ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖದ ಹೊತ್ತು ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಇತರೆ

“ಅಮ್ಮನ ಸೆರಗು” ಕವಿತಾ ಶ್ರೀನಿವಾಸ ನಾಯಕ್

ವಿಶೇಷ ಸಂಗಾತಿ ಅಮ್ಮನ ಸೆರಗು ಕವಿತಾ ಶ್ರೀನಿವಾಸ ನಾಯಕ್ ​ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸುವ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಬರೆದ ಪ್ರಬಂಧವೊಂದು ನನ್ನ ಗಮನ ಸೆಳೆಯಿತು. ಶಿಕ್ಷಕರು ಕೊಟ್ಟ ವಿಷಯಕ್ಕೆ ಆ ಮಗು ತನ್ನ ತಾಯಿಯ ಸೆರಗಿನ ಮಹತ್ವವನ್ನು ತನ್ನದೇ ಆದ ಮುಗ್ಧ ತಿಳುವಳಿಕೆಯಲ್ಲಿ ಬರೆದಿತ್ತು. ಆ ಸಾಲುಗಳು ನನ್ನ ಹೃದಯಕ್ಕೆ ಎಷ್ಟು ಆಳವಾಗಿ ನಾಟಿದವೆಂದರೆ, ಇಂದು ನನ್ನ ಲೇಖನಿಗೆ ಅದೇ ಪ್ರೇರಣೆಯಾಯಿತು. ಹೌದು, ಅಮ್ಮನ ಸೆರಗನ್ನು ವರ್ಣಿಸಲು ಈ ಜಗದ ಪದಗಳೇ ಸಾಲದು; ಅದು ಕೇವಲ ಒಂದು ಬಟ್ಟೆಯ ತುಂಡಲ್ಲ, ಮಗುವಿನ ರಕ್ಷಣೆಯ ಮೊದಲ ಗೂಡು!​ವಿಶೇಷವಾಗಿ 70 ಮತ್ತು 80 ರ ದಶಕದ ಮಕ್ಕಳಿಗೆ ಅಮ್ಮನ ಸೆರಗಿನ ಸುಖ ಏನೆಂಬುದು ಚೆನ್ನಾಗಿ ಗೊತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಕ್ರಮೇಣ ಆ ಸೀರೆಯ ಸೆರಗು ಮಾಯವಾಗಿ, ಎಲ್ಲೆಡೆ ನೈಟಿಗಳು ಆವರಿಸಿಬಿಟ್ಟಿವೆ. ಆ ಬದಲಾವಣೆಯೊಂದಿಗೆ ನಾವೇನೋ ಆಧುನಿಕತೆಯತ್ತ ಸಾಗಿದ್ದೇವೆ ನಿಜ, ಆದರೆ ಆ ಸೆರಗಿನಲ್ಲಿದ್ದ ಬೆಚ್ಚಗಿನ ಪ್ರೀತಿ, ಆಪ್ತತೆ ಎಲ್ಲೋ ಒಂದು ಕಡೆ ಕಳೆದುಹೋಗುತ್ತಿದೆ ಅನಿಸುವುದು ಸುಳ್ಳಲ್ಲ.​ಅಮ್ಮನ ಸೆರಗು ಆ ದಿನಗಳಲ್ಲಿ ಕೇವಲ ಮಗುವಿಗೆ ಮಾತ್ರವಲ್ಲ, ಇಡೀ ಮನೆಗೇ ಒಂದು ರಕ್ಷಣಾ ಕವಚವಾಗಿತ್ತು. ಮನೆಯ ಒಳಗೆ ಅಮ್ಮ ಅಡುಗೆಮನೆಯಿಂದ ಹಿಡಿದು ಹಿತ್ತಲವರೆಗೂ ಕೆಲಸ ಮಾಡುವಾಗ ಆಕೆಯ ಸೊಂಟಕ್ಕೆ ಸುತ್ತಿಕೊಂಡಿರುತ್ತಿದ್ದ ಸೀರೆಯ ಸೆರಗಿನಲ್ಲಿ ಇಡೀ ಸಂಸಾರದ ನೆಮ್ಮದಿ ಅಡಗಿರುತ್ತಿತ್ತು.​ಮಕ್ಕಳಿಗೆ ಅಮ್ಮನ ಸೆರಗೇ ಸರ್ವಸ್ವ:ಮಕ್ಕಳಿಗೆ ಅಮ್ಮನ ಸೆರಗು ಹಲವು ರೂಪಗಳಲ್ಲಿ ಆಸರೆಯಾಗುತ್ತಿತ್ತು. ಆಟ ಆಡಿ ಬಂದ ಮಗು ಮುಖ ಒರೆಸಿಕೊಳ್ಳಲು ಮೊದಲು ಹುಡುಕುತ್ತಿದ್ದುದೇ ಅಮ್ಮನ ಸೆರಗನ್ನು. ಬೇಸಿಗೆಯ ಸೆಕೆಗೆ ಬೀಸಣಿಕೆಯಾಗುತ್ತಿದ್ದದ್ದೂ ಅದೇ, ಚಳಿಗಾಲದ ನಡುಕಕ್ಕೆ ಬೆಚ್ಚಗಿನ ಹೊದಿಕೆಯಾಗುತ್ತಿದ್ದದ್ದೂ ಅದೇ. ಅಷ್ಟೇ ಏಕೆ, ಮನೆಗೆ ಯಾರಾದರೂ ನೆಂಟರು ಬಂದಾಗ ನಾಚಿಕೆಯಿಂದ ಓಡಿಹೋಗಿ ಅಮ್ಮನ ಸೆರಗಿನ ಮರೆಯಲ್ಲಿ ಅಡಗಿ ನಿಲ್ಲುತ್ತಿದ್ದ ಆ ಕ್ಷಣಗಳೇ ಒಂದು ಸುಂದರ ಕಾವ್ಯ. ತಾಯಿಯ ಸೆರಗನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಸಾಕು, ಈ ಜಗತ್ತಿನ ಯಾವುದೇ ಶಕ್ತಿ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅದಮ್ಯ ಧೈರ್ಯ ಮತ್ತು ಸುರಕ್ಷತೆಯ ಭಾವ ಆ ಪುಟಾಣಿ ಹೃದಯದಲ್ಲಿ ಮೂಡುತ್ತಿತ್ತು.​ಮನೆಯವರಿಗೂ ಅದೊಂದು ಭರವಸೆ:ಕೇವಲ ಮಕ್ಕಳಿಗಷ್ಟೇ ಅಲ್ಲ, ಮನೆಯ ಹಿರಿಯರಿಗೂ ಅಮ್ಮನ ಸೆರಗು ಭರವಸೆಯ ಸಂಕೇತವಾಗಿತ್ತು. ಅಡುಗೆಮನೆಯಲ್ಲಿ ಸದಾ ದುಡಿಯುವ ತಾಯಿಯ ಸೆರಗಿನ ಅಂಚಿಗೆ ಮನೆಯ ಬೀಗದ ಕೈಗಳು ಕಟ್ಟಲ್ಪಟ್ಟಿರುತ್ತಿದ್ದವು. ಅದು ಕೇವಲ ಬೀಗದ ಕೈಯಲ್ಲ, ಇಡೀ ಮನೆಯ ಜವಾಬ್ದಾರಿ, ಸಂಸ್ಕಾರ ಮತ್ತು ತಾಯಿ ಮುನ್ನಡೆಸುವ ಸಂಸಾರದ ದಾರಿದೀಪ. ತಂದೆ ಆಯಾಸದಿಂದ ಕೆಲಸ ಮುಗಿಸಿ ಬಂದಾಗ, ಕಷ್ಟದ ದಿನಗಳಲ್ಲಿ ಅಮ್ಮ ಅದೇ ಸೆರಗಿನಿಂದ ತನ್ನ ಕಣ್ಣೀರನ್ನು ಮರೆಮಾಚಿ, ಎಲ್ಲರಿಗೂ ಧೈರ್ಯ ತುಂಬುತ್ತಿದ್ದಳು.​ಕಾಲ ಬದಲಾಗಿದೆ. ಇಂದು ಉಡುಗೆ-ತೊಡುಗೆಗಳು ಬದಲಾಗಿರಬಹುದು, ಬದುಕಿನ ಶೈಲಿ ಆಧುನಿಕವಾಗಿರಬಹುದು. ಆದರೆ ಅಮ್ಮನ ಸೆರಗು ನೀಡುತ್ತಿದ್ದ ಆ ನಿಷ್ಕಲ್ಮಷ ಪ್ರೀತಿ, ಮಮತೆ ಮತ್ತು ಸುರಕ್ಷತೆಯ ಭಾವ ಇಂದಿಗೂ ಶಾಶ್ವತ. ಬಟ್ಟೆಗಳು ಬದಲಾಗಬಹುದು, ಆದರೆ ತಾಯಿಯ ಮಡಿಲ ಒಲವು ಎಂದಿಗೂ ಬದಲಾಗಲಾರದು. ನಮ್ಮ ಬಾಲ್ಯದ ಆ ಸುಂದರ ದಿನಗಳನ್ನು ನೆನಪಿಸಿಕೊಳ್ಳುತ್ತಾ, ತಾಯ್ತನದ ಆ ಪರಮ ಸುಖಕ್ಕೆ ಮನದಲ್ಲೇ ನಮಿಸೋಣ. ​ಕವಿತಾ ಶ್ರೀನಿವಾಸ್ ನಾಯಕ್​ಕಾರ್ಕಳ, ಉಡುಪಿ ಜಿಲ್ಲೆ.

“ಅಮ್ಮನ ಸೆರಗು” ಕವಿತಾ ಶ್ರೀನಿವಾಸ ನಾಯಕ್ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಸಂತೃಪ್ತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಸಂತೃಪ್ತಿ” ಅರವತ್ತೆಪ್ಪತ್ತರ ಅಜ್ಜಿತಲೆಮೇಲೆ ಬಿಳಿ ಹೆರಳುಬಾಯಲ್ಲಿ ಹಳದಿ ಹಲ್ಲುತುಟಿಯಂಚಿನಿಂದ ಸೋರುವ ಮೆಲ್ಲುಈ ಕಿವಿಯಿಂದ ಆ ಕಿವಿಯ ತನಕ ನಗು ನಗುವ  ಸೆಲೆ ಬಂದ ವಿದೇಶಿ ಯಾತ್ರಿಕನಿಗೆ ಕೇಳುವಳು ಮಾರ್ಗದರ್ಶಿಯಾಗಿಹಲೋ ಸರ್ ಹೌ ಡು ಯು ಡುಮತ್ತು ವಾಟ್ ಕ್ಯಾನ್ ಐ ಡು! ನಗುತ ಹೇಳುವಳು ನಮಗೆಇದು ನನ್ನ ದಿನ ನಿತ್ಯದ ಕಾಯ!ಯಾವ ಗೀತೆಯೂ ಬೇಡ ನನಗೆಯಾವ ಭೂಲೋಕದೈಸಿರಿಯೂ ಬೇಡದಿನ ಪೂರ್ತಿ ಹೃದಯ ತಣಿಯುವ ಈ ದುಡಿಮೆಯೇ ಸಾಕು ವಿರಾಮದಲ್ಲಿ ನನ್ನ ಐಚ್ಛಿಕದ ತಿನಿಸು ಬೇಕುಕಂಡವರೊಡನೆ ಮನ ಬಿಚ್ಚಿ ಮಾತನಾಡ ಬೇಕು. ರಾತ್ರಿ ಮಲಗುವ ಸಮಯಮೇಲಕ್ಕೆ ಹೋಗಿರುವ ಗಂಡನೆಲಕ್ಕಿಳಿದು ತನ್ನಮನದಾಳ ತಣಿಸುವ ಸಮಯ. ದೂರದಲ್ಲಿಯ ಮಕ್ಕಳುಜೀವಿಸಲಿ ಅವರದ್ದೇ ಜೀವನಅವರವರಿಗೆನನಗ್ಯಾಕೆ ಅವರ ಚಿಂತೆ.   ಬಂದಾಗ ಮೊಮ್ಮಕ್ಕಳು ತಾಪ್ರೀತಿ ಹರಿಬಿಡುವ ಸಮಯಬೆಳದಿಂಗಳು ಚೆಲ್ಲಾಡುವ ಸಮಯಪಾಟಿ ಪಾಟಿ ಎಂದು ಮುದ್ದಾಡುವ ಸಮಯ ಇಂದು ಇಂದಿಗೆನಾಳೆ ನಾಳೆಗೆಕಲಿಯಲಿಕ್ಕೇನಿಲ್ಲ ಈಕೆಗೆಮುದ್ದುಕ್ಕಿ ಬರುವುದು ಈಕೆಯಜೀವನ ಸಂಗೀತಕ್ಕೆ,ಜೀವನ ಪ್ರೀತಿಗೆ ,ಈಕೆಯ ಜೀವನ ಛಾತಿಗೆ.   ಹಾರೈಕೆಯಿಷ್ಟೇಇಂಥ ಆತ್ಮೋನ್ನತಿ ನಮ್ಮೆಲ್ಲರಿಗೂ  ಸಿಗಲೆಂದು ,ಅವಳ ಹೃದಯ ಪೂರ್ವಕ ನಗುನಮಗೂ ಬರಲೆಂದು!! ಕರುಣಿಸಲಿ ಆತ ಸದ್ಗತಿ ಈಕೆಗೆಅವಳದ್ದೇ ದಿನದಂದುಅವಳದ್ದೇ ಬಯಕೆಯಂತೆ ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಸಂತೃಪ್ತಿ” Read Post »

ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಬದುಕು”

ಕಾವ್ಯ ಸಂಗಾತಿ ಡಾ.ದಾನಮ್ಮ ಝಳಕಿ “ಬದುಕು” ಬದುಕು…ಗಾಳಿಗೆ ತೂಗುವ ದೀಪವಾದರೂಭರವಸೆಯ ಬೆಳಕು. ಬದುಕು…ಮುರಿದ ಕನಸುಗಳ ಮಣ್ಣಿನೊಳಗೆಮತ್ತೆ ಮೊಳಕೆಯೊಡೆಯುವ ಭರವಸೆಯ ಬೀಜ. ಬದುಕು…ಒಮ್ಮೆ ಕಣ್ಣೀರಿನ ನದಿ,ಮತ್ತೊಮ್ಮೆ ನಗುವಿನ ಸಮುದ್ರ.ಆದರೂ ಎರಡನ್ನೂ ದಾಟಿ ಸಾಗುವಮನದ ಹಠದ ನೌಕೆ. ಬದುಕು…ತಾಯಿಯ ಮಮತೆಯ ಮೃದುವಾದ ಸ್ಪರ್ಶ,ತಂದೆಯ ಬೆವರಿನ ಉಪ್ಪಿನ ಸತ್ಯ.ಸ್ನೇಹದ ನೆರಳಲ್ಲಿ ಅರಳುವ ನಗು,ಪ್ರೀತಿಯ ಮೌನದಲ್ಲಿ ಹುಟ್ಟುವ ಸ್ವರ್ಗ. ಬದುಕು…ಸಾವಿರ ಬಾರಿ ಸೋತರೂಮತ್ತೆ ಎದ್ದು ನಡೆಯುವ ಹೆಜ್ಜೆಯ ಧೈರ್ಯ.ಕತ್ತಲ ರಾತ್ರಿ ಎಷ್ಟು ದಟ್ಟವಾದರೂಬೆಳಗಿನ ಸೂರ್ಯ ಬರುವನೆಂಬ ನಂಬಿಕೆ. ಬದುಕು…ಹೂವಿನಷ್ಟು ಮೃದುವಾದರೂಕಲ್ಲಿನಷ್ಟು ಕಠಿಣ.ಒಮ್ಮೆ ಗಾಯ ಕೊಡುವುದು,ಮತ್ತೊಮ್ಮೆ ಅದೇ ಗಾಯಕ್ಕೆ ಮದ್ದು ಆಗುವುದು. ಬದುಕು…ಉಸಿರು ಇರುವವರೆಗಿನ ಪ್ರಯಾಣವಲ್ಲ,ನಾವು ಹೋದ ಮೇಲೂಬೇರೊಬ್ಬರ ಹೃದಯದಲ್ಲಿ ಉಳಿಯುವಒಂದು ಒಳ್ಳೆಯ ನೆನಪಿನ ಹೆಸರು.ಡಾ. ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಬದುಕು” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕರ್ನಾಟಕದ ಏಕೀಕರಣದ ರೂವಾರಿ ಅನಕೃ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕಾದಂಬರಿ ಸಾರ್ವಭೌಮ ಏಕೀಕರಣದ ರೂವಾರಿ ಅನಕೃ. ಕನ್ನಡ ಸಾಹಿತ್ಯ ಲೋಕದಲ್ಲಿ ‘ಕಾದಂಬರಿ ಸಾರ್ವಭೌಮ’ ಎಂದೇ ಪ್ರಖ್ಯಾತರಾದ ಅ.ನ. ಕೃಷ್ಣರಾಯ (ಅನಕೃ) ಅವರು ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರು ಮತ್ತು ಅಪ್ಪಟ ಕನ್ನಡಾಭಿಮಾನಿ ಹೋರಾಟಗಾರರು. ಅವರ ಜೀವನ ಚರಿತ್ರೆಯ ಪ್ರಮುಖ ಅಂಶಗಳು ಇಲ್ಲಿವೆ: ಜನನ ಮತ್ತು ಬಾಲ್ಯಪೂರ್ಣ ಹೆಸರು: ಅರಕಲಗೂಡು ನರಸಿಂಗರಾವ್ ಕೃಷ್ಣರಾವ್. ಜನನ: ಮೇ 9, 1908 ರಂದು ಕೋಲಾರದಲ್ಲಿ ಜನಿಸಿದರು. ಪೋಷಕರು: ತಂದೆ ನರಸಿಂಗರಾಯರು,ತಾಯಿ ಅನ್ನಪೂರ್ಣಮ್ಮನವರು. ಇವರ ಮೂಲ ಹಾಸನ ಜಿಲ್ಲೆಯ ಅರಕಲಗೂಡು. ಶಿಕ್ಷಣ: ಪ್ರಾಥಮಿಕ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿ, ನಂತರ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಸಾಹಿತ್ಯಿಕ ಕೊಡುಗೆಗಳುಅನಕೃ ಅವರು ಕನ್ನಡ ಸಾಹಿತ್ಯಕ್ಕೆ ಸುಮಾರು 200ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ: ಪ್ರಗತಿಶೀಲ ಸಾಹಿತ್ಯ: ಕನ್ನಡದಲ್ಲಿ ‘ಪ್ರಗತಿಶೀಲ ಸಾಹಿತ್ಯ’ ಚಳವಳಿಯನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಮುಖ ಕಾದಂಬರಿಗಳು: ಸಂಧ್ಯಾ ರಾಗ (ಅವರ ಅತ್ಯಂತ ಜನಪ್ರಿಯ ಕೃತಿ), ಮಂಗಲಸೂತ್ರ, ನಟಸಾರ್ವಭೌಮ ಇತ್ಯಾದಿ.ಇತರ ಪ್ರಕಾರಗಳು: ಕಾದಂಬರಿಗಳಲ್ಲದೆ ನಾಟಕಗಳು (ಬಣ್ಣದ ಬೀಸಣಿಗೆ),ಜೀವನ ಚರಿತ್ರೆಗಳು (ಕನ್ನಡ ಕುಲರಸಿಕರು), ಮತ್ತು ಆತ್ಮಕಥೆ (ಬರಹಗಾರನ ಬದುಕು, ನನ್ನನ್ನು ನಾನೇ ಕಂಡೆ) ಬರೆದಿದ್ದಾರೆ.ಕನ್ನಡ ಪರ ಹೋರಾಟಅನಕೃ ಅವರು ಕೇವಲ ಸಾಹಿತಿಯಾಗಿರದೆ, ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ಹೋರಾಡಿದ ಧೀಮಂತ ನಾಯಕ: ಕನ್ನಡ ಅಸ್ಮಿತೆ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಸಿಗಬೇಕು ಎಂದು ಪ್ರತಿಪಾದಿಸಿದರು.ಸಂಗೀತ ಮತ್ತು ಚಿತ್ರರಂಗ: ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳಿಗಾಗಿ ಮತ್ತು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಬಲವಾದ ಚಳವಳಿ ನಡೆಸಿದರು. ಶುದ್ಧ ಕನ್ನಡಿಗ: ಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅನಕೃ ಅವರನ್ನು “ಶುದ್ಧ ಕನ್ನಡಿಗ” ಎಂದು ಬಣ್ಣಿಸಿದ್ದಾರೆ. ಗೌರವ ಮತ್ತು ಪ್ರಶಸ್ತಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ: 1960ರಲ್ಲಿ ಮಣಿಪಾಲದಲ್ಲಿ ನಡೆದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.ಬಿರುದು: ಇವರ ಅದ್ಭುತ ಕಾದಂಬರಿ ರಚನಾ ಶಕ್ತಿಯಿಂದಾಗಿ ‘ಕಾದಂಬರಿ ಸಾರ್ವಭೌಮ’ ಎಂಬ ಬಿರುದು ಲಭಿಸಿದೆ. ಅನಕೃ ಅವರು ಜುಲೈ 8, 1971 ರಂದು ನಿಧನರಾದರು. ಅವರ ಸಾಹಿತ್ಯ ಮತ್ತು ಹೋರಾಟ ಇಂದಿಗೂ ಕನ್ನಡಿಗರಿಗೆ ಸ್ಫೂರ್ತಿಯಾಗಿದೆ. *ಕರ್ನಾಟಕ ಏಕೀಕರಣಕ್ಕೆ ಕೊಡುಗೆ* ಅನಕೃ (ಅ.ನ. ಕೃಷ್ಣರಾಯರು) ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ರೂವಾರಿಗಳಲ್ಲಿ ಒಬ್ಬರು. ಹರಿದು ಹಂಚಿಹೋಗಿದ್ದ ಕನ್ನಡದ ಭಾಗಗಳನ್ನು ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸುವಲ್ಲಿ ಅವರು ಸಾಹಿತ್ಯ ಮತ್ತು ಹೋರಾಟ ಎರಡರ ಮೂಲಕವೂ ದೊಡ್ಡ ಕೊಡುಗೆ ನೀಡಿದ್ದಾರೆ: ಜನಜಾಗೃತಿ ಮತ್ತು ಭಾಷಣಗಳು:ಕರ್ನಾಟಕದ ಏಕೀಕರಣಕ್ಕೆ ಹಳೆಯ ಮೈಸೂರು ಭಾಗದಲ್ಲಿ ಆರಂಭದಲ್ಲಿ ಹೆಚ್ಚಿನ ಬೆಂಬಲವಿರಲಿಲ್ಲ. ಇಂತಹ ಸಂದರ್ಭದಲ್ಲಿ ಅನಕೃ ಅವರು ಉತ್ತರ ಕರ್ನಾಟಕದ ಪ್ರತಿಯೊಂದು ಊರಿಗೂ ಪ್ರವಾಸ ಮಾಡಿ, ತಮ್ಮ ವಾಗ್ಝರಿಯಿಂದ ಜನರಲ್ಲಿ ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿದರು. ಸಾಹಿತ್ಯಿಕ ಪ್ರಭಾವ: ತಮ್ಮ ಬರಹಗಳ ಮೂಲಕ ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ಸಾಹಿತಿಗಳು ರಾಜಕೀಯ ನಾಟಕಗಳಿಂದ ಹೊರಬಂದು ಜನರ ಭಾವನೆಗಳನ್ನು ಪ್ರತಿನಿಧಿಸಬೇಕು ಎಂದು ನಂಬಿದ್ದ ಅವರು, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದರು. ಸಂಘಟನೆಗಳ ನೇತೃತ್ವ: ಅವರು ‘ಕರ್ನಾಟಕ ಸಂಯುಕ್ತ ರಂಗ’ ದಂತಹ ಸಂಘಟನೆಗಳ ಅಧ್ಯಕ್ಷರಾಗಿ ಹೋರಾಟವನ್ನು ಮುನ್ನಡೆಸಿದರು. 1945ರಲ್ಲಿ ಮುಧೋಳದಲ್ಲಿ ನಡೆದ ಕರ್ನಾಟಕ ಏಕೀಕರಣ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಕನ್ನಡದ ಪ್ರಾಬಲ್ಯಕ್ಕಾಗಿ ಹೋರಾಟ: ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು ಎಂದು ಅವರು ಸತತವಾಗಿ ಹೋರಾಡಿದರು. ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನ ಮತ್ತು ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳ ಅಳವಡಿಕೆಗಾಗಿ ಅವರು ನಡೆಸಿದ ಚಳವಳಿಗಳು ಏಕೀಕರಣದ ಆಶಯಕ್ಕೆ ಸಾಂಸ್ಕೃತಿಕ ಬಲ ನೀಡಿದವು. ಧೀಮಂತ ನಿಲುವು:ಕನ್ನಡದ ಹಿತಾಸಕ್ತಿಗೆ ಧಕ್ಕೆಯಾದಾಗ ಅವರು ಎಂದಿಗೂ ರಾಜಿಯಾಗುತ್ತಿರಲಿಲ್ಲ. ಕನ್ನಡ-ಹಿಂದಿ ವಾಗ್ವಾದದ ಸಂದರ್ಭದಲ್ಲಿ ಕನ್ನಡದ ಪರವಾದ ನಿಲುವು ತಳೆದು ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕತ್ವವನ್ನೇ ತ್ಯಜಿಸಿದರು.ಅನಕೃ ಅವರು ಕೇವಲ ಸಾಹಿತಿಯಾಗಿ ಉಳಿಯದೆ, ‘ಕರ್ನಾಟಕತ್ವ’ ದ ದರ್ಶನವನ್ನು ಜನರಿಗೆ ಮಾಡಿಸಿದ ಕ್ರಾಂತಿಕಾರಿ ಹೋರಾಟಗಾರರಾಗಿ ಇಂದಿಗೂ ಸ್ಮರಣೀಯರಾಗಿದ್ದಾರೆ.    ಮನ್ಸೂರು ಅವರಿಗೆ ವಚನ ಹಾಡಲು ಪ್ರೇರಣೆ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ವಚನಗಳನ್ನು ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ಹಾಡಲು ಪ್ರೇರಣೆ ನೀಡಿದವರಲ್ಲಿ ಅ.ನ. ಕೃಷ್ಣರಾಯರು (ಅನಕೃ) ಅತ್ಯಂತ ಪ್ರಮುಖರು.ಅನಕೃ ಅವರು ಮನ್ಸೂರರಿಗೆ ವಚನ ಗಾಯನದತ್ತ ಪ್ರೇರೇಪಿಸಿದ ಸಂದರ್ಭದ ಪ್ರಮುಖ ಅಂಶಗಳು ಇಲ್ಲಿವೆ: ವಚನಗಳ ಮಹತ್ವದ ಪರಿಚಯ: ಮನ್ಸೂರರು ಜೈಪುರ ಅತ್ರೌಲಿ ಘರಾಣೆಯ ಕಟ್ಟುನಿಟ್ಟಾದ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದರು. ಆ ಕಾಲದಲ್ಲಿ ವಚನಗಳನ್ನು ಶಾಸ್ತ್ರೀಯ ಸಂಗೀತದ ವೇದಿಕೆಗಳಲ್ಲಿ ಹೆಚ್ಚು ಬಳಸುತ್ತಿರಲಿಲ್ಲ. ಅನಕೃ ಅವರು ವಚನಗಳಲ್ಲಿನ ಆಳವಾದ ತತ್ವಜ್ಞಾನ ಮತ್ತು ಸಾಹಿತ್ಯದ ಸೌಂದರ್ಯವನ್ನು ಮನ್ಸೂರರಿಗೆ ಮನವರಿಕೆ ಮಾಡಿಕೊಟ್ಟರು. ಕರ್ನಾಟಕತ್ವದ ಜಾಗೃತಿ: ಕನ್ನಡದ ಅಸ್ಮಿತೆಗಾಗಿ ಹೋರಾಡುತ್ತಿದ್ದ ಅನಕೃ, ಕನ್ನಡದ ವಚನಗಳನ್ನು ಶಾಸ್ತ್ರೀಯವಾಗಿ ಹಾಡುವುದರಿಂದ ಅವುಗಳಿಗೆ ವಿಶ್ವವ್ಯಾಪಿ ಗೌರವ ಸಿಗುತ್ತದೆ ಎಂದು ಮನ್ಸೂರರನ್ನು ಪ್ರೋತ್ಸಾಹಿಸಿದರು. ರಾಗಗಳ ಅನ್ವಯ: ವಚನಗಳ ಭಾವಕ್ಕೆ ತಕ್ಕಂತೆ ಸೂಕ್ತವಾದ ರಾಗಗಳನ್ನು (ಉದಾಹರಣೆಗೆ ‘ಬಹಾದೂರಿ ತೋಡಿ’ ಅಥವಾ ‘ಖಟ್’ ರಾಗಗಳಲ್ಲಿ ವಚನಗಳನ್ನು ಹಾಡುವುದು) ಆಯ್ಕೆ ಮಾಡಿಕೊಳ್ಳುವಲ್ಲಿ ಅನಕೃ ಅವರ ಒಡನಾಟ ಮನ್ಸೂರರಿಗೆ ಸಹಕಾರಿಯಾಯಿತು. ಜನಪ್ರಿಯತೆ: ಅನಕೃ ಅವರ ಪ್ರೇರಣೆಯಿಂದ ಮನ್ಸೂರರು ವಚನಗಳನ್ನು ಹಾಡಲು ಪ್ರಾರಂಭಿಸಿದ ಮೇಲೆ, ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ನಂತಹ ವಚನಗಳು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾದವು.ಹೀಗೆ, ಮಲ್ಲಿಕಾರ್ಜುನ ಮನ್ಸೂರರ ಗಾಯನದಲ್ಲಿ ವಚನ ಸಾಹಿತ್ಯವು ಶಾಸ್ತ್ರೀಯ ಘನತೆಯನ್ನು ಪಡೆಯಲು ಅನಕೃ ಅವರ ಸ್ನೇಹ ಮತ್ತು ಪ್ರೋತ್ಸಾಹವೇ ತಳಹದಿಯಾಯಿತು. 1967 ರಲ್ಲಿ ಶ್ರೀ ಬಸವೇಶ್ವರ ಅವರ ಅಷ್ಟ ಶತಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರ ವರ್ಷವಿಡಿ ಈ ಕಾರ್ಯಕ್ರಮವನ್ನು ಮಾಡ ಬೇಕೆಂದು ನಿರ್ಧರಿಸಿ ಶ್ರೀ ಬಸವೇಶ್ವರ ಎಂಬ ಆಂಗ್ಲ ಭಾಷೆಯಲ್ಲಿ ಬಸವಣ್ಣನವರ ಬಗ್ಗೆ  ಎಲ್ಲಾ ಸಾಹಿತಿಗಳಿಗೆ ಬರೆಯಲು ಹೇಳಿ ಬಸವಣ್ಣನವರ ಜೊತೆಗೆ ಇತರ  ದಾರ್ಶನಿಕರನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಸುಂದರ ಲೇಖನ ಬರೆಯಲು ಸ್ವತಃ ಕರ್ನಾಟಕದ ಅಂದಿನ ಮುಖ್ಯ ಮಂತ್ರಿ ಶ್ರೀ ಎಸ್ ನಿಜಲಿಂಗಪ್ಪನವರು ಎಲ್ಲಾ ಸಾಹಿತಿಗಳಿಗೆ ಪತ್ರ ಬರೆದರು.ಅದರಂತೆ ಶ್ರೀ ಎಸ್ ನಿಜಲಿಂಗಪ್ಪನವರು ಶ್ರೀ ಅನಕೃ ಅವರಿಗೆ ಪತ್ರ ಬರೆದು ನೀವು ಬಸವಣ್ಣ ಮತ್ತು ಚತುರಾಚಾರ್ಯರ ಬಗ್ಗೆ ಲೇಖನ ಬರೆಯಲು ಹೇಳಿದರು.ಆಗ ಶ್ರೀ ಅನಕೃ ಅವರುಜಗತ್ತಿನಲ್ಲಿ ಬಸವಣ್ಣನವರಿಗೆ ಯಾರನ್ನೂ ಹೋಲಿಸಲಾಗದು. ಒಂದು  ವೇಳೆ ಹೋಲಿಸುವುದಿದ್ದರೆ ಅದು ಇನ್ನೊಬ್ಬ ಬಸವಣ್ಣನವರಿಗೆ ಮಾತ್ರ ಎಂದು ಹೇಳಿದರು. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಿಟ್ಟ  ಧೀಮಂತ ಸಾಹಿತಿ ಅನಕೃ ನಿತ್ಯ ಸ್ಮರಣೀಯರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

