ವಿಶೇಷ ಸಂಗಾತಿ “ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ” ಕವಿತಾ ಶ್ರೀನಿವಾಸ್ ನಾಯಕ್ ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿನ ಪ್ರತಿ ಜೀವಿಯೂ ನಮಗೆ ಒಂದಲ್ಲ ಒಂದು ಜೀವನ ಪಾಠವನ್ನು ಕಲಿಸುತ್ತಿರುತ್ತದೆ. ಅತೀ ಸಾಮಾನ್ಯ ಪಕ್ಷಿ ಎಂದು ನಾವು ಕಡೆಗಣಿಸುವ ‘ಕಾಗೆ’ಯ ಜೀವನಶೈಲಿಯಲ್ಲೇ ಮನುಷ್ಯನಿಗೆ ಅಗತ್ಯವಾದ ಅತಿ ದೊಡ್ಡ ಗುಣಗಳಿವೆ. ಕಾಗೆ ಎಂದರೆ ಕೇವಲ ಅಶುಭದ ಸಂಕೇತವಲ್ಲ, ಅದು ‘ಸಹಬಾಳ್ವೆ ಮತ್ತು ಹಂಚಿಣ್ಣುವಿಕೆ’ಯ ಸಾಕಾರ ಮೂರ್ತಿ.ಒಗ್ಗಟ್ಟಿನಲ್ಲಿ ಬಲವಿದೆಕಾಗೆಗಳದ್ದು ಅದ್ಭುತವಾದ ಸಂಘಟನಾ ಶಕ್ತಿ. ಯಾವುದಾದರೂ ಕಾಗೆಗೆ ಆಹಾರ ಸಿಕ್ಕಾಗ, ಅದು ಎಂದಿಗೂ ಒಬ್ಬಂಟಿಯಾಗಿ ತಿಂದು ತೇಗಲು ಬಯಸುವುದಿಲ್ಲ. ಬದಲಾಗಿ, ಆಹಾರ ಕಂಡ ತಕ್ಷಣ ಜೋರಾಗಿ ‘ಕಾವ್ ಕಾವ್’ ಎಂದು ಕೂಗಿ ತನ್ನೆಲ್ಲಾ ಬಳಗವನ್ನು ಕರೆಯುತ್ತದೆ. ತನಗೆ ಸಿಕ್ಕಿದ್ದನ್ನು ತನ್ನವರಿಗೂ ಹಂಚಬೇಕು ಎಂಬ ಅದರ ಈ ಔದಾರ್ಯ, ಸ್ವಾರ್ಥದ ಸುಳಿಗೆ ಸಿಲುಕಿರುವ ಇಂದಿನ ಮನುಕುಲಕ್ಕೆ ನಿಜಕ್ಕೂ ಮಾದರಿ. “ನಾನು ಮತ್ತು ನನ್ನ ಕುಟುಂಬ” ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು, “ನಮ್ಮವರು” ಎಂಬ ವಿಶಾಲ ಭಾವನೆಯನ್ನು ಬೆಳೆಸಿಕೊಳ್ಳಲು ಕಾಗೆ ನಮಗೆ ಕಲಿಸುತ್ತದೆ.ಸಂಕಟದಲ್ಲಿ ಜೊತೆಗೂಡುವ ಮನಸ್ಸುಕಾಗೆಗಳ ಸಾಮಾಜಿಕ ಕಳಕಳಿ ಅತಿ ಹೆಚ್ಚು. ಯಾವುದಾದರೂ ಒಂದು ಕಾಗೆಗೆ ತೊಂದರೆಯಾದರೆ ಅಥವಾ ಅದು ಮೃತಪಟ್ಟರೆ, ನೂರಾರು ಕಾಗೆಗಳು ಒಂದೆಡೆ ಸೇರಿ ಕೂಗಾಡುವುದನ್ನು ನಾವು ಗಮನಿಸಿರಬಹುದು. ಇದು ಕೇವಲ ಶಬ್ದವಲ್ಲ, ಅವರ ನಡುವಿನ ಬಲವಾದ ಬಾಂಧವ್ಯದ ಪ್ರತೀಕ. ದುಃಖವನ್ನು ಹಂಚಿಕೊಳ್ಳುವ ಮೂಲಕ ನೋವನ್ನು ಕಡಿಮೆ ಮಾಡುವ ಗುಣ ಅವುಗಳಲ್ಲಿದೆ. ಇಂದು ಮನುಷ್ಯ ತನ್ನ ನೆರೆಯವರ ಕಷ್ಟವನ್ನೂ ಕೇಳದಷ್ಟು ತಂತ್ರಜ್ಞಾನದ ಜಾಲದಲ್ಲಿ ಸಿಲುಕಿದ್ದಾನೆ. ಅಂತಹ ಸಂದರ್ಭದಲ್ಲಿ, ಕಾಗೆಗಳ ಈ ಸಾಮಾಜಿಕ ಬದ್ಧತೆ ನಿಜಕ್ಕೂ ಶ್ಲಾಘನೀಯ.