆ ಊರಿನವರೆಲ್ಲಾ ನನ್ನ ಬಳಿ ಬಂದು ಕೇಳುತ್ತಾರೆ. ನಿನಗೆ ಇದು ಬೇಡ” ಎಂದು ಮೃದುವಾಗಿ ನಿರಾಕರಿಸಿದರು. ೨. ಮುನ್ಸಿಪಾಲಿಟಿ ಟ್ಯಾಪ್ ಕಿತ್ತಿಸಿದ ಪ್ರಸಂಗ:ಅವರು ಮುಖ್ಯಮಂತ್ರಿಯಾಗಿದ್ದಾಗ, ಮುನ್ಸಿಪಾಲಿಟಿ ಅಧಿಕಾರಿಗಳು ತಾಯಿಯ ಮನೆಯ ಮುಂದೆ ಅವರಿಗೊಂದು ಪ್ರತ್ಯೇಕ ನೀರಿನ ನಲ್ಲಿ (Tap) ಅಳವಡಿಸಿದ್ದರು. ಇದನ್ನು ತಿಳಿದ ಕಾಮರಾಜರು ತಕ್ಷಣವೇ ಅದನ್ನು ಕಿತ್ತಿಸಲು ಆದೇಶಿಸಿದರು. “ನನ್ನ ತಾಯಿಗೆ ವಿಶೇಷ ಸೌಲಭ್ಯ ಬೇಡ, ಊರಿನವರೆಲ್ಲಾ ಎಲ್ಲಿ ನೀರು ತುಂಬುತ್ತಾರೋ ಅಲ್ಲೇ ನನ್ನ ತಾಯಿಯೂ ತುಂಬಲಿ” ಎಂಬುದು ಅವರ ತತ್ವವಾಗಿತ್ತು. ೩. ಹಣದ ನೆರವಿನ ಮಿತಿ: ತಾಯಿಯ ನಿರ್ವಹಣೆಗಾಗಿ ಕಾಮರಾಜರು ಪ್ರತಿ ತಿಂಗಳು ಕೇವಲ ೧೨೦ ರೂಪಾಯಿಗಳನ್ನು ಮಾತ್ರ ಕಳುಹಿಸುತ್ತಿದ್ದರು. ಆ ಕಾಲದಲ್ಲಿ ಅದು ತಾಯಿಯ ಜೀವನಕ್ಕೆ ಸಾಕಾಗುತ್ತಿತ್ತು. ಅವರ ತಾಯಿ ಇನ್ನೂ ಸ್ವಲ್ಪ ಹೆಚ್ಚು ಹಣ ಕೇಳಿದಾಗ, “ಒಬ್ಬ ಬಡವನ ತಾಯಿಗೆ ಎಷ್ಟು ಹಣ ಬೇಕೋ ಅಷ್ಟನ್ನು ನಾನು ಕೊಡುತ್ತಿದ್ದೇನೆ, ನಿನಗೆ ಐಷಾರಾಮಿ ಬದುಕು ಬೇಡ” ಎಂದು ಹೇಳಿದ್ದರು. ೪. ತಾಯಿಯ ಮರಣದ ನಂತರ:ತಮ್ಮ ಅಧಿಕಾರವನ್ನು ಎಂದಿಗೂ ಕುಟುಂಬಕ್ಕಾಗಿ ಬಳಸದ ಕಾಮರಾಜರು, ತಾಯಿ ನಿಧನರಾದಾಗಲೂ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲಿಲ್ಲ. ಒಬ್ಬ ಸಾಮಾನ್ಯ ಮಗನಂತೆ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದರು.ಅಧಿಕಾರ ಎನ್ನುವುದು ಜನರಿಗೆ ಸೇವೆ ಸಲ್ಲಿಸಲು ಇರುವ ಸಾಧನವೇ ಹೊರತು ಕುಟುಂಬವನ್ನು ಬೆಳೆಸಲಿಕ್ಕಲ್ಲ ಎಂಬುದನ್ನು ಕಾಮರಾಜರು ಈ ಪ್ರಸಂಗಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು. ಅವರು ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳು : ೧. ಶಿಕ್ಷಣ ಕ್ರಾಂತಿಕಾಮರಾಜರನ್ನು ತಮಿಳುನಾಡಿನಲ್ಲಿ ‘ಕಲ್ವಿ ತಂತೈ’ (ಶಿಕ್ಷಣದ ಪಿತಾಮಹ) ಎಂದು ಕರೆಯಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ
ಸಾವಿಲ್ಲದ ಶರಣರುಮಾಲಿಕೆ “ಭಾರತದ ರಾಷ್ಟ್ರಕರಣದ ಧ್ರುವತಾರೆ ಕೆ ಕಾಮರಾಜ” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಶರಣ ಸಂಗಾತಿ ಸಾವಿಲ್ಲದ ಶರಣರು ಶಿವಯೋಗಿನಿ ಸಜ್ಜಲ ಗುಡ್ಡದ ಶರಣಮ್ಮ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರು ಸಾರಿದ ಬಸವ ತತ್ವವು ಮಾನವೀಯತೆ, ಸಮಾನತೆ ಮತ್ತು ಕಾಯಕ ನಿಷ್ಠೆಯ ಮೇಲೆ ನಿಂತಿದೆ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಇಡೀ ಮನುಕುಲಕ್ಕೆ ಅನ್ವಯಿಸುವ ಜೀವನ ಮಾರ್ಗವಾಗಿದೆ. ಇಂತಹ ಅಪೂರ್ವವಾದ ಸಮಾನತೆಯ ಆಂದೋಲನವನ್ನು ಮುಂದಿನ ಜನಾಂಗಕ್ಕೆ ಒಯ್ದ ಕೆಲವೇ ಕೆಲವು ಶಿವಯೋಗ ಸಾಧಕರಲ್ಲಿ ಸಜ್ಜಲ ಗುಡ್ಡದ ಶರಣಮ್ಮ. ಸಜ್ಜಲಗುಡ್ಡದ ಶರಣಮ್ಮನವರು (ಕ್ರಿ.