Read Post »

ಪುಸ್ತಕ ಸಂಗಾತಿ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ

ಪುಸ್ತಕ ಸಂಗಾತಿ ಸುನೀತ ಕುಶಾಲನಗರ ಜಯಲಕ್ಷ್ಮಿ ಕೆ, ಮಡಿಕೇರಿ “ನಡೆದಷ್ಟೂ ದಾರಿ” ಕೃತಿಯ ಹೆಸರು : ನಡೆದಷ್ಟೂ ದಾರಿಲೇಖಕಿ : ಜಯಲಕ್ಷ್ಮಿ ಕೆ ಮಡಿಕೇರಿಪುಟಗಳು : 188ಬೆಲೆ : 230.ಪ್ರಕಾಶಕರು : ಅಂಬಾರಿ ಪ್ರಕಾಶನಕುವೆಂಪುನಗರ, ಮೈಸೂರು ವೃತ್ತಿಯಲ್ಲಿ ಒಬ್ಬ ಅಧ್ಯಾಪಕಿಯಾಗಿ ಜಯಲಕ್ಷ್ಮಿ ಯವರು ಚಿರಪರಿಚಿತರು. ಪ್ರವೃತ್ತಿಯಿಂದ ಬರೆಹಗಾರ್ತಿಯಾಗಿ ಕೊಡಗು ಜಿಲ್ಲೆಯಲ್ಲಿ ಗುರುತ್ತಿಸಿಕೊಂಡವರು. “ನಡೆದಷ್ಟೂ ದಾರಿ” ಇವರ ಮೂರನೆಯ ಕೃತಿ. ಮೊದಲನೆಯದು ಚಪ್ಪಾಳೆಗೂ ಬೆಲೆಯಿದೆ.ಎರಡನೆಯದು ಮತ್ತೆ ವಸಂತ ಆಗಿದ್ದು ಈ ಕೃತಿ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ, ಮುನಿ ಗಂಗಮ್ಮ ಪ್ರಶಸ್ತಿ ಮತ್ತು ಉಮಾ ಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಳನ್ನು  ಗಿಟ್ಟಿಸಿಕೊಂಡಿದೆ.     ‘ ನಡೆದಷ್ಟೂ ದಾರಿ’ ಪುಸ್ತಕವನ್ನು ಓದುತ್ತಾ ಹೋದಂತೆ ಪುಸ್ತಕ ಮುಗಿಯುವವರೆಗೂ ಮುಚ್ಚಿಡಲಾಗಷ್ಟು ಕುತೂಹಲ ತಂದುಕೊಟ್ಟಿತು.ಲೇಖಕಿ ಬಳಸಿದ ಭಾಷೆ, ಭಾಷೆಯ ಮೇಲಿನ ಹಿಡಿತ, ಗಟ್ಟಿತನ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಇವರು  ಸಾಹಿತ್ಯ ಪರಂಪರೆಯನ್ನು ಓದಿಕೊಂಡು ವರ್ತಮಾನಕ್ಕೂ ಅಪ್ಡೇಟ್ ಆಗುತ್ತಿದ್ದಾರೆ  ಎಂದು  ಈ ಕೃತಿಯೇ ಸಾರಿ ಹೇಳಿದೆ. “ನಡೆದಷ್ಟೂ ದಾರಿ ಪಡೆದಷ್ಟೂ ಭಾಗ್ಯ” ಈ ಲೇಖನದಲ್ಲಿ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಕಲಿಕೆಯಲ್ಲಿ ಆಸಕ್ತಿ ಹೀನನಾಗುವುದಕ್ಕೆ  ಕಾರಣ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುವ ಅಧ್ಯಾಪಕಿ ಲೇಖನದ ಮೂಲಕ ಕಲಿಯಲು ವಿಷಯದ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಪೋಷಕರು ಒತ್ತಡ ಹೇರಬಾರದು ಎಂದು ಹೇಳುತ್ತಾರೆ.  ‘ಬದುಕು ರೂಪಿಸುವ ಶಿಲ್ಪಿಗಳ ಬದುಕು’ ಎಂಬ ಲೇಖನದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಶ್ರಮ,ಪಡೆಯುತ್ತಿರುವ ಕಡಿಮೆ ವೇತನ, ಪವಿತ್ರ ವೃತ್ತಿ ಎಂದು ಅರ್ಪಿಸಿಕೊಳ್ಳುವ ಇವರು ಎಲ್ಲೋ ಅಲಕ್ಷಿತರಾಗುತ್ತಿದ್ದಾರೆ. ಇವರಿಗೆ ಕೆಲಸದ ಒತ್ತಡ ಹೇರಿದರೆ ಸರ್ಕಾರಿ ಶಿಕ್ಷಕರಿಗೆ ಬೋಧನೇತರ ಕಾರ್ಯಗಳ  ಹೊರೆ ಎಂದು ಮುಕ್ತವಾಗಿ ಈ ಲೇಖನದಲ್ಲಿ ಶಿಕ್ಷಕರ ಬವಣೆಯನ್ನು ಬಿಚ್ಚಿಡುತ್ತಾರೆ. ಇವರ ಒಂದೊಂದು ಲೇಖನದ ವಸ್ತು ಸಾಮಾನ್ಯ ಅನಿಸಿದರೂ ಓದುತ್ತಾ ಅದರ ಗಹನತೆ  ಆಳವಾದದ್ದು ಎಂದು ವೇದ್ಯವಾಗುತ್ತದೆ.  ಜಯಲಕ್ಷ್ಮಿಯವರ ಲೇಖನಗಳ ಶೀರ್ಷಿಕೆಗಳ ಆಕರ್ಷಣೆ ಮತ್ತೊಂದು ವಿಶಿಷ್ಟವೆಂಬುದನ್ನು ಹೇಳಲೇಬೇಕಾಗುತ್ತದೆ. ಉದಾಹರಣೆಗೆ “ಕರಿಹಲಗೆಯ ಹಿಂದೆ ಕರಗುತ್ತಿದೆ ಕಾಯಗಳು”, “ಮನ  ಮರುಭೂಮಿಯಾಗುವ ಮುನ್ನ “ಹೀಗೆ ವೈವಿಧ್ಯಮಯ ಶಿರೋನಾಮೆಗಳೇ ಲೇಖನಗಳನ್ನು ಓದುವಂತೆ ಕುತೂಹಲ ಮೂಡಿಸುತ್ತವೆ.‘ಮಕ್ಕಳ ಹದಿಹರೆಯ’ ಲೇಖನದಲ್ಲಿ ಅಮ್ಮ,ತಾಯಿ ಎನ್ನುವ ಪದಕ್ಕೊಂದು ಪರಿಪೂರ್ಣ ವ್ಯಾಖ್ಯಾನ, ಆಕೆಯ ಕೆಲಸ ಕಾರ್ಯಗಳಿಗೊಂದು ಸೀಮಿತ ರೇಖೆ ಇನ್ನೂ ಸೃಷ್ಟಿಯಾಗಿಲ್ಲ. ಆಗಲು ಸಾಧ್ಯವೂ ಇಲ್ಲ. ದೇವರ  ಈ ಅಪೂರ್ವ ಕೊಡುಗೆಯನ್ನು ಪದಪುಂಜಗಳಿಂದ ಬಿಂಬಿಸಲು ಸಾಧ್ಯವೇ?  ಎಂದು ಕೇಳಿರುವುದು  ಸದಾ ಕಾಡುವ ವಾಕ್ಯ ಮತ್ತು ಬದುಕಿನ ವಾಸ್ತವ. ‘ನಾನೂ ಕವಿಯಾಗಬೇಕು’ ಕವಿಯಾಗುವ ನಾನು ಮೊದಲು ಕಿವಿಯಾಗಬೇಕು ಮತ್ತು ಸಾಕಷ್ಟು ಓದಿಕೊಳ್ಳಬೇಕು.ಸಾಗರದಷ್ಟು ಓದಿದರೆ ಸಾಸಿವೆಯಷ್ಷು ಜ್ಞಾನ ವೃದ್ಧಿಗೆ ಸಾಧ್ಯ ಮತ್ತು ಆ ಮೂಲಕ ಭಾಷೆಯ ಹಿಡಿತ ಸಿದ್ಧಿಸುತ್ತದೆ ಎಂಬ ಇವರ ಅಭಿಪ್ರಾಯ ಬರೆಹಗಾರರೊಳಗೆ ಜಾಗ್ರತೆ ಮೂಡಿಸುವುದರ ಜೊತೆಗೆ ಮೆಲ್ಲಗೆ ತಿವಿದಂತೆ ಭಾಸವಾಗುತ್ತದೆ.   ಚಪ್ಪಾಳೆ ಗಿಟ್ಟಿಸಿಕೊಳ್ಳುವವರಿಗೆ ಇತರರಿಗೂ ಚಪ್ಪಾಳೆ ಕೊಡುವ, ಪ್ರಶಂಸಿಸುವ ಗುಣ ಇರಬೇಕು ‌ಎನ್ನುವ ಇವರು ಹತ್ತಾರು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲವೊಂದು ಉದಾಹರಣೆಗಳನ್ನು ಕೊಡುವುದರ ಮೂಲಕ ಈ ಲೇಖನದಲ್ಲಿ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.‘ ಪುಸ್ತಕಂ ಹಸ್ತ ಭೂಷಣಂ’. ಎಂಬ ಲೇಖನದಲ್ಲಿ ಒಳ್ಳೆಯ ಪುಸ್ತಕಗಳೆಂದರೆ “ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇದಾವಿಗಳ ಜೀವನ ಸರ್ವಸ್ವ ” ಆಂಗ್ಲಕವಿ ಮಿಲ್ಟನ್ ರವರ  ಅದ್ಭುತ ಮಾತನ್ನು ಉಲ್ಲೇಖಿಸುತ್ತಾ ಪುಸ್ತಕದ ಮಹತ್ವವನ್ನು ವೇದ್ಯವಾಗಿಸಿದ್ದಾರೆ.   ತುಟಿಯಂಚಿನಲ್ಲಿ ನಗು ತರಿಸಿದ ಲೇಖನ ‘ಗೋಳಿನ ದನಿಗೆ ಕಿವಿಗಳಿಲ್ಲ’. ಈ ಲೇಖನವನ್ನು ಓದುತ್ತಾ ಹೋದಂತೆ ಧನಾತ್ಮಕ ಚಿಂತನೆ ಮತ್ತು ಮಾತು ಕೊಡುವ ಆತ್ಮ ವಿಶ್ವಾಸ  ಇವುಗಳ ಕೆಲವು ನಿದರ್ಶನಗಳೊಂದಿಗೆ  ಹೇಗೆ ಬದುಕನ್ನು ಸುಖದ ಸುಗ್ಗಿಯಾಗಿಸಬಹುದು ಎಂಬುದರ ಬಗ್ಗೆ  ಇವರ ಅನಿಸಿಕೆ ನಿಜಕ್ಕೂ ವಾಸ್ತವ  ಅನಿಸಿತು.’ ನೋವಲ್ಲೂ ನಲಿಯುವವನ ಸುತ್ತಲೇ ಈ ಜಗವೆಲ್ಲಾ ‘ ಈ ಮಾತು ನಮ್ಮ ಆಸುಪಾಸಿನ ಸತ್ಯ ಎನಿಸುವಷ್ಟು ನಮ್ಮನ್ನು ಸೆಳೆಯುತ್ತಾ ಹೋಗುತ್ತದೆ ಮತ್ತು ಅಗತ್ಯ ಬರೆಹ ಕೂಡಾ.   “ಹೇಗೆ‌ ಬೇಕಾದರೂ ಅರ್ಥೈಸಿಕೊಳ್ಳಿ” ಎಂಬ ಲೇಖನದಲ್ಲಿ ನಾವು ದಿನ ನಿತ್ಯ ಮಾಡುವ ವ್ಯಾಕರಣ ದೋಷಗಳು ವ್ಯಾಕರಣದ ಮಹತ್ವ ಹಾಗೂ ಗಮನಿಸಬೇಕಾದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.ಇಲ್ಲಿ ಇವರ ಭಾಷಾ ಪ್ರೇಮ ಧಾರಾಕಾರವಾಗಿ ಅನಾವರಣವಾಗಿದೆ. ಹಾಗೆ ಮುಂದುವರೆಯುತ್ತಾ ಹಬ್ಬಗಳು ಹೇಗೆ ನಮಗೆ ಉತ್ಸಾಹಕಾರಿ ಹಾಗೂ ಬದುಕಿಗೆ ಜೀವಂತಿಕೆ ತುಂಬುವ ಸೆಲೆ  ಎಂಬುದನ್ನು ತಮ್ಮ ಅನುಭವ ಮೂಸೆಯಲ್ಲಿ ‘ಜೀವನೋತ್ಸಾಹ ತುಂಬುವ ಹಬ್ಬಗಳು ‘ ಎಂಬ ಲೇಖನದ ಮೂಲಕ ಅನುಭಾವವಾಗಿಸಿದ್ದಾರೆ.        ಪುಸ್ತಕ ಸಂಸ್ಕೃತಿಯಿಂದ ಹೇಗೆ ಪ್ರಬುದ್ಧರಾಗಬಹುದು ಎಂದು ಹೇಳುತ್ತಾ ಹವ್ಯಾಸಗಳಲ್ಲಿ ಅತ್ತ್ಯುತ್ತಮ ಹವ್ಯಾಸ ಓದುಗಾರಿಕೆ ಎನ್ನುತ್ತಾರೆ. ಹೌದು! ಎಳೆವೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಭಾಷಾ ಗಟ್ಟಿತನ ,ಮಾತನಾಡುವ ಧೈರ್ಯ ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬುದನ್ನು ಎಳೆವೆಯಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಕರಾಗಿ, ಹಿರಿಯರಾಗಿ ತುಂಬಬೇಕಿದೆ ಎನ್ನುತ್ತಾರೆ. “ಹಾಸ್ಯ ಕವಿ ಬೀಚಿ ಸವ್ಯಸಾಚಿ ”  ಎಂಬ ಚೆಂದದ ಶೀರ್ಷಿಕೆಯ ಲೇಖನದಲ್ಲಿ “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೆ ಸ್ವಾಗತ” ಹಾಸ್ಯ ಬ್ರಹ್ಮ ಬೀಚಿಯವರ ಆತ್ಮಕಥನದಿಂದ ಆಯ್ದ ಸಾಲುಗಳನ್ನು ಬಳಸಿ ಬೀಚಿಯವರ ಸಾಹಿತ್ಯ ಸಾಧನೆಯನ್ನು ಸ್ಮರಿಸಿರುವುದು ಇವರ  ಓದಿನ ವಿಸ್ತಾರ ಮತ್ತು ಅಧ್ಯಯನವನ್ನು ಎತ್ತಿ ಹಿಡಿಯುತ್ತದೆ. ಈ ಕೃತಿಯಲ್ಲಿ ಶಿಕ್ಷಣವಿದೆ. ಸಂಸ್ಕೃತಿ, ಶಿಸ್ತು, ಸಂಸ್ಕಾರ, ಸಂಪ್ರದಾಯ ಎಲ್ಲವನ್ನು ಒಳಗೊಂಡ ಲೇಖನಗಳಿವೆ.ಮನಃಶಾಸ್ತ್ರಜ್ಞರ ಅಭಿಪ್ರಾಯಗಳು, ಶಿಕ್ಷಣ ತಜ್ಞರ ಸಲಹೆಗಳು, ಕವಿವಾಣಿಗಳು, ವಿಜ್ಞಾನಿಗಳ ಜ್ಞಾನ, ಲೋಕ ಜ್ಞಾನ ಇತ್ಯಾದಿ ವಿಚಾರಧಾರೆಗಳನ್ನು ಈ ಕೃತಿ ಕಟ್ಟಿಕೊಡುತ್ತದೆ.ಬಸವಣ್ಣನೆಂಬ ಸಾಧನೆಯ ಪ್ರತಿರೂಪದಿಂದ ಹಿಡಿದು ವೈವಿಧ್ಯಮಯ ವಸ್ತುಗಳನ್ನು  ಇಲ್ಲಿನ ಲೇಖನಗಳು ಹೊಂದಿವೆ.  ಶ್ರೀ ಸುಬ್ರಾಯ ಸಂಪಾಜೆಯವರು ಮುನ್ನುಡಿಯ ಮೂಲಕ  “ಈ ಕೃತಿ  ಒಂದು ಶಿಕ್ಷಣ ಸಂಹಿತೆಯೇ ಸರಿ ” ಎಂದು ಉಲ್ಲೇಖಿಸಿರುವುದು ಕೃತಿಯ ತೂಕವನ್ನು ಹೆಚ್ಚಿಸಿದೆ..  ಖ್ಯಾತ ಬರೆಹಗಾರ್ತಿ ಸ್ಮಿತಾ ಅಮೃತರಾಜ್ ಬೆನ್ನುಡಿಯ ಮೂಲಕ  ಓದಿದ ನಂತರ ಬಹಳ ಕಾಡುವ ಬರೆಹ  ಎಂದು ಹೇಳಿರುವುದು  ಇವರೊಬ್ಬರು  ಸಮರ್ಥ ಬರೆಹಗಾರ್ತಿ ಎಂಬುದಕ್ಕೆ  ಸಾಕ್ಷಿ ಎನ್ನುವಂತಿದೆ .  ಜಯಲಕ್ಷ್ಮಿ.ಕೆ. ಇವರ “ನಡೆದಷ್ಟೂ ದಾರಿ” ಕೃತಿಯು  ಸುಂದರ ಮುಖಪುಟ ಹೊಂದಿದ್ದು ಇದರಲ್ಲಿ ಸುಮಾರು 43 ಲೇಖನಗಳಿದ್ದು,184 ಪುಟಗಳಿರುವ ಈ ಕೃತಿಯ ಬೆಲೆ ರೂಪಾಯಿ 230 ಆಗಿರುತ್ತದೆ.    ಈ ಪುಸ್ತಕವೂ  ಪ್ರಶಸ್ತಿ  , ಗೌರವಕ್ಕೆ ಅರ್ಹವಾಗಿದ್ದು ಇವರು ಜಿಲ್ಲೆಯ ಭರವಸೆಯ ಲೇಖಕಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಯಲಕ್ಷ್ಮಿಯರಿಗೆ ಶುಭಹಾರೈಕೆಗಳು.   ಸುನೀತ ಕುಶಾಲನಗರ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-20 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಭಾಗ- 20*ಜಯದೇವಿತಾಯಿ ಜೀವನ ವೃತ್ತಾಂತ*ಪತಿಯನ್ನು ದಿನರಾತ್ರಿ ಕಾಳಜಿಯಿಂದ ನೋಡಿಕೊಳ್ಳುತ್ತ ಜಯದೇವಿ ತಾಯಿಯವರು   ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಮರೆತಿದ್ದರು. ತಮ್ಮ ದೇಹದ ನೋವನ್ನು ಕಡೆಗಣಿಸಿದ್ದರು. ಆ ಸಮಯದಲ್ಲಿ ಅವರಿಗೆ ಬೇನೆಯ ಅರಿವು ಆಗಲಿಲ್ಲ….  ನಂತರದ ದಿನಗಳಲ್ಲಿ ಒಳಗಿದ್ದ ನೋವುಗಳು ಒಂದೊಂದಾಗಿ ತಲೆ ಎತ್ತಲು ಶುರುಮಾಡಿದವು.ಆ ನಡುವೆ ಪತಿಯ ಸೇವೆ ಮಾಡುವಾಗ ಮೆಟ್ಟಲು ಏರಲು ಹೋಗಿ ಬಿದ್ದು ಬೆನ್ನಿನ ಎಲುಬಿಗೆ  ಗಂಭೀರ ಹಾನಿ ಮಾಡಿತ್ತು.  ಅವರು ತಾತ್ಕಾಲಿಕ ಚಿಕಿತ್ಸೆ ಪಡೆದು ಪತಿಗೆ ತನ್ನ ಆರೋಗ್ಯದ ಬಗ್ಗೆ ತಿಳಿಯದ ಹಾಗೆ ದಿನಗಳನ್ನು ಕಳೆಯುತ್ತಿದ್ದರು. ಪತಿಯ ಆರೈಕೆಯೇ ಅವರ ಪ್ರಪಂಚವಾಗಿತ್ತು. ಮೊದಲಿಗೆ ಅದು ಸಾಮಾನ್ಯವಾಗಿ ಕಂಡರೂ,  ದಿನದಿಂದ ದಿನಕ್ಕೆ ತೀವ್ರವಾಗತೊಡಗಿತು. ತಲೆ ಸುತ್ತುವುದು, ನಿಶಕ್ತತೆ ಹೆಚ್ಚಾಗುತ್ತಿರುವುದು ಕಂಡುಬಂದಿತು…ದೇಹದಲ್ಲಿ ವಿಚಿತ್ರವಾದ ದುರ್ಬಲತೆ,.. ನಿಂತುಕೊಳ್ಳಲು ಸಾಧ್ಯವಾಗದಷ್ಟು ನೋವು ಕೊಡತೊಡಗಿತು. .. ಕೊನೆಗೆ ಮಕ್ಕಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರಿಶೀಲಿಸಿದಾಗ, ಬಹಳ ದಿನಗಳಿಂದ ನಿರ್ಲಕ್ಷ್ಯಗೊಂಡ ಆರೋಗ್ಯ ಸಮಸ್ಯೆಗಳು ಗಂಭೀರ ಹಂತಕ್ಕೆ ಬಂದಿವೆ ಎಂದು ತಿಳಿದುಬಂತು.ಮುಂಬೈಯಲ್ಲಿರುವ ದೊಡ್ಡ ಆಸ್ಪತ್ರೆಗೆ ಸೇರಿಸಲಾಯಿತು .ಪರೀಕ್ಷೆಗಳ ನಂತರ ವೈದ್ಯರು ಗಂಭೀರವಾಗಿ ಹೇಳಿದರು…..“ಇದು ತುಂಬಾ ದಿನಗಳಿಂದ ಇದ್ದ ಸಮಸ್ಯೆ. ಈಗ ಆಪರೇಷನ್ ಮಾಡಲೇಬೇಕು. ಆದರೆ…”“ಆದರೆ” ಎಂಬ ಒಂದು ಪದವೇ ಮಕ್ಕಳ ಮನಸ್ಸನ್ನು ನಡುಗಿಸಿತು.ವೈದ್ಯರು ಮುಂದುವರೆದು ಹೇಳಿದರು….“ಆಪರೇಷನ್ ಮಾಡಿದರೂ ಅವರು ಮತ್ತೆ ಸಹಜವಾಗಿ ಓಡಾಡುತ್ತಾರೆ ಎಂಬ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ” ದೀರ್ಘಕಾಲದ ನಿರ್ಲಕ್ಷ್ಯ, ಮತ್ತು ಎಲುಬಿನ ಹಾನಿ….ಇವುಗಳ ಕಾರಣದಿಂದ ಫಲಿತಾಂಶ ಅನಿಶ್ಚಿತ.”ಎಂದರು.ಆ ಮಾತು ಕೇಳಿ ಮಕ್ಕಳ ಕಣ್ಣು ನೀರಾಯಿತು. ಆದರೆ ತಾಯಿಯವರು ಮಾತ್ರ ಶಾಂತವಾಗಿದ್ದರು.“ನನಗೆ ಭಯ ಇಲ್ಲ… ನಾನು ನನ್ನ ಜೀವನವನ್ನು ನನ್ನವರಿಗಾಗಿ ಬದುಕಿದ್ದೇನೆ. ಈಗ ಏನಾದರೂ ಆಗಲಿ, ನಾನು ಒಪ್ಪಿಕೊಂಡಿದ್ದೇನೆ…” ಎಂದು ವಿಶ್ವಾಸದಿಂದ ಹೇಳಿದರು.ಆಸ್ಪತ್ರೆಯ ಹಾಸಿಗೆಯಲ್ಲಿ ಇದ್ದಾಗಲೂ ಅವರು ತಮ್ಮ ನೋವನ್ನು ಹೇಳಿಕೊಳ್ಳಲಿಲ್ಲ. ಬದಲಾಗಿ ಮಕ್ಕಳ ಮುಖ ನೋಡುತ್ತಾ,“ನೀವು ಚೆನ್ನಾಗಿರಬೇಕು… ನಾನು ಹುಷಾರಾಗಿ ಬೇಗ ಬರುತ್ತೇನೆ…” ಅನ್ನುವ ಮನೋಬಲದ ಧೈರ್ಯ ತೋರುತ್ತಿದ್ದರು . ಆಪರೇಷನ್ ದಿನ ಬಂದಿತು. ವೈದ್ಯರು ತಮ್ಮ ಶ್ರೇಷ್ಠ ಪ್ರಯತ್ನ ಮಾಡಿದರು.ಐದು ಗಂಟೆಗಳ ಕಾಲ ನಡೆದ ಆ ಶಸ್ತ್ರಚಿಕಿತ್ಸೆ ಕುಟುಂಬದವರಿಗೆ ಯುಗದಷ್ಟು ಉದ್ದವಾಗಿತ್ತು.ಆಪರೇಷನ್ ನಂತರ, ಹಾಸಿಗೆಯಲ್ಲಿದ್ದರೂ ಅವರು ಮಕ್ಕಳಿಗೆ ಆಶೀರ್ವಾದ ಕೊಡುತ್ತಾ,“ನೀವು ಖುಷಿಯಾಗಿ ಇರಿ… ಅದೇ ನನ್ನ ಗೆಲುವು…”ಎಂದು ಹೇಳುತ್ತಿದ್ದರು.ತಾಯಿಯವರಿಗಾದ ಈ ಅನುಭವದಿಂದ ನಮ್ಮೆಲ್ಲರಿಗೂ  ಒಂದು ಮಾತನ್ನು ಹೇಳುತ್ತಿದ್ದರು…. “ನಮ್ಮ ಆರೋಗ್ಯವನ್ನು ಕಡೆಗಣಿಸುವ… ತ್ಯಾಗ ಒಂದು ದಿನ ನೋವಿನ ರೂಪದಲ್ಲಿ ಹಿಂದಿರುಗುತ್ತದೆ. ಹೀಗಾಗಿ ದೇಹದ ಆರೋಗ್ಯದತ್ತ ಯಾವಾಗಲೂ ನಾವು ಅಲಕ್ಷಿಸಬಾರದು ದೇಹದಲ್ಲಿ ಸ್ವಲ್ಪಾದರೂ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಅದರ ಚಿಕಿತ್ಸೆಯನ್ನು ಪಡೆದುಕೊಳ್ಳಲೇಬೇಕು. ದೇವರು ದಯಪಾಲಿಸಿದ ಅತ್ಯ ಅಮೂಲ್ಯವಾದ ನಮ್ಮ ಆತ್ಮ- ನಮ್ಮ ದೇಹದ ಕಾಳಜಿಯನ್ನು ನಾವೇ ತೆಗೆದುಕೊಳ್ಳಲೇ ಬೇಕೆನ್ನುವ ವೈಚಾರಿಕತೆಯಿಂದ ತಿಳಿ ಹೇಳುತ್ತಿದ್ದರು. ಆಪರೇಷನ್ ಆದ ನಂತರದ ದಿನಗಳು….. ತಾಯಿಯವರ ಜೀವನದಲ್ಲಿ ಅತ್ಯಂತ ಕಠಿಣವಾದ ಅಧ್ಯಾಯವಾಗಿತ್ತು. ವೈದ್ಯರು ಸ್ಪಷ್ಟವಾಗಿ ಸೂಚಿಸಿದ್ದರು…“ಇನ್ನೂ ಕೆಲವು ವಾರಗಳು, ಬೋರಲಾಗಿಯೇ (ಹಾಸಿಗೆಯ ಮೇಲೆಯೇ) ಮಲಗಿರಬೇಕು… ಚಲನವಲನ ಬಹಳ ಕಡಿಮೆ ಇರಬೇಕು.”ದಿನವಿಡೀ ಓಡಾಡುತ್ತಿದ್ದ…ಎಲ್ಲರಿಗೂ ಆಧಾರವಾಗಿದ್ದ ತಾಯಿಯವರು ಈಗ ಹಾಸಿಗೆಯ ಮೇಲೆ  ಮಲಗಬೇಕಾದ ಪರಿಸ್ಥಿತಿ…ಅದು ದೇಹ- ಮನಸ್ಸಿಗೂ ದೊಡ್ಡ ಪರೀಕ್ಷೆ.ಬೆನ್ನು ನೋವು ಇನ್ನೂ ತೀವ್ರವಾಗಿತ್ತು. ಪ್ರತಿಯೊಂದು ತಿರುಗಾಟವೂ ನೋವಿನ ಅಲೆ ತರಿಸುತ್ತಿತ್ತು. ಆದರೆ ಆ ನೋವನ್ನೂ ಅವರು ತಮ್ಮ ಮುಖದಿ ತೋರಿಸಲಿಲ್ಲ.ಡಾಕ್ಟರ್‌ಗಳು, ನರ್ಸ್‌ಗಳು ಭೇಟಿ ನೀಡಿದಾಗ“ನೋವು ಹೇಗಿದೆ?” ಎಂದು ಕೇಳಿದರೆ,ಅವರು ತುಂಟ ನಗೆಯೊಂದಿಗೆ,“ಚೆನ್ನಾಗಿದೆ… ನಾನು ಬಲವಾಗಿದ್ದೇನೆ…” ಎಂದು ಉತ್ತರಿಸುತ್ತಿದ್ದರು. *ಗಟ್ಟಿಕೊಂಡಿದೆ ಮನ| ಬೆಟ್ಟದ ಎತ್ತರವಾಗಿಪೆಟ್ಟಿಗೆ ಮಣೆಯಾದ ನಿಶ್ಚಲ- ನಿಲ್ಲುವದುಕಟ್ಟು ಕಾವಲು ಇಲ್ಲದಲೆ||* ಎನ್ನುತ ತಾಯಿಯ ಮೊಗದ ನಗು …. ಅವರ ಮನೋಬಲದ ಪ್ರತಿಬಿಂಬವಾಗಿತ್ತು……!! ಒಳಗೆ ಎಷ್ಟೇ ನೋವು ಇದ್ದರೂ, ಹೊರಗೆ ಅವರು  ಪ್ರಸನ್ನ ಚಿತ್ತರಾಗಿ ಇರುತ್ತಿದ್ದರು.ಮಕ್ಕಳು ಅವರ ನೋವನ್ನು ಅರಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಕಣ್ಣೀರು ತಡೆಯಲಾಗದೆ ಹೊರಬಂದಾಗ, ತಾಯಿಯವರು ಅವರನ್ನು ಸಮಾಧಾನಪಡಿಸುತ್ತಿದ್ದರು..“ನೀವು ಅಳಬೇಡಿ… ನಾನು ಚೆನ್ನಾಗುತ್ತೇನೆ…”ಎನ್ನುವ ಸಕಾರಾತ್ಮಕತೆಯ ಭಾವನೆ  ಬಲವೇ ಅವರನ್ನು ಬೇಗನೆ ಚೇತರಗೊಳಿಸಿತು ಅನ್ನುತ್ತಿದ್ದರು. ದಿನಗಳು ಕಳೆದಂತೆ, ವೈದ್ಯರು ಕೂಡ ಆಶ್ಚರ್ಯಪಟ್ಟಿದರು.ಅವರ ಚೇತರಿಕೆಯ ವೇಗ, ಅವರ ಸ್ಥಿತಿಗಿಂತ ಹೆಚ್ಚು ಉತ್ತಮವಾಗಿತ್ತು.“ಇದು ನಮ್ಮ ಚಿಕಿತ್ಸೆಕಿಂತ… ಅವರ ಮನೋಬಲವೇ ಅವರನ್ನು ಗುಣಪಡಿಸಿದೆ,” ಎಂದು ವೈದ್ಯರು ಹೇಳಿದರು.ಹೌದು, ದೇಹದ ಗಾಯಗಳನ್ನು ಔಷಧಿಗಳು ಗುಣಪಡಿಸಿದಂತೆ….. ನಮ್ಮಲ್ಲಿ ಬಲವಾಗಿದ್ದ ಸಕಾರಾತ್ಮಕತೆಯೇ ಅದೇ ನಿಜವಾದ ಚಿಕಿತ್ಸಕ ಎನ್ನುವರು‌ ತಾಯಿಯವರು. *ಬಿದ್ದು ಹೋಗುವ| ದೇಹಕ್ಕೆ ಕಾದಿಡುವುದೆತಕ್ಕೆಸಾಧಿಸಬೇಕು ಅದರಿಂದ- ಮಾಕಾರ್ಯಶೋಧಿಸಬೇಕು ತನ್ನಿರುವ|| ಎನ್ನುವಂತೆ ತಮ್ಮ ಮುಂದಿನ ಕಾರ್ಯಕ್ಕೆ ಅಣೆಯಾಗಲು ಸಿದ್ದರಾದರು. ಸ್ವಲ್ಪ ಸ್ವಲ್ಪವಾಗಿ ಅವರು ಕುಳಿತುಕೊಳ್ಳಲು ಆರಂಭಿಸಿದರು… ನಂತರ ನಿಧಾನವಾಗಿ ಹೆಜ್ಜೆ ಇಡಲು ಪ್ರಯತ್ನಿಸಿದರು. ಪ್ರತಿಯೊಂದು ಹೆಜ್ಜೆಯಲ್ಲೂ ನೋವು ಇದ್ದರೂ, ಅವರ ಮುಖದಲ್ಲಿ ನಗು ಕಡಿಮೆಯಾಗಲಿಲ್ಲ.ಅವರ ಚೇತರಿಕೆ  ವೈದ್ಯಕೀಯ ಸಾಧನೆ ಜೊತೆಗೆಅವರ ಅಜೇಯ ಮನೋಬಲದ ಜಯವಾಗಿತ್ತು….!! ದೇಹ ದುರ್ಬಲವಾದರೂ, ಮನಸ್ಸು ಬಲವಾಗಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ…. ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರು ತಾಯಿಯವರು ಅಂತ ವೈದ್ಯರು ಹೊಗಳುತ್ತಿದ್ದರು. *ಎಲೆ ಎಲೆ ಮಾನವ |ಏನಿದೆ ನಿನ್ನ ಕೈಯಲಿಕಾಲನ ಕೈವಾಡ ತಿಳಿದುಕೊ- ಮರ್ತ್ಯದಿಖಾಲಿ ಬಂದು ಖಾಲಿ ಹೋಗುವುದು||* ಅನ್ನುವಂತೆ ನನ್ನ ಕೈಯಲ್ಲಿ ಏನಿದೆ ಎಲ್ಲಾ ಸಿದ್ದರಾಮ ನಡೆಸಿದಂಗೆ …ಅವನ ಆಶೀರ್ವಾದದಿಂದಲೇ ನಾನು ಮತ್ತೆ ಎದ್ದು ಬದುಕಿ ಬಂದೆ ಅಂತ ಹೇಳುತಿದ್ದರು. ಇನ್ನು ಮಾಡುವ ಕೆಲಸ ನೂರಾರು ಇದೆ ಅದಕ್ಕೆ ಸಿದ್ದರಾಮನು ಮತ್ತೆ ನನಗೆ ಕರುಣಿಸಿದನು ಎನ್ನುವರು. ಎಲ್ಲ ನೋವುಗಳಿಗೂ ಗಟ್ಟಿಯಾಗಿ ನಿಂತ ದೇಹವು ಎಲ್ಲದಕ್ಕೂ ಅಣಿಯಾಗಿ ಆರೋಗ್ಯವಂತರಾಗಿ  ಸೊಲ್ಲಾಪುರಕ್ಕೆ ಬರುತ್ತಿದ್ದಂತೆ ಅವರಿಗೆ ಇನ್ನೊಂದು ಆಘಾತ ಕಾಯಿದಿತ್ತು. ಬರುವಾಗ ತರಲಿಲ್ಲ| ಬರಿದಾಗಿ ಹೋಗುವೆವೈರಿತನ ಬೆಳೆಸಿ ಎಷ್ಟು ದಿನ- ಬಾಳುವಿಪರರ ಹೃದಯ ಕಮರಿಸಿ || ಎನ್ನುವಂತೆ ಹೃದಯವನ್ನು ಕಮರಿಸಿದ ಗಂಡನ ತಮ್ಮ ಜಯದೇವಪ್ಪ…. ತಾಯಿಯವರ ಮೇಲೆ ಕೋರ್ಟಿನಲ್ಲಿ ಕೇಸು ದಾಖಲೆ ಮಾಡಿದ್ದ. *ದೂಶಿಸುತ ಅನ್ಯರ |ರೋಷ ಹಿಡಿದು ನೀನುದ್ವೇಷ ಮಾಡುವಿ ಏ ಮರಳೇ ಆಸ್ಥಿರ,ಆಯುಷ್ಯ ಪಡೆದು ಬಂದಿರುವೆ ||* ಅನ್ನುವಂತೆ ತಾಯಿಯವರು ಮಾಡಿದ ಮಹಾನ್ ಕಾರ್ಯಗಳಲಿ ಒಂದಾದ ಬಡ್ಡಿ ವ್ಯವಹಾರವನ್ನು ನಿಲ್ಲಿಸಿ, ಜನರಿಂದ ಕಿತ್ತುಕೊಂಡ ಆಸ್ತಿಗಳನ್ನು ತಿರುಗಿ ಕೊಟ್ಟಿದ್ದೇ ಒಂದು ದೊಡ್ಡ ಅಪರಾಧವಾಗಿತ್ತು ಜಗದೇಪ್ಪನಿಗೆ….. ಜಗದೇವಪ್ಪನು ಅಣ್ಣನ ಹೆಸರಿನಲ್ಲಿ ಇರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದವನು…. ತಾಯಿಯವರು ಅಸಹಾಯಕರ ಆಸ್ತಿಯನ್ನು ಹಿಂದಿರುಗಿಸುವ ತ್ಯಾಗವನ್ನು…. ದೌರ್ಬಲ್ಯವೆಂದು ಭಾವಿಸಿದ. “ಅಣ್ಣನ ಮಕ್ಕಳು ಚಿಕ್ಕವರು… ಆಸ್ತಿಯ ಜವಾಬ್ದಾರಿ ನನ್ನದು ಆಗಬೇಕು…” ಎಂಬ ದುರಾಸೆ ಅವನ ಮನಸ್ಸನ್ನು ಆವರಿಸಿತು. ತಾಯಿಯವರು ಎಲ್ಲ ಆಸ್ತಿಯನ್ನು ಜನರಿಗೆ ಹಿಂತಿರುಗಿಸುತ್ತಿರುವುದನ್ನು ನೋಡಿ, ಅವನ ಅಹಂಕಾರಕ್ಕೆ ಹೊಡೆತ ಬಂತು. *ಅಹಂಕಾರ ತಲೆಗೇರಿ| ಮಂಕನಂತೆ ಮಾತಾಡಿಬೆಂಕಿ ಉಡಿಯಲ್ಲಿ ಕಟ್ಟಿದಂತೆ ನೋಡಯ್ಯಬೆಂಕಿ ಆರಿಸುವದೇ ಬಲು ಲೇಸು ||* ಅಹಂಕಾರದ ಬೆಂಕಿಯ ಹುಡಿಯಲ್ಲಿ ಕಟ್ಟಿಕೊಂಡ ಜಗದೇವಪ್ಪನು ಅತ್ತಿಗೆಯು ಇನ್ನೂ ಎಲ್ಲಾ ಆಸ್ತಿಗಳನ್ನು ಹೀಗೆ ದಾನ ಮಾಡಿ ಕರಗಿಸಿ ಬಿಡುವಳು ಅಂತ ದಾವೇ ಮಾಡಿದ.