ತಾನುಂಡು ಇತರರಿಗೂ ಉಣಬಡಿಸುವುದುಭಾರತೀಯ ಸಂಸ್ಕೃತಿಯಲ್ಲಿ “ತಾನುಂಡು ಇತರರಿಗೂ ಉಣಬಡಿಸುವವನೇ ನಿಜವಾದ ಮನುಷ್ಯ” ಎಂದು ಹೇಳಲಾಗಿದೆ. ಕಾಗೆಗಳು ಯಾವುದೇ ಭೇದವಿಲ್ಲದೆ ಎಲ್ಲವನ್ನೂ ಹಂಚಿಕೊಳ್ಳುತ್ತವೆ. ಸ್ವಾರ್ಥದ ಈ ಲೋಕದಲ್ಲಿ, ನಮ್ಮಲ್ಲಿರುವ ಜ್ಞಾನ, ಸಂಪತ್ತು ಅಥವಾ ಪ್ರೀತಿಯನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡರೆ ಸಮಾಜ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ಕಾಗೆಗಳು ಪ್ರತಿಕ್ಷಣವೂ ಸಾಬೀತುಪಡಿಸುತ್ತಿವೆ. ನಾವು ಕೇವಲ ಭೌತಿಕ ವಸ್ತುಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವ ಮೂಲಕವೂ ‘ಹಂಚುವಿಕೆ’ಯನ್ನು ಚಾಲ್ತಿಯಲ್ಲಿಡಬಹುದು.ಕಾಗೆಯ ಗುಣ ನಮ್ಮ ಬದುಕಿನ ಭಾಗವಾಗಲಿನಾವು ಕಾಗೆಯನ್ನು ಕೇವಲ ಒಂದು ಪಕ್ಷಿಯೆಂದು ನೋಡದೆ, ಅದರ ‘ಹಂಚಿಣ್ಣುವ’ ಸಂಸ್ಕೃತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಧಾವಂತದ ಬದುಕಿನಲ್ಲಿ ನಾವು ಸಣ್ಣ ಸಣ್ಣ ಸಂತೋಷಗಳನ್ನು ಹಂಚಿಕೊಳ್ಳುವುದನ್ನೇ ಮರೆತಿದ್ದೇವೆ. ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ನೆರೆಹೊರೆಯವರಿಗೆ ನೀಡುವುದಿರಲಿ, ಕನಿಷ್ಠಪಕ್ಷ ನಮ್ಮ ಹತ್ತಿರವಿರುವ ಸಕಾರಾತ್ಮಕ ವಿಚಾರಗಳನ್ನಾದರೂ ಹಂಚಿಕೊಳ್ಳೋಣ. ಸಣ್ಣ ಆಹಾರದ ತುತ್ತನ್ನು ಹಂಚುವ ಕಾಗೆಯ ಗುಣ ನಮ್ಮಲ್ಲಿದ್ದರೆ, ಖಂಡಿತವಾಗಿಯೂ ಹಸಿವು ಮತ್ತು ಒಂಟಿತನವಿಲ್ಲದ ಒಂದು ಸುಂದರ ಸಮಾಜವನ್ನು ನಿರ್ಮಿಸಬಹುದು.ಕಾಗೆಗಳು ಎಂದಿಗೂ ತನ್ನ ಆಹಾರಕ್ಕಾಗಿ ಜಗಳವಾಡುವುದಿಲ್ಲ, ಅವು ಸಮುದಾಯದ ಪಕ್ಷಿಗಳಾಗಿ ಬದುಕುತ್ತವೆ. “ಕಾಗೆ ಒಂದೇ ಗೂಡಿನ ಪಕ್ಷಿಯಲ್ಲ, ಅದು ಸಮುದಾಯದ ಪಕ್ಷಿ.” ನಾವು ಕೂಡ ಹಾಗೆಯೇ ಆಗೋಣ. ನಾವು ಗಳಿಸುವ ಸಂಪತ್ತು, ಗಳಿಸುವ ಕೀರ್ತಿ ಅಥವಾ ನಾವು ಪಡೆಯುವ ಜ್ಞಾನ—ಯಾವುದೂ ನಾವು ಸತ್ತಾಗ ಜೊತೆಗೆ ಬರುವುದಿಲ್ಲ. ಆದರೆ, ನಾವು ಸಮಾಜಕ್ಕೆ ನೀಡಿದ ಪ್ರೀತಿ ಮತ್ತು ಸಹಕಾರ ಶಾಶ್ವತವಾಗಿ ಉಳಿಯುತ್ತದೆ.ನಮ್ಮ ಬದುಕು ಕಾಗೆಯಂತಿರಲಿ. ಸದ್ದು ಮಾಡಿ ಬದುಕೋಣ, ಎಲ್ಲರನ್ನೂ ಸೇರಿಸಿಕೊಳ್ಳೋಣ ಮತ್ತು ಬದುಕನ್ನು ಹಂಚಿಕೊಂಡು ಆನಂದಿಸೋಣ. ಈ ಪ್ರಕೃತಿಯಲ್ಲಿ ಪ್ರತಿ ಜೀವಿಯಲ್ಲೂ ಒಂದು ಅರ್ಥವಿದೆ. ಆ ಅರ್ಥವನ್ನು ಅರಿತು ಬದುಕಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಇಂದಿನ ದಿನಗಳಲ್ಲಿ ಪರಸ್ಪರ ದ್ವೇಷ, ಅಸೂಯೆಗಳನ್ನು ಬದಿಗಿಟ್ಟು, ಸಹಬಾಳ್ವೆಯ ಪಾಠವನ್ನು ಕಾಗೆಯಿಂದ ಕಲಿತು, ಒಂದು ಸಾಮರಸ್ಯದ ಸಮಾಜಕ್ಕೆ ನಾಂದಿ ಹಾಡೋಣ.————— ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.