ವ್ಯಕ್ತಿ ಸಂಗಾತಿ
ಇಂದಿರಾ ಲಂಕೇಶ್ ನಿಧನ

“ಹುಳಿ ಮಾವು ಮತ್ತು ನಾನು” ಕೃತಿಯ ಲೇಖಕಿ ಮತ್ತು ಸಾಹಿತಿ ,ಪತ್ರಕರ್ತ ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಇಂದು ನಿಧನರಾಗಿದ್ದಾರೆ.
‘ಲಂಕೇಶ್ ಪತ್ರಿಕೆ’ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, ‘ಹುಳಿಮಾವು ಮತ್ತು ನಾನು’ ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು.
ಕನ್ನಡ ಸಾರಸ್ವತ ಲೋಕದ ಮಹತ್ವದ ಲೇಖಕ , ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಸೋಮವಾರ (ಜೂನ್ 15, 2026) ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಇವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಒಂದು ಮಹತ್ವದ ಪರಂಪರೆಯ ಕೊಂಡಿ ಕಳಚಿದಂತಾಗಿದೆ.

ಗೌರಿ ಲಂಕೇಶ್ ( ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ) ,
ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿ
ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬ ನಿರ್ವಹಣೆ ಜೊತೆಗೆ, ಸಾಹಿತ್ಯ ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿದ್ದರು.
ನಾಗರಾಜ್ ಹರಪನಹಳ್ಳಿ