ಶ. 1878- 1981) ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಸಜ್ಜಲಗುಡ್ಡದಲ್ಲಿ ನೆಲೆಸಿದ್ದ ಒಬ್ಬ ಶ್ರೇಷ್ಠ ಶಿವಶರಣೆ ಮತ್ತು ಮಹಿಳಾ ಸಂತರು. ಇವರನ್ನು ಭಕ್ತರು ಶ್ರದ್ಧಾಭಕ್ತಿಯಿಂದ “ಸಜ್ಜಲಶ್ರೀ ಶರಣಮ್ಮ ತಾಯಿ” ಎಂದು ಕರೆಯುತ್ತಾರೆ. *ಜೀವನದ ಹಿನ್ನೆಲೆ* ಜನ್ಮ: ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಲಿಂಗಣ್ಣ ಮತ್ತು ಲಿಂಗಮ್ಮ ಹಾಲುಮತದ ದಂಪತಿಗಳ ಮಗಳಾಗಿ ಜನಿಸಿದರು. ಮೂಲ ಹೆಸರು: ಇವರ ಬಾಲ್ಯದ ಹೆಸರು ಯಮುನಮ್ಮ. ವೈರಾಗ್ಯ: ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು, ಬಡತನ ಮತ್ತು ಬರಗಾಲದ ಕಷ್ಟಗಳನ್ನು ಅನುಭವಿಸಿ ಲೌಕಿಕ ಜೀವನದ ಮೇಲೆ ವೈರಾಗ್ಯ ತಳೆದರು. ದೀಕ್ಷೆ: ಗುಡದೂರಿನ ದೊಡ್ಡಬಸವಾರ್ಯ ಶರಣರಿಂದ ಲಿಂಗದೀಕ್ಷೆ ಪಡೆದು, ಬಳ್ಳಾರಿಯ ಸಕ್ಕರಿ ಕರಡೆಪ್ಪನವರು ಸ್ಥಾಪಿಸಿದ ಶ್ರೀ ಗುರು ಬಸವ ಶಾಲೆಯಲ್ಲಿ ಬಸವ ತತ್ವದ ಶಿಕ್ಷಣವನ್ನು ಪಡೆದು ಮುಂದೆ ಸಜ್ಜಲಗುಡ್ಡದಲ್ಲಿ ನೆಲೆಸಿ ಕಠಿಣ ತಪಸ್ಸು ಮತ್ತು ಶಿವಯೋಗವನ್ನು ಆಚರಿಸಿದರು. ಸಮಾಜ ಸೇವೆ ಮತ್ತು ಆಧ್ಯಾತ್ಮ ಬಸವ ತತ್ವ: 12ನೇ ಶತಮಾನದ ಬಸವಾದಿ ಶರಣರ ತತ್ವಗಳಾದ ಕಾಯಕ ಮತ್ತು ದಾಸೋಹವನ್ನು ಪಾಲಿಸಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದರು. ಸಮಾನತೆ: ಜಾತಿ, ಮತ, ಪಂಥಗಳ ಬೇಧವಿಲ್ಲದೆ ದೀನ-ದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದರು. ಬಾಲ್ಯ ಮತ್ತು ಆಧ್ಯಾತ್ಮಿಕ ಪಯಣ ಬಾಲ್ಯದ ಕಷ್ಟಗಳು: 1878ರ ಸುಮಾರಿಗೆ ಜನಿಸಿದ ಯಮುನಮ್ಮನವರು (ಶರಣಮ್ಮ) ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಕುಟುಂಬವು ತೀವ್ರ ಬಡತನ ಮತ್ತು ಬರಗಾಲವನ್ನು ಎದುರಿಸಿದಾಗ, ಅವರು ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ಕೆಲಸಕ್ಕಾಗಿ ವಲಸೆ ಹೋಗಬೇಕಾಯಿತು. ವಚನಗಳ ಪ್ರಭಾವ: ಇವರು ಮೂರು ವರ್ಷಗಳ ಕಾಲ ಅತ್ಯಂತ ನಿಷ್ಠೆಯಿಂದ ವಚನಗಳನ್ನು ಅಧ್ಯಯನ ಮಾಡಿದ್ದರು. ಸಮಗ್ರ ವಚನ ಸಂಪುಟವೇ ಅವರ ಮನದಲ್ಲಿತ್ತು ಮತ್ತು ಅವರ ಪ್ರತಿಯೊಂದು ಮಾತಿನಲ್ಲೂ ವಚನಗಳೇ ಇರುತ್ತಿದ್ದವು. ಗುರುಗಳು: ಗುಡದೂರು ಗ್ರಾಮದ ಶ್ರೀ ದೊಡ್ಡಬಸವಾರ್ಯ ಶರಣರು ಇವರ ಆಧ್ಯಾತ್ಮಿಕ ಗುರುಗಳು. ಅವರಿಂದ ಲಿಂಗದೀಕ್ಷೆ ಪಡೆದ ನಂತರ ಇವರು ಶಿವಯೋಗಿನಿಯಾದರು. ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ಕೊಡುಗೆ ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗದೆ, ಶರಣಮ್ಮನವರು ಸಮಾಜದ ಏಳಿಗೆಗಾಗಿ ಶ್ರಮಿಸಿದರು: ಶಿಕ್ಷಣ ಸಂಸ್ಥೆಗಳು: ಮಠದ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಅನೇಕ ಶಾಲೆ ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕಂಬಳಿಹಾಳ, ಮತ್ತು ಕಂದಗಲ್ ಗ್ರಾಮಗಳಲ್ಲಿ ಇವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ಇಂದಿಗೂ ಜ್ಞಾನದಾಸೋಹ ಮಾಡುತ್ತಿವೆ. ದಾಸೋಹ ಪರಂಪರೆ: ಸಜ್ಜಲಗುಡ್ಡದ ಮಠವು ಆಧ್ಯಾತ್ಮಿಕ ಚಿಂತನೆ ಮಾತ್ರವಲ್ಲದೆ, ಸಂಸ್ಕೃತ, ವಚನ ಪಾಠಗಳ ಉಚಿತ ಬೋಧನೆ ಮತ್ತು ಉಚಿತ ಅನ್ನದಾಸೋಹಕ್ಕೆ ಹೆಸರಾಗಿದೆ. ಅಧ್ಯಯನ ಪೀಠ: ಶರಣಮ್ಮ ತಾಯಿಯವರ ಹೆಸರಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂಬ ಮನವಿಯನ್ನು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಒಕ್ಕೂಟವು ಸಲ್ಲಿಸಿದೆ. ಲಿಂಗೈಕ್ಯ: ಇವರು 102 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ, 1981ರ ಏಪ್ರಿಲ್ 24ರಂದು ಸಜ್ಜಲಗುಡ್ಡದಲ್ಲೇ ಲಿಂಗೈಕ್ಯರಾದರು. ಜಾತ್ರೆ: ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಶರಣಮ್ಮ ತಾಯಿಯವರ ದೊಡ್ಡ ಮಟ್ಟದ ಜಾತ್ರೆ ಮತ್ತು ರಥೋತ್ಸವ ಜರುಗುತ್ತದೆ. ಸಜ್ಜಲಗುಡ್ಡ ಮಠ: ಇವರು ಸ್ಥಾಪಿಸಿದ ಸಜ್ಜಲಗುಡ್ಡದ ಮಠವು ಇಂದಿಗೂ ಶಿಕ್ಷಣ, ಉಚಿತ ಅನ್ನದಾಸೋಹ ಮತ್ತು ಆಧ್ಯಾತ್ಮಿಕ ಚಿಂತನೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆರಾಧನೆ ಮತ್ತು ಮಹಿಮೆ ಶರಣಮ್ಮನವರು ಅನೇಕ ಪವಾಡಗಳನ್ನು ಮಾಡಿದ್ದಾರೆಂಬ ನಂಬಿಕೆ ಭಕ್ತರಲ್ಲಿದೆ. ಇವರನ್ನು ಈ ಭಾಗದ ಆರಾಧ್ಯ ದೈವವೆಂದು ಪರಿಗಣಿಸಲಾಗುತ್ತದೆ. ನಡೆದಾಡುವ ದೈವಿ ಶಕ್ತಿ ಎಂದು ಜನರ ಭಾವನೆ. ಕರ್ಮಠಗಳನ್ನು ಕಳೆದು ಸ್ವಚ್ಛ ಸುಂದರ ಬಸವ ತತ್ವ ಪ್ರಸಾರ ಮಾಡಿದ ಅಧಿದೇವತೆ ಸಜ್ಜಲ ಗುಡ್ಡದ ಶರಣಮ್ಮ. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ









