ಕಾವ್ಯ ಸಂಗಾತಿ
ತ್ಯಾಗರಾಜು.ಎನ್
“ನಾ ಮೀಸಲು“


ನೀ ಬಾ,
ಬಾರದಿರು ಎನ್ನ ನೋಡಲು
ಎಂದೆಂದೂ ನೀನಿರುವೆ ಎನ್ಮನದಲಿ.
ನೀ ಕಾದರೂ ಕಾಯದಿದ್ದರೂ,
ಎನ್ಮನ ಕಾಯುತಿರುವುದು ಎಂದೆಂದಿಗೂ,
ನಿನ್ನಗಲಿಕೆಯ ಮಧುರ ನೋವ ಮೀಯುತ,
ನೀ ಅಂದು ಕೊಟ್ಟ ಸಿಹಿ ನೆನಪುಗಳ ಸವಿಯುತ.
ನೀ ಎಂದು ಬರುವೆಯೋ ನಾ ಕಾಣೆ,
ಬಂದು ಬರದಂತೆ ಹೊರಡುವುದೂ ನಾ ಮಾಣೆ,
ನಾ ಬಲ್ಲೆನಾದರೂ ಕಾಯುವೆನು
ನಿನ್ನ ಬಿಸಿಯುಸಿರ ಔತಣಕೆ,
ಬಿಸಿಯ ಕಾವುಗಳನೆಲ್ಲ ಸರಿಸಿ
ಹಸಿಹಸಿದು ಕಾದಿರುವೆ.
ನಿನ್ನೊಳಗಿನಂತರಾಳವ ಅರಿತೂ
ಅರಸಿರುವೆ ಬಯಸಿರುವೆ.
ಎನ್ಮನದೊಡೆಯ ಎನ್ಮವ ಅರಿವೆಯಾ,
ಎನ್ನೊಡಲ ಸೇರುವಿಯೆಂದು
ಕಾದಿಹುದೀ ಮಡಿಲು.
ನಿನ್ನ ತಲೆಯ ನೇವರಿಸಿ
ಸರಿಸಿ ಎಲ್ಲ ನೋವುಗಳ
ಅಪ್ಪಿಕೊಳಲರಸಿಹುದು.
ಎಂದು ಬರುವೆಯೋ ಕಾಣೆ
ಬರದೆ ಹೋಗುವುದೂ ಮಾಣೆ
ನೀ ಬಂದರೂ ಬರದಿದ್ದರೂ
ನಾ, ನನ್ನೊಳಗಿನ ಎಲ್ಲ ಭಾವಗಳೂ
ಮೀಸಲು ನಿನಗೇ ಎಂದೆಂದಿಗೂ.
ತ್ಯಾಗರಾಜು.ಎನ್




ಸೊಗಸಾಗಿದೆ ಕವಿತೆ
ಧನ್ಯವಾದಗಳು.