ಆ ಸುದ್ದಿ ಕೇಳಿದ ಕ್ಷಣದಲ್ಲಿ, ತಾಯಿಯವರ ಹೃದಯ ಕ್ಷಣಮಾತ್ರ ಕಲುಕಿತು… ಆದರೆ ಮುಖದಲ್ಲಿ ಅದೇ ಶಾಂತಿ.*ಕಾಲನ ಕೈವಾಡ |ಅಲಗಿನಂತೆ ಕ್ರೂರಬಲ್ಲವರಿಗಿಲ್ಲ ಇಲ್ಲಿ ಸುಖವಿಲ್ಲ- ಪಾಪದಚೆಲ್ಲಾಟಕೆ ತಾಣವಾಗಿದೆ *||ಎನ್ನುವಂತಿದ್ದ ಸನ್ನಿವೇಶವನ್ನು ಎದುರಿಸುತ “ನಾನು ತಪ್ಪೇನೂ ಮಾಡಿಲ್ಲ… ಜನರ ಹಕ್ಕನ್ನು ಅವರಿಗೆ ತಿರುಗಿ ಕೊಟ್ಟಿದ್ದೇನೆ…” ಎಂದು ವಾದಿಸಿದರು ಆ  ನಂಬಿಕೆ ಅವರಿಗೆ ಬಲ ನೀಡಿತು *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜ ತತ್ವ -ಸಾರುವೇ  ಕೆಂಜಡೆಯವನ ಕೃಪೆಯಿಂದ ||*ಎಂದು ಎದೆಗುಂದದೆ  ಕೋರ್ಟಿಗೆ ಹೋದರು… ಕೋರ್ಟ್‌ನ ವಾತಾವರಣ….ತಾಯಿಯವರು ಮೊದಲ ಬಾರಿಗೆ ಅಲ್ಲಿ ಕಾಲಿಟ್ಟರು.ಒಂದು ಕಡೆ ಜಗದೇವಪ್ಪನ ದುರಾಸೆಯ ಧ್ವನಿ,ಇನ್ನೊಂದು ಕಡೆ ತಾಯಿಯವರ ಸತ್ಯದ ಧರ್ಮ. ಜಗದೇವಪ್ಪ ತನ್ನ ವಾದಗಳನ್ನು ಜೋರಾಗಿ ಮಂಡಿಸುತ್ತಿದ….“ಆಸ್ತಿ ನಮ್ಮ ಕುಟುಂಬದವರದು… ಇವರಿಗೆ ಹಕ್ಕಿಲ್ಲ…ಅದನ್ನು ಬೇಕಾದ ಹಾಗೆ ದಾನವನ್ನು ಮಾಡುತ್ತಿರುವುದಾಗಿಯು… ಹಾಗೆ ತವರು ಮನೆಯವರು ಆಸ್ತಿಯನ್ನು ಲಪಟಾಯಿಸಲು ಕುಳಿತುಕೊಂಡಿದ್ದಾರೆ ಅನ್ನುವ ವಾದ ಮಂಡಿಸಿದ.  ತಾಯಿಯವರು ತಲೆಯನ್ನು ತಗ್ಗಿಸದೆ, ಶಾಂತವಾಗಿ ನಿಂತಿದ್ದರು.ಅವರ ಕಣ್ಣುಗಳಲ್ಲಿ ನೋವು ಇದ್ದರೂ, ಅವುಗಳಲಿ ನೈತಿಕತೆಯ ಧೈರ್ಯ ಹೊಳೆಯುತ್ತಿತ್ತು.ಅವರು ಮಾತನಾಡಿದಾಗ, ಮಾತುಗಳು ಮೃದುವಾಗಿ ಅರ್ಥ ಗಂಭೀರವಾಗಿತ್ತು“ನಾವು ಜನರಿಂದ ಅನ್ಯಾಯವಾಗಿ ಪಡೆದಿದ್ದನ್ನು ನಾನು ಹಿಂತಿರುಗಿಸಿದೆ. ಅದರಲ್ಲಿ ತಪ್ಪೇನಿದೆ?”ಕೋರ್ಟ್‌ನಲ್ಲಿದ್ದವರ ಹೃದಯಕೆ ಆ ಮಾತುಗಳು ತಲುಪಿದವು. *ಗೊತ್ತಾಯಿತು ಲೋಕದ| ಗತ್ತುಗಾರಿಕೆಯಲ್ಲಬಿತ್ತುವರು ಮೋಸದ ಬೀಜವೂ ಜನಗಳುಸತ್ತು ಹೋಗುವರು ವಿಷವುಂಡು||*ಎನ್ನುವಂತೆಒಬ್ಬ ತಾಯಿ, ತನ್ನದೇ ಸೌಕರ್ಯವನ್ನು ಬಿಟ್ಟು, ಅನ್ಯಾಯದ ವಿರುದ್ಧ ನಿಂತಿದ್ದಳು…ದೇಹದ ನೋವು, ಆಪರೇಷನ್‌ನ ತೊಂದರೆ ಎಲ್ಲವನ್ನೂ ಮರೆತು, ತಾಯಿಯವರು ಧರ್ಮದ ಪರವಾಗಿ ನಿಂತ ದೃಶ್ಯ,ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು.ಜಗದೇವಪ್ಪನ ದುರಾಸೆ ಒಂದು ಕಡೆ,ತಾಯಿಯವರ ಧರ್ಮಬಲ ಇನ್ನೊಂದು ಕಡೆ… ಕೋರ್ಟ್‌ ಹಾಲ್‌ನಲಿ…ಎಲ್ಲರ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೆಟ್ಟಿದ್ದವು…ಅಲ್ಲಿ ಮೊದಲ ಬಾರಿಗೆ ನಿಂತಿದ್ದ ಜಯದೇವಿ ತಾಯಿಯವರ ಮೇಲೆ…ಚಿಕ್ಕ ವಯಸ್ಸಿನ ವಿಧವೆ ಬಿಳಿ ಸೀರೆ ತೊಟ್ಟು, ಕಪ್ಪು ಕೂದಲು,ನೊಸಲ ಮೇಲೆ ಬೆಳ್ಳಿಯ ಕಿರಣಗಳಂತೆ  ಹೊಳೆ ಹೊಳೆವ ಮೂರು ಬಿಟ್ಟು ವಿಭೂತಿ ಬೊಟ್ಟು,ಅತ್ಯಂತ ಸೌಮ್ಯ ದೈವಿ ಕಳೆ ಹೊಂದಿದ…  ಶಾಂತ ಮನಸ್ಸು  ಆ ನೋವನ್ನು ಮೀರಿತ್ತು……ಅವರು ತ್ಯಾಗದ ಪ್ರತಿಮೆಯಂತೆ ನಿಂತಸಂಗಮರಮರಿಯ ಮೂರ್ತಿಯಂತೆ ಕಂಡರು……ನ್ಯಾಯವಾದಿಯು ತಾಯಿಯವರನ್ನು ದೀರ್ಘವಾಗಿ ಒಮ್ಮೆ ನೋಡಿ “ಏನಪ್ಪಾ ನಿನ್ನ ಸಮಸ್ಯೆ???”ಅಂತ ಜಗದೇವಪ್ಪನ ತತ್ತಿರುವಿ ಕೇಳದರು… ಜಗದೇವಪ್ಪ ತನ್ನ ಮಾತನ್ನು ಮಂಡಿಸಿದ.ಜಯದೇವಿ ತಾಯಿಯವರ ಕಣ್ಣು ನಿಧಾನವಾಗಿ ತಿರುಗಿ ಜಗದೇವಪ್ಪನ ಮೇಲೆ ಬಿದ್ದವು…ಆ ಕ್ಷಣ…ತಾಯಿಯ ಕಣ್ಣಲ್ಲಿ ಕೋಪ ಇರಲಿಲ್ಲ…ದ್ವೇಷ ಇರಲಿಲ್ಲ…ಇದ್ದದ್ದು ಮಾತ್ರ ಮಮತೆ…ತಮ್ಮ ಮಗನಂತೆ ನೋಡಿದ ಆ ವ್ಯಕ್ತಿ…ಇಂದು ಕೋರ್ಟ್‌ನಲ್ಲಿ ಎದುರಾಳಿ…!!!ಜಗದೇವಪ್ಪನನ್ನು ನೋಡಿ ಕನಿಕರ ಪಟ್ಟರು. ಜಗದೇವಪ್ಪ ತಲೆತಗ್ಗಿಸಿದ್ದ…ಆ ಕಣ್ಣೋಟವನ್ನು ಎದುರಿಸಲು ಅವನಿಗೆ ಧೈರ್ಯ ಇರಲಿಲ್ಲ… ನ್ಯಾಯವಾದಿಯು ತಿರುಗಿ ತಾಯಿ ಅವರಿಗೆ ಯಾವ ಪ್ರಶ್ನೆಯನ್ನು ಕೇಳದೆ” ಸರಿ ಹಾಗಿದ್ದರೆ ಇವರು ಯಾರು ??”ಅಂತ ಜಗದೇವಪ್ಪನಿಗೆ ಕೇಳಿದರು “ಇವರೇ ನನ್ನ ಅಣ್ಣನ ಹೆಂಡತಿ ಇವರೇ” ಅಂತ ಹೇಳಿದ .”ಆತುರ ಆತುರದಲಿ*ಹಾಗಿದ್ದರೆ ಅಣ್ಣನ ಹೆಂಡತಿ ಎಂದರೆ ತಾಯಿಯ ಸಮಾನ ಹೀಗಾಗಿ ಅವರಿಗೆ ನಿನ್ನ ಆಸ್ತಿಯನ್ನೆಲ್ಲಒಪ್ಪಿಸಿಬಿಡು….. ನಿನ್ನ ಮಕ್ಕಳು ದೊಡ್ಡವರಾದ ಮೇಲೆ ಅವರು ಎಲ್ಲವನ್ನು ನಿನಗೆ ಜೋಪಾನವಾಗಿ ಇಟ್ಟುಕೊಂಡು ಒಪ್ಪಿಸುತ್ತಾರೆ “ಅಂತ  ತೀರ್ಪನ್ನು ಕೊಟ್ಟು …..ಮರು ಮಾತನಾಡದೆ ನ್ಯಾಯವಾದಿಗಳು ಅಲ್ಲಿಂದ  ಎದ್ದು ಹೊರಟು ಹೋದರು.ಕೋರ್ಟ್‌ನಲಿ  ಕ್ಷಣಕಾಲ ಎಲ್ಲರೂ ಬೆರಗಾದರು…ಜಗದೇವಪ್ಪ ನಿಬ್ಬೆರಗಾಗಿ ಮಾತಿಲ್ಲದೆ ನಿಂತುಬಿಟ್ಟ…ಆದರೆ ತಾಯಿಯವರು…ಹಿಂದಿರುಗಿ ನೋಡಲಿಲ್ಲ…ಅವರ ಹೆಜ್ಜೆಗಳು ನಿಧಾನವಾಗಿ ಹೊರಗೆ ನಡೆದವು…ಅದು ಜಯದ ಹೆಜ್ಜೆಗಳಾಗಿದ್ದವು…..“ಸ್ವಾರ್ಥದ ಮೇಲೆ ಮಾನವೀಯತೆಯ ಜಯ”… *ಹೇಸಿ ಈ  ಲೌಕಿಕದ| ಆಸೆಯು ಎನಿತಿಲ್ಲಈಶ ಸಿದ್ದರಾಮನ ಚಿಂತನೆ -ನನಗೆಹೊಸ ಬೆಳಕು ನೀಡಿ ಸಲಹುವದು ||* ಲೌಕಿಕದ ಆಸೆಗಳಿಗೆ ಹೇಸಿದ ತಾಯಿಯವರು ಸಿದ್ದರಾಮನ ಚಿಂತೆಯಲ್ಲಿ ಅವರಿಗೆ ಯಾವ ಸೋಲು ಗೆಲುವಿಗೆ ಪ್ರಾಮುಖ್ಯತೆ ಇರುತ್ತಿರಲಿಲ್ಲ…. *ಈ ಸನ್ನಿವೇಶದಲ್ಲಿ ತಾಯಿಯವರು ಸೋಲಲಿಲ್ಲ“ನ್ಯಾಯಕ್ಕೆ ಜೀವ ತುಂಬಿದರು.(ಮುಂದುವರೆಯುವುದು) ಸವಿತಾ ದೇಶಮುಖ

