ಲಹರಿ ಸಂಗಾತಿ
ಕವಿತಾ ಶ್ರೀನಿವಾಸ್ ನಾಯಕ್
“ನಿರ್ಗಮಿಸುವ ಮುನ್ನ….”


ನಾನು ಮಲಗುವ ಕೋಣೆಯಲ್ಲಿ ವಿಶಾಲವಾದ ಗಾಜಿನ ಬಾಲ್ಕನಿ ಇದೆ. ಬಾಲ್ಕನಿಯಿಂದ ಪ್ರತಿದಿನ ಉದಯಿಸುವ ಸೂರ್ಯನನ್ನು ನೋಡಲು ಸಾಧ್ಯವಾಗದಿದ್ದರೂ, ದಿನದ ಕೊನೆಯಲ್ಲಿ ಮೌನವಾಗಿ ನಿರ್ಗಮಿಸುವ ಸೂರ್ಯ ಮಾತ್ರ ಅದ್ಭುತವಾಗಿ ಕಾಣುತ್ತಾನೆ.
ಆದರೆ, ಆ ಸುಂದರ ಸಂಜೆಯ ಕೆಂದಾವರೆ ಬಣ್ಣವನ್ನು ಕಣ್ತುಂಬಿಕೊಳ್ಳುವ ಮೊದಲು, ಸೂರ್ಯನ ತೀಕ್ಷ್ಣವಾದ ಕಿರಣಗಳ ಶಾಖವನ್ನು ಸಹಿಸಿಕೊಳ್ಳಲೇಬೇಕು. ಆ ತಾಪ ಮೈಗೆ ತಾಗಿದಾಗ ದೇಹಕ್ಕೆ ಕೊಂಚ ಘಾಸಿಯಾದ್ದದಂತು ನಿಜ. ಆದರೆ ಆ ಸುಡುವ ಹೊತ್ತನ್ನು ತಾಳ್ಮೆಯಿಂದ ಕಳೆದರೆ ಮಾತ್ರ, ಆನಂತರ ಬರುವ ತಂಪಾದ, ಪ್ರಶಾಂತವಾದ ಸೂರ್ಯಾಸ್ತದ ಕ್ಷಣಗಳನ್ನು ಅನುಭವಿಸಲು ಸಾಧ್ಯ.
ನಮ್ಮ ಬದುಕು ಕೂಡ ಹೀಗೆಯೇ ಅಲ್ಲವೇ? ನೆಮ್ಮದಿಯ ನಾಳೆಗಳಿಗಾಗಿ ಇಂದಿನ ಸುಡುವ ಕಷ್ಟಗಳನ್ನು ನಾವು ಸಹಿಸಲೇಬೇಕು. ಆ ತೀಕ್ಷ್ಣವಾದ ಹೋರಾಟದ ನಂತರ ಸಿಗುವ ಸುಖವೇ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದದ್ದನ್ನು ಪಡೆಯಲು ಸ್ವಲ್ಪ ನೋವನ್ನು ಅನುಭವಿಸುವುದು ಪ್ರಕೃತಿಯ ಅಲಿಖಿತ ನಿಯಮ.
”ವಾಸ್ತವವಾಗಿ, ಆ ಸೂರ್ಯನ ತೀಕ್ಷ್ಣತೆ ನಮ್ಮನ್ನು ದಣಿಸುವುದಕ್ಕಲ್ಲ, ಬದಲಾಗಿ ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ. ಕಿಟಕಿಯ ಗಾಜಿನಿಂದ ನುಗ್ಗಿ ಬರುವ ಆ ಉರಿ ಬೆಳಕು, ಕತ್ತಲಾಗುವ ಮೊದಲು ನಾವೆಷ್ಟು ಗಟ್ಟಿಯಾಗಿ ನಿಲ್ಲಬಲ್ಲೆವು ಎಂದು ಕೇಳುವಂತಿದೆ.
ಆ ನೋವನ್ನು ದಾಟಿ ನಿಂತಾಗಲೇ, ಆಕಾಶವು ಬಣ್ಣಗಳ ಹಬ್ಬವನ್ನು ಆಚರಿಸುವುದು. ನಮಗೂ ಅಷ್ಟೇ, ಕಷ್ಟದ ಬಿಸಿ ತಾಕಿದಾಗ ಕುಗ್ಗದೆ ಕುಳಿತರೆ, ದಿನದ ಕೊನೆಯಲ್ಲಿ ನೆಮ್ಮದಿಯ ತಂಗಾಳಿ ಮೈದಡವುವುದು ಖಚಿತ. ಒಮ್ಮೊಮ್ಮೆ ಸುಂದರವಾದದ್ದನ್ನು ಅನುಭವಿಸಲು, ನಮಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾದ ನೋವನ್ನು ಪ್ರೀತಿಯಿಂದಲೇ ಸ್ವೀಕರಿಸಬೇಕಾಗುತ್ತದೆ.”
ಕವಿತಾ ಶ್ರೀನಿವಾಸ್ ನಾಯಕ್



