ಕಾವ್ಯ ಸಂಗಾತಿ
ತೇಜಾವತಿ .ಎಚ್ .ಡಿ.
“ಸೀಮೆ ಜಾಲಿ”


ಅಂಕುಡೊಂಕಾದ ಕರಿ ನಾಗರಗಳಾಗಿ
ಉದಯರಶ್ಮಿಗೆ ಮೈಯೊಡ್ಡಿರುವ
ರಸ್ತೆಯ ಇಕ್ಕೆಲಗಳಲ್ಲಿ
ದಶದಿಕ್ಕಿಗೂ ಕಬಂಧ ಬಾಹುಗಳನ್ನು ಚಾಚಿರುವ
ಸಾಲು ಸಾಲು ಸೀಮೆಜಾಲಿಯ ಮರಗಳು
ಮೈತುಂಬಾ ಮುಳ್ಳು, ಕೆಸರು ದುರ್ನಾತ
ಅವುಗಳ ನಡುವಲ್ಲೊಂದು ಪುಟ್ಟ ರಾಯಸಕ್ಕರಿ ಮರ ತಲೆಯೆತ್ತಿ ನಿಂತು ಸೂರ್ಯನೆಡೆಗೆ ಮುಖಮಾಡಿ ಕಂಗೊಳಿಸಿ
ಚಿಗುರು ಹೂ ಮಿಡಿ ಕಾಯಿ
ಹಣ್ಣು ತೊಟ್ಟು ಹಸಿರು ಉಟ್ಟು ಸಂಭ್ರಮಿಸಿದೆ
ಅದೇ ಕೊಳಕು ಅದೇ ಕೆಸರು ಅದೇ ಗಾಳಿ ಅದೇ ಬಿಸಿಲನ್ನು ಉಂಡು
ಬರಡು ಭೂಮಿಯಲ್ಲಿ ತಂಪೆರೆದು ಅತ್ಮಾಭಿಮಾನವ ಸೂಸುತ್ತಿದೆ
ಪರಿಸರದ ಹಂಗು ತೊರೆದು
ಸುತ್ತಲಿದ್ದರೇನಂತೆ ಸೀಮೆಜಾಲಿ ಮುಳ್ಳು ಕಳ್ಳಿ ತಾನು ಮಧುಫಲವನ್ನೇ ನೀಡುವೆನೆಂದು
ಭೀಷ್ಮಪ್ರತಿಜ್ಞೆ ಮಾಡಿದೆ
ಮುಳ್ಳಿನ ನಡುವೆ ಸುಳಿವ ಹೂಗಳಿಗೆ ಅಲ್ಲಿಂದಲೇ
ಹರಕೆಯ ಕೊಟ್ಟಿದೆ
ಜಾಲಿಯ ಮರದಾಗ
ಗುಬ್ಬಿ ಗೂಡು ಕಟ್ಟಲಿ
ಕಟ್ಟಿದ ಗೂಡು ನೂರಾಗಿ
ಹಕ್ಕಿಗಳ ಬಾಳು ಹಸನಾಗಲಿ ಹಸನಾದ ಬದುಕು ಹೊನ್ನಾಗಿ ಸುಡು ಬಿಸಿಲ ಈ ನಾಡು ತಂಪಾಗಲಿ
ತೇಜಾವತಿ .ಎಚ್ .ಡಿ.
ಕ



