ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
“ಮನಸ್ಸಿನ ಸೇತುವೆ”


ನಮ್ಮದೆನ್ನುವ ಪುಟ್ಟ
ಮನಸ್ಸು ಪುಟ್ಟ ದೋಣಿಯಂತೆ
ವಿಹಾರ ಹೊರಡುತ್ತದೆ
ಬದುಕಿನುದ್ದಕ್ಕೂ
ಎಲ್ಲರ ಮನದಿ ಮಲ್ಲಿಗೆಯಾಗಿ
ಬಳ್ಳಿಯಂತೆ ಹಬ್ಬಿ
ನಿಂತಿರುವ ಬದುಕಿಗೆ
ಚಲನೆಯಾಗುತ್ತದೆ
ವಿಶಾಲ ಆಗಸದ ಬಾನಂಚು
ಮುಟ್ಟುವ ಹಕ್ಕಿಯ
ರೆಕ್ಕೆಯ ಬಡಿತವಾಗಿ
ಮನಸ್ಸು ತುಂಬುತ್ತದೆ
ಗೂಡಂಗಡಿಯ ಮರದ
ಬೆಂಚುಗಳ ಮೇಲೆ
ಕುಳಿತು ಅವಲಕ್ಕಿ
ತಿನ್ನುವಾಗ ಅರಿವಿನ
ಮೂಲಕ್ಕೊಂದು ಅಡಿಪಾಯದ
ಚಿತ್ರ ಬರೆಯುತ್ತದೆ
ಹೂವಿನಂದದ ಮಗುವಿನ ನಗು
ಕವಿತೆಯಾಗಿ ಸಾಲುಗಳ
ಬರೆದು ಬೆಟ್ಟವಾಗುತ್ತದೆ
ಬೆಟ್ಟದ ತುದಿಯಿಂದ
ಹರಿದು ಬಂದ ಝರಿಯೊಂದು
ಜೀವವಾಗಿ ಊರ
ತುಂಬಾ ಹರಿಯುತ್ತದೆ
ಬೆಳಗು ನಗುವ ಹೂಗಳ
ಕಂಪಿನ ನಡುವೆ ನಿಂತು
ಗಾಳಿಯಲ್ಲಿ ಸುಳಿದಾಡುತ್ತದೆ
ಮನಸಿನ ಸೇತುವೆ ಮೇಲೆ
ಅನ್ನ ನೀರಿನ ಘನತೆ
ಮನಸು ಮುಟ್ಟುತ್ತದೆ
ಸುಮ್ಮನೇ ಸೈಕಲ್ ಮೇಲೆ
ಕುಳಿತು ಹೋದ ಹಿರಿಯನ
ಹಿಂದೆ ಇರುವ ಭತ್ತದ
ಸಸಿಗಳಲ್ಲಿ ಮತ್ತೊಂದು
ಸೇತುವೆಯ ಮಾತು
ನೆಲದನಿಯಾಗಿ ಕೇಳುತ್ತದೆ
ಮನಸಿನ ಮನಸಿಗೆ
ಮಾತೇ ಸೇತುವೆಯಾಗಿ
ಮನಸ್ಸು ದಾಟಿಸುತ್ತದೆ
ಮನದ ಖುಷಿಗೆ
ಬಣ್ಣ ತುಂಬಿ
ಮಾಯವಾಗುತ್ತದೆ……..
ನಾಗರಾಜ ಬಿ. ನಾಯ್ಕ