Read Post »

ಇತರೆ, ಜೀವನ

“ಒಂದು ನಿರ್ಧಾರದ ಸುತ್ತಾ”‌ ಡಾ.ಭಾರತಿ ಅಶೋಕ್

ವಿಶೇಷ ಸಂಗಾತಿ ಡಾ.ಭಾರತಿ ಅಶೋಕ್ “ಒಂದು ನಿರ್ಧಾರದ ಸುತ್ತಾ”‌  ಯಾವುದಾದರೂ ಒಂದು ವಿಷಯದ ಬಗೆಗೆ ಆಳವಾಗಿ ಯೋಚಿಸದೇ ಅದರ  ಹರವಿನ ಬಗೆಗೆ ತಿಳಿಯದೇ  ದಿಡೀರ್ ಎಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಹಾಗೆ ತೆಗೆದುಕೊಂಡ ನಿರ್ಧಾರದಿಂದ ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಈ ನಿರ್ಧಾರಗಳು ಕೌಟುಂಬಿಕ, ಸಾಂಸ್ಥಿಕವಾಗಿರಬಹುದು, ಸಾಮಾಜಿಕವಾಗಿರಬಹುದು. ಈ ಯಾವ ನೆಲೆಯಲ್ಲೂ ಅದು ಒಳ್ಳೆಯದಲ್ಲ. ಕೆಲವು ಸಲ ಅವುಗಳಿಂದ  ಅನಾಹುತ ಸಂಭವಿಸಬಹುದು. ಆದ್ದರಿಂದ ನಿರ್ಧಾರ ತೆಗೆದುಕೊಳ್ಳಲು ಹತ್ತಾರು ಬಾರಿ ಯೋಚಿಸಿಬೇಕು. ಆ ನಿರ್ಧಾರದ ಸುತ್ತಲೂ  ಧನಾತ್ಮಕ, ಋಣಾತ್ಮಕ ಫಲಿತಾಂಶದ ಬಗೆಗೆ ತಿಳುವಳಿಕೆ ಇರಬೇಕು. ಒಂದು ವೇಳೆ ಧನಾತ್ಮಕ ಪರಿಣಾಮವಾದರೆ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇರುತ್ತದೆ. ಅದು ಸರ್ವಕಾಲಿಕ ಸತ್ಯವಾಗಿದ್ದು, ಮತ್ತು ಅದು ಅನುಸರಿಸರಣೀಯವಾಗಿರುತ್ತದೆ.             ತೆಗೆದುಕೊಂಡ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮಗಳಾದರೆ  ಅದು ಕ್ಷಣಿಕ ನಿರ್ಧಾರ, ಚಿಂತನೆ ಇಲ್ಲದೇ ತೆಗೆದುಕೊಂಡುದರ ಪರಿಣಾಮವಾಗಿದ್ದು, ಅದು ಸಾರ್ವತ್ರಿಕವಾಗಿರದೆ, ಸರ್ವಕಾಲಿಕವೂ ಆಗಿರದೇ ಅಪಾಯಗಳಿಂದ ಕೂಡಿರುತ್ತದೆ. ಆದ್ದರಿಂದ ವ್ಯಕ್ತಿಗೆ, ಸಮಷ್ಟಿಗೆ ತತ್ ಕ್ಷಣವೇ ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿ ಆಗುವ ಅನಾಹುತಕ್ಕೆ ಉದಾಹರಣೆಯಾಗುತ್ತದೆ, ಆಗ ಅಂತಹ ನಿರ್ಧಾರವು ವರ್ಜಿಸಲ್ಪಡುತ್ತದೆ.             ನಿರ್ಧಾರ ವೈಯುಕ್ತಿಕ ನೆಲೆಯಲ್ಲಿದ್ದರೆ ಅದಕ್ಕೆ ಉದಾಹರಣೆಯಾಗಿ : ಇಂದಿನ ಯುವ ಜನಾಂಗ ಮಾಡಿಕೊಳ್ಳುವ ಅನಾಹುತಗಳು ಒಂದೆ ಎರಡೇ… ನೋಡಿದಾಕ್ಷಣ ಆಕ಼ರ್ಷಣೆಗೆ ಒಳಗಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ನಾಶ ಮಾಡಿಕೋಳ್ಳುವುದು ಹೀಗೆಯೇ. ಯುವಕ ಯುವತಿಯರು  ಆಕರ್ಷಿತರಾಗುತ್ತಿದ್ದಂತೆಯೇ ಅದನ್ನು ಪ್ರೀತಿ ಎಂದು ನಂಬಿ ಸಮಾಜದ ಒಪ್ಪಿಗೆ ಎಂಬಂತೆ ವಿವಾಹ ಬಂಧನಕ್ಕೆ ಒಳಗಾಗುವುದು ನಿಜಕ್ಕೂ ಅದು ಪ್ರೀತಿನಾ ಅದು ಕೊನೆಯವರೆಗೂ ಉಳಿಯುತ್ತಾ ಎಂದು ಯೋಚಿಸಲು ಸಹ ಅವಕಾಶವಿಲ್ಲದಂತೆ ತಮ್ಮನ್ನು ತಾವು ಬದುಕಿನ/ಪ್ರೀತಿಯ ಪರೀಕ್ಷೆಗೆ ಒಡ್ಡಿ ಕೊಳ್ಳುತ್ತಾರೆ. ಆಕರ್ಷಣೆ ಮುಗಿಯುತ್ತಿದ್ದಂತೆ ಬದುಕು ಅಸಹನೀಯವಾಗುತ್ತದೆ ಯಾಕೆಂದರೆ ಅವರದು ವಯೋ ಸಹಜ ಆಕರ್ಷಣೆ. ಬದುಕಿಗೆ ಪ್ರೀತಿ ಬೇಕು ಪ್ರೀತಿಯೊಂದೆ ಬದುಕಲ್ಲ ಎನ್ನುವುದರ ಅರಿವು ಇರುವುದಿಲ್ಲ. ಬದುಕಲು ಹಣ ಬೇಕು, ಹಣ ಬೇಕೆಂದರೆ ದುಡಿಯಬೇಕು, ದುಡಿಯುವ ಮಾರ್ಗವೇ ತಿಳಿದಿಲ್ಲ ಆಗಲೇ ಬದುಕು ಕಟ್ಟಿಕೊಳ್ಳುತ್ತೇವೆ ಜೊತೆಯಾಗಿ ಎಂದರೆ ಸಾಧ್ಯವಾಗದು. ತಾವು ಜೊತೆಯಾಗುತ್ತೇವೆ ಎಂದುಕೊಂಡು ಮನೆಯಿಂದ ಪೋಷಕರಿಂದ ದೂರ ಹೋಗುವಾಗ ಮನೆಯಿಂದ ಕೊಂಡ್ಯೊಯ್ದ ಪುಡಿಗಾಸು ಮುಗಿಯುತ್ತಿದ್ದಂತೆ. ಬದುಕು ಇಷ್ಟೇ ಎನ್ನಿಸಿಬಿಡುತ್ತದೆ. ಪ್ರೀತಿ ಎಂದುಕೊಂಡದ್ದುಅಸಹನೀಯವಾಗುತ್ತದೆ.  ಕಾರಣ ಬದುಕಿನ ಬಗೆಗೆ ಕಲ್ಪನೆಯೇ ಇಲ್ಲ. ಅದು ಪ್ರೀತಿ ಅಲ್ಲ ಕೇವಲ ಆಕರ್ಷಣೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಎಲ್ಲವೂ ಮುಗಿದೇ ಹೋಯ್ತು ಎನ್ನುವಂತಹ ಅನುಭವವಾಗುವುದು. ಆಗ ಆ ಬಂಧ(ನ)ದಿಂದ ಮುಕ್ತಿಗಾಗಿ ವಿಚ್ಛೇದನ, ಆತ್ಮ ಹತ್ಯೆಯಂತಹ ಗಂಭೀರ ಸ್ವರೂಪದ ನಿರ್ಧಾರಕ್ಕೆ ಬರುತ್ತಾರೆ. “ಬದುಕು ಬದುಕಲಾರದಷ್ಟು ಭೀಕರವಲ್ಲ, ಅಂದುಕೊಂಡಷ್ಟು ಸರಳವೂ ಅಲ್ಲ” ಎನ್ನುವ ಸತ್ಯದ ಅರಿವಾಗಬೇಕು ಅಂಥ ಅರಿವನ್ನು ಮೂಡಿಸುವ ಕೆಲಸ ಆಗಬೇಕಿದೆ.  ಹೌದು ವಿವಾಹ ಅದರ ನಂತರದ ಬದುಕು ಅವುಗಳ ಬಗೆಗೆ ನಮ್ಮ ಯುವ ಜನಾಂಗಕ್ಕೆ ಸರಿಯಾದ ತಿಳುವಳಿಕೆ ಇಲ್ಲದಿರುವುದು ನಮ್ಮಂಥ ಸಾಂಪ್ರದಾಯಿಕ ಸಮಾಜದಲ್ಲಿ ನಿರೀಕ್ಷೆಯೂ ಸರಿಯಲ್ಲ. ಇಷ್ಟು ಮಾತ್ರವಲ್ಲದೇ ಅವರ ನಿರ್ಧಾರಗಳಿಗೆ ಇಂಬು ದೊರೆಯಲು ಅವರ ಆರ್ಥಿಕ ಭದ್ರತೆಯೂ ಪೂರಕವಾಗಿರಬೇಕು. ಅದು ಸರಿಯಾಗಿದ್ದರೆ  ಕಷ್ಟದಲ್ಲೂ ಸೈರಿಣೆಯಿಂದ ಬದುಕುವ ಸಾಧ್ಯತೆಗಳನ್ನು ಒದಗಿಸಿದಂತಾಗುತ್ತದೆ. ಹಾಗಿದ್ದಾಗಲೂ ನಿರ್ಧಾರಗಳು ಚಿಂತನೆಯನ್ನು ನಿರೀಕ್ಷಿಸುತ್ತವೆ.             ಇಂಥ ಕ್ಷಣಿಕ ನಿರ್ಧಾರಗಳನ್ನು ನಮ್ಮ ಯುವ ಜನತೆ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಭಾವಿಸುವುದು ಸಹ ನಮ್ಮ ಕ್ಷಣಿಕ ನಿರ್ಧಾರವಾದೀತು. ಏಕೆಂದರೆ ನಮಗೆ ಇತಿಹಾಸವಿದೆ. ಅದರ ಪರಿಪಾಠ ನಮ್ಮಲ್ಲೂ ಮೈಗೂಡಿದೆ. ‘ನಭೂತೋ ನಭವಿಷ್ಯತೆ” ಎನ್ನುವಂತೆ ನಮ್ಮ ಭೂತ ನಮ್ಮನ್ನು ಬೆನ್ನಟ್ಟಿ ಭವಿಷ್ಯದಲ್ಲೂ ಜೊತೆಗಿರುತ್ತದೆ.  ಹೇಗೆ ಎನ್ನುವುದನ್ನು ನೋಡೋಣ ನಮ್ಮ ಬಾದಷಹ “ಮೊಹಮ್ಮದ್ ಬೀನ್ ತುಘಲಕ್” ತೆಗೆದುಕೊಳ್ಳುತ್ತಿದ್ದ ತತ್ ಕ್ಷಣದ ನಿರ್ಧಾರಗಳಿಂದ ಜನತೆ ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ. ರಾಜಧಾನಿಯನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ(ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ)ಸ್ಥಳಾಂತರಿಸಿದಾಗ ಜನ, ದನ, ಪಶು, ಪಕ್ಷಿಗಳು ಅನುಭವಿಸಿದ ನೋವಿನ ತೀವ್ರತೆಯನ್ನು ಹೇಳಿದರೆ ಪರಿಮಕಾರಿಯಾಗಿರುವುದಿಲ್ಲ. ಅನುಭವಿಸಿದವರೇ ಬಲ್ಲರು. ಸುಲ್ತಾನನಿಗೆ ಬುದ್ಧಿ ಇರಲಿಲ್ಲ ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ಆತನೋ ಭಯಂಕರ ಮೇಧಾವಿ. ಪರ್ಷಿಯನ್ ಅರೇಬಿಕ್ ಭಾಷೆಗಳಲ್ಲಿ ಪಂಡಿತ. ಸಾಹಿತ್ಯ ಧರ್ಮ ಖಗೋಳ ಶಾಸ್ತ್ರ ತರ್ಕಶಾಸ್ತ್ರ,ತತ್ವಶಾಸ್ತ್ರ ಗಣಿತಶಾಸ್ತ್ರಗಳಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದನು. ಆತನ ಜ್ಞಾನ ನಾಲ್ಕು ಐದು ಶತಮಾನದಷ್ಟು ಮುಂದಿತ್ತು ಎಂದರು ಸರಿಯೆ. ಅಂಥಹ ಚಾಣಾಕ್ಷ.       ಯಾಕೆ ನಾನು ಇತಿಹಾಸದಿಂದ ಇಂಥ ಮೇಧಾವಿಯನ್ನು ಉದಾಹರಿಸಿದೆ ಎಂದರೆ ಆತನ ನಿರ್ಧಾರಗಳು, ಯೋಜನೆಗಳನ್ನು ಜಾರಿಗೊಳಿಸುವ ಕ್ರಮ, ಅಂದಿನ ಪರಿಸ್ಥಿತಿಯ ಕುರಿತು ಕುಳಿತು ಸರಿಯಾದ ರೀತಿಯಲ್ಲಿ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆ  ಆತನಲ್ಲಿ ಇರಲಿಲ್ಲ. ಬುದ್ಧಿವಂತಿಕೆ ವ್ಯವಹಾರ ನೈಪುಣ್ಯತೆಯ ಕೊರತೆಯಿಂದಾಗಿ  ಏಕಾಏಕೀ ನಿರ್ಧಾರ ಕೈಕೊಳ್ಳುತ್ತಿದ್ದುದರ ಪರಿಣಾಮವಾಗಿತ್ತು. ಅದರೆ ಅಂದಿನ ರಾಜಕೀಯ ಸ್ಥಿತಿಗತಿಗಳಿಗೆ  ಅದು ಅನಿವಾರ್ಯವಾಗಿತ್ರು, ಬದಲಾವಣೆ ಪೂರ್ವನಿರ್ಧಾರಿತವಾಗಿದ್ದರೆ,ವ್ಯವಸ್ಥಿತವಾಗಿದ್ದರೆ..‌..ಉತ್ತಮ ಆಡಳಿತ ವ್ಯವಸ್ಥೆಯನ್ನು ಕೊಟ್ಟ ಕೀರ್ತಿ ಆತನದಾಗಿರುತ್ತಿತ್ತು      ಅಂದರೆ ಒಂದು ನಿರ್ಧಾರ ಅದು ಬಹುಮುಖ ಚಿಂತನೆಯಿಂದಕೂಡಿರಬೇಕು. ಅದರಿಂದ ವಿರುದ್ಧ ಪರಿಣಾಮಗಳಾದರೂ ಅವು ಆಶಾಶ್ವತವಾಗಿದ್ದು ವೈರುದ್ಯಗಳಿಗೂ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವಂತಹ ನಿರ್ಧಾರಗಳನ್ನು ಮೊದಲೆ  ಮಾಡಿಕೊಂಡರೆ ಅದು ಯಶಸ್ವಿಯಾಗುತ್ತದೆ. ಹಾಗೆ ಅದರ  ಬಗೆಗೆ ವಿವರವಾದ ಆಲೋಚನೆಗಳು  ವಿಭಿನ್ನ ಆಯಾಮಗಳಿಂದ ನಡೆದು ಅದಕ್ಕೆ ತಕ್ಕುದಾದ ಅನುಸರಣೀಯ  ಮಾರ್ಗೋಪಾಯಗಳನ್ನು ಕಂಡುಕೊಂಡೇ  ನಿರ್ಧಾರ ಕೈಕೊಂಡರೆ, ಅಂದರೆ , ಒಂದು ನಿರ್ಧಾರದ ಹಿಂದೆ ಅದರ ಒಳಿತು ಕೆಡುಕುಗಳನ್ನು ನಾವು ಸ್ವೀಕರಿಸುವ  ಪರಿಸ್ಥಿತಿಯನ್ನು ಸಹ ಅರಿತುಕೊಂಡು  ನಿರ್ಧರಿಸಿದಾಗ  ಅದು ಸಹಜವಾದ ನಿರ್ಧಾರವಾಗುತ್ತದೆ. ಪರಿಣಾಮ ಯಾವಾಗಲೂ ಒಳ್ಳೆಯವೆ ಆಗಿರುತ್ತವೆ.  ಯೋಚಿಸಿ ಕೈಕೊಂಡಿದ್ದರಿಂದ ಅದಕ್ಕೆ  ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿರುತ್ತದೆ, ಇದು ಕಷ್ಟವೆನಿಸದು. ಇನ್ನು ರಾಜಕೀಯ ಕ್ಷೇತ್ರದಲ್ಲಂತು ಇದು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.             ಇಂದಿನ ತಾಂತ್ರಿಕ ಯುಗದಲ್ಲಿ ಇದು ತುಂಬ ಅತ್ಯಗತ್ಯ.. ಕಾರಣ  ನಿರ್ಧಾರಗಳು ಸಾರ್ವತ್ರಿಕವಾಗಿರುವುದರಿಂದ  ಅದರ ಪರಿಣಾಮಗಳು ಇನ್ನು ಭೀಕರವಾಗಿರುವುದರಿಂದ  ನಿರ್ಧಾರದ ಹಿಂದಿನ ಪರಿಣಾಮಗಳ ಆಳವಾದ ಜ್ಞಾನ  ಚಿಂತನೆ ಅಗತ್ಯ. ಡಾ. ಭಾರತಿ ಅಶೋಕ್

