ಕಾವ್ಯ ಸಂಗಾತಿ
ಮಧು ವಸ್ತ್ರದ ಮುಂಬಯಿ
“ವಸಂತನ ಅಳಲು”


ಮಾಮರದ ಚಿಗುರೆಲೆ ಅದೇಕೋ ಅತ್ತಿತ್ತ
ಅಲ್ಲಾಡದಾಗಿಹುದು
ಮಧು ಹೀರಿ ಹಾರುವ ದುಂಬಿ ಝೇಂಕಾರ
ಮಾಡದಾಗಿಹುದು
ಕೋಗಿಲೆ ಹಾಡುವುದ ಮರೆತು ಮೌನದಲಿ
ಕುಳಿತಿಹುದು
ನವಿಲು ನರ್ತಿಸದೆ ಮುಗಿಲೆಡೆ ದೈನ್ಯದಿಂದ
ನೋಡುತಿಹುದು
ತೆಂಗು ಬಾಳೆ ಅಡಿಕೆ ಶುಭಕಾರ್ಯಗಳಿಲ್ಲದೆ
ಮಂಕಾಗಿಹವು
ಮಲ್ಲಿಗೆ ಸಂಪಿಗೆ ಹೂಗಳು ಒಣಗಿ ಮೊಗವ
ಬಾಡಿಸಿಹವು
ಪ್ರಾಣಿಸಂಕುಲ ಮನುಜನಾಟಕೆ ಸಿಕ್ಕಿ ತತ್ತರಿಸಿ
ಹೋಗಿಹುದು
ಪಶುಗಳೆಲ್ಲವೂ ನಿನ್ನ ಕ್ರೂರ ಆರ್ಭಟಕೆ ಬೆದರಿ
ಕಂಗಾಲಾಗಿಹವು
ಬೀಸುಗಾಳಿಯಲಿ ಕಲುಷಿತ ವಿಷದ ದುರ್ಗಂಧ
ಬರುತಿಹುದು
ಹರಿವ ನದಿಗಳಲಿ ಮನುಜ ಬಿಸುಟಿದ ಕೊಚ್ಚೆ
ಕಸ ಬೆರೆತಿಹುದು
ಮಲಿನ ಕೆಸರು ನೀರಿನಲ್ಲಿ ಜಲಚರಗಳ ಜೀವ
ಬರಡಾಗಿಹುದು
ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವವಿಲ್ಲದೆ ಕಾಡು
ಬರಿದಾಗಿಹುದು.
ಪ್ಲಾಸ್ಟಿಕ್, ಕಸ, ಕಾಗದ ಉರಿದು ಹೊಗೆ ಏರಿ
ಬಾನು ಕಪ್ಪಾಗಿಹುದು
ನಿನ್ನ ಸ್ವಾರ್ಥದಾಟಕೆ ಸಿಲುಕಿ ಹಸಿರು ಕಾನನ ಬೋಳಾಗಿಹುದು
ನಿನ್ನಹಂಕಾರ ನೋಡಿ ಸಹಿಸದೆ ಸಮುದ್ರರಾಜ ಕೋಪದಿ ಗರ್ಜಿಸಿಹನು
ತನ್ನಲೆಗಳ ಬೀಸಿ ಭೂತಾಯಿಯ ಬಾಚಿ ತಬ್ಬುತ ಸಾಂತ್ವನ ನೀಡಿಹನು
ಇಳೆಯ ಸಿಂಗರಿಸಿ ನಲಿಯಲು ಬಂದ ಋತು
ವಸಂತ ಬೆಚ್ಚಿಹನು
ಪೃಥ್ವಿಯ ಮೇಲಿನ ದಾರುಣ ಸ್ಥಿತಿಯ ಕಂಡು
ಮರುಗಿ ಹೋಗಿಹನು
ಸ್ವಚ್ಛತೆ ನಿರ್ಮಲತೆ ಕಾಪಾಡುತ ಎಚ್ಚರದಿಂದ
ಇರಿ ಎಂದಿಹನು
ನಿಸರ್ಗದ ಕಾಳಜಿ ವಹಿಸುತ ಸುಖದಿ ಬಾಳಿರಿ
ಎಂದು ಹರಸಿಹನು..
ಮಧು ವಸ್ತ್ರದ ಮುಂಬಯಿ