“ಒಂದು ನಿರ್ಧಾರದ ಸುತ್ತಾ”‌ ಡಾ.ಭಾರತಿ ಅಶೋಕ್ Read Post »

ಕಾವ್ಯಯಾನ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ”

ಕಾವ್ಯ ಸಂಗಾತಿ ನಿರಂಜನ ನಾಯಕ “ನಗರ ಜಾಗರಣೆ” ನಗರ ಬೆಳೆಯುತಲಿದೆಉಕ್ಕಿ ಹರಿದ ಮೋರಿಯಂತೆ,ಸಿಕ್ಕ ಸಂದುಗಳಲಿ ಜಾರುತಾದುರ್ನಾತದೊಂದಿಗೆಜಾಗರಣೆ ಖಾತ್ರಿಯಾಗಿ! ಮುಚ್ಚದ ಕಣ್ಣುಗಳೆದುರುಮೆಚ್ಚುಗೆಯಾಗದ ಮುಖಗಳು;ಮನದ ಖಗ-ಮಿಗಗಳುಮಾಯಾಮೃಗಗಳಂತೆಮರೆಯಾಗುತಿವೆ. ಕಾಲು ಚಾಚಿಬಿದ್ದಿಹ ರಸ್ತೆಗಳಿಗೆತಡೆಒಡ್ಡುವ ಗೋಡೆಗಳು,ಬಣ್ಣ ಮಾಸುತ್ತಾಅಪರಿಚಿತವಾಗುತಿವೆ. ಇಕ್ಕೆಲದ ಅಂಗಡಿಗಳಎಗ್ಗಿಲ್ಲದ ವ್ಯಾಪಾರ,ಕುರುಡನ ತಟ್ಟೆಯಮೂರು ಕಾಸುಗಳನುಅಣಕಿಸುತಿದೆ! ನಿರಂಜನ ನಾಯಕ

ನಿರಂಜನ ನಾಯಕ ಅವರ ಕವಿತೆ “ನಗರ ಜಾಗರಣೆ” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಅಂದು ಹಸಿವಿನಿಂದ ಪರದಾಡಿದ ಪರದೇಶಿ ದಿನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಅಂತರಾಳದಲ್ಲಿಯ ಹಸಿ ಗಾಯಗಳ ರುಜು ಋಣಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಕರೆದು ಕೂಲಿಗೆ ಕಾಸು ಚೆಲ್ಲಿ ಸುಮ್ಮನೆ ಮನೆಗೆ ಕಳುಹಿಸಿದ್ದರೂಮರೆಯಬಹುದಿತ್ತು ನಾವುಕಲ್ಲಿನೇಟು ನೀಡಿ ,ಮುಳ್ಳುಗಳಿಂದ ತಿವಿದ ಜೀತ ಕ್ಷಣಗಳಿಂದು  ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಾಳೆಗಾಗಿ ಬರಿಗಾಲಲಿ ನಡೆದು ನೆತ್ತರು ಸುರಿಸಿ ಕಳೆದು ಹೋಗುತಿವೆನಿತ್ಯ ಕಂಡ ಕನಸುಗಳುಬೆತ್ತಲೆ ಪಾದಗಳು ಸೀಳಿ ರಕ್ತ ಒಸರಿ ಬಾಯ್ಬಿಟ್ಟ ಆರ್ತನಾದಗಳಿಂದು   ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಮಹಡಿ ಮನೆಗಳ ಮುಂಬಾಗಿಲಿಗೆ ಬಡವನನ್ನು ಸುಲಿದ ಚರ್ಮದತೋರಣ ಒಪ್ಪ ಓರಣವಾಗಿದೆಕನಸಿಗೆ ತೆರಿಗೆ ಹಾಕಿ,ಸಾವಿಗೂ ಸುಂಕ ಕಟ್ಟುವ ಹುನ್ನಾರುಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಿದ್ದೆ ಮಾಡುವವನು, ಕದ್ದು ಕರೆದರೂ ತುಸು ಎಚ್ಚರಗೊಳ್ಳುವನು ಅನಾಯಾಸವಾಗಿಆಳುವವರ ಮುಸುಕಿನಲ್ಲಿ ಸೋಗುಲಾಡಿತನದ ನಡೆಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಎಷ್ಟಂತ ತೇಪೆ ಹಾಕಿ, ಚಿತ್ತಾರ ಮೂಡಿಸಿ ಮನವ ಹಗುರಾಗಿಸೋಣ ಮರ್ಯಾದೆಗೆ ಅಂಜಿಅಪವಾದ, ಅವಮಾನಗಳಿಂದ ನುಜ್ಜುಗುಜ್ಜಾದ ಆಕ್ರಂದನಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಯಾರನ್ನೋ ದ್ವೇಷಿಸಿ, ದೂಷಿಸಿ, ಹಿಡಿಶಾಪ ಹಾಕಿ, ಕಣ್ಣೀರು ಹರಿಸಿದರೆ ಏನು ಪ್ರಯೋಜನ ಜ್ಯೋತಿಖಂಡ, ಮಾಂಸ, ಬೆವರು, ಬಿಸಿರಕ್ತಗಳ ಅಸಂಖ್ಯ ಬಲಿದಾನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

You cannot copy content of this page

Scroll